ಕ್ರಕ್ರಿಶ್ಚಿಯನ್ ಫೆಲೋಶಿಪ್ ಚರ್ಚ್ ನ (CFC) ಧ್ಯೇಯ
ಕರ್ತನು ಬೆಂಗಳೂರಿನಲ್ಲಿ 1975ನೇ ಇಸವಿಯಲ್ಲಿ ಕ್ರಿಶ್ಟಿಯನ್ ಫ಼ೆಲೊಶಿಪ್ ಚರ್ಚನ್ನು (CFC) ನೆಟ್ಟನು (ಸ್ಥಾಪಿಸಿದನು). ಆಗ ನಾವು ಕೇವಲ ಕೆಲವೇ ವಿಶ್ವಾಸಿಗಳಾಗಿ ಪ್ರಾರಂಭಿಸಿದೆವು. ನಾವು ಮೊದಲು ಸೇರಿಬರಲು ಪ್ರಾರಂಭಿಸಿದಾಗ, ದೇವರು ನಮ್ಮನ್ನು ಏಕೆ ಒಟ್ಟಾಗಿ ಸೇರಿಸಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿ ತಿಳಿದಿರಲಿಲ್ಲ. ಆದರೆ ಕ್ರಮೇಣವಾಗಿ ದೇವರು ತನ್ನ ಯೋಜನೆಯನ್ನು ನಮಗೆ ಪ್ರಕಟಿಸಿದರು.
ಆ ಯೋಜನೆ ಇದಾಗಿತ್ತು: "ಹೊಸ ದ್ರಾಕ್ಷಾರಸವನ್ನು (ಯೇಸುವಿನ ಜೀವನ ಮತ್ತು ಆತನಲ್ಲಿದ್ದ ದೈವಿಕ ಸ್ವಭಾವ) ಒಂದು ಹೊಸ ಬುದ್ದಲಿಯಲ್ಲಿ (ಹೊಸ ಒಡಂಬಡಿಕೆಯ ವಿನ್ಯಾಸದಲ್ಲಿ ಕಟ್ಟಲ್ಪಟ್ಟಿರುವಂತ ಮತ್ತು ಕ್ರಿಸ್ತನ ದೇಹವನ್ನು ನಿರೂಪಿಸುವಂತ ಸ್ಥಳೀಯ ಸಭೆ) ತೋರಿಸಿಕೊಡುವುದು ಮತ್ತು ಅದನ್ನು ಘೋಷಿಸುವುದು."
ಹಾಗಾಗಿ ಇದು ನಮ್ಮ ಧ್ಯೇಯವಾಯಿತು.
ನಮ್ಮ ನಿರ್ದಿಷ್ಟ ಕರೆ
ಹಳೆಯ ಒಡಂಬಡಿಕೆಯಲ್ಲಿ ದೇವರು ಪ್ರತಿಯೊಬ್ಬ ಪ್ರವಾದಿಯು ಇಸ್ರಾಯೇಲ್ಯರಿಗೆ ಏನು ಸಾರಬೇಕು ಎಂಬ ಸ್ಪಷ್ಟವಾದ ಚಿತ್ರಣವನ್ನು ಕೊಟ್ಟು ಆತನನ್ನು ಕರೆದಿದ್ದರು - ಮತ್ತು ಅವರು ಈ ಸಂದೇಶವನ್ನು ಮಾತ್ರ ಬೋಧಿಸಿದರು. ಇದನ್ನು ಅವರು "ಕರ್ತನ ಭಾರವೆಂದು" ಕರೆದರು. ಅವರೆಲ್ಲರು ದೇವರ ಆದೇಶ ಏನೆಂದು ಅರಿತಿದ್ದರು - ಮತ್ತು ತಮ್ಮ ಹೃದಯಗಳಲ್ಲಿ ದೇವರು ಇರಿಸಿದ್ದ ಭಾರಕ್ಕೆ ನಿಷ್ಠರಾಗಿ ನಡೆದರು - ಮತ್ತು ತಮ್ಮ ಪ್ರಮುಖ ಭಾರವನ್ನು ಬಿಟ್ಟು ಎಂದಿಗೂ ಬೇರೆಡೆಗೆ ತಿರುಗಿಕೊಳ್ಳಲಿಲ್ಲ.
ಭಾರತದಲ್ಲಿ CFCಗೂ ಕೂಡ ದೇವರಿಂದ ಕೊಡಲ್ಪಟ್ಟ ಸ್ಪಷ್ಟವಾದ ಧ್ಯೇಯ, ಒಂದು ಸಭೆಯಾಗಿ ಪ್ರವಾದನಾ ಸೇವೆ ಮಾಡುವ ಕರೆಯಾಗಿತ್ತು. ಹಾಗಾಗಿ ಕಳೆದ ದಶಕಗಳಲ್ಲಿ ನಾವು ಸಾಧ್ಯವಾದಷ್ಟು ಮಟ್ಟಿಗೆ ಈ ಕರೆಯಿಂದ ವಿಚಲಿತರಾಗದೆ ಇರಲು ಪ್ರಯತ್ನಿಸಿದ್ದೇವೆ.
ಅವಿಶ್ವಾಸಿಗಳನ್ನು ಕ್ರಿಸ್ತನ ಕಡೆಗೆ ಕರೆತರಲು ಮತ್ತು ಸತ್ಯವೇದದ ಅನೇಕ ಪ್ರಮುಖ ಸತ್ಯಾಂಶಗಳನ್ನು ಪ್ರಚುರ ಪಡಿಸಲು, ಕರ್ತನು ಹಿಂದಿನ ಸುಮಾರು 200 ವರ್ಷಗಳಲ್ಲಿ ಅನೇಕ ಕ್ರೈಸ್ತಧರ್ಮ ಪ್ರಚಾರಕರನ್ನು ಭಾರತ ದೇಶಕ್ಕೆ ಕಳುಹಿಸಿದನು ಮತ್ತು ಹಲವಾರು ಸುವಾರ್ತಾ ಪ್ರಚಾರಕ ಮಂಡಲಿಗಳನ್ನು ನಿಯೋಜಿಸಿದನು. ನಾವು ಅವರಿಗಾಗಿ ಕರ್ತನಿಗೆ ಸ್ತೋತ್ರವನ್ನು ಸಲ್ಲಿಸುತ್ತೇವೆ. ಆದಾಗ್ಯೂ, ಭಾರತದಲ್ಲಿ ಹಲವು ಹೊಸ ಒಡಂಬಡಿಕೆಯ ಸತ್ಯಾಂಶಗಳು ಇನ್ನೂ ಸಾಕಷ್ಟು ಮಟ್ಟಿಗೆ ಒತ್ತಿ ಹೇಳಲ್ಪಡುತ್ತಿಲ್ಲವೆಂದು ನಮಗೆ ಅನಿಸಿತು.
ಒತ್ತಿ ಹೇಳದಿರುವ ಈ ಸತ್ಯಾಂಶಗಳು ಹೊಸ ಒಡಂಬಡಿಕೆಗೆ ಸಂಬಂಧಿಸಿದವುಗಳಾಗಿವೆ:
ಶಿಷ್ಯತ್ವದ ಷರತ್ತುಗಳು, ದೇವರು ನಮ್ಮ ತಂದೆಯಾಗಿದ್ದಾರೆಂದು ತಿಳಿಯುವುದರಿಂದ ಬರುವ ಸುರಕ್ಷಿತ ಮನೋಭಾವ, ಯೇಸುವು ನಡೆದಂತೆ ಆತನ ಹೆಜ್ಜೆಯ ಜಾಡಿನಲ್ಲಿ ನಡೆಯುವುದು, ಪವಿತ್ರಾತ್ಮನ ಬಲವು ನಮ್ಮೊಳಗಿನಿಂದ ಉಕ್ಕಿ ಹರಿಯುವಂಥದ್ದು, ದೇವರ ಸ್ವಭಾವದಲ್ಲಿ ಪಾಲ್ಗೊಳ್ಳುವುದು, ಶಿಲುಬೆಯ ಹಾದಿ, ಅರಿತ ಪಾಪಗಳ ಮೇಲೆ ಜಯ, ಲೌಕಿಕ ಮನೋಭಾವದಿಂದ ಮತ್ತು ಹಣದ ಮೇಲಿನ ಪ್ರೀತಿಯಿಂದ ಬಿಡುಗಡೆ, ನಿರುತ್ಸಾಹ, ಭಯ ಮತ್ತು ಚಿಂತೆಗಳಿಂದ ಬಿಡುಗಡೆ, ಪರ್ವತ ಪ್ರಸಂಗಕ್ಕೆ ಸಂಪೂರ್ಣ ವಿಧೇಯತೆ (ಮತ್ತಾ. 5,6 ಮತ್ತು 7), ದೇವರು ಯೇಸುವಿಗಾಗಿ ಮಾಡಿದ್ದೆಲ್ಲವನ್ನು ನಮಗೂ ಸಹ ಮಾಡುತ್ತಾರೆಂಬ ನಂಬಿಕೆ, ಸ್ಥಳೀಯ ಸಭೆಯನ್ನು ಒಂದು ದೇಹವಾಗಿ ಕಟ್ಟುವುದು, ಇತ್ಯಾದಿ
ಭಾರತದ ಪ್ರತಿಯೊಂದು ಕ್ರೈಸ್ತ ಪಂಗಡಕ್ಕೆ ಈ ಸತ್ಯಾಂಶಗಳನ್ನು ಹರಡುವುದೇ CFC ಸಭೆಯು ಹೊಂದಿದ್ದ ಭಾರವಾಗಿತ್ತು. ಇದನ್ನು ಮಾಡುವುದಕ್ಕೆ - ಸಾರ್ವಜನಿಕ ಕೂಟಗಳಲ್ಲಿ, ಸಮ್ಮೇಳನಗಳಲ್ಲಿ, ರೇಡಿಯೋ ಮತ್ತು ಪುಸ್ತಕಗಳ ಮೂಲಕ, ಸಾವಿರಾರು ಆಡಿಯೋ ಕ್ಯಾಸೆಟ್ಗಕಳು, CDಗಳು ಮತ್ತು DVDಗಳ ವಿತರಣೆಯ ಮೂಲಕ - ನಮಗೆ ಅವಕಾಶವನ್ನು ದೇವರು ಒದಗಿಸಿದರು. ಆದರೆ ಹೆಚ್ಚಿನ ಕ್ರೈಸ್ತಸಭೆಗಳ ನಾಯಕರು ನಮ್ಮನ್ನು ವಿರೋಧಿಸಿದರು ಮತ್ತು ಆ ಸಭೆಗಳ ಬಾಗಿಲುಗಳನ್ನು ನಮಗೆ ಮುಚ್ಚಿದರು.
