ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ತಿಳಿಯುವುದು
WFTW Body: 

ಲೋಕದಲ್ಲಿ ಎರಡು ವಿಧವಾದ ಕ್ರೈಸ್ತ ವಿಶ್ವಾಸಿಗಳು ಇದ್ದಾರೆ. ಮೊದಲನೇಯದಾಗಿ, ದೇವರ ಆಶೀರ್ವಾದವನ್ನು ಮಾತ್ರ ತಮ್ಮ ಗುರಿಯನ್ನಾಗಿಟ್ಟುಕೊಂಡು ಅದನ್ನೇ ಆಶಿಸುವವರು; ಎರಡನೇಯದಾಗಿ, ದೇವರ ಮೆಚ್ಚುಗೆಯನ್ನು ಆಶಿಸಿ ಅದಕ್ಕಾಗಿ ತವಕಪಡುಕುವವರು. ಈ ಎರಡು ಗುಂಪಿನವರಲ್ಲಿ ಎಂಥಹ ದೊಡ್ಡ ವ್ಯತ್ಯಾಸವಿದೆ! ಪ್ರಕಟನೆ 7:9, 14 ವಚನಗಳಲ್ಲಿ ದೊಡ್ಡ ಗುಂಪಿನ ವಿಶ್ವಾಸಿಗಳ ಬಗ್ಗೆ ಓದುತ್ತೇವೆ. ಹೌದು! ಎಣಿಸಲಾಗದಂಥ ಮಹಾ ಸಮೂಹವು, ಇವರು ಹೇಳಿದ ಸಾಕ್ಷಿಯನ್ನು ಗಮನಿಸಿದ್ದೀರೋ? 'ತಮಗುಂಟಾದ ರಕ್ಷಣೆಯು ದೇವರದು (ವಚನ. 10) ಮತ್ತು ಯಜ್ಞದ ಕುರಿಯಾದಾತನ ರಕ್ತದಲ್ಲಿ ತಮ್ಮ ನಿಲುವಂಗಿಗಳು ತೊಳೆಯಲ್ಪಟ್ಟು ಶುಭ್ರವಾಗಿವೆ’ (ವಚನ 14) ಅಥವಾ ಇವರ ಸಾಕ್ಷಿಯನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, "ದೇವರು ಇವರನ್ನು ಆಶೀರ್ವಾದ ಮಾಡಿದ್ದರೆ" ಎಂಬುದಾಗಿ ಹೇಳಬಹುದು. ಇದು ಒಳ್ಳೆಯದೇ. ಅದರಲ್ಲಿ ಸಂಶಯವೇನು ಇಲ್ಲ! ಆದರೆ ಪ್ರಕಟನೆ 14:1, 5 ವಚನಗಳಲ್ಲಿ ತೋರಿಸಲ್ಪಟ್ಟಿರುವ ವಿಶ್ವಾಸಿಗಳ ಗುಂಪು ಕೊಡುವ ಸಾಕ್ಷಿಯು ಮೊದಲನೆ ಸಾಕ್ಷಿಗೆ ಬಹು ವ್ಯತ್ಯಾಸವಾದ ಸಾಕ್ಷಿಯಾಗಿರುತ್ತದೆ. ಈ ಎರಡನೆಯ ಸಾಕ್ಷಿಯವರು ಬಹು ಸಣ್ಣ ಗುಂಪಿನವರು. ಅವರು ಕೇವಲ 