ನಿನ್ನ ವೈರಿಯನ್ನು ತಿಳಿದುಕೋ

ಬರೆದಿರುವವರು :   ಝ್ಯಾಕ್ ಪೂನನ್
    Download Formats:

ಅಧ್ಯಾಯ
ಈ ಪುಸ್ತಕವೂ ನೀವೂ

ಈ ಪುಸ್ತಕವು ಒಂದು ದೊಡ್ಡ ಯುವ ವಿದ್ಯಾರ್ಥಿಗಳ ಗುಂಪಿಗೆ ಕೊಡಲ್ಪಟ್ಟ ಸಂದೇಶಗಳನ್ನು ಒಳಗೊಂಡಿವೆ. ಈ ಸಂದೇಶಗಳು ಅವರು ಮಾತಾಡುವ ಶೈಲಿಯಲ್ಲಿ ಕೊಡಲ್ಪಟ್ಟಿವೆ.

ಈ ದಿನಗಳಲ್ಲಿ ಯೌವನಸ್ಥರು, ಸೈತಾನನು ಆಕ್ರಮಿಸುವ ಗುರಿ ಹಲಗೆಗಳಾಗಿದ್ದಾರೆ. ಸೈತಾನನು ಎಲ್ಲಾ ಕಡೆ ಹೋಗಿ ಈ ದಿನದ ಯೌವನಸ್ಥರನ್ನು ಅಪವಿತ್ರತೆಯಿಂದ, ಕಹಿಭಾವನೆಯಿಂದ, ಹೊಟ್ಟೇಕಿಚ್ಚಿನಿಂದ, ಸ್ವಾರ್ಥ, ಆಕಾಂಕ್ಷೆ ಮತ್ತು ಆರ್ಥಿಕವಾದವುಗಳಿಂದ, ಇಲ್ಲದಿದ್ದರೆ ಇವುಗಳಲ್ಲಿ ಯಾವುದೂ ಅಲ್ಲದಿದ್ದರೂ ಕನಿಷ್ಠ ಅಹಂಕಾರದಿಂದ, ಸ್ವನೀತಿಯಿಂದ ಮತ್ತು ಕಪಟತನದಿಂದ ಕೆಡಿಸಲು ನಿಶ್ಚಯ ಪಡಿಸಿಕೊಂಡಿದ್ದಾನೆ.

ನಾವು ಸೈತಾನನ ಒಳಸಂಚುಗಳ ಅಥವಾ ತಂತ್ರಗಳ ವಿಷಯದಲ್ಲಿ ಅರಿವಿಲ್ಲದವರಾಗಿರಬಾರದು.

ಸೈತಾನನು ನಮ್ಮ ಕರ್ತನಾದ ಯೇಸುವಿನಿಂದ ಶಿಲುಬೆ ಮೇಲೆ ಸೋಲಿಸಲ್ಪಟ್ಟನು. ಈಗ ನಮ್ಮಕರೆಯು ನಾವು ಹೋದ ಕಡೆಯೆಲ್ಲಾ ಅಂಧಕಾರದ ಶಕ್ತಿಯ ಮೇಲೆ ಆ ಜಯವನ್ನು ದಾಖಲಿಸುವುದೇ ಆಗಿದೆ. ನೀವು ಇದನ್ನು ಮಾಡುವುದರಲ್ಲಿ ಆಸಕ್ತರಾಗಿದ್ದರೆ ಈ ಪುಸ್ತಕವನ್ನು ಓದಿ.

.

ಅಧ್ಯಾಯ
ನಿಮಗೆ ತಿಳಿದಿದೆಯೋ:

  • 1. ಸೈತಾನನು ಹೇಗೆ ಉತ್ಪತ್ತಿಯಾದನು?
  • 2. ಸೈತಾನನ ವಿಧಾನಗಳು ಯಾವವು?
  • 3. ವಿಶ್ವಾಸಿಗಳನ್ನು ಸೈತಾನನು ಹೇಗೆ ವಂಚಿಸುತ್ತಾನೆ?
  • 4. ತನ್ನ ಉದ್ದೇಶಗಳಿಗಾಗಿ ದೇವರು ಸೈತಾನನನ್ನು ಹೇಗೆ ಉಪಯೋಗಿಸುತ್ತಾನೆ?
  • 5. ಎಲ್ಲಾ ಸಮಯಗಳಲ್ಲಿ ನೀವು ಸೈತಾನನನ್ನು ಜಯಿಸುವುದು ಹೇಗೆ?
  • ಉತ್ತರಗಳನ್ನು ತಿಳಿಯಲು ಈ ಪುಸ್ತಕವನ್ನು ಓದಿರಿ.............

    ಅಧ್ಯಾಯ 1
    ನೀವು ಸೈತಾನನ ಬಗ್ಗೆ ಏಕೆ ತಿಳಿದಿರಬೇಕು?

    ಬಹಳಷ್ಟು ಯೌವನಸ್ಥರು ಮೊದಲು ಎಂದೂ ತಿಳಿಯದಿದ್ದ ಕೆಲವು ಸತ್ಯಗಳನ್ನು ದೇವರ ವಾಕ್ಯದಿಂದ ನಿಮಗೆ ತೋರಿಸಲು ಇಷ್ಟಪಡುತ್ತೇನೆ. ಇದು ನಮ್ಮ ಆತ್ಮಗಳ ಶತ್ರುವಿಗೆ ಸಂಬಂಧಪಟ್ಟದ್ದು.

    ನೀವು ರಕ್ಷಣೆಯ ಕುರಿತು ಮತ್ತು ಕರ್ತನಾದ ಯೇಸು ಕ್ರಿಸ್ತನು ನಮಗೋಸ್ಕರ ಮಾಡಿದ್ದನ್ನು ಕುರಿತು ಬಹಳಷ್ಟು ಕೇಳಿದ್ದೀರಿ. ಆದರೆ ಬಹು ಮಟ್ಟಿಗೆ ಸೈತಾನನ ಕುರಿತು ಕೇಳದೆ ಇರಬಹುದು. ಏಕೆಂದರೆ ಅತಿ ಹೆಚ್ಚಿನ ಪ್ರಸಂಗಿಗಳು ಸೈತಾನನ ಬಗ್ಗೆ ಪ್ರಸಂಗಿಸಲು ಇಷ್ಟಪಡುವುದಿಲ್ಲ.

    ನಾನು ಸೈತಾನನ ಬಗ್ಗೆ ಮಾತಾಡಲು ಇಷ್ಟಪಡುತ್ತೇನೆ. ಯಾಕೆಂದರೆ ಸತ್ಯವೇದವು ನಮಗೆ (1 ಪೇತ್ರ 5:8ರಲ್ಲಿ) "ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ" ಎಂದು ಹೇಳುತ್ತದೆ.

    ಯುದ್ಧರಂಗ ಸ್ಥಿತಿಯ ಬಹು ಮುಖ್ಯವಾದ ಒಂದು ಸಾಮಾನ್ಯ ನಿಯಮವು-ನಿಮ್ಮ ವೈರಿಯನ್ನು ತಿಳಿದಿರುವುದೇ ಆಗಿದೆ. ನೀವು ಯುದ್ಧ ಮಾಡುತ್ತಿದ್ದರೆ, ನಿಮ್ಮ ವೈರಿಯ ಬಗ್ಗೆ ಬಹಳಷ್ಟು ಸಮಾಚಾರ ನಿಮ್ಮಲ್ಲಿದ್ದರೆ, ಅದು ಯುದ್ಧವನ್ನು ಬಹಳ ಸುಲಭವಾಗಿರುವಂತೆ ಮಾಡುತ್ತದೆ. ಒಂದು ವೇಳೆ ನಿಮ್ಮ ವೈರಿಯ ಬಗ್ಗೆ ಬಹಳ ಸ್ವಲ್ಪವಾಗಿ ತಿಳಿದಿದ್ದರೆ ಯುದ್ಧವು ಬಹಳ ಕಠಿಣವಾಗಿರುತ್ತದೆ.

    ಅಥವಾ, ಇನ್ನೂಂದು ಉದಾಹರಣೆ ಉಪಯೋಗಿಸುವುದಾದರೆ, ಪರೀಕ್ಷೆಗೆ ಬರುವ ಎಲ್ಲಾ ಪ್ರಶ್ನೆಗಳನ್ನು ನೀವು ಮುಂಚಿತವಾಗಿ ತಿಳಿದಿದ್ದರೆ, ಪರೀಕ್ಷೆಯು ನಿಮಗೆ ಬಹಳ ಸುಲಭವಾಗಿರುತ್ತದೆ.

    ಇದು ಕ್ರೈಸ್ತ ಜೀವಿತದಲ್ಲಿಯೂ ಖಂಡಿತವಾಗಿ ಅದೇ ರೀತಿಯಾಗಿರುತ್ತದೆ. ನೀವು ನಿಮ್ಮ ವೈರಿಯನ್ನು ತಿಳಿದಿದ್ದರೆ, ನೀವು ಅವನನ್ನು ಜಯಿಸಬಲ್ಲಿರಿ ಮತ್ತು ಪ್ರತಿ ಶೋಧನೆಯಲ್ಲಿಜಯಶಾಲಿಗಿಂತ ಹೆಚ್ಚಿನವರಾಗಿರುವಿರಿ.

    ತಮ್ಮ ಜೀವನವಿಡೀ ಯೇಸುವನ್ನು ಹಿಂಬಾಲಿಸಲು ಹೋರಾಟಮಾಡಿ ಪ್ರಯತ್ನಿಸುವ ಅನೇಕ ಕ್ರೈಸ್ತರಿದ್ದಾರೆ, ಆದರೆ ಅವರು ವಿಫಲರಾಗಿದ್ದಾರೆ. ಇದಕ್ಕೆ ಒಂದು ಮುಖ್ಯ ಕಾರಣವೇನೆಂದರೆ, 'ಅವರು ತಮ್ಮ ವೈರಿಯ ಬಗ್ಗೆ ಏನೂ ತಿಳಿಯದವರಾಗಿರುವುದೇ' ಎಂದು ಭಾವಿಸುತ್ತೇನೆ.

    ವೈದ್ಯಕೀಯ ವಿದ್ಯಾಭ್ಯಾಸವು ಮುಖ್ಯವಾದುದು ಎಂದು ನಾವೆಲ್ಲಾ ತಿಳಿದಿದ್ದೇವೆ. ವೈದ್ಯಕೀಯ ವಿಜ್ಞಾನವು ನಮ್ಮ ಸಂತತಿಯಲ್ಲಿ ಕೋಟ್ಯಾಂತರ ಜನರನ್ನು ಕಾಯಿಲೆಗಳಿಂದ ಸ್ವಸ್ಥಮಾಡಿದೆ ಮತ್ತು ಅನೇಕರನ್ನು ಅಕಾಲ ಮರಣದಿಂದ ರಕ್ಷಿಸಿದೆ. ವೈದ್ಯಕೀಯ ವಿಜ್ಞಾನಿಗಳು ಮಾನವ ಶರೀರದ ಎಲ್ಲಾ ವೈರಿಗಳನ್ನು ಹಾಗೂ ಶರೀರದ ಮೇಲೆ ಅವುಗಳ ಧಾಳಿಯ ವಿಧಾನವನ್ನು ಕುರಿತು ಅಭ್ಯಾಸ ಮಾಡಿದ್ದರಿಂದಲೇ ಇದು ಸಾಧ್ಯವಾಗಿದೆ. ಇದು ನಮ್ಮ ದೇಹಾರೋಗ್ಯದ ವೈರಿಗಳಾದ ಅಣುಜೀವಿಗಳು ಮತ್ತು ವಿಷ (ನಂಜು) ಪದಾರ್ಥಗಳ ಬಗ್ಗೆ ಮಾಡಿರುವ ಆಳವಾದ ವಿಧ್ಯಾಭ್ಯಾಸದ ಮೂಲಕ ಮನುಷ್ಯನ ದೇಹದ ಆರೋಗ್ಯವನ್ನು ಸುಧಾರಿಸಿದೆ. ನಮ್ಮ ದೇಹಾರೋಗ್ಯದ ವೈರಿಗಳನ್ನು ಕೊಲ್ಲಬಹುದಾದ ಮತ್ತು ಅವುಗಳನ್ನು ಮಾನವ ಶರೀರದಿಂದ ತೆಗೆದುಹಾಕುವ ಔಷಧಿಗಳನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದಾರೆ.

    ನಮ್ಮ ಪ್ರಾಕೃತಿಕ ಶರೀರದಲ್ಲಿ ಯಾವುದು ಸತ್ಯವಾಗಿದೆಯೋ ಅದು ಬಹಳಷ್ಟು ನಮ್ಮ ಅಂತರಾತ್ಮದಲ್ಲಿಯೂ ಸತ್ಯವಾಗಿದೆ. ನಾವು ಸೈತಾನನನ್ನು ನಮ್ಮಆತ್ಮದಿಂದ ಹೊರಕ್ಕೆ ಹೊರಡಿಸಿ ಅದನ್ನು ದೇವರಿಗಾಗಿ ಶುದ್ಧವಾಗಿ ಇಟ್ಟುಕೊಳ್ಳಬೇಕೆಂದರೆ, ನಮ್ಮ ಆತ್ಮದ ಶತ್ರುವಿನ ಬಗ್ಗೆ ಸಹ ಅಭ್ಯಾಸ ಮಾಡುವುದು ಅಗತ್ಯ.

    ಸತ್ಯವೇದವು ಸೈತಾನನ ಬಗ್ಗೆ ನಮಗೆ ಬಹಳಷ್ಟು ಹೇಳುತ್ತದೆ. ದೇವರು ಆದಾಮ ಮತ್ತು ಹವ್ವಳನ್ನು ಉಂಟು ಮಾಡಿದ ಕೂಡಲೇ ಸತ್ಯವೇದವು ಮಾತಾಡುವ ಮುಂದಿನ ವಾಸ್ತವಿಕ ಸಂಗತಿಯು ಸೈತಾನನ ಕುರಿತಾಗಿದೆ. ಆದಾಮ ಹವ್ವರು ಏದೆನ್ ತೋಟದಲ್ಲಿ ಏನು ಮಾಡಿದರೆಂಬುದರ ಬಗ್ಗೆ ಸತ್ಯವೇದವು ನಮಗೆ ಏನೂ ತಿಳಿಸುವುದಿಲ್ಲ. ಆದರೆ ಸೈತಾನನು ಏದೆನ್ ತೋಟದೊಳಗೆ ಬಂದು ಪಾಪ ಮತ್ತು ಗಲಿಬಿಲಿಯನ್ನು ತಂದು ಆದಾಮ ಮತ್ತು ಹವ್ವಳನ್ನು ದೇವರಿಂದ ದೂರ ನಡಿಸಿದ್ದನ್ನು ಸತ್ಯವೇದ ನೇರವಾಗಿ ನಮಗೆ ತಿಳಿಸುತ್ತದೆ.

    ಈ ದಿನ ಲೋಕದಲ್ಲಿ ಪಾಪ, ಬಲಾತ್ಕಾರ ಮತ್ತು ಕೆಟ್ಟದು ಕಂಡು ಬರುವುದಕ್ಕೆ ಕಾರಣ ಸೈತಾನನು ಏದೆನಿನೊಳಗೆ ಪ್ರವೇಶಮಾಡಿದ್ದೇ ಆಗಿದೆ. (ಆದಿಕಾಂಡ 3)

    ಸತ್ಯವೇದವು ನಮಗೆ ಸ್ತ್ರೀಪುರುಷರ ಸೃಷ್ಟಿಯ ಕುರಿತು ತಿಳಿಸಿದ ತಕ್ಷಣವೇ ಏಕೆ ಸೈತಾನನ ಕುರಿತು ನಮಗೆ ತಿಳಿಸುತ್ತದೆ? ಯಾಕೆಂದರೆ, ನಾವು ಸೈತಾನನ ಕುರಿತು ತಿಳಿದು, ಹೇಗೆ ನಾವು ಎಚ್ಚವಾಗಿರಬೇಕೆಂಬುದನ್ನು ದೇವರು ನಮಗೆ ತೋರಿಸಲು ಇಷ್ಟಪಡುತ್ತಾನೆ. ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ ಎಂಬುದನ್ನು ನಾವು ನೋಡಿದೆವು. ಒಂದು ವೇಳೆ ದಿನ ಪತ್ರಿಕೆಗಳು ಸಿಂಹವೊಂದು ಪ್ರಾಣಿ ಸಂಗ್ರಾಹಾಲಯದಿಂದ ತಪ್ಪಿಸಿಕೊಂಡು, ನಿಮ್ಮ ಪಟ್ಟಣದ ಬೀದಿಗಳಲ್ಲಿ ತಿರುಗಾಡುತ್ತಿದೆ ಎಂದು ಸುದ್ದಿ ತಿಳಿಸಿದರೆ, ಸಿಂಹವು ಪಟ್ಟಣದ ಯಾವ ಭಾಗದಲ್ಲಿ ಇದೆ ಎಂದು ತಿಳಿಯುವುದು ಆ ಭಾಗವನ್ನು ಬಿಟ್ಟು ಬಿಡಲು ನಿಜವಾಗಿ ಇದು ಸಹಾಯಕವಾಗಿರುತ್ತದಲ್ಲವೇ? ನಿಶ್ಚಯವಾಗಿ ಇದೇ ರೀತಿ ಸೈತಾನನು ಚುರುಕಾಗಿ ಚಟುವಟಿಕೆಯಿಂದ ಇರುವ ಭಾಗಗಳನ್ನು ನೀವು ತಿಳಿದರೆ, ಅದು ನಿಮ್ಮನ್ನು ಅನೇಕ ತೊಂದರೆಗಳಿಂದ ರಕ್ಷಿಸುತ್ತದೆ.

    ಬಹಳ ವಿಶ್ವಾಸಿಗಳು ಪದೇ ಪದೇ ನಿರಾಶರಾಗುವ ವೇಳೆಗಳು ಉಂಟು. ನಾವು ಒಂದು ವಿಷಯವನ್ನು ಗ್ರಹಿಸಿಕೊಳ್ಳಬೇಕುಃ ನಿರಾಶೆಯು ದೇವರಿಂದ ಎಂದಿಗೂ ಬರುವುದಿಲ್ಲ ಎಂಬುದು. ಇದು ಯಾವಾಗಲೂ ಸೈತಾನನಿಂದ ಬರುತ್ತದೆ. ಇದೇ ರೀತಿಯಲ್ಲಿ ಜಗಳ, ಬಲತ್ಕಾರ, ದ್ವೇಷ, ಅಸೂಯೆ, ಕಹಿಭಾವನೆ, ಕೆಟ್ಟದ್ದಾಗಿ ಮಾತಾಡುವುದು, ದೂರು ಹೇಳುವುದು. ಗುಣುಗುಟ್ಟುವಿಕೆ, ಅಧಿಕಾರಿಗಳ ವಿರುದ್ಧ ತಿರುಗಿ ಬೀಳುವುದು ಮತ್ತು ಬೇರೆ ಎಲ್ಲಾ ತರದ ದುಷ್ಟತನದ ಉತ್ಪತ್ತಿ (ಮೂಲಸ್ಥಾನ) ಸೈತಾನನಲ್ಲಿದೆ. ನಮ್ಮ ವೈರಿಯ ಕುರಿತು ತಿಳಿಯುವುದು ಒಳ್ಳೇಯದು. ಆದ್ದರಿಂದ ನಮ್ಮ ಜೀವಿತದಲ್ಲಿ ಈ ಕೆಟ್ಟತನಗಳನ್ನು ನಾವು ಜಯಿಸಬಹುದು.

    ಹೊಸ ಒಡಂಬಡಿಕೆಯ ಪ್ರಾರಂಬದ ಪುಟಗಳಲ್ಲಿ ಸಹ ನಾವು ಸೈತಾನನ ಕುರಿತು ಓದುತ್ತೇವೆ. ಯೇಸುವಿನ ನೀರಿನ ದೀಕ್ಷಾಸ್ನಾನ ಮತ್ತು ಪವಿತ್ರಾತ್ಮನ ಅಭಿಷೇಕ ಆದ ಕೂಡಲೇ ಸೈತಾನನು ಯೇಸುವನ್ನು ಅಡವಿಯಲ್ಲಿ ಎದುರಿಸುವುದನ್ನು ಮತ್ತು ಶೋಧಿಸುವುದನ್ನು ನಾವು ಓದುತ್ತೇವೆ.

    ಸೈತಾನನು ಯೇಸುವನ್ನು ಶೋಧಿಸುವುದರ ಕುರಿತು ನಮಗೆ ಈ ವಿವರಗಳು ಯಾಕೆ ಕೊಡಲ್ಪಟ್ಟಿವೆ? ನಮಗೆ ಆತ್ಮದ ವೈರಿಯಾದ ಸೈತಾನನ ಕುಯುಕ್ತಿ ಮತ್ತು ಬಲದ ಬಗ್ಗೆ ನಾವು ಅಜ್ಞಾನಿಗಳಾಗಿರಬಾರದೆಂದೇ ಈ ವಿವರಗಳು ನಮಗೆ ಕೊಡಲ್ಪಟ್ಟಿವೆ.

    ಸೈತಾನನ ಕುರಿತು ಸತ್ಯವೇದವು ಏನು ಬೋಧಿಸುತ್ತದೆ ಎಂದು ನೀವು ತಿಳಿದ ಮೇಲೆ ಜಾಗರೂಕರಾಗಿರುವಿರಿ. ಯೌವನಸ್ಥರು ಸೈತಾನನ ಬಗ್ಗೆ ತಿಳಿಯುವುದು ಮುಖ್ಯವಾಗಿದೆ ಮತ್ತು ನೀವು ಇತರ ಜನರಂತೆ ಇನ್ನೆಂದಿಗೂ ಅವನಿಗೆ ಭಯಪಡುವುದಿಲ್ಲ.

    ಅನೇಕರು ಸೈತಾನನಿಗೆ ಭಯಪಡುತ್ತಾರೆ. ಕಾರಣ, ಅವನ ಕುರಿತು ಸತ್ಯವೇದವು ಬೋಧಿಸುವುದನ್ನು ಅವರು ತಿಳಿಯದವರಾಗಿದ್ದಾರೆ. ಅವರು ತಮ್ಮ ಮೇಲೆ ಮಾಟ, ಮಂತ್ರ ಮಾಡುವವರ ಬಗ್ಗೆ ಭಯಪಡುತ್ತಾರೆ. ಯಾಕೆಂದರೆ, ಕಲ್ವಾರಿಯಲ್ಲಿ ನಮ್ಮ ಕರ್ತನಾದ ಯೇಸುವಿನಿಂದ ಸೈತಾನನು ಸೋಲಿಸಲ್ಪಟ್ಟನೆಂದು ಅವರು ತಿಳಿದಿಲ್ಲ. ನಮ್ಮೆಲ್ಲರಿಗೋಸ್ಕರ ಶಿಲುಬೆಯ ಮೇಲೆ ಕರ್ತನು ಮಾಡಿದ ಎಲ್ಲವನ್ನು ಕಾಣಲು ಒಂದು ಸಾರಿ ನಿಮ್ಮ ಕಣ್ಣುಗಳು ತೆರೆಯಲ್ಪಟ್ಟ ಮೇಲೆ ನೀವು ಇನ್ನು ಎಂದಿಗೂ ಸೈತಾನನಿಗೆ ಭಯಪಡುವುದಿಲ್ಲ.

    ಯೇಸು ಸ್ವಾಮಿ ಸಭಾಮಂದಿರದಲ್ಲಿ ಪ್ರಸಂಗಿಸುವಾಗ ದೆವ್ವಹಿಡಿದವನ ಮೂಲಕ ಅಡ್ಡಿ ಮಾಡಿದ ಹಾಗೆ ಕೆಲವು ವೇಳೆ ಸೈತಾನನು ದೆವ್ವಹಿಡಿದ ಜನರ ಮುಖಾಂತರವಾಗಿ ಕ್ರೈಸ್ತಕೂಟಗಳನ್ನು ಭಂಗಪಡಿಸಲು ಪ್ರಯತ್ನಿಸುತ್ತಾನೆ. ಅವನನ್ನು ಎಂದಿಗೂ ಹಾಗೆ ಮಾಡಲು ಅನುಮತಿಸಬಾರದು. ಒಂದು ಸಾರಿ ನಮ್ಮ ಕೂಟದ ಕೋಣೆಯಲ್ಲಿ ಸತ್ಯವೇದ ಅಧ್ಯಯನದ ಮಧ್ಯದಲ್ಲಿಯೇ ದೆವ್ವ ಹಿಡಿದ ಒಬ್ಬ ಮನುಷ್ಯನು ಕೋಣೆಯ ಒಂದು ಕಡೆಯಿಂದ ಹಾವಿನಂತೆ ನೆಲದ ಮೇಲೆ ತೆವಳುತ್ತಾ ಮುಂದಕ್ಕೆ ಬಂದು ಕೂಟವನ್ನು ಭಂಗಪಡಿಸಲು ಪ್ರಯತ್ನಿಸಿದನು. ದೆವ್ವವು ಯೇಸುವಿನ ಹೆಸರಿನಲ್ಲಿ ಗದರಿಸಲ್ಪಟ್ಟ ಕೂಡಲೇ ಆ ಮನುಷ್ಯನು ಅಲ್ಲೇ ಆ ಸ್ಥಳದಲ್ಲಿ ನೆಲದ ಮೇಲೆ ಸದ್ದಿಲ್ಲದೆ ಬಿದ್ದು ಗಾಢವಾಗಿ ನಿದ್ರಿತನಾದನು. ಸತ್ಯವೇದ ಅಧ್ಯಯನ ಮುಗಿದ ನಂತರ ನಾವೆಲ್ಲಾ ಕಡೆಯಲ್ಲಿ 'ಆಮೆನ್' ಎಂದು ಹೇಳಿದಾಗ, ಆ ಮನುಷ್ಯನು ನಿದ್ರೆಯಿಂದ ಎಚ್ಚೆತ್ತನು. ಆ ಮೇಲೆ ನಾವು ಅವನೊಂದಿಗೆ ಮಾತಾಡಿದೆವು. ನಮ್ಮ ಸತ್ಯವೇದ ಅಧ್ಯಯನವನ್ನು ಸೈತಾನನು ತನ್ನ ದೂತರ ಮೂಲಕ ಭಂಗಪಡಿಸಲು ನಾವು ಅನುಮತಿಸಲಿಲ್ಲ.

    ಒಂದು ಸಾರಿ ಬಹಿರಂಗ ಕೂಟವು ನಡೆಯುತ್ತಿದ್ದಾಗ, ಆಗ ತಾನೇ ಬಹಳ ಮುಖ್ಯವಾದ ವಿಷಯವನ್ನು ನಾನು ಹೇಳುತ್ತಿರಲು ಒಬ್ಬ ಮನುಷ್ಯನು ಅಕಸ್ಮಾತಾಗಿ ವೇದಿಕೆಯ ಮುಂದೆ ನರ್ತನ ಮಾಡುವುದಕ್ಕೆ ಪ್ರಾರಂಭಿಸಿದನು. ನಾನು ಭಾಷಾಂತರ ಮಾಡುವವರ ಮೂಲಕ ಅವನನ್ನು ಕುಳಿತುಕೊಳ್ಳಲು ಬೇಡಿಕೊಂಡಾಗ ನನ್ನ ಬೇಡಿಕೆಯನ್ನು ಅವನು ಅಲಕ್ಷ್ಯ ಮಾಡಿದನು. ನಂತರ, ಅವನಲ್ಲಿರುವ ದೆವ್ವವನ್ನು ನಾವು ಯೇಸುವಿನ ಹೆಸರಿನಲ್ಲಿ ಗದರಿಸಿದಾಗ ಆ ಮನುಷ್ಯನು ಹೋಗಿ ನಿಶ್ಯಬ್ಧವಾಗಿ ಕುಳಿತುಕೊಂಡನು.

    ಹೌದು, ದೆವ್ವಗಳು ಯೇಸುವಿನ ಹೆಸರಿನಲ್ಲಿ ಆಜ್ಞಾಪಿಸಲ್ಪಟ್ಟಾಗ, ವಿಧೇಯರಾಗಲೇಬೇಕು. ಏಕೆಂದರೆ ಅವೆಲ್ಲವು ಕಲ್ವಾರಿಯಲ್ಲಿ ಯೇಸುವಿನಿಂದ ಸೋಲಿಸಲ್ಪಟ್ಟಿವೆ.

    ಕಲ್ವಾರಿ ಶಿಲುಬೆಯಲ್ಲಿ ಸೈತಾನನನ್ನು ಸೋಲಿಸಿದ ಶಕ್ತಿಯುಳ್ಳ ಯೇಸು ಕ್ರಿಸ್ತನ ಹೆಸರಿನಲ್ಲಿ ಬಲವಿದೆ ಎಂಬುದನ್ನು ನೀವು ತಿಳಿಯುವುದು ಪ್ರಾಮುಖ್ಯವಾದದ್ದು. ನೀವು ಸೈತಾನನಿಗೆ ಎಂದಿಗೂ ಭಯಪಡುವ ಅವಶ್ಯಕತೆಯಿಲ್ಲ. ನೀವು ನಿಮ್ಮ ವೈರಿಯನ್ನು ತಿಳಿಯದೆ ಹೋದಾಗ ಅವನು ನಿಮಗೆ ಏನಾದರೂ ಮಾಡಬಹುದು ಅಥವಾ ಬೇರೆಯವರು ನಿಮಗೆ ಏನಾದರೂ ಮಾಡಬಹುದು ಎಂಬ ಭಯದಲ್ಲಿ ಜೀವಿಸುವಿರಿ. ಆದರೆ ಯೇಸು ನಿಮ್ಮ ಪೂರ್ಣ ಜೀವಿತದ ಒಡೆಯನಾಗಿದ್ದರೆ, ಅವನು ನಿಮ್ಮನ್ನು ಮುಟ್ಟಲು ಸಾಧ್ಯವಿಲ್ಲ. ಕಾರಣ, ಯೇಸುಸ್ವಾಮಿ ಅವನನ್ನು ಶಿಲುಬೆ ಮೇಲೆ ಸೋಲಿಸಿದಾಗ ಅವನ ಶಕ್ತಿ ಸಂಪೂರ್ಣವಾಗಿ ಅವನಿಂದ ಕಸಿದುಕೊಳ್ಳಲ್ಪಟ್ಟಿತು.

    ಅಧ್ಯಾಯ 2
    ಸೈತಾನನ ಉತ್ಪತ್ತಿ

    ದೇವರು ಅನಂತಕಾಲ ಜೀವಿಸುವವನಾಗಿದ್ದಾನೆಂದು ನಾವೆಲ್ಲ ತಿಳಿದಿದ್ದೇವೆ. ಸತ್ಯವೇದವು "ಆದಿಯಲ್ಲಿ ದೇವರು" (ಆದಿಕಾಂಡ 1:1) ಎಂಬ ಹೇಳಿಕೆಯೊಂದಿಗೆ ಪ್ರಾರಂಭವಾಗುತ್ತದೆ. ಅವೇ ಸತ್ಯವೇದದಲ್ಲಿನ ಮೊದಲ ಎರಡು ಪದಗಳಾಗಿವೆ. ಅವು ಗತಿಸಿದ ನಿತ್ಯತ್ವದ ಯುಗಗಳಿಗೆ ಸಂಬಂಧಿಸುವಂಥದ್ದಾಗಿವೆ. ನಮ್ಮ ಮನಸ್ಸು ಸಹ ದೂರವಾಗಿರುವ ಹಿಂದಿನವುಗಳನ್ನು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ, ಯಾಕೆಂದರೆ ನಮ್ಮ ಮನಸ್ಸು ಸಮಯವನ್ನು ಮಾತ್ರ ಗ್ರಹಿಸಿಕೊಳ್ಳುವಂಥದ್ದಾಗಿದೆ. ದೇವರು ಸಮಯ ಪ್ರಾರಂಭಗೊಳ್ಳುವುದಕ್ಕೆ ಮುಂಚೆ ಜೀವಿಸಿದ್ದನು.

    ಆದರೆ ಸೈತಾನನು ಸಮಯ ಪ್ರಾರಂಭವಾಗುವುದಕ್ಕೆ ಮುಂಚೆ ಜೀವಿಸಿರಲಿಲ್ಲ. ಸೈತಾನನು ಸೃಷ್ಟಿ ಮಾಡಲ್ಪಟ್ಟವನು. ಆದರೆ ದೇವರು ಕೆಟ್ಟದ್ದನ್ನು ಉಂಟು ಮಾಡಿದನು ಎಂದು ಅರ್ಥವೋ? ಅದು ಅಸಾಧ್ಯವಾಗಿರುವುದು. ದೇವರು ಕೆಟ್ಟದ್ದಾಗಿರುವಂಥ ಯಾವುದನ್ನುಎಂದಿಗೂ ಉಂಟುಮಾಡಲಾರನು. ಆತನು ಉಂಟುಮಾಡುವಂಥದ್ದೆಲ್ಲವೂ ಪರಿಪೂರ್ಣವಾದದ್ದು. ಆದಾಮ ಹವ್ವರೂ ಸಹ ಸೃಷ್ಟಿಸಲ್ಪಟ್ಟಾಗ ಪರಿಪೂರ್ಣರಾಗಿದ್ದರು. ಅದರಂತೆ ಸೈತಾನನು ಸಹ ಸೃಷ್ಟಿಸಲ್ಪಟ್ಟಾಗ ಪರಿಪೂರ್ಣನಾಗಿದ್ದನು. ನಂತರವೇ 'ಅವನು ಉದಯ ನಕ್ಷತ್ರ' ಅಥವಾ ಲೂಸಿಫರ ಎಂದು ಗೊತ್ತು ಮಾಡಲ್ಪಟ್ಟನು (ಯೆಶಾಯ 14:12). ಈಗ ಆ ಹೆಸರಿಗೆ ಕೆಟ್ಟ ಅರ್ಥವಿದೆ. ಆದರೆ ಹಿಂದೆ ಸೃಷ್ಟಿಸಲ್ಪಟ್ಟಾಗ ಅದು ಹಾಗಿರಲಿಲ್ಲ.