ಈ ಸಂದರ್ಭದಲ್ಲಿ ದೇವರು ನಮಗಾಗಿ ಒಂದು ಅದ್ಭುತ ಕಾರ್ಯವನ್ನು ಮಾಡಿದರು. ಅವರು ನಮಗಾಗಿ ’ಅಂತರ್ಜಾಲದ’ (Internet) ಬಾಗಿಲನ್ನು ತೆರೆದರು. ನಾವು ನಮ್ಮ ನೂರಾರು ಸಂದೇಶಗಳನ್ನು ಅಂತರ್ಜಾಲದಲ್ಲಿ ಹಾಕಿದೆವು - ಇದಕ್ಕಾಗಿ ದೇವರು ಪೂರ್ಣ-ಹೃದಯದ ಸಹೋದರರ ಒಂದು ಸಮೂಹವನ್ನು CFC ಸಭೆಗೆ ಕಳುಹಿಸಿಕೊಟ್ಟರು. ಇದರ ಮುಖಾಂತರ ಸಂದೇಶಗಳನ್ನು ಕೇಳಿದ ಅನೇಕ ಕ್ರೈಸ್ತಸಭೆಗಳ ವಿಶ್ವಾಸಿಗಳ ಜೀವಿತಗಳು ಬದಲಾಗಿ ಮತ್ತು ಕುಟುಂಬ ಜೀವಿತಗಳು ಸುಧಾರಿಸಿದವು - ಇದರ ಪರಿಣಾಮವಾಗಿ ಭಾರತದ ಎಲ್ಲೆಡೆಯಿಂದ ಮಾತ್ರವಲ್ಲದೆ, ವಿದೇಶಗಳ ಮೂಲೆ ಮೂಲೆಗಳಿಂದ - ಪ್ರತಿಕ್ರಿಯೆಯ ಒಂದು ಪ್ರವಾಹವು ಹರಿದು ಬಂತು. ಹೊಸ ಕ್ರೈಸ್ತಸಭೆಗಳು ಹುಟ್ಟಿದವು - ಇವುಗಳಲ್ಲಿ ಕೆಲವು ಸಭೆಗಳು CFC ಸಭೆಯೊಂದಿಗೆ ಹತ್ತಿರದ ಸಂಬಂಧವನ್ನು ಇಟ್ಟುಕೊಳ್ಳಲು ಬಯಸಿದವು.
ಹೀಗೆ, ಪಕ್ಷಪಾತದ ಮೂಲಕ ನಮಗೆ ಸಭೆಗಳ ಬಾಗಿಲುಗಳನ್ನು ಮುಚ್ಚಿದ್ದ ಸಭಾ ನಾಯಕರುಗಳನ್ನು ಬಳಸಿಕೊಂಡು ಹೋಗಿ, ದೇವರ ಸತ್ಯವು ಆ ಸಭೆಗಳ ಹಸಿದ ಸದಸ್ಯರ ಬಳಿಗೆ ಸೇರಿತು. ಇಂದು ಲೋಕದಾದ್ಯಂತ ಅನೇಕ ಸಭೆಗಳಲ್ಲಿ ಈ ಅದ್ಭುತ ಸತ್ಯಾಂಶಗಳಿಂದ ಪ್ರಭಾವಿತರಾದಂತ ಮತ್ತು ಇವುಗಳನ್ನು ಇತರರಿಗೆ ಬೋಧಿಸಲೂ ಹೊರಟಿರುವ ಅನೇಕ ವಿಶ್ವಾಸಿಗಳಿದ್ದಾರೆ. ನಾವು ಇದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇವೆ - ಯಾಕೆಂದರೆ ನಾವು ಬಯಸಿದ್ದೂ ಮತ್ತು ಪ್ರಾರ್ಥಿಸಿದ್ದೂ ಇದಕ್ಕಾಗಿಯೇ. ಹೀಗೆ CFC ಸಭೆಯನ್ನು ದೇವರು ಎಬ್ಬಿಸಿದ ಉದ್ದೇಶವು ಸ್ವಲ್ಪ ಮಟ್ಟಿಗೆ ಸಫಲವಾದುದನ್ನು ನಾವು ನೋಡುವಂತಾಯಿತು. ದೇವರ ಮಾರ್ಗಗಳು ನಿಜವಾಗಿ ಅದ್ಭುತವಾದವುಗಳು. ನಾವು ನಮ್ಮ ಸ್ವಾರ್ಥವನ್ನು ಹುಡುಕದೆ, ದೇವರ ಮಹಿಮೆಯನ್ನು ಮಾತ್ರ ಹುಡುಕುವುದಾದರೆ, ಅವರು ಅದ್ಭುತ ಕಾರ್ಯಗಳನ್ನು ನಡೆಸುವವರಾಗಿದ್ದಾರೆ.
ಅಪೊಸ್ತಲ ಪೌಲನ ಗುರಿ ಎಲ್ಲರನ್ನು ಕ್ರಿಸ್ತನಲ್ಲಿ ದೋಷರಹಿತರನ್ನಾಗಿ ದೇವರಿಗೆ ಒಪ್ಪಿಸುವುದೇ" ಆಗಿದೆಯೆಂದು ಆತನು ಹೇಳಿದನು - ಮತ್ತು ಇದರ ಸಲುವಾಗಿ ಆತನು ಪ್ರಯಾಸಪಟ್ಟನು (ಕೊಲೊ. 1:28,29). ನಮ್ಮ ಗುರಿಯೂ ಇದೇ ಆಗಿದೆ. ಮೊದಲು CFC ಸಭೆಯ ಪ್ರತಿಯೊಬ್ಬರನ್ನು ಯಥಾರ್ಥ ಶಿಷ್ಯರನ್ನಾಗಿ ಮಾಡಲು ನಾವು ಪ್ರಯಾಸಪಡುತ್ತೇವೆ. ಇಂತಹ ವ್ಯಕ್ತಿಯು ತನ್ನ ಬಂಧುಗಳಿಗಿಂತ, ತನಗಿಂತ ಮತ್ತು ತನ್ನ ಸ್ವತ್ತಿಗಿಂತಲೂ ಹೆಚ್ಚಾಗಿ ಯೇಸುವನ್ನು ಪ್ರೀತಿಸುತ್ತಾನೆ (ಲೂಕ. 14:26,27,33). ಅನಂತರ ಅವನಿಗೆ ಯೇಸುವು ಆಜ್ಞಾಪಿಸಿದ ಎಲ್ಲಾ ವಿಷಯಗಳಿಗೆ ವಿಧೇಯರಾಗುವುದನ್ನು ಕಲಿಸಲು ನಾವು ಪ್ರಯತ್ನಿಸುತ್ತೇವೆ (ಮತ್ತಾ. 28:20).
ಇದು ಇಕ್ಕಟ್ಟಾದ ಮಾರ್ಗವಾಗಿದೆ ಮತ್ತು ಇದನ್ನು ಬಹಳ ಕೆಲವರು ಮಾತ್ರ ಕಂಡುಕೊಳ್ಳುತ್ತಾರೆ, ಎಂಬುದು ನಮಗೆ ತಿಳಿದಿದೆ. ಯೇಸುವಿನ "ಸಭೆಯಲ್ಲಿ" ಕೂಡ ಹನ್ನೆರಡು ಮಂದಿಯಲ್ಲಿ ಒಬ್ಬನು ಕಪಟಿಯಾಗಿ ಅವರ ನಡುವೆ ಇದ್ದನೆಂದು ಕೂಡ ನಮಗೆ ತಿಳಿದಿದೆ. ಆದ್ದರಿಂದ CFC ಸಭೆಯಲ್ಲಿಯೂ ಕ್ರಿಸ್ತನು ಬರುವ ವರೆಗೆ ಕಪಟಿಗಳು ಇರುತ್ತಾರೆಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಸಾಧ್ಯವಾದಷ್ಟು ಮಟ್ಟಿಗೆ ನಮ್ಮ ವಾಕ್ಯದ ಬೋಧನೆಯ ಮೂಲಕ ಅಂತಹ ಕಪಟಿಗಳ ಮನಸ್ಸಾಕ್ಷಿಯು ಯಾವಾಗಲೂ ಚುಚ್ಚುವಂತೆ ಮತ್ತು ಅದನ್ನು ಸಹಿಸಿಕೊಳ್ಳುವುದು ಅವರಿಗೆ ಕಷ್ಟವಾಗುವಂತೆ ನೋಡಿಕೊಳ್ಳಲು ನಾವು ದೃಢನಿಶ್ಚಯ ಮಾಡಿದ್ದೇವೆ ಮತ್ತು ಅಂಥವರು ಮಾನಸಾಂತರ ಹೊಂದುತ್ತಾರೆಂಬ ನಿರೀಕ್ಷೆ ನಮ್ಮಲ್ಲಿದೆ.
