ತಪ್ಪಾದ ಆರಾಧನೆಯ ಗುರುತುಗಳು

Article Body: 

"ಕೆಲವರು ಅತಿ ವಿನಯದಲ್ಲಿಯೂ, ದೇವದೂತರ ಪೂಜೆಯಲ್ಲಿಯೂ ಆಸಕ್ತರಾಗಿದ್ದಾರೆ.... ಆದರೆ ಕ್ರಿಸ್ತನೆಂಬ ಶಿರಸ್ಸಿನೊಂದಿಗೆ ಹೊಂದಿಕೆಯನ್ನು ಬಿಟ್ಟವರಾಗಿದ್ದಾರೆ. ಈ ಶಿರಸ್ಸಿನಿಂದಲೇ ದೇಹವೆಲ್ಲಾ ಒಂದಾಗಿ ಕೂಡಿಸಲ್ಪಟ್ಟು, ದೇವರು ಕೊಡುವ ವೃದ್ಧಿಯಿಂದ ಅಭಿವೃದ್ಧಿಯಾಗುತ್ತಾ ಬರುತ್ತದೆ. ಇಂಥವರು ನಿಮಗೆ ದೊರಕಿರುವ ರಕ್ಷಣೆಯನ್ನು ಅಪಹರಿಸುವುದಕ್ಕೆ ಅವಕಾಶ ಕೊಡಬೇಡಿರಿ'' (ಕೊಲೊಸ್ಸೆ. 2:18, 19 - ಸ್ವ. ಅನು).

"ನನ್ನನ್ನು ತೊರೆದು, ಮನಸ್ಸು ಬಂದ ಹಾಗೆ ದುರ್ಮಾರ್ಗದಲ್ಲಿ ನಡೆಯುವ ಜನರು ಹೇಳುವ ಮಾತು - ಅಲ್ಲಿ ನಿಂತಿರು, ಹತ್ತಿರ ಬರಬೇಡ, ನಾನು (ನಿನಗಿಂತ) ಮಡಿವಂತನು" (ಯೆಶಾಯ 65:2, 5).

"ನಿಮ್ಮಲ್ಲಿಯೂ ಕೆಲವರು ಎದ್ದು, ವ್ಯತ್ಯಾಸ ಬೋಧನೆಗಳನ್ನು ಮಾಡಿ, ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು . . ಆದಕಾರಣ ನೀವು ಎಚ್ಚರವಾಗಿರಿ" (ಅಪೋ. ಕೃ. 20:30, 31).

ತಪ್ಪಾದ ಆರಾಧನೆಯ ಗುಣಲಕ್ಷಣ ಏನೆಂದರೆ, ಕರ್ತನಾದ ಯೇಸುವಿನಲ್ಲಿ ಮಾತ್ರವಲ್ಲದೆ, ಒಬ್ಬ ಮನುಷ್ಯ ಅಥವಾ ಒಂದು ಭೋಧನೆಯಲ್ಲಿ ಭಕ್ತಿ ಇರಿಸುವದಾಗಿದೆ. ಯೇಸುವಿಗಾಗಿ ಒಂದು ಗುಡಾರವನ್ನು ಕಟ್ಟುವದು ಮಾತ್ರವಲ್ಲದೆ, ’ಎಲೀಯ’ ಮತ್ತು ’ಮೋಶೆ’ಗಾಗಿಯೂ ಗುಡಾರಗಳನ್ನು ನಿರ್ಮಿಸುವದಾಗಿದೆ. ಇಂತಹ ಕಾರ್ಯವು ಯಾವಾಗಲೂ ಒಂದು ಮೋಡದಂತೆ ದೇವಸಾನ್ನಿಧ್ಯವನ್ನು ಮರೆಮಾಡುತ್ತದೆ. ನಮ್ಮ ಜೀವಿತದ ಕೇಂದ್ರಬಿಂದು ಯೇಸುವೇ ಹೊರತು, ಬೇರೆ ಯಾರೂ ಅಗಿರದಂತೆ ನೋಡಿಕೊಳ್ಳುವದು ದೇವರ ಚಿತ್ತವಾಗಿದೆ (ಮತ್ತಾಯ 17:1-8).

ಕ್ರೈಸ್ತತ್ವದ ಕೊನೆಯ ದಿನಗಳಲ್ಲಿ, ತಪ್ಪಾಗಿ ಆರಾಧನೆ ಮಾಡುವ ಗುಂಪುಗಳು ಹೆಚ್ಚುತ್ತಾ ಹೋಗಲಿವೆ. ಇವುಗಳಿಗೆ ಅನೇಕರು ಸಿಕ್ಕಿ ಬೀಳಲು ಕಾರಣ- ಶಿರಸ್ಸಾಗಿರುವ ಕ್ರಿಸ್ತನೊಂದಿಗೆ ವೈಯಕ್ತಿಕವಾಗಿ ನಿಕಟ ಸಂಬಂಧವನ್ನು ಹೊಂದುವುದರ ಬದಲಾಗಿ, ಅವರು ಕರ್ತನ ಸಂದೇಶಕರನ್ನು ಆರಾಧಿಸುವುದಾಗಿದೆ. ಇಂತಹ ಪಂಗಡಗಳ ಕೆಲವು ಲಕ್ಷಣಗಳನ್ನು ಅರಿಯುವದು ಒಳ್ಳೆಯದು, ಏಕೆಂದರೆ ಆ ಮೂಲಕ ನಾವು ಅವುಗಳ ಬಗ್ಗೆ ಯಾವಾಗಲೂ ಎಚ್ಚರವಾಗಿದ್ದು, ಈ ಅಪಾಯದಿಂದ ಪಾರಾಗಬಹುದು. ಇತರರು ಯೇಸುವನ್ನು ಬಿಟ್ಟು, ಸಂದೇಶಕರನ್ನು ಅಥವಾ ಯಾವುದೋ ವಸ್ತುವನ್ನು ಆರಾಧನೆ ಮಾಡುತ್ತಾರೋ ಎಂದು ನಾವು ತೀರ್ಮಾನಿಸುವದು ಬೇಡ. ಆದರೆ ನಾವು ಸ್ವತ: ನಮ್ಮನ್ನು ಪರೀಕ್ಷಿಸಿಕೊಳ್ಳೋಣ.

ಇಂತಹ ತಪ್ಪು ಆರಾಧಕರ ಒಂದು ಪಂಗಡಕ್ಕೆ ಸೇರಿಕೊಳ್ಳುವದು ಹಾಗೂ ಸ್ವತ: ಸುಳ್ಳು ಆರಾಧಕನಾಗಿರುವದು, ಇವೆರಡು ಬೇರೆ ಬೇರೆಯಾದ ವಿಷಯಗಳಾಗಿವೆ. ನೀವಿರುವ ಸಭೆಯ ಎಲ್ಲಾ ಬೋಧನೆಗಳೂ ಸತ್ಯವೇದಕ್ಕೆ ಅನುಸಾರವಾಗಿದ್ದರೂ, ಮತ್ತು ಅಲ್ಲಿನ ಎಲ್ಲಾ ಹಿರಿಯರು ದೈವಿಕ ಜನರಾಗಿದ್ದರೂ, ನೀವು ನಿಮ್ಮ ನಡವಳಿಕೆಯಲ್ಲಿ ನಿಮ್ಮ ನಾಯಕರ ಬಗ್ಗೆ, ನಿಮ್ಮ ಗುಂಪಿನ ಬಗ್ಗೆ ಮತ್ತು ಬೇರೆ ಸಭೆಗಳ ಇತರ ವಿಶ್ವಾಸಿಗಳ ಬಗ್ಗೆ ತಪ್ಪು ಮನೋಭಾವವನ್ನು ಇರಿಸಿಕೊಳ್ಳುವ ಸಾಧ್ಯತೆ ಇದೆ. ಈ ರೀತಿಯ ಆರಾಧನೆಯು ಸಿದ್ಧಾಂತಗಳಲ್ಲಿ ಮಾತ್ರವಲ್ಲದೆ, ಮತ್ತೊಬ್ಬರ ವಿಷಯವಾಗಿ ಹೊಂದಿರುವ ತಪ್ಪಾದ ಮನೋಭಾವದಲ್ಲೂ ಕಂಡುಬರುತ್ತದೆ. ಸರಿಯಾದ ಸಿದ್ಧಾಂತಗಳನ್ನು ಹೊಂದಿದ್ದು ಭಯಭಕ್ತಿಯಿಂದ ಜೀವಿಸುವವರು, ಹಲವು ಬಾರಿ ತಾವು ತಮ್ಮ ಮನೋಭಾವದಲ್ಲಿ, ಅರಿವಿಲ್ಲದೆ ಒಬ್ಬ ವ್ಯಕ್ತಿ ಅಥವಾ ಒಂದು ಪದ್ಧತಿಯನ್ನು ಆರಾಧಿಸುತ್ತಿದ್ದಾರೆಂದು ಕಂಡುಕೊಳ್ಳುವದಿಲ್ಲ.

1) ಕ್ರಿಸ್ತನ ಜೊತೆ ಇತರ ಮನುಷ್ಯನು.

ತಪ್ಪಾದ ಆರಾಧನೆಯ ಪ್ರಾಥಮಿಕ ಗುರುತೇನೆಂದರೆ - ಇದರಲ್ಲಿ ವಿಶೇಷವಾಗಿ ಒಬ್ಬ ನಾಯಕನಿರುತ್ತಾನೆ,(ಸಾಮಾನ್ಯವಾಗಿ ಒಂದು ಗುಂಪಿನ ಸಂಸ್ಥಾಪಕನಿರಬಹುದು) ಇವನು ಅದೆಷ್ಟು ಉನ್ನತವಾಗಿ ಗೌರವಿಸಲ್ಪಟ್ಟಿರುತ್ತಾನೆಂದು ಹೇಳಿದರೆ, ಇವನ ಜೀವಿತವು ಪರಿಪೂರ್ಣವಾದದ್ದೆಂದು ಮತ್ತು ಆತನ ಬೋಧನೆಯು ದೇವರ ವಾಣಿಯಂತೆ ಸಮಾನವಾಗಿದೆಯೆಂದು ಭಾವಿಸಲ್ಪಟ್ಟಿರುತ್ತಾರೆ. ಪವಿತ್ರಾತ್ಮನು ಬೆರೋಯದಲ್ಲಿಯ ಯೆಹೂದ್ಯರನ್ನು ”ಶ್ರೇಷ್ಠ ಬುದ್ಧಿಯುಳ್ಳವರು” ಎಂದು ಕರೆದನು. ಏಕೆಂದರೆ ಪೌಲನ ಬೋಧನೆಯು ಶಾಸ್ತ್ರಗ್ರಂಥದ್ದಾಗಿದೆಯೋ ಇಲ್ಲವೋ ಎಂದು ”ಅವರು ಪ್ರತಿದಿನವೂ ಶಾಸ್ತ್ರ ಗ್ರಂಥವನ್ನು ಪರೀಕ್ಷಿಸುತ್ತಿದ್ದರು".

ಪೌಲನು ಅಸಾಧಾರಣ ಅಪೋಸ್ತಲನಾಗಿದ್ದನು. ಆದರೂ ಸಹ ಆತನ ಬೋಧನೆಯು ಶಾಸ್ತ್ರ ಗ್ರಂಥಗಳೊಂದಿಗೆ ತಪಾಸಣೆಗೊಳಪಡುವ ಅಗತ್ಯತೆ ಇತ್ತು, ಏಕೆಂದರೆ ಆತನು ಬೋಧಿಸುವುದು ಸತ್ಯವೇದದ ಪ್ರಕಾರ ಇದೆಯೋ, ಇಲ್ಲವೋ ಎಂದು ಕಂಡುಕೊಳ್ಳಬೇಕಾಗಿತ್ತು (ಅಪೋಸ್ತಲರ ಕೃತ್ಯಗಳು 17:11). ಸತ್ಯವೇದ ನಮಗೆ ಹೀಗೆ ತಿಳಿಸುತ್ತದೆ- ಪ್ರವಾದಿಗಳು ಸಭೆಯಲ್ಲಿ ಮಾತನಾಡುವಾಗಲೂ ಸಹ, ”ಮಿಕ್ಕಾದವರು ವಿವೇಚನೆ ಮಾಡಲೇಬೇಕು” (1 ಕೊರಿಂಥದವರಿಗೆ 14:29). ಹಾಗಿದ್ದರೆ ಮಿಕ್ಕಾದವರ ವಿವೇಚನೆ ಎನಾಗಿರಬೇಕು? ಬೆರೋಯದವರು ವಿವೇಚಿಸಿದ ಹಾಗೆ ಪ್ರವಾದಿಗಳು ಹೇಳುವಂತದ್ದು ದೇವರ ವಾಕ್ಯದಲ್ಲಿ ಕಂಡು ಬರುವುದೋ, ಇಲ್ಲವೋ ಎಂದು ತಿಳಿಯುವುದೇ ವಿವೇಚನೆಯಾಗಿದೆ. ಇದು ತಪ್ಪಾದ ಆರಾಧನೆ ಹೊಂದಿರುವುದರ (ಒಬ್ಬ ವ್ಯಕ್ತಿಯನ್ನು ಅಥವಾ ಪದ್ದತಿಯನ್ನು ಆರಾಧಿಸುವಂತಹ ಮನೋಭಾವದ) ವಿರುದ್ಧ ಮಹತ್ತರವಾದ ರಕ್ಷಣಾಕವಚದಂತಿದೆ.