    ಅವನು ದೇವದೂತರನ್ನು ದೇವರ ಆರಾಧನೆಯಲ್ಲಿ ನಡೆಸಲು ಅವರಿಗೆ ನಾಯಕನಾಗಿ ಸೃಷ್ಟಿಸಲ್ಪಟ್ಟನು. ಅವನು ಸೃಷ್ಟಿಸಲ್ಪಟ್ಟಾಗ ದೇವರು ಅವನಿಗೆ ಬಹಳಷ್ಟು ಅದ್ಭುತ ಸಾಮರ್ಥ್ಯಗಳನ್ನು ಹಾಗೂ ಪ್ರಭುತ್ವಗಳನ್ನು ಕೊಟ್ಟನು. ಆದರೆ ಅವನು ಪಾಪದೊಳಗೆ ಬಿದ್ದಾಗ ಸೈತಾನನಾದನು.

    ಆದರೂ ಸೈತಾನನು ಈಗಲೂ ಆ ಶಕ್ತಿಯನ್ನು ಹೊಂದಿದ್ದಾನೆ. ಕಾರಣ, ಅವನು ಬಿದ್ದಾಗ ದೇವರು ಅವನಿಂದ ಅವುಗಳನ್ನು ತೆಗೆದು ಬಿಡಲಿಲ್ಲ.

    ದೇವರು ಸೈತಾನನಿಂದ ಆ ಶಕ್ತಿಯನ್ನು ಯಾಕೆ ತೆಗೆದುಬಿಡಲಿಲ್ಲ ಎಂದು ನಾವು ಆಶ್ಚರ್ಯಪಡಬಹುದು. ಸಾಮಾನ್ಯವಾಗಿ ದೇವರು ತಾನು ಕೊಟ್ಟ ವರಗಳನ್ನು ಹಿಂದಕ್ಕೆ ತೆಗೆದುಕೊಳ್ಳದಿರುವುದೇ ಇದಕ್ಕೆ ಕಾರಣ. ನಾವು ಬಹುಮಾನ ಕೊಟ್ಟ ವ್ಯಕ್ತಿ ಒಂದು ದಿನ ನಮಗೆ ವಿರುದ್ಧವಾಗಿ ತಿರುಗಿದಾಗ ಸಹ ಮಾನವರಾದ ನಾವು ಸಾಧಾರಣವಾಗಿ ಅಂಥ ವ್ಯಕ್ತಿಯಿಂದ ಹಿಂದಕ್ಕೆ ತೆಗೆದುಕೊಳ್ಳುವುದಿಲ್ಲ.

    ಸೈತಾನನು ತನ್ನ ಶಕ್ತಿಯನ್ನು ಜನರಿಗೆ ಹಾನಿ ಮಾಡಲು ಉಪಯೋಗಿಸುತ್ತಾನೆ. ಇದಕ್ಕಾಗಿಯೇ ಅವನೊಂದಿಗೆ ಸಂಪರ್ಕ ಹೊಂದಿರುವ ಜನರು ಅದ್ಭುತ ಸಂಗತಿಗಳನ್ನು ಮಾಡಬಲ್ಲರು.

    ಸೈತಾನನ ಕುರಿತು - "ಆಹಾ, ಉದಯ ನಕ್ಷತ್ರವೇ ಆಕಾಶದಿಂದ ಹೇಗೆ ಬಿದ್ದೆ (ಹೊಳೆಯುವವನು - ಎಂಬುದು ಅವನ ಹೆಸರಾಗಿತ್ತು) ಬೆಳ್ಳಿಯೇ" (ಯೆಶಾಯ 14:12) ಎಂಬುದಾಗಿ ಬರೆಯಲ್ಪಟ್ಟಿದೆ.

    ದೇವರ ಸಾನಿಧ್ಯದಲ್ಲಿ ಲೂಸಿಫರನು ಸತತವಾಗಿ ದೇವದೂತರ ಶಿರಸ್ಸಿನಂತಿದ್ದನು. ಯಾಕೆ ಅವನು ಬಿದ್ದು ಹೋದನು? ಮುಂದಿನ ಎರಡು ವಚನಗಳಲ್ಲಿ ಕಾರಣವು ಕೊಡಲ್ಪಟ್ಟಿದೆಃ "ನೀನು ನಿನ್ನ ಮನಸ್ಸಿನಲ್ಲಿ 'ನಾನು ಆಕಾಶಕ್ಕೆ ಹತ್ತಿ ಉತ್ತರದಿಕ್ಕಿನ ಕಟ್ಟಕಡೆಯಿರುವ ಸುರಗ ಪರ್ವತದಲ್ಲಿ ನನ್ನ ಸಿಂಹಾಸನವನ್ನು ದೇವರ ನಕ್ಷತ್ರಗಳಿಗಿಂತ ಮೇಲೆ ಏರಿಸಿ ಆಸೀನಾಗುವೆನು... ಉನ್ನತೋನ್ನತನಿಗೆ ಸರಿಸಮಾನನಾಗುವೆನು' ಅಂದುಕೊಂಡಿದ್ದೆಯಲ್ಲಾ. ನೀನು ಅಧೋಲೋಕದ ಅಗಾಧ ಸ್ಥಳಗಳಿಗೆ ತಳ್ಳಲ್ಪಡುತ್ತಿದ್ದೀ" (ಯೆಶಾಯ 14:13,14).

    ಲೂಸಿಫರನು ಇತರ ಎಲ್ಲಾ ದೇವದೂತರಿಗಿಂತ ಹೆಚ್ಚಾಗಿ ವರಹೊಂದಿದವನು, ಬಹಳಸುಂದರನು ಹಾಗೂ ಹೆಚ್ಚು ಅದ್ಭುತ ಸಾಮರ್ಥ್ಯವನ್ನು ಹೊಂದಿದವನಾಗಿದ್ದನು. ತನ್ನ ಹೃದಯದಲ್ಲಿ ಗರ್ವವು ಪ್ರವೇಶಿಸುವತನಕ ದೇವ ದೂತರನ್ನು ದೇವರ ಆರಾಧನೆಯಲ್ಲಿ ನಡಿಸಿದನು. ನಂತರ, ಅವನು - "ಒಬ್ಬ ವ್ಯಕ್ತಿ ಮಾತ್ರ ನನ್ನ ಮೇಲಿರುವವನು ಅದು ಸ್ವತಃ ದೇವರೇ ಆಗಿದ್ದಾನೆ. ಆತನ ಮೇಲೆ ಸಹ ಅಧಿಕಾರ ಮಾಡುವೆನು" ಎಂಬುದಾಗಿ ಯೋಚಿಸಲು ಪ್ರಾರಂಭಿಸಿದನು.


    ಅವನ ಹೃದಯದಲ್ಲಿ ಬಂದಂಥ ಯೋಚನೆ ನಿಜವಾಗಿ ಮೂರ್ಖತನದ ಯೋಚನೆಯೇ ಆಗಿತ್ತು. ಅವನು ತನ್ನ ಸೃಷ್ಟಿಕರ್ತನಿಗಿಂತ ಮೇಲೆ ಏರಲು ಹೇಗೆ ಸಾಧ್ಯವಾದೀತು? ಆದರೆ, ಹಾಗೆಯೇ ಸೈತಾನನು ಬುದ್ಧಿವಂತನಂತೆ ಇದ್ದರೂ ಹೆಚ್ಚು ವಿಷಯಗಳಲ್ಲಿ ಅವನು ಮೂರ್ಖತನವನ್ನೇ ಮಾಡುತ್ತಿದ್ದಾನೆ ಮತ್ತು ಯೋಚಿಸುತ್ತಿದ್ದಾನೆ!!! ಆತ್ಮೀಕವಾಗಿ ಮಾತಾಡಬೇಕೆಂದರೆ, ಲೋಕದಲ್ಲಿ ಬಹಳ ಬುದ್ಧಿವಂತ ಜನರು ಕೂಡ ಸಂಪೂರ್ಣವಾಗಿ ಮೂರ್ಖತನದ ಕೆಲಸಗಳನ್ನೇ ಮಾಡುತ್ತಾರೆ. ನಾವು ಎಷ್ಟಾಗಿ ಸೈತಾನನ ಬಗ್ಗೆ ಅಧ್ಯಯನ ಮಾಡುತ್ತೇವೋ ಅವನು ಹೆಚ್ಚಾಗಿ ಮಾಡುವ ಕಾರ್ಯಗಳಲ್ಲಿ ಅವನ ಮೂರ್ಖತನವನ್ನೇ ಅಷ್ಟು ಹೆಚ್ಚಾಗಿ ನೋಡುತ್ತೇವೆ.

    ದೇವರು, ಸೈತಾನನನ್ನು ಇಟ್ಟಂಥ ಸ್ಥಳದಲ್ಲಿ ಇರಲು ಅವನು ಸಂತೋಷಪಡಲಿಲ್ಲ. (ಸಂತುಷ್ಟನಾಗಲಿಲ್ಲ). ಅವನನ್ನು ಎಲ್ಲರೂ ಆರಾಧಿಸಬೇಕಾದ ಉನ್ನತ ಸ್ಥಳವನ್ನು ತಲುಪಲು ಬಯಸಿದನು. ಅವನು ಆ ರೀತಿ ಹೇಳಲಿಲ್ಲ. ಆದರೆ ಆಗ ತಾನೇ ಅಂಥ ಯೋಚನೆಗಳನ್ನು ಮನಸ್ಸಿನಲ್ಲಿ ಮಾಡುವುದಕ್ಕೆ ಪ್ರಾರಂಭಿಸಿದನು (13ನೇ ವಚನ).

    ಆದರೆ ದೇವರು ನಮ್ಮ ಹೃದಯವನ್ನು ನೋಡುತ್ತಾನೆ; ದೇವರು ಲೂಸಿಫರನ ಹೃದಯವನ್ನು ನೋಡಿದನು ಮತ್ತು ಅವನ ಗುರಿ ಯಾವ ಕಡೆ ಇತ್ತು ಎಂಬುದನ್ನು ನೋಡಿದನು.

    ಶೋಧನೆಗೂ ಮತ್ತು ಪಾಪಕ್ಕೂ ವ್ಯತ್ಯಾಸವಿದೆ. ಒಂದು ಯೋಚನೆ ಬರುತ್ತದೆ. ನಾವು ಆ ಯೋಚನೆಯೊಂದಿಗೆ ಒಪ್ಪಿಕೊಂಡಾಗ ಮಾತ್ರ ಹೇಗಾದರೂ ನಾವು ಪಾಪ ಮಾಡುತ್ತೇವೆ. ಒಂದುವೇಳೆ, ಆ ಯೋಚನೆಯನ್ನು ನಾವು ನಿರಾಕರಿಸಿದ ಕೂಡಲೇ ಪಾಪ ಮಾಡುವುದಿಲ್ಲ (ಯಾಕೋಬ 1:14,15).

    ಉದಾಹರಣೆಗೆ, ನೀವು ಎಲ್ಲರ ಮುಂದೆ ಉತ್ತಮ ವ್ಯಕ್ತಿಯೆಂದು ತೋರಿಸಿಕೊಳ್ಳಲು ಇನ್ನೊಬ್ಬ ವ್ಯಕ್ತಿಯನ್ನು ಇತರರ ಮುಂದೆ ಕೆಳಗೆ ಬೀಳಿಸಲು ಏನಾದರೂ ಮಾಡಬೇಕೆಂಬ ಕೆಟ್ಟ ಯೋಚನೆ ಎಂದಾದರೂ ನಿಮಗೆ ಬಂದಿದೆಯೇ?

    ಇಂಥ ಯೋಚನೆಯನ್ನು ಹೊಂದಿದ್ದಂಥ ಮೊದಲನೇ ವ್ಯಕ್ತಿ ಯಾರು ನಿಮಗೆ ಗೊತ್ತೇ? ಅವನು ಲೂಸಿಫರನಾಗಿದ್ದನು. ಅವನು ಯಾರನ್ನು ಕೆಳಗೆ ಎಳೆಯಲು ಬಯಸಿದ? ದೇವದೂತರನ್ನಲ್ಲ, ಏಕೆಂದರೆ ಅವರು ಆಗಲೇ ಅವನ ಕೆಳಗೆ ಇದ್ದರು. ಅವನು ದೇವರನ್ನು ಕೆಳಗೆ ಎಳೆಯಲು ಬಯಸಿದನು. ನೀವು ಮೆಲಕ್ಕೆ ಬರಲು ಇತರರನ್ನು ಕೆಡವಿಬಿಡುವುದು ನಿಜವಾಗಿಯೂ ಸೈತಾನನ ಆತ್ಮವಾಗಿದೆ.

    ನಿಮ್ಮ ವೈರಿಯನ್ನು ನೀವು ತಿಳಿಯಲೇಬೇಕೆಂದು ನಾನು ಏಕೆ ಹೇಳುತ್ತೇನೆ? ಕಾರಣ, ಅಂಥ ಯೋಚನೆಯು ನಿಮ್ಮ ಮನಸ್ಸನ್ನು ಪ್ರವೇಶಿಸಿದಾಗ, ನಿಮ್ಮ ವೈರಿಯು ನಿಮ್ಮೊಳಗೆ ಬರಲು ಪ್ರಯತ್ನಿಸುತ್ತಿದ್ದಾನೆ ಎಂದು ನೀವು ಗ್ರಹಿಸಿಕೊಳ್ಳಲೇಬೇಕು. ಗರ್ಜಿಸುವ ಸಿಂಹವು ನಿಮ್ಮನ್ನು ನುಂಗುವುದಕ್ಕೆ ಕಾದುಕೊಂಡಿದೆ. ಪ್ರಧಾನ ದೇವದೂತನು ಸೈತಾನನಾಗಲು ಬಹಳ ವರ್ಷಗಳು ಬೇಕಾಗಲಿಲ್ಲ. ಇಲ್ಲಿ ಒಂದು ಕ್ಷಣ ಮಾತ್ರ ಸಾಕಾಯಿತು. ಅವನು ಹಂತಹಂತವಾಗಿ, ಕ್ರಮೇಣವಾಗಿ ಬೀಳಲಿಲ್ಲ. ಇಲ್ಲಿ ಯೇಸುಸ್ವಾಮಿ ಹೇಳಿದಂತೆ, ಒಂದು ಕ್ಷಣದಲ್ಲಿ ಅವನು ಸಿಡಿಲಿನಂತೆ ಕೆಳಗೆ ಬಿದ್ದನು (ಲೂಕ. 10:18). ಮುಂಚೆ ಅವನು ಹೊಳೆಯುವವನು ಆಗಿದ್ದನು. ದೇವರಂತಾಗುವ ಯೋಚನೆಯನ್ನು ಪೋಷಣೆ ಮಾಡುವುದಕ್ಕೆ ತೊಡಗಿದ ಕೂಡಲೇ ಅವನು ಸೈತಾನನಾದನು.

    ಒಬ್ಬ ದೇವದೂತನು ಸೈತಾನನಾಗಲು ಎಷ್ಟು ಕಾಲ ಬೇಕಾಗುತ್ತದೆ? ಒಂದು ಸೆಕೆಂಡು ಸಹ ಬೇಕಾಗಿಲ್ಲ. ಒಬ್ಬ ಒಳ್ಳೇ ವ್ಯಕ್ತಿಯು ಸೈತಾನನಾಗಲು ಎಷ್ಟು ಕಾಲ ಬೇಕಾಗುತ್ತದೆ? ಬರೀ ಒಂದು ಕ್ಷಣ ಬೇಕಾಗುತ್ತದೆ ಅಷ್ಟೆ! ಇದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

    ಸೈತಾನನ ಉತ್ಪತ್ತಿಯನ್ನು ಕುರಿತು ತಿಳಿಸುವ ಮತ್ತೊಂದು ವಾಕ್ಯಭಾಗ ಯೆಹೆಜ್ಕೇಲ 28. ಅಲ್ಲಿ ಸೈತಾನನು ತೂರಿನ ಅರಸ ಎಂದು ಕರೆಯಲ್ಪಟ್ಟಿದ್ದಾನೆ (ಯೆಹೆಜ್ಕೇಲ 28:12). ದೆವ್ವದ ಶಕ್ತಿಗಳು ಈ ಲೋಕದ ಪ್ರಭುಗಳ ಹಿಂದೆ ಇವೆ. ಆ ಸಮಯದಲ್ಲಿ ಸೈತಾನನು ತಾನೇ ತೂರಿನ ಪ್ರಭುವಿನ ಹಿಂದಿದ್ದನು ಮತ್ತು ಮಾನವ ಪ್ರಭುವಿನಲ್ಲಿ ವಾಸವಾಗಿದ್ದ ಸೈತಾನನೊಂದಿಗೆ ಕರ್ತನು ಮಾತಾಡಿದನು.

    ಸೈತಾನನು ಏದೆನ್ ತೋಟದಲ್ಲಿದ್ದ ಸಮಯವನ್ನು ಕರ್ತನು ನೆನಪಿಗೆ ತಂದನು (ಯೆಹೆಜ್ಕೇಲ 28:13). ಆದಾಮ ಹವ್ವರಿಗೆ ಮುಂಚೆ ಲೂಸಿಫರನು ಏದೆನಿನಲ್ಲಿದ್ದನೆಂದು ಇದು ನಮಗೆ ತಿಳಿಸುತ್ತದೆ. ಮತ್ತು ಸೈತಾನನು "ತನ್ನ ಸೃಷ್ಟಿಯ ದಿನದಿಂದ ಅವನಲ್ಲಿ ಅಪರಾಧವು ಸಿಕ್ಕುವವರೆಗೆ ಅವನ ನಡತೆಯಲ್ಲಿ ಹೇಗೆ ಪರಿಪೂರ್ಣನಾಗಿದ್ದನು" ಎಂಬುದನ್ನು ಕರ್ತನು ನೆನಪಿಗೆ ತಂದುಕೊಂಡನು. (16,17 ವಚನ).

    ಮೊಟ್ಟ ಮೊದಲನೆಯದಾಗಿ, ಲೂಸಿಫರನ ಸೌಂದರ್ಯದ ನಿಮಿತ್ತ ಅವನ ಹೃದಯವು ಉಬ್ಬಿತು. ಇತರರಿಗೆ ನಿಮ್ಮನ್ನು ಹೋಲಿಸಿ ಕನ್ನಡಿಯಲ್ಲಿ ನೋಡಿ, ನಾನು ಎಷ್ಟು ಚೆನ್ನಾಗಿ ಕಾಣುತ್ತಿದ್ದೇನೆ ಎಂಬುದಾಗಿ ಎಂದಾದರೂ ನಿಮ್ಮ ಹೃದಯವು ಉಬ್ಬಿದೆಯೋ? ಅದರ ವಿಷಯದಲ್ಲಿ ಎಚ್ಚರವಾಗಿರ್ರಿ. ದೇವರು ನಿಮಗೆ ಕೊಟ್ಟ ಎಲ್ಲಾ ಒಳ್ಳೇ ವರಗಳಿಗೋಸ್ಕರ ದೇವರಿಗೆ ಸ್ತೋತ್ರಸಲ್ಲಿಸಿರಿ. ಸುಂದರವಾಗಿ ಕಾಣುವ ಮುಖದಲ್ಲಿ ತಪ್ಪೇನಿಲ್ಲ. ಆದರೆ ಈ ವಿಷಯದಲ್ಲಿ ಗರ್ವಪಡುವಾಗ ಎಲ್ಲವೂ ತಪ್ಪು. ಕಾರಣ ನೀವು ಸೈತಾನನಿಗೆ ಆಗ ಬಾಗಿಲನ್ನು ತೆರೆಯುತ್ತೀರಿ.

    ಲೂಸಿಫರನ ಗರ್ವಕ್ಕೆ ಮತ್ತೊಂದು ಕಾರಣ ಅವನ ಬುದ್ಧಿವಂತಿಕೆ. ಎಲ್ಲಾ ಸೃಷ್ಟಿಯ ಜೀವಿಗಳಲ್ಲಿ ಅತಿ ಹೆಚ್ಚು ಬುದ್ಧಿವಂತನು ಸೈತಾನನೇ ಎಂದು ನಿಮಗೆ ತಿಳೀದಿದೆಯಾ? ಬುದ್ಧಿವಂತರಾಗಿರುವುದರಲ್ಲಿ ತಪ್ಪೆನಿಲ್ಲ. ನಮ್ಮ ಬುದ್ಧಿವಂತಿಕೆಯನ್ನು ದೇವರ ಮಹಿಮೆಗಾಗಿ ನಾವು ಉಪಯೋಗಿಸಬಹುದು. ಆದರೆ ಅದರ ವಿಷಯದಲ್ಲಿ ಗರ್ವಪಡುವ ಹಕ್ಕು ನಮಗಿಲ್ಲ. ಕರ್ತನನ್ನು ಸೇವಿಸಲು ನಾವು ಮೂರ್ಖರಾಗಿರಬೇಕಾಗಿಲ್ಲ. ಇಲ್ಲ, ನಿಮ್ಮ ಬುದ್ಧಿವಂತಿಕೆಗಾಗಿ ದೇವರಿಗೆ ಸ್ತೋತ್ರಮಾಡಿರಿ ಮತ್ತು ನಿನ್ನ ಸುಂದರತೆಗಾಗಿ ದೇವರಿಗೆ ಸ್ತೋತ್ರಮಾಡಿರಿ, ಆದರೆ ಈ ಯಾವುದರಲ್ಲಾದರೂ ಎಂದಿಗೂ ಗರ್ವದಿಂದಿರಬಾರದು.

    ಲೂಸಿಫರನ ಹೆಮ್ಮೆಗೆ ಮೂರನೇ ಕಾರಣ, ಎಲ್ಲಾ ಸೃಷ್ಟಿಯ ಜೀವಿಗಳಲ್ಲಿ ಅವನೇ ಉನ್ನತ ಸ್ಥಾನ ಹೊಂದಿ- ತಾನು ಅಹಂಕಾರ ಪಟ್ಟ ಸೌಂದರ್ಯ, ಬುದ್ಧಿವಂತಿಕೆ, ಮತ್ತು ಸ್ಥಾನ- ಈ ಎಲ್ಲ ವಿಷಯಗಳು ದೇವರ ಬಹುಮಾನವಾಗಿದ್ದವು ಎಂಬುದನ್ನು ಗ್ರಹಿಸದೆ ಅಲಕ್ಷ್ಯಮಾಡಿದನು. ಮಾನವ ಜೀವಿಗಳು ಮತ್ತು ಕ್ರೈಸ್ತರು ಸಹ ಇದನ್ನು ಗ್ರಹಿಸದೆ ಅಲಕ್ಷ್ಯಮಾಡುತ್ತಾರೆ, ವಿಫಲರಾಗುತ್ತಾರೆ. ಹೀಗೆ ಸೈತಾನನು ಅವರ ಜೀವಿತದಲ್ಲಿ ಸುಭದ್ರ ಸ್ಥಾನವನ್ನು ಪಡೆದು ಕೊನೆಯಲ್ಲಿ ಅವರನ್ನು ನಾಶಮಾಡುತ್ತಾನೆ.

    ಆದಕಾರಣ ಲೋಕದಲ್ಲಿ ಎಲ್ಲಾ ಪಾಪವು, ಕೊಲೆ ಅಥವಾ ವ್ಯಭಿಚಾರದೊಂದಿಗೆ ಉತ್ಪತ್ತಿಯಾಗದೆ ಗರ್ವದೊಂದಿಗೆ ಉತ್ಪತ್ತಿಯಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ. ಇದಕ್ಕಾಗಿಯೇ ಯೇಸು ತನ್ನನ್ನು ತಗ್ಗಿಸಿಕೊಂಡದರ ಮೂಲಕ ರಕ್ಷಣೆ ಬಂತು. ಸೈತಾನನ ಎಲ್ಲಾ ಒಳಸಂಚುಗಳಿಂದ ಮತ್ತು ತಂತ್ರಗಳಿಂದ ಬಿಡುಗಡೆಯ ಮಾರ್ಗವು ದೀನತ್ವದ ಮಾರ್ಗವಾಗಿದೆ.

    ಲೂಸಿಫರನ ಜೀವಿತದಲ್ಲಿ ಅತೃಪ್ತಿಯ ಆತ್ಮದ ಉತ್ಪತ್ತಿಯನ್ನು ಸಹ ನಾವು ನೋಡುತ್ತೇವೆ. ದೇವರ ದೃಷ್ಟಿಯಿಂದ ನಾವು ಈ ಲೋಕವನ್ನು ನೋಡುವುದಾದರೆ, ಲೋಕದ ಎಲ್ಲಾ ಕಡೆಯೂ ದೂರು ಹೇಳುವ ಗೊಣಗಾಟದ ಜನರಿಂದ ತುಂಬಿದೆ. ಅವರೆಲ್ಲರೂ ಆ ಆತ್ಮವನ್ನು ಸೈತಾನನಿಂದ ಪಡೆದಿದ್ದಾರೆ.

    ಅಧಿಕಾರಕ್ಕೆ ವಿರುದ್ಧವಾಗಿ ತಿರುಗಿ ಬೀಳುವ ಆತ್ಮ ಇನ್ನೊಂದು ವಿಷಯ. ಅದು ಲೂಸಿಫರನೊಂದಿಗೆ ಉತ್ಪತ್ತಿಯಾಯಿತು. ಲೂಸಿಫರನಿಗಿಂತ ಮೇಲಾಗಿ ಒಬ್ಬನೇ ಒಬ್ಬ ಅಧಿಕಾರಿ ಮಾತ್ರ ಇದ್ದನು. ಅದು ದೇವರೇ ಆಗಿದ್ದನು. ಆ ಅಧಿಕಾರಿಗೆ ವಿರುದ್ಧವಾಗಿ ಲೂಸಿಫರನು ತಿರುಗಿ ಬಿದ್ದನು. ದೇವರನ್ನು ಕೆಳಗೆ ದೊಬ್ಬಿ ಆ ಅಧಿಕಾರಕ್ಕಿಂತ ಮೇಲಾಗಿರಲು ಲೂಸಿಫರನು ಬಯಸಿದನು.

    ಮಾನವ ಕುಲದಲ್ಲಿ ನಮಗೆ ಆ ಆತ್ಮವು ಕಂಡು ಬರುತ್ತಿದೆಯೇ? ಅಧಿಕಾರಿಗೆ ತಿರುಗಿ ಬೀಳುವ ಆತ್ಮವೇ ದೇಶದಲ್ಲಿ ಬಹು ಕ್ರಾಂತಿಗೆ ನಡಿಸಿದೆ ಮತ್ತು ಕಾರ್ಖಾನೆಗಳಲ್ಲಿ ಮುಷ್ಕರಕ್ಕೆ ಕಾರಣವಾಗಿದೆ. ಈ ದಿನಗಳಲ್ಲಿ ಈ ತಿರುಗಿ ಬೀಳುವ ಆತ್ಮವನ್ನು ವಿದ್ಯಾರ್ಥಿಗಳಲ್ಲಿ ಸಹ ನಾವು ನೋಡುತ್ತೇವೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಲ್ಲಿ ಮಾತ್ರವಲ್ಲದೆ, ಶಾಲೆಯ ವಿದ್ಯಾರ್ಥಿಗಳಲ್ಲಿ ಕೂಡ ನೋಡುತ್ತೇವೆ ಹಾಗೂ ಮನೆಯಲ್ಲಿ ಚಿಕ್ಕ ಮಕ್ಕಳಲ್ಲಿ ಸಹ ಈ ಆತ್ಮವನ್ನು ನಾವು ನೋಡುತ್ತೇವೆ.

    ಇವೆಲ್ಲವೂ ಲೋಕವು ಕೆಡುತ್ತಲಿದೆ ಎಂಬುದಕ್ಕೆ ಖಂಡಿತವಾದ ಸೂಚನೆಯಾಗಿವೆ. ಉಪಾಧ್ಯಾಯರುಗಳನ್ನು, ತಂದೆ ತಾಯಿಗಳನ್ನು ಮತ್ತು ಸಭೆಗಳಲ್ಲಿ ಹಿರಿಯ ಸಹೋದರರನ್ನು ಸಹ ಸನ್ಮಾನಿಸದಿರುವುದು ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿದೆ.

    ಈ ಆತ್ಮವೇ ಉತ್ತಮವಾದ ದೇವದೂತನನ್ನು ಸೈತಾನನ್ನಾಗಿ ಬದಲಾಯಿಸಿತು. ಈ ದಿನವು ಸಹ ಈ ಆತ್ಮವೇ ಒಳ್ಳೇ ಹುಡುಗರ ಅಥವಾ ಹುಡುಗಿಯರನ್ನು ಸೈತಾನನಾಗಿ ಮಾರ್ಪಡಿಸಲು ಸಾಧ್ಯ ಎಂಬುದನ್ನು ಮರೆಯಬಾರದು.

    ದೇವರು ಎಂದಿಗೂ ಯಾರನ್ನೂ ಕೆಟ್ಟವರನ್ನಾಗಿ ಮಾಡಲಾರನು. ಯಾವಾಗ ನಮ್ಮನ್ನು ನಾವು ಸೈತಾನನ ಆತ್ಮಕ್ಕೆ ತೆರೆದುಕೊಡುತ್ತೇವೋ ಆಗ ನಮ್ಮನ್ನು ನಾವು ಕೆಟ್ಟವರನ್ನಾಗಿ ಮಾಡಿಕೊಳ್ಳುತ್ತೇವೆ.

    ಈ ಲೂಸಿಫರನ ಕೊನೆಯ ಗುಣವನ್ನು ಗಮನಿಸಿರಿಃ ಅವನು ಬಿದ್ದಾಗ ಅವನು ಒಬ್ಬನಾಗಿಯೇ ಬೀಳಲಿಲ್ಲ. ಅವನಿಗೆ ಸಂಗಡಿಗರು ಇದ್ದರು. ಪ್ರಕಟನೆ ೧೨:೪ರಲ್ಲಿ ಅವನು ತನ್ನೊಂದಿಗೆ ದೇವದೂತರಲ್ಲಿ ಮೂರರಲ್ಲೊಂದು ಭಾಗವನ್ನು ಎಳೆದುಕೊಂಡನು. ಅವರು ಸಹ ಅವನೊಂದಿಗೆ ಅವನ ಅಹಂಕಾರ, ಅತೃಪ್ತಿ ಮತ್ತು ತಿರುಗಿಬೀಳುವ ಆತ್ಮದಲ್ಲಿ ಸೇರಿಕೊಂಡರು ಎಂಬುದಾಗಿ ಓದುತ್ತೇವೆ.

    ಈ ದಿನವು ಅದೇ ರೀತಿಯಾಗಿದೆ. ಒಬ್ಬ ಮನುಷ್ಯನು ಕೆಟ್ಟವನಿದ್ದರೆ ಅವನು ಮಾತ್ರವೇ ಕೆಟ್ಟವನಾಗಿಯೇ ಇರಲು ತೃಪ್ತನಾಗಿರಲಾರ. ಅವನು ಇತರರನ್ನು ಸಹ ತನ್ನ ವಿಪತ್ತು ಹಾಗೂ ಕೆಟ್ಟತನದಲ್ಲಿ ತನ್ನೊಂದಿಗೆ ಕೆಳಗೆ ಎಳೆದುಕೊಳ್ಳಲು ಬಯಸುತ್ತಾನೆ. ಅಂಥವರು ಜಾಗರೂಕರಾಗಿರದಿದ್ದರೆ ಆ ಒಬ್ಬನಲ್ಲಿ ಇರುವ ಕಹಿಭಾವನೆಯ ವಿಷಬೇರು ಅನೇಕ ಬೇರೆಯವರಿಗೆ ಹರಡಬಹುದು (ಇಬ್ರಿಯ 12:15 ನೋಡಿ).