ಸುವಾರ್ತಾ ಪ್ರಚಾರ ಮತ್ತು ಶಿಷ್ಯರ ತರಬೇತಿ
CFCಯಲ್ಲಿ, ಎಲ್ಲಾ ವಿಶ್ವಾಸಿಗಳು ವೈಯಕ್ತಿಕವಾಗಿ ಇತರರಿಗೆ ಸುವಾರ್ತೆ ಸಾರುವುದನ್ನು ನಾವು ಪ್ರೋತ್ಸಾಹಿಸುತ್ತೇವೆ. ಹೀಗೆ ಹಿಂದಿನ ಹಲವಾರು ವರ್ಷಗಳಲ್ಲಿ ಹಲವರು ಕ್ರಿಸ್ತನ ಬಳಿಗೆ ಬಂದಿದ್ದಾರೆ ಮತ್ತು ನಮ್ಮ ಸಭೆಗೆ ಸೇರಿಕೊಂಡಿದ್ದಾರೆ. ಈ ರೀತಿಯಾಗಿ ದೇವರು ಭಾರತದ ಹಲವು ಪಟ್ಟಣಗಳು ಮತ್ತು ಹಳ್ಳಿಗಳಲ್ಲಿ, ಹಾಗೂ ಪ್ರಪಂಚದ ಹಲವು ಭಾಗಗಳಲ್ಲಿ ಹೊಸ ಸಭೆಗಳನ್ನು ನೆಟ್ಟಿದ್ದಾರೆ.
CFCಯಲ್ಲಿ ನಮಗೆ ದೇವರಿಂದ ಒಂದು ನಿರ್ಧಿಷ್ಟ ಕರೆ ಸಿಕ್ಕಿರುವುದರಿಂದ, ನಮ್ಮ ಮುಖ್ಯ ಕರೆಯಿಂದ ವಿಚಲಿತರಾಗಿ ಬೇರೆ ಯಾವುದೋ ಸೇವೆಗಳಲ್ಲಿ (ಸಮಾಜ ಸೇವೆ, ಇತ್ಯಾದಿ) ನಮ್ಮನ್ನು ತೊಡಗಿಸಿಕೊಂಡು ನಮ್ಮ ಶಕ್ತಿಯನ್ನು ವ್ಯಯಿಸಲು ನಾವು ಬಯಸುವುದಿಲ್ಲ. ಕಡೆಯ ದಿನದಲ್ಲಿ ನಮ್ಮ ಬಗ್ಗೆ, "ನೀವು ಕರ್ತನು ನಿಮಗೆ ಅನುಗ್ರಹಿಸಿದ ತೋಟವನ್ನು ಕಾಯದೆ, ಬೇರೆಯವರ ತೋಟದಲ್ಲಿ ಕಾಳಜಿ ವಹಿಸಿದಿರಿ," (ಪರಮಗೀತ 1:6), ಎಂದು ಹೇಳಲ್ಪಡಬಾರದು. ಕರ್ತನು ತನ್ನ ಪ್ರತಿಯೊಂದು ಮಗುವಿಗೆ ಪ್ರತ್ಯೇಕವಾದ ಕರೆಯನ್ನು ಇಟ್ಟಿರುವುದನ್ನು ನಾವು ಅರಿತಿದ್ದೇವೆ, ಮತ್ತು ಇಂತಹ ಇತರ ಸೇವೆಗಳ ಕರೆಯನ್ನು ದೇವರಿಂದ ಪಡೆದಿರುವ ಭಾವನೆ ಯಾರಿಗೆ ಇದೆಯೋ ಅವರು ಅದನ್ನು ಮಾಡಲಿ, ಎಂದು ನಾವು ಬಿಟ್ಟುಬಿಡುತ್ತೇವೆ. ಹಲವಾರು ಸೇವೆಗಳಲ್ಲಿ ನಮ್ಮನ್ನು ತೊಡಗಿಸಿಕೊಂಡು, ಇತರ ವಿಶ್ವಾಸಿಗಳ ದೃಷ್ಟಿಯಲ್ಲಿ ನಾವು "ಸಮತೋಲನ" ಹೊಂದಿದವರು ಎಂದು ಕಾಣಿಸಿಕೊಳ್ಳುವ ಆಶೆ ನಮಗಿಲ್ಲ. ನಮಗೆ ದೇವರ ಕರೆ ಮತ್ತು ಮೆಚ್ಚುಗೆ ಮಾತ್ರ ಮುಖ್ಯವಾಗಿದೆ.
ನಾವು ಬೆಳೆಯುತ್ತಿರುವ ಸಭೆಯಾಗಿರುವುದರಿಂದ, ನಮ್ಮ ಬಳಿ ಬಂದಿರುವ ಹೊಸ ವಿಶ್ವಾಸಿಗಳ ಕುರಿತಾಗಿ ಮತ್ತು ನಮ್ಮ ನಡುವೆ ಬೆಳೆದು ವಯಸ್ಕರಾಗಿರುವಂತ ಅನೇಕ ಮಕ್ಕಳ ಕುರಿತಾಗಿ, ನಮ್ಮ ಮೇಲೆ ಬಹಳ ಮಹತ್ವದ ಜವಾಬ್ದಾರಿಯಿದೆ. ಅವರೆಲ್ಲರನ್ನು ಶಿಷ್ಯರನ್ನಾಗಿ ಮಾಡಬೇಕಿದೆ. ಹೊಸದಾಗಿ ಮಾನಸಾಂತರ ಹೊಂದಿರುವವರು ಮತ್ತು ಬೆಳೆಯುತ್ತಿರುವ ಮಕ್ಕಳು ಇವೆರಡು ಪಂಗಡಗಳು ಒಂದು ಆರೋಗ್ಯಕರ ಮತ್ತು ಬೆಳೆಯುತ್ತಿರುವ ಸಭೆಯ ಕುರುಹುಗಳಾಗಿದ್ದಾರೆ. ದೇವರು ನಮ್ಮ ಮಧ್ಯೆ ತಂದಿರುವ ಹೊಸ ವಿಶ್ವಾಸಿಗಳು ಮತ್ತು ನಮ್ಮ ನಡುವೆ ಬೆಳೆದು ದೊಡ್ಡವರಾಗಿರುವ ಮಕ್ಕಳೇ ನಮ್ಮ ಹೊಸ ಕಾಯಕ್ಷೇತ್ರಗಳಾಗಿದ್ದಾರೆ.
ದೇವರು ಮತ್ತು ಹಣ
ನಾವು CFCಯಲ್ಲಿ ಹಣದ ವಿಷಯದಲ್ಲಿ ಒಂದು ಗಂಭೀರವಾದ ಮನೋಭಾವವನ್ನು ಇರಿಸಿಕೊಂಡೆವು, ಯಾಕೆಂದರೆ ದೇವರು ಮತ್ತು ಹಣ ಇವೆರಡರ ಸೇವೆ ಒಟ್ಟಿಗೆ ಮಾಡುವುದು ಅಸಾಧ್ಯವೆಂದು ಯೇಸುವು ಹೇಳಿದರು (ಲೂಕ. 16:13) ಮತ್ತು ನಾವು ದೇವರ ಸೇವೆ ಮಾತ್ರ ಮಾಡುವ ನಿರ್ಧಾರ ಮಾಡಿದ್ದೆವು. ಈ ವಿಷಯದಲ್ಲಿ ಸಂಪೂರ್ಣವಾಗಿ ದೋಷಮುಕ್ತರಾಗುವ ಉದ್ದೇಶದಿಂದ, ನಾವು ಮಾಡುವ ಸೇವೆಯಲ್ಲಿ ಹಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಾವಹಾರಿಕ ನಿರ್ಣಯಗಳನ್ನು ಮಾಡಿದೆವು. ನಮ್ಮ ಸೇವೆಯಲ್ಲಿ ಯಾವ ಪ್ರಸಂಗಿಗಳೂ ಸಂಬಳಕ್ಕೆ ನೇಮಿಸಲ್ಪಟ್ಟವರು ಆಗಿರಬಾರದೆಂದು ಮತ್ತು ನಮ್ಮ ಕೂಟಗಳಲ್ಲಿ ಕಾಣಿಕೆಯನ್ನು ಸ್ವೀಕರಿಸುವ ಪದ್ಧತಿಯನ್ನು ಅನುಸರಿಸಬಾರದೆಂದು ನಿರ್ಧರಿಸಿದೆವು. ಹಳೆಯ ಒಡಂಬಡಿಕೆಯ ನಿಯಮವಾದ ದಶಮಾಂಶ ಪದ್ಧತಿಯ ವಿರುದ್ಧವಾಗಿ ಬೋಧಿಸಿದೆವು. ಕರ್ತರ ಸೇವೆಗಾಗಿ ಕೊಡುವಂತ ಹಣವನ್ನು ಇಚ್ಛಾಪೂರ್ವಕವಾಗಿ ಮತ್ತು ಸಂತೋಷವಾಗಿ ಕೊಡಬೇಕೆಂದು ಕಲಿಸಲು ನಿರ್ಣಯಿಸಿದೆವು. ಯಾವುದೇ ಹಣಕ್ಕಾಗಿ ಯಾರನ್ನೂ ಒತ್ತಾಯಿಸಲಿಲ್ಲ. ನಮ್ಮ ಸೇವೆಯ ಕುರಿತಾಗಿ ಯಾರಿಗೂ ಯಾವುದೇ ವರದಿಯನ್ನು ಕಳುಹಿಸದಿರಲು ಮತ್ತು ನಮ್ಮ ಸಭೆಯ ಹಣಕಾಸಿನ ಅವಶ್ಯಕತೆಯನ್ನು ಯಾವತ್ತೂ ಇತರರಿಗೆ ತಿಳಿಸದಿರುವ ನಿರ್ಣಯವನ್ನು ಮಾಡಿದೆವು. ನಾವು ವರದಕ್ಷಿಣೆ ಕೊಡುವುದನ್ನು ಮತ್ತು ಸ್ವೀಕರಿಸುವುದನ್ನು ವಿರೋಧಿಸಿದೆವು ಮತ್ತು ಪ್ರತಿಯೊಬ್ಬರು ಸಾಲದಿಂದ ಬಿಡುಗಡೆ ಹೊಂದಿ ಜೀವಿಸುವಂತೆ ಪ್ರೋತ್ಸಾಹಿಸಿದೆವು (ರೋಮಾ. 13:8).