1,44,000 ಮಂದಿ ಮಾತ್ರ. ಈ ಭೂಮಿಯ ಕಟ್ಟಕಡೆಯಲ್ಲಿಯೂ ಜೀವಿಸಿ ಮುಗಿಸಿದ ಕೋಟ್ಯಾನು ಕೋಟಿ ಜನರಲ್ಲಿ ಆರಿಸಿ ತೆಗೆದ ಬಹು ಚಿಕ್ಕ ಸಂಖ್ಯೆಯವರು. ಈಗ ಇವರ ಸಾಕ್ಷಿಯನ್ನು ಕೇಳಿರಿ - ’ತಮ್ಮ ಭೂಲೋಕ ಜೀವಿತದೊಳು ಕ್ರಿಸ್ತ ಯೇಸುವನ್ನು ನೂರರಷ್ಟು ಹಿಂಬಾಲಿಸಿದವರು, ಅವರ ಬಾಯಲ್ಲಿ ಯಾವುದೇ ವಂಚನೆ ಅಥವಾ ಸುಳ್ಳು ಇರಲಿಲ್ಲ, ಮತ್ತು ಸ್ತ್ರೀ (ಪ್ರಕಟಣೆ 17 ನೇಯ ಅದ್ಯಾಯದಲ್ಲಿ ಹೇಳಲ್ಪಟ್ಟ ಬಾಬೇಲೆಂಬ ಜಾರಸ್ತ್ರೀಯ ಮತ್ತು ಅವಳ ಮಕ್ಕಳ ಅಥವಾ ಲೋಕದ) ಸಹವಾಸದಿಂದ ತಮ್ಮನ್ನು ತಾವು ಮಲೀನ ಮಾಡಿಕೊಳ್ಳದೆ ತಮ್ಮನ್ನು ಕಾಪಾಡಿಕೊಂಡವರು". ಇವರ ಸಾಕ್ಷಿಯನ್ನು ಸಂಕ್ಷಿಪ್ತವಾಗಿ ಹೇಳಬೇಕಾದರೆ, ’ಇವರು ದೇವರನ್ನು ಮೆಚ್ಚಿಸಿದರು’. ವ್ಯತ್ಯಾಸವನ್ನು ಗಮನಿಸಿದಿರಾ! ಮೊದಲನೆಯ ಗುಂಪಿನವರು ದೇವರ ಆಶೀರ್ವಾದವನ್ನು ಪಡೆದರು, ಎರಡನೆಯ ಗುಂಪಿನವರು ದೇವರ ಮೆಚ್ಚುಗೆಯನ್ನು ಪಡೆದರು. ಮತ್ತೇನು......ನಾವು ಹುಡುಕುವದನ್ನೇ ಹೊಂದಿಕೊಳ್ಳುತ್ತೇವೆ. ನಾವು ದೇವರ ಆಶೀರ್ವಾದದಲ್ಲಿ ತೃಪ್ತಿ ಹೊಂದಿಬಿಟ್ಟರೆ ಕೇವಲ ಅದನ್ನು ಮಾತ್ರವೇ ಹೊಂದಿಕೊಳ್ಳುತ್ತೇವೆ. ಆದರಲ್ಲಿಯೂ ಒಂದು ವೇಳೆ ದೇವರು ಕೊಡುವ ’ಲೌಕೀಕ ವಸ್ತುಗಳ’ ಆಶೀರ್ವಾದದಲ್ಲಿ ಮಾತ್ರವೇ ತೃಪ್ತಿ ಹೊಂದಿಬಿಟ್ಟರೆ ನಾವು ದೇವರ ಆತ್ಮೀಕ ಆಶೀರ್ವಾದವನ್ನು ಪಡೆದುಕೊಳ್ಳುವುದಕ್ಕೆ ಒಂದು ಹೆಜ್ಜೆ ಕೂಡಾ ಇಡಲಿಕ್ಕೆ ಆಗುವುದಿಲ್ಲ.