    ಅಧ್ಯಾಯ 3
    ಸೈತಾನನ ಮೋಸ

    ಆದಿಕಾಂಡ 3 ರಲ್ಲಿ, ಸೈತಾನನು ಹೇಗೆ ಧಾಳಿಮಾಡುತ್ತಾನೆಂದು ನಾವು ನೋಡಬಹುದು. ಅಲ್ಲಿ ಸರ್ಪವು ಎಲ್ಲಾ ಪ್ರಾಣಿಗಳಲ್ಲಿ ಯುಕ್ತಿಯುಳ್ಳದ್ದಾಗಿತ್ತು ಎಂದು ಹೇಳಿರುತ್ತದೆ.ಯೇಸು ಸ್ವಾಮಿ ಗೆರಸೇನರ ಊರಿನವನಿಂದ ದೆವ್ವಗಳನ್ನು ಹೊರಡಿಸಿದಾಗ, ಅವು ಹಂದಿಗಳೊಳಗೆ ಪ್ರವೇಶಿಸಿದ ಹಾಗೆ ಸೈತಾನನು ಸರ್ಪವನ್ನು ಪ್ರವೇಶಿಸಿದನು ಮತ್ತು ಅವನು ಸರ್ಪದ ಮೂಲಕ ಹವ್ವಳೊಂದಿಗೆ ಮಾತಾಡಿ, "ನಿಜವಾಗಿ ದೇವರು ಈ ತೋಟದ ಎಲ್ಲಾ ಮರಗಳ ಹಣ್ಣನ್ನು ನೀನು ತಿನ್ನಬಾರದು ಎಂದು ಹೇಳಿದ್ದು ನಿಜವೇ?" ಎಂದು ಕೇಳಿದಾಗ, ಹವ್ವಳು ದೇವರು ಹೇಳಿದ್ದು ನಿಜ ಎಂಬುದಾಗಿ ಹೇಳಿದಳು. ಸೈತಾನನು ದೇವರ ವಾಕ್ಯಕ್ಕೆ ವಿರೋಧಿಸಿ, "ನೀನು ಸಾಯುವುದಿಲ್ಲ" ಎಂದು ಹೇಳಿದನು.

    ಸೈತಾನನು ಹೇಗೆ ಬರುತ್ತಾನೆ ಗಮನಿಸಿರಿ: ಸೈತಾನನು ಮೊದಲನೇಯದಾಗಿ ದೇವರ ವಾಕ್ಯವನ್ನು ಪ್ರಶ್ನೆ ಮಾಡುತ್ತಾನೆ.

    ಸೈತಾನನು ಹೀಗೆಯೇ ನಮ್ಮ ಬಳಿಗೆ ಸಹ ಬಂದು, "ನಾನು ಇದನ್ನು ಮಾಡಬಾರದು ಎಂದು ನಿಜವಾಗಿ ದೇವರು ಹೇಳಿದ್ದಾನೋ?" ಎಂದು ಕೇಳುತ್ತಾನೆ. "ಅದನ್ನು ಮಾಡುವುದರಲ್ಲಿ ತಪ್ಪೇನಿದೆ? ಈ ಸತ್ಯವೇದ ಆಜ್ಞೆಗಳು ಹಳೆಯ ಸಂಪ್ರದಾಯ, ಅವೆಲ್ಲ ಪೌಲನು ಜೀವಿಸಿದ್ದ ಕಾಲಕ್ಕೆ ಮತ್ತು ಸಂಸ್ಕೃತಿಗಾಗಿ ಬರೆಯಲ್ಪಟ್ಟಿದೆ. ಈ ಇಪ್ಪತ್ತನೇ ಶತಮಾನದಲ್ಲಿ ನಾವು ಅಕ್ಷರೀಕವಾಗಿ ಅದಕ್ಕೆ ವಿಧೇಯರಾಗಬೇಕೆಂದು ಅರ್ಥವಲ್ಲ" ಇತ್ಯಾದಿ ವಿಷಯಗಳನ್ನು ಸೈತಾನನು ಹೇಳಿಕೊಂಡು, ಅವನು ನಮ್ಮ ಒಳಗೆ ಸಹ ಬರುತ್ತಾನೆ.

    ಯೌವನಸ್ಥರು ಹಾಗೂ ಪ್ರಾಯದವರು ಸೈತಾನನಿಗಾಗಿ ತಾವು ಮಾತಾಡುವವರಾಗಿದ್ದಾರೆಂದು ತಿಳಿಯದೇ ಸತತವಾಗಿ ಇಂಥ ಪ್ರಶ್ನೆಗಳನ್ನು ಕೇಳುವುದು ನಮಗೆ ಕಂಡು ಬರುತ್ತದೆ. ಅವರ ಮನಸ್ಸಾಕ್ಷಿ ಅವರಿಗೆ ಏನೋ ತಪ್ಪಾಗಿದೆ ಎಂದು ಹೇಳಿದಾಗಲೂ ಅವರು ಇನ್ನೂ ತಮ್ಮ ಬುದ್ಧಿಯನ್ನು ಉಪಯೋಗಿಸಿ ದೇವರು ನಿಷೇಧಿಸಿದ್ದನ್ನು ಪ್ರಶ್ನಿಸುತ್ತಾರೆ.

    ದೇವರ ವಾಕ್ಯದಲ್ಲಿ ಏನಾದರೂ ದೇವರಿಂದ ಆಜ್ಞಾಪಿಸಲ್ಪಟ್ಟಿದ್ದರೆ ಅಥವಾ ನಿಷೇಧಿಸಲ್ಪಟ್ಟಿದ್ದರೆ ಅದನ್ನು ಮಾಡುವುದರಲ್ಲಿ ದೇವರಿಗೆ ಬಹು ಒಳ್ಳೆಯ ಕಾರಣವಿದೆ ಎಂದು ನಿಶ್ಚಯಪಡಿಸಿಕೊಳ್ಳಬಹುದು. ಆದರೆ ಯಾವಾಗಲೂ ಸೈತಾನನು ನಮಗೆ ದೇವರು ನಿಜವಾಗಿಯೂ ಆ ರೀತಿ ಹೇಳಿದ್ದಾನೋ ಎಂದು ನಾವು ಪ್ರಶ್ನಿಸುವಂತೆ ಮಾಡುತ್ತಾನೆ.

    ನಮ್ಮನ್ನು ದೇವರ ವಾಕ್ಯ ಪ್ರಶ್ನಿಸುವಂತೆ ಮಾಡುವುದರಲ್ಲಿ ಸೈತಾನನ ಅಂತಿಮ ಗುರಿ ಏನು? ಖಂಡಿತವಾಗಿ ಹವ್ವಳ ವಿಷಯದಲ್ಲಿ ಅವನ ಗುರಿ ಆಗಿದ್ದಂತೆ - ನಮ್ಮನ್ನು ಕರ್ತನಿಂದ ದೂರ ಮಾಡಿ, ದೇವರು ನಮ್ಮನ್ನು ನಿರಾಕರಿಸಿ ತನ್ನ ಸಾನಿಧ್ಯದಿಂದ ಆದಾಮ ಹವ್ವರನ್ನು ತಳ್ಳಿದಂತೆ ನಮ್ಮನ್ನು ತಳ್ಳಿಬಿಡಲು ಆತನನ್ನು ಒತ್ತಾಯಿಸುವುದೇ ಆಗಿದೆ.

    ಸೈತಾನನು ಕಳ್ಳ ಎಂದು ಯೇಸು ಸ್ವಾಮಿ ಒಂದು ಸಾರಿ ಹೇಳಿದ್ದಾನೆ. ಹಣಕ್ಕೆ ಶಾಶ್ವತವಾದ ಬೆಲೆ ಇಲ್ಲ ಎಂದು ಸೈತಾನನಿಗೆ ಗೊತ್ತು ಆದ್ದರಿಂದ ಅವನು ಹಣ ಕಳ್ಳತನ ಮಾಡುವುದಿಲ್ಲ. ಅವನು ಪ್ರಥಮವಾಗಿ ಶಾಶ್ವತ ಬೆಲೆ ಇರುವಂಥ - ಮನುಷ್ಯರ ಆತ್ಮಗಳನ್ನು ಮಾತ್ರ ಕದಿಯುತ್ತಾನೆ. ಸೈತಾನನು ಕಳ್ಳತನ ಮಾಡಿದ ಮೇಲೆ ತಾನು ಕದ್ದದ್ದನ್ನು ಕೊಂದು ನಾಶಮಾಡುತ್ತಾನೆ ಎಂದು ಯೇಸು ಸ್ವಾಮಿ ಮುಂದೆ ಹೇಳುತ್ತಾನೆ (ಯೋಹಾನ 10:10). ಇದಕ್ಕೆ ವ್ಯತ್ಯಾಸವಾಗಿ ಯೇಸು ಸ್ವಾಮಿ ತಾನೇ ನಮಗೆ ಸಮೃದ್ಧಿಯಾದ ಜೀವಕೊಡಲು ಬಂದನೆಂದು ಆತನು ಮುಂದುವರಿಸುತ್ತಾನೆ.

    ೬೦೦ ಕೋಟಿ ಲೋಕದ ಜನರಲ್ಲಿ ಶೇಖಡ 90 ಕ್ಕಿಂತಲೂ ಹೆಚ್ಚು ಜನ ಯೇಸು ಕ್ರಿಸ್ತನಲ್ಲಿ ನಂಬಿಕೆಯಿಟ್ಟು ದೇವರ ವಾಕ್ಯಕ್ಕೆ ವಿಧೇಯರಾಗುವ ಬದಲು ಸೈತಾನನ ಸುಳ್ಳನ್ನು ನಂಬಿ ಅವನಿಗೆ ವಿಧೇಯರಾಗುವುದಕ್ಕೆ ಹೆಚ್ಚು ಇಷ್ಟಪಡುವುದು ಆಶ್ಚರ್ಯವಲ್ಲವೆ?

    ದೇವರ ವಾಕ್ಯಕ್ಕೆ ಅವಿಧೇಯರಾಗವುದು ಗಂಭೀರ ವಿಷಯವಲ್ಲ ಎಂದು ಸೈತಾನನು ಜನರಿಗೆ ಮನದಟ್ಟು ಮಾಡಿಕೊಡುವುದರಲ್ಲಿ ಎಂಥಾ ಪ್ರಚಂಡ ಕಾರ್ಯವನ್ನು ಮಾಡಿದ್ದಾನೆ ಎಂಬುದನ್ನು ಇಲ್ಲಿ ನಾವು ನೋಡಬಹುದು.

    ಮೊದಲನೇ ಸಾರಿ ಜನರು ಸಾರಾಯಿ ಕುಡಿಯುವಾಗ ಅಥವಾ ಮೊದಲನೇ ಸಾರಿ ಸಿಗರೇಟ್ ಸೇದುವಾಗ ಅಥವಾ ಹೆರೋಯಿನ್ ಮತ್ತು ಕೊಕೇನ್ ತರಹದ ಮಾದಕ ವಸ್ತುಗಳನ್ನು ತೆಗೆದುಕೊಳ್ಳುವುದಕ್ಕೆ ಪ್ರಾರಂಭಿಸುವಾಗ ಸೈತಾನನು, ಅವರಿಗೆ ಇವು ನಿಮ್ಮ ಶರೀರವನ್ನೂ ನಿಮ್ಮ ಮನಸ್ಸನ್ನೂ, ಭೂಮಿಯ ಮೇಲೆ ನಾಶಮಾಡಿ ಕಡೆಗೆ ಶಾಶ್ವತವಾಗಿ ನಿಮ್ಮ ಆತ್ಮಗಳನ್ನು ನರಕಕ್ಕೆ ಕಳಿಸುತ್ತದೆ ಎಂಬುದಾಗಿ ಎಚ್ಚರಿಗೆ ಕೊಡುತ್ತಾನೆ ಎಂದು ನೀವು ಯೋಚಿಸುತ್ತೀರೋ? ಇಲ್ಲ. ಸತ್ಯವನ್ನು ಅವರಿಗೆ ಹೇಳುವುದಿಲ್ಲ. ಏಕೆಂದರೆ ಅದು ಹಿತಕರವಾಗಿರುವುದಿಲ್ಲ. ಸೈತಾನನು ಅವರಿಗೆ ಅದನ್ನು ಮಾಡುವುದರಲ್ಲಿ ರೋಮಾಂಚನವಾಗುತ್ತದೆ ಎಂಬುದಾಗಿ ಅವರಿಗೆ ಹೇಳುತ್ತಾನೆ. ಹವ್ವಳಿಗೆ ಸಹ ಸೈತಾನನು ಅದನ್ನೇ ಹೇಳಿದನು.

    ಈ ದಿನ ಸೈತಾನನು ಹೀಗೆಯೇ ಲೋಕದ ಎಲ್ಲ ಕಡೆಯಲ್ಲಿ ಕೋಟ್ಯಾಂತರ ಯೌವನಸ್ಥರನ್ನು ಹೀಗೆಯೇ ವಂಚಿಸುತ್ತಿದ್ದಾನೆ. ಅದು ದುರಾಚಾರ ಅಥವಾ ಬೇರೆ ಜನರ ವಸ್ತುಗಳನ್ನು ಕದಿಯುವ ವಿಷಯವಾಗಿದ್ದರೂ ಸೈತಾನನು, "ಅದರಲ್ಲಿ ತಪ್ಪು ಏನು?" "೧೯ನೇ ಶತಮಾನಗಳಿಂದ ಮಾರ್ಗದರ್ಶನ ಪಡೆಯಬೇಡ" ಎಂದು ಹೇಳುತ್ತಾನೆ. ನಿಮ್ಮ ಮನಸ್ಸಿನ ಒಳಗೆ ಸೈತಾನನು ಇಡುವ ಈ ವಿಷಯಗಳ ಬಗ್ಗೆ ಎಚ್ಚರಿಕೆಯಾಗಿರಿ. ಅವನ ಅಂತಿಮ ಉದ್ದೇಶ ನಿಮ್ಮನ್ನು ನಾಶಮಾಡುವುದೇ ಆಗಿದೆ.

    ಆದಿಕಾಂಡ 3:6ರಲ್ಲಿ ಆ ಮರವು ಆಹಾರಕ್ಕೆ ಒಳ್ಳೆಯದಾಗಿದೆ ಎಂದು ಹವ್ವಳು ನೋಡಿದ ಕೂಡಲೇ ಅವಳ ದೆಹವು ಅದರ ಕಡೆ ಎಳೆಯಲ್ಪಟ್ಟಿತು ಎಂದು ನಾವು ನೋಡುತ್ತೇವೆ. ನಿಷೇಧಿಸಲ್ಪಟ ಆ ಹಣ್ಣು 20ನೇ ಶತಮಾನದ ಅನೇಕ ಪ್ರತಿರೂಪವನ್ನು ಹೊಂದಿದೆ. ದೇರು ನಿಷೇಧಿಸಿದ್ದ ಅನೇಕ ಸಂಗತಿಗಳಿಗೆ ನಮ್ಮ ದೇಹಗಳು ಎಳೆಯಲ್ಪಡುವುದನ್ನುನಾವು ನೋಡುತ್ತೇವೆ.

    ಆ ಮರವು ಹವ್ವಳ ಕಣ್ಣಿಗೆ ಸಹ ಆನಂದ ಪಡಿಸುವಂಥದ್ದಾಗಿ ಕಂಡಿತು ಎಂದು ದೇವರ ವಾಕ್ಯವು ಮುಂದುವರಿಯತ್ತದೆ. ನಾವು ನೋಡಬಾರದೆಂದು ದೇವರು ನಿಷೇಧಿಸಿದ ಅನೇಕ ವಿಷಯಗಳು ನಮ್ಮ ಕಣ್ಣಿಗೆ ಬಹು ಸಂತೋಷಕರವಾಗಿ ಕಾಣಿಸುತ್ತವೆ.

    ಅವಳ ಮನಸ್ಸಿಗೆ ಕಂಡ ಹಣ್ಣು ಆಕರ್ಷಕವಾಗಿ ಕಾಣಿಸಿತು ಎಂದು ದೇವರ ವಾಕ್ಯ ಮುಂದೆ ಹೇಳುತ್ತದೆ. ಅವಳು ಆ ಹಣ್ಣು ತನ್ನನ್ನು ಜ್ಞಾನಿಯನ್ನಾಗಿ ಮಾಡುವ ವಸ್ತುವಿನಂತೆ ನೋಡಿದಳು. ದೇವರು ನಿಷೇಧಿಸಿದ ಅನೇಕ ವಸ್ತುಗಳಿಗೆ ನಮ್ಮ ಮನಸ್ಸು ಕೂಡ ಆಕರ್ಷಿಸಲ್ಪಟ್ಟಿವೆ. ನಿಮ್ಮ ದೇಹ ಮತ್ತು ಮನಸ್ಸು ನಿಮ್ಮ ಮನಸ್ಸಾಕ್ಷಿ ತಪ್ಪು ಎಂದು ನಿಮಗೆ ಹೇಳುವ ಯಾವ ವಿಷಯಕ್ಕಾದರೂ ಎಳೆಯಲ್ಪಟ್ಟಾಗ ಎಚ್ಚರಿಕೆಯಾಗಿರಿ.

    ಹವ್ವಳು ಮಾಡಲಿದ್ದ ಕಾರ್ಯವು ತಪ್ಪು ಎಂದು ಆ ಕ್ಷಣದಲ್ಲಿ ಅವಳ ಮನಸ್ಸಾಕ್ಷಿ ಸ್ಪಷ್ಟವಾಗಿ ಅವಳಿಗೆ ಹೇಳಿತು ಎಂದು ನನಗೆ ನಿಶ್ಚಯ. ಆ ಹಣ್ಣನ್ನು ಅವಳು ತಿನ್ನಬಾರದೆಂದು ದೇವರು ಅವಳಿಗೆ ಹೇಳಿದ್ದು ಚೆನ್ನಾಗಿ ತಿಳಿದಿತ್ತು. ಆದರೆ ಅವಳು ಏನು ಮಾಡಿದಳು? ಅವಳ ದೇಹ ಮತ್ತು ಮನಸ್ಸು ಇವೆರಡಕ್ಕೂ ಆ ಹಣ್ಣು ಇಷ್ಟವಾಗಿದ್ದ ಕಾರಣ ಆ ಹಣ್ಣನ್ನು ತಿನ್ನುವುದರಲ್ಲಿ ಏನೂ ತಪ್ಪಿಲ್ಲ ಎಂದು ದೃಢನಿಶ್ಚಯ ಮಾಡಿಕೊಂಡಳು. ಆದ್ದರಿಂದ ಅವಳು ತನ್ನ ಮನಸ್ಸಾಕ್ಷಿಯ ವಿರುದ್ಧವಾಗಿ ಹೋಗಿ ಹಣ್ಣನ್ನು ತೆಗೆದುಕೊಂಡು ತಿಂದಳು.

    ಹವ್ವಳು ಪಾಪ ಮಾಡುವಂತೆ ಸೈತಾನನು ಮಾಡಿದ್ದರಿಂದ ಅವನು ಸಾಧಿಸಿದ್ದೇನು? ಬಹಳ ವರ್ಷಗಳ ಮುಂಚೆ ಅವನು ದೇವರ ಸಾನಿಧ್ಯದಿಂದ ತಾನೇ ಬಿದ್ದುಹೋಗಿದ್ದನು. (ಒಮ್ಮೆ ಅವನು ದುಷ್ಟನಾಗಿದ್ದನು, ಇತರರನ್ನೂ ದುಷ್ಟರನ್ನಾಗಿ ಮಾಡುವುದಕ್ಕೆ ನಿರ್ಧರಿಸಿದನು). ಇದು ಈಗಲೂ ಮಾನವ ಜನಾಂಗದಲ್ಲಿ ಅದೇ ರೀತಿಯಾಗಿದೆ. ಒಬ್ಬ ಮನುಷ್ಯನು ಏನಾದರೂ ಕೆಟ್ಟದ್ದನ್ನು ಮಾಡಿದಾಗ ತಾನು ಮಾಡಿದ ಕೆಟ್ಟತನದ ವಿಷಯದಲ್ಲಿ ತಾನೊಬ್ಬನೇ ಇರಲು ಸಂತೋಷಪಡುವುದಿಲ್ಲ. ಅದೇ ಕೆಟ್ಟತನವನ್ನು ಇತರರು ಸಹ ಮಾಡಲು ಇಷ್ಟಪಡುತ್ತಾನೆ.

    ಯೌವನಸ್ಥರೇ, ಜ್ಞಾನೋಕ್ತಿಗಳ ಪುಸ್ತಕವನ್ನು ಓದಬೇಕೆಂದು ನಿಮ್ಮೆಲ್ಲರಿಗೂ ನಾನು ಉತ್ತೇಜನ ಕೊಡುತ್ತೇನೆ. ಆ ಪುಸ್ತಕವು ನಿಮ್ಮನ್ನು ಅನೇಕ ಅಪಾಯ ಸ್ಥಳಗಳಿಂದ ರಕ್ಷಿಸುವುದು. ಜ್ಞಾನೋಕ್ತಿಗಳು 1:10ರಲ್ಲಿ - "ಪಾಪಿಗಳು ದುಷ್ಟ್ರೇರಣೆಯನ್ನು ಮಾಡಿದರೆ ಒಪ್ಪಲೇಬೇಡ" ಎಂದು ಅದು ಹೇಳುತ್ತದೆ.

    ಸೈತಾನನು ದುಷ್ಟನಾದನು ಅವನು ತನ್ನೊಂದಿಗೆ ಹವ್ವಳನ್ನು ಸಹ ಕೆಳಗೆ ಎಳೆದುಕೊಳ್ಳಲು ಬಯಸಿದನು. ಹವ್ವಳು ಆ ಆತ್ಮದಿಂದ ವಿಷಭರಿತಳಾದಾಗ ತನ್ನ ಗಂಡನನ್ನು ಸಹ ತನ್ನ ಜೊತೆ ಕೆಳಗೆ ಎಳೆದುಕೊಳ್ಳಲು ಬಯಸಿದಳು. ಆದ್ದರಿಂದ ಅವಳು ಹಣ್ಣನ್ನು ತೆಗೆದುಕೊಂಡು ತನ್ನ ಗಂಡನಿಗೆ ಕೊಟ್ಟಳು.

    ಲೋಕದಾದ್ಯಂತ ಎಲ್ಲಾ ಶತಮಾನಗಳಲ್ಲಿ ಹೀಗೆಯೇ ದುಷ್ಟತನವು ಹೆಚ್ಚಾಗಿದೆ. ಒಬ್ಬನು ಕೆಟ್ಟವನಾದರೆ ಇತರರನ್ನು ತನ್ನೊಂದಿಗೆ ಎಳೆದುಕೊಳ್ಳುತ್ತಾನೆ.

    ಆದ್ದರಿಂದ ನಾವು ಯಾವಾಗಲೂ ಜಾಗರೂಕರಾಗಿರುವದು ಅವಶ್ಯವಾಗಿದೆ. ಸೈತಾನನು ಯಾವಾಗಲೂ ಗರ್ಜಿಸುವ ಸಿಂಹದೋಪಾದಿಯಲ್ಲಿ ಬಂದರೆ, ನಾವು ಅವನನ್ನು ಸುಲಭವಾಗಿ ಗುರುತುಹಿಡಿಯುವವರಾಗಿದ್ದೇವೆ. ಆದರೆ ಅವನು ಯಾವಾಗಲೂ ಹಾಗೇ ಬರುವುದಿಲ್ಲ. ಅವನು ಕೆಲವು ವೇಳೆಗಳಲ್ಲಿ ಸವಿಯಾಗಿ ಮತ್ತು ಸುಂದರವಾಗಿ, "ಪ್ರಕಾಶರೂಪವುಳ್ಳ ದೇವದೂತ" ನಾಗಿ ಬರುತ್ತಾನೆ (2 ಕೊರಿಂಥ 11:14). ಈ ಕಾರಣದಿಂದ ನಾವು ನಿಜವಾಗಿಯೂ ಎಚ್ಚರವಾಗಿರಬೇಕು.

    ಯೇಸುಸ್ವಾಮಿ ತಾನು ಶ್ರಮಪಡುವುದನ್ನೂ ಶಿಲುಬೆಯ ಮೇಲೆ ಸಾಯುವುದನ್ನೂ ಕುರಿತು ತನ್ನ ಶಿಷ್ಯರಿಗೆ ಹೇಳಿದಾಗ ಪೇತ್ರನು, "ಇಲ್ಲ ಸ್ವಾಮಿ, ಅದು ನಿನಗೆ ಆಗಬಾರದು" ಎಂದು ಹೇಳಿದ್ದನ್ನು ಅಲೋಚಿಸಿರಿ. ಆದರೆ ಯೇಸು ಸ್ವಾಮಿ ಪೇತ್ರನನ್ನು ಕೂಡಲೇ, "ಸೈತಾನನೇ, ನನ್ನ ಮುಂದೆ ನಿಲ್ಲಬೇಡ" ಎಂದು ಹೇಳಿ ಗದರಿಸಿದನು (ಮತ್ತಾಯ 16:23). ಶಿಲುಬೆಯ ಮರಣವನ್ನು ತಡೆಯುವ ಸಲಹೆ - ಅದು ಪೇತ್ರನ ಮೂಲಕ ಬಂದರೂ ಆ ಸಲಹೆಯು ಸೈತಾನನ ಸ್ವರವೆಂದು ಯೇಸು ಸ್ವಾಮಿ ಗುರುತು ಹಿಡಿದನು.

    ಯೇಸು ತಾನು ಶಿಲುಬೆಗೆ ಹೋಗಬೇಕಾಗಿತ್ತೆಂದು ತಿಳಿದಿದ್ದನು. ಯಾಕೆಂದರೆ ಮನುಷ್ಯರ ಪಾಪಗಳು ಕ್ಷಮಿಸಲ್ಪಡುವುದಕ್ಕೆ ಅದೊಂದೇ ಮಾರ್ಗವಾಗಿತ್ತು. ಪೇತ್ರನಿಗೆ ಅದು ಗೊತ್ತಿರಲಿಲ್ಲ. ಪೇತ್ರನು ಒಳ್ಳೇ ಅರ್ಥದಿಂದ ಹೇಳಿದ್ದರೂ ಯೇಸು ಸ್ವಾಮಿ ಶಿಲುಬೆಗೆ ಹೋಗದಂತೆ ಪ್ರಯತ್ನಿಸಿ ನಿಲ್ಲಿಸಲು, ಸೈತಾನನೇ ತನ್ನ ಮೂಲಕ ಮಾತಾಡುತ್ತಿದ್ದಾನೆ ಎಂದು ಆ ಕ್ಷಣದಲ್ಲಿ ಪೇತ್ರನು ಗ್ರಹಿಸಲಿಲ್ಲ. ಹೌದು, ಮಾನವೀಯವಾಗಿ ಮಾತಾಡುವಾಗ ಸೈತಾನನು ನಮಗೆ ಹತ್ತಿರದ ಸ್ನೇಹಿತನಿಂದಲೂ ಕೂಡ ಬಂದು ಕರುಣೆ, ಒಳ್ಳೇ ಅಭಿಪ್ರಾಯದಿಂದ ಯಾವುದಾದರೊಂದು ಸಲಹೆ ಕೊಡುತ್ತಾ, ನಮ್ಮ ಬಳಿ ಬರುತ್ತಾನೆ. ಆದ್ದರಿಂದ ನಾವು ಎಲ್ಲಾ ಸಮಯಗಳಲ್ಲಿ ಎಚ್ಚರವಾಗಿರಬೇಕು.

    ನಾವು ಸಣ್ಣ ತಪ್ಪು ಮಾಡಿದಾಗಲೂ ನಮಗೆ ಬಲವಾಗಿ ಮಾತಾಡುವ ಸೂಕ್ಷ್ಮವಾದ ಮನಸ್ಸಾಕ್ಷಿಗಾಗಿ ಹಾರೈಸಬೇಕು.

    ಚಿಕ್ಕ ಮಗುವಿನ ಪಾದದ ಅಂಗಾಲನ್ನು ನೋಡಿರಿ ಎಷ್ಟು ಮೃದು, ಕೋಮಲವಾಗಿರುತ್ತದೆ! ನಿಮ್ಮ ಸ್ವಂತ ಕಾಲಿನ ಅಂಗಾಲಿನೊಂದಿಗೆ ಅವುಗಳನ್ನು ಹೋಲಿಸಿರಿ. ಎಷ್ಟು ವ್ಯತ್ಯಾಸವಾಗಿರುತ್ತದೆ! ನಿಮ್ಮ ಕಾಲಿನ ಪಾದಗಳು ಬಹಳ ಬಿರುಸಾಗಿವೆ. ಇದರಂತೆ ನಿಮ್ಮ ಮನಸ್ಸಾಕ್ಷಿಯು ಸಹ ಇರಬಹುದು.

    ನೀವು ಹುಟ್ಟಿದಾಗ ನಿಮಗೆ ಸೂಕ್ಷ್ಮವಾದ ಮನಸ್ಸಾಕ್ಷಿ ಇತ್ತು. ಚಿಕ್ಕ ಮಗುವಿನ ಕಾಲಿನ ಮೃದು ಪಾದಗಳಂತೆ ನೀವು ಮಾಡಿದ ಆ ಚಿಕ್ಕ ತಪ್ಪಿಗೂ ಸೂಕ್ಷ್ಮವಾಗಿತ್ತು. ಆದರೆ ನೀವು ಬೆಳೆದಂತೆ ನಿಮ್ಮ ತಂದೆ ತಾಯಿಗಳಿಗೆ ಸುಳ್ಳುಗಳನ್ನು ಹೇಳಿದಿರಿ, ಅವರನ್ನು ವಂಚಿಸಿ ವಸ್ತುಗಳನ್ನು ಕಳ್ಳತನಮಾಡಿದಿರಿ ಅನೇಕ ವಿಷಯಗಳಲ್ಲಿ ಇತರರನ್ನು, ನೋಯಿಸಿದಿರಿ, ಪರೀಕ್ಷೆಗಳಲ್ಲಿ ಮೋಸಮಾಡಿ ತಂದೆ ತಾಯಿಗಳಿಗೆ ವಿರುದ್ಧವಾಗಿ ತಿರುಗಿ ಬಿದ್ದು ಇನ್ನೂ ಬೇರೆ ಕೆಟ್ಟ ವಿಷಯಗಳನ್ನು ಮಾಡಿದಿರಿ. ಹೀಗೆ ನೀವು ನಿಮ್ಮ ಕಾಲಿನ ಅಂಗಾಲುಗಳಂತೆ ಕಠಿಣವಾಗಿ ಪಾಪಕ್ಕೆ ಸೂಕ್ಷ್ಮತೆ ಇಲ್ಲದೆ ಹೋಗುವವರೆಗೆ ನಿಮ್ಮ ಮನಸ್ಸಾಕ್ಷಿಯನ್ನು ಅಲಕ್ಷ್ಯಮಾಡಿ ದುರುಪಯೋಗ ಪಡಿಸಿಕೊಂಡಿರಿ.

    2 ಕೊರಿಂಥ. 2:11ರಲ್ಲಿ ಒಂದು ಸಾರಿ ಪೌಲನು, "ನಾವು ಸೈತಾನನ ಯೋಚನೆಗಳನ್ನು ಅರಿಯದವರಲ್ಲವಲ್ಲಾ" ಎಂದು ಹೇಳಿದ್ದಾನೆ.

    ಸೈತಾನನು ನೋಡಲು ತುಂಬಾ ಆಕರ್ಷಣೆಯಾಗಿರುವ ವಸ್ತುವಿನೊಂದಿಗೆ ಹವ್ವಳನ್ನು ಶೋಧಿಸುತ್ತಾ ಬಹಳ ಜಾಣತನದಿಂದ ಅವಳ ಹತ್ತಿರ ಬಂದು, ಕೊನೆಗೆ ಅವಳನ್ನು ನಾಶಮಾಡಿದನು. ಸೈತಾನನು ಈ ದಿನವೂ ಅದೇ ರೀತಿಯಾಗಿ ನಮ್ಮನ್ನು ನಾಶಮಾಡಲು ಬರುತ್ತಾನೆ. ಈಗ ತಾನೇ ಹೇಳಿದ ವಸ್ತುಗಳಿಂದ ಮಾತ್ರವಲ್ಲದೆ ಇನ್ನೂ ನೇರವಾದ ಸೈತಾನನ ಆರಾಧನೆಯೊಂದಿಗೆ ಬರುತ್ತಾನೆ. ಸೈತಾನನು ಜನರನ್ನು ಮಾಟ, ಕಾರಾಗೃಹ ಮತ್ತು ಪೌರಾಣಿಕ ಸರ್ಪ ಜ್ಯೋತಿ ಶಾಸ್ತ್ರ, ಜಾತಕ, ಅಂಗೈ ಓದುವುದು, ಹಾಗೂ ಮಾದಕ ವಸ್ತುಗಳು, ರಾಕ್‌ಸಂಗೀತ, ಕಣಿ, ಜೋತಿಷ್ಯ ಮುಂತಾದವುಗಳ ಮೂಲಕ ನಡಿಸುತ್ತಾನೆ. ಸೈತಾನನು ಜನರ ಮನಸ್ಸಿನೊಳಗೆ ಸೇರಲು ಸಾಧ್ಯವಾದ ಎಲ್ಲಾ ವಿಧಾನಗಳನ್ನು ಪ್ರಯತ್ನಿಸುತ್ತಾನೆ.