ನಾವು ದೇವರ ಕೃಪೆಯ ಮೂಲಕ ಪ್ರಾರಂಭದಿಂದಲೂ ಈ ಹೊಸ ಒಡಂಬಡಿಕೆಯ ಮಟ್ಟವನ್ನು ಕಾಪಾಡಿಕೊಂಡು ಬಂದಿದ್ದೇವೆ. ನಾವು ಈ ವಿಷಯಗಳಲ್ಲಿ ಕೈಗೊಂಡ ದೃಢ ನಿಲುವಿನ ಕಾರಣದಿಂದ ಹಲವಾರು ಕ್ರೈಸ್ತ ಗುಂಪುಗಳು ಮತ್ತು ಸಭೆಗಳಿಂದ ಪ್ರಬಲವಾದ ವಿರೋಧವನ್ನು ಮತ್ತು ಖಂಡನೆಯನ್ನು ಎದುರಿಸಿದ್ದೇವೆ. ಆದರ ನಾವು ಯಾವುದಕ್ಕಾಗಿ ಈ ನಿಲುವನ್ನು ಇರಿಸಿಕೊಂಡಿದ್ದೇವೆ ಎಂದು ನಮಗೆ ತಿಳಿದಿದೆ. ಮತ್ತು ಇನ್ನು ಮುಂದೆಯೂ ಸಹ ಕರ್ತನ ಬರೋಣದವರೆಗೆ ಈ ಸಿದ್ಧಾಂತಗಳನ್ನು ದೃಢವಾಗಿ ಹಿಡಿದು ನಿಲ್ಲುತ್ತೇವೆ.
ಅಪೊಸ್ತಲ ಪೌಲನ ಉದಾಹರಣೆಗೆ ಅನುಸಾರವಾಗಿ, ನಮ್ಮ ಎಲ್ಲಾ ಸಭೆಗಳ ಹಿರಿಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಿದ್ದಾರೆ. ಪೌಲನು ಅಪರೂಪವಾಗಿ ಕೆಲವು ವಿಶ್ವಾಸಿಗಳಿಂದ ಕಾಣಿಕೆಯನ್ನು ಸ್ವೀಕರಿಸಿದನು. ಆದರೆ ಆತನು ತನ್ನ ವೈಯಕ್ತಿಕ ಅವಶ್ಯಕತೆಗಳಿಗಾಗಿ ಅಥವಾ ತನ್ನ ಸೇವೆಗಾಗಿ ಯಾರ ಕಾಣಿಕೆಯ ಮೇಲೂ ಅವಲಂಬಿಸಿರಲಿಲ್ಲ. ಇವೆಲ್ಲವನ್ನು ತನ್ನ ಪರಲೋಕ ತಂದೆಯು ಒದಗಿಸುತ್ತಾರೆಂದು ಆತನು ನಂಬಿದ್ದನು. ನಾವು ಕೂಡ ಇದೇ ನಿಲುವನ್ನು ತೆಗೆದುಕೊಂಡಿದ್ದೇವೆ ಮತ್ತು ಇದು ನಮ್ಮ ದೃಷ್ಟಿಕೋನದ ಅವಿಭಾಜ್ಯ ಅಂಗವಾಗಿದೆ.
ಸ್ವತಃ ಕರ್ತನು ನೇಮಿಸಿರುವಂತೆ, ಸುವಾರ್ತೆಯನ್ನು ಸಾರುವವನು ಸುವಾರ್ತೆಯಿಂದಲೇ ಜೀವನ ಮಾಡಬೇಕು (1 ಕೊರಿ. 9:14). ಆದ್ದರಿಂದ ಕರ್ತನ ಸೇವೆಯಲ್ಲಿ ತೊಡಗಿರುವವರು ತಮ್ಮ ಖರ್ಚು-ವೆಚ್ಚಗಳಿಗೆ ಇತರರನ್ನು ಅವಲಂಬಿಸುವುದರಲ್ಲಿ ತಪ್ಪೇನೂ ಇಲ್ಲ. ಆದರೆ ಪೌಲನು ಆರ್ಥಿಕವಾಗಿ ಸ್ವಾವಲಂಬಿಯಾಗಿ ಜೀವಿಸಲು ಕಾರಣವೇನೆಂದರೆ, ಆ ದಿನಗಳಲ್ಲಿ ಪ್ರಸಂಗಿಗಳು ತಮ್ಮ ಆತ್ಮಿಕ ವರಗಳನ್ನು ತಾವು ಶ್ರೀಮಂತರಾಗಲು ಬಳಸಿಕೊಂಡು, ಕರ್ತನ ಹೆಸರಿಗೆ ಅವಮಾನವನ್ನು ಉಂಟುಮಾಡುತ್ತಿದ್ದುದನ್ನು ಅವನು ಕಂಡನು. ಹಾಗಾಗಿ ಇಂತಹ ಭ್ರಷ್ಟತೆಯ ನಡುವೆ ಆತನು ಸ್ವತಃ ಕರ್ತನಿಗಾಗಿ ಒಬ್ಬ ಪರಿಶುದ್ಧ ಸಾಕ್ಷಿಯಾಗಿರಲು ಬಯಸಿದನು.
ಭಾರತದಲ್ಲೂ ಸಹ ಇದಕ್ಕೆ ಹೋಲುವಂತ ಪರಿಸ್ಥಿತಿಯನ್ನು ನಾವು ಕಂಡೆವು. ಹಾಗಾಗಿ CFCಯಲ್ಲಿ ನಾವು ಸಹ ಪೌಲನಂತೆ ನಮ್ಮ ದೇಶದಲ್ಲಿ ಕರ್ತನಿಗಾಗಿ ಉತ್ತಮ ಸಾಕ್ಷಿಗಳಾಗಿ ಇರಲಿಕ್ಕಾಗಿ ನಮ್ಮ ಸುತ್ತಮುತ್ತಲು ಇದ್ದ ಭ್ರಷ್ಟ ಪ್ರಸಂಗಿಗಳಿಂದ ಬೇರೆಯಾಗಿರಬೇಕಾದ ಅವಶ್ಯಕತೆ ನಮಗೆ ಕಾಣಿಸಿತು. ನಮ್ಮ ಈ ನಿಲುವು, ನಮ್ಮ ಜೊತೆಗೆ ಸೇರಿಕೊಂಡು ನಮ್ಮ ನಡುವೆ ಕರ್ತನ ಸಾಕ್ಷಿಯನ್ನು ಕೆಡಿಸ ಬಹುದಾಗಿದ್ದ ಅಸಂಖ್ಯಾತ ಬಿಳಾಮರು, ಗೇಹಜಿಗಳು ಮತ್ತು ದೇಮರಿಂದ ನಮ್ಮನ್ನು ರಕ್ಷಿಸಿದೆ.
CFCಯ ವಿಶ್ವಾಸಿಗಳು ತಮ್ಮ ಸ್ವಂತ ಹಣವನ್ನು ಹೇಗೆ ಉಪಯೋಗಿಸಿಕೊಳ್ಳಬೇಕೆಂದು ನಾವು ಯಾವತ್ತೂ ಉಪದೇಶಿಸುವುದಿಲ್ಲ. ಅವರ ಇಷ್ಟದಂತೆ ಅದರ ಉಪಯೋಗ ಮಾಡುವ ಸಂಪೂರ್ಣ ಸ್ವಾತಂತ್ರ್ಯ ಅವರಿಗಿದೆ. ಬೇಕಾದರೆ ಸುವಾರ್ತಾ ಮಂಡಲಿಗಳಿಗೆ ಅಥವಾ ಅನಾಥಾಲಯಗಳಿಗೆ, ಅಥವಾ ಬೀದಿಯಲ್ಲಿರುವ ಭಿಕ್ಷುಕರಿಗೂ ಸಹ ಅವರು ಅದನ್ನು ದಾನ ಮಾಡಬಹುದು. ಆದರೆ CFCಯಲ್ಲಿ ಕರ್ತನಿಗೆ ಕಾಣಿಕೆಯಾಗಿ ಕೊಟ್ಟಿರುವ ಹಣವನ್ನು, ನಮ್ಮ ಧ್ಯೇಯಕ್ಕೆ ಅನುಸಾರವಾಗಿ - ಶಿಷ್ಯರನ್ನು ಸಿದ್ಧಗೊಳಿಸುವುದಕ್ಕೆ ಮತ್ತು ಬಡ ವಿಶ್ವಾಸಿಗಳಿಗೆ ಸಹಾಯ ಒದಗಿಸುವುದಕ್ಕಾಗಿ (ಗಲಾ. 6:10) ಮಾತ್ರ ಉಪಯೋಗಿಸುತ್ತೇವೆ.
ಸೇವೆಗಳು, ಬಿರುದುಗಳು ಮತ್ತು ಅಧಿಕಾರ
ಸೇವೆಗಳು:
ಎಫೆಸದವರಿಗೆ 4:11ರಲ್ಲಿ ತಿಳಿಸಿರುವಂತೆ, ಕ್ರಿಸ್ತನು ತನ್ನ ಸಭೆಗೆ ಕೆಲವರನ್ನು ವರಗಳನ್ನಾಗಿ ಕೊಟ್ಟಿದ್ದಾನೆ - ಅಪೊಸ್ತಲರು, ಪ್ರವಾದಿಗಳು, ಸೌವಾರ್ತಿಕರು, ಸಭಾಪಾಲಕರು ಮತ್ತು ಉಪದೇಶಿಗಳು ಅಥವಾ ಶಿಕ್ಷಕರು. ದಯಾಪರನಾದ ಕರ್ತನು CFC ಸಭೆಯಲ್ಲಿ ಈ ಐದು ಸೇವೆಗಳನ್ನೂ ನಮಗೆ ದಯಪಾಲಿಸಿದ್ದಾನೆ.