ಇಂದಿನ ಅನೇಕ ವಿಶ್ವಾಸಿಗಳು ದೇವರಿಂದ ಆಶೀರ್ವದಿಸಲ್ಪಡುವದರಲ್ಲಿ, ಅದರಲ್ಲಿಯೂ ಪ್ರಧಾನವಾಗಿ ಲೌಕೀಕ ವಸ್ತುಗಳ ಮೂಲಕ ಆಶೀರ್ವದಿಸಲ್ಪಡುವದರಲ್ಲಿ ಮಾತ್ರವೇ ತೃಪ್ತಿ ಹೊಂದಿಬಿಡುತ್ತಾರೆ. ಆದ್ದರಿಂದಲೇ ಕ್ರ‍ೈಸ್ತ ಪುಸ್ತಕ ಅಂಗಡಿಗಳಲ್ಲಿ, ಒಬ್ಬನು ತನ್ನ ಶಾರೀರಿಕ ರೋಗಗಳಿಂದ ಹೇಗೆ ಸ್ವಸ್ಥತೆಯನ್ನು ಪಡೆಯಬಹುದು ಎಂಬುದರ ಬಗ್ಗೆಯೂ, ಹತ್ತರಲ್ಲೊಂದು ಪಾಲು(ದಶಾಂಶ) ಕೊಟ್ಟು ಹೇಗೆ ಐಶ್ವರ್ಯವಂತನಾಗಬಹುದು ಎಂಬುದರ ಬಗ್ಗೆಯೂ ಪುಸ್ತಕಗಳು ತುಂಬಿಹೋಗಿವೆ. ಇವುಗಳು ಒತ್ತಿ ಹೇಳುವುದೆಲ್ಲಾ ಶಾರೀರಿಕ ಮತ್ತು ಲೌಖಿಕ ಸುಖ ಜೀವನ; ಆರೋಗ್ಯ ಮತ್ತು ಐಶ್ವರ್ಯ ವೃಧ್ಧಿಯಷ್ಟೇ, ಇವುಗಳೆಲ್ಲ ಸ್ವಾರ್ಥತೆಯನ್ನು ಕೇಂದ್ರಿಕರಿಸಿಕೊಂಡು ಜೀವಿಸುವ ಒಂದು ಬಾಳಿನ ಗುರುತು. ಆದರೆ ದೇವರ ವಾಕ್ಯವು, ’ನಾವು ನಮಗಾಗಿ ಜೀವಿಸದೇ ಆತನಿಗೋಸ್ಕರ ಜೀವಿಸಬೇಕೆಂಬುದಕ್ಕಾಗಿ ಯೇಸು ಸತ್ತನು ಎಂದೇ ಹೇಳುತ್ತದೆ’ ( 2 ಕೊರಿಂಥ 5:15) . ಅದೇನೆಂದರೆ, ನಮ್ಮನ್ನು ನಾವೇ ಮೆಚ್ಚಿಸಿಕೊಂಡು ಜೀವಿಸುವದು ಅಲ್ಲ. ದೇವರನ್ನು ಮಾತ್ರವೇ ಮೆಚ್ಚಿಸಿಕೊಂಡು ಜೀವಿಸುವ ಒಂದು ಜೀವಿತ. ಇದನ್ನು ಬೇರೆ ರೀತಿಯಲ್ಲಿ ಹೇಳಬೇಕಾದರೆ, 'ಈ ಹೊಲಸಾದ ಸ್ವಾರ್ಥತೆಯನ್ನು ಕೇಂದ್ರೀಕರಿಸಿದ ಜೀವಿತದಿಂದ ನಮ್ಮನ್ನು ಬಿಡಿಸಿಕೊಂಡು, ದೇವರನ್ನು ಕೇಂದ್ರೀಕರಿಸಿದ ಜೀವಿತದೊಳಗೆ ನಮ್ಮನ್ನು ಕರೆದುಕೊಂಡು ಬರುವುದಕ್ಕಾಗಿಯೇ ಯೇಸು ಸತ್ತನು’.