    ಯಾಕೆಂದರೆ ಪ್ರತಿ ವಿಗ್ರಹದ ಹಿಂದೆ, ಅದು 'ಬಾಲ ಯೇಸು' ಎಂದು ಅಥವಾ 'ಮರಿಯಳು' ಎಂದು ಕರೆಯಲ್ಪಟ್ಟಿದ್ದರೂ ಅಥವಾ ಏನೇ ಆಗಿದ್ದರೂ ವಿಗ್ರಹಾರಾಧನೆಯು ಸಹ ಜನರನ್ನು ಸೈತಾನನೊಂದಿಗೆ ಇರುವ ಸಂಪರ್ಕಕ್ಕೆ ನಡಿಸುತ್ತದೆ (1 ಕೊರಿಂಥ 10:19, 20) ನೋಡಿರಿ. ಆದಕಾರಣ ದೇವರು ವಿಗ್ರಹಾರಾಧನೆಯನ್ನು ಹಗೆ ಮಾಡುತ್ತಾನೆ ಮತ್ತು ಅದನ್ನು ಸಂಪೂರ್ಣವಾಗಿ ಬಿಟ್ಟುಬಿಡಲು ನಮಗೆ ಹೇಳುತ್ತಾನೆ (ವಿಮೋಚನಕಾಂಡ 20:4,5; 1 ಕೊರಿಂಥ 10:14; 1 ಯೋಹಾನ 5:21).

    ಸೈತಾನನು ಚಲನಚಿತ್ರಗಳ ಮೂಲಕ, ದೂರದರ್ಶನ ಕಾರ್ಯಕ್ರಮಗಳ ಹಾಗೂ ವೀಡಿಯೋ, ಸಿನಿಮಾ ಚಿತ್ರಗಳ ಮೂಲಕ ಕೆಟ್ಟ ಆಲೋಚನೆಗಳಿಂದ ಯೌವನಸ್ಥರ ಮನಸ್ಸನ್ನು ಸಹ ಅಪವಿತ್ರಪಡಿಸುತ್ತಾನೆ. ಪರದೆ ಮೇಲೆ ಲೈಂಗಿಕತ್ವ ಮತ್ತು ಬಲಾತ್ಕಾರವನ್ನು ನೀವು ನೋಡಿದಾಗ, ಅವುಗಳ ಬಗ್ಗೆ ನಿಮಗೆ ಕನಸು ಬೀಳುವುದಿಲ್ಲವೆ? ಭಯದ ಮತ್ತು ಹೊಲಸಾದ ಇವೆರಡೂ ಕನಸುಗಳು ನಿಮಗೆ ಬೀಳುವವು. ನಿಮ್ಮ ಇಡೀ ಜೀವಿತವನ್ನು ಕ್ರಮೇಣ ನಾಶಮಾಡುವುದಕ್ಕೋಸ್ಕರ ಹೀಗೆ ಭಯದಿಂದ ಮತ್ತು ಅಶುದ್ಧತ್ವದಿಂದ ನಿಮ್ಮ ಮನಸ್ಸನ್ನು ನುಗ್ಗಿ ಹೋಗುತ್ತಾನೆ.

    ಹವ್ವಳು ಆ ಮರದ ಕಡೆಗೆ ಎಳೆಯಲ್ಪಟ್ಟಾಗ ದೇವರ ಸಹಾಯಕ್ಕಾಗಿ ಕೂಗಿದ್ದರೆ ಮಾತ್ರ ಕಥೆಯು ಬಹಳ ವ್ಯತ್ಯಾಸವಾಗಿರುತ್ತಿತ್ತು.

    ನಾನು 19ನೇ ವಯಸ್ಸಿನಲ್ಲಿ ಕ್ರೈಸ್ತನಾದಾಗ, ಚಲನಚಿತ್ರಕ್ಕೆ ಇನ್ನು ಎಂದಿಗೂ ಹೋಗಬಾರದು ಎಂದು ನನಗೆ ಗೊತ್ತಿತ್ತು. ಆದರೆ ಒಂದು ದಿನ ನನ್ನ ಸ್ನೇಹಿತರು ನೌಕ ಸೈನ್ಯದ (ನಾನು ಕೆಲಸ ಮಾಡುತ್ತಿದ್ದ ಸ್ಥಳ) ಸಿನಿಮಾ ಮಂದಿರದಲ್ಲಿರುವ ಚಲನಚಿತ್ರಕ್ಕೆ ಅವರ ಜೊತೆ ಹೋಗಲು ನನ್ನನ್ನು ಕೇಳಿಕೊಂಡರು. ನಾನು ಕ್ರೈಸ್ತನಾಗಿದ್ದದರಿಂದ ಬರುವುದಿಲ್ಲ ಎಂದು ಹೇಳಲು ನನಗೆ ಧೈರ್ಯ ಇರಲಿಲ್ಲ ಎಂಬುದನ್ನು ಆಗ ನಾನು ಕಂಡುಕೊಂಡೆ. ಅದ್ದರಿಂದ ಸಿನಿಮಾ ಮಂದಿರಕ್ಕೆ ಅವರೊಂದಿಗೆ ನಡೆದೆ. ಆದರೆ ದಾರಿಯಲ್ಲೆಲ್ಲಾ ನಾನು ದೇವರಿಗೆ, "ಕರ್ತನೇ ದಯವಿಟ್ಟು ನನಗೆ ಸಹಾಯ ಮಾಡು, ಈ ಸನ್ನಿವೇಶದಿಂದ ನನ್ನನ್ನು ರಕ್ಷಿಸು. ನನಗೆ ಹೋಗಲು ಇಷ್ಟವಿಲ್ಲ" ಎಂಬುದಾಗಿ ಮೌನವಾಗಿ ಪ್ರಾರ್ಥಿಸುತ್ತಾ ಇದ್ದೆನು. ಕೊನೆಗೆ ನಾವು ಸಿನಿಮಾ ಮಂದಿರವನ್ನು ತಲುಪಿದಾಗ, ಸಿನಿಮಾ ಚಿತ್ರವು ಸಿಗಲಿಲ್ಲವಾದ್ದರಿಂದ ಆ ದಿನದ ಚಲನಚಿತ್ರ ರದ್ದು ಮಾಡಲೇಬೇಕಾಗಿದೆ ಎಂದು ಒಂದು ಪ್ರಕಟನೆ ಅಲ್ಲಿ ಹಲಗೆ ಮೇಲೆ ಹಾಕಲ್ಪಟ್ಟಿತ್ತು. ನನ್ನ ಪ್ರಾರ್ಥನೆಗೆ ಆಶ್ಚರ್ಯಕರವಾಗಿ ಉತ್ತರಕೊಟ್ಟದ್ದಕ್ಕಾಗಿ ನಾನು ಕರ್ತನನ್ನು ಸ್ತುತಿಸಿದೆ. ಆದರೆ ನಂತರ ಕರ್ತನು ನನಗೆ ಮಾತಾಡಿ, "ಈ ಸಮಯದಲ್ಲಿ ನಾನು ನಿನಗೆ ಸಹಾಯ ಮಾಡಿದೆ. ಆದರೆ ಇನ್ನೊಂದು ಸಾರಿ ನೀನಾಗಿಯೇ 'ಇಲ್ಲ' ಎಂದು ಹೇಳಬೇಕು" ಎಂದು ಹೇಳಿದನು. ಅದೇ ಪ್ರಕಾರ ಇನ್ನೊಂದು ಸಾರಿ ನನ್ನ ಸ್ನೇಹಿತರು ನನ್ನ ಬಳಿ ಬಂದರು. ನನ್ನ ಪ್ರಾರ್ಥನೆಗೆ ದೇವರು ಅದ್ಭುತವಾಗಿ ಉತ್ತರ ಕೊಟ್ಟಿದ್ದರಿಂದ ನಾನು ಬಹಳ ಉತ್ತೇಜನಗೊಂಡು ಅವರಿಗೆ ಸುಲಭವಾಗಿ "ಇಲ್ಲ" ಎಂದು ನಾನು ಹೇಳುವುದಕ್ಕಾಯಿತು.

    ದೇವರು ಏದೆನ್ ತೋಟದಲ್ಲಿ ಆದಾಮ ಮತ್ತು ಹವ್ವರ ಪಾಪವನ್ನು ಮುಖಾಮುಖಿಯಾಗಿ ತೋರಿಸಿದಾಗ, ಆತನು ಸೈತಾನನನ್ನು ಸಹ, "ಸ್ತ್ರೀಯ ಸಂತಾನವು ನಿನ್ನ ತಲೆಯನ್ನು ಜಜ್ಜುವುದು ನೀನು ಅದರ ಹಿಮ್ಮಡಿಯನ್ನು ಕಚ್ಚುವಿ" ಎಂದು ಹೇಳಿ ಶಪಿಸಿದನು (ಆದಿಕಾಂಡ 3:15). ಇದು ಕಲ್ವಾರಿಯ ಮೇಲೆ ನಡೆಯಿತು. ಯೇಸು ಕ್ರಿಸ್ತನು ಸ್ತ್ರೀಯಿಂದ ಹುಟ್ಟಿದವನು, ಆತನು ಸೈತಾನನ ತಲೆಯನ್ನು ಕಲ್ವಾರಿಯ ಮೇಲೆ ಜಜ್ಜಿದನು; ಮತ್ತು ಯೇಸುವಿನ ಪಾದಗಳ ಮೂಲಕ ಹೋದಂತ ಮೊಳೆಗಳಿಂದ ಸೈತಾನನು ಯೇಸುವಿನ ಹಿಮ್ಮಡಿಯನ್ನು ಕಚ್ಚಿದನು.

    ಆದಕಾರಣ ಸೈತಾನನು ಮನುಷ್ಯನ ಮೇಲೆ ಎಂದೆಂದಿಗೂ ಅಧಿಕಾರ ನಡಿಸುವುದಿಲ್ಲ ಎಂಬ ನಿರೀಕ್ಷೆಯೊಂದಿಗೆ ಆದಿಕಾಂಡ 3 ಕೊನೆಗೊಳ್ಳುವುದನ್ನು ನಾವು ನೋಡುತ್ತೇವೆ. ಯೇಸು ಬಂದು ಸೈತಾನನನ್ನು ಸೋಲಿಸಿದನು; ಈಗ ಆತನು ಮತ್ತು ಸೈತಾನನ ಶಕ್ತಿಯಿಂದ ಎಲ್ಲಾ ಮನುಷ್ಯರನ್ನು ಬಿಡುಗಡೆ ಮಾಡಬಲ್ಲನು.

    ಸೈತಾನನಿಗೆ ನಿಮ್ಮ ಜೀವಿತದ ಮೇಲೆ ಇನ್ನು ಎಂದಿಗೂ ಶಕ್ತಿ ಇರುವ ಅವಶ್ಯ ಇಲ್ಲ. ಯೇಸು ಕ್ರಿಸ್ತನು ಶಿಲುಬೆ ಮೇಲೆ ಸತ್ತಾಗ, ಆತನು ನಿಮ್ಮ ಮೇಲಿರುವ ಸೈತಾನನ ಶಕ್ತಿಯನ್ನು ಸಂಪೂರ್ಣವಾಗಿ ಸೋಲಿಸಿದ್ದಾನೆ ಎಂದು ನೀವು ನಂಬಿದರೆ, ನಿಮ್ಮ ಕಠಿಣವಾದ ಮನಸ್ಸಾಕ್ಷಿಯು ಚಿಕ್ಕ ಮಗುವಿನ ಮನಸ್ಸಾಕ್ಷಿಯಂತೆ ತಿರುಗಿ ಪುನಃ ಸೂಕ್ಷ್ಮತೆಯುಳ್ಳದ್ದಾಗಿ ಇರುವುದು.

    ಸತ್ಯವೇದವು ಸೈತಾನನನ್ನು ದೂರುಗಾರನು ಎಂದು ಕರೆಯುತ್ತದೆ (ಪ್ರಕಟನೆ 12:10). ನೀವು ನಿಮ್ಮ ಅಪಜಯಗಳನ್ನು ಮತ್ತು ಪಾಪಗಳನ್ನು ನೂರು ಸಾರಿ ದೇವರಿಗೆ ಅರಿಕೆ ಮಾಡಿದ್ದರೂ, ಸೈತಾನನು ನಿಮ್ಮ ಪಾಪ ಅಪಜಯಗಳ ಬಗ್ಗೆ ನಿಮ್ಮ ಮೇಲೆ ದೋಷಾರೋಪಣೆ ಮಾಡುತ್ತಿರುವನು. ಸೈತಾನನ ದೋಷಾರೋಪಣೆಯನ್ನು ಜಯಿಸಲು ನಿಮ್ಮ ಎಲ್ಲಾ ಪಾಪಗಳನ್ನು ದೇವರಿಗೆ ಅರಿಕೆ ಮಾಡಿರಿ; ಕಲ್ವಾರಿ ಶಿಲುಬೆಯ ಮೇಲೆ ನಿಮ್ಮ ಪಾಪಗಳಿಗೋಸ್ಕರ ಯೇಸು ಸುರಿಸಿದ ರಕ್ತದಿಂದ ನಿಮ್ಮನ್ನು ಸಂಪೂರ್ಣವಾಗಿ ತೊಳೆಯುತ್ತಾನೆ ಎಂಬ ವಾಗ್ದಾನವನ್ನು ದೇವರು ನೆರವೇರಿಸುತ್ತಾನೆ ಎಂದು ನಂಬುವುದೇ ಸೈತಾನನ ದೋಷಾರೋಪಣೆಗಳನ್ನು ಜಯಿಸಲಿಕ್ಕೆ ಒಂದೇ ಮಾರ್ಗವಾಗಿದೆ (1 ಯೋಹಾನ 1:7,9). ದೋಷಾರೋಪಣೆಯು ದೇವರ ಮಕ್ಕಳನ್ನು ಬೆದರಿಸುವ ಸೈತಾನನ ಮೊದಲ ವಿಧಾನವಾಗಿದೆ. ಸೈತಾನನನ್ನು ಜಯಿಸಲು ನೀವು ದೇವರ ವಾಕ್ಯವನ್ನು ತಿಳಿಯಲೇಬೇಕು.

    ನೀವು ನಿಮ್ಮ ಪಾಪವನ್ನು ದೇವರಿಗೆ ಎರಡು ಸಾರಿ ಸಹ ಅರಿಕೆ ಮಾಡಬೇಕಾಗಿಲ್ಲ. ನೀವು ಒಂದು ಸಾರಿ ಮಾತ್ರ ನಿಮ್ಮ ಪಾಪವನ್ನು ಅರಿಕೆ ಮಾಡಿದ ಕೂಡಲೇ ತಕ್ಷಣ ನಿಮ್ಮನ್ನು ಕ್ಷಮಿಸುವುದಕ್ಕೆ ದೇವರು ನಂಬಿಗಸ್ತನಾಗಿದ್ದಾನೆ. ನಿಮ್ಮ ಹಿಂದಿನದೆಲ್ಲಾ ಕ್ರಿಸ್ತನ ರಕ್ತದಿಂದ ಅಳಿಸಲ್ಪಟ್ಟಿದೆ ಎಂದು ಸೈತಾನನಿಗೆ ನೀವು ಹೇಳುವುದರ ಮೂಲಕ ಸೈತಾನನನ್ನು ಈಗ ಜಯಿಸಬಲ್ಲಿರಿ (ಪ್ರಕಟನೆ 12:11 ನೋಡಿರಿ).

    ಯೇಸು ನಿಮ್ಮ ಪಾಪಗಳನ್ನು ಕ್ಷಮಿಸಿ ಬಿಡುವುದಕ್ಕೆ ಮಾತ್ರ ಸಾಯದೆ ನಿಮ್ಮನ್ನು ಅನೇಕ ಕೆಟ್ಟಚಟಗಳಿಂದ ನಿಮ್ಮನ್ನು ಗುಲಾಮರನ್ನಾಗಿ ಮಾಡಿದ್ದ ಸೈತಾನನ ಶಕ್ತಿಯಿಂದ ಬಿಡುಗಡೆ ಮಾಡಲು ಸಹ ಯೇಸು ಸತ್ತನು. ಸೈತಾನನ ತಲೆಯು ಸಂಪೂರ್ಣವಾಗಿ ನಿಮ್ಮ ರಕ್ಷಕನಿಂದ ಜಜ್ಜಲ್ಪಟ್ಟಿದೆ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ದೇವರಿಗೆ ಸ್ತೋತ.

    ಅಧ್ಯಾಯ 4
    ದೇವರು ಸೈತಾನನನ್ನು ಏಕೆ ನಾಶಮಾಡಲಿಲ್ಲ?

    ಮನುಷ್ಯನನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸುವಂಥದ್ದೇನು?

    ಅವನು ತನ್ನ ಶಾರೀರಿಕ ಮತ್ತು ಲೌಕಿಕ ಅವಶ್ಯಕತೆಯಲ್ಲಿ ಆಸಕ್ತನಾಗಿದ್ದರೆ ಮಾತ್ರ ಇದು ಅವನನ್ನು ಪ್ರಾಣಿಗಳ ಮಟ್ಟಕ್ಕೆ ಇಳಿಸುವಂಥದ್ದಾಗಿದೆ. ಪ್ರಾಣಿಯು ಯಾವುದರಲ್ಲಿ ಆಸಕ್ತಿಹೊಂದಿದೆ? ಊಟ, ನಿದ್ದೆ ಮತ್ತು ಲೈಂಗಿಕ ತೃಪ್ತಿಗಳ ಬಗ್ಗೆ ಮಾತ್ರ ಆಸಕ್ತಿ ಹೊಂದಿದೆ. ಮನುಷ್ಯನು ಇವುಗಳಲ್ಲಿ ಮಾತ್ರ ಆಸಕ್ತಿಯಿಂದ ಇದ್ದಾಗ, ಅವನು ಪ್ರಾಣಿಗಳ ಮಟ್ಟಕ್ಕೆ ಇಳಿದಿದ್ದಾನೆ ಎಂದು ನಾವು ಹೇಳಬಹುದು.

    ಆದರೆ ದೇವರು ಮನುಷ್ಯನನ್ನು ಬರೀ ಪ್ರಾಣಿಗಳಂತೆ ಇರಲು ಉಂಟುಮಾಡಲಿಲ್ಲ. ವಿದ್ಯೆಯು ಮನುಷ್ಯನನ್ನು ಪ್ರಾಣಿಗಳಿಗಿಂತ ಶ್ರೇಷ್ಠನನ್ನಾಗಿ ಮಾಡುವುದಿಲ್ಲ, ಕಾರಣ ಒಳ್ಳೇ ವಿದ್ಯಾವಂತನೂ ಸಹ ಒಮ್ಮೊಮ್ಮೆ ಕೇವಲ ಪ್ರಾಣಿಗಳಂತೆ ವರ್ತಿಸುತ್ತಾನೆ.

    ನಮ್ಮ ಮನಸ್ಸಿಗಿಂತ ಆಳವಾದ ಒಂದು ಭಾಗ ಇದೆ. ಅದು ಆತ್ಮವೆಂದು ಕರೆಯಲ್ಪಟ್ಟಿದೆ. ನಮ್ಮ ಆತ್ಮವು ದೇವರ ಬಗ್ಗೆ ನಮ್ಮನ್ನು ಗ್ರಹಿಕೆಯುಳ್ಳವರಾಗಿರುವಂತೆ ಮಾಡುತ್ತದೆ.

    ದೇವರು ಮನುಷ್ಯನನ್ನು ಉಂಟು ಮಾಡಿದಾಗ ಅವನನ್ನು ಸ್ವತಂತ್ರವಾದ ಚಿತ್ತದೊಂದಿಗೆ ಉಂಟುಮಾಡಿದನು. ಅವನಿಗೆ ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಕೊಟ್ಟನು.

    ಸೈತಾನನು ದೇವದೂತನಾಗಿ ಸೃಷ್ಟಿಸಲ್ಪಟ್ಟಾಗ ಅವನು ಸಹ ಆರಿಸುವಿಕೆಯ ಸ್ವಾತಂತ್ರ್ಯದೊಂದಿಗೆ ಸೃಷ್ಟಿಸಲ್ಪಟ್ಟನು. ಆದ್ದರಿಂದ ಅವನು, "ನಾನು ದೇವರ ಸಿಂಹಾಸನಕ್ಕಿಂತ ಮೇಲೆ ಹತ್ತುವೆನು" ಎಂದು ಹೇಳಲು ಸಾಧ್ಯವಾಯಿತು.

    ದೇವರು ಉಂಟು ಮಾಡಿದ ಅನೇಕ ವಸ್ತುಗಳು ಸ್ವತಂತ್ರವಾದ ಚಿತ್ತವನ್ನು ಹೊಂದಿಲ್ಲ ಉದಾಹರಣೆಗೆ, ನಕ್ಷತ್ರಗಳು ಮತ್ತು ಗ್ರಹಗಳು. ನಮ್ಮ ಸೌರ ವ್ಯೂಹದಲ್ಲಿ ಗ್ರಹಗಳು ದೇವರ ನಿಯಮಗಳಿಗೆ ವಿರುದ್ಧವಾಗಿ ಸಾವಿರ ವರುಷಗಳಲ್ಲಿ ಎಂದಿಗೂ ತಿರುಗಿಬಿಳಲಿಲ್ಲ. ಯಾಕೆ? ಕಾರಣ ಅವುಗಳಿಗೆ ಆರಿಸಿಕೊಳ್ಳಲು ಸ್ವಾತಂತ್ರ್ಯ ಇಲ್ಲ. ಆದರೆ ಗ್ರಹಗಳು ದೇವರ ಮಕ್ಕಳಾಗಲು ಸಾಧ್ಯವಿಲ್ಲ. ಒಬ್ಬನು ದೇವರ ಮಗುವಾಗಬೇಕಾದರೆ ತನ್ನ ಸಂತೋಷದಿಂದ ತನಗೆ ಬೇಕಾದದ್ದನ್ನು ಅವನು ಸ್ವತಂತ್ರವಾದ ಇಷ್ಟದೊಂದಿಗೆ ಆರಿಸಿಕೊಳ್ಳಲು ಉಂಟು ಮಾಡಲ್ಪಟ್ಟಿರಬೇಕು.

    ಆದರೆ ಸ್ವತಂತ್ರವಾದ ಆರಿಸುವಿಕೆ ಇರುವುದರಿಂದ ಅಪಾಯವೇನೆಂದರೆ, ನೀವು ಅದನ್ನು ನಿಮ್ಮನ್ನು ಮೆಚ್ಚಿಸಿಕೊಳ್ಳಲು ಮತ್ತು ದೇವರ ಆಜ್ಞೆಗಳಿಗೆ ಅವಿಧೇಯರಾಗಲು ಉಪಯೋಗಿಸಬಹುದು. ಆದರೆ ದೇವರಿಗೆ ವಿಧೇಯ ಮಕ್ಕಳು ಮಾತ್ರ ಬೇಕಾದ್ದರಿಂದ ಆತನು ಆ ಸಾಹಸವನ್ನು ತೆಗೆದುಕೊಳ್ಳಲು ಮನಸ್ಸುಮಾಡಿದನು. ದೇವರ ಉದ್ದೇಶದಲ್ಲಿ ಸೈತಾನನು ಸಹ ತನ್ನ ಕಾರ್ಯವನ್ನು ನೆರವೇರಿಸುತ್ತಾನೆ.

    ಲೋಕದ ಎಲ್ಲಾ ಗಲಿಬಿಲಿ, ತೊಡಕು, ಅವ್ಯವಸ್ಥತೆ, ರೋಗಗಳು ಮತ್ತು ಕೆಟ್ಟತನವು ಏದೆನ್ ತೋಟದಲ್ಲಿ ಮನುಷ್ಯನು ದೇವರಿಗೆ ಅವಿಧೇಯನಾಗಿ ಸೈತಾನನ ಸ್ವರಕ್ಕೆ ಕಿವಿಗೊಟ್ಟಿದ್ದರ ನೇರವಾದ ಪರಿಣಾಮವಾಗಿದೆ.

    ಹಾಗಾದರೆ ನಾವು ಈ ಪ್ರಶ್ನೆ ಕೇಳಬಹುದು - "ಸೈತಾನನು ಲೋಕದಲ್ಲಿನ ಎಲ್ಲಾ ಸಮಸ್ಯೆಗಳಿಗೆ ಮೂಲ ಕಾರಣನಾಗಿದ್ದರೆ, ದೇವರು ಸೈತಾನನನ್ನು ಯಾಕೆ ನಾಶಮಾಡುವುದಿಲ್ಲ?"

    ಒಳ್ಳೇದು, ದೇವರ ಜ್ಞಾನವು ನಮ್ಮ ಜ್ಞಾನಕ್ಕಿಂತ ದೊಡ್ಡದಾಗಿದೆ ಎಂದು ಕನಿಷ್ಠ ಪಕ್ಷ ನಾವು ನಂಬಲು ಸಾಧ್ಯವೆಂದು ನಿರೀಕ್ಷಿಸುತ್ತೇನೆ. ನಮ್ಮ ಜ್ಞಾನವು ಸಣ್ಣ ಲೋಟದಲ್ಲಿನ ನೀರಿನಂತಿದ್ದರೆ, ದೇವರ ಜ್ಞಾನವು ಸಮುದ್ರದಂತೆ ಇದೆ.

    ದೇವರು ಸೈತಾನನನ್ನು ಲೋಕದ ಮೇಲೆ ಜೀವಿಸುವಂತೆ ಮತ್ತು ಚಟುವಟಿಕೆಯುಳ್ಳವನಾಗಿರುವಂತೆ ಅನುಮತಿಸಿರುವುದರಲ್ಲಿ, ಬಹಳ ಒಳ್ಳೇ ಕಾರಣವಿದೆ ಎಂದು ನಾವು ನಿಶ್ಚಯಿಸಬಹುದು.

    ದೇವರು ಸೈತಾನನ ಕಾರ್ಯಗಳ ಮೂಲಕವಾಗಿ ಎಷ್ಟೋ ವಿಷಯಗಳನ್ನು ಪೂರೈಸುತ್ತಾನೆ ಆದ್ದರಿಂದ ದೇವರು ಸೈತಾನನನ್ನು ಜೀವಿಸಲು ಅನುಮತಿಸಿದ್ದಾನೆ.

    ಮನುಷ್ಯನು ದೇವರ ಕಡೆಗೆ ತಿರುಗಿಕೊಳ್ಳಲಿ ಎಂದು ಭೂಮಿಯ ಮೇಲಿನ ಹೆಚ್ಚು ದುಷ್ಟತನ, ನಷ್ಟ, ಕಷ್ಟಕ್ಕೆ ಸೈತಾನನು ಕಾರಣನಾಗುವಂತೆ ದೇವರು ಅವನನ್ನು ಅನುಮತಿಸಿರುವುದು ಒಂದು ಕಾರಣವಾಗಿದೆ.

    ಯಾವ ಕಾಯಿಲೆ, ಕಷ್ಟಾನುಭವ, ಬಡತನ ಮತ್ತು ದುಃಖಾವಸ್ಥೆಗಳಿಲ್ಲದೆ ಒಂದು ವೇಳೆ ಈ ಲೋಕದ ಜೀವನ ಬಹಳ ಅನುಕೂಲವಾಗಿದ್ದರೆ, ಯಾರಾದರೂ ದೇವರ ಬಗ್ಗೆ ಯೋಚಿಸುತ್ತಿದ್ದರು ಎಂದು ಗ್ರಹಿಸುತ್ತೀರಾ?

    ದೇವರು ಅನುಮತಿಸುವುದೆಲ್ಲಾ ಒಂದು ಉದ್ದೇಶಕ್ಕಾಗಿಯೇ. ಇಸ್ರಾಯೇಲರು ಅರಣ್ಯದಲ್ಲಿ ದೇವರನ್ನು ಮರೆತುಬಿಟ್ಟಾಗ ಅವರಿಗೆ ವಿಷಭರಿತ ಹಾವುಗಳು ಕಚ್ಚಿದವು. ತಕ್ಷಣವೇ ಅವರು ದೇವರ ಕಡೆಗೆ ತಿರುಗಿ ಕೊಂಡರು ಮತ್ತು ಅವರನ್ನು ದೇವರು ಗುಣಪಡಿಸಿದನು ಎಂದು ನಾವು ಹಳೇ ಒಡಂಬಡಿಕೆಯಲ್ಲಿ ಓದುತ್ತೇವೆ (ಅರಣ್ಯಕಾಂಡ 21). ಅಲ್ಲಿದ್ದ ವಿಷಭರಿತ ಹಾವುಗಳು ಅವರು ದೇವರ ಕಡೆಗೆ ತಿರುಗಿಕೊಳ್ಳುವಂತೆ ಮಾಡಿದ್ದು ಒಳ್ಳೇ ಸಂಗತಿಯಾಗಿತ್ತಲ್ಲವೇ?

    ಒಬ್ಬ ಕಸಬುದಾರನ ಕಥೆಯನ್ನು ಕೇಳಿದೆ - ಅವನು ದೇವರಿಗೆ ಒಮ್ಮೆ ಹತ್ತಿರವಾಗಿದ್ದನು. ಆದರೆ ಅವನು ಏಳಿಗೆ ಹೊಂದಿದಂತೆಲ್ಲಾ ದೇವರಿಂದ ದೂರ ಹೋದನು. ಸಭೆಯಲ್ಲಿನ ಹಿರಿಯರು ಪದೇ ಪದೇ ಅವನೊಂದಿಗೆ ಮಾತಾಡಿ ಅವನು ಹಿಂತಿರುಗಿ ದೇವರ ಕಡೆಗೆ ತಿರುಗಿಕೊಳ್ಳಲಾಗುವಂತೆ ಪ್ರಯತ್ನಿಸಿದರು. ಆದರೆ ಅವನು ತನ್ನ ಕೆಲಸದೊಂದಿಗೆ ಬಹಳ ವ್ಯಾಪಿಸಲ್ಪಟ್ಟಿದ್ದನು. ಒಂದು ದಿನ ಅವನ ಮೂರು ಗಂಡು ಮಕ್ಕಳಲ್ಲಿ ಚಿಕ್ಕ ಮಗನಿಗೆ ವಿಷಭರಿತ ಹಾವು ಕಚ್ಚಿತು. ಮಗು ವಿಪರೀತವಾಗಿ ಕಾಯಿಲೆಯಾಯಿತು. ವೈದ್ಯರು ಸಹ ಎಲ್ಲಾ ನಿರೀಕ್ಷೆಯನ್ನು ಬಿಟ್ಟು ಬಿಟ್ಟರು. ಆಗ ತಂದೆಯು ನಿಜವಾಗಿ ಚಿಂತೆಮಾಡಿ, ಸಭೆಯ ಒಬ್ಬ ಹಿರಿಯರನ್ನು ಆ ಮಗುವಿಗಾಗಿ ಪ್ರಾರ್ಥಿಸಬೇಕೆಂದು ಕರೆದನು. ಆ ಹಿರಿಯರು ಬುದ್ಧಿವಂತರಾಗಿದ್ದರು. ಅವರು ಬಂದು "ಕರ್ತನೇ, ಈ ಮಗುವನ್ನು ಕಚ್ಚುವಂತೆ ಈ ವಿಷಭರಿತ ಹಾವನ್ನು ಕಳುಹಿಸಿದ್ದಕ್ಕಾಗಿ ವಂದನೆ! ನಿನ್ನನ್ನು ಎಂದಿಗೂ ಯೋಚಿಸುವಂತೆ ಈ ಕುಟುಂಬವು ನಮಗೆ ಸಿಕ್ಕಲಿಲ್ಲ. ಅದರೆ ಆರು ವರ್ಷಗಳಲ್ಲಿ ನಾವು ಪೂರೈಸದೆ ಇದ್ದದ್ದನ್ನು ಈ ಹಾವು ಒಂದು ಕ್ಷಣದಲ್ಲಿ ಮಾಡಿದೆ! ಈಗ ಇವರು ತಮ್ಮ ಪಾಠವನ್ನು ಕಲಿತಿದ್ದಾರೆ. ಕರ್ತನೇ, ಮಗುವನ್ನು ಸ್ವಸ್ಥಮಾಡು. ಅವರಿಗೆ ಮತ್ತೆ ನಿನ್ನನ್ನು ನೆನಪುಮಾಡಿಕೊಳ್ಳಲು ಇನ್ನೂ ಹೆಚ್ಚಿನ ಹಾವುಗಳ ಅವಶ್ಯಕತೆ ಎಂದಿಗೂ ಇಲ್ಲದಂತೆ ಅನುಗ್ರಹ ಮಾಡು", ಎಂದು ಪ್ರಾರ್ಥಿಸಿದರು.