ಆದರೆ ನಾವು ಯಾವ ಸಹೋದರನನ್ನೂ ಈ ಶಿರೋನಾಮೆಗಳಿಂದ ಸಂಬೋಧಿಸುವುದಿಲ್ಲ ಅಥವಾ ಈ ಪದಗಳನ್ನು ಯಾರ ಹೆಸರಿಗೂ ಸೇರಿಸಿ ಕರೆಯುವುದಿಲ್ಲ (ಪೌಲನು ತನ್ನನ್ನು ’ಅಪೊಸ್ತಲನು’ ಎಂದು ಸಂಬೋಧಿಸಲು ಕಾರಣ, ತಾನು ಬರೆದ ಪತ್ರಗಳನ್ನು ದೇವರ ವಾಕ್ಯವೆಂದು ಜನರು ಅಂಗೀಕರಿಸಲಿ ಎಂಬ ಉದ್ದೇಶವಾಗಿತ್ತು. ಆದರೆ ಇಂದು ಯಾರಿಗೂ ಅಂತಹ ಅವಶ್ಯಕತೆಯಿಲ್ಲ).
ಆದಾಗ್ಯೂ, ಈ ಐದು ಸೇವೆಗಳನ್ನು ಬಳಸಿಕೊಳ್ಳ ಬೇಕೆಂದು ನಾವು ಮನಗಂಡಿದ್ದೇವೆ ಮತ್ತು ಈ ಸೇವೆಗಳ ಬಳಕೆಯಿಂದ ನಮ್ಮ ಮಧ್ಯದಲ್ಲಿ ಮಹಿಮೆಯುಳ್ಳ ಫಲಿತಾಂಶವನ್ನು ಸಹ ನಾವು ಕಂಡಿದ್ದೇವೆ. ನಮಗೆ ಆ ಫಲಿತಾಂಶವನ್ನು ಪಡೆಯುವುದು ಹೆಚ್ಚು ಅವಶ್ಯವಾದದ್ದಾಗಿದೆ ಮತ್ತು ಪ್ರತಿ ಸೇವೆಯನ್ನು ಯಾರು ನೆರವೇರಿಸುತ್ತಾರೆ ಎಂಬುದಲ್ಲ. ಯಾಕೆಂದರೆ ’ನಾವೆಲ್ಲರೂ ಒಂದೇ ದೇಹವಾಗಿದ್ದು, ಒಬ್ಬರಿಗೊಬ್ಬರು ಪರಸ್ಪರ ಸೇವಕರಾಗಿದ್ದೇವೆ’.
ಶಿರೋನಾಮೆಗಳು ಅಥವಾ ಬಿರುದುಗಳು:
ಕರ್ತನು ನಾವು ಬಳಸಲಿಕ್ಕಾಗಿ ಅನುಮತಿಸಿರುವ ’ಬಿರುದುಗಳು’ ಯಾವುವೆಂದರೆ, "ಸಹೋದರ" ಮತ್ತು "ಸೇವಕ" ಇವು ಮಾತ್ರ (ಮತ್ತಾ. 23:8,11). ನಾವೆಲ್ಲರೂ ’ಸಹೋದರರು’ ಮತ್ತು ’ಸೇವಕರು’ ಆಗಿರಬೇಕು.
ಯೇಸುವು ತೋರಿಸಿಕೊಟ್ಟದ್ದು ಏನೆಂದರೆ, ನಾವು "ನಮಗೆ ಅಪ್ಪಣೆಯಾಗಿರುವ ಎಲ್ಲವನ್ನೂ ಮಾಡಿದ ಮೇಲೆ, ನಾವು ನಮ್ಮನ್ನು ’ಪ್ರಯೋಜನವಿಲ್ಲದ ಆಳುಗಳು,’ ಮಾಡಬೇಕಾದದ್ದನ್ನೇ ಮಾಡಿರುವಂತವರು, ಎಂದು ಪರಿಗಣಿಸಬೇಕು" (ಲೂಕ. 17:10ನ್ನು ನೋಡಿರಿ). ನಾವೆಲ್ಲರೂ ಈ ಬಿರುದಿಗಾಗಿ ತವಕಿಸಬೇಕು.
ಅಧಿಕಾರಕ್ಕೆ ಒಳಗಾಗುವುದು:
ಸತ್ಯವೇದವು ನಮಗೆ ಕಲಿಸಿಕೊಡುವುದು ಏನೆಂದರೆ, "ನಿಮ್ಮ ಸಭಾನಾಯಕರ ಮಾತನ್ನು ಕೇಳಿರಿ, ಮತ್ತು ಅವರಿಗೆ ಅಧೀನರಾಗಿರಿ" (ಇಬ್ರಿ. 13:17). ಆದಕಾರಣ, CFC ಸಭೆಗೆ ಸೇರಲು ಬಯಸುವ ಪ್ರತಿಯೊಬ್ಬರಿಗೆ ನಾವು ತಿಳಿಸಿಕೊಡುವುದು ಏನೆಂದರೆ, ಸಭೆಗೆ ಸಂಬಂಧಿಸಿದ ವಿಷಯಗಳಲ್ಲಿ ಅವರು ದೇವರ ಈ ಆಜ್ಞೆಯನ್ನು ಕೈಗೊಂಡು ನಡೆಯಬೇಕು ಮತ್ತು ಸ್ಥಳೀಯ ಸಭೆಯ ಹಿರಿಯರಿಗೆ ಅಧೀನರಾಗಿರಬೇಕು. ಈ ವಿಷಯದಲ್ಲಿ ನಾವು ಯಾರನ್ನೂ ಒತ್ತಾಯಿಸುವುದಿಲ್ಲ, ಏಕೆಂದರೆ ವಿಧೇಯತೆಯು ಇಚ್ಛಾಪೂರ್ವಕವಾಗಿದ್ದರೆ ಅದು ಬಹು ಬೆಲೆಯುಳ್ಳದ್ದಾಗಿದೆ.
ಇತರ ಕೆಲವು ಸಭೆಗಳಲ್ಲಿ, ಜನರು ಒಬ್ಬ ’ಪೋಪ್’ ಅಥವಾ ಒಬ್ಬ ಸಭಾ ಹಿರಿಯ ಅಥವಾ ಒಬ್ಬ "ಪಾದ್ರಿ"ಗೆ ವಿಧೇಯರಾಗುವಂತೆ ಒತ್ತಾಯಿಸಲ್ಪಡುತ್ತಾರೆ. ಆದರೆ CFC ಸಭೆಯಲ್ಲಿ, ಯಾರ ಮೇಲೂ ಈ ವಿಧೇಯತೆಯನ್ನು ಬಲವಂತವಾಗಿ ಹೇರುವುದಿಲ್ಲ. ವಿಶ್ವಾಸಿಗಳು ತಾವು ಯಾರಿಗೆ ಇಚ್ಛಾಪೂರ್ವಕವಾಗಿ ವಿಧೇಯರಾಗಬೇಕೆಂದು ನಿರ್ಣಯಿಸುವ ಸ್ವಾತಂತ್ರ್ಯವನ್ನು ನಾವು ಅವರಿಗೆ ನೀಡುತ್ತೇವೆ. ಅವರಿಗೆ ಭರವಸೆಯುಳ್ಳ ಒಬ್ಬ ಸಭಾ ಹಿರಿಯನಿಗೆ ವಿಧೆಯರಾಗಿರಲು ಅವರು ಸ್ವಯಂಪ್ರೇರಣೆಯಿಂದ ನಿರ್ಣಯಿಸಬಹುದು, ಯಾಕೆಂದರೆ ಇಂತಹ ಅಧೀನತೆಯ ಮೂಲಕವಾಗಿ ಸಿಗುವ ಜ್ಞಾನ ಮತ್ತು ಸಂರಕ್ಷಣೆ ಅವರಿಗೆ ಅವಶ್ಯವಾಗಿದೆ. ಒಬ್ಬ ಸಭಾ ಹಿರಿಯನು ಜೀವಿಸುವ ರೀತಿ, ಆತನು ತನ್ನ ಕುಟುಂಬವನ್ನು ನಡೆಸುವ ರೀತಿ ಮತ್ತು ಆತನ ಸೇವೆಯ ವಿಷಯದಲ್ಲಿ ದೇವರು ನೀಡುವ ಸಾಕ್ಷಿ, ಈ ಅಂಶಗಳನ್ನು ವಿಶ್ವಾಸಿಗಳು ಗಮನಿಸಿ ನೋಡುವುದರ ಮೂಲಕ ಅವರಿಗೆ ಆ ಸಭಾ-ಹಿರಿಯನಲ್ಲಿ ವಿಶ್ವಾಸ ವೃದ್ಧಿಯಾಗುತ್ತದೆ.