ಈ ದಿನಗಳಲ್ಲಿ ನಮಗೆ ಒಗಟಾಗಿರುವ ಒಂದು ಪ್ರಶ್ನೆಯೆಂದರೆ, ಸಂಪೂರ್ಣವಾಗಿ ರಾಜಿ ಮಾಡಿಕೊಳ್ಳುವ ಅನೇಕ ಕ್ರಿಸ್ತೀಯ ಕೆಲಸಗಳನ್ನು ದೇವರು ಹೇಗೆ ಆಶೀರ್ವಾದ ಮಾಡುತ್ತಾರೆ? ಹಾಗಾದರೆ, ದೇವರು, ತನ್ನ ವಾಕ್ಯದಿಂದ ಮಾರ್ಗ ತಪ್ಪುವುದನ್ನು ಮತ್ತು ರಾಜಿ ಮಾಡಿಕೊಳ್ಳುವುದನ್ನು ನೋಡಿ ಬೇಸರಗೊಳ್ಳುವುದಿಲ್ಲವೇ? ಇಲ್ಲ, ಖಂಡಿತವಾಗಿಯೂ ಇದರ ಅರ್ಥ ಆ ರೀತಿಯಾಗಿಲ್ಲ: ದೇವರು ತಾನು ಸಂಪೂರ್ಣವಾಗಿ ಮೆಚ್ಚಲಾಗದ ಅನೇಕ ಸೇವೆಗಳನ್ನೂ ಆಶೀರ್ವದಿಸುತ್ತಾರೆ. ದೇವರು ಹೇಳಿದಂತೆ ಮಾಡದೇ, ಮೋಶೆ ದೇವರ ಮಾತಿಗೆ ಅವಿಧೇಯನಾಗಿ ಬಂಡೆಯನ್ನು ಹೊಡೆದನು (ದೇವರು ಅವನಿಗೆ ಬಂಡೆಗೆ ಮಾತನಾಡಲು ಮಾತ್ರ ಹೇಳಿದ್ದರು). ಆದಾಗ್ಯೂ, ಆ ಅವಿಧೇಯತೆಯ ಸೇವೆಯನ್ನು ಕೂಡಾ ದೇವರು ’ಆಶೀರ್ವದಿಸಿದರು’. ನಿಜ ಹೇಳಬೇಕೆಂದರೆ, ಆ ಸೇವೆಯಿಂದ ೨೦ ಲಕ್ಷ ಜನರು ಆಶೀರ್ವದಿಸಲ್ಪಟ್ಟರು. ನಂತರ ತನ್ನ ಅವಿಧೇಯ ಸೇವಕನೊಂದಿಗೆ ದೇವರು ಕಠಿಣವಾದ ಕ್ರಮವನ್ನು ತೆಗೆದುಕೊಂಡರು (ಅರಣ್ಯಕಾಂಡ 20:8, 13).
ನೋಡಿದಿರಾ? ಆ ಸೇವೆಯನ್ನು ದೇವರು ಮೆಚ್ಚಿದ್ದಕ್ಕಾಗಿ ಅಲ್ಲ; ಅವಶ್ಯಕತೆಯಿಂದ ನಿಂತಿದ್ದ 2೦ ಲಕ್ಷ ಜನರನ್ನು ಪ್ರೀತಿಸಿದ ಆ ಪ್ರೀತಿಗೋಸ್ಕರವೇ ಅವರು ಆ ಸೇವೆಯನ್ನು ಆಶೀರ್ವದಿಸಿದರು. ಇಂದು ಕೂಡಾ ಹಾಗೆಯೇ ಇದೆ. ತಮ್ಮ ರಕ್ಷಣೆಗಾಗಿಯೂ, ಶಾರೀರಿಕ ಗುಣವನ್ನು ಪಡೆಯುವದಕ್ಕಾಗಿಯೂ ತವಕಪಟ್ಟು ನಿಲ್ಲುವ ಜನರನ್ನು ದೇವರು "ಪ್ರೀತಿಸುತ್ತಾರೆ" ಎಂಬ ಒಂದೇ ಕಾರಣಕ್ಕಾಗಿಯೇ ಅನೇಕ ಸೇವೆಗಳು ಅವರ ಮೂಲಕ ಆಶೀರ್ವಾದಿಸಲ್ಪಡುತ್ತವೆ. ಆದರೆ ಯೇಸುವಿನ ಹೆಸರಿನಲ್ಲಿ ನಡೆಯುತ್ತಿರುವ ಅನೇಕ ಕಾರ್ಯಗಳನ್ನು ದೇವರು ಖಂಡಿತವಾಗಿ ಮೆಚ್ಚಲಾರರು, ಅವರು ತಕ್ಕ ಕಾಲದಲ್ಲಿ ಇಂತಹ ರಾಜಿ ಮಾಡಿಕೊಳ್ಳುವ ಭೋದಕರುಗಳನ್ನು ಖಂಡಿತವಾಗಿ ಶಿಕ್ಷಿಸುತ್ತಾರೆ.