    ಒಂದು ದಿನ ಅಕಸ್ಮಾತಾಗಿ ಕ್ಯಾನ್ಸರ್ ಕಾಯಿಲೆಯಿಂದ ಆಸ್ಪತ್ರೆಗೆ ಒಯ್ಯಲ್ಪಡುವಾಗ ಕೆಲವರು ತಕ್ಷಣವೇ ದೇವರ ಬಗ್ಗೆ ಯೋಚಿಸಲು ಪ್ರಾರಂಭಿಸಿ, ಕ್ರಿಸ್ತನ ಕಡೆಗೆ ತಿರುಗಿಕೊಂಡು ಹೊಸದಾಗಿ ಹುಟ್ಟುತ್ತಾರೆ. ಜನರನ್ನು ಅವರ ಪಾಪಗಳಿಂದ ದೂರ ತಿರುಗಿಸಿ ಪರಲೋಕದಲ್ಲಿ ಶಾಶ್ವತ ಮನೆ ಇರಲೆಂದು ಬೇನೆಗಳು, ಅಸ್ವಸ್ಥತೆ, ಬಡತನ ಮತ್ತು ಲೋಕದಲ್ಲಿ ದುಷ್ಟತನ ಎಲ್ಲವೂ ದೇವರಿಂದ ಉಪಯೋಗಿಸಲ್ಪಟ್ಟಿದೆ. ಸೈತಾನನ ಪೂರ್ತಿ ಬಿಗಿಹಿಡಿತದಿಂದ ಜನರನ್ನು ರಕ್ಷಿಸಲು ಮತ್ತು ನಿತ್ಯತ್ವಕ್ಕೆ ಅವರನ್ನು ಕಾಪಾಡಲು ಹೀಗೆ ದೇವರು ಸೈತಾನನು ಮಾಡುವ ಬಹಳಷ್ಟು ವಿಷಯಗಳನ್ನು ಉಪಯೋಗಿಸುತ್ತಾನೆ. ಈ ರೀತಿಯಾಗಿ ದೇವರು ಸೈತಾನನನ್ನು ಪುನಃ ಪುನಃ ಮುಟ್ಟಾಳನನ್ನಾಗಿ ಮಾಡುತ್ತಾನೆ.

    ದೇವರ ಮಕ್ಕಳಾಗಿರುವ ನಮ್ಮನ್ನು ಶುದ್ಧೀಕರಿಸಲು ಸಹ ದೇವರು ಸೈತಾನನನ್ನು ಉಪಯೋಗಿಸುತ್ತಾನೆ.

    ಉದಾಹರಣೆಗೆ, ?ಬೆಂಕಿಯನ್ನು ಅಲೋಚಿಸಿರಿ. ಲೋಕದ ಚರಿತ್ರೆಯಲ್ಲಿ ಕೋಟ್ಯಾಂತರ ಜನರು ಬೆಂಕಿಯಿಂದ ಸುಟ್ಟುಕೊಳ್ಳುವದರಿಂದ ಸತ್ತಿರುವುದು ನಮಗೆ ತಿಳಿದಿದೆ. ಆದರೂ ಬೆಂಕಿ ಉಪಯೋಗಿಸುವುದನ್ನುಇನ್ನೂ ಯಾರು ನಿಲ್ಲಿಸಲಿಲ್ಲ. ಯಾಕೆಂದರೆ ಬೆಂಕಿಯ ಮೂಲಕ ಆಹಾರ ?ಬೇಯುವುದು, ಮೋಟಾರು ಗಾಡಿಗಳು, ವಿಮಾನಗಳು, ಯಂತ್ರಗಳು ಚಲಿಸುವುದು,ಅಲ್ಲದೆ ಬೆಂಕಿಯು ಬಂಗಾರವನ್ನು ಶುದ್ಧೀರಿಸಲು ಸಹ ಉಪಯೋಗಿಸಲ್ಪಡುತ್ತದೆ. ಬೇರೆ ಯಾವ ವಿಧದಲ್ಲಿಯೂ ಬಂಗಾರವನ್ನು ಶುದ್ಧಮಾಡಲು ಆಗುವುದಿಲ್ಲ. ಈ ರೀತಿ ಬೆಂಕಿಯು ಬಹಳ ಒಳ್ಳೆಯ ಉಪಯೋಗಕ್ಕೆ ಇಡಬಹುದಾಗಿದೆ.

    ಅಥವಾ ವಿದ್ಯುತ್ತನ್ನು ಗಮನಿಸಿ. ಕೋಟ್ಯಾಂತರ ಜನರು ವಿದ್ಯುತ್ ತಗಲಿಸಿಕೊಳ್ಳುವುದರ ಮೂಲಕ ಸತ್ತಿದ್ದಾರೆ. ವಿದ್ಯುತ್ ನಿಜವಾಗಿಯೂ ಬಹಳ ಅಪಾಯಕರವಾದದ್ದು ಆದರೂ ಇದು ಬಹಳ ಒಳ್ಳೇ ಉದ್ದೇಶಗಳಿಗೆ ಉಪಯೋಗವಾಗುವಂತೆ ಮಾಡಲ್ಪಟ್ಟಿದೆ ಎಂದು ನಮಗೆಲ್ಲಾ ಗೊತ್ತಿದೆ. ಅದೇ ರೀತಿ ಸೈತಾನನು ಸಹ! ಆದಾಮ ಮತ್ತು ಹವ್ವರು ಉಂಟು ಮಾಡಲ್ಪಟ್ಟಾಗ ಅವರು ನಿಷ್ಕಳಂಕರಾಗಿದ್ದರು. ಅವರು ಪರಿಶುದ್ಧರಾಗಬೇಕಾಗಿದ್ದರೆ, ಅವರು ಆಯ್ಕೆಯನ್ನು ಮಾಡಬೇಕಾಗಿತ್ತು. ಅವರು ಆಯ್ಕೆ ಮಾಡಬೇಕಾದರೆ, ಅವರು ಶೋಧಿಸಲ್ಪಡಬೇಕಾಗಿತ್ತು. ಹೀಗೆ ಅವರು ದುಷ್ಟತನವನ್ನು ತಿರಸ್ಕರಿಸಿ ಅದರ ಬದಲಿಗೆ ದೇವರನ್ನು ಆರಿಸಿಕೊಳ್ಳಬಹುದಾಗಿತ್ತು. ಈ ಕಾರಣದಿಂದಲೇ ದೇವರು ಸೈತಾನನನ್ನು ಏದೇನ್ ತೋಟದೊಳಗೆ ಬರಲು ಅನುಮತಿಸಿ ಅವರನ್ನು ಶೋಧಿಸಿದನು.

    ಸೈತಾನನು ಏದೇನ್ ತೋಟದೊಳಗೆ ಪ್ರವೇಶಿಸುವುದನ್ನು ತಡೆಗಟ್ಟುವುದು ದೇವರಿಗೆ ಕಷ್ಟಕರವಾಗಿರಬಹುದೆಂದು ಯೋಚಿಸುತ್ತೀರಾ? ಇಲ್ಲವೇ ಇಲ್ಲ. ಆದರೆ ಶೋಧನೆಯಿಲ್ಲದೆ ಆದಾಮನು ಪರಿಶುದ್ಧನಾಗಲು ಸಾಧ್ಯವಿರಲಿಲ್ಲ. ಅವನು ಎಂದೆಂದಿಗೂ ಮುಗ್ಧನಾಗಿಯೇ ಉಳಿಯುತ್ತಿದ್ದನು.

    ಮುಗ್ಧತ್ವಕ್ಕೂ ಮತ್ತು ಪರಿಶುದ್ಧತೆಗೂ ಮಧ್ಯೆ ಬಹಳಷ್ಟು ವ್ಯತ್ಯಾಸವಿದೆ. ಕೂಸಿನಲ್ಲಿ ನೀವು ನೋಡುವುದೇ ನಿರ್ದೋಷತ್ವ. ಆದಾಮನು ಏನಾಗಿದ್ದನೆಂದು ನೀವು ತಿಳಿದುಕೊಳ್ಳಲು ಬಯಸುವುದಾದರೆ, ಮುಗ್ಧವಾಗಿ ಒಳ್ಳೇದರ ಕೆಟ್ಟದ್ದರ ಅರಿವಿಲ್ಲದ ಮಗುವನ್ನು ನೋಡಿರಿ.

    ಸಣ್ಣ ಮಗುವು ಮುಗ್ಧವಾಗಿರಬಹುದು. ಆದರೆ ಪರಿಶುದ್ಧವಾಗಿರುವುದಿಲ್ಲ, ಪರಿಪೂರ್ಣವಾಗಿರುವುದಿಲ್ಲ. ಮಗುವು ಪರಿಪೂರ್ಣವಾಗಬೇಕಾದರೆ, ಆ ಮಗುವು ಬೆಳೆಯಬೇಕು ಮತ್ತು ಕೆಟ್ಟದ್ದನ್ನು ತಿರಸ್ಕರಿಸುತ್ತಾ, ದೇವರನ್ನು ಆರಿಸಿಕೊಳ್ಳುತ್ತಾ, ಕೆಲವು ಆಯ್ಕೆಗಳನ್ನು ಮಾಡಬೇಕು.

    ಶೋಧನೆಗೆ ಒಳಗಾಗುವುದನ್ನು ನಾವು ಮನಸ್ಸಿನಲ್ಲಿ ತಿರಸ್ಕರಿಸಿದಾಗ ನಾವು ಗುಣವನ್ನು ವೃದ್ಧಿಪಡಿಸುತ್ತೇವೆ. ನೀವು ಇಂದು ಏನಾಗಿದ್ದೀರೊ ಅದು ಇಲ್ಲಿಯವರೆಗೂ ನಿಮ್ಮ ಜೀವಿತದಲ್ಲಿ ನೀವು ಮಾಡಿದ ಆಯ್ಕೆಗಳೇ ಕಾರಣವಾಗಿವೆ.

    ನಿಮ್ಮ ಸುತ್ತಲಿನ ಜನರು ನಿಮಗಿಂತ ಉತ್ತಮವಾಗಿದ್ದರೆ, ನೀವು ಮಾಡಿದ ಆಯ್ಕೆಗಳಿಗಿಂತ ಅವರು ತಮ್ಮ ಜೀವಿತದಲ್ಲಿ ಪ್ರತಿದಿನ ಉತ್ತಮ ಆಯ್ಕೆಗಳನ್ನು ಮಾಡಿರುವುದೇ ಕಾರಣವಾಗಿದೆ. ನಾವೆಲ್ಲರೂ ಪ್ರತಿದಿನ ಆಯ್ಕೆಗಳನ್ನು ಮಾಡುತ್ತಿದ್ದೇವೆ ಮತ್ತು ಆ ಆಯ್ಕೆಗಳೇ ನಾವು ಕೊನೆಗೆ ಏನಾಗುತ್ತೇವೆ ಎಂಬುದನ್ನು ನಿಶ್ಚಯಿಸುತ್ತವೆ.

    ಹವ್ವಳು ತೋಟದಲ್ಲಿ ಒಂದು ಆಯ್ಕೆಯನ್ನು ಮಾಡಿದಳು. ಅವಳು ತನ್ನ ಆಯ್ಕೆಯ ಮೂಲಕ ನಿಜವಾಗಿ, "ದೇವರು ನನ್ನ ಮೇಲೆ ಹೊರಿಸಿರುವ ಆಜ್ಞೆಗಳಿಂದ ಕಟ್ಟಲ್ಪಡುವುದಕ್ಕಿಂತ, ನಾನು ನನ್ನ ಶರೀರದ ಆಶೆಗಳನ್ನು ಮೆಚ್ಚಿಸಿ, ಸೈತಾನನು ನನಗೆ ಅರ್ಪಿಸುವುದನ್ನು ಅಂಗೀಕರಿಸುತ್ತೇನೆ. ನಾನು ಸ್ವಾತಂತ್ರಳಾಗಿರಬೇಕು" ಎಂದೇ ವಾಸ್ತವವಾಗಿ ಹೇಳುತ್ತಿದ್ದಳು.

    ಆದರೆ ಅವಳು ಸ್ವಾತಂತ್ರಳಾದಳೇ? ಇಲ್ಲಾ ಅವಳು ಸೈತಾನನ ದಾಸಿಯಾದಳು. ದೇವರ ಆಜ್ಞೆಗಳಿಗೆ ವಿಧೇಯರಾಗುವದು ಮಾತ್ರವೇ ನಮ್ಮನ್ನು ನಿಜವಾಗಿ ಬಿಡುಗಡೆ ಮಾಡುತ್ತದೆ.

    ಆದಾಮ ಹವ್ವರು ಆ ದಿನ ಏದೆನಿನಲ್ಲಿ ಬಹಳ ಮುಖ್ಯವಾದ ತೀರ್ಮಾನವನ್ನು ತೆಗೆದುಕೊಂಡರು. ಅದು ಅವರಿಗೂ ಮತ್ತು ಅವರ ಮಕ್ಕಳಿಗೂ ಜೀವನದ ಉದ್ದಕ್ಕೂ ಪರಿಣಾಮಗಳನ್ನು ಉಂಟುಮಾಡಿತು. ಎಲ್ಲಾ ತೀರ್ಮಾನಗಳು ಪರಿಣಾಮಗಳನ್ನುಂಟು ಮಾಡುತ್ತವೆ - ಕೆಲವು ಸಮಯಗಳಲ್ಲಿ ನಿರ್ಭಾಗ್ಯಕರವಾಗಿ ಆ ತೀರ್ಮಾನಗಳು ನಮ್ಮ ಮಕ್ಕಳ ಮೇಲೆ ಸಹ ಪರಿಣಾಮ ಬೀರುತ್ತವೆ. ಆದಾಮನ ವಿಷಯದಲ್ಲಿ ಅವನು ಮತ್ತು ಅವನ ಮಕ್ಕಳು ತಮ್ಮ ಉಳಿದ ಜೀವಮಾನವೆಲ್ಲಾ ದೇವರ ಸಾನಿಧ್ಯದಿಂದ ಹೊರಗೆ ಕಳುಹಿಸಲ್ಪಟ್ಟರು.

    ಆದ್ದರಿಂದ ನೀವು ಮಾಡುವ ಆ ಚಿಕ್ಕ ಆಯ್ಕೆಗಳು ಪ್ರಾಮುಖ್ಯವಲ್ಲ ಎಂದು ಅಥವಾ ಈ ದಿನ ನೀವು ಬಿತ್ತುವುದನ್ನು,ಭವಿಷ್ಯದಲ್ಲಿ ನೀವು ಎಂದಿಗೂ ಕೊಯ್ಯುವುದಿಲ್ಲ ಎಂಬುದಾಗಿ ಉಹಿಸಬೇಡಿರಿ. ದೇವರು ನೀವು ಪರೀಕ್ಷಿಸಲ್ಪಡುವುದಕ್ಕೂ (ಶೊಧಿಸಲ್ಪಡುವುದಕ್ಕೂ) ನಿಮ್ಮನ್ನು ಅನುಮತಿಸುತ್ತಾನೆ. ಆ ಉದ್ದೇಶಕ್ಕಾಗಿಯೇ ದೇವರು ಇಂದು ಸೈತಾನನ್ನು ಸ್ವತಂತ್ರವಾಗಿ ಮತ್ತು ಚಟುವಟಿಕೆಯುಳ್ಳವನಾಗಿರಲು ಅನುಮತಿಸಿದ್ದಾನೆ.

    ಹಳೇ ಒಡಂಬಡಿಕೆಯಲ್ಲಿ ಯೋಬನ ಪುಸ್ತಕದಿಂದ ಒಂದು ಉದಾಹರಣೆಯನ್ನು ನಿಮಗೆ ತೋರಿಸುತ್ತೇನೆ. ಯೋಬನ ಅನುಭವದಿಂದ ಸೈತಾನನ ಕಾರ್ಯಗಳ ಬಗ್ಗೆ ಕೆಲವು ವಿಷಯಗಳನ್ನು ನಾವು ಕಲಿಯಬಹುದು. 1 ನೇ ಅಧ್ಯಾಯದಲ್ಲಿ ದೇವರಿಗೂ ಮತ್ತು ಸೈತಾನನ ಮಧ್ಯೆ ಪರಲೋಕದಲ್ಲಿ ನಡೆದ ಸಂಭಾಷಣೆಯ ಬಗ್ಗೆ ನಾವು ಓದುತ್ತೇವೆ. ಯೋಬ 1:6 ರಲ್ಲಿ ಒಂದಾನೊಂದು ದಿನ ದೇವಪುತ್ರರು (ದೇವದೂತರು) ಕರ್ತನ ಮುಂದೆ ಕಾಣಿಸಿಕೊಳ್ಳುವುದಕ್ಕೆ ಬಂದರು. ಸೈತಾನನು ಅವರ ಮಧ್ಯದಲ್ಲಿ ಬಂದನು. ದೇವರು ಅವನಿಗೆ "ಎಲ್ಲಿಂದ ಬಂದಿ"? ಎಂದು ಕೇಳುವುದನ್ನು ನಾವು ಓದುತ್ತೇವೆ.

    ಸೈತಾನನ ಉತ್ತರವನ್ನು ಗಮನಿಸಿರಿಃ ಅವನು ಭೂಲೋಕದಲ್ಲಿ ಬೇರೆ ಬೇರೆ ಸ್ಥಳಗಳನ್ನು ಸಂದರ್ಶಿಸುತ್ತಾ ಇದ್ದನೆಂದು ಹೇಳುತ್ತಾನೆ. ಈ ಸಮಯದಲ್ಲಿಯೂ ಸೈತಾನನು ಭೂಲೋಕದಲ್ಲೆಲ್ಲಾ ಸಂಚರಿಸುತ್ತಾ ಇದ್ದಾನೆ ಎಂದು ನೀವು ತಿಳಿದಿದ್ದೀರಾ?

    ಸೈತಾನನು ನರಕದಲ್ಲಿ ಜೀವಿಸುತ್ತಾನೆ ಎಂಬ ಯೋಚನೆ ಅನೇಕ ಜನರಿಗೆ ಇದೆ. ಒಂದು ವೇಳೆ ಅದು ನಿಜವಾಗಿದ್ದ ಪಕ್ಷಕ್ಕೆ ಅವನು ನಮ್ಮನ್ನು ಭೂಲೋಕದ ಮೇಲೆ ತೊಂದರೆಗೊಳಿಸಲು ಸಾಧ್ಯವಿರುತ್ತಿರಲಿಲ್ಲ.

    ಆದರೆ ಸೈತಾನನು ನರಕದಲ್ಲಿ ಜೀವಿಸುತ್ತಾಯಿಲ್ಲ.

    ಬೈಬಲ್ ಮೂರು ಆಕಾಶಗಳಿವೆ ಎಂದು ನಮಗೆ ಬೋಧಿಸುತ್ತದೆ. ಮೊದಲನೇ ಆಕಾಶವು ನಾವು ಕರೆಯುವ ಅಂತರವಾಗಿದೆ. ಮೂರನೇ ಆಕಾಶವು ನೇರವಾದ ದೇವರ ಸಾನಿಧ್ಯವಾಗಿದೆ (2 ಕೊರಿಂಥ 12:2). ಸೈತಾನನು ನೇರವಾದ ದೇವರ ಸಾನಿಧ್ಯದಿಂದ ತಳ್ಳಲ್ಪಟ್ಟಾಗ ನರಕಕ್ಕೆ ತಳ್ಳಲ್ಪಡಲಿಲ್ಲ. ಎರಡನೇ ಆಕಾಶಕ್ಕೆ ತಳ್ಳಲ್ಪಟ್ಟನು (ಎಫೆಸ 6:12). ಎರಡನೇ ಆಕಾಶದಿಂದ ಭೂಮಿಗೆ ಯಾವ ಸಮಯದಲ್ಲಾದರೂ ಬರುವುದಕ್ಕೆ ಅವನಿಗೆ ಸ್ವಾತಂತ್ರ್ಯವಿದೆ. ಅದಕ್ಕಾಗಿಯೇ ಅವನು ಏದೆನ್ ತೋಟದೊಳಗೆ ಬರಲು ಸಾಧ್ಯವಾಯಿತು. ಈ ಕಾರಣದಿಂದಲೇ ಅವನು ಮತ್ತು ಅವನ ದೆವ್ವಗಳು ಈ ದಿನವೂ ಭೂಲೋಕಕ್ಕೆ ಬರಲು ಸಾಧ್ಯವಾಗಿದೆ.

    ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ಹೋಗುತ್ತಾನೆ ಎಂದು ಬೈಬಲ್ ಹೇಳುತ್ತದೆ. ಅವನು ಯೌವನಸ್ಥರನ್ನು ತಪ್ಪಾದ ಆಯ್ಕೆಗಳನ್ನು ಮಾಡಲು, ಶೋಧಿಸಲು ಅವರನ್ನು ಯಾವಾಗಲೂ ಹುಡುಕುತ್ತಿದ್ದಾನೆ. ಹೀಗೆ ಸೈತಾನನು ಅವರ ಜೀವಿತದೊಳಗೆ ಪ್ರವೇಶಿಸಲು ಬಯಸುತ್ತಾನೆ. ಈ ರೀತಿ ಅವನು ಅವರ ಶುದ್ಧತ್ವವನ್ನೂ ಯಥಾರ್ಥತ್ವವನ್ನೂ ಭಾವಶುದ್ಧಿಯನ್ನೂ ಕಳ್ಳತನ ಮಾಡುತ್ತಾನೆ. ಹೀಗೆ ಅವನು ಅವರ ಗುಣವನ್ನು ನಾಶಮಾಡಿ, ಕೊನೆಗೆ ಅವರನ್ನು ಅವನೊಂದಿಗೆ ನಿತ್ಯ ನರಕಶಿಕ್ಷೆಗೆ ಕರೆದುಕೊಂಡು ಹೋಗುತ್ತಾನೆ.

    ಇದಕ್ಕಾಗಿಯೇ ಸೈತಾನನು ಭೂಲೋಕದಲ್ಲೆಲ್ಲಾ ತಿರುಗುತ್ತಿದ್ದಾನೆ.

    ಸೈತಾನನು ಎಲ್ಲರನ್ನು ಗಮನಿಸುತ್ತಿದ್ದಾನೆ ಎಂದು ನಿಮಗೆ ನಿಶ್ಚಯವಿರಲಿ. ನಿಮ್ಮನ್ನು ಚಿಕ್ಕಂದಿನಿಂದ ಗಮನಿಸುತ್ತಿದ್ದಾನೆ ನೀವು ಕೆಟ್ಟದ್ದು ಮಾಡಲು ಶೋಧಿಸಲು ನೀವು ತಪ್ಪಾದ ಆಯ್ಕೆಗಳನ್ನು ಮಾಡಲು ಎಲ್ಲ ಸಮಯಗಳಲ್ಲಿ ನಿಮ್ಮನ್ನು ಹುಡುಕಿದ್ದಾನೆ. ಕೊನೆಗೆ ನಿಮ್ಮನ್ನು ನಾಶ ಮಾಡುತ್ತಾನೆ. ನಿಮ್ಮ ಅನೇಕ ಪರೀಕ್ಷೆಗಳಲ್ಲಿ ಮೋಸ ಮಾಡೆಂದೂ ಇತರರ ವಿರುದ್ಧವಾಗಿ ಮತ್ಸರ ಮನಸ್ಸಿನಲ್ಲಿಟ್ಟುಕೋ ಎಂದೂ ನಿಮ್ಮ ತಂದೆ ತಾಯಿಗಳಿಗೆ ಮತ್ತು ಉಪಾಧ್ಯಾಯರುಗಳಿಗೆ ಸುಳ್ಳುಗಳನ್ನು ಹೇಳಲು ಇತರರ ವಸ್ತುಗಳನ್ನು ಕಳ್ಳತನ ಮಾಡಲು, ಹೊಲಸು ಪುಸ್ತಕಗಳನ್ನು ಓದಲು ನಿಮಗೆ ಪಿಸುಗುಟ್ಟಿದವನು ಅವನೇ.

    ಯೋಬ 1 ನೇ ಅಧ್ಯಾಯದಲ್ಲಿ ದೇವರು ಸೈತಾನನಿಗೆ - "ನನ್ನ ದಾಸನಾದ ಯೋಬನ ಮೇಲೆ ಗಮನವಿಟ್ಟಿಯಾ?ಅವನಂತೆ ನಿರ್ದೋಷಿಯೂ ಯಥಾರ್ಥ ಮನುಷ್ಯನು ಭೂಲೋಕದಲ್ಲಿ ಎಲ್ಲಿಯೂ ಸಿಕ್ಕುವುದಿಲ್ಲ" ಎಂದು ಹೇಳುವುದನ್ನು ನಾವು ಓದುತ್ತೇವೆ. ಸೈತಾನನು ಯೋಬನ ಬಗ್ಗೆ ಸರ್ವವನ್ನು ತಿಳಿದಿದ್ದನು. ಯೋಬನೇ ಸೈತಾನನ "ಹೊಡೆತದ ಪಟ್ಟಿಯಲ್ಲಿ" ಪ್ರಥಮನಾಗಿದ್ದನು.

    ಅದಕ್ಕೆ ಸೈತಾನನು, "ಯೋಬನು ದೇವರಲ್ಲಿ ಭಯಭಕ್ತಿಯನ್ನು ಲಾಭವಿಲ್ಲದೆ ಇಡುತ್ತಾನೋ? ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದಿ, ಅವನನ್ನು ಕಾಪಾಡಿ ಎಲ್ಲಾ ರೀತಿಯಿಂದ ಆಶೀರ್ವದಿಸಿದ್ದಿ; ಅದಕ್ಕೆ ಅವನು ನಿನ್ನನ್ನು ಸೇವಿಸುತ್ತಿದ್ದಾನೆ" (ಯೋಬ 1:8-10) ಎಂದು ಪ್ರತ್ಯುತ್ತರವಾಗಿ ಹೇಳಿದನು.

    ಇಲ್ಲಿ ನಮಗೆ ಕಲಿತುಕೊಳ್ಳಲು ಆಶ್ಚರ್ಯವಾದ ಪಾಠವಿದೆ. ದೇವರು ತನ್ನ ಮಕ್ಕಳ ಸುತ್ತಮುತ್ತಲೂ ಮೂರು ಬೇಲಿಗಳನ್ನು ಹಾಕುತ್ತಾನೆ. ಅವರ ಶರೀರದ ಸುತ್ತಮುತ್ತಲು, ಅವರ ಕುಟುಂಬಗಳ ಸುತ್ತಮುತ್ತಲು ಮತ್ತು ಅವರ ಸ್ವಾಸ್ತ್ಯ (ಆಸ್ತಿಯ) ಸುತ್ತಮುತ್ತಲೂ. ಇವೇ ಆ ಮೂರು ರೀತಿಯ ಬೇಲಿಗಳು.

    ದೇವರ ಮಕ್ಕಳಾಗಿ ದೈವೀಕ ಕಾಪಾಡುವಿಕೆಯನ್ನು ಕೊಡುವ ಈ ಮೂರು ಬೇಲಿಗಳನ್ನು ನಾವು ಹೊಂದಿರುವುದು ನಮ್ಮ ಭಾಗ್ಯವಾಗಿದೆ. ಜ್ಞಾನೋಕ್ತಿ 18:10,"ಕರ್ತನ ನಾಮವು ಬಲವಾದ ಬುರುಜು; ಶಿಷ್ಟನು ಅದರೊಳಗೆ ಓಡಿಹೋಗಿ ಭದ್ರವಾಗಿರುವನು" ಎಂದು ನಮಗೆ ಹೇಳುತ್ತದೆ. ಯೇಸುವಿನ ಹೆಸರಿನಲ್ಲಿ ದೊಡ್ಡ ಭದ್ರತೆ ಇದೆ. ಕಲ್ವಾರಿಯ ಮೇಲೆ ಸೈತಾನನನ್ನು ಸೋಲಿಸಿದ ಯೇಸು ಕ್ರಿಸ್ತನ ಹೆಸರಿಗಿಂತ ಬೇರೆ ಯಾವ ಹೆಸರಿಗೂ ಅವನು ಹೆದರುವುದಿಲ್ಲ. ನಮ್ಮ ಜೀವಿತವನ್ನು ಕ್ರಿಸ್ತನಿಗೆ ಒಪ್ಪಿಸಿಕೊಟ್ಟಾಗ ಸೈತಾನನನ್ನು ಎದುರಿಸಲು ನಾವು ಯೇಸು ಕ್ರಿಸ್ತನ ಹೆಸರನ್ನು ಉಪಯೋಗಿಸಬಹುದು. "ಸೈತಾನನನ್ನು ಎದುರಿಸಿರಿ ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು" ಎಂದು ಬೈಬಲ್ ಹೇಳುತ್ತದೆ.

    ದೇವರು ಸೈತಾನನಿಗೆ ಯೋಬನನ್ನು ಅವನ ಕುಟುಂಬವನ್ನು ಮತ್ತು ಅವನ ಆಸ್ತಿಯನ್ನು ಬೇಧಿಸಲು ಅನುಮತಿಸಿದ್ದನ್ನು ಯೋಬನ ಪುಸ್ತಕದಲ್ಲಿ ಮುಂದೆ ನಾವು ಓದುತ್ತೇವೆ. ಇನ್ನೊಂದು ಮಾತಿನಲ್ಲಿ ಹೇಳಬೇಕಾದರೆ, ದೇವರು ಪ್ರತಿ ಬೇಲಿಯನ್ನು ಸ್ವಲ್ಪವಾಗಿ ಒಂದೊಂದು ಬಾರಿಯೂ ತೆರೆದು ಯೋಬನ ಜೀವನದಲ್ಲಿ ಸೈತಾನನು ಹಾದು ಹೋಗಲು ಮತ್ತು ಪರೀಕ್ಷಿಸಲು ಅನುಮತಿಸಿದನು. ದೇವರು ಅದನ್ನು ಯಾಕೆ ಮಾಡಿದನು? ಯೋಬನು, "ಚೊಕ್ಕ ಬಂಗಾರದಂತೆ ಶುದ್ಧಿಯಾಗಲು" ಎಂದೂ ಪರೀಕ್ಷೆಯ ಕೊನೆಯಲ್ಲಿ ಅವನು ದೀನನೂ ತನಗಿದ್ದ ಎಲ್ಲ ಸ್ವನೀತಿಯಿಂದ ಅವನು ಶುದ್ಧೀಕರಿಸಲ್ಪಟ್ಟು ಹೆಚ್ಚು ಭಕ್ತಿವಂತನೂ ಆದನು ಎಂದೂ ನಾವು ಓದುತ್ತೇವೆ(ಯೋಬ 23:10).

    ಅದಕ್ಕಾಗಿಯೇ ದೇವರು ನಮ್ಮನ್ನು ಸಹ ಪರೀಕ್ಷಿಸಲ್ಪಡುವುದಕ್ಕೆ ಅನುಮತಿಸುತ್ತಾನೆ. ಆ ರೀತಿಯ ಪರೀಕ್ಷೆಯಿಂದ ನಾವು ಶುದ್ಧರಾದವರೂ, ತಗ್ಗಿಸಿಕೊಂಡವರು, ಹೆಚ್ಚು ಭಕ್ತಿಯುಳ್ಳವರೂ, ಹೆಚ್ಚು ಪ್ರೀತಿ, ದಯೆ ಮತ್ತು ಹೆಚ್ಚು ಕರುಣೆಯುಳ್ಳವರೂ, ಕಡಿಮೆ ಸ್ವನೀತಿ ಮತ್ತು ಹೆಚ್ಚು ಕ್ರಿಸ್ತ ಯೇಸುವಿನಂತೆಯೇ ಆಗಲಿ ಎಂದು ದೇವರು ನಮ್ಮನ್ನು ಪರೀಕ್ಷಿಸಲ್ಪಡುವುದಕ್ಕೆ ಅನುಮತಿಸುತ್ತಾನೆ.

    ಆದಕಾರಣ, ದೇವರ ಮಕ್ಕಳ ಶುದ್ಧೀಕರಣದಲ್ಲಿ ಸೈತಾನನ ಉಪಯೋಗ ಉದ್ದೇಶಪೂರ್ವಕವಾಗಿದೆ ಎಂದು ನಾವು ನೋಡುತ್ತೇವೆ.

    ಇವೆಲ್ಲವು ನಮಗೆ ಕನಿಷ್ಠ ಎರಡು ವಿಷಯಗಳನ್ನು ಬೋಧಿಸುತ್ತವೆ.

    ಮೊದಲನೇದಾಗಿ, ಸೈತಾನನು ದೇವರ ಅಪ್ಪಣೆಯಿಲ್ಲದೆ ಯಾವ ದೇವರ ಮಗುವುವನ್ನಾಗಲಿ, ಅವನ ಶರೀರವನ್ನಾಗಲಿ, ಅವನ ಕುಟುಂಬವನ್ನಾಗಲಿ ಅಥವಾ ಅವನ ಸ್ವಾಸ್ತ್ಯವನ್ನಾಗಲಿ ಎಂದೂ ಮುಟ್ಟಲು ಸಾಧ್ಯವಿಲ್ಲ.

    ಎರಡನೇದಾಗಿ, ಸೈತಾನನು ಯಾವ ವಿಧದಲ್ಲಿಯಾದರೂ ನಮ್ಮನ್ನು ಮುಟ್ಟುವುದಕ್ಕೆ ಅಥವಾ ಯಾವ ವಿಧದಲ್ಲಿಯಾದರೂ ನಮ್ಮನ್ನು ನೋಯಿಸುವುದಕ್ಕೆ ಅನುಮತಿಸಲ್ಪಟ್ಟಾಗೆಲ್ಲಾ ನಾವು ನಮ್ಮ ಜೀವಿತದಲ್ಲಿ ಹೆಚ್ಚು ಕ್ರಿಸ್ತನಂತೆಯಾಗಿ, ಲೋಕದ ತಾತ್ಕಾಲಿಕ ವಸ್ತುಗಳಿಂದ ಹೆಚ್ಚು ಬಿಡುಗಡೆ ಹೊಂದಿ, ಹೆಚ್ಚು ಪರಲೋಕ ಭಾವದವರಾಗಬೇಕೆಂಬ ಉದ್ದೇಶದಿಂದ ಯಾವಾಗಲೂ ಅನುಮತಿಸಲ್ಪಟ್ಟದಾಗಿರುತ್ತದೆ.