’ಅಪೊಸ್ತಲರ ಕೃತ್ಯ’ಗಳಲ್ಲಿ ಎಲ್ಲಾ ಹೊಸ ವಿಶ್ವಾಸಿಗಳು ಸ್ಥಳೀಯ ಕ್ರೈಸ್ತಸಭೆಗಳಿಗೆ ಸೇರಿಸಲ್ಪಟ್ಟರು. ಆ ಮೇಲೆ ಅಪೊಸ್ತಲರು ಪ್ರತಿಯೊಂದು ಸಭೆಯ ಮೇಲ್ವಿಚಾರಣೆಗಾಗಿ ಸಭಾಹಿರಿಯರನ್ನು (ಬಹುವಚನ) ನೇಮಿಸಿದರು (ತೀತ. 1:5). ಪ್ರತೀ ಸಭೆಯು ಕಡಿಮೆ ಪಕ್ಷ ಇಬ್ಬರು ಹಿರಿಯರನ್ನು ಹೊಂದಿತ್ತು, ಯಾಕೆಂದರೆ ಆ ಮೂಲಕ ಸಭೆಯ ಸೇವೆಯಲ್ಲಿ ಸಮತೋಲನ ಇರುತ್ತದೆ. ಈ ಹಿರಿಯರು ವಿಶ್ವಾಸಿಗಳನ್ನು ಜೋಪಾನವಾಗಿ ಕಾದುಕೊಂಡು, ಅವರು ಆತ್ಮಿಕವಾಗಿ ಪ್ರೌಢರಾಗಿ ಬೆಳೆಯುವಂತೆ ಪೋಷಿಸುವಂತ "ಆತ್ಮಿಕ ತಂದೆ"ಯವರಾಗಿದ್ದರು. ಈ ಸಭಾ ಹಿರಿಯರು ಸ್ವತಃ ಅಪೊಸ್ತಲರ ಮೂಲಕ, ಅಥವಾ (ಅಂತಹ ಒಬ್ಬ ಅಪೊಸ್ತಲ ಇಲ್ಲದಿದ್ದಾಗ) ತಮಗಿಂತ ಹೆಚ್ಚು ಅನುಭವವುಳ್ಳ ಇತರ ಸಭಾ ಹಿರಿಯರ ಮೂಲಕ, ಮಾರ್ಗದರ್ಶನವನ್ನು ಪಡೆಯುತ್ತಿದ್ದರು. ನಾವು ಸಹ CFCಗೆ ಸೇರಿದ ಎಲ್ಲಾ ಸಭೆಗಳಲ್ಲಿ ಈ ಹೊಸ ಒಡಂಬಡಿಕೆಯ ಮಾದರಿಯನ್ನು ಪ್ರಯೋಗಿಸಿದ್ದೇವೆ.
ವಿಶ್ವಾಸಿಗಳ ಮತ್ತು ಸಭಾ-ಹಿರಿಯರ ತಿದ್ದುವಿಕೆ:
ಎಲ್ಲಾ ಒಳ್ಳೆಯ ಕುಟುಂಬಗಳಲ್ಲಿ ಅಗತ್ಯವಿದ್ದಾಗ ತಂದೆಯು ತನ್ನ ಮಕ್ಕಳನ್ನು ಶಿಸ್ತಿಗೆ ಒಳಪಡಿಸುತ್ತಾನೆ. CFCಗೆ ಸೇರಿದ ಸಭೆಗಳಲ್ಲೂ ಸಹ, ಪಾಪದ ಮಾರ್ಗವನ್ನು ತ್ಯಜಿಸದೇ ಇರುವವರನ್ನು (ಮತ್ತಾ. 18:15-17ರಲ್ಲಿ ತೋರಿಸಿರುವಂತೆ) ಶಿಸ್ತಿಗೆ ಒಳಪಡಿಸಬೇಕೆಂದು ನಾವು ನಂಬುತ್ತೇವೆ, ಏಕೆಂದರೆ ಆ ಮೂಲಕ "ಸ್ವಲ್ಪ ಹುಳಿಯಿಂದ ಪೂರ್ತಿ ಹಿಟ್ಟು ಹುಳಿಯಾಗುವದು ತಪ್ಪುತ್ತದೆ" (1 ಕೊರಿ. 5:6,7).
ಒಂದು ವೇಳೆ ’ಇಬ್ಬರು ಅಥವಾ ಮೂವರು’ ವಿಶ್ವಾಸಿಗಳು ಒಂದು ಕ್ರೈಸ್ತ ಸಭೆಯ ಸಭಾ ಹಿರಿಯನ ವಿರುದ್ಧವಾಗಿ ಒಂದು ದೂರನ್ನು ತಂದರೆ, ಆಗ ವರಿಷ್ಠ ಹಿರಿಯರು (ಮತ್ತು ಆ ಸಭೆಯ ಮೇಲೆ ಅಪೊಸ್ತಲತನದ ಜವಾಬ್ದಾರಿ ಇರುವಂತವರು) ಆ ವಿಚಾರವನ್ನು ಕೂಲಂಕುಷವಾಗಿ ತನಿಖೆ ಮಾಡುತ್ತಾರೆ. ಆ ದೂರು ನಿಜವಾದದ್ದೆಂದು ಕಂಡುಬಂದಲ್ಲಿ, ಅವರು '1ತಿಮೊಥೆಯನಿಗೆ 5:19-21' ರಲ್ಲಿ ಕೊಡಲ್ಪಟ್ಟಿರುವ ಸೂಚನೆಗಳನ್ನು ಅನುಸರಿಸುವರು: "ಸಭೆಯ ಹಿರಿಯನ ಮೇಲೆ ಯಾರಾದರೂ ದೂರು ಹೇಳಿದರೆ, ಇಬ್ಬರು ಮೂವರು ಸಾಕ್ಷಿಗಳಿರದ ಹೊರತಾಗಿ ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡ. ಪಾಪದಲ್ಲಿ ಮುಂದುವರಿಯುವವರನ್ನು ಎಲ್ಲರ ಮುಂದೆಯೇ ಗದರಿಸು; ಇದರಿಂದ ಮಿಕ್ಕವರಿಗೂ ಭಯ ಉಂಟಾಗುವುದು.... ಪಕ್ಷಪಾತದ ಆತ್ಮದಿಂದ ಯಾವುದನ್ನೂ ಮಾಡಬೇಡ."
ಈ ರೀತಿಯಾಗಿ ಯಾರಿಗೂ ಪಕ್ಷಪಾತ ತೋರಿಸದೇ ಶಿಸ್ತನ್ನು ಪಾಲಿಸಲಾಗುತ್ತದೆ. ಸಭೆಯ ಹಿರಿಯನನ್ನು ಆತನು ಮಾಡಿದ ಅಪರಾಧಕ್ಕೆ ತಕ್ಕಂತೆ ಶಿಸ್ತಿಗೆ ಒಳಪಡಿಸಲಾಗುತ್ತದೆ ಮತ್ತು (ಮೇಲೆ ಪ್ರಸ್ತಾಪಿಸಿರುವ ವಚನಗಳ ಬೋಧನೆಗೆ ಅನುಸಾರವಾಗಿ) ಇಡೀ ಸಭೆಗೆ ಇದರ ಬಗ್ಗೆ ತಿಳಿಸಲಾಗುತ್ತದೆ. [ಇದಕ್ಕೆ ಒಂದು ಉದಾಹರಣೆಯಾಗಿ, ಪ್ರಕಟನೆ 2 ಮತ್ತು 3ನೇ ಅಧ್ಯಾಯಗಳಲ್ಲಿ, ಕರ್ತನು ಹಿಂಜಾರಿದ ಐದು ಕ್ರೈಸ್ತಸಭೆಗಳ ಹಿರಿಯರನ್ನು ಗದರಿಸಿದ ವಿಚಾರವನ್ನು ಅಪೊಸ್ತಲ ಯೋಹಾನನು ಎಲ್ಲಾ ಸಭೆಗಳಿಗೆ ತಿಳಿಸಬೇಕೆಂದು ಕರ್ತನು ಆತನಿಗೆ ಹೇಳಿದ್ದನ್ನು ನಾವು ನೋಡುತ್ತೇವೆ.]
ಈ ಶಿಸ್ತುಪಾಲನೆಯ ವಿಚಾರದಲ್ಲಿ, ದೇವರು ಒಬ್ಬ ಸಹೋದರನಿಗೆ ಒಂದು ಸಭೆಯ ಸಭಾ ಹಿರಿಯನನ್ನು ’ನೇಮಿಸುವ ಅಧಿಕಾರವನ್ನು’ ಕೊಟ್ಟಿದ್ದರೆ, ಆಗ ಆ ಸಭಾ ಹಿರಿಯನನ್ನು ’ಶಿಸ್ತಿಗೆ ಒಳಪಡಿಸುವುದು ಮತ್ತು ಸ್ಥಾನದಿಂದ ತೆಗೆದು ಹಾಕುವುದು’ ಅವಶ್ಯವಾದಲ್ಲಿ, ಆ ಸಹೋದರನು ಅದಕ್ಕಾಗಿ ಅದೇ ಅಧಿಕಾರವನ್ನು ಪ್ರಯೋಗಿಸಬಹುದು. ಇಂತಹ ಅಪೊಸ್ತಲರ ಅಧಿಕಾರ ಇಲ್ಲದಿರುವ ಸಂದರ್ಭದಲ್ಲಿ, ಆ ಕ್ರೈಸ್ತಸಭೆಯ ಇತರ ಸಭಾ ಹಿರಿಯರುಗಳು ಸಹ ಈ ಶಿಸ್ತನ್ನು ಪ್ರಯೋಗಿಸಬಹುದು.
ಆದಾಗ್ಯೂ, ಯಾವುದೇ ಶಿಸ್ತಿಗೆ ಒಳಪಡಿಸುವುದರ ಮೂಲೋದ್ದೇಶ ಆತ್ಮಿಕ ಪ್ರೀತಿ (ಒಬ್ಬ ತಂದೆಯು ಮಾಡುವ ಹಾಗೆ) ಆಗಿರಬೇಕು, ಮತ್ತು ಆ ವಿಶ್ವಾಸಿಯನ್ನು (ಅಥವಾ ಸಭಾ-ಹಿರಿಯನನ್ನು) ಅಂತಿಮವಾಗಿ ಕರ್ತನ ಬಳಿಗೆ ಮತ್ತು ಕ್ರೈಸ್ತಸಭೆಗೆ ತಿರುಗಿ ಬರಮಾಡುವ ನಿರೀಕ್ಷೆಯೊಂದಿಗೆ ಮಾಡಬೇಕು (2 ಕೊರಿ. 2:6-11).