ದೇವರ ಮೂಲಕ ಲೋಕದ ವಸ್ತುಗಳನ್ನು ಆಶೀರ್ವಾದವಾಗಿ ಪಡೆದುಕೊಳ್ಳಲಿಕ್ಕೆ ನೆರವಾಗಬೇಕಾದ ಒಂದೇ ನಿಭಂಧನೆ ಏನೆಂದರೆ ’ಒಬ್ಬನು ಒಳ್ಳೆಯವನಾಗಿಯೋ ಅಥವಾ ಕೆಟ್ಟವನಾಗಿಯೋ’ ಆಗಿರಬೇಕಷ್ಟೇ! ಏಕೆಂದರೆ "ದೇವರು ನೀತಿವಂತರ ಮೇಲೆಯೂ, ಅನೀತಿವಂತರ ಮೇಲೆಯೂ ಒಂದೇ ಸಮಾನವಾಗಿ ಮಳೆಯನ್ನು ಸುರಿಸುತ್ತಾರೆ ಮತ್ತು ತನ್ನ ಸೂರ್ಯನು ಮೂಡುವಂತೆ ಮಾಡುತ್ತಾರೆ" (ಮತ್ತಾಯ 5:45) ಎಂದು ಯೇಸು ಹೇಳಿದರು. ಆದುದರಿಂದ ಲೌಕಿಕ ಆಶೀರ್ವಾದಗಳು ದೇವರು ಒಬ್ಬ ಮನುಷ್ಯನ ಜೀವಿತವನ್ನು ಮೆಚ್ಚಿದ್ದಕ್ಕೆ ಗುರುತು ಅಲ್ಲವೇ ಅಲ್ಲ. ಅರಣ್ಯದಲ್ಲಿ 2೦ ಲಕ್ಷ ಇಸ್ರಾಯೇಲ್ಯರು 40 ವರುಷಗಳ ಕಾಲ ಎಷ್ಟು ಹೆಚ್ಚಾಗಿ ದೇವರಿಗೆ ಅವಿದೇಯರಾದರೆಂದರೆ ಅವರ ಮೇಲೆ ದೇವರು ಬಹಳವಾಗಿ ಕೋಪಿಸಿಕೊಂಡರು (ಇಬ್ರಿಯ 3:17). ಆದರೂ ಈ ಎಲ್ಲಾ ವರುಷಗಳೂ ದೇವರು ಅವರಿಗೆ ಅಧ್ಬುತ ರೀತಿಯಿಂದ ಊಟ ಮತ್ತು ಒಳ್ಳೆಯ ಸ್ವಸ್ಥತೆಯನ್ನು ಕೊಟ್ಟರು (ಧರ್ಮೋ 8:2). ಆದುದರಿಂದ ಶಾರೀರಿಕ ಬೇಡಿಕೆಗಳ ಪ್ರಾರ್ಥನೆಗಳಿಗೆ ಸಿಗುವ "ಅದ್ಭುತವಾದ ಉತ್ತರಗಳು" ದೇವರು ಒಬ್ಬ ಮನುಷ್ಯನ ಜೀವಿತದ ಬಗ್ಗೆ ಸಂತೋಷಪಟ್ಟಿದ್ದಕ್ಕೆ ಗುರುತು ಅಲ್ಲವೇ ಅಲ್ಲ!

ಇಂದು ದೇವರು, ತನ್ನ ಆಶೀರ್ವಾದವನ್ನು ಮಾತ್ರವಲ್ಲದೇ, ತನ್ನ ಮೆಚ್ಚುಗೆಯನ್ನೂ ಹೊಂದಿಕೊಳ್ಳಲು ತವಕಿಸುವವರನ್ನು ಎದುರು ನೋಡುತ್ತಿದ್ದಾರೆ

ಇವುಗಳೆಲ್ಲದಕ್ಕೂ ಬದಲಾಗಿ, ಯೇಸು 30 ವರ್ಷದವರಿರುವಾಗ, ದೇವರ ಮೆಚ್ಚುಗೆ ಆತನ ಮೇಲೆ ನೆಲೆಸಿತ್ತು. ಅದಕ್ಕೆ ಒಂದೇ ಕಾರಣ ಏನೆಂದರೆ, ಆ ಎಲ್ಲಾ ವರುಷಗಳಲ್ಲಿ ಯೇಸು ನಂಬಿಗಸ್ಥರಾಗಿದ್ದುಕೊಂಡು ಶೋಧನೆಗಳ ಮೇಲೆ ಜಯವನ್ನು ಹೊಂದಿದ್ದರು. ಯೇಸು ತನ್ನ ಸ್ವಾರ್ಥವನ್ನು ಕೇಂದ್ರಿಕರಿಸದೆ, ತಂದೆಯನ್ನು ಕೇಂದ್ರಿಕರಿಸಿದ ಜೀವಿತವನ್ನು ಜೀವಿಸಿದ್ದರು, ಹೌದು ಅವರು ತನ್ನ ಸುಖಕ್ಕಾಗಿ ಒಂದನ್ನೂ ಮಾಡಲೇ ಇಲ್ಲ. (ರೋಮ 15:3) ಅವರ ದೀಕ್ಷಾಸ್ನಾನದಲ್ಲಿ "ಈತನು ಪ್ರಿಯನಾಗಿರುವ ನನ್ನ ಮಗನು; ಈತನನ್ನು ನಾನು ಮೆಚ್ಚಿದ್ದೇನೆ" ಎಂದೇ ತಂದೆಯಾದ ದೇವರು ಒಳ್ಳೆಯ ಸಾಕ್ಷಿಯನ್ನು ಕೊಟ್ಟರು."ನಾನು ’ಆಶೀರ್ವಾದ’ಮಾಡಿದ ನನ್ನ ಪ್ರಿಯನಾಗಿರುವ ನನ್ನ ಒಳ್ಳೆಯ ಮಗನು" ಎಂದು ತಂದೆ ಹೇಳಲೇ ಇಲ್ಲ; ಎರಡನೆಯ ಸಾಕ್ಷಿಯಲ್ಲಿ ಯಾವ ಬೆಲೆ ಇಲ್ಲ. ಬದಲಿಗೆ ದೇವರ ಮೆಚ್ಚುಗೆಯನ್ನು ಸೂಚಿಸುವಂಥಹ ಮೊದಲಿನ ಸಾಕ್ಷಿಯನ್ನೇ ಯೇಸು ಮುಖ್ಯವಾಗಿ ಬಯಸಿದ್ದು. ಆದ್ದರಿಂದ ಯೇಸುವನ್ನು ಹಿಂಬಾಲಿಸುವುದೆಂದರೆ ಯೇಸು ಬಯಸಿದ ಅದೇ ಸಾಕ್ಷಿಯನ್ನು ನಾವು ಹುಡುಕುವುದಾಗಿದೆ.

ಇಂದು ಬಹಳಷ್ಟು ಕ್ರೈಸ್ತರು ಸೌಕರ್ಯವನ್ನೂ, ಸುಖಭೋಗವನ್ನೂ, ಐಶ್ವರ್ಯವನ್ನೂ ಹುಡುಕುವವರಾಗಿ ಅನ್ಯ ದೇಶಗಳಿಗೆ ಪ್ರಯಾಣಿಸುತ್ತಾರೆ ಅಥವಾ ವಲಸೆ ಹೋಗುತ್ತಾರೆ. ಇವರಿಗೆ ತಮ್ಮ ಜೀವಿತದಲ್ಲಿ ದೇವರ ಆಶೀರ್ವಾದವು ಸಿಗುತ್ತದಷ್ಟೆ; ಆದರೆ.... ದೇವರ ಮೆಚ್ಚುಗೆ.... ನಿಶ್ಚಯವಾಗಿ ಸಿಗದು. ಏಕೆಂದರೆ ದೇವರು ಮತ್ತು ಲೋಕದ ವಸ್ತುಗಳೂ (ಐಶ್ವರ್ಯ, ಸುಖಭೋಗ, ಅನುಕೂಲತೆಗಳು... ಇತ್ಯಾದಿ) ಎರಡಕ್ಕೂ ಸೇವೆಮಾಡಲು ಒಬ್ಬ ಮನುಷ್ಯನಿಗೆ ಆಗುವುದಿಲ್ಲ. ದೇವರ ಆಶೀರ್ವಾದವು ನಮ್ಮ ಮೇಲೆಯೂ ಇರುವುದನ್ನು ನೋಡಿ, ಅದು, ದೇವರು ನಮ್ಮ ಮೇಲೆ ಸಂತೋಷವಾಗಿದ್ದಾನೆ ಎಂಬುದಕ್ಕೆ ಗುರುತಾಗಿದೆ ಎಂದು ನಾವು ಯೋಚಿಸುತ್ತಾ ಇದ್ದರೆ, ಸೈತಾನನು ನಮ್ಮನ್ನು ಚೆನ್ನಾಗಿ ವಂಚಿಸಿಬಿಟ್ಟಿದಾನೆ ಎಂಬುದಕ್ಕೆ ಸಂಶಯವೇ ಇಲ್ಲ.

ದೇವರ ಆಶೀರ್ವಾದ ಮತ್ತು ದೇವರ ಮೆಚ್ಚುಗೆ ಈ ಎರಡೂ ಸಂಪೂರ್ಣವಾಗಿ ಬೇರೆ ಬೇರೆಯಾಗಿವೆ. ನಾವು ಭೂಲೋಕದ ಓಟವನ್ನು ಓಡಿ ಮುಗಿಸಿದಾಗ, ಹೊಂದಿಕೊಳ್ಳಬೇಕಾದ ಸಾಕ್ಷಿ ಯಾವುದೆಂದರೆ ಹನೋಕನು ಭೂಮಿಯನ್ನು ಬಿಟ್ಟು ಹೋದಾಗ ಹೊಂದಿದ ಸಾಕ್ಷಿಯಾಗಿರಬೇಕು. "ಅವನು ದೇವರನ್ನು ಮೆಚ್ಚಿಸಿದನು" (ಇಬ್ರಿಯ 11:5) ಎಂಬ ಸಾಕ್ಷಿಯೇ ಇದಾಗಿತ್ತು. ಮೂರೇ ಪದಗಳಷ್ಟೆ; ಆದರೆ ಈ ಸಾಕ್ಷಿಗಿಂತ ಬಲವಾದ ಸಾಕ್ಷಿಯನ್ನು ಒಬ್ಬ ಮನುಷ್ಯನು ತನ್ನ ಭೂಲೋಕ ಜೀವಿತದಲ್ಲಿ ಹೂಂದಿಕೊಳ್ಳಲಾರನು. ಇದೇ ಸಾಕ್ಷಿಯನ್ನು ಯೇಸುವೂ ಮತ್ತು ಪೌಲನೂ ಹೊಂದಿದರು. "ದೇವರಿಂದ ಆಶೀರ್ವದಿಸಲ್ಪಟ್ಟವನು" ಎಂಬ ಸಾಕ್ಷಿಯಲ್ಲಿ ಯಾವ ಬೆಲೆಯೂ ಇಲ್ಲವೇ ಇಲ್ಲ; ಏಕೆಂದರೆ ಲೋಕದಲ್ಲಿ ಇರುವ ಕೋಟಿ ಕೋಟಿ ಅವಿಶ್ವಾಸಿಗಳು ಸಹ ಇದೇ ಸಾಕ್ಷಿಯನ್ನು ಹೊಂದಬಹುದಾಗಿದೆ. ಇಂದು ದೇವರು, ತನ್ನ ಆಶೀರ್ವಾದವನ್ನು ಮಾತ್ರವಲ್ಲದೇ, ತನ್ನ ಮೆಚ್ಚುಗೆಯನ್ನೂ ಹೊಂದಿಕೊಳ್ಳಲು ತವಕಿಸುವವರನ್ನು ಎದುರು ನೋಡುತ್ತಿದ್ದಾರೆ.