    ಸೈತಾನನು ನಮಗೆ ಏನು ಮಾಡಲು ಪ್ರಯತ್ನಿಸಿದರೂ ನಮ್ಮ ಪರಲೋಕ ತಂದೆಯು ಸಂಪೂರ್ಣವಾಗಿ ಅದನ್ನು ಹತೋಟಿಯಲ್ಲಿಟ್ಟುಕೊಂಡಿದ್ದಾನೆ ಎಂಬುದಾಗಿ ತಿಳಿಯುವುದು ದೊಡ್ಡ ಆದರಣೆಯಲ್ಲವೇ?

    ಯೌವನಸ್ಥರೇ, ನಿಮ್ಮೆಲ್ಲರಿಗೂ ನಾನು ಹೇಳಲು ಬಯಸುವುದು - ನೀವು ನಿಮ್ಮ ಜೀವಿತವನ್ನು ಸಂಪೂರ್ಣವಾಗಿ ದೇವರಿಗೆ ಕೊಟ್ಟ ಪಕ್ಷದಲ್ಲಿ ಈ ಮೂರು ವಿಧದ ಬೇಲಿಗಳು ನಿಮ್ಮ ಶರೀರ, ನಿಮ್ಮ ಕುಟುಂಬ ಮತ್ತು ನಿಮ್ಮ ಆಸ್ತಿಯ ಸುತ್ತಮುತ್ತಲು ಯಾವಾಗಲೂ ನಿಮಗೆ ಇರುತ್ತವೆ. ದೇವರ ಅಪ್ಪಣೆಯಿಲ್ಲದೆ ಸೈತಾನನು ಆ ಬೇಲಿಗಳ ಮೂಲಕ ಒಳಗೆ ಪ್ರವೇಶಿಸಲು ಸಾಧ್ಯವಿರುವುದಿಲ್ಲ ಮತ್ತು ದೇವರು ಎಂದಾದರೂ ಸೈತಾನನಿಗೆ ಬೇಲಿಯ ಮೂಲಕ ಬರಲು ಅಪ್ಪಣೆಕೊಟ್ಟರೆ, ಅದು ನಿಮ್ಮ ಒಳ್ಳೆಯದಕ್ಕಾಗಿಯೇ ಆಗಿರುತ್ತದೆ ಎಂದು ನಿಶ್ಚಯಿಸಿಕೊಳ್ಳಿರಿ.

    ಆದ್ದರಿಂದ ಸತ್ಯವೇದವು ನಮಗೆ ಸೈತಾನನ ಮತ್ತು ಅವನ ಚಟುವಟಿಕೆಗಳನ್ನು ಕುರಿತು ಸ್ಪಷ್ಟವಾಗಿ ಬೋಧಿಸುವುದನ್ನು ನಾವು ನೋಡುತ್ತೇವೆ. ಅವು ನಮ್ಮನ್ನು ಹೆದರಿಸುವುದಕ್ಕಲ್ಲ; ಆದರೆ ದೇವರು ಸೈತಾನನನ್ನು ಜೀವಿಸಲು ಅನುಮತಿಸಿದ್ದರಲ್ಲಿ ದೇವರ ಉದ್ದೇಶವನ್ನು ನಾವು ನೋಡುವಂತೆ ತೋರಿಸುತ್ತದೆ.

    ಅಧ್ಯಾಯ 5
    ಸೈತಾನನ ವಿಧಾನಕ್ರಮಗಳು

    ಯೌವನಸ್ತರಾಗಿ ನಿಮ್ಮ ಜೀವಿತದಲ್ಲಿ ಸೈತಾನನನ್ನು ಹೇಗೆ ಎದುರಿಸಬೇಕು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಇದು ಭೂಮಿಯ ಮೇಲೆ ನಿಮ್ಮ ಜೀವಿತವನ್ನು ನಾಶಮಾಡುವುದಲ್ಲದೆ ನಿಮ್ಮ ನಿತ್ಯತ್ವದ ಮೇಲೆ ಸಹ ಪರಿಣಾಮ ಬೀರುವುದು. ಸೈತಾನನು ತನ್ನ ಆಕ್ರಮಣವನ್ನು ನಿಮ್ಮ ಮೇಲೆ ಪ್ರಾರಂಭಿಸುವಂತೆ ನೀವು ದೊಡ್ಡವರಾಗಿ ಬೆಳೆಯುವವರೆಗೆ ಕಾಯುವುದಿಲ್ಲ. ಅವನು ಈ ಕ್ಷಣವೇ ನಿಮ್ಮ ಮೆಲೆ ತನ್ನ ಆಕ್ರಮಣವನ್ನು ಪ್ರಾರಂಭಿಸುತ್ತಾನೆ. ಆದ್ದರಿಂದ ನೀವು ಅವನ ವಿಧಾನಕ್ರಮದ ಕುರಿತು ತಿಳಿದಿರಬೇಕು.

    ದೇವರ ವಾಕ್ಯದ ಬೋಧನೆಗಿಂತ ಹೆಚ್ಚಾಗಿ ಸೈತಾನನ ಬಗ್ಗೆ ನಿರ್ಭಾಗ್ಯಕರವಾಗಿ ಓನಿಡಾ ದೂರದರ್ಶನದ ಜಾಹಿರಾತಿನ ಹೆಚ್ಚು ವಿಚಾರಗಳು ಜನರಿಗೆ ಬರುತ್ತವೆ. ಆದ್ದರಿಂದ ಅವರು ಹಾನಿಕರವಲ್ಲದ ಕುಚೇಷ್ಠೆಯಾಗಿ ಕಾಣುವ ಕೊಂಬುಗಳು ಮತ್ತು ಮೊನಚಾದ ಉಗುರುಗಳು ಹಸಿರು ಬಲವುಳ್ಳ ಸೈತಾನನು ತೊಂದರೆ ಮಾಡಲಾರನೆಂದು ಯೋಚಿಸುತ್ತಾರೆ. ಆದರೆ ಸೈತಾನನಿಗೆ ಅಂಥ ಭಯಂಕರ ರೂಪ ಇರುವುದೇ ಇಲ್ಲ ಎಂದು ನಾವು ಸತ್ಯವೇದದಲ್ಲಿ ಓದುತ್ತೇವೆ. ಸೈತಾನನು ಆತ್ಮವಾಗಿದ್ದಾನೆ. ಅವನಿಂದ ಜನರು ದೂರ ಓಡಿಹೋಗುವಂತೆ ಆ ರೂಪದಲ್ಲಿ ಬರುವ ಮೂರ್ಖನಲ್ಲ ಅವನು. ಹಾಗಿದ್ದರೆ, ಅವನು ಅವರನ್ನು ದೇವರಿಂದ ದೂರ ನಡಿಸಲು ಹೇಗೆ ಸಾಧ್ಯವಾದೀತು?

    ಸೈತಾನನು ಭರವಸೆಯುಳ್ಳ ವಂಚಕನಂತಿದ್ದಾನೆ. ಅವನು ಮೊದಲು ನಿಮ್ಮ ಭರವಸೆಯನ್ನು ಗೆದ್ದು ನಂತರ ನಿಮ್ಮನ್ನು ಮೋಸ ಮಾಡುತ್ತಾನೆ. ಸೈತಾನನು ಆಕರ್ಷಕ ವ್ಯಕ್ತಿಯಂತೆ - ಪ್ರಕಾಶರೂಪವುಳ್ಳ ದೂತನಂತೆ ಬರುತ್ತಾನೆ ಎಂದು ಸತ್ಯವೇದವು ಹೇಳುತ್ತದೆ. ಅವನು, "ಪ್ರಕಾಶರೂಪವುಳ್ಳ ದೂತನಂತೆ" ಬರುವುದರಿಂದ "ಭೂಲೋಕದವರನ್ನೆಲ್ಲಾ ಮರುಳುಗೊಳಿಸುವವನು" ಎಂದು ಸೈತಾನನು ಕರೆಯಲ್ಪಟ್ಟಿದ್ದಾನೆ. (ಪ್ರಕಟನೆ 12:19).

    ಕರಾಟೆಯನ್ನು ಒಂದು ಉದಾಹರಣೆಯಾಗಿ ಕೊಡುತ್ತೇನೆ. ಹೆಚ್ಚು ಜನರು ಇದನ್ನು ಸ್ವರಕ್ಷಣಾ ವಿಧಾನದ ಯುದ್ಧಚಾತುರ್ಯ ಎಂದು ಯೋಚಿಸುತ್ತಾರೆ. ಆದರೆ ಅದು ಸತ್ಯದ ಒಂದು ಭಾಗ ಮಾತ್ರವಾಗಿದೆ. ಯೋಗಾಭ್ಯಾಸವು ಶಾರೀರಿಕ ವ್ಯಾಯಾಮದಂತೆ ಮಾತ್ರ ಕಾಣಿಸಿಕೊಂಡರೂ ಕುಯುಕ್ತಿಯಿಂದ ಜನರು ಸೂರ್ಯನನ್ನು ಆರಾಧಿಸಲು (ನಮಸ್ಕಾರ ಮಾಡಲು) ಬೋಧಿಸುತ್ತದೆ. ಇದೇ ರೀತಿಯಲ್ಲಿ ಕರಾಟೆಯ ಹಿಂದೆ ದೆವ್ವದ ಶಕ್ತಿಯು ಒಳಗೊಂಡಿದೆ. ಕರಾಟೆಯ ದೆವ್ವಗಳಿವೆ. ದೆವ್ವ ಹಿಡಿದ ಜನರಲ್ಲಿ ನಾನು ಅದನ್ನು ಸಂಧಿಸಿದ್ದೇನೆ. ಅದರೆ ಅವರು ಹಾನಿ ಮಾಡುವವರಾಗಿ ತೋರಿಸಿಕೊಳ್ಳದೆ ತಮ್ಮನ್ನು ಸ್ವರಕ್ಷಣೆಯ ಒಳ್ಳೇ ವಿಷಯಗಳ ದೂತರಂತೆ ತೋರಿಸಿಕೊಳ್ಳುತ್ತಾರೆ.

    ಏದೆನ್ ತೋಟದಲ್ಲಿ ಸೈತಾನನು ಬಹಳ ಮನರಂಜಕ ಮತ್ತು ಆಕರ್ಷಕವಾಗಿ ಹವ್ವಳ ಬಳಿಗೆ ಬಂದನು. ಅವನು ಅಸಹ್ಯಕರವಾಗಿದ್ದಿದ್ದರೆ, ಹವ್ವಳು ಅವನಿಂದ ಓಡಿಹೋಗುತ್ತಿದ್ದಳು.

    ಹಳೇ ಮತ್ತು ಹೊಸ ಒಡಂಬಡಿಕೆಗಳು ಜನರನ್ನು ಸೈತಾನನು ಶೋಧಿಸುವ ವಿವರಣೆಯೊಂದಿಗೆ ಪ್ರಾರಂಭವಾಗುವುದನ್ನು ಗಮನಿಸಿರಿ - ಹಳೇ ಒಡಂಬಡಿಕೆಯ ಆದಾಮ ಹವ್ವರ ಶೋಧನೆಯೊಂದಿಗೂ (ಅದಿಕಾಂಡ 3), ಮತ್ತು ಹೊಸ ಒಡಂಬಡಿಕೆಯು ಯೇಸುವಿನ ಶೋಧನೆಯೊಂದಿಗೂ ಪ್ರಾರಂಭವಾಗುತ್ತದೆ (ಮತ್ತಾಯ 4). ನಮ್ಮ ಶತ್ರುವಿನ ವಿಧಾನಗಳನ್ನು ನಾವು ತಿಳಿಯಕೆಂಬುದಕ್ಕೆ ಸತ್ಯವೇದವು ಪ್ರಾಮುಖ್ಯತೆಯನ್ನು ಕೊಡುತ್ತದೆ ಎಂದು ಇದು ನಮಗೆ ತೋರಿಸಿಕೊಡುತ್ತದೆ.

    ಆದಾಮ ಮತ್ತು ಹವ್ವಳ ಸೈತಾನನನ್ನು ಎದುರಿಸಿದ ರೀತಿಯಲ್ಲಿ ಅವರ ಮಾದರಿಯನ್ನು ನಾವು ಅನುಸರಿಸಿದರೆ, ನಾವು ಖಂಡಿತವಾಗಿ ಬೀಳುತ್ತೇವೆ. ಆದರೆ ಯೇಸು ಸ್ವಾಮಿಯು ಸೈತಾನನನ್ನು ಎದುರಿಸಿದ ರೀತಿಯಲ್ಲಿ ಆತನ ಮಾದರಿಯನ್ನು ಹಿಂ?ಲಿಸಿದರೆ, ನಾವು ಜಯಶಾಲಿಗಳಾಗುತ್ತೇವೆ.

    ಯೇಸು ಸ್ವಾಮಿಯು ನೀರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ ಹಾಗು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟ ಕೂಡಲೇ, ಆತನು ತನ್ನ ಬಹಿರಂಗ ಸೇವೆಯನ್ನು ಪ್ರಾರಂಭಿಸುವುದಕ್ಕೆ ಮುಂಚೆ ನಾವು ಮೊದಲು ಓದುವ ವಿಷಯ ಏನಂದರೆ, ಆತನು ಅಡವಿಯಲ್ಲಿ ಸೈತಾನನಿಂದ ಶೋಧಿಸಲ್ಪಡುವುದಕ್ಕಾಗಿ ಪವಿತ್ರಾತ್ಮನ ಮೂಲಕ ನಡಿಸಲ್ಪಟ್ಟನೆಂಬದೇ! (ಲೂಕ 4:1).

    ಸೈತಾನನನ್ನು ಭೇಟಿ ಮಾಡಲು ಪವಿತ್ರಾತ್ಮನು ಯೇಸು ಸ್ವಾಮಿಯನ್ನು ನಡೆಸುವುದು ಆಶ್ಚರ್ಯವಾಗಿದೆ. ಪವಿತ್ರಾತ್ಮನು ಜನರನ್ನು ದೇವರ ದರ್ಶನಗಳನ್ನು ಮತ್ತು ಪ್ರಕಟನೆಗಳನ್ನು ಪಡೆಯಲು ಮಾತ್ರ ಬೆಟ್ಟದ ಮೇಲೆ ನಡೆಸುತ್ತಾನೆ ಎಂದು ಕೆಲವರು ಯೋಚಿಸುತ್ತಾರೆ !!! ಹೌದು, ಆತನು ನಮ್ಮನ್ನು ಅಂಥ ಸ್ಥಳಗಳಿಗೆ ನಡೆಸುತ್ತಾನೆ. ಆದರೆ ನಾವು ಸೈತಾನನಿಂದ ಶೋಧಿಸಲ್ಪಡುವಂಥ ಸ್ಥಳಗಳಿಗೆ ಸಹ ನಮ್ಮನ್ನು ನಡೆಸುತ್ತಾನೆ.

    ಪವಿತ್ರಾತ್ಮನು ನಮ್ಮನ್ನು ಹಾನಿಕರವಾದ ಸ್ಥಳಗಳಿಗೆ ಎಂದಿಗೂ ನಡೆಸುವುದಿಲ್ಲ ಎಂಬುದನ್ನು ನೀವು ಗ್ರಹಿಸಿಕೊಳ್ಳುತ್ತೀರಿ ಎಂದು ನಾನು ನಿರೀಕ್ಷಿಸುತ್ತೇನೆ. ಆದ್ದರಿಂದ ನಾವು ಸತ್ಯವೇದದ ಲೂಕ. 4:1ರಲ್ಲಿನ ವಾಕ್ಯದಿಂದ, ಶೋಧನೆಗಳು ನಮಗೆ ಉಪಯೋಗವಾಗಲೇಬೇಕು ಎಂದು ಅರ್ಥ ಮಾಡಿಕೊಳ್ಳಬಹುದು. ಇಲ್ಲದಿದ್ದರೆ ಪವಿತ್ರಾತ್ಮನು ಯೇಸುವನ್ನು ಸೈತಾನನಿಂದ ಶೋಧಿಸಲ್ಪಡಲು ನಡೆಸುತ್ತಿರಲಿಲ್ಲ; ಮತ್ತು ನಮ್ಮನ್ನು ಸಹ ಸೈತಾನನಿಂದ ಶೋಧಿಸಲ್ಪಡಲು ನಡೆಸುತ್ತಿರಲಿಲ್ಲ. ದೇವರು ಯಾರನ್ನೂ ಶೋಧಿಸುವುದಿಲ್ಲ. ಆದರೆ ಸೈತಾನನಿಂದ ನಾವು ಶೋಧಿಸಲ್ಪಡುವಂತೆ ನಮ್ಮನ್ನು ಅನುಮತಿಸುತ್ತಾನೆ.

    ಸೈತಾನನ ಶೋಧನೆಗಳ ಸಮಯವನ್ನು ಗಮನಿಸಿರಿ

    ಯೇಸು ನಾಲ್ವತ್ತು ದಿನ ಹಗಲು ಇರುಳು ಉಪವಾಸ ಇದ್ದ ಮೇಲೆ ಆತನಿಗೆ ಹಸಿವಾದಾಗ, ಸೈತಾನನು ಯೇಸುವಿನ ಬಳಿ ಬಂದನು. ನಾವು ಶಾರೀರಿಕವಾಗಿ ಬಲಹೀನರಾಗಿರುವಾಗ ಅಥವಾ ನಮ್ಮ ಜೀವಿತದಲ್ಲಿ ಮಾನಸಿಕವಾದ ಅಥವಾ ಉದ್ವೇಗದ ಕೆಲವು ಒತ್ತಡಗಳನ್ನು ಎದುರಿಸುವಾಗ, ಸೈತಾನನು ನಮ್ಮನ್ನು ಆಕಮಿಸಲು ಪ್ರಯತ್ನಿಸುತ್ತಾನೆ.

    ಎರಡನೇದಾಗಿ ಯೇಸು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಟ್ಟ ಮೇಲೆ ಮತ್ತು ಪರಲೋಕದಿಂದ ಮೆಚ್ಚಿಕೆಯ ಸ್ವರವನ್ನು ಕೇಳಿದ ಮೇಲೆ, ಸೈತಾನನು ಯೇಸುವಿನ ಬಳಿ ಬಂದನೆಂದು ನಾವು ಗಮನಿಸುತ್ತೇವೆ. ನಾವು ದೇವರಿಂದ ಪ್ರಚಂಡ ಆಶೀರ್ವಾದದ ಸಮಯವನ್ನು ಹೊಂದಿದ ಕೂಡಲೇ ಸೈತಾನನು ನಮ್ಮ ಬಳಿ ಬರುತ್ತಾನೆ.

    ಆದಕಾರಣ ಸೈತಾನನ ಯುಕ್ತಿಕೌಶಲ್ಯಗಳಿಗೆ ಜಾಗರೂಕರಾಗಿರೋಣ. ದೇವರು ನಮ್ಮನ್ನು ಹೇರಳವಾಗಿ ಆಶೀರ್ವದಿಸಿದ ಮೇಲೆ ಸೈತಾನನು ಬಂದು ನಮ್ಮನ್ನು ಅತಿಯಾಗಿ ಹೊಗಳಲು ಉಬ್ಬಿಸಲು ಪ್ರಯತ್ನಿಸ ಬರುತ್ತಾನೆ. ಅಥವಾ ನಾವು ಪರೀಕ್ಷೆಯಲ್ಲಿ ಸೋತುಹೋದಾಗ ಅಥವಾ ಕಾಯಿಲೆಯಾದಾಗ ಅಥವಾ ಶಾರೀರಿಕವಾಗಿ ಕುಂದಿರುವಾಗ ಅದರ ಜೊತೆಯಲ್ಲಿ ನಮ್ಮನ್ನು ನಿರಾಶರಾಗಿ ಮಾಡಿ, ಅದರಿಂದ ನಮ್ಮನ್ನು ಪಾಪದೊಳಗೆ ನಡೆಸಲು ಪ್ರಯತ್ನಿಸ ಬರುತ್ತಾನೆ.

    ನಾವು, "ಸೈತಾನನ ಒಳಸಂಚುಗಳನ್ನು ಮತ್ತು ತಂತ್ರಗಳನ್ನು" ತಿಳಿಯುವಂತೆ ದೇವರ ವಾಕ್ಯವು ನಮಗೆ ಮುಂಗಡವಾಗಿ ಕೊಡಲ್ಪಟ್ಟಿದೆ. ಸೈತಾನನು ಹೇಗೆ ಸಮೀಪಿಸುತ್ತಾನೆ? ಅವನು ಸಾಮಾನ್ಯವಾಗಿ ಯಾವ ಸಮಯಗಳಲ್ಲಿ ಬರುತ್ತಾನೆ? ಯಾವ ಆಕರ್ಷಣೆಗಳನ್ನು ಕೊಡುತ್ತಾನೆ? ಇತರರು ಅವನಿಂದ ಹೇಗೆ ವಂಚಿಸಲ್ಪಟ್ಟರು ಮತ್ತು ಯೇಸು ಹೇಗೆ ಜಯಿಸಿದನು? ಎಂದು ದೇವರ ವಾಕ್ಯ ನಮಗೆ ತೋರಿಸುತ್ತದೆ.

    ಸೈತಾನನು ನಮ್ಮ ಹತ್ತಿರ ಬರುವ ಮಾರ್ಗಗಳು ಯಾವುವು?

    ಮೊದಲನೆಯದಾಗಿ, ಸೈತಾನನು ಯೇಸುವಿಗೆ ಆತನ ಶರೀರದ ಆಶೆಗಳ ಮೂಲಕ ಶೋಧಿಸಿದನೆಂದು ನಾವು ನೋಡುತ್ತೇವೆ. ಸೈತಾನನು ಯೇಸುವಿಗೆ, "ನೀನು ದೇವರ ಮಗನಾಗಿದ್ದರೆ ಈ ಕಲ್ಲುಗಳು ರೊಟ್ಟಿಯಾಗುವಂತೆ ಆಜ್ಞಾಪಿಸು" ಎಂಬ ಸಲಹೆ ಕೊಟ್ಟನು.

    ಹೀಗೆಯೇ ಸೈತಾನನು ನಮ್ಮ ಬಳಿ ಸಹ ಬರುತ್ತಾನೆ. ನಮ್ಮ ದೇಹದ ಆಶೆಗಳನ್ನು ನ್ಯಾಯ ವಿರುದ್ಧವಾದ ರೀತಿಯಲ್ಲಿ ತೃಪ್ತಿಪಡಿಸಲು ನಮ್ಮನ್ನು ಶೋಧಿಸುತ್ತಾನೆ. ಆದರೆ ಯೇಸು ಜಾಗರೂಕನಾಗಿದ್ದನು, "ಸತ್ಯವೇದದಲ್ಲಿ ಹೀಗೆ ಬರೆದಿದೆ..." ಎಂದು ಉತ್ತರ-ಕೊಟ್ಟನು.

    ಸಾವಿರಾರು ವರುಷಗಳ ಹಿಂದೆ ಸೈತಾನನು ಹವ್ವಳ ಬಳಿ ಬಂದಾಗ, "ದೇವರು ಹೇಳಿದ್ದಾನೊ?" ಎಂದು ಪ್ರಶ್ನಿಸಿದನು.

    ಈ ಲೋಕದಲ್ಲಿ ಸೈತಾನನು ತನ್ನ ಪೂರ್ಣ ಮನಸ್ಸಿನಿಂದ ದ್ವೇಷ ಮಾಡುವ ಒಂದೇ ಒಂದು ಪುಸ್ತಕ ಇದೆ ಎಂಬುದು ನಿಮಗೆ ತಿಳಿದಿದೆಯಾ? ಅದು ಬೈಬಲ್, ದೇವರ ವಾಕ್ಯ ಅವನು ಯಾಕೆ ಇದನ್ನು ದ್ವೇಷಿಸುತ್ತಾನೆ? ಯಾಕೆಂದರೆ ಅದು ಅವನು ಹೇಗೆ ಸೈತಾನನಾದನು ಎಂದು ಪ್ರಕಟಿಸುತ್ತದೆ. ಅವನ ಎಲ್ಲಾ ಒಳಸಂಚುಗಳನ್ನು ಹೊರಪಡಿಸುತ್ತದೆ. ಎಲ್ಲದಕ್ಕಿಂತ ಬಹು ಮುಖ್ಯವಾಗಿ ಕಲ್ವಾರಿ ಶಿಲುಬೆಯ ಮೇಲೆ ಅವನ ಅಪಜಯದ ಬಗ್ಗೆ ಮತ್ತು ಕ್ರಿಸ್ತನು ತಿರುಗಿ ಭೂಮಿಗೆ ಬಂದಾಗ ಅವನ ಕೊನೆಯ ನ್ಯಾಯತೀರ್ಪಿನ ಕುರಿತು ಸತ್ಯವೇದ ನಮಗೆ ತಿಳಿಸುತ್ತದೆ.

    ಇದಕ್ಕಾಗಿಯೇಸೈತಾನನು ಬೈಬಲ್‌ನ್ನು ದ್ವೇಷಿಸುತ್ತಾನೆ ಮತ್ತು ಜನರು ಇದನ್ನು ಓದುವುದನ್ನೇ ಅಡ್ಡಿಮಾಡಲು ಯಾವಾಗಲೂ ತನ್ನ ಉತ್ತಮ ಪ್ರಯತ್ನ ಮಾಡುತ್ತಾನೆ. ಅವನು ನಿಮ್ಮನ್ನು ಸತ್ಯವೇದಕ್ಕಿಂತಲೂ ಕಾದಂಬರಿ ಅಥವಾ ಹಾಸ್ಯವಾದವುಗಳನ್ನು ಓದಲು ಅನುಮತಿಸುತ್ತಾನೆ. ಯಾಕೆಂದರೆ ಆ ಕಾದಂಬರಿಗಳು ಮತ್ತು ಹಾಸ್ಯಗಳು ನೀವು ಸೈತಾನನನ್ನು ಜಯಿಸುವಂತೆ ಸಹಾಯಮಾಡಲಾರದು. ಆದರೆ ಸತ್ಯವೇದವು ಅವನನ್ನು ಜಯಿಸಲು ಸಹಾಯ ಮಾಡುತ್ತದೆ ಎಂದು ಸೈತಾನನಿಗೆ ಗೊತ್ತು.

    ಯೇಸು ಭೂಮಿಗೆ ಬಂದಾಗ, ಆತನು ನಮ್ಮಂತೆ ಮನುಷ್ಯನಾಗಿ ಬಂದನು ಮತ್ತು ಆತನು ಸರ್ವವಿಷಯಗಳಲ್ಲಿ ನಮ್ಮ ಹಾಗೆಯೇ ಶೋಧನೆಗೆ ಗುರಿಯಾದನು (ಇಬ್ರಿಯ 2:17;14:15). ಯಾಕೆ? ನಮಗೆ ಮಾದರಿಯಾಗಿರುವಂತೆ. ಆದ್ದರಿಂದ "ನನ್ನನ್ನು ಹಿಂಬಾಲಿಸು. ನನ್ನ ಮಾದರಿಯನ್ನು ಹಿಂಬಾಲಿಸು" ಎಂದು ನಮಗೆ ಹೇಳುವಂಥವನಾಗಿದ್ದಾನೆ.

    ನಾವು ಇಲ್ಲಿ ಹಿಂಬಾಲಿಸಬಹುದಾದ ಯೇಸುವಿನ ಮಾದರಿ ಯಾವುದು? ಇದು ನಾವು ಶೋಧಿಸಲ್ಪಟ್ಟಾಗ, ಸೈತಾನನಿಗೆ ಗ್ರಂಥದಿಂದ ದೇವರ ವಾಕ್ಯವನ್ನು ಮಾತ್ರ ಎತ್ತಿ ಹೇಳುವುದೇ ಆಗಿದೆ. ಹವ್ವಳು ಮಾಡಿದಂತೆ ಯೇಸು ಸೈತಾನನೊಂದಿಗೆ ಚರ್ಚೆಮಾಡಲಿಲ್ಲ. ಆತನ ದೇಹಕ್ಕೆ ಊಟವು ಅವಶ್ಯವಾಗಿದೆಯೇ? ಅಥವಾ ಊಟವು ಒಳ್ಳೆಯದಾಗಿದೆಯೋ? ಅಥವಾ ಪ್ರಯೋಜನವಾಗಿದೆಯೋ? ಮುಂತಾದದ್ದನ್ನು ಯೇಸು ಸ್ವಾಮಿ ತರ್ಕಿಸಲಿಲ್ಲ. ಆತನು ದೇವರ ವಾಕ್ಯದಲ್ಲಿ ದೇವರು ಹೇಳಿದ್ದರ ಕುರಿತಾಗಿ ಮಾತ್ರ ಆಸಕ್ತಿಯುಳ್ಳವನಾಗಿದ್ದನು.

    ನನ್ನ ಪ್ರಿಯ ಸ್ನೇಹಿತರೇ, ನೀವು, "ದೇವರು ತನ್ನ ವಾಕ್ಯದಲ್ಲಿ ಏನು ಹೇಳಿದ್ದಾನೆ ಅದು ಮಾತ್ರ ನನ್ನ ಕೊನೆಯ ಅಧಿಕಾರ," ಎಂಬುದಾಗಿ ನಿಮ್ಮ ಜೀವಿತವನ್ನು ಈ ನಿಯಮದಿಂದ ಮಾತ್ರ ಜೀವಿಸುವದಾದರೆ ಯೇಸುವಿನ ಹಾಗೆ ನೀವು ಯಾವಾಗಲೂ ಸೈತಾನನನ್ನು ಜಯಿಸುವಿರಿ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ಸೈತಾನನು ತಂದ ಎಲ್ಲಾ ಮೂರು ಶೋಧನೆಗಳಿಗೆ ಯೇಸುಸ್ವಾಮಿ ಉತ್ತರವಾಗಿ ಗ್ರಂಥದಿಂದ ದೇವರ ವಾಕ್ಯವನ್ನು ಕೊಟ್ಟನು.

    ಹವ್ವಳ ಮತ್ತುಯೇಸುವಿನ ಮಧ್ಯ ಇರುವ ವ್ಯತ್ಯಾಸವನ್ನು ಅಲ್ಲಿ ನಾವು ನೋಡುತ್ತೇವೆ. "ನನ್ನ ದೇಹಕ್ಕೆ ಯಾವುದೇ ಆಹಾರಕ್ಕಿಂತ ನನ್ನ ಆತ್ಮಕ್ಕೆ ದೇವರ ವಾಕ್ಯವು ಬಹಳ ಪ್ರಾಮುಖ್ಯವಾಗಿದೆ" ಎಂಬುದೇ ಯೇಸುವಿನ ಮನೋಭಾವನೆಯಾಗಿತ್ತು. ಅಥವಾ ಇನ್ನೊಂದು ರೀತಿಯಲ್ಲಿ "ದೇವರ ವಾಕ್ಯವನ್ನು ಓದುವುದು, ಅರ್ಥಮಾಡಿಕೊಳ್ಳುವುದು ಮತ್ತು ವಿಧೇಯರಾಗುವುದು ಊಟದ ಅವಶ್ಯಕತೆಗಿಂತಲೂ ಮುಖ್ಯವಾದದ್ದು". ಇದೇ ಯೇಸುಸ್ವಾಮಿ ಸೈತಾನನಿಗೆ "ಮನುಷ್ಯನು ರೊಟ್ಟಿ ತಿಂದ ಮಾತ್ರದಿಂದ ಬದುಕುವುದಿಲ್ಲ ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುವನು" ಎಂಬ ವಾಕ್ಯವನ್ನು ಹಳೇ ಒಡಂಬಡಿಕೆಯಿಂದ ಎತ್ತಿ ತೋರಿಸಿದ್ದರ ಅರ್ಥವಾಗಿತ್ತು.

    ನನ್ನ ಯೌವನಸ್ಥ ಸ್ನೇಹಿತರೇ, ನೀವು ಇದನ್ನು ಅರ್ಥಮಾಡಿಕೊಂಡಿದ್ದೀರಾ? ನಮ್ಮ ದೇಹದ ಎಲ್ಲ ಆಶೆಗಳನ್ನು ತೃಪ್ತಿಗೊಳಿಸುವುದಕ್ಕಿಂತ ಅ೦ದರೆ- ಅದು ಊಟಕ್ಕಾಗಿ ಹಸಿವೆ ಆಗಿರಬಹುದು ಅಥವಾ ಲೈಂಗಿಕವಾದದ್ದೇ ಆಗಿರಬಹುದು ಅಥವಾ ಏನೇ ಆಗಿರಬಹುದು ಇವೆಲ್ಲಕ್ಕಿಂತ ದೇವರ ವಾಕ್ಯವು ನಮಗೆ ಬಹಳ ಪ್ರಾಮುಖ್ಯವಾದದ್ದು ಎಂದು ಗ್ರಹಿಸಿಕೊಳ್ಳುವುದೇ ಸೈತಾನನನ್ನು ನಾವು ಜಯಿಸಬಹುದಾದ ಮೊದಲನೇ ನಿಯಮವಾಗಿದೆ. ನೀವು ಪ್ರಾರಂಭದಲ್ಲೇ ಆ ಸ್ಥಾನವನ್ನು ತೆಗೆದುಕೊಳ್ಳದಿದ್ದರೆ, ಖಂಡಿತವಾಗಿ ನಿಮ್ಮ ಜೀವಿತದಲ್ಲಿ ವಂಚಿಸಲ್ಪಟ್ಟವರಾಗುವಿರಿ.