ಸ್ಥಳೀಯ ಸಭೆಗಳ ನಡುವಿನ ಅನ್ಯೋನ್ಯತೆ:
'CFC'ಯ ಜೊತೆಗೆ ಸಂಪರ್ಕ ಹೊಂದಿರುವ ಕ್ರೈಸ್ತಸಭೆಗಳು ಒಂದು ಕ್ರೈಸ್ತ ಪಂಗಡವಾಗಿಲ್ಲ. ನಾವೆಲ್ಲಾ ಒಂದೇ ದೃಷ್ಟಿಯನ್ನು ಹೊಂದಿರುವಂತ ಮತ್ತು ಜೊತೆಯಾಗಿ ದುಡಿಯುವ ಅನ್ಯೋನ್ಯತೆಯುಳ್ಳ ಸಭೆಗಳಾಗಿದ್ದೇವೆ. ನಮಗೆ ಕೇಂದ್ರೀಯ ಮುಖ್ಯ ಸಭೆಯಿಲ್ಲ. ನಮ್ಮಲ್ಲಿ ನಾಯಕತ್ವಕ್ಕಾಗಿ ಚುನಾವಣೆಗಳು ನಡೆಯುವುದಿಲ್ಲ. ನಮಗೆ ಮಹಾನಾಯಕನಾಗಲೀ, ಅಧ್ಯಕ್ಷನಾಗಲೀ ಇಲ್ಲ. ನಮ್ಮಲ್ಲಿ ಸಭೆಯ ಯಾವುದೇ ಆಸ್ತಿಯನ್ನು ಹತೋಟಿಯಲ್ಲಿ ಇರಿಸಿಕೊಳ್ಳುವ ಪ್ರಮುಖ ನಿಯಂತ್ರಕರು ಇಲ್ಲ. ’ಪ್ರತಿಯೊಂದು ಸಭೆಯೂ ಸ್ವತಃ ಕರ್ತನ ಅಧೀನವಾಗಿದ್ದು, ಸ್ವತಂತ್ರವಾಗಿ ಇರುತ್ತದೆ’. ಆದಕಾರಣ, ನೇಮಿಸಲ್ಪಟ್ಟ ಎಲ್ಲಾ ಸಭಾ ಹಿರಿಯರು ಮೊದಲನೆಯದಾಗಿ ಕರ್ತನಿಗೆ ನೇರವಾಗಿ ಉತ್ತರ ಕೊಡುವವರಾಗಿದ್ದಾರೆ. [ನಾವು ಪ್ರಕಟನೆ 1:20 ರಲ್ಲಿ ನೋಡುವ ಹಾಗೆ, ಇದು ಹೊಸ ಒಡಂಬಡಿಕೆಯ ನಮೂನೆಯಾಗಿದೆ; ಇದರ ಪ್ರಕಾರ "ಕರ್ತನ ಬಲಗೈಯಲ್ಲಿ ಪ್ರತಿಯೊಂದು ನಕ್ಷತ್ರವು ಇರುತ್ತದೆ"]. ನಮ್ಮಲ್ಲಿ ಇತರ ಕೆಲವು ಸಭಾ ಪಂಗಡಗಳಲ್ಲಿ ಇರುವಂತೆ - ಯಾವುದೇ "ಬಿಷಪ್"ಗಳ ಅಧಿಕಾರದ ಅಡಿಯಲ್ಲಿ ಇರುವಂತ "ಡಯೊಸೀಸ್"ಗಳು ಅಥವಾ ಸಭೆಗಳ ಗುಂಪುಗಳು ಇರುವುದಿಲ್ಲ. ಯಾವುದೇ ಸ್ಥಳೀಯ ಸಭಾ-ಹಿರಿಯನು ತನ್ನ ಸ್ಥಳೀಯ ಕ್ರೈಸ್ತಸಭೆಯ ಜವಾಬ್ದಾರಿಗೆ ಹೊರತಾಗಿ ಇತರ ಯಾವುದೇ ಸಭೆಯ ಜವಾಬ್ದಾರಿಯನ್ನು ಹೊಂದಿಲ್ಲ. ಅದಲ್ಲದೆ ಯಾವ ಸಭಾ-ಹಿರಿಯನಿಗೂ ಬೇರೊಂದು ಸಭೆಯ ಹಿರಿಯನ ಅಧಿಕಾರಕ್ಕೆ ಒಳಗಾಗುವಂತೆ ಆದೇಶಿಸಲಾಗುವುದಿಲ್ಲ.
ಅಪೊಸ್ತಲ ಪೌಲನು ತಾನು ಸ್ಥಾಪಿಸಿದ ಸಭೆಗಳನ್ನು ಒಂದು ಪಂಗಡವಾಗಿ ಮಾಡಲಿಲ್ಲ. 'CFC' ಸಭೆ ಹಾಗೂ ನಮ್ಮೊಂದಿಗೆ ಸಂಪರ್ಕ ಹೊಂದಿರುವ ಕ್ರೈಸ್ತಸಭೆಗಳು ಕೂಡ ಒಂದು ’ಕ್ರೈಸ್ತ ಪಂಗಡ’ವಾಗಿಲ್ಲ (not a 'Denomination'). ಕರ್ತನು ನೆಟ್ಟು 'CFC' ಸಭೆಯೊಂದಿಗೆ ಸಂಪರ್ಕ ಕಲ್ಪಿಸಿ ಕೊಟ್ಟಿರುವ ಪ್ರತಿಯೊಂದು ಸಭೆಯು ’ಸಂಪೂರ್ಣವಾಗಿ ಸ್ವತಂತ್ರವಾಗಿದೆ’. ಅದು ತನ್ನದೇ ಆದ ಸ್ಥಳೀಯ ಸಭಾ-ಹಿರಿಯರಿಂದ ನಡೆಸಲ್ಪಡುತ್ತದೆ. ಬೇರೆ ಸಭೆಗೆ ಸೇರಿದ ಯಾರೂ ಈ ಹಿರಿಯರನ್ನು ಹತೋಟಿಯಲ್ಲಿ ಇರಿಸಿಕೊಳ್ಳುವುದಿಲ್ಲ ಅಥವಾ ಏನು ಮಾಡಬೇಕೆಂದು ಅವರಿಗೆ ಹೇಳುವುದಿಲ್ಲ. ಕರ್ತನೊಬ್ಬನೇ ಅವರ ಶಿರಸ್ಸಾಗಿದ್ದಾನೆ.
ಆದಾಗ್ಯೂ ಸಭಾ-ಹಿರಿಯರು ತಮ್ಮ ಸ್ವಂತ ಸಭೆಯಲ್ಲಿ ಸಮಸ್ಯೆಗಳನ್ನು ಎದುರಿಸುವಾಗ, ಸಲಹೆ ಪಡೆಯಲು ಇತರ ಸಭೆಗಳ ಪ್ರೌಢ ಹಿರಿಯರನ್ನು ಅಥವಾ ಅಪೊಸ್ತಲ ಸೇವೆಯನ್ನು ಹೊಂದಿರುವಂತವರನ್ನು ಸಂಪರ್ಕಿಸಬಹುದು. ಇದೇ ರೀತಿ ಕೊರಿಂಥದ ಸಭೆಯ ವಿಶ್ವಾಸಿಗಳು ತಮ್ಮ ಮಧ್ಯೆ ಕಾಣಿಸಿಕೊಂಡ ಸಮಸ್ಯೆಗಳ ಪರಿಹಾರಕ್ಕೆ ಸಹಾಯ ಬೇಕೆಂದು ಅಪೊಸ್ತಲ ಪೌಲನನ್ನು ಸಂಪರ್ಕಿಸಿದ್ದರು. ಆ ಸಮಯದಲ್ಲಿ, ಪೌಲನ ಸಲಹೆಯು ಅವರಿಗೆ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಸಹಾಯ ಒದಗಿಸಿತು.
'CFC' ಸಭೆಯೊಂದಿಗೆ ಸಂಪರ್ಕ ಹೊಂದಿರುವ ಕ್ರೈಸ್ತಸಭೆಗಳಲ್ಲಿ ನಾವು ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸಿಕೊಂಡು, ಆ ಮೂಲಕ ನಮ್ಮ ಐಕ್ಯತೆಯು ಬಲಗೊಂಡು, ನಾವು ಕರ್ತನಲ್ಲಿ ಒಂದು ಕುಟುಂಬವಾಗಬೇಕೆಂದು ಸದಾ ಪ್ರಯಾಸಪಡುತ್ತೇವೆ. 'CFC'ಯೊಂದಿಗೆ ಸಂಪರ್ಕ ಹೊಂದಿರುವ ಎಲ್ಲಾ ಸಭೆಗಳಿಗಾಗಿ ಆಗಾಗ ಸಮ್ಮೇಳನ ಕೂಟಗಳನ್ನು ನಡೆಸುವುದರ ಒಂದು ಉದ್ದೇಶ ಇದೇ ಆಗಿದೆ.
ಕುಟುಂಬ ಜೀವಿತದ ಪ್ರಾಮುಖ್ಯತೆ
'CFC' ಸಭೆಯಲ್ಲಿ, ದೇವಭಕ್ತಿಯುಳ್ಳ ಕುಟುಂಬ ಜೀವಿತ ಅತ್ಯಂತ ಮಹತ್ವಪೂರ್ಣವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕುಟುಂಬಗಳಲ್ಲಿ ದಂಪತಿಗಳು ಪರಸ್ಪರ ಪ್ರೀತಿ, ಗೌರವದಿಂದ ತಮ್ಮ ಸಂಬಂಧವನ್ನು ಉತ್ತಮಗೊಳಿಸುವಂತೆ ಮತ್ತು ತಮ್ಮ ಮಕ್ಕಳನ್ನು ದೇವರ ಮಾರ್ಗದಲ್ಲಿ ಬೆಳೆಸುವಂತೆ ಅವರನ್ನು ಉತ್ತೇಜಿಸುವುದಕ್ಕಾಗಿ ನಾವು ಆಗಾಗ ವಿಶೇಷ ಕೂಟಗಳನ್ನು ನಡೆಸುತ್ತೇವೆ.