ತಪ್ಪಾದ ಆರಾಧನೆ ಹೊಂದಿರುವ ಗುಂಪಿನಲ್ಲಿರುವ ವಿಶ್ವಾಸಿಗಳು ತಮ್ಮ ನಾಯಕರುಗಳನ್ನು ತುಂಬಾ ಹೆಚ್ಚಾಗಿ ಗೌರವಿಸುತ್ತಾರೆ, ಅವರು ಬೋಧಿಸುವಂತಹುದು ಧರ್ಮಶಾಸ್ತ್ರದ ತಳಹದಿ ಹೊಂದಿದೆಯೋ ಇಲ್ಲವೋ ಎಂದು ಪರೀಕ್ಷಿಸದೆ, ಆ ಬೋಧನೆಯನ್ನು ಸ್ವೀಕರಿಸಿಕೊಳ್ಳುತ್ತಾರೆ. ಇವರು ಬೆರೋಯದವರ ರೀತಿ ಶ್ರೇಷ್ಠ ಬುದ್ಧಿಯುಳ್ಳವರಲ್ಲ. ಈ ರೀತಿ ತಪ್ಪಾಗಿ ಆರಾಧನೆ ಮಾಡುವ ಗುಂಪಿನಲ್ಲಿ ಸಂಸ್ಥಾಪಕನ ಮರಣದ ನಂತರ ಸಹಜವಾಗಿ ಉತ್ತರಾಧಿಕಾರಿಯು ನಾಯಕತ್ವ ತೆಗೆದುಕೊಂಡು, ಆತನು ಗುಂಪಿನ ಮುಖ್ಯಸ್ಥನಾಗಿ ಗುರುತಿಸಲ್ಪಡುತ್ತಾನೆ. ಗುಂಪಿನ ಎಲ್ಲಾ ಸದಸ್ಯರು ಪ್ರಸ್ತುತ ನಾಯಕನನ್ನು ಜೀವಿಸುತ್ತಿರುವ ಎಲ್ಲಾ ದೈವಿಕ ಜನರಿಗಿಂತ ದೊಡ್ಡವನೆಂದು ಅರಿಕೆ ಮಾಡಲು ಅಪೇಕ್ಷಿಸುತ್ತಾರೆ. ಈ ರೀತಿಯ ನಡವಳಿಕೆಯ ಫಲಿತಾಂಶವು, ನಾಯಕನ ಅಧಿಕಾರಕ್ಕೆ ಪ್ರಶ್ನೆಯನ್ನು ಕೇಳದ ಹಾಗೇ ಮತ್ತು ಆತನ ಬೋಧನೆಗೆ ತಲೆಯನ್ನು ಬಾಗಿಸುವ ಹಾಗೆ ಮಾಡುತ್ತದೆ ಮತ್ತು ಗುಂಪಿನ ಎಲ್ಲಾ ಸದಸ್ಯರ ಮೇಲೆ ಆತನ ಅಧಿಕಾರವು ಸಂಪೂರ್ಣವಾಗಿ ಪೋಪ್‌ಗಳ ರೀತಿಯಿದ್ದಾಗಿದ್ದು, ಆತನ ಮಾತೇ ಅಂತಿಮವಾಗಿರುತ್ತದೆ.

ಈ ರೀತಿಯ ಹಲವು ತಪ್ಪಾದ ಆರಾಧನೆ ಹೊಂದಿರುವ ಗುಂಪಿನಲ್ಲಿ ಒಂದು ವೇಳೆ ನಾಯಕನು ಮಗನನ್ನು ಹೊಂದಿದ್ದರೆ, ಆತನು ಗುಂಪಿನೊಳಗಿನ ಕೆಲವೊಂದು ನಾಯಕತ್ವದ ಜವಾಬ್ದಾರಿಗಳನ್ನು ವಶಪಡಿಸಿಕೊಳ್ಳಲು ತನ್ನ ಮಗನಿಗೆ ತರಬೇತಿ ನೀಡುತ್ತಾನೆ. ಕ್ರಮೇಣವಾಗಿ ಗುಂಪಿನ ಎಲ್ಲಾ ಸದಸ್ಯರುಗಳು ತಂದೆಯನ್ನು ಗೌರವಿಸುವ ರೀತಿಯಲ್ಲಿಯೇ ಮಗನನ್ನು ಗೌರವಿಸಲು ಪ್ರಾರಂಭಿಸುತ್ತಾರೆ.

2) ಸತ್ಯವೇದದ ಜೊತೆ ಇನ್ನೊಂದು ಪುಸ್ತಕ.

ತಪ್ಪಾದ ಆರಾಧನೆಯ ಎರಡನೆಯ ಗುರುತೇನೆಂದರೆ, ಇನ್ನೊಂದು ಪುಸ್ತಕವನ್ನು (ಸಾಮಾನ್ಯವಾಗಿ ಗುಂಪಿನ ನಾಯಕನಿಂದ ಪುಸ್ತಕವು ಬರೆಯಲ್ಪಟ್ಟಿದ್ದಾಗಿರುತ್ತದೆ) ಸತ್ಯವೇದದಷ್ಟು ಮಾನ್ಯವೆಂದು ಪರಿಗಣಿಸುವದು. ಈ ಪುಸ್ತಕವು ಜೀವನದ ಎಲ್ಲಾ ಸ್ಥಿತಿಗತಿಗಳಲ್ಲೂ ಕಾರ್ಯರೂಪಕ್ಕೆ ಬರುವ ಸತ್ಯವೇದದ ಹಾಗೆ ದೋಷರಹಿತ ಪುಸ್ತಕವೆಂದು ಪರಿಗಣಿಸಲ್ಪಟ್ಟಿರುತ್ತದೆ. ಹಲವು ತಪ್ಪಾದ ಆರಾಧನೆ ಹೊಂದಿರುವ ಗುಂಪುಗಳು, ತಾವು ತಮ್ಮ ನಾಯಕನ ಪುಸ್ತಕಕ್ಕೆ ಈ ರೀತಿಯಾದ ಮಾನ್ಯವನ್ನು ಕೊಡುತ್ತಾಯಿಲ್ಲವೆಂದು ಹೇಳಿಕೆ ಹೇಳಿದರೂ, ಆ ಪುಸ್ತಕದ ಕಡೆಗೆ ಇರುವಂತಹ ಅವರ ನಡವಳಿಕೆಯು, ಸತ್ಯವೇದದೊಂದಿಗೆ ಈ ಪುಸ್ತಕಕ್ಕೂ ಸಮಾನತೆಯ ಸ್ಥಾನ ಕೊಡುವ ರೀತಿಯಲ್ಲಿರುತ್ತದೆ. ಅವರ ಹೇಳಿಕೆಗಿಂತ, ಅವರ ಕ್ರಿಯೆಯೇ ಎದ್ದುಕಾಣುತ್ತದೆ.

ತಪ್ಪಾದ ಆರಾಧನೆ ಹೊಂದಿರುವ ಗುಂಪಿನ ಪ್ರಾರಂಭದ ಹಂತವು ಕರ್ತನಿಗೆ ತುಂಬಾ ಶ್ರದ್ಧೆಯುಳ್ಳದ್ದಾಗಿಯೂ ಮತ್ತು ನಿಜವಾದ ಭಕ್ತಿಯುಳ್ಳದ್ದಾಗಿಯೂ ಇದ್ದಿರಬಹುದು. ಕೆಲವೊಂದು ಸಂದರ್ಭದಲ್ಲಿ ಸಂಸ್ಥಾಪಕನು ಸ್ವತ: ದೈವಿಕ ಮನುಷ್ಯನಾಗಿದ್ದು, ಕಾಲ ಕ್ರಮೇಣವಾಗಿ ಅವನ ಹಿಂಬಾಲಕರು ಆತನ ಬರಹಗಳನ್ನು ಮತ್ತು ಬೋಧನೆಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ, ಅದನ್ನು ಸುವ್ಯವಸ್ಥಿತವಾದ ಸಂಘದ ರೀತಿಯಲ್ಲಿ ಸತ್ಯವೇದಕ್ಕೆ ಕೊಟ್ಟ ಅಧಿಕಾರವನ್ನು ಆತನ ಬರಹಗಳಿಗೂ ಮತ್ತು ಬೋಧನೆಗಳಿಗೂ ಕೊಡುತ್ತಾರೆ.

ಆ ಸಂಸ್ಥಾಪಕನ ವೈಯಕ್ತಿಕ ಅಭಿಪ್ರಾಯಗಳು ಆತನ ಹಿಂಬಾಲಕರುಗಳಿಗೆ ದೇವರ ವಾಕ್ಯವೇ ಆಗಿ ಹೋಗಿರುತ್ತದೆ. ಸಂಸ್ಥಾಪಕನು ದೈವಿಕ ಮನುಷ್ಯನಾಗಿದ್ದರೆ ಇಂತ: ವಿಷಯಗಳನ್ನು ತನ್ನ ಜೀವಿತಾವಧಿಯಲ್ಲಿ ಅನುಮತಿಸುವುದಿಲ್ಲ. ಒಂದು ವೇಳೆ ಆ ಸಂಸ್ಥಾಪಕನು ದೈವಿಕ ಮನುಷ್ಯನಾಗಿರದಿದ್ದರೆ, ತನ್ನ ಜೀವಿತಾವಧಿಯಲ್ಲಿಯೇ ತನ್ನ ಹೇಳಿಕೆಗೆ ದೈವಿಕ ಅಧಿಕಾರದ ಹಕ್ಕನ್ನು ಪಡೆಯುತ್ತಾನೆ. ಈ ಗುಂಪಿನ ಸದಸ್ಯರು ಸಂಸ್ಥಾಪಕನಿಂದ ಬರೆಯಲ್ಪಟ್ಟಿರುವ ಪುಸ್ತಕವನ್ನು ಪದೇ ಪದೇ ಓದುತ್ತಾರೆ. ಅವರಲ್ಲಿ ಹಲವು ಜನರು ಈ ಪುಸ್ತಕವನ್ನು ಎಲ್ಲೆಲ್ಲಿ ಪ್ರಯಾಣಿಸುತ್ತಾರೋ ಅಲ್ಲಲ್ಲಿ ತೆಗೆದುಕೊಂಡು ಹೋಗುತ್ತಾರೆ. ಅವರ ಸಭೆಯಲ್ಲಿಯೂ ಸಹ ಈ ಪುಸ್ತಕದಲ್ಲಿರುವದನ್ನು ಸತ್ಯವೇದದ ವಾಕ್ಯವನ್ನು ಹೇಳುವ ಅಧಿಕಾರದಷ್ಟು ಉಲ್ಲೇಖಿಸುತ್ತಾರೆ. ಆ ಪುಸ್ತಕದಲ್ಲಿರುವ ಒಂದು ವಚನವನ್ನು ಯಾವ ರೀತಿ ಅರ್ಥೈಸಲಾಗುತ್ತದೋ ಅಥವಾ ಸಿದ್ಧಾಂತವನ್ನು ಒಂದು ವಿಧಾನದಲ್ಲಿ ವಿವರಿಸಲಾಗುತ್ತದೋ, ಅದೇ ರೀತಿಯಲ್ಲಿ ತಪ್ಪಾದ ಆರಾಧನೆ ಹೊಂದಿರುವ ಪಂಗಡದ ಸದಸ್ಯರು ಆ ವಚನವನ್ನು ಮತ್ತು ಸಿದ್ಧಾಂತವನ್ನು ಗ್ರಹಿಸಿಕೊಳ್ಳುತ್ತಾರೆ.

ಇಂತಹ ಪುಸ್ತಕವನ್ನು ಸತತವಾಗಿ ಓದುವುದರಿಂದ ಈ ಗುಂಪಿನ ವಿಶ್ವಾಸಿಯ ಬುದ್ಧಿಯು ಮಂಕಾಗಿ ಹೋಗುತ್ತದೆ, ಮತ್ತು ಕ್ರಮೇಣವಾಗಿ ಆ ಪುಸ್ತಕದಲ್ಲಿ ಅರ್ಥ ವಿವರಣೆ ಮಾಡಿರುವ ರೀತಿಯಲ್ಲಿಯೇ ಆತನು ದೇವರ ವಾಕ್ಯವನ್ನು ಸಹ ಅರ್ಥೈಸಿಕೊಳ್ಳುತ್ತಾನೆ. ಈ ರೀತಿಯಲ್ಲಿ ತನ್ನ ಬುದ್ಧಿಯನ್ನು ಮಾರ್ಪಡಿಸಿ ಕೊಂಡಿರುವುದರಿಂದ, ಸತ್ಯವೇದಲ್ಲಿನ ಹಲವು ಭಾಗಗಳ ಮೇಲೆ ಪವಿತ್ರಾತ್ಮನಿಂದ ಯಾವುದೇ ರೀತಿಯ ಹೊಸದಾದ ಬೆಳಕನ್ನು ಸ್ವೀಕರಿಸಿಕೊಳ್ಳಲು ಅಶಕ್ತನಾಗುತ್ತಾನೆ. ಏಕೆಂದರೆ ಪ್ರತಿ ಸಮಯದಲ್ಲಿಯೂ ಸತ್ಯವೇದದಲ್ಲಿನ ಭಾಗಗಳನ್ನು ಓದುವಾಗ, ಅದರ ಅರ್ಥವೇನು ಎಂಬುದನ್ನು ಆಗಲೇ ಆತನು ಪುಸ್ತಕವನ್ನು ಓದಿ ತಿಳುಕೊಂಡು ಬುದ್ಧಿಯನ್ನು ಸಿದ್ದಪಡಿಸಿಕೊಂಡಿರುತ್ತಾನೆ. ಹೀಗಿರುವದರಿಂದ ಆತನು ತನ್ನ ಬುದ್ಧಿಯನ್ನು ಪವಿತ್ರಾತ್ಮನ ಮುಟ್ಟುವಿಕೆಗಿಂತಲೂ ದೂರ ಸರಿಸಿ ಬಿಟ್ಟಿರುತ್ತಾನೆ.

ಇದು ಹೇಗಿದೆಯೆಂದರೆ, ರೋಮನ್ ಕ್ಯಾಥೋಲಿಕ್‌ನ ಪಾದ್ರಿಗಳು ತಮ್ಮ ಹಿಂಬಾಲಕರಿಗೆ - ತಮ್ಮ ಧರ್ಮಶಾಸ್ತ್ರದ ಪಂಡಿತರು ಹೇಳಿರುವ ಅರ್ಥದಲ್ಲಿಯೇ ಸತ್ಯವೇದವನ್ನು ಅರ್ಥೈಸಿಕೊಳ್ಳಬೇಕು ಎಂದು ಬೋಧಿಸುವುದಕ್ಕೆ ಸರಿಯಾಗಿ ಹೋಲುತ್ತದೆ ಮತ್ತು ಇಲ್ಲಿ ಸಿದ್ಧಾಂತಗಳ ಕುರಿತು ಅಥವಾ ಗುಂಪಿನ ನಾಯಕನ ಬೋಧನೆಯ ಕುರಿತು ಯಾವುದೇ ಪ್ರಶ್ನೆ ಕೇಳುವಂತಿಲ್ಲ.

3) ಭಕ್ತರ ಅನ್ಯೂನ್ಯತೆಯಿಂದ ಪ್ರತ್ಯೇಕಗೊಳ್ಳುವುದು.

ತಪ್ಪಾದ ಆರಾಧನೆಯ ಮೂರನೆಯ ಗುರುತು- ಭಕ್ತರ ಅನ್ಯೂನ್ಯತೆಯಿಂದ ಪ್ರತ್ಯೇಕವಾಗಿರುವುದಾಗಿದೆ. ಈ ಗುಂಪಿನ ವಿಶ್ವಾಸಿಗಳ ಮನಸ್ಥಿತಿಯು ಹೇಗಿರುತ್ತದೆಂದರೆ, ತಮ್ಮ ಗುಂಪಿನ ಹೊರಗಡೆ ಇರುವ ಹೊಸದಾಗಿ ಹುಟ್ಟಿದ ವಿಶ್ವಾಸಿಗಳ ಜೊತೆ ಅನ್ಯೂನತೆ ಮಾಡುವದರಿಂದ ತಮಗೆ ಕಡಿಮೆ ಲಾಭವಿರುತ್ತದೆ ಅಥವಾ ಏನೂ ಆತ್ಮಿಕ ಲಾಭವಿಲ್ಲವೆಂದು ಭಾವಿಸುತ್ತಾರೆ. ಆದುದರಿಂದ ನಿಮ್ಮನ್ನು ಇತರೆ ವಿಶ್ವಾಸಿಗಳ ಜೊತೆ ಸಂಪರ್ಕ ಇಟ್ಟುಕೊಳ್ಳಬಾರದೆಂದು ನಿರುತ್ಸಾಹ ಪಡಿಸುತ್ತಾರೆ, ಮತ್ತು ಇನ್ನೊಬ್ಬರನ್ನು ಸಂಪರ್ಕಿಸಬೇಕಾದರೆ ತಮ್ಮ ತಪ್ಪಾದ ಆರಾಧನೆ ಹೊಂದಿರುವುದರ ಭಾಗವಾಗಲಿಕ್ಕಾಗಿ ಮಾತ್ರ ಸಂಪರ್ಕ ಮಾಡಲು ಅನುಮತಿಸುತ್ತಾರೆ. ಇಂತಹ ಗುಂಪು ಸಾಮಾನ್ಯವಾಗಿ ತನ್ನನ್ನು ಒಂದೇ ಸತ್ಯವುಳ್ಳ ಸಭೆಯೆಂದು ತೀರ್ಮಾನಿಸಿಕೊಂಡಿರುತ್ತದೆ ಮತ್ತು ಕ್ರಿಸ್ತನ ವಧುವಿಗೆ ಒಳಪಟ್ಟವರೆಲ್ಲರೂ ಅಂತಿಮವಾಗಿ ಅವರ ಹಾದಿಯನ್ನು ಕಂಡುಕೊಳ್ಳುತ್ತಾರೆ ಎಂದು ನಂಬುತ್ತಾರೆ. ಅವರ ಗರ್ವವು ನಿಜವಾಗಿಯೂ ಕಲ್ಪಿಸಿಕೊಳ್ಳಲು ಆಸಾಧ್ಯ.

ಈ ರೀತಿಯಾಗಿ ಭಕ್ತರ ಅನ್ಯೂನ್ಯತೆಯಿಂದ ದೂರವಿರುವುದರಿಂದ ಈ ರೀತಿ ತಪ್ಪಾಗಿ ಆರಾಧನೆ ಮಾಡುವ ವಿಶ್ವಾಸಿಗಳು, ತಮ್ಮ ಧಾರ್ಮಿಕತೆಯ ಬಗ್ಗೆ ಅಭಿಮಾನಿಗಳಾಗಿ ಮತ್ತು ತೀರಾ ನಿಯಮ ಪಾಲಿಸುವ ಫರಿಸಾಯರಾಗಿ ಮಾರ್ಪಡುತ್ತಾರೆ. ದೇವರ ವಾಕ್ಯದ ಬಗ್ಗೆ ”ಅತೀ ಉನ್ನತವಾದ ಜ್ಞಾನ" ಹೊಂದಿದ್ದೇವೆಂದು ಅವರು ಹೇಳಿಕೊಳ್ಳುವಾಗ, ಇತರೆ ಎಲ್ಲಾ ವಿಶ್ವಾಸಿಗಳ ಕಡೆಗೆ ”ನಾವು” ಮತ್ತು ”ಅವರು” ಎಂಬ ನಿಲುವು ಅವರನ್ನು ಅಹಂಕಾರಿಗಳನ್ನಾಗಿ ಬೆಳೆಸುತ್ತದೆ. ಇಂತಹ ತಪ್ಪು ಪದ್ಧತಿಯನ್ನು ಹೊಂದಿರುವ ಆರಾಧಕರು ಸಾಮಾನ್ಯವಾಗಿ ಅವರ ಫರಿಸಾಯತೆಯನ್ನು ಪೂರ್ಣವಾಗಿ ಅರಿಯದೆ ಮತ್ತು ತಮ್ಮನ್ನು ನಿಜವಾದ ಭಕ್ತಿಯುಳ್ಳವರೆಂದು ಮತ್ತು ಯೇಸುವಿನ ದೀನತೆಯುಳ್ಳ ಹಿಂಬಾಲಕರುಗಳೆಂದು ತಿಳಿದುಕೊಳ್ಳುತ್ತಾರೆ!! ಈ ರೀತಿಯಾಗಿ ಮಾನವನ ಬುದ್ಧಿಯ ಸಾಮರ್ಥ್ಯವು ತನಗೆ ತಾನೇ ಮೋಸಪಡಿಸಿಕೊಳ್ಳುತ್ತದೆ!! ಏನೇಯಾದರೂ, ಈ ಗುಂಪಿನಿಂದ ಹೊರವಿರುವ ವಿಶ್ವಾಸಿಗಳು ಇವರ ಫರಿಸಾಯತೆಯನ್ನು ಸ್ಪಷ್ಟವಾಗಿ ಗ್ರಹಿಸುತ್ತಾರೆ.

ನಿಜವಾದ ಪವಿತ್ರತೆಯು ದೇವರ ಕೃಪೆಯಿಂದ ಮಾತ್ರ ಸಂಭವವಿದೆ. (ಇದನ್ನು ರೋಮಾಪುರದವರಿಗೆ 6:14 ರಲ್ಲಿ ತುಂಬಾ ಸ್ಪಷ್ಟವಾಗಿ ತಿಳಿಸಲ್ಪಟ್ಟಿದೆ) ದೀನರಿಗೆ ಮಾತ್ರ ದೇವರು ತನ್ನ ಕೃಪೆಯನ್ನು ಕೊಡುತ್ತಾನೆ (1 ಪೇತ್ರ 5:5). ಆದುದರಿಂದ ನಿಜವಾದ ಪವಿತ್ರತೆಯ ಪ್ರಾಥಮಿಕ ಗುರುತೇನೆಂದರೆ ”ದೀನತೆ”. ಎಲ್ಲಿ ದೀನತೆಯ ಕೊರತೆ ಇರುತ್ತದೋ, ಅಲ್ಲಿ ’ಪರಿಶುದ್ಧತೆ’ ಎಂದು ಹೇಳಿಕೊಳ್ಳುವ ಈ ತಪ್ಪು ಆರಾಧನೆಯಲ್ಲಿರುವ ವಿಶ್ವಾಸಿಗಳು ನಿಯಮ ಅನ್ವಯದಾದ (ಮಾನವನ ಶ್ರಮದಿಂದ ತಯಾರಾದ) ಪರಿಶುದ್ಧತೆಯನ್ನು ಹೊಂದಿಕೊಂಡಿರುತ್ತಾರೆ. ಆದ್ದರಿಂದ ತಪ್ಪಾದ ಆರಾಧನೆಯಲ್ಲಿರುವ ಹಲವರು, ಅವರ ”ಪವಿತ್ರ ಜೀವಿತ” ಮತ್ತು ಅವರ ”ಪವಿತ್ರ ಮನೆಗಳ” ವಿಷಯವಾಗಿ ಹೆಮ್ಮೆಪಟ್ಟುಕೊಳ್ಳುವುದು ಇದೇ ಕಾರಣದಿಂದಾಗಿ. ಒಂದು ವೇಳೆ ಅವರ ”ಪವಿತ್ರತೆಯು” ದೇವರ ಕೃಪೆಯಿಂದ ತಯಾರಾಗಿದ್ದರೆ, ಅವರು ಈ ಪವಿತ್ರತೆಯ ವಿಷಯಕ್ಕಾಗಿ ಗರ್ವಪಟ್ಟುಕೊಳ್ಳಲು ಸಾಧ್ಯವಿಲ್ಲ.

ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು ಸಾಮಾನ್ಯವಾಗಿ ತಮ್ಮ ಸ್ವಂತ ಗುಂಪಿನ ನಾಯಕರು ಬರೆದಿರುವಂತಹ ಪುಸ್ತಕಗಳನ್ನು ಮಾತ್ರ ಓದುತ್ತಾರೆ. ಅವರ ವಾರ ಪತ್ರಿಕೆಗಳು ತಮ್ಮ ಸ್ವಂತ ಗುಂಪಿನ ಸದಸ್ಯರು ಬರೆದಿರುವಂತಹ ಲೇಖನಗಳನ್ನು ಮಾತ್ರ ಹೊಂದಿರುತ್ತವೆ. ಈ ತಪ್ಪಾದ ಆರಾಧನಾ ಪದ್ಧತಿಯಲ್ಲಿನ ಹಲವು ಗುಂಪುಗಳು ಬೆರೊಬ್ಬ ವಿಶ್ವಾಸಿಗಳು ಬರೆದಿರುವಂತಹ ಬರಹಗಳನ್ನು ಓದುವುದನ್ನು ತೀವ್ರವಾಗಿ ವಿರೋಧಿಸುತ್ತಾರೆ. ಏಕೆಂದರೆ ಅವರ ಎಣಿಕೆಯ ಪ್ರಕಾರ, ತಮ್ಮ ಸ್ವಂತ ಗುಂಪಿನ ನಾಯಕರನ್ನು ಹೊರತುಪಡಿಸಿ, ಅಪೋಸ್ತಲರುಗಳ ದಿನದಿಂದ ಈವರೆಗೆ ಕ್ರೈಸ್ತತ್ವವು ಬೇರೆ ದೈವಿಕ ಮನುಷ್ಯರನ್ನು ನೋಡಿಲ್ಲ ಎಂದುಕೊಂಡಿರುತ್ತಾರೆ!! ಈ ವಿಕೃತ ಆರಾಧನೆಯು ಇಷ್ಟರಮಟ್ಟಿಗೆ ಜನರನ್ನು ಮರಳುಗೊಳಿಸುವಷ್ಟು ಸಾಮರ್ಥ್ಯಹೊಂದಿದೆ.

ತಪ್ಪಾದ ಆರಾಧನೆ ಹೊಂದಿರುವ ವಿಶ್ವಾಸಿಗಳು ತಮ್ಮ ಸ್ವಂತ ಗುಂಪಿನ ವಿಶ್ವಾಸಿಗಳು ಬರೆದಿರುವಂತಹ ಹಾಡುಗಳನ್ನೇ ಹಾಡುತ್ತಾರೆ. ಅವರ ಹಾಡಿನ ಪುಸ್ತಕಗಳು ತಮ್ಮ ಸ್ವಂತ ಗುಂಪಿನ ವಿಶ್ವಾಸಿಗಳು ಬರೆದಿರುವಂತಹ ಹಾಡುಗಳನ್ನು ಮಾತ್ರ ಒಳಗೊಂಡಿರುತ್ತದೆ. ಬೇರೆ ಕ್ರೈಸ್ತ ವಿಶ್ವಾಸಿಗಳು ಬರೆದಿರುವ ದೇವರ ಸ್ತೋತ್ರ ಗೀತೆಗಳು ತಪ್ಪಾದ ಪ್ರಚೋದನೆಯನ್ನು ಹೊಂದಿರುತ್ತವೆ ಮತ್ತು ಅಪಾಯಕಾರಿ ಎಂದು ಭಾವಿಸುತ್ತಾರೆ!!! ಇಂತಹ ವಿಕೃತ ಆರಾಧನೆಯ ಗುಂಪುಗಳು ತಮ್ಮ ಸದಸ್ಯರನ್ನು ಮನುಷ್ಯರು ಮಾಡಿದಂತಹ ಗೂಡಿನಲ್ಲಿಯೇ ಬಂದಿಯಾಗಿ ಬಂಧಿಸಿರುತ್ತಾರೆ. ಇದರಿಂದಾಗಿ ಪೂರ್ವ ಶತಮಾನಗಳಲ್ಲಿ, ಇತರ ದೈವಿಕ ಪುರುಷರ ಮೂಲಕ ದೇವರು ಏನು ಮಾಡಿದನೆಂದು ಅಥವಾ ಅವರ ದಿನಗಳಲ್ಲಿಯೇ ಬೇರೆ ಕ್ರಿಸ್ತೀಯ ಕ್ರೈಸ್ತ ಸಭೆಗಳಲ್ಲಿ ಬೇರೆ ದೈವಿಕ ಮನುಷ್ಯರ ಮುಖಾಂತರ ದೇವರು ಏನು ಮಾಡಿದನೆಂಬುದನ್ನು ಸಂಪೂರ್ಣವಾಗಿ ಅಲಕ್ಷ್ಯ ಮಾಡುವಂತೆ ಅವರೆಲ್ಲರನ್ನು ಅಜ್ಞಾನದಲ್ಲಿಟ್ಟಿರುತ್ತಾರೆ.

ಒಂದು ವೇಳೆ ಒಬ್ಬನು ದೇವರಿಗೆ ಭಯಪಡುವಂತಹ ಬೇರೆ ವಿಶ್ವಾಸಿಗಳಿಂದ ಪ್ರತ್ಯೇಕವಾಗಿದ್ದಾಗ, ಆತನು ಸುಲಭವಾಗಿ ವಾಸ್ತವದಿಂದ ಸಂಪರ್ಕವನ್ನು ಕಳೆದುಕೊಳ್ಳುತ್ತಾನೆ ಹಾಗೂ ತನ್ನನೇ ವಂಚನೆ ಮಾಡಿಕೊಳ್ಳುವ ಮತ್ತು ಗರ್ವ ತುಂಬಿದ ಜೀವಿತ ಜೀವಿಸಲು ಪ್ರಾರಂಭ ಮಾಡುತ್ತಾನೆ.

ಯಾವುದೇ ಕಾರಣದಿಂದಾಗಲಿ ನಮ್ಮ ಪರಲೋಕದ ತಂದೆಯು ಅಂಗೀಕರಿಸಿದ್ದವರಲ್ಲಿ ಒಬ್ಬರನ್ನಾದರೂ ನಾವು ನಮ್ಮ ಅನ್ಯೋನ್ಯತೆಯಿಂದ ಕಡಿದು ಹಾಕಿದರೇ, ಹಾನಿ ಉಂಟಾಗುವದು ನಮಗೆ ಹೊರತು ಬೇರೆಯವರಿಗಲ್ಲ. ಏಕೆಂದರೆ, ’ಎಲ್ಲಾ’ ದೇವಜನರೊಂದಿಗೆ ಜ್ಞಾನಕ್ಕೂ ಮೀರುವ ಕರ್ತನ ಪ್ರೀತಿಯನ್ನು ತಿಳುಕೊಳ್ಳಲು ಶಕ್ತರಾಗುತ್ತೇವೆಂದು ದೇವರು ತಾನೇ ಇದನ್ನು ನೇಮಿಸಿದ್ದಾನೆ (ಎಫೆಸ 3:18,19).

ಸಾರ್ವತ್ರಿಕವಾಗಿರುವುದಕ್ಕಾಗಲಿ ಅಥವಾ ರಾಜಿ ಮಾಡಿಕೊಳ್ಳುವುದಕ್ಕಾಗಲಿ ಈ ಅನ್ಯೋನ್ಯತೆಯು ಅಲ್ಲ. ಬಾಬೇಲಿನಂತ ಪದ್ದತಿಗಳಲ್ಲಿರುವ ಹಲವು ವಿಶ್ವಾಸಿಗಳ ಜೊತೆಗೂಡಿ ಕೆಲಸ ಮಾಡಲು ಸಾಧ್ಯವಾಗದೇ ಇರಬಹುದು. ಅಂತಹ ಪದ್ದತಿಗಳೊಂದಿಗೆ ನಾವು ಯಾವ ಸಂಬಂಧ ಕೂಡ ಇಟ್ಟುಕೊಳ್ಳಬಾರದು, ಆದರೆ ಅಂತಹ ಗುಂಪುಗಳಿಂದ ಹೊರಬರಲು ವಿಶ್ವಾಸಿಗಳನ್ನು ಯಾವಾಗಲೂ ಪ್ರೋತ್ಸಾಯಿಸಬೇಕು (ಪ್ರಕಟಣೆ 18:4). ಆದರೆ ದೇವರಿಗೆ ಭಯ ಪಡುವಂತಹ ಯೇಸುವಿನ ಎಲ್ಲಾ ಶಿಷ್ಯರೊಟ್ಟಿಗೆ ಅನ್ಯೂನ್ಯತೆಯಿಂದಿರಲೂ ನಮ್ಮ ಹೃದಯಗಳನ್ನು ಯಾವಾಗಲೂ ತೆರೆದಿರಬೇಕು. ಕರ್ತನು ಸ್ವತ: ತಾನೇ, ಒಬ್ಬಾತನನ್ನು ಅಂಗೀಕರಿಸಿರುವಾಗ ಆತನು ನಮ್ಮೊಟ್ಟಿಗೆ ಒಪ್ಪಿಕೊಳ್ಳದಿದ್ದರೂ ಸಹ ಆತನನ್ನು ತಿರಸ್ಕರಿಸಲು ನಮಗೆ ಏನು ಹಕ್ಕಿದೆ (ಲೂಕ 9:49, 50)?

ಒಂದೇ ತಂಡದಲ್ಲಿ ಒಟ್ಟಾಗಿ ಕೆಲಸ ಮಾಡುವ ಸಂದರ್ಭವಿಲ್ಲದಿದ್ದರೂ, ಒಟ್ಟಾಗಿ ಅನ್ಯೂನ್ಯತೆಯಿಂದಿರಲು ಹೇಗೆ ಸಾಧ್ಯ ಎಂಬುದಕ್ಕೆ ಪೌಲ ಮತ್ತು ಬಾರ್ನಬರು ಒಳ್ಳೆಯ ಉದಾಹರಣೆ (ಅಪೋಸ್ತಲರ ಕೃತ್ಯಗಳು 15:36-41). ಅವರು ಒಂದು ವಿಷಯದಲ್ಲಿ ತೀವ್ರವಾಗಿ ಒಬ್ಬರಿಗೊಬ್ಬರು ಸಮ್ಮತಿಸಲಿಲ್ಲ ಮತ್ತು ಒಟ್ಟಾಗಿ ಕೆಲಸ ಮಾಡಲು ಯಾವುದೇ ದಾರಿ ಇಲ್ಲವೆಂದು ಅವರಿಗೆ ತೋರಿತು. ಆದರೆ ಅವರು ಒಬ್ಬರಿಗೊಬ್ಬರ ಅನ್ಯೂನ್ಯತೆಯನ್ನು ಮುರಿದುಕೊಳ್ಳಲಿಲ್ಲ ಅಥವಾ ಒಬ್ಬರಿಗೊಬ್ಬರು ದ್ವೇಷಿಸಲಿಲ್ಲ ಅಥವಾ ಬೇರೆ ಹೆಸರುಗಳಿಂದ ಕರೆಯಲಿಲ್ಲ. ಇವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿದ್ದರೆ, ಅವರು ತಪ್ಪಾದ ಆರಾಧನೆಯನ್ನು ಹೊಂದಿದವರಾಗುತ್ತಿದ್ದರು. ಆದರೆ ಅವರು ಒಬ್ಬರನ್ನೊಬ್ಬರು ಪ್ರೀತಿಸಿದರು ಮತ್ತು ಪ್ರತ್ಯೇಕವಾಗಿ ಸೇವೆಮಾಡಿದರು. ಹಾಗೂ ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥನೆಯನ್ನು ಮಾಡಿದರೇಂಬುದರಲ್ಲಿ ಯಾವುದೇ ಸಂದೇಹವಿಲ್ಲ. ತಪ್ಪಾದ ಆರಾಧನೆ ಹೊಂದಿರುವವರು ಇಂತಹ ಅನ್ಯೋನ್ಯತೆಯನ್ನು ಕಂಡುಕೊಳ್ಳುವದು ಅಸಾಧ್ಯ ಮತ್ತು ಯಾರು ಇವರ ಸಂಪೂರ್ಣ ಅಧೀನದಲ್ಲಿರುತ್ತಾರೋ ಅಂತ:ವರೊಡನೆ ಮಾತ್ರ ಇವರು ಅನ್ಯೋನ್ಯತೆ ಮಾಡಲು ಶಕ್ತರಾಗಿರುತ್ತಾರೆ.

4. ಸುವಾರ್ತೆ ಸಾರುವ ಭಾರ ಇಲ್ಲದಿರುವುದು.

ತಪ್ಪಾದ ಆರಾಧನೆಯ 4ನೇಯ ಗುರುತೇನೆಂದರೆ, ಲೋಕದಲ್ಲಿ ಪರಿವರ್ತನೆ ಹೊಂದದ ಅಕ್ರೈಸ್ತರಿಗೆ ಸುವಾರ್ತೆಯನ್ನು ತೆಗೆದುಕೊಂಡು ಹೋಗುವ ಭಾರ ಇಲ್ಲದೇ ಇರುವದು.

ಕೆಲವೊಂದು ತಪ್ಪಾದ ಆರಾಧನೆ ಹೊಂದಿರುವ ಗುಂಪುಗಳು ಅಕ್ರೈಸ್ತರಿಗೆ ಸುವಾರ್ತಾ ಪ್ರಚಾರ ಮಾಡುವದರಲ್ಲಿ ಸ್ವಲ್ಪ ಮಟ್ಟಿಗೆ ತಮ್ಮನ್ನು ತೊಡಗಿಸಿಕೊಳ್ಳಬಹುದು, ಆದರೂ ಹೆಚ್ಚಿನ ಪ್ರಮಾಣದಲ್ಲಿ ಇವರು ಇತರ ಕ್ರೈಸ್ತ ವಿಶ್ವಾಸಿಗಳ ಮಧ್ಯ ಮಾತ್ರ ಸೇವೆ ಮಾಡುತ್ತಾರೆ.

ಕರ್ತನಾದ ಯೇಸು (ಮಾರ್ಕ16:15)ರಲ್ಲಿ ಹೇಳಿದಂತೆ, ಇವರಿಗೆ ಲೋಕದ ಎಲ್ಲಾ ಕಡೆಗೆ ಹೋಗಿ ಜಗತ್ತಿಗೆಲ್ಲಾ ಸುವಾರ್ತೆಯನ್ನು ಸಾರಲು ಯಾವುದೇ ಆಸಕ್ತಿಯಿಲ್ಲ. ಇದರ ಹೊರತಾಗಿ, ಬೇರೆ ವಿಶ್ವಾಸಿಗಳ ಮಧ್ಯದೊಳಗಿಂದ ತಮ್ಮ ಸ್ವಂತ ಗುಂಪಿಗೆ ಶಿಷ್ಯಂದಿರನ್ನು ಮಾಡುವುದು ಮಾತ್ರ ಅವರಿಗೆ ಮುಖ್ಯವಾಗಿರುತ್ತದೆ.

ಈ ರೀತಿ ತಪ್ಪಾದ ಆರಾಧನೆ ಹೊಂದಿರುವ ಗುಂಪುಗಳು ಸಾಮಾನ್ಯವಾಗಿ ತುಂಬಾ ಇಜ್ಜೋಡಾದ ಅನ್ಯೂನ್ಯತೆಯನ್ನು ಹೊಂದಿಕೊಂಡಿರುತ್ತಾರೆ, ಹೀಗಿರುವದರಿಂದ ಹಲವು ವಿಶ್ವಾಸಿಗಳು ಅವರ ಗುಂಪಿನೊಳಗೆಯೇ ಭದ್ರತೆಯನ್ನು ಕಂಡುಕೊಳ್ಳುತ್ತಾರೆ. ಈ ಗುಂಪಿನಲ್ಲಿರುವವರು ಒಬ್ಬರಿಗೊಬ್ಬರು ಕಾಳಜಿವಹಿಸುತ್ತಾರೆ, ಸಹಾಯ ಮಾಡುತ್ತಾರೆ ಹಾಗು ಹಲವಾರು ರೀತಿಯಲ್ಲಿ ಒಬ್ಬರಿಗೊಬ್ಬರು ತುಂಬಾ ಒಳ್ಳೆಯವರಾಗಿರುತ್ತಾರೆ.

ಅಭದ್ರತೆ ಹೊಂದಿದ ಕ್ರೈಸ್ತರು ತಾವು ಭೇಟಿಯಾದ ಕ್ರೈಸ್ತತ್ವದಲ್ಲಿ ಪ್ರೀತಿ ಕಾಣದೇ ಹೋಗುವಾಗ, ನಿರಾಶೆಗೊಂಡಿರುತ್ತಾರೆ ಮತ್ತು ಭದ್ರತೆಯನ್ನು, ಅಂಗೀಕರಿಸಲ್ಪಡುವಿಕೆಯನ್ನು ದೇವರಲ್ಲಿ ಹುಡುಕದೇ, ವಿಶ್ವಾಸಿಗಳ ಸಮುದಾಯದಲ್ಲಿ ನೋಡುತ್ತಿರುತ್ತಾರೆ. ಇಂಥವರು ಹಲವು ಬಾರಿ ತಪ್ಪಾದ ಆರಾಧನೆ ಹೊಂದಿರುವ ಗುಂಪುಗಳಿಗೆ ಸೆಳೆಯಲ್ಪಟ್ಟು ಅವರಲ್ಲಿ ಪ್ರೀತಿ ಮತ್ತು ಅನ್ಯೂನ್ಯತೆಯನ್ನು ಕಂಡುಕೊಳ್ಳುತ್ತಾರೆ. ಆದರೆ ಅವರು ತುಂಬಾ ಪ್ರತ್ಯೇಕ ಜೀವನ ಜೀವಿಸುವುದರಿಂದ ಸಾಮಾನ್ಯವಾಗಿ ತಮ್ಮ ಕ್ರೈಸ್ತ ಜೀವಿತದಲ್ಲಿ ಮುಂದಿರುವ ಅಪಾಯಗಳ ಬಗ್ಗೆ ಅರಿವಿಲ್ಲದವರಾಗಿದ್ದಾರೆ.

ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು ಹೊಸ ”ವಿಶ್ವಾಸಿಯ ಸಂಪರ್ಕ”ಕ್ಕೆ ಹೆಚ್ಚಿನ ಗಮನ ಮತ್ತು ವಾತ್ಸಲ್ಯವನ್ನು ಕೊಡುತ್ತಾರೆ. ಏಕೆಂದರೆ, ಈ ವಿಶ್ವಾಸಿಯು ತಮ್ಮ ಗುಂಪಿಗೆ ಸೇರಬೇಕೆಂದು. ಒಂದು ಸಲ ಈ ವಿಶ್ವಾಸಿಯು ತಮ್ಮ ಗುಂಪನ್ನು ಸೇರಿದರೆ ಆತನು ಕ್ರಮೇಣವಾಗಿ ಇವರ ನಾಯಕನ ”ದೈವಿಕ ಅಧಿಕಾರ”ವನ್ನು ಅಂಗೀಕರಿಸಿಕೊಳ್ಳುವುದರ ಜೊತೆಗೆ ಗುಂಪಿನ ಬೋಧನೆಗಳನ್ನು ಅಂಗೀಕರಿಸುತ್ತಾನೆಂದು ಅವರಿಗೆ ಗೊತ್ತು. ಕೆಲವು ವರ್ಷಗಳನ್ನು ಇಂತಹ ಗುಂಪಿನಲ್ಲಿ ಕಳೆದಾಗ ಹಲವು ವಿಶ್ವಾಸಿಗಳು ಏಕಾಂಗಿಯಾಗಿ ಉಳಿಯಬಹುದೆಂದು ಮತ್ತು ಪ್ರತ್ಯೇಕಿಸಲ್ಪಡುವೆನೆಂಬ ಭಯದಿಂದಾಗಿ ಗುಂಪನ್ನು ಬಿಡುವುದನ್ನು ಸಹ ಯೋಚಿಸುವುದಿಲ್ಲ. ಈ ಭಯದ ಜೊತೆ ”ಸತ್ಯವಾದ ಸಭೆಯಿಂದ ಬಿದ್ದು, ದೂರಕ್ಕೆ ಹೋದೆವು” ಎಂಬ ಯೋಚನೆ ಬಲಹೀನ ಮನಸ್ಸುಳ್ಳ ತಪ್ಪಾದ ಆರಾಧನಾ ಪದ್ಧತಿಯನ್ನು ಹೊಂದಿರುವ ವಿಶ್ವಾಸಿಗಳನ್ನು ಆಜೀವವಾಗಿ ಇಲ್ಲಿ ಬಂಧಿಸಿಡುತ್ತದೆ. ದೇವರಿಗೆ ಭಯ ಪಡುವಂತಹ ಸುವಾರ್ತಾ ಪ್ರಚಾರಕರು ಜನರನ್ನು ಕ್ರಿಸ್ತನ ಬಳಿಗೆ ತರಲು, ಹಿಂದಿನ ಹಲವು ವರ್ಷಗಳ ಕಾಲ ಕಡುಪರಿಸ್ಥಿತಿಗಳ ನಡುವೆ ಜೀವಿಸಿ, ಮಾಡಿದಂಥ ತ್ಯಾಗಗಳನ್ನು ತಪ್ಪಾದ ಆರಾಧನಾ ಪದ್ಧತಿಯನ್ನು ಹೊಂದಿರುವ ವಿಶ್ವಾಸಿಗಳು ಸಾಮಾನ್ಯವಾಗಿ ಮಾಡುವುದಿಲ್ಲ. ಇಂತ: ಸುವಾರ್ತಾ ಪ್ರಚಾರಣೆ ಮಾಡುವದನ್ನು ತಪ್ಪಾದ ಆರಾಧನೆ ಹೊಂದಿರುವ ವಿಶ್ವಾಸಿಗಳು ಹಗುರವಾಗಿ ಮಾತನಾಡುತ್ತಾರೆ, ಇದು ಸಾಮಾನ್ಯವಾಗಿಯೇ ಬಂತು- ಏಕೆಂದರೆ ಇಂತ: ಸುವಾರ್ತಾ ಪ್ರಚಾರ ಸೇವೆಯಲ್ಲಿ ತೊಡಗಿಕೊಳ್ಳುವುದು ಸುಲಭದ ಮಾತೇನಲ್ಲಾ!!

ಒಂದು ವೇಳೆ ತಪ್ಪು ಆರಾಧನೆಯ ಬೋಧಕರು ಅಕ್ರೈಸ್ತರ ನಾಡಿಗೆ ಹೋದರೆ, ಅಲ್ಲಿ ಸಾಮಾನ್ಯವಾಗಿ ಭೇಟಿ ನೀಡುವ ಬೋಧಕರಂತೆ ಹೋಗುತ್ತಾರೆ. ಅವರು ಭೇಟಿ ನೀಡುವಂತ ಅಕ್ರೈಸ್ತ ಪ್ರದೇಶದಲ್ಲಿ ತಮ್ಮ ಗುಂಪಿನ ಮುಂದಿನ ಕಾರ್ಯಕ್ರಮಗಳ ವ್ಯವಸ್ಥೆಗಾಗಿ ಮತ್ತು ಅವರ ವಾರ್ಷಿಕ ಅವಧಿಯ ಭೇಟಿಗಾಗಿ ತಮಗೋಸ್ಕರ ಸಭೆಗಳನ್ನು ಏರ್ಪಡಿಸಲು ಸ್ಥಳೀಯ ಪ್ರತಿನಿಧಿಗಳನ್ನು ನೇಮಿಸಿಕೊಳ್ಳುವಂಥ ಸುಲಭವಾದ ಹಾದಿಯನ್ನು ಅವರು ಆರಿಸಿಕೊಳ್ಳುತ್ತಾರೆ ಹಾಗೂ ಇದರ ಪ್ರತಿಫಲವಾಗಿ ಈ ಸ್ಥಳೀಯ ಪ್ರತಿನಿಧಿಗಳಿಗೆ ಉಡುಗೊರೆಗಳನ್ನು ಕೊಡುತ್ತಾರೆ, ಇಲ್ಲವೇ ಯಾವಾಗಲಾದರು ಒಮ್ಮೆ ಅವರ ಗುಂಪಿನ ಮುಖ್ಯ ಕೇಂದ್ರಸ್ಥಾನಕ್ಕೆ ಪ್ರವಾಸದ ವೆಚ್ಚವನ್ನು ಲಂಚದೋಪಾದಿಯಲ್ಲಿ ಕೊಡುತ್ತಾರೆ.

ಕ್ರಿಸ್ತನ ಅಪೋಸ್ತಲರು ಇಂತಹ ಲಂಚವನ್ನು ಯಾರಿಗೂ ಕೊಡಲು ಸಾಧ್ಯವಾಗುತ್ತಿದ್ದಿಲ್ಲ, ಏಕೆಂದರೆ ಅವರೆಲ್ಲರೂ ಬಡವರಾಗಿದ್ದರು. ಆದ್ದರಿಂದ ಅವರು ಅಕ್ರೈಸ್ತ ಪ್ರದೇಶಗಳಲ್ಲಿ ದೇವರಿಗೋಸ್ಕರ ನಿಜವಾದ ಸೇವೆಯನ್ನು ಮಾಡಿದರು.

5) ನಂಬಿಕೆಯಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದರ ಮೌಲ್ಯವು ಕುಗ್ಗಿಹೋಗಿರುವದು.

ತಪ್ಪಾದ ಆರಾಧನೆಯ 5ನೇಯ ಗುರುತೇನೆಂದರೆ, ನಂಬಿಕೆಯಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದರ ಮೌಲ್ಯವನ್ನು ತಗ್ಗಿಸುವುದು ಮತ್ತು ಕ್ರಿಯೆಗಳಿಂದ ನೀತಿವಂತನೆಂದು ನಿರ್ಣಯಿಸಲ್ಪಡುವುದಕ್ಕೆ ಅಧಿಕ ಪ್ರಾಮುಖ್ಯತೆಯನ್ನು ಕೊಡುವುದಾಗಿದೆ.

ಕ್ರಿಯೆಗಳು ನಮ್ಮ ನಂಬಿಕೆಗೆ ಸಾಕ್ಷಿಗಳಾಗಿವೆಂದು ಸತ್ಯವೇದವು ಹೇಳುತ್ತದೆ (ಯಾಕೋಬ 2:24). ”ಆದರೆ ಯಾವನು ಪೂಣ್ಯಕ್ರಿಯೆಗಳನ್ನು ಮಾಡಿದವನಾಗಿರದೆ ಪಾಪತ್ಮರನ್ನು ನೀತಿವಂತರೆಂದು ನಿರ್ಣಯಿಸುವಾತನಲ್ಲಿ ನಂಬಿಕೆಯಿಡುತ್ತಾನೋ, ಅವನ ನಂಬಿಕೆಯೇ ನೀತಿ ಎಂದು ಎಣಿಸಲ್ಪಡುವುದು” (ರೋಮಾಪುರದವರಿಗೆ 4:5) ಎಂದೂ ಸಹ ಸತ್ಯವೇದವು ತಿಳಿಸುತ್ತದೆ.

ಇಲ್ಲಿ ಕೇವಲ ಅಸಮತೋಲನತೆಯ ಅಪಾಯವಿಲ್ಲ, ಆದರೆ ಶಾಸ್ತ್ರ ವಿರೋಧವಾದದ್ದಾಗಿದೆ - ಯಾಕೆಂದರೆ ಸತ್ಯವೇದಲ್ಲಿನ ಒಂದು ಸತ್ಯದಿಂದ ಇನ್ನುಳಿದ ಸತ್ಯಗಳನ್ನು ಹೊರಪಡಿಸುವ ವಿಪರೀತಕ್ಕೆ ಯೋಚಿಸುವಾಗ ಅದನ್ನು ಒಡ್ಡು ನಂಬಿಕೆಯೆಂದು ಕರೆಯುತ್ತಾರೆ ಮತ್ತು ಮುಂದೆ ಒಂದು ವೇಳೆ ಸತ್ಯವೇದಲ್ಲಿನ ಸಿದ್ಧಾಂತಗಳನ್ನು ನಾವು ನಮ್ಮ ಸಭೆಗಳಲ್ಲಿ ಬೋಧಿಸದೇ ಹಿಡಿದಿಟ್ಟುಕೊಂಡರೆ, ಈ ಸಿದ್ಧಾಂತಗಳಲ್ಲಿ ನಮಗೆ ನಂಬಿಕೆಯಿಲ್ಲ ಎಂಬುದಕ್ಕೆ ಸಮವಾಗಿರುತ್ತದೆ. ಸತ್ಯವನ್ನು ಮಾತನಾಡದೇ ಇರುವಂತದ್ದು, ದೇಹದ ಬಲವನ್ನು ಉಪಯೋಗಿಸದಿರುವ ಹಾಗಿದೆ ಮತ್ತು ಈ ಸತ್ಯವನ್ನು ಕೇಳದೇ ಇರುವದರಿಂದ ಕ್ರಮೇಣವಾಗಿ ತನ್ನ ಕೆಲಸ ಮಾಡುವ ಶಕ್ತಿಯನ್ನು ಕಳೆದುಕೊಂಡು ಕೊನೆಯಲ್ಲಿ ಸಭೆಯಿಂದ ಈ ಸತ್ಯವು ಮಾಯವಾಗುತ್ತದೆ. ”ಸತ್ಯವು ವಿಪರೀತವಾದ ಅಲೋಚನೆಯ ಒಂದು ತುದಿಯಲ್ಲಿರುವುದಿಲ್ಲ ಅಥವಾ ಮಧ್ಯಂತರ ವಿಚಾರದಲ್ಲೂ ಕೂಡ ಸತ್ಯವು ಸಿಗದು. ಆದರೆ ಸತ್ಯವು ವಿಪರೀತಗಳ ಎರಡೂ ತುದಿಗಳ ಮಧ್ಯದಲ್ಲಿ ಹಿಡಿಯಲ್ಪಟ್ಟಿರುತ್ತದೆ”.

ನಮ್ಮ ಬೋಧನೆಯು ಇನ್ನೊಬ್ಬರ ವಿಪರೀತಕ್ಕೆ ಪ್ರತಿಕ್ರಿಯೆ ರೀತಿಯಲ್ಲಿರಬಾರದೆಂದು ಜಾಗರೂಕರಾಗಿರಬೇಕು. ಅದ್ದರಿಂದಲೇ ಹಲವು ಬೋಧಕರು ನಂಬಿಕೆಯಿಂದ ನೀತಿವಂತರಾಗಿ ನಿರ್ಣಯಿಸಲ್ಪಡುವ ಬೋಧನೆಯನ್ನು ಪಾಪ ಮಾಡುವದಕ್ಕೆ ಪರವಾನಗಿ ಇರುವಂತೆ ತಿರುಚಿದ್ದಾರೆ. ಆದರೆ ಸತ್ಯವೇದದಲ್ಲಿರುವ ಸತ್ಯವನ್ನು ನಿರಾಕರಿಸಿ ವಿಪರೀತದ ಮತ್ತೊಂದು ತುದಿಗೆ ಹೋಗಿ ಕಾರ್ಯಗಳಿಂದ ನೀತಿವಂತರಾಗುತ್ತಾರೆಂದು ಬೋಧನೆಮಾಡುತ್ತಾ ಹೋಗಬಾರದು.

ಸಾಮಾನ್ಯವಾಗಿ ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು, ಒಳ್ಳೆಯ ಕ್ರಿಯೆಗಳಿಂದ ಮಾತ್ರ ನೀತಿವಂತರೆಂದು ನಿರ್ಣಯಿಸಲ್ಪಡುವುದರ ಮೇಲೆ ಬೋಧಿಸುತ್ತಾರೆ. ಹಿಂದುತ್ವವು ಮತ್ತು ಎಲ್ಲಾ ಅಕ್ರೈಸ್ತ ಧರ್ಮಗಳು ಇದನ್ನೇ ಹೇಳುತ್ತವೆ. ಒಂದು ವೇಳೆ ಈ ರೀತಿ ತಪ್ಪಾದ ಆರಾಧನೆಯಲ್ಲಿರುವ ಆರಾಧಕನು ರೋಮ 4ನೇಯ ಅಧ್ಯಾಯದ ಬಗ್ಗೆ ಮಾತನಾಡಿದರೆ, ಕ್ರಿಯೆಗಳಿಂದ ನೀತಿವಂತರಾಗುತ್ತಾರೆಂದು ಸಾಬೀತುಪಡಿಸಲಿಕ್ಕೆ ಪ್ರಯತ್ನಿಸುತ್ತಾನೆ!!!

ತಪ್ಪಾದ ಆರಾಧನೆಯಲ್ಲಿರುವ ಆರಾಧಕರು ಸಾಮಾನ್ಯವಾಗಿ "ಕ್ರಿಸ್ತನು ನಮ್ಮ ನೀತಿಯಾದನು" (1ಕೊರಿಂಥ1:30) ಎಂಬ ಸತ್ಯವನ್ನು ಕಡೆಗಣಿಸುತ್ತಾರೆ ಹಾಗೂ ರೋಮ 8:4ರಲ್ಲಿ ಹೇಳಿದ ಪ್ರಕಾರ "ನ್ಯಾಯಪ್ರಮಾಣದ ನೀತಿಯು ನಮ್ಮಲ್ಲಿ ನೆರವೇರುವುದು" ಎಂಬ ವಾಕ್ಯದ ಮೇಲೆ ಪ್ರಾಮುಖ್ಯತೆ ನೀಡುತ್ತಾರೆ.

ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು ಕ್ರಿಸ್ತನ ರಕ್ತದ ಮೌಲ್ಯವನ್ನು ಕೂಡಾ ತಗ್ಗಿಸುತ್ತಾರೆ ಮತ್ತು ಇದರ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ, ಒಂದು ವೇಳೆ ಮಾತನಾಡಿದರೆ ಆಧ್ಯಾತ್ಮಿಕ ಭಾವನೆಯಿಂದ ಅಥವಾ ಅತೀರೆಕದ ಆತ್ಮೀಕ ರೀತಿಯಲ್ಲಿ ಮಾತನಾಡುತ್ತಾರೆ. ಸಾಮಾನ್ಯವಾಗಿ ಯಾವುದೇ ಸಭೆಯಲ್ಲಿ ಹಾಡುವ ಹಾಡುಗಳಿಂದ ಅವರು ನಂಬಿದ ಮುಖ್ಯವಾದ ಸತ್ಯಗಳ ಬಗ್ಗೆ ತಿಳಿಯಬಹುದು. ತಪ್ಪಾದ ಆರಾಧನೆಯಲ್ಲಿರುವ ಆರಾಧಕರ ಹಾಡಿನ ಪುಸ್ತಕವನ್ನು ನೀವು ನೋಡುವುದಾದರೆ, ಅದರಲ್ಲಿನ ಯಾವುದೇ ಗೀತೆಗಳು ಪಾಪಗಳನ್ನು ಕ್ಷಮಿಸಲ್ಪಟ್ಟಿರುವ ಬಗ್ಗೆ ಅಥವಾ ನಂಬಿಕೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡುವುದರ ಬಗ್ಗೆ ಅಥವಾ ಯೇಸುವಿನ ರಕ್ತದಿಂದ ಪಾಪವನ್ನು ಶುದ್ಧಗೊಳಿಸುವ ಬಗ್ಗೆ ಇಲ್ಲದಿರುವದನ್ನು ಕಂಡುಹಿಡಿಯಬಹುದು.

ಯೇಸು ಮತ್ತು ಆತನ ಅಪೋಸ್ತಲರು ಕಲ್ವಾರಿ ಶಿಲುಬೆಯ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯ ಬಗ್ಗೆ ಮಾತನಾಡುತ್ತಾರೆ (ಲೂಕ 22:20) (ಎಫೆಸದವರಿಗೆ 2:13) ಮತ್ತು ಪರಲೋಕದಲ್ಲಿ ಅನಂತಕಾಲದವರೆಗೆ ಈ ಹಾಡನ್ನು ಹಾಡುತ್ತೇವೆ (ಪ್ರಕಟಣೆ 5:9), ಆದರೆ ಈ ತಪ್ಪಾದ ಆರಾಧನೆಯಲ್ಲಿರುವ ಆರಾಧಕರ ಹಾಡಿನ ಪುಸ್ತಕಗಳಲ್ಲಿ ಇದರ ಬಗ್ಗೆ ಇಲ್ಲದಿರುವಷ್ಟು ಮಟ್ಟಿಗೆ ಅಥವಾ ಯಾವುದೇ ಉಲ್ಲೇಖವನ್ನೂ ಮಾಡಿರುವುದಿಲ್ಲ.

ತಪ್ಪಾದ ಆರಾಧನೆಯಲ್ಲಿರುವ ಹಲವು ವಿಶ್ವಾಸಿಗಳ ಹೊರತೋರಿಕೆಯ ಜೀವಿತ ಬಹು ಒಳ್ಳೆಯದಾಗಿ ಕಂಡರೂ, ಇವರ ಮಧ್ಯದಲ್ಲಿ ಇನ್ನೂ ಹಲವರಿದ್ದಾರೆ. ಇವರ ಮೇಲೆ ಆ ಗುಂಪಿನ ನಾಯಕರ ಸಲ್ಲದ ಬೋಧನೆಗಳ ಅತೀಯಾದ ಭಾರವನ್ನು ಹಾಕಿರುವಂತದು ಕೂಡ ಒಂದು ಸತ್ಯವಾಗಿದೆ. ದೇವರು ಅವರಿಂದ ಸಂತೋಷಗೊಡ್ಡಿದ್ದಾನೋ, ಇಲ್ಲವೋ ಎಂದು ಸತತವಾಗಿ ಸಂಶಯದಲ್ಲಿರುತ್ತಾರೆ ಮತ್ತು ಇದರ ಫಲಿತಾಂಶವಾಗಿ ಅವರು ಶಾಶ್ವತವಾದ ಅಪರಾಧ ಪ್ರಜ್ಞೆ ಕೆಳಗೆ ಜೀವಿಸುತ್ತಾರೆ ಮತ್ತು ಸಹೋದರರನ್ನು ಆಪಾದಿಸುವವನಾದ ಸೈತಾನನಿಂದ ಶಾಶ್ವತವಾದ ಖಂಡನೆಯಲ್ಲಿರುತ್ತಾರೆ. ಆದರೆ ಇವರಲ್ಲಿ ಅನೇಕ ಜನರು ಈ ಸಮಸ್ಯಗಳನ್ನು ಒಪ್ಪುವುದಿಲ್ಲ ಏಕೆಂದರೆ, ಒಪ್ಪಿದರೆ ತಮ್ಮನ್ನು ನಂಬಿಕೆಯಲ್ಲಿ ಬಲಹೀನರು ಮತ್ತು ಅಪನಂಬಿಗಸ್ತರೆಂದು ಹೇಳಿಬಿಡಬಾರದೆಂಬ ಭಯದಲ್ಲಿರುತ್ತಾರೆ.

ಇಂತಹ ನಿರಂತರ ಅಪರಾಧದ ಭಾವನೆಗಳ ಮೂಲಕ ಈ ತಪ್ಪಾದ ಆರಾಧನಾ ಪದ್ಧತಿಗೆ ಸಂಬಂಧಪಟ್ಟ ಬೋಧನೆಯ ನಾಯಕರು ತಮ್ಮ ಗುಂಪಿನಲ್ಲಿ ಎಷ್ಟೋ ವಿಶ್ವಾಸಿಗಳ ಮೇಲೆ ನಿಯಂತ್ರಣ ಹೊಂದಿರುತ್ತಾರೆ. ಈ ಕಾರಣದಿಂದಾಗಿ ತಪ್ಪಾದ ಆರಾಧನೆ ಹೊಂದಿರುವ ಗುಂಪುಗಳಲ್ಲಿನ ತುಂಬಾ ಬೋಧನೆಗಳು ಜನರನ್ನು ಅಪರಾಧದ ಭಾವನೆಯಲ್ಲಿರುವಂತೆ ತೊಡಗಿಸುತ್ತವೆ ಮತ್ತು ಹಲವು ವಿಷಯಗಳಲ್ಲಿ ಅಪರಾಧದ ಪ್ರಜ್ಞೆಯಿಂದ ಒಬ್ಬನಿಗೆ ಸ್ಪಷ್ಟವಾಗಿ ಏನೂ ಕಾಣಿಸುವುದಿಲ್ಲ, ಹಾಗೂ ಇದರಿಂದ ಯಾವುದೇ ನಿರ್ಧಿಷ್ಟ ಪಾಪವನ್ನು ಗುರುತಿಸಲಿಕ್ಕೆ ಆಗದು.

ಆದರೂ ಇಂತಹ ಗುಂಪಿನಲ್ಲಿ ಹಲವು ಬಲವುಳ್ಳ ಬುದ್ಧಿವಿಶ್ವಾಸಿಗಳಿದ್ದಾರೆ, ಅವರು ಇಂತಹ ಭಾವನೆಗಳಿಂದ ಹೊರಬರಲು (ಜಯಿಸಲು) ಸಮರ್ಥರಾಗಿರುತ್ತಾರೆ. ಆದರೆ ಬಲಹೀನರು ಸೈತಾನನಿಂದ ಬಂಧನಕ್ಕೆ ಗುರಿಯಾಗುತ್ತಾರೆ. ಇದು ನಂಬಿಕೆಯಿಂದ ನೀತಿವಂತರೆಂದು ನಿರ್ಣಯಿಸಲ್ಪಡುವ ಸತ್ಯವನ್ನು ಅಲಕ್ಷ್ಯ ಮಾಡುವುದರ ನೇರ ಫಲಿತಾಂಶವಾಗಿದೆ.

6) ನಂಬಿಕೆಗಳ ಕುರಿತು ಗುಟ್ಟಾಗಿಡುವುದು.

ತಪ್ಪಾದ ಆರಾಧನೆಯ 6ನೇ ಗುರುತೇನೆಂದರೆ,ತಮ್ಮ ನಂಬಿಕೆಗಳ ಬಗ್ಗೆ ಗುಟ್ಟಾಗಿಡುವುದು.

ಸತ್ಯವೇದಕ್ಕೆ ಸ್ಪಷ್ಟವಾದ ಆಧಾರವಿಲ್ಲದ ನಂಬಿಕೆಗಳ ಬಗ್ಗೆ ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳಿಗೆ ತಮ್ಮ ಗುಂಪಿನ ಹೊರಗಡೆಯಿಂದ ಬೇರೆ ವಿಶ್ವಾಸಿಗಳು ಪ್ರಶ್ನೆ ಕೇಳಿದಾಗ, ಸಾಮಾನ್ಯವಾಗಿ ಇವರು ಹಾರಿಕೆಯ ಉತ್ತರವನ್ನು ಕೊಡುತ್ತಾರೆ.

ತಮ್ಮ ಸಿದ್ಧಾಂತಗಳನ್ನು ಸತ್ಯವೇದದ ಸಾಕ್ಷಾಧಾರಗಳಿಂದ ತೋರಿಸದಿದ್ದಾಗ ತಮಗೆ ಯಾವುದೇ ಪ್ರಶ್ನೆ ಕೇಳುವಂಥ ವಿಶ್ವಾಸಿಗಳಿಗೆ ಇವರ ಎಂದಿನ ಉತ್ತರ "ನಿಮಗೆ ಪವಿತ್ರಾತ್ಮನಿಂದ ಪ್ರಕಟಣೆಯ ಅಗತ್ಯತೆ ಇದೆ" ಆದ್ದರಿಂದ ಧರ್ಮಶಾಸ್ತ್ರದಲ್ಲಿ ತಿಳಿಸದೇ ಇರುವಂಥ ಮತ್ತು ಅದನ್ನು ಬೇರೆ ವಿಶ್ವಾಸಿಗಳು ಹೊಂದಿಲ್ಲದೇ ಇರುವ ಕೆಲವು ವಿಶೇಷ ಪ್ರಕಟಣೆಗಳನ್ನು ಹೊಂದಿದ್ದಾರೆಂದು ಹಕ್ಕು ಸಾಧಿಸುತ್ತಾರೆ.

ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು ’ರಹಸ್ಯವಾದ’ ವಿಷಯಗಳ ಬಗ್ಗೆ ಮಾತನಾಡಲು ಬಲೂ ಹರ್ಷಿಸುತ್ತಾರೆ, ಏಕೆಂದರೆ ಅವುಗಳನ್ನು ’ಪವಿತ್ರಾತ್ಮನಿಂದ ಪ್ರಕಟವಾಗಿವೆ’ ಎಂದು ಅಧಿಕಾರದಿಂದ ಹೇಳಿಕೊಳ್ಳುತ್ತಾರೆ, ಮತ್ತು ಈ ಪ್ರಕಟಣೆಗಳು ಕೇವಲ ’ಪೂರ್ಣಹೃದಯ’ ವಿರುವವರಿಗೆ ಮಾತ್ರ ಪ್ರಕಟಗೊಳ್ಳುತ್ತವೆಂದು ಹೇಳುತ್ತಾರೆ. ಅವರ ಪ್ರಕಾರ ’ಪೂರ್ಣಹೃದಯದವರು’ ಯಾರೆಂದರೆ - ಅವರ ನಾಯಕರ ನಾಯಕತ್ವವನ್ನು ಸ್ವೀಕರಿಸಿ, ಅವರ ಗುಂಪನ್ನು ಸೇರಿರುವವರು ಮಾತ್ರ ಆಗಿದ್ದಾರೆ!!! ತಮ್ಮ ಸ್ವಂತ ಗುಂಪನ್ನು ಹೊರತು ಪಡಿಸಿ, ಬೇರೆಯ ’ಪೂರ್ಣ ಹೃದಯದ’ ವಿಶ್ವಾಸಿಗಳಿದ್ದಾರೆಂದು ನಂಬುವುದಿಲ್ಲ. ಹೀಗೆ ಕುತೂಹಲದಿಂದಿರುವ ವಿಶ್ವಾಸಿಗಳನ್ನು ’ನಿಕಟವಾದ ಪ್ರಧಾನ’ ಗುಂಪಿಗೆ ಅಂದರೆ, ತಾವು ಹೇಳಿಕೊಳ್ಳುವ ’ಸತ್ಯದ ಮೇಲೆ ಬೆಳಕನ್ನು’ ಹೊಂದಿದ ಗುಂಪಿಗೆ ಆಕರ್ಷಿಸುತ್ತಾರೆ.

ದೇವರಿಗೆ ಒಬ್ಬನು ಅಚ್ಚುಮೆಚ್ಚಾಗಿದ್ದಾನೆ ಅಥವಾ ದೇವರ ಒಳ ವೃತ್ತದಲ್ಲಿ ಒಬ್ಬನು ಪ್ರೀಯನಾಗಿದ್ದಾನೆ ಅಂಥವನಿಗೆ ಇನ್ನೊಬ್ಬರು ಗ್ರಹಿಸಲಾರದ ಗುಪ್ತ ವಿಷಯಗಳನ್ನು ದೇವರು ಪ್ರಕಟಿಸುತ್ತಾನೆಂದು ಕಲ್ಪಿಸಿಕೊಳ್ಳಲು ನಮ್ಮ ಶರೀರಭಾವದಲ್ಲಿ ಅತಿದೊಡ್ಡ ಲೋಭವಿದೆ. ಪ್ರತಿಯೊಬ್ಬರಲ್ಲಿರುವ ಈ ಲೋಭವು ತಪ್ಪಾದ ಆರಾಧಕರಾಗಲು ಒಂದು ಕಾರಣವಾಗುತ್ತದೆ.

ಆದರೆ ಸತ್ಯವೇನು? ಆ ಸತ್ಯವೇನೆಂದರೆ - ದೇವರ ಆ ಎಲ್ಲಾ ರಹಸ್ಯವು ಸತ್ಯವೇದದಲ್ಲಿ ಸ್ಪಷ್ಟವಾಗಿ ಪ್ರಕಟಗೊಂಡಿದೆ.

ಎಫೆಸದವರಿಗೆ 3: 4 ರಿಂದ 6 ರವರೆಗೆ ಸ್ಪಷ್ಟವಾಗಿ ತಿಳಿಸುವುದೇನೆಂದರೆ - ಕ್ರಿಸ್ತನ ಮರ್ಮವು ಹಳೆ ಒಡಂಬಡಿಕೆಯ ಸಮಯಗಳಲ್ಲಿ ಮಾತ್ರ ಮರ್ಮವಾಗಿತ್ತು. ಆದರೆ ಈಗ ಅಲ್ಲ. ಕೊಲಸ್ಸೆಯವರಿಗೆ 1:26, 27ರಲ್ಲಿ ಹೀಗೆ ಹೇಳುತ್ತದೆ- ಈಗ ದೇವರು ಎಲ್ಲಾ ಭಕ್ತರಿಗೆ ಮರ್ಮವನ್ನು ವ್ಯಕ್ತಪಡಿಸಿದ್ದಾನೆ. ಈಗ ಯಾವುದೇ ರಹಸ್ಯದ ಬಗ್ಗೆ ಗೌಪ್ಯವಿಲ್ಲ, ಏಕೆಂದರೆ ಹೊಸ ಒಡಂಬಡಿಕೆಯು ಎಲ್ಲವನ್ನೂ ಸರಳವಾಗಿ ತಿಳಿಸಿದೆ. ಹೀಗಿದ್ದರೂ ಸಹ ಕೆಲವೊಂದು ಗೌಪ್ಯವಾದ ರಹಸ್ಯಗಳಿವೆಂದು ತಪ್ಪಾದ ಆರಾಧನೆಯಲ್ಲಿರುವ ಆರಾಧಕರು ನಿಮ್ಮನ್ನು ನಂಬಿಸುತ್ತಾರೆ.

ಹೊಸ ಒಡಂಬಡಿಕೆಯಲ್ಲಿ ಎರಡು ಬಹು ಮುಖ್ಯ ಮರ್ಮಗಳನ್ನು ಪ್ರಸ್ತಾಪಿಸಲಾಗಿದೆ- ದೈವಿಕತೆ ಮತ್ತು ಸಭೆ (1 ತಿಮೋಥೆ 3:16; ಎಫೆಸದವರಿಗೆ 5:32). ಇವರೆಡು ಮರ್ಮಗಳು ಜೊತೆಯಾಗಿ ಸತ್ಯವೇದದಲ್ಲಿ ಸ್ಪಷ್ಟವಾಗಿ ಬರೆಯಲ್ಪಟ್ಟಿವೆ ಮತ್ತು ತಿಳಿಸಲ್ಪಟ್ಟಿವೆ. ಒಂದು ವೇಳೆ ಜನರು ಅವುಗಳನ್ನು ನೋಡಿರದಿದ್ದರೆ, ಅವರು ಸತ್ಯವೇದವನ್ನು ಎಚ್ಚರಿಕೆಯಿಂದ ಓದಿರುವುದಿಲ್ಲ ಅಥವಾ ಅವರು ತುಂಬಾ ಗರ್ವಿಯಾಗಿದ್ದು ಮತ್ತು ತಮ್ಮ ನೋಟಗಳನ್ನು ಬದಲಿಸಲು ತೆರೆದ ಮನಸ್ಸಿಲ್ಲದವರಾಗಿರುತ್ತಾರೆ. ಸತ್ಯವೇದದಲ್ಲಿ ಸ್ಪಷ್ಟವಾಗಿ ತಿಳಿಸದ ಯಾವುದೇ ಮರ್ಮವನ್ನು ದೇವರು ಯಾರಿಗೂ ಗೌಪ್ಯವಾಗಿ ಪ್ರಕಟಿಸಿಲ್ಲ. ಹಾಗಿದ್ದಲ್ಲಿ ತಪ್ಪಾದ ಆರಾಧನೆಯಲ್ಲಿರುವ ಆರಾಧಕರು ಸತತವಾಗಿ ”ರಹಸ್ಯಗಳ” ಬಗ್ಗೆ ಮಾತನಾಡುವುದರ ವಿಷಯದಲ್ಲಿ ಎಚ್ಚರಿಕೆಯಿಂದಿರಿ.

7) ಒಂದೇ ರೀತಿಯಾಗಿರಲು (ಏಕರೂಪರಾಗಿರಲು) ಒತ್ತು ನೀಡುವುದು.

ತಪ್ಪಾದ ಆರಾಧನೆಯ 7ನೇ ಗುರುತು- ಅನುಯಾಯಿಗಳಿಂದ ಎಲ್ಲರೂ ಒಂದೇ ರೀತಿಯಾಗಿರಲು ಬೇಡಿಕೆ ಇಡುವುದಾಗಿದೆ.

ಎಲ್ಲಿ ಎಲ್ಲರೂ ಒಂದೇ ರೀತಿಯಾಗಿರುತ್ತಾರೋ ಅಲ್ಲಿ ಒಗ್ಗಟ್ಟು ಅಸ್ತಿತ್ವದಲ್ಲಿರುತ್ತದೆ ಎಂದು ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳು ಭಾವಿಸುತ್ತಾರೆ. ಅವರು ತಮ್ಮ ಅಂಶಗಳನ್ನು ಸಾಬೀತುಪಡಿಸಲು 1 ಕೊರಿಂಥದವರಿಗೆ 1:10 - ”ನೀವೆಲ್ಲರೂ ಹೊಂದಿಕೆಯಿಂದಿರಬೇಕು” (”ನಿಮ್ಮೆಲ್ಲರ ಮಾತು ಒಂದೇ ಆಗಿರಬೇಕು” - ಕೆ.ಜೆ.ವಿ) ಈ ವಾಕ್ಯವನ್ನು ತಪ್ಪಾಗಿ ಉಲ್ಲೇಖಿಸುತ್ತಾರೆ. ಆದ್ದರಿಂದ ತಾವು ಒಪ್ಪಿಕೊಂಡ ಗುಣಮಟ್ಟದಲ್ಲೇನಾದರೂ ಹೆಚ್ಚು ಕಡಿಮೆಯಾದರೆ, ಇದು ಗಂಟು ಮೊರೆ ಹಾಕಲಿಕ್ಕೆ ಆಸ್ಪದವಾಗುತ್ತದೆ. ಆದರೆ ಈ ವಾಕ್ಯವು ಆತ್ಮದಲ್ಲಿ ಒಂದಾಗಿರುವ ಬಗ್ಗೆ ತಿಳಿಸುತ್ತದೆಯೆ ವಿನ: ಎಲ್ಲಾ ಚಿಕ್ಕ ಚಿಕ್ಕ ವಿವರಗಳಲ್ಲಿ ಒಂದಾಗಿರಲಿಕ್ಕಲ್ಲ.

”ಸರಿ, ತಪ್ಪುಗಳ ಬಗ್ಗೆ ಭಿನ್ನಾಭಿಪ್ರಾಯಗಳಿರುವಂತ ಯಾವುದೇ ಸಹೋದರನಿಗೆ ಪ್ರೀತಿಯ ಸ್ವಾಗತವನ್ನು ಕೊಡುವುದು ಹೇಗೆ ಎಂದು ಆರಾಧನೆಯಲ್ಲಿ ತಪ್ಪಾದ ಆರಾಧನೆಯಲ್ಲಿರುವ ವಿಶ್ವಾಸಿಗಳಿಗೆ ಗೊತ್ತಿಲ್ಲ” (ರೋಮಪುರದವರಿಗೆ 14:1 ಲೀವಿಂಗ್ ಬೈಬಲ್). ಇವರ ಪ್ರೀತಿಯ ಸುಸ್ವಾಗತವೇನಿದ್ದರೂ ಯಾರು ಇವರೊಟ್ಟಿಗೆ ಶೇಕಡಾ 100%ರಷ್ಟು ಒಪ್ಪಿಕೊಂಡಿರುತ್ತಾರೋ ಅಂಥವರಿಗೆ ಮಾತ್ರ. ನಿಜ ಹೇಳಬೆಕೆಂದರೆ, ರೋಮಾಪುರದವರಿಗೆ ಬರೆದ ಪತ್ರಿಕೆ 14 ನೇಯ ಅಧ್ಯಾಯದ ಬೋಧನೆಯನ್ನು ಆರಾಧನೆಯಲ್ಲಿ ತಪ್ಪಾದ ಪದ್ಧತಿಯನ್ನು ಹೊಂದಿರುವ ಗುಂಪಿನಲ್ಲಿ ಬೋಧಿಸಲು ಯಾವುದೇ ಆಸ್ಪದವಿಲ್ಲ. ಏಕೆಂದರೆ ಅವರ ಮಧ್ಯದಲ್ಲಿ ವಿಭಿನ್ನತೆಗೆ ಜಾಗವಿಲ್ಲ.

ತಪ್ಪಾದ ಆರಾಧನೆಯಲ್ಲಿರುವ ಪ್ರತಿ ಗುಂಪುಗಳಲ್ಲಿ ಎಲ್ಲವನ್ನೂ -ಅಂದರೆ ಸಭೆಯ ಆರಾಧನಾ ಕ್ರಮವನ್ನೂ ಕೂಡ ಗುಂಪಿನ ಕೇಂದ್ರಕಾರ್ಯಾಲಯದ ಮಾದರಿ ಪ್ರಕಾರವೇ ಹೊಂದಿರಬೇಕು. ಹಲವು ಆರಾಧನೆಯಲ್ಲಿ ತಪ್ಪಾದ ಪದ್ಧತಿಯನ್ನು ಹೊಂದಿರುವ ವಿಶ್ವಾಸಿಗಳು ತಮ್ಮ ನಾಯಕರ ಕಲೆಯ ಶೈಲಿಯನ್ನು ನಕಲು ಮಾಡುತ್ತಾರೆ!! ತಪ್ಪಾದ ಆರಾಧನೆ ಹೊಂದಿರುವ ಕೇಂದ್ರಕಾರ್ಯಾಲಯವು ತಾವು ಅನುಸರಿಸುವ ಮಾದರಿಯನ್ನೇ ಅನುಸರಿಸಬೇಕೆಂದು ತಮ್ಮ ವಿಶ್ವಾಸಿಗಳ ಮೇಲೆ ಸತತವಾದ ಮಾನಸಿಕ ಒತ್ತಡವನ್ನು ಹೇರುತ್ತಾರೆ.

ಆ ಎಲ್ಲಾ ವಿಶ್ವಾಸಿಗಳು ಪೆದ್ದರಂತೆ ಮತ್ತು ಜೀವಂತ ಹೆಣಗಳಂತೆ ಅಥವಾ ರೊಬೋಗಳಂತೆ ಏನೂ ಪ್ರಶ್ನೆಕೇಳದೆ, ಅವರು ಕೊಟ್ಟ ಮಾದರಿಯನ್ನು ಅನುಸರಿಸಲಿಕ್ಕೆ ಒಪ್ಪಿಕೊಳ್ಳುತ್ತಾರೋ ಅಂಥವರನ್ನು ವಿನಮ್ರರು, ತುಂಬುಹೃದಯುಳ್ಳವರು ಮತ್ತು ’ಆರಿಸಿ’ ಕೊಂಡತ: ಕುಟುಂಬದ ಭಾಗವೆಂದು ಪರಿಗಣಿಸಲ್ಪಡುತ್ತಾರೆ ಹಾಗು ಇನ್ನುಳಿದವರೆಲ್ಲರು ಅಹಂಕಾರಿಗಳು ಮತ್ತು ’ಬೆಳಕನ್ನು’ ಪಡೆಯದವರಾಗಿದ್ದಾರೆ.

ಗುಂಪಿನ ನಾಯಕರ ವಿರುದ್ಧವಾಗಿ ಬಂಡಾಯ ಎದ್ದರೆ, ಆಗುವ ಪರಿಣಾಮಗಳ ಬಗ್ಗೆ ಸೂಕ್ಷ್ಮ ಸೂಚನೆಗಳಿಂದ ಎಚ್ಚರಿಸಿ ಗುಂಪಿಗೆ ಬೇಕಾದ ನಂಬಿಗಸ್ಥಿಕೆಯನ್ನು ಪಡೆದುಕೊಳ್ಳುತ್ತಾರೆ. ಗುಂಪಿನ ನಾಯಕರ ವಿರುದ್ಧ ಹೋಗಲು ಧೈರ್ಯಮಾಡಿದ ಜನರ ಜೀವನದಲ್ಲಾದ ಭೀಕರ ಪರಿಣಾಮಗಳನ್ನು ಭಯಹಿಡಿಯುವ ಹಾಗೆ ಗುಂಪಿನ ಸದಸ್ಯರಿಗೆ ಹೇಳಲಾಗುತ್ತದೆ. ಆದ್ದರಿಂದ, ಬಲಹೀನ ವಿಶ್ವಾಸಿಗಳು ಇವರ ಒತ್ತಡಕ್ಕೆ ಮಣಿಯುತ್ತಾರೆ. ಹಾಗಾಗಿ ಅವರು ಕ್ರಮೇಣವಾಗಿ ತಮ್ಮಲ್ಲಿನ ಗ್ರಹಿಸಬಲ್ಲ ಸಾಮರ್ಥ್ಯವನ್ನು ಕಳಕೊಳ್ಳುತ್ತಾರೆ ಮತ್ತು ಗುಂಪಿಗೆ ಗುಲಾಮರಾಗುತ್ತಾರೆ. ಯೇಸು ಜನರನ್ನು ಬಿಡುಗಡೆಗೊಳಿಸಲು ಬಂದನು. ಆದರೆ ಆರಾಧನೆಯಲ್ಲಿ ತಪ್ಪಾದ ಪದ್ಧತಿಯನ್ನು ಅನುಸರಿಸುವ ಜನರನ್ನು ಬಂಧನದಲ್ಲಿಡುತ್ತದೆ. ಆದ್ದರಿಂದ ತಪ್ಪಾದ ಆರಾಧನೆಯಲ್ಲಿರುವ ನಾಯಕರಿಂದ ಬಂಧಿತಕ್ಕೊಳಗಾದ ಅನೇಕ ವಿಶ್ವಾಸಿಗಳು ಸ್ವತಂತ್ರವಾಗಲಿಕ್ಕೆ ಅಗತ್ಯತೆಯಿದೆ.

ಯೇಸುವಿನ ಕಾಲದಲ್ಲಿಯ ಯೆಹೂದ್ಯರು ಪಾಪಕ್ಕೆ ಮಾತ್ರ ಗುಲಾಮರಾಗಿರಲಿಲ್ಲ, ಆದರ ಜೊತೆ ಧಾರ್ಮಿಕ ನಾಯಕರ ಸಂಪ್ರದಾಯ ಮತ್ತು ಅಭಿಪ್ರಾಯಗಳಿಗೂ ಗುಲಾಮರಾಗಿದ್ದರು. ಯೇಸು ಅವರನ್ನು ಈ ಎರಡು ಗುಲಾಮಗಿರಿಗಳಿಂದ ಬಿಡುಗಡೆಗೊಳಿಸಬೇಕಿತ್ತು. ಅನೇಕರು ’ಪಾಪದಿಂದ ಬಿಡುಗಡೆ’ ಎಂಬ ಯೇಸುವಿನ ಸಂದೇಶವನ್ನು ಸ್ವೀಕರಿಸಿದರೂ, ತಮ್ಮ ಧರ್ಮನಾಯಕರಿಂದ ಹೇದರುತ್ತಿದ್ದರು. ಆದ್ದರಿಂದ ತಮ್ಮ ’ಹಿರಿಯರ ಸಂಪ್ರದಾಯಗಳಿಂದ’ ಹೊರಬರಲಿಲ್ಲ. ಅವರು ಯಾವ ಮಟ್ಟಿಗೆ ದಾಸರಾಗಿದ್ದರೆಂದರೇ- ಸತ್ಯವೇದದ ಅನುಗುಣವಾಗಿ ಈ ವಿಷಯಗಳಿರದಿದ್ದರೂ ಅವರ ಗುಂಪಿನಿಂದ ಎಲ್ಲಿ ಬಹಿಷ್ಕರಿಸಿಬಿಟ್ಟಾರೋ ಎಂಬ ಭೀತಿ ಹೊಂದಿರುತ್ತಾರೆ (ಯೋಹಾನ 12:42,43).

ಧಾರ್ಮಿಕ ನಾಯಕರ ಅಭಿಪ್ರಾಯಗಳಿಗೆ ಗುಲಾಮರಾಗಿರುವಂಥದ್ದು ಎಷ್ಟು ಬಲಿಷ್ಠವಾಗಿದೆ ಎಂದು ನಾವು ನೋಡಬಹುದು. ಹೇಗೆಂದರೆ, ಪೇತ್ರನು 20 ವರ್ಷಗಳ ಪವಿತ್ರಾತ್ಮಭರಿತ ಜೀವಿತವನ್ನು ಜೀವಿಸಿದ ನಂತರವೂ, ಸಾರ್ವಜನಿಕವಾಗಿ ಯೆಹೂದ್ಯರ ಸಂಪ್ರದಾಯಗಳಿಂದ ನಿರ್ಗಮಿಸಲಿಕ್ಕೆ(ಹೊರಬರಲಿಕ್ಕೆ) ಹೆದರಿದನು- ಏಕೆಂದರೆ ಇಸ್ರಾಯೇಲಿನ ಕೆಲವು ಕ್ರೈಸ್ತನಾಯಕರನ್ನು ಮುಜುಗುರ ಪಡಿಸಬಾರದೆಂದು ಯೋಚಿಸಿದ್ದನು. ಪೌಲನು ಆಗ ಒಬ್ಬ ಕಿರಿಯ ಅಪೋಸ್ತಲನಾಗಿದ್ದನು. ಆತನೊಬ್ಬನಿಗೆ ಮಾತ್ರ ಆ ಸಂದರ್ಭದಲ್ಲಿ ಪೇತ್ರನಿಗೆ ಎಲ್ಲರ ಮುಂದೆ ಮುಖಾಮುಖಿಯಾಗಿ ನುಡಿಯಲು ಮತ್ತು ಪೇತ್ರನು ”ಹಿರಿಯರ ಸಂಪ್ರದಾಯಗಳನ್ನು ಹಿಂಬಾಲಿಸುತ್ತಿರುವುದನ್ನು” ಬಯಲು ಮಾಡಲು ದಿಟ್ಟತನವಿತ್ತು. ಹಿರಿಯ ಅಪೋಸ್ತಲನಾದ ಬಾರ್ನಬನಿಗೂ ಕೂಡ ಇದನ್ನು ಮಾಡಲಿಕ್ಕೆ ಧೈರ್ಯವಿರಲಿಲ್ಲ (ಗಲಾತ್ಯ 2:11-21).

ಒಬ್ಬನಿಗೆ ವೈಯಕ್ತಿಕ ಅನುಭವವಿರದೇ, ಹೊರತೋರಿಕೆಯ ಗುಣಲಕ್ಷಣಗಳಿಗೆ ಅಥವಾ ಮಾದರಿಗಳಿಗೆ ಇಲ್ಲದಿದ್ದರೆ ಒಬ್ಬರ ಒತ್ತಡದಿಂದ ಬದಲಾಗುವುದಕ್ಕೆ ದೇವರು ಬಯಸುವುದಿಲ್ಲ.

ದೇವರು ಇದುವರೆಗೆ ಕೇಳುವಂತ ವಿಧೇಯತೆ ಒಂದೇಯಾಗಿದೆ. ಅದೇನೆಂದರೆ, ಒಬ್ಬನು ಹರ್ಷದಿಂದ ಮತ್ತು ಧಾರಾಳವಾಗಿ ಕೊಡುವುದನ್ನೇ ಅಪೇಕ್ಷಿಸುತ್ತಾನೆ. ವಿಧಯತೆಯನ್ನು, ಅದರಂತೆ ಹಣವನ್ನೂ ”ಸಂತೋಷವಾಗಿ ಕೊಡುವವನ ಮೇಲೆ ದೇವರಿಗೆ ಪ್ರೀತಿಯುಂಟು” (2 ಕೊರಿಂಥದವರಿಗೆ 9:7). ಆತನು ಬಲವಂತವನ್ನು ದ್ವೇಷಿಸುತ್ತಾನೆ.

ದೇವರು ನಮ್ಮ ಸ್ವಾತಂತ್ರ್ಯ ಚಿತ್ತಕ್ಕೆ ಅಡ್ಡಿಪಡಿಸುವುದಿಲ್ಲ. ವಿಧೇಯರಾಗಲು ಅಥವಾ ಅವಿಧೇಯರಾಗಲು ದೇವರು ನಮಗೆ ಯಾವಾಗಲೂ ಆಯ್ಕೆಯನ್ನು ಕೊಟ್ಟಿದ್ದಾನೆ, ಇದೇ ಆಯ್ಕೆಯನ್ನು ಏದೆನ್ ತೋಟದಲ್ಲಿ ಆದಾಮ ಮತ್ತು ಹವ್ವಳಿಗೆ ಕೊಟ್ಟಿದ್ದನು. ಏಕೆಂದರೆ ನಿಜವಾದ ಪವಿತ್ರತೆಯು ಬೆಳೆದು, ಅಭಿವೃದ್ಧಿ ಹೊಂದಬೇಕೆಂದರೆ ಪರಿಪೂರ್ಣ ಸ್ವಾತಂತ್ರ್ಯದ ವಾತಾವರಣದಿಂದ ಮಾತ್ರ ಸಾಧ್ಯ ಎಂಬುದು ದೇವರಿಗೆ ಗೊತ್ತು.

ನಿಜವಾದ ಪವಿತ್ರತೆಯು ದೇವರ ಭಯದಲ್ಲಿ ಸಿದ್ದಿಗೆ ಬರುವಂಥದ್ದಾಗಿದೆಯೆ ಹೊರತು, ಮನುಷ್ಯರ ಭಯದಿಂದಲ್ಲ (2 ಕೊರಿಂಥದವರಿಗೆ 7:1).

ದೇವರು ಬಯಸುವ ವಿಧಯತೆಯು ಒಂದೇ, ಅದು ಪ್ರೀತಿಯಿಂದ ಪ್ರೇರೆಪಿಸಲ್ಪಟ್ಟದ್ದು ಮತ್ತು ಆತನಿಗೆ ಕೃತಜ್ಞತೆಯುಳ್ಳವನಾಗಿರುವುದಾಗಿದೆಯೇ ಹೊರತು, ನ್ಯಾಯ ತೀರ್ಪಿನ ಭಯದಿಂದ ಅಥವಾ ಪ್ರತಿಫಲದ ನಿರೀಕ್ಷೆಯಿಂದ ವಿಧೇಯನಾಗಿರುವುದಲ್ಲ. ಒಂದು ಮಾದರಿಗೆ ಒಪ್ಪಿ, ಅದನ್ನು ಅನುಸರಿಸುವ ಒತ್ತಡದಿಂದ ಎಲ್ಲಾ ವಿಧಯತೆಗಳಾಗಲಿ ಅಥವಾ ಗುಂಪಿನಲ್ಲಿ ಒಪ್ಪಿಗೆಯನ್ನು ಸಂಪಾದಿಸುವುದಕ್ಕೋಸ್ಕರ ಮಾಡಲ್ಪಟ್ಟ ಪ್ರತಿಯೊಂದು ಕಾರ್ಯಗಳು ನಿರ್ಜೀವ ಕಾರ್ಯವಾಗಿದೆ. ದೇವರ ಮುಂದೆ ಇದಕ್ಕೆ ಯಾವುದೇ ಬೆಲೆ ಇಲ್ಲ. ಆದರೆ ಇದರಿಂದ ನಿಮ್ಮ ಗುಂಪಿನಲ್ಲಿ ನಿಮಗೆ ಇತರರಿಂದ ಗೌರವ ಪಡೆಯಲು ಮಾತ್ರ ಸಾಧ್ಯವಿದೆ ಮತ್ತು ಇಂತ: ಸಂದರ್ಭಗಳಿಂದ ದೇವರು ನಾವೇನನ್ನು ಬಯಸುತ್ತೇವೆಂದು ನಮ್ಮೆಲ್ಲರನ್ನು ಪರೀಕ್ಷಿಸುತ್ತಾನೆ - ದೇವರ ಒಪ್ಪಿಗೆಯನ್ನೋ ಅಥವಾ ನಮ್ಮ ಜೊತೆಯಲ್ಲಿರುವ ವಿಶ್ವಾಸಿಗಳ ಒಪ್ಪಿಗೆಯನ್ನೋ?

8) ಸ್ವತಂತ್ರರಾಗಿರುವುದು

”ಕ್ರಿಸ್ತನು ನಮ್ಮನ್ನು ಸ್ವತಂತ್ರದಲ್ಲಿರಿಸಬೇಕೆಂದು ಬಿಡುಗಡೆ ಮಾಡಿದನು; ಆದ್ದರಿಂದ ಅದರಲ್ಲಿ ಸ್ಥಿರವಾಗಿ ನಿಲ್ಲಿರಿ: ದಾಸತ್ವದ ನೊಗದಲ್ಲಿ ತಿರುಗಿ ಸಿಕ್ಕಿಕೊಳ್ಳಬೇಡಿರಿ” (ಗಲಾತ್ಯದವರಿಗೆ 5:1). ಕ್ರಿಸ್ತೀಯ ಜೀವಿತದಲ್ಲಿ ದೊಡ್ಡದಾದ ಯುದ್ಧವು ಕೋಪದ ಮೇಲಾಗಲಿ ಅಥವಾ ಹೊಲಸು ಯೋಚನೆಗಳ ಮೇಲೆ ಅಲ್ಲ. ಅದು ಮನುಷ್ಯನ ಒಪ್ಪಿಗೆ ಪಡೆಯುವುದನ್ನು ಬಯಸುವುದರ ವಿರುದ್ಧವಾದ ಯುದ್ಧವಾಗಿದೆ. ನಾವು ಸ್ವತಂತ್ರರಾಗಿ ಜೀವಿಸಬೇಕಾದರೆ, ದೇವರ ಸಮ್ಮುಖದೆದುರು ಮಾತ್ರ ಜೀವಿಸುವುದನ್ನು ನಿರ್ಧರಿಸಬೇಕು.

ನೀವು ತಪ್ಪಾದ ಆರಾಧನೆಯ ನಡವಳಿಕೆಯನ್ನು ಹೊಂದಿದ್ದರೂ ಸಹ, ಒಳ್ಳೇಯ ಜೀವಿತವನ್ನು ಜೀವಿಸಬಹುದು. ಆದರೆ ಇಂತಹ ನಡವಳಿಕೆಯೊಂದಿಗೆ ಈ ಭೂಮಿಯಲ್ಲಿ ನಿಮ್ಮ ಜೀವಿತಕ್ಕೋಸ್ಕರ ದೇವರ ಎಲ್ಲಾ ಉದ್ದೇಶವನ್ನು ನೀವು ಪೂರ್ಣಗೊಳಿಸಲು ಸಾಧ್ಯವಿಲ್ಲ. ಆರಾಧನೆಯಲ್ಲಿ ತಪ್ಪಾದ ಪದ್ಧತಿಯನ್ನು ಹೊಂದಿರುವುದರ ಬಗ್ಗೆ ಬೋಧಿಸುವ ಪ್ರಚಾರಕರಿಂದ ವಿಶ್ವಾಸಿಗಳ ಸುತ್ತಲೂ ಕಬ್ಬಿಣದ ಬೇಲಿಯನ್ನು ಕಟ್ಟಿರುತ್ತಾರೆ. ಇದರ ವಿರುದ್ಧವಾಗಿ ಹೋರಾಡುವ ವಿಶ್ವಾಸಿಗಳು ಮಾತ್ರ ಇದರಿಂದ ಹೊರಬಂದು ದೇವರ ರಾಜ್ಯವನ್ನು ಹೊಂದುತ್ತಾರೆ.

ಒಂದು ವೇಳೆ ನಾವು ದೇವರ ಮಕ್ಕಳಾಗಿ ವೈಭವಯುತವಾದ ಸ್ವಾತಂತ್ರ್ಯದೊಳಗೆ ಪ್ರವೇಶ ಹೊಂದಬೇಕಾದರೆ, ಏನೇ ಆದರೂ ಮನುಷ್ಯನ ಅಭಿಪ್ರಾಯಗಳಿಗೆ ಆಗುವ ಎಲ್ಲಾ ಗುಲಾಮಗಿರಿಯಿಂದ ಮುರಿಯಲ್ಪಟ್ಟು ಸ್ವತಂತ್ರರಾಗಬೇಕು. ಯಾರಿಗೆ ಕೇಳುವುದಕ್ಕೆ ಕೀವಿ ಇದೆಯೋ, ಅವನು ಕೇಳಲಿ. ಆಮೇನ್.