    ಸೈತಾನನು ನಿಮಗೆ ದೇವರ ವಾಕ್ಯವನ್ನು ಪ್ರತಿದಿನ ಓದುವುದಕ್ಕಿಂತ ಊಟ ಮಾಡುವುದು ಬಹಳ ಪ್ರಾಮುಖ್ಯ ಎಂದು ಹೇಳುವನು ಮತ್ತು ಸೈತಾನನನ್ನು ನಂಬುವ ಅನೇಕ ವಿಶ್ವಾಸಿಗಳು ಇದ್ದಾರೆ.

    ಸೈತಾನನು ಹೇಳುವುದನ್ನು ಅವರು ನಂಬುತ್ತಾರೆ ಎಂಬುದಕ್ಕೆ ಆಧಾರ ಅವರು ಊಟ ಮಾಡುವುದಕ್ಕೆ ಎಂದೂ ಮರೆಯುವುದಿಲ್ಲ ಅಥವಾ ಸಮಯದ ಕೊರತೆ ಇರುವುದಿಲ್ಲ (ದಿನಕ್ಕೆ ಮೂರು ಸಾರಿ ಅಥವಾ ಅದಕ್ಕಿಂತ ಹೆಚ್ಚು ಸಾರಿ), ಆದರೆ ದೇವರ ವಾಕ್ಯವನ್ನು ಧ್ಯಾನಮಾಡಲು ಆಗಾಗ ಮರೆತು ಬಿಡುತ್ತಾರೆ. ಅಥವಾ ಬಹಳ ಕಾರ್ಯಚಟುವಟಿಕೆಯುಳ್ಳವರಾಗಿರುತ್ತಾರೆ ಎಂಬುದರಲ್ಲಿ ಕಾಣುತ್ತದೆ.

    ಈ ವಿಶ್ವಾಸಿಗಳಲ್ಲಿ ವಂಚಿಸುವ ಕಾರ್ಯವನ್ನು ಮಾಡಿದವರು ಮತ್ತು ಹೀಗೆ ಅವರನ್ನು ಬಲಹೀನರಾಗಿಮಾಡಿದವರು ಯಾರು? ಸಂದೇಹ ಇಲ್ಲದೆ ಸೈತಾನನೇ ಆಗಿದ್ದಾನೆ. ನಾಲ್ವತ್ತು ದಿನ ಉಪವಾಸವಿದ್ದರೂ ತನ್ನ ದೇಹದ ಅವಶ್ಯಕತೆಗಳನ್ನು ತೃಪ್ತಿಗೊಳಿಸುವುದಕ್ಕಿಂತ ದೇವರ ಮಾತನ್ನು ಕೇಳುವುದು ಆತನಿಗೆ ಬಹು ಪ್ರಾಮುಖ್ಯವಾಗಿತ್ತು ಎಂಬುದಾಗಿ ಯೇಸುವಿನಲ್ಲಿ ನಮಗೆ ಎಂಥಾ ಒಂದು ಉದಾಹರಣೆ ಇದೆ.

    ತಮ್ಮ ಜೀವಿತಗಳಲ್ಲಿ ದೇವರ ವಾಕ್ಯಕ್ಕೆ ಪ್ರಧಾನ ಸ್ಥಾನ ಕೊಡುವವರೇ ಸ್ಥಿರವಾದ, ಜಯಕರವಾದ ಜೀವಿತ ಜೀವಿಸುತ್ತಾರೆ. ಅಪೊಸ್ತಲನಾದ ಯೋಹಾನನು ಯೌವನಸ್ಥರಿಗೆ (1 ಯೋಹಾನ 2:14)ರಲ್ಲಿ "ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡಿರುವುದರಿಂದ, ನೀವು ಶಕ್ತರೂ ಮತ್ತು ಕೆಡುಕನನ್ನು ಜಯಿಸಿರುವಿರಿ" ಎಂದು ಹೇಳಿದನು. ಬೇರೆ ಯಾವುದೇ ಮಾರ್ಗದಲ್ಲಿ ಸೈತಾನನನ್ನು ಜಯಿಸಲು ಅಸಾಧ್ಯವಾಗಿದೆ. ನಿಮ್ಮ ಜೀವಿತಗಳಲ್ಲಿ ಪ್ರತಿದಿನ ಸತ್ಯವೇದವನ್ನು ಓದಲು ಮತ್ತು ಧ್ಯಾನಮಾಡಲು ನಿಮ್ಮೆಲ್ಲರಿಗೂ ಉತ್ತೇಜನ ಕೊಡಲು ಬಯಸುತ್ತೇನೆ.

    ಈಗ ಎರಡನೇ ಶೋಧನೆಯ ಕಡೆಗೆ ನೋಡೋಣ

    ಇಲ್ಲಿ ಸೈತಾನನು ಯೇಸುವನ್ನು ದೇವಾಲಯದ ಮೇಲಿನಿಂದ ಕೆಳಗೆ ದುಮುಕುವುದಕ್ಕೂ ಮತ್ತು ದೇವರ ಕಾಯುವಿಕೆಯ ವಾಗ್ದಾನವನ್ನು ತನ್ನದೆಂದು ಹಕ್ಕು ಸಾಧಿಸಲು ಶೋಧಿಸಿದನು. ಇದು ಚಮತ್ಕಾರವಾಗಿ ಏನಾದರೂ ಮಾಡಬೇಕೆಂಬ ಶೋಧನೆಯಾಗಿತ್ತು. ಹೀಗೆ ಅಂಗಳದಲ್ಲಿ ಕೆಳಗೆ ಇರುವ ಗುಂಪನ್ನು ಮೆಚ್ಚಿಸಿ ಅವರ ಮಧ್ಯದಲ್ಲಿ ಕೆಳಗೆ ಬರುವವನು ಯಾವ ಗಾಯವಿಲ್ಲದೆ ಇರುವುದನ್ನು ಅವರೆಲ್ಲರೂ ನೋಡಬೇಕೆಂಬುದೇ ಆಗಿತ್ತು. ಸೈತಾನನು ಯೇಸುವಿಗೆ ಕೊಟ್ಟಂಥ ಸಲಹೆ ಆತನನ್ನು ನಿಜವಾಗಿ ಆತ್ಮಹತ್ಯೆಮಾಡಿಕೊಳ್ಳುವಂತೆ ನೀಡಿದ ಸಲಹೆಯಾಗಿತ್ತು.

    ಸೈತಾನನು ನೀವು ಏನಾದರೂ ಚಮತ್ಕಾರ ಮಾಡಿ ಇತರರ ಜಯಘೋಷ ಪಡೆಯುವಂತೆ ಅಥವಾ ನೀವು ದೊಡ್ಡ ಮನುಷ್ಯ ಎಂದು ತೋರಿಸಲು ಆಗಾಗ ನಿಮ್ಮನ್ನು ಶೋಧಿಸುತ್ತಾನೆ. ಸೈತಾನನು ಯೇಸುವಿಗೆ - "ದೂತರೂ ನಿನ್ನನ್ನು ನೋಡಿಕೊಳ್ಳುತ್ತಾರೆ" ಎಂದು ವಾಕ್ಯವನ್ನು ಸಹ ಎತ್ತಿಹೇಳುವುದನ್ನು ಗಮನಿಸಿರಿ.

    ಸೈತಾನನು ನಿಮ್ಮನ್ನು ಹಾದಿ ತಪ್ಪಿಸ ಬೇಕಾಗಿದ್ದರೆ ಅವನು ಸತ್ಯವೇದವನ್ನು ಸಹ ತಪ್ಪಾಗಿ ಎತ್ತಿಹೇಳುತ್ತಾನೆಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ ಮತ್ತು ಸತ್ಯವೇದವು ನಿಜವಾಗಿ ಬೋಧಿಸುವುದರ ಬಗ್ಗೆ ನೀವು ಅಲಕ್ಷ್ಯವಾಗಿದ್ದರೆ ಅವನು ನಿಮ್ಮನ್ನು ವಂಚಿಸುತ್ತಾನೆ.

    "ಕ್ರಿಸ್ತನ ಹೆಸರಿನಲ್ಲಿ ನಾದರೂ ಚಮತ್ಕಾರ ಮಾಡು" ಎಂದು ಸೈತಾನನು ಸಲಹೆ ಕೊಡುವನು. ಅನೇಕ ವಿಶ್ವಾಸಿಗಳು ಸತ್ಯವೇದವನ್ನು ಎತ್ತಿಹೇಳುತ್ತಾ, ದೇವರನ್ನು ಶೋಧಿಸುತ್ತಾ ಮೂರ್ಖ ವಿಷಯಗಳನ್ನುಮಾಡಿದ್ದರಿಂದ ಆಗಾಗ ಕ್ರೈಸ್ತತ್ವವು ಕೆಟ್ಟ ಹೆಸರನ್ನು ಪಡೆದಿದೆ.

    ಉದಾಹರಣೆಗೆ, ಕಾಯಿಲೆಯಾದಾಗ ಯಾವ ಔಷಧವನ್ನು ತೆಗೆದುಕೊಳ್ಳದ ವಿಶ್ವಾಸಿಗಳು ಇದ್ದಾರೆ. ಅವರ "ನಂಬಿಕೆ"ಗೆ ಯಾವ ವಾಕ್ಯದ ಆಧಾರವಿಲ್ಲ. ಆದರೆ ಅವರು ತಾವು ದೇವರಲ್ಲಿ "ಭರವಸೆಯನ್ನು ಇಡುತ್ತಿದ್ದೇವೆ" ಎಂದು ಊಹಿಸುತ್ತಾರೆ. ಅದು ನಿಶ್ಚಯವಾಗಿ ದೇವಾಲಯದಿಂದ ಕೆಳಗೆ ದುಮುಕಿ, ದೂತರು ಅದ್ಭುತವಾದ ಕಾಪಾಡುವಿಕೆಯನ್ನು ಒದಗಿಸುವಂತೆ ನಿರೀಕ್ಷಿಸುವುದಾಗಿದೆ! ಅವರಲ್ಲಿ ಅನೇಕರು ಕೊನೆಯಲ್ಲಿ ತಮ್ಮ ಕಾಯಿಲೆಯಿಂದ ಸಾಯುತ್ತಾರೆ ಮತ್ತು ಕ್ರೈಸ್ತತ್ವವು ಮೂರ್ಖ ಧರ್ಮಾಂಧತೆಯ ಮತವಾಗಿದೆ ಎಂದು ಅಭಿಪ್ರಾಯಪಡುವ ಅನ್ಯರ ಮಧ್ಯದಲ್ಲಿ ಯೇಸು ಕ್ರಿಸ್ತನ ಹೆಸರು ಅವಮಾನಕ್ಕೆ ಗುರಿಯಾಗುತ್ತದೆ.

    ಅವರು ವಿಷಪದಾರ್ಥವನ್ನು ತೆಗೆದುಕೊಳ್ಳುವುದರಲ್ಲಿ ಅಲ್ಲ, ಆದರೆ ದೇವರು ನಮ್ಮ ಉಪಯೋಗಕ್ಕಾಗಿ ಉಂಟುಮಾಡಿದ ಔಷಧಿ ಮೂಲಕವಾಗಿ ತಮ್ಮ ಶರೀರದ ಜೀವಾಣುಗಳನ್ನು ಕೊಲ್ಲುವುದಕ್ಕೆ ತಿರಸ್ಕರಿಸಿದ್ದರಿ೦ದ ಈ ವಿಶ್ವಾಸಿಗಳು ಆತ್ಮಹತ್ಯೆ ಮಾಡಿಕೊಳ್ಳುವಂತೆ ಅವರನ್ನು ವಶೀಕರಿಸಿಕೊಂಡದ್ದರಲ್ಲಿ ಯಶಸ್ಸುಗಳಿಸಿದ್ದಕ್ಕಾಗಿ ಸೈತಾನನು ಹಿಂದೆ ಕುಳಿತುಕೊ೦ಡು ನಗುತ್ತಾನೆ. ಅನೇಕ ದೇವರ ಮಕ್ಕಳು ಭೂಮಿಯ ಮೇಲೆ ದೇವರಿಗೆ ಆತನ ರಾಜ್ಯದ ಕಾರ್ಯಕ್ಕಾಗಿ ಉಪಯೋಗವಾಗಬೇಕಾಗಿದ್ದವರು ಈ ರೀತಿಯಾಗಿ ಸೈತಾನನಿಂದ ಮರಣಕ್ಕೆ ಆಕರ್ಷಿಸಲ್ಪಟ್ಟಿದ್ದಾರೆ.

    ಸೈತಾನನು ಜನರನ್ನು ಯಾವಾಗಲೂ ಮೂರ್ಖತನದ ಯಾವುದನ್ನಾದರೂ ದೇವರ ವಾಕ್ಯದ ಉಪದೇಶಕ್ಕೆ, ಹಾಗೂ ಅದರ ಆತ್ಮಕ್ಕೆ ವಿರುದ್ಧವಾದದ್ದನ್ನು ಮಾಡಲು ಶೋಧಿಸುತ್ತಾನೆ. ನಮಗೋಸ್ಕರ ಯಾವ ರೀತಿಯಿಂದಲೂ, ಯಾವ ಮಹಿಮೆಯನ್ನು ಹುಡುಕುವುದರಿಂದ ಅಲ್ಲ. ಇದು ದೀನತೆಯಿಂದ ದೇವರಿಗೆ ಅಧೀನರಾಗುವುದರಿಂದ, ನಾವು ಸೈತಾನನನ್ನು ಜಯಿಸುತ್ತೇವೆ.

    ಸೈತಾನನು ಯೇಸುವಿಗೆ ದೇವರ ವಾಕ್ಯವನ್ನು ಎತ್ತಿ ಹೇಳಿದಾಗ ಯೇಸು ಮತ್ತೊಂದು ದೇವರ ವಾಕ್ಯವನ್ನು ಪ್ರತ್ಯುತ್ತರವಾಗಿ, "ಹೀಗೆಯೂ ಬರೆದದೆ - ನಿನ್ನ ದೇವರಾದ ಕರ್ತನನ್ನು ಪರೀಕ್ಷಿಸಬಾರದು" ಎಂದು ಹೇಳಿದನು.

    ನಾವು ದಡ್ಡತನದ ಮತ್ತು ಅನಾವಶ್ಯಕ ವಿಷಯಗಳನ್ನು ಮಾಡುವುದರಿಂದ ದೇವರನ್ನು ಶೋಧಿಸಬಾರದು. ಆ ಮೇಲೆ ಅಂಥ ದಡ್ಡತನದ ಪರಿಣಾಮದಿಂದ ದೇವರು ನಮ್ಮನ್ನು ಕಾಪಾಡುವನೆಂದು ಎದುರುನೋಡಬಾರದು.

    ಈಗ ಕೊನೆಯದಾಗಿ ಮೂರನೇ ಶೋಧನೆ

    ಇಲ್ಲಿ ಕೊನೆಯದಾಗಿ ಸೈತಾನನು ಮೊದಲಿನಿಂದಲೂ ತಾನು ಇಷ್ಟಪಟ್ಟದ್ದಕ್ಕೆ ಬರುತ್ತಾನೆ - ಅದು ಆರಾಧನೆ. ಅವನು ಯೇಸುವಿಗೆ "ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ, ಈ ಲೋಕದ ಎಲ್ಲ ಮಹಿಮೆಯನ್ನು ನಿನಗೆ ಕೊಡುವೆನು" ಎಂದು ಹೇಳಿದನು.

    ಈ ಲೋಕದ ಮಹಿಮೆಯು - ಹಣ, ಜನಪ್ರಿಯತೆ, ಖ್ಯಾತಿ, ಮಾನ, ಸ್ಥಾನ, ಶಕ್ತಿ ಮುಂತಾದವು ನಮ್ಮೆಲ್ಲರಿಗೆ ಭಯಂಕರ ಶೋಧನೆಯಾಗಿದೆ. ಮತ್ತು ಸೈತಾನನು, "ಇವುಗಳಲ್ಲಿ ಯಾವುದನ್ನು ಪಡಕೊಳ್ಳಲು ನಿನಗೆ ಇಷ್ಟ? ನನಗೆ ಹೇಳು ನಾನು ನಿನಗೆ ಅದನ್ನು ಕೊಡುತ್ತೇನೆ. ನನಗೆ ಸ್ವಲ್ಪ ತಲೆಬಾಗು ಮತ್ತು ಇವೆಲ್ಲವನ್ನು ನಾನು ನಿನಗೆ ಕೊಡುತ್ತೇನೆ" ಎಂದು ಹೇಳುತ್ತಾನೆ.

    ಅವನು, "ನಿನ್ನ ಪರೀಕ್ಷೆಯಲ್ಲಿ ಪಾಸಾಗಬೇಕೆ? ನಿನ್ನ ತರಗತಿಯಲ್ಲಿ ಮೊದಲಿರಬೇಕೆ? ನಾನು ನಿನಗೆ ಸಹಾಯ ಮಾಡುತ್ತೇನೆ ನನಗೆ ತಲೆ ಮಾತ್ರ ಬಾಗು - ಲಂಚ ಕೊಟ್ಟು ಪ್ರಶ್ನೆ ಪತ್ರಿಕೆಯನ್ನು ಮುಂಚಿತವಾಗಿ ಪಡೆದುಕೋ; ಪರೀಕ್ಷಕನಿಗೆ ಲಂಚಕೊಟ್ಟು ಇನ್ನೂ ಸ್ವಲ್ಪ ಅಂಕಗಳನ್ನು ಪಡೆದುಕೋ; ಪರೀಕ್ಷೆಯಲ್ಲಿ ಮೋಸ ಮಾಡು..." ಮುಂತಾದದ್ದನ್ನು ಹೇಳುತ್ತಾನೆ.

    ಅನೇಕರು ಈ ದಿನ ಸೈತಾನನಿಗೆ ತಲೆಬಾಗುವ ಮಾರ್ಗಗಳು ಇವೇ ಆಗಿವೆ.

    ಸೈತಾನನ ಒಳಸಂಚುಗಳ ಬಗ್ಗೆ, ಯೌವನಸ್ಥರೇ ನೀವು ತಿಳಿಯುವಂಥದ್ದು ನಿಮಗೆ ಪ್ರಾಮುಖ್ಯವಾಗಿದೆಯೋ? ಖಂಡಿತವಾಗಿ ನೀವು ಪರೀಕ್ಷೆಯಲ್ಲಿ ಮೋಸ ಮಾಡುವಾಗ, "ಸೈತಾನನೇ, ನಿನ್ನ ಕ್ರಮಗಳಿಗೆ ವಿಧೇಯನಾಗುತ್ತೇನೆ. ನನ್ನ ಜೇಬಿನಲ್ಲಿ ಉತ್ತರ ಬರೆದಿರುವ ಸಣ್ಣಕಾಗದ ತುಂಡನ್ನು ಪರೀಕ್ಷೆಯ ಕೋಣೆಯೊಳಗೆ ತೆಗೆದುಕೊಳ್ಳುತ್ತೇನೆ" ಎಂದು ಮನಸ್ಸಿನೊಳಗೆ ಹೇಳುತ್ತಾ, ಸೈತಾನನಿಗೆ ನೀವು ತಲೆಬಾಗುತ್ತಿದ್ದಿರಿ ಎಂದು ನೀವು ತಿಳಿಯಲೇಬೇಕು.

    ಸೈತಾನನು ಬಹಳ ಜಾಣನಾದ್ದರಿಂದ ಮೋಸ ಮಾಡಲು ಬಯಸುವವರಿಗೆ ತನ್ನ ಒಳಸಂಚುಗಳನ್ನೆಲ್ಲ ಕೊಟ್ಟು ಅವರಿಗೆ ಸಹಾಯ ಮಾಡುತ್ತಾನೆ ಮತ್ತು ಈ ದಿನಗಳಲ್ಲಿ ಮೋಸದ ಇನ್ನೂ ಅನೇಕ ಪ್ರವೀಣ ಮಾರ್ಗಗಳನ್ನು ಯೌವನಸ್ಥರು ಕಂಡುಹಿಡಿದಿದ್ದಾರೆ.

    ಸೈತಾನನು ಈ ಲೋಕದ ಮಹಿಮೆಯನ್ನು ಯೇಸುವಿಗೆ ಕೊಟ್ಟಮೇಲೆ ನಿಮಗೂ ಸಹ ಅದನ್ನು ಕೊಡುವನೆಂದು ತಿಳಿಯಿರಿ. ನೀವು ದೊಡ್ಡವರಾಗಿ ಬೆಳೆದ ಹಾಗೆ ಅವನು ನಿಮಗೆ ಕೊಡಬಹುದಾದ ಇತರ ಆಶ್ಚರ್ಯವಾದ ಬಹಳ ವಿಷಯಗಳ ಬಗ್ಗೆ ನಿಮಗೆ ಹೇಳುವುದನ್ನು ನೀವು ಕಂಡುಕೊಳ್ಳುವಿರಿ.

    ತಪ್ಪಾದ ಹೇಳಿಕೆಗಳಿಗೆ ಸಹಿ ಹಾಕುವಂಥ ಜನರು, ಇನ್ನೂ ಸ್ವಲ್ಪಹೆಚ್ಚಿಗೆ ಹಣ ಪಡೆಯಲು, ಇನ್ನು ಸ್ವಲ್ಪ ಜನಪ್ರಿಯವಾಗಲು ಅಥವಾ ಲೋಕಪ್ರಿಯವಾಗಲು ಅಥವಾ ಲೋಕದಲ್ಲಿ, ಸ್ವಲ್ಪ ಉತ್ತಮವಾದ ಸ್ಥಾನ ಪಡೆಯಲಿಕ್ಕಾಗಿಯೇ ಆರ್ಥಿಕ ವಿಷಯಗಳಲ್ಲಿ ಅನೀತಿಯನ್ನು ಪ್ರಾಯೋಗಿಕವಾಗಿ ಮಾಡುತ್ತಾರೆ. ಹೀಗೆ ವಕ್ರವಾದ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವಂಥ ಜನರಿದ್ದಾರೆ.

    ಸೈತಾನನು ಜನರಿಗೆ ಯಾವಾಗಲೂ, "ನಿಮಗೆ ಏನು ಬೇಕು ಹೇಳಿ? ಅದನ್ನು ನಾನು ನಿಮಗೆ ಕೊಡುತ್ತೇನೆ" ಎಂದು ಸತತವಾಗಿ ಹೇಳುತ್ತಿದ್ದಾನೆ. ಯೇಸುವಿಗೆ ಅಂಥ ಶೋಧನೆಗಳಲ್ಲಿ ಒಂದೇ ಒಂದು ಪ್ರತ್ಯುತ್ತರವಿತ್ತು - "ಸೈತಾನನೇ ತೊಲಗಿ ಹೋಗು ನಿನ್ನ ದೇವರಾಗಿರುವ ಕರ್ತನಿಗೆ ಅಡ್ಡಬಿದ್ದು ಆತನೊಬ್ಬನನ್ನೇ ಆರಾಧಿಸಬೇಕು ಮತ್ತು ಆತನೊಬ್ಬನನ್ನೇ ಸೇವಿಸಬೇಕು ಎಂದು ಬರೆದಿದೆ" ಎಂದು ಹೇಳಿದನು. (ಮತ್ತಾಯ 4:10).

    ಸೈತಾನನ ಈ ಎಲ್ಲಾ ಒಳಸಂಚುಗಳ ಬಗ್ಗೆ ನಮ್ಮನ್ನು ಎಚ್ಚರಿಸಲು ದೇವರ ವಾಕ್ಯವು ನಮಗೆ ಇರುವುದು ಎಷ್ಟು ಅತಿಶಯವಾದ ವಿಷಯವಾಗಿದೆ. ಯೌವನಸ್ಥರೇ, ಈ ಎಲ್ಲವುಗಳನ್ನು ಯೌವನಕಾಲದಲ್ಲಿ ಕಲಿತುಕೊಳ್ಳುವುದರಿಂದ ನೀವು ಎಷ್ಟು ಧನ್ಯರು.

    ಈ ಲೋಕದ ಯಾವುದನ್ನಾದರೂ ಪಡೆಯಲು ನಿಮಗೆ ಶೋಧನೆಯಾಗುವಾಗ ಅದನ್ನು ಪಡೆದುಕೊಳ್ಳುವ ಸಲುವಾಗಿ ನೀವು ನಿಮ್ಮ ಗುಣವನ್ನು ತ್ಯಾಗಮಾಡಲೇಬೇಕು ಎಂಬುದನ್ನು ಅರಿತುಕೊಳ್ಳುವಾಗ ಏನು ಮಾಡುವಿರಿ? ಯೇಸು ಸೈತಾನನಿಗೆ ಹೇಳಿದ್ದನ್ನು ನೆನಸಿಕೊಂಡು ಯೇಸುವಿನ ಮಾದರಿಯನ್ನು ಹಿಂಬಾಲಿಸಿರಿ ಮತ್ತು ಆತನು ಸೈತಾನನಿಗೆ ಹೇಳಿದ್ದನ್ನೇ ನೀವೂ ಹೇಳಿರಿ.

    ಸೈತಾನನು ನಿಮಗೆ - "ನೀನು ನೀತಿವಂತನಾಗಿರಬೇಕಾಗಿಲ್ಲ. ಅಲ್ಲಿ ನೀವು ಸತ್ಯವನ್ನು ಮಾತಾಡಬೇಕಾಗಿಲ್ಲ ನೀನು ಸ್ವಲ್ಪ ಸುಳ್ಳು ಹೇಳು ಮತ್ತು ಈ ಲೋಕದ ಮಹಿಮೆಯಲ್ಲಿ ಯಾವುದನ್ನಾದರೂ ನೀನು ಪಡೆಯಬಹುದು", ಎಂದು ಹೇಳುತ್ತಾ ಶೋಧಿಸುವಾಗ, "ಸೈತಾನನೇ ತೊಲಗಿ ಹೋಗು, ನಿನ್ನ ಮಾತು ನಾ ಕೇಳುವುದಿಲ್ಲ. ದೇವರೊಬ್ಬನಿಗೆ ಅಡ್ಡ ಬಿದ್ದು ಆರಾಧಿಸಬೇಕು ಎಂದು ಬರೆದಿದೆ. ನಾನು ಯೇಸುವನ್ನು ಹಿಂಬಾಲಿಸುತ್ತೇನೆ". ಎಂದು ಪ್ರತ್ಯುತ್ತರವಾಗಿ ಅವನಿಗೆ ಹೇಳುವುದಕ್ಕೆ ಧೈರ್ಯವಾಗಿರಿ.

    ಸೈತಾನನು ಸೃಷ್ಟಿಸಲ್ಪಟ್ಟ ಸಮಯದಿಂದ, ಇತರರು ಅವನನ್ನು ಆರಾಧಿಸಬೇಕು ಎಂದು ಯಾವಾಗಲೂ ಬಯಸುವವನಾಗಿದ್ದಾನೆ. ಆದ್ದರಿಂದ ಅವನು ದೇವರಂತೆ ಇರಲು ಬಯಸಿದನು. ಯಾಕಂದರೆ ದೇವರು ಒಬ್ಬನೇ ಆರಾಧಿಸಲ್ಪಡಬೇಕು ಎಂದು ಅವನು ತಿಳಿದಿದ್ದನು. ಇತರ ದೇವದೂತರು ಅವನನ್ನು ಆರಾಧಿಸಬೇಕು ಎಂದು ಅವನು ಬಯಸಿದನು. ಆದಾಮನ ಸಂತತಿಯವರು ಅವನನ್ನು ಆರಾಧಿಸಬೇಕೆಂದು ಬಯಸಿದನು ಮತ್ತು ಆಶ್ಚರ್ಯವಾಗಿ ಯೇಸು ಸಹ ಅವನನ್ನು ಆರಾಧಿಸಬೇಕೆಂದು ಬಯಸಿದನು!!!

    ಸೈತಾನನು ಯೇಸುವಿನ ಜೊತೆ ಸಫಲನಾಗಲಿಲ್ಲ ಆದರೆ ಈ ದಿನ ಲೋಕದಲ್ಲಿ ಅವನು ಬಹಳ ಜನರೊಂದಿಗೆ ಮತ್ತು ತಮಗೋಸ್ಕರ ಇಹಲೋಕದ ಲಾಭವನ್ನು ಗಳಿಸುವುದಕ್ಕೋಸ್ಕರ ತಮ್ಮ ಮನವರಿಕೆಯನ್ನು ರಾಜಿ ಮಾಡಿಕೊಳ್ಳುವ ಅನೇಕಾನೇಕ ವಿಶ್ವಾಸಿಗಳೊಂದಿಗೆ ಅವನು ಸಫಲನಾಗುತ್ತಿದ್ದಾನೆ.

    ಈ ದಿನ ಸೈತಾನನಿಗೆ ತಲೆಬಾಗುವ ಕೋಟ್ಯಾಂತರ ಜನರಿದ್ದಾರೆ. ಪಾಪಕ್ಕೆ ಒಳಗಾದಾಗ ಅಥವಾ ತಮ್ಮ ಮನಸ್ಸಾಕ್ಷಿಗೆ ವಿರುದ್ಧವಾಗಿ ಹೋದಾಗ, ನಿಜವಾಗಿ ಅವರು ಸೈತಾನನಿಗೆ ತಲೆಬಾಗುತ್ತಿದ್ದಾರೆಂದು ಗ್ರಹಿಸುವುದಿಲ್ಲ. ಯಾಕೆ ಅವರು ಅದನ್ನು ಮಾಡುತ್ತಾರೆ? ಈ ಲೋಕದ ಮಹಿಮೆಯಲ್ಲಿ ಯಾವುದನ್ನಾದರೂ ಪಡೆದುಕೊಳ್ಳಲಿಕ್ಕಾಗಿ.

    ನಿಮಗೆ ಯಶಸ್ಸು, ಜನಪ್ರಿಯತೆ ಅಥವಾ ಬಲ, ಪರೀಕ್ಷೆಯಲ್ಲಿ ಯಶಸ್ಸು ಅಥವಾ ಶಾಲೆಯಲ್ಲಿ ಜನಪ್ರಿಯತೆ ಅಥವಾ ಲೋಕದಲ್ಲಿ ಸ್ಥಾನ ನಿಮಗೆ ಬೇಕಾದಾಗ ಸೈತಾನನು ನಿಮ್ಮ ಬಳಿ ಬಂದು, "ನಾನು ನಿಮಗೆ ಇದನ್ನು ಕೊಡುತ್ತೇನೆ. ಇದನ್ನು ಮಾಡು, ಅದನ್ನು ಮಾಡು, ಮತ್ತು ಹೋಗಿ ಹೀಗೆಯೇ ಮಾಡು..." ಎಂದು ಹೇಳುತ್ತಾನೆ.

    ಅವನ ಸಲಹೆಗಳೆಲ್ಲಾ ತಪ್ಪು ಎಂದು ನಿಮಗೆ ಬಹಳ ಚೆನ್ನಾಗಿ ಗೊತ್ತು. ಆದರೂ ಅದನ್ನು ನೀವು ಮಾಡುವುದಕ್ಕೆ ಮುಂದಕ್ಕೆ ಹೋಗುತ್ತೀರಿ, ಹೀಗೆ ಸೈತಾನನಿಗೆ ಮೊಣಕಾಲೂರುತ್ತೀರಿ.

    ಈ ರೀತಿಯ ಕೆಲಸಗಳನ್ನು ಮಾಡಿ ನೀವು ನಿಮ್ಮನ್ನು ಇನ್ನು ಕ್ರೈಸ್ತನೆಂದು ಕರೆಸಿಕೊಳ್ಳಬಹುದು ಎಂದು ಯೋಚಿಸುತ್ತೀರಾ? ಖಂಡಿತವಾಗಿ ಇಲ್ಲ. ಸೈತಾನನಿಗೆ ಮೊಣಕಾಲೂರುವ ಯಾವನೂ ಕ್ರೈಸ್ತನಲ್ಲ.