ಹೆಂಡಂದಿರು ತಮ್ಮ ಗಂಡಂದಿರಿಗೆ ಸಹಾಯಕಿಯರು ಆಗಿರಬೇಕೆಂಬುದು ದೇವರ ಉದ್ದೇಶವಾಗಿದೆ. 'CFC' ಸಭೆಯಲ್ಲಿ, ಸ್ತ್ರೀಯರ ಪಾತ್ರ ಅತ್ಯಂತ ಬೆಲೆಯುಳ್ಳದ್ದೆಂದು ನಾವು ತಿಳಿದಿದ್ದೇವೆ. ಗಂಡಂದಿರು ಕುಟುಂಬಗಳನ್ನು ಬೆಳೆಸುವುದರಲ್ಲಿ ಮತ್ತು 'CFC'ಯಲ್ಲಿ ಅವರು ಮಾಡುವ ಸೇವೆಯಲ್ಲಿ ಪತ್ನಿಯರು ನೀಡುವ ಬೆಂಬಲ ಮಹತ್ವದ್ದಾಗಿದೆ. ಗಂಡಂದಿರು ತಮ್ಮ ಹೆಂಡಂದಿರಿಗೆ ಒಳ್ಳೆಯ ಕುರುಬರಾಗಿ ಇದ್ದುಕೊಂಡು, ಎಲ್ಲಾ ಕ್ಷೇತ್ರಗಳಲ್ಲಿ ಅವರಿಗೆ ಮಾದರಿಯಾಗಿ ನಡೆದುಕೊಳ್ಳಬೇಕು ಎಂದು ನಾವು ಬೋಧಿಸುತ್ತೇವೆ.
ಈಗ ’ದೇವರ ಮಕ್ಕಳಾಗಿರುವ ಸ್ತ್ರೀಯರೂ ಸಹ’ ಪ್ರವಾದಿಸುವ ಅವಕಾಶವನ್ನು ಹೊಂದಿರುವುದರಿಂದ, 'CFC' ಸಭೆಯಲ್ಲಿ ಎಲ್ಲಾ ಸಹೋದರಿಯರು ಪವಿತ್ರಾತ್ಮನಿಂದ ತುಂಬಿಸಲ್ಪಡುವಂತೆ ಮತ್ತು ಆಸಕ್ತಿಯಿಂದ ಪ್ರವಾದನೆಯ ವರವನ್ನು ಅಪೇಕ್ಷಿಸುವಂತೆ ನಾವು ಅವರನ್ನು ಪ್ರೋತ್ಸಾಹಿಸುತ್ತೇವೆ (ಅ.ಕೃ. 2:17; ಎಫೆ. 5:18; 1 ಕೊರಿ. 14:1) - ಹೇಗೆಂದರೆ, ದೇವರ ವಾಕ್ಯವನ್ನು ಹಂಚಿಕೊಂಡು ಇತರರನ್ನು ಉತ್ತೇಜಿಸಿ, ಸಂತೈಸಿ ಮತ್ತು ಆಶೀರ್ವದಿಸುವುದರ ಮೂಲಕ (1 ಕೊರಿ. 14:3ರಲ್ಲಿ ನಾವು ಓದುವಂತೆ). ಇದನ್ನು ಮೊದಲನೆಯದಾಗಿ ಅವರವರ ಮನೆಗಳಲ್ಲಿ ತಮ್ಮ ಗಂಡಂದಿರು ಮತ್ತು ಮಕ್ಕಳೊಂದಿಗೆ, ಅನಂತರ ಇತರ ಸ್ತ್ರೀಯರೊಂದಿಗೆ ಮಾಡುವುದು ಸೂಕ್ತವಾಗಿದೆ.
'CFC' ಸಭೆಯ ಭವಿಷ್ಯತ್ತಿನ ನಾಯಕತ್ವ
'CFC'ಯ ಎಲ್ಲಾ ಯೌವನಸ್ಥ ಸಹೋದರರು ಮನಃಪೂರ್ವಕವಾಗಿ ಸಭೆಯಲ್ಲಿ ಪಾಲ್ಗೊಳ್ಳುವಂತೆ ನಾವು ಪ್ರೋತ್ಸಾಹಿಸುತ್ತೇವೆ, ಈ ರೀತಿಯಾಗಿ ದೇವರು ಮುಂದಿನ ದಿನಗಳಲ್ಲಿ ಅವರಲ್ಲಿ ಕೆಲವರಿಗೆ ನಾಯಕತ್ವಕ್ಕೆ ಬರುವ ಕೃಪೆ ನೀಡಲಿ ಎಂಬುದು ನಮ್ಮ ಉದ್ದೇಶವಾಗಿದೆ.
ಮಾನವ ಇತಿಹಾಸದ ಉದ್ದಕ್ಕೂ ಹೊಟ್ಟೆಕಿಚ್ಚು ಒಂದು ದೊಡ್ಡ ಸಮಸ್ಯೆಯಾಗಿದೆ. ಕಾಯಿನನು ತನ್ನ ತಮ್ಮನಾದ ಹೇಬೆಲನ ಕುರಿತಾಗಿ ಹೊಟ್ಟೆಕಿಚ್ಚುಪಟ್ಟನು, ಹಾಗೆಯೇ ಸೌಲನು ಯುವಕನಾಗಿದ್ದ ದಾವೀದನ ಮೇಲೆ ಮತ್ಸರ ಉಳ್ಳವನಾಗಿದ್ದನು. ಇದೇ ರೀತಿಯಾಗಿ ಕ್ರೈಸ್ತ ಸಭೆಯ ಇತಿಹಾಸದಲ್ಲೂ ಸಹ, "ಸಭಾ-ಹಿರಿಯ" ಸಹೋದರರು ಪ್ರತಿಭಾವಂತ ಕಿರಿಯ ಸಹೋದರರು ಮೇಲೆ ಬರುವುದನ್ನು ನೋಡಿ ಹೊಟ್ಟೆಕಿಚ್ಚು ಪಟ್ಟಿರುವಂತ - ಮತ್ತು ಅವರನ್ನು ಕೆಳಕ್ಕೆ ದಬ್ಬಿರುವಂತ - ಅನೇಕ ಉದಾಹರಣೆಗಳು ಕಂಡುಬರುತ್ತವೆ. ಆದಾಗ್ಯೂ 'CFC'ಯಲ್ಲಿ, ಎಲ್ಲಾ ಸಭಾ-ಹಿರಿಯರು ದೇವಭಕ್ತಿಯುಳ್ಳ ಯುವ ಸಹೋದರರಲ್ಲಿ ನಾಯಕತ್ವದ ಯೋಗ್ಯತೆ ಇರುವುದನ್ನು ಗಮನಿಸಿ, ಅಂಥವರನ್ನು ಪ್ರೋತ್ಸಾಹಿಸಿ ತರಬೇತುಗೊಳಿಸಬೇಕು ಎಂದು ನಾವು ಸಭಾ-ಹಿರಿಯರನ್ನು ಪ್ರೋತ್ಸಾಹಿಸುತ್ತೇವೆ.
ದೇವರ ಸೇವಾಕಾರ್ಯದಲ್ಲಿ ನಿವೃತ್ತಿ ಎಂಬುದು ಇಲ್ಲದಿರುವುದರಿಂದ, 'CFC' ಸಭೆಯಲ್ಲಿ ಒಬ್ಬ ಹಿರಿಯ ಸಹೋದರ ಎಂದಿಗೂ ನಿವೃತ್ತಿ ಹೊಂದುವುದಿಲ್ಲ. ಆದರೆ ತಂದೆಯಂದಿರು ಹೇಗೆ ತಮ್ಮ "ಗಂಡು ಮಕ್ಕಳನ್ನು" ಪ್ರೌಢಾವಸ್ಥೆಗೆ ಬೆಳೆಸಿದ ಮೇಲೆ, ತಾವು ಹಿಂದೆ ಸರಿದು "ಗಂಡು ಮಕ್ಕಳು" ಅವರವರ ಜೀವನದ ಹೊಣೆಯನ್ನು ವಹಿಸಿಕೊಳ್ಳುವಂತೆ ಮಾಡುತ್ತಾರೋ, ಅದೇ ರೀತಿಯಾಗಿ 'CFC' ಸಭೆಯ ಅನುಭವಸ್ಥ ಸಭಾ-ಹಿರಿಯರು ಮಾಡುತ್ತಾರೆ. ಹೀಗೆ ತಮ್ಮನ್ನು ತಗ್ಗಿಸಿಕೊಳ್ಳುವ, ದೇವಭಕ್ತಿಯುಳ್ಳ, ತಂದೆಯ ಹೃದಯವುಳ್ಳ ಹಿರಿಯ ಸಹೋದರರು ಯಾವಾಗಲೂ ತಮ್ಮ "ಆತ್ಮಿಕ ಮಕ್ಕಳ" ಗೌರವ ಮತ್ತು ಆದರಕ್ಕೆ ಪಾತ್ರರಾಗಿರುತ್ತಾರೆ, ಮತ್ತು ಅವರ ಜೀವಿತದ ಕೊನೆಯವರೆಗೂ ಅವರ "ಆತ್ಮಿಕ ಮಕ್ಕಳು" ಅವರಿಂದ ಸಲಹೆಗಳನ್ನು ಪಡೆಯುತ್ತಿರುತ್ತಾರೆ.
"ಆಹಾ, ಸಹೋದರರು ಒಂದಾಗಿರುವುದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು! .... ಅಲ್ಲಿ ಆಶೀರ್ವಾದವೂ ಜೀವವೂ ಸದಾಕಾಲ ಇರಬೇಕೆಂದು ಕರ್ತನು ಆಜ್ಞಾಪಿಸಿದ್ದಾನೆ" (ಕೀರ್ತ. 133:1,3).
"ನೀನು ಕರ್ತನಿಂದ ಹೊಂದಿರುವ ನಿರ್ಧಿಷ್ಟ ಸೇವೆಯನ್ನು ನೆರವೇರಿಸುವುದಕ್ಕೆ ಎಚ್ಚರವಾಗಿರು ಮತ್ತು ಶ್ರದ್ಧೆಯಿಂದ ಅದನ್ನು ಈಡೇರಿಸು" (ಕೊಲೊ. 4:17)/.