    ಕಳೆದ ವರ್ಷಗಳಲ್ಲಿ ಅದರಂತೆ ಸೈತಾನನಿಗೆ ನಾವು ಮೊಣಕಾಲೂರಿದ್ದರೆ, ಮುಂದೆ ಏನು ಮಾಡೋಣ? ನಾವು ಮಾಡಿದ ಆ ಎಲ್ಲಾ ಸಮಯಗಳ ಬಗ್ಗೆ ಪಶ್ಚಾತ್ತಾಪಪಡಲೇಬೇಕು. ನಾವು ಮೋಸಮಾಡಿದ್ದನ್ನು ಹಿಂದಕ್ಕೆ ಕೊಡಲೇಬೇಕು. ಅಥವಾ ತಪ್ಪಾಗಿ ಗಳಿಸಿದ್ದನ್ನು ಹಿಂದಕ್ಕೆ ಕೊಡಲೇಬೇಕು. ಯೇಸು ನಮ್ಮನ್ನು ಕ್ಷಮಿಸಿ ಶುದ್ದಮಾಡಬೇಕೆಂದು ಕೇಳಿಕೊಳ್ಳಲೇಬೇಕು.

    ಸೈತಾನನು ನಮ್ಮ ಜೀವಿತದ ಮೇಲೆ ತನ್ನ ಬಲವನ್ನು ಸತತವಾಗಿ ಹೊಂದದಿರುವಂತೆ ತಡಮಾಡದೆ ಇವುಗಳನ್ನು ಮಾಡೋಣ.

    ಅಧ್ಯಾಯ 6
    ಸೈತಾನನ ಸೋಲು

    ಸೈತಾನನ ಅಪಜಯದ ಕುರಿತು ಸ್ವಲ್ಪವನ್ನು ಈಗ ನಿಮ್ಮೊಂದಿಗೆ ನಾನು ಹಂಚಿಕೊಳ್ಳಲು ಬಯಸುತ್ತೇನೆ.

    ಭೂಮಿಯ ಮೇಲೆ ಎಂದೂ ನಡೆಯದಂಥ ಒಂದು ದೊಡ್ಡ ಯುದ್ಧದ ಬಗ್ಗೆ ಲೋಕದ ಚರಿತ್ರೆಯ ಯಾವ ಪುಸ್ತಕದಲ್ಲಿಯೂ ಬರೆಯಲ್ಪಟ್ಟಿಲ್ಲ. ಇದು ಯೇಸು ಸ್ವಾಮಿ ಕಲ್ವಾರಿಯ ಮೇಲೆ ತನ್ನ ಮರಣದಿಂದ ಇಹಲೋಕದ ರಾಜನಾದ ಸೈತಾನನನ್ನು ಸೋಲಿಸಿದ್ದೇ ಆಗಿದೆ.

    ನಿಮ್ಮ ಜೀವನವಿಡೀ ನೀವು ಎಂದಿಗೂ ಮರೆಯಬಾರದಂಥ ಒಂದು ವಾಕ್ಯ - ಇಬ್ರಿಯ 2:14-15. ನೀವು ಈ ವಾಕ್ಯವನ್ನು ತಿಳಿಯುವುದು ಸೈತಾನನಿಗೆ ಇಷ್ಟವಿಲ್ಲ ಎಂದು ನನಗೆ ನಿಶ್ಚಯವಾಗಿದೆ. ತನ್ನ ಸ್ವಂತ ಸೋಲು ಅಥವಾ ಅಪಜಯದ ಬಗ್ಗೆ ಕೇಳಿಸಿಕೊಳ್ಳಲು ಯಾರೂ ಇಷ್ಟಪಡುವುದಿಲ್ಲ, ಅದಕ್ಕೆ ಸೈತಾನನು ಹೊರತಾಗಿಲ್ಲ. ವಾಕ್ಯವು ಹೀಗಿದೆ:

    "ಇದಲ್ಲದೆ ಮಕ್ಕಳು ರಕ್ತಮಾಂಸಧಾರಿಗಳಾಗಿರುವುದರಿಂದ ಆತನೂ ಅವರಂತೆಯೇ ಆದನು. ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ, ಸೈತಾನನನ್ನು ಅಡಗಿಸಿಬಿಡುವುದಕ್ಕೂ, ಮರಣಭಯದ ದೆಸೆಯಿಂದ ತಮ್ಮಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವುದಕ್ಕೂ ಅವರಂತೆ ರಕ್ತಮಾಂಸಧಾರಿಯಾದನು."

    ಯೇಸು ಸ್ವಾಮಿ ಸತ್ತಾಗ ಆತನು ಸೈತಾನನನ್ನು ಶಕ್ತಿಯಿಲ್ಲದವನನ್ನಾಗಿ ಮಾಡಿದ್ದಾನೆ ಸೈತಾನನು ನಮ್ಮ ಜೀವಮಾನದ ಕೊನೆಯವರೆಗೆ ನಮ್ಮ ಮೇಲೆ ಇಟ್ಟಿರುವ ದಾಸತ್ವದ ಭಯದಿಂದ ನಾವು ನಿತ್ಯವಾಗಿ ಬಿಡುಗಡೆಯಾಗುವಂತೆ ಸೈತಾನನನ್ನು ಯೇಸುಸ್ವಾಮಿ ಶಕ್ತಿಯಿಲ್ಲದವನನ್ನಾಗಿ ಮಾಡಿದ್ದಾನೆ. ಅನೇಕ ತರದ ಭಯಗಳು-ಕಾಯಿಲೆಯ ಭಯ, ಬಡತನದ ಭಯ, ಅಪಜಯದ ಭಯ, ಜನರ ಭಯ, ಭವಿಷ್ಯದ ಭಯ, ಮುಂತಾದ ಭಯ ಲೋಕದಲ್ಲಿ ಜನರಿಗಿದೆ. ಹೇಗಿದ್ದರೂ ಎಲ್ಲಾ ಭಯಕ್ಕಿಂತ ಅತಿ ಹೆಚ್ಚಿನ ಭಯ ಮರಣದ ಭಯವಾಗಿದೆ. ಎಲ್ಲಾ ಇತರ ಭಯವು ಮರಣಭಯಕ್ಕೆ ಕೆಳಮಟ್ಟದ್ದು.

    ಮರಣದ ಭಯವು, ಮರಣದ ನಂತರ ಏನಾಗುತ್ತದೆ ಎಂಬ ಭಯಕ್ಕೆ ನಡಿಸುತ್ತದೆ. ಪಾಪದಲ್ಲಿ ಜೀವಿಸುವವರು ಕೊನೆಗೆ ಪಶ್ಚಾತ್ತಾಪ ಪಡದ ಜನರಿಗೆ ದೇವರು ಮಿಸಲಾಗಿಟ್ಟ ಸ್ಥಳಕ್ಕೆ ಹೋಗುತ್ತಾರೆ ಎಂದು ಸತ್ಯವೇದವು ಸ್ಪಷ್ಟವಾಗಿ ಬೋಧಿಸುತ್ತದೆ.

    ಈ ಭೂಮಿಯ ಮೇಲೆ ತಾನು ವಂಚಿಸಿ ಮತ್ತು ಪಾಪದೊಳಗೆ ನಡೆಸಿದವರ ಜೊತೆ ಸೈತಾನನು ಸಹ ಬೆಂಕಿಯ ದೊಡ್ಡ ಕರೆಯಲ್ಲಿ ನಿತ್ಯತ್ವವನ್ನು ಕಳೆಯುವನು.

    ಯೇಸು ನಮ್ಮ ಪಾಪಗಳಿಗೋಸ್ಕರ ಶಿಕ್ಷೆ ತೆಗೆದುಕೊಳ್ಳುವುದರಿಂದ ನಮ್ಮನ್ನು ಆ ನಿತ್ಯ ನರಕದಿಂದ ರಕ್ಷಿಸಲು ಈ ಭೂಮಿಗೆ ಬಂದನು. ಸೈತಾನನು ಮತ್ತೆ ನಮ್ಮನ್ನು ಎಂದೂ ತೊಂದರೆಮಾಡದೆ ಇರಲೆಂದು, ಯೇಸು ನಮ್ಮ ಮೇಲೆ ಸೈತಾನನಿಗಿದ್ದ ಶಕ್ತಿಯನ್ನು ನಾಶಮಾಡಿದನು.

    ನೀವೆಲ್ಲರೂ ಈ ಒಂದು ಸತ್ಯವನ್ನು ನಿಮ್ಮ ಜೀವಿತದಲ್ಲಿ ನೆನಪಿನಲ್ಲಿಡಬೇಕೆಂದು ನಾನು ಬಯಸುತ್ತೇನೆ.

    ದೇವರು ಸೈತಾನನನಿಗೆ ವಿರುದ್ಧವಾಗಿ ಯಾವಾಗಲೂ ನಿಮ್ಮ ಪರವಾಗಿ ಇದ್ದಾನೆ.

    ಇದು ಎಂಥಾ ಮಹಿಮೆಯ ಸತ್ಯ! ನನ್ನ ಜೀವಿತದಲ್ಲಿ ಹೆಚ್ಚು ಉತ್ತೇಜನ, ಆದರಣೆ ಮತ್ತು ಜಯವನ್ನು ನನಗೆ ತಂದಿದೆ. ನಾನು ಎಲ್ಲ ಕಡೆ ಹೋಗಿ ಲೋಕದಲ್ಲಿನ ಎಲ್ಲ ವಿಶ್ವಾಸಿಗಳಿಗೆ ಇದರ ಬಗ್ಗೆ ಹೇಳಲು ಆಶಿಸುತ್ತೇನೆ.

    ಸತ್ಯವೇದವು, "ದೇವರಿಗೆ ಒಳಗಾಗಿ ಸೈತಾನನನ್ನು ಎದುರಿಸಿರಿ, ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು." ಎಂದು ಹೇಳುತ್ತದೆ (ಯಾಕೋಬ 4:7). ಯೇಸುವಿನ ಹೆಸರಿನಲ್ಲಿ ಸೈತಾನನು ಯಾವಾಗಲೂ ಓಡಿಹೋಗುವನು.

    ಹೆಚ್ಚು ಕ್ರೈಸ್ತರ ಮನಸ್ಸಿನಲ್ಲಿರುವ ಚಿತ್ರ ಏನಂದರೆ, ಸೈತಾನನು ಅವರನ್ನು ಬೆನ್ನಟ್ಟುವುದು ಮತ್ತು ಅವರು ತಮ್ಮ ಜೀವನ ನಡೆಸಲು ಅವನಿಂದ ಓಡಿಹೋಗುವುದೇ ಆಗಿದೆ. ಅದರೆ ಅದು ಸತ್ಯವೇದದ ಬೋಧನೆಗೆ ಖಂಡಿತವಾಗಿ ವಿರುದ್ಧವಾಗಿದೆ.

    ಸೈತಾನನು ಯೇಸುವಿಗೆ ಭಯಪಡುತ್ತಾನೋ ಇಲ್ಲವೋ? ಏನು ಯೋಚಿಸುತ್ತೀರಿ? ಸೈತಾನನು ನಮ್ಮ ರಕ್ಷಕನ ಮುಂದೆ ನಿಲ್ಲಲು ಹೆದರುತ್ತಾನೆ ಎಂದು ನಮಗೆಲ್ಲ ಗೊತ್ತು. ಯೇಸುವು ಲೋಕಕ್ಕೆ ಬೆಳಕಾಗಿದ್ದಾನೆ ಮತ್ತು ಅಂಧಕಾರದ ಅಧಿಪತಿಯು ಆತನ ಮುಂದೆ ನಿಲ್ಲುವುದು ಸಾಧ್ಯವಿಲ್ಲ.

    ನನ್ನ ಪ್ರಿಯ ಯೌವ್ವನ ಸ್ನೇಹಿತರೇ, ಯೇಸುವಿನ ಹೆಸರನ್ನು ದೈವಿಕ ಅಧಿಕಾರದೊಂದಿಗೆ, ಸೈತಾನನಿಗೆ ವಿರುದ್ದವಾಗಿ ಉಪಯೋಗಿಸುವ ಪ್ರತಿಯೊಬ್ಬರಿಗೂ ಸಹ ಅವನು ಭಯಪಡುತ್ತಾನೆ.

    ಯೇಸು ಸ್ವಾಮಿ ತನ್ನ ಶಿಷ್ಯರಿಗೆ ಸೈತಾನನು ಪರಲೋಕದಿಂದ ಯಾವರೀತಿಯಾಗಿ ಬೀಳುವುದನ್ನು ಆತನು ನೋಡಿದನೆಂಬುದನ್ನು ಹೇಳಿದನು. ದೇವರು ಅವನನ್ನು ಹೊರಗೆ ತಳ್ಳಿದಾಗ ಸೈತಾನನ ಬೀಳುವಿಕೆ "ಸಿಡಿಲಿನಂತೆ" ಇತ್ತು ಎಂಬುದಾಗಿ ಯೇಸು ಸ್ವಾಮಿ ಹೇಳಿದನು (ಲೂಕ 10:18). ಯೇಸು ಸೈತಾನನಿಗೆ ಅಡವಿಯಲ್ಲಿ, "ಸೈತಾನನೇ ತೊಲಗಿ ಹೋಗು" ಎಂದು ಹೇಳಿದಾಗ ಯೇಸುವಿನ ಸನ್ನಿಧಿಯಿಂದ ಸಹ ಮಿಂಚಿನ ವೇಗದಲ್ಲಿ ಅವನು ಕಣ್ಮರೆಯಾದನು. ಇ೦ದು ನಾವು ಯೇಸುವಿನ ಹೆಸರಿನಲ್ಲಿ ಸೈತಾನನನ್ನು ಎದುರಿಸಿದಾಗ,ಅವನು ನಮ್ಮಿಂದ ಸಹ ಮಿಂಚಿನ ವೇಗದಲ್ಲಿ ಓಡಿಹೋಗುವನು. ಕತ್ತಲೆಯು ಬೆಳಕಿನ ಮುಂದೆ ಓಡಿಹೋಗುತ್ತದೆ.

    ಸೈತಾನನು ಯೇಸುವಿನ ಹೆಸರಿಗೆ ಭಯಪಡುತ್ತಾನೆ. ಯೇಸು ಕರ್ತನಾಗಿದ್ದಾನೆ ಮತ್ತು ಕರ್ತನಾದ ಯೇಸುವಿನಿಂದ ಅವನು ಸೋಲಿಸಲ್ಪಟ್ಟನು ಎಂಬ ವಿಷಯ ಜನರು ನೆನಪಿಸಿಕೊಳ್ಳುವುದನ್ನು ದ್ವೇಷಿಸುತ್ತಾನೆ. "ಯೇಸು ಕರ್ತನಾಗಿದ್ದಾನೆ" ಅಥವಾ "ಕರ್ತನಾದ ಯೇಸುವಿನಿಂದ ಸೈತಾನನು ಶಿಲುಬೆ ಮೇಲೆ ಸೋಲಿಸಲ್ಪಟ್ಟನು" ಎಂದು ದೆವ್ವ ಹಿಡಿದ ಜನರು ಬಾಯಿಂದ ಅರಿಕೆಮಾಡದೆ ಇರುವುದನ್ನು ನಾನು ಗಮನಿಸಿದ್ದೇನೆ.

    ಮಿಂಚಿನ ವೇಗದಲ್ಲಿ ಯಾವುದೇ ದೆವ್ವವನ್ನು ಹೊರಡಿಸಲು ಮತ್ತು ಯಾವುದೇ ದೆವ್ವವು ನಿಮ್ಮಿಂದ ಓಡಿಹೋಗುವಂತೆ ಮಾಡಲು ಯೇಸು ಕ್ರಿಸ್ತನ ಹೆಸರಿನಲ್ಲಿ ಶಕ್ತಿ ಇದೆ ಎಂಬುದನ್ನು ಎಂದಿಗೂ ಮರೆಯಬೇಡಿರಿ.

    ಯೌವನಸ್ಥರೇ, ನಿಮಗೆ ಹೇಳಬಯಸುವುದು ಏನಂದರೇ - ನಿಮ್ಮ ಜೀವನದಲ್ಲಿ ಯಾವಾಗಾದರೂ ಕಷ್ಟದಲ್ಲಿದ್ದರೆ, ಅಥವಾ ಜಯಿಸಲಾಗದ ಕೆಲವು ಸಮಸ್ಯೆಯನ್ನು ಎದುರಿಸುವಾಗ ಅಥವಾ ನೀವು ಎದುರಿಸುವ ಯಾವುದೇ ಸಮಸ್ಯೆಗೆ ಮಾನವ ಉತ್ತರ ಕಾಣದಿರುವಾಗ, ಕರ್ತನಾದ ಯೇಸುವಿನ ಹೆಸರನ್ನು ಕರೆದು, "ಕರ್ತನಾದ ಯೇಸುವೇ, ನೀನು ಸೈತಾನನಿಗೆ ವಿರುದ್ಧವಾಗಿ ನನ್ನ ಪರವಾಗಿದ್ದೀ. ಈಗ ನನಗೆ ಸಹಾಯಮಾಡು". ಎಂದು ಆತನಿಗೆ ಹೇಳಿರಿ. ನಂತರ ಸೈತಾನನ ಕಡೆಗೆ ತಿರುಗಿ, "ಸೈತಾನನೇ, ಯೇಸುವಿನ ಹೆಸರಿನಲ್ಲಿ ನಿನ್ನನ್ನು ಎದುರಿಸುತ್ತೇನೆ". ಎಂದು ಅವನಿಗೆ ಹೇಳಿರಿ. ಕೂಡಲೇ ಸೈತಾನನು ನಿಮ್ಮಿಂದ ಓಡಿಹೋಗುವನು. ಯಾಕೆಂದರೆ ಯೇಸು ಸ್ವಾಮಿ ಅವನನ್ನು ಶಿಲುಬೆಯ ಮೇಲೆ ಸೋಲಿಸಿದ್ದಾನೆ. ನೀವು ದೇವರ ಬೆಳಕಿನಲ್ಲಿ ನಡೆಯುವಾಗ ಮತ್ತು ಯೇಸುವಿನ ಹೆಸರಿನಲ್ಲಿ ಅವನನ್ನು ಎದುರಿಸುವಾಗ, ಸೈತಾನನು ನಿಮಗೆ ವಿರುದ್ದ ಬಲವಿಲ್ಲದವನಾಗಿದ್ದಾನೆ.

    ಸೈತಾನನು, ಅವನ ಸೋಲಿನ ಕುರಿತು ನೀವು ತಿಳಿದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಈ ಕಾರಣದಿಂದಲೇ, ನೀವು ಇದರ ಬಗ್ಗೆ ಕೇಳಿಸಿಕೊಳ್ಳುವುದನ್ನು ಬಹಳ ಸಮಯದಿಂದ ನಿಮ್ಮನ್ನು ತಡೆದಿದ್ದಾನೆ. ಇದಕ್ಕಾಗಿಯೇ ಅವನು ಹೆಚ್ಚು ಪ್ರಸಂಗಿಗಳು ತನ್ನ ಸೋಲಿನ ಬಗ್ಗೆ ಪ್ರಸಂಗಿಸುವುದರಿಂದ ಸಹ ಅವರನ್ನು ನಿಲ್ಲಸಿಬಿಟ್ಟಿದ್ದಾನೆ.

    ಸೈತಾನನು ಶಿಲುಬೆಯ ಮೇಲೆ ಕರ್ತನಾದ ಯೇಸು ಕ್ರಿಸ್ತನಿಂದ ಒಂದೇ ಸಾರಿಯಾಗಿ ಎಲ್ಲರಿಗೋಸ್ಕರ ಸೋಲಿಸಲ್ಪಟ್ಟನೆಂದು ನೀವು ಸ್ಪಷ್ಟವಾಗಿ ತಿಳಿಯಬೇಕೆಂದು ನಾನು ಬಯಸುತ್ತೇನೆ. ನೀವು ಮತ್ತೇ ಸೈತಾನನಿಗೆ ಎಂದಿಗೂ ಭಯಪಡುವ ಅವಶ್ಯಕತೆಯಿಲ್ಲ. ಅವನು ನಿಮ್ಮನ್ನು ತೊಂದರೆಪಡಿಸಲು ಸಾಧ್ಯವಿಲ್ಲ. ನಿಮಗೆ ಕೆಡುಕು ಮಾಡಲು ಸಾಧ್ಯವಿಲ್ಲ. ಅವನು ನಿಮ್ಮನ್ನು ಶೋಧಿಸಬಹುದು. ನಿಮ್ಮ ಮೇಲೆ ಧಾಳಿಮಾಡಬಹುದು. ಆದರೆ ನೀವು ನಿಮ್ಮನ್ನು ತಗ್ಗಿಸಿಕೊಂಡು, ದೇವರಿಗೆ ಒಳಗಾಗಿ ಮತ್ತು ಎಲ್ಲಾ ಸಮಯಗಳಲ್ಲಿ ಆತನ ಬೆಳಕಿನಲ್ಲಿ ನಡೆದರೆ, ಕ್ರಿಸ್ತನಲ್ಲಿರುವ ದೇವರ ಕೃಪೆಯು ಯಾವಾಗಲೂ ನಿಮ್ಮನ್ನು ಸೈತಾನನ ಮೇಲೆ ಜಯಶಾಲಿಗಳನ್ನಾಗಿ ಮಾಡುತ್ತದೆ. ಬೆಳಕಿನಲ್ಲಿ ಅತಿಶಯವಾದ ಶಕ್ತಿ ಇದೆ. ಕತ್ತಲೆಯ ರಾಜ ಸೈತಾನನು ಬೆಳಕಿನ ಕ್ಷೇತ್ರದಲ್ಲಿ ಎಂದಿಗೂ ಪ್ರವೇಶಿಸಲು ಸಾಧ್ಯವಿಲ್ಲ.

    ಈ ದಿನ ಅನೇಕ ವಿಶ್ವಾಸಿಗಳ ಮೇಲೆ ಸೈತಾನನಿಗೆ ಬಲವಿದ್ದರೆ, ಅದಕ್ಕೆ ಕಾರಣ ಅವರು ಕತ್ತಲೆಯಲ್ಲಿ ನಡೆಯುತ್ತಿದ್ದಾರೆ. ಯಾವುದೋ ರಹಸ್ಯಪಾಪಗಳಲ್ಲಿ ಜೀವಿಸುತ್ತಿದ್ದಾರೆ. ಇತರರನ್ನು ಕ್ಷಮಿಸದೇ ಇರುವುದು. ಯಾರೋ ಒಬ್ಬರ ಮೇಲೆ ಹೊಟ್ಟೇಕಿಚ್ಚು, ಅಥವಾ ತಮ್ಮ ಜೀವಿತದ ಕೆಲವು ಸ್ವಾರ್ಥ ಆಕಾಂಕ್ಷೆಯನ್ನು ನಡೆಸುತ್ತಿದ್ದಾರೆ. ಇವೇ ಕಾರಣಗಳಾಗಿವೆ. ಹೀಗೆಯೇ ಸೈತಾನನು ಅವರನ್ನು ಆಳುತ್ತಾನೆ. ಇಲ್ಲದಿದ್ದರೆ ಅವನು ಅವರನ್ನು ಮುಟ್ಟಲು ಸಾಧ್ಯವಾಗುತ್ತಿರಲಿಲ್ಲ.

    ಈ ಲೋಕದಲ್ಲಿನ ಜನರ ಹಾಗೆ ನೀವು ಎಂದಿಗೂ ಮೂಢಭಕ್ತಿಯಿಂದ ಇರಬಾರದು. ಇಂತಿಂಥ ದಿನಗಳಲ್ಲಿ ಮುಖ್ಯವಾದ ಯಾವುದನ್ನಾದರೂ ಮಾಡಲು ಭಯಪಡುತ್ತಾರೆ. ಉದಾಹರಣೆಗೆ, ಯಾವುದೇ ಶುಕ್ರವಾರ 13 ರಂದು ಕೆಲವರು ಕಪ್ಪು ಬೆಕ್ಕು ಅವರ ದಾರಿಯಲ್ಲಿ ಹಾದುಹೋಗುವುದು ಅಪಶಕುನ ಎಂದು ಭಾವಿಸುತ್ತಾರೆ. ಕೆಲವರು ಯಾವುದು ಕೆಟ್ಟಕಾಲ ಎಂದು ದೃಢಪಡಿಸಿಕೊಳ್ಳಲು ಮತ್ತು ಮುಖ್ಯವಾಗಿರುವ ಯಾವುದನ್ನಾದರೂ ಬಿಟ್ಟು ಬಿಡಲು ಚಂದ್ರನ ಸ್ಥಾನವನ್ನು ಪರೀಕ್ಷಿಸುತ್ತಾರೆ.

    ಅಂಥ ಮೂಡಭಕ್ತಿಯ ಭಯ ಎಲ್ಲಿಂದ ಉತ್ಪತ್ತಿಯಾಗುತ್ತವೆ? ಸೈತಾನನಿಂದ. ಯೇಸು ಇಂಥ ಪ್ರತಿಯೊಂದು ಭಯದಿಂದ ನಮ್ಮನ್ನು ಬಿಡುಗಡೆ ಮಾಡಲು ಬಂದನು. ನಾವು ಇನ್ನೆಂದಿಗೂ ಈ ಲೋಕದಲ್ಲಿ ಯಾವುದಕ್ಕೆ ಭಯಪಡುವ ಅವಶ್ಯವಿಲ್ಲ. ಎಲ್ಲ ಮೂಢಭಕ್ತಿಯೂ ಸೈತಾನನಿಂದಲೇ ಉತ್ಪತ್ತಿಯಾಗಿದೆ.

    ಪ್ರಕಟನೆ ಗ್ರಂಥದಲ್ಲಿ ಒಂದು ದಿನ ಯೇಸು ತಿರುಗಿ ಬಂದು, ಸೈತಾನನನ್ನು ತಳಕಾಣಲಾಗದ ಪಾತಾಳದಲ್ಲಿ ಬಂಧಿಸಿ ಸಾವಿರ ವರ್ಷ ಈ ಭೂಮಿಯ ಮೇಲೆ ಆಳುವನು ಎಂದು ನಮಗೆ ಹೇಳಲ್ಪಟ್ಟಿದೆ. ಈ ಸಮಯವಾದ ಮೇಲೆ, ಸೈತಾನನು ದೀರ್ಘಕಾಲದ ಸೆರೆಮನೆವಾಸದ ಮೇಲೆಯೂ ಇನ್ನೂ ತಾನು ಬದಲಾವಣೆಯಾಗಿಲ್ಲ ಎಂದು ಎಲ್ಲರಿಗೆ ತೋರಿಸಲು ಸ್ವಲ್ಪ ಕಾಲ ಬಿಡುಗಡೆ ಹೊಂದುವನು. ಆ ಮೇಲೆ ಅವನು ಹೊರಗೆ ಹೋಗಿ, ಭೂಮಿಯ ಮೇಲೆ ಕೊನೆಯ ಸಮಯ ಜನರನ್ನೂ ವಂಚಿಸುವನು. ನಂತರ ಆದಾಮನ ಸಂತಾನದವರು ಕರ್ತನಾದ ಯೇಸುವಿನ ಅಧೀನದಲ್ಲಿ ಸಮಾಧಾನದ ಸಾವಿರ ವರ್ಷಕಾಲದ ಆಳ್ವಿಕೆಯನ್ನು ಗಮನಿಸಿದ ಮೇಲೆಯೂ ಅವರೂ ಬದಲಾವಣೆಯಾಗಲಿಲ್ಲ ಎಂಬುದು ಕಾಣಬರುವುದು.

    ನಂತರ ದೇವರು ಸೈತಾನನ ಮೇಲೆ ನ್ಯಾಯತೀರ್ಪಿಗೆ ಬಂದು ನಿತ್ಯತ್ವಕ್ಕೆ ಅವನನ್ನು ಬೆಂಕಿಯ ದೊಡ್ಡ ಕೆರೆಯೊಳಗೆ ತಳ್ಳಿಬಿಡುವನು ಮತ್ತು ಪಾಪದಲ್ಲಿ ಜೀವಿಸಿದವರೆಲ್ಲರೂ, ಸೈತಾನನಿಗೆ ಮೊಣಕಾಲೂರಿದವರೂ, ದೇವರ ವಾಕ್ಯಕ್ಕೆ ವಿಧೇಯರಾಗುವುದಕ್ಕೆ ಬದಲು ಅವನಿಗೆ ವಿಧೇಯರಾದವರೆಲ್ಲರೂ ಸಹ ಆ ಬೆಂಕಿಯ ಕೆರೆಯಲ್ಲಿ ಸೈತಾನನನ್ನು ಸೇರುವರು.

    ಇದಕ್ಕಾಗಿಯೇ ಸೈತಾನನ ಸೋಲಿನ ಸುವಾರ್ತೆಯನ್ನು ನಾವು ಸಾರುತ್ತೇವೆ. ಈ ಸಮಯದಲ್ಲಿ ವಿಶ್ವಾಸಿಗಳು ಇದು ಕೇಳಲು ಅವಶ್ಯವಾದ ಬಹಳ ಪ್ರಾಮುಖ್ಯವಾದ ಸತ್ಯವಾಗಿದೆ.

    ಆದರೆ ನೀವು ಶುದ್ಧತ್ವದಲ್ಲಿ ನಡೆಯದಿದ್ದರೆ, ನಿಮಗೆ ಸೈತಾನನ ಮೇಲೆ ಬಲವಿರುವುದಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ. ಮತ್ತು ಕ್ರಿಸ್ತನ ರಕ್ತದಿಂದ ಅವನ ದೂರುಗಳನ್ನು ಜಯಿಸಲು ನೀವು ಕಲಿಯದಿದ್ದರೆ ನಿಮಗೆ ಸೈತಾನನ ಮೇಲೆ ಬಲವಿರುವುದಿಲ್ಲ. ಸೈತಾನನು ಈ ಲೋಕದ ರಾಜ ಮತ್ತು ಅಧಿಪತಿಯಾಗಿದ್ದಾನೆ. ಆದ್ದರಿಂದ ನೀವು ಈ ಲೋಕವನ್ನು ಪ್ರೀತಿಸಿದರೆ, ನಿಮಗೆ ಸೈತಾನನ ಮೇಲೆ ಬಲವಿರುವುದಿಲ್ಲ ನೀವು ದೇವರನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಈ ಭೂಮಿಯ ಮೇಲೆ ಯಾವುದನ್ನಾದರೂ ಅಥವಾ ಯಾರನ್ನಾದರೂ ಪ್ರೀತಿಸಿದರೆ, ನೀವು ಅವನನ್ನು ಅಧೀನಪಡಿಸಿಕೊಳ್ಳಲು ನಿಮಗೆ ಸಾಧ್ಯವಿಲ್ಲ (ಪ್ರಕಟನೆ 12:11 ನೋಡಿರಿ).

    ಆದ್ದರಿಂದ ಯೌವನಸ್ಥರೇ, ನಿಮ್ಮನ್ನು ಪ್ರಭೋಧಿಸಲು ಬಯಸುತ್ತೇನೆ: ಕರ್ತನಾದ ಯೇಸು ಕ್ರಿಸ್ತನನ್ನು ಮತ್ತು ನಿಮ್ಮ ಜೀವಿತಕ್ಕೆ ಆತನ ಚಿತ್ತವನ್ನು, ನಿಮ್ಮ ಪೂರ್ಣ ಹೃದಯದಿಂದ ನಿಮ್ಮ ಪೂರ್ಣ ಮನಸ್ಸಿನಿಂದ ಮತ್ತು ನಿಮ್ಮ ಪೂರ್ಣಶಕ್ತಿಯಿಂದ ಪ್ರೀತಿಸಿರಿ. ಯಾವ ರೀತಿಯಲ್ಲಿಯೂ ಸೈತಾನನು ನಿಮ್ಮ ಮನಸ್ಸನ್ನು ಅಪವಿತ್ರಗೊಳಿಸಲು ಎಂದಿಗೂ ಅನುಮತಿಸಬೇಡಿರಿ.

    ನಿಮ್ಮ ಮನಸ್ಸು ಅಶುದ್ಧವಾಗಿದ್ದರೆ, ಯೇಸುವಿನ ಹೆಸರನ್ನು ಸೈತಾನನಿಗೆ ವಿರುದ್ಧವಾಗಿ ಪರಿಣಾಮಕಾರಿಯಾಗಿ ಉಪಯೋಗಿಸಲು ನಿಮಗೆ ಸಾಧ್ಯವಿರುವುದಿಲ್ಲ. ಯೇಸುವಿನ ಹೆಸರು ಕೆಟ್ಟದ್ದನ್ನುನೀಗಿಸತಕ್ಕ ಮಂತ್ರ ವಿದ್ಯಯಂತೆ ಇಲ್ಲ. ಮೊದಲು ನೀವು ದೇವರಿಗೆ ಒಳಗಾಗಲೇಬೇಕು. ಆಗ ಮಾತ್ರ ಅವನನ್ನು ನೀವು ಎದುರಿಸಿದಾಗ ಅವನು ನಿಮ್ಮಿಂದ ಓಡಿಹೋಗುವನು. ಅದರೆ ನಿಮ್ಮ ಜೀವಿತದ ಪ್ರತಿಯೊಂದು ಕ್ಷೇತ್ರವನ್ನು ದೇವರಿಗೆ ಒಪ್ಪಿಸಿಕೊಡದಿದ್ದರೆ, ಸೈತಾನನು ನಿಮಗೆ ಭಯಪಡುವುದಿಲ್ಲ.

    ನಿಮ್ಮ ಜೀವಿತವನ್ನು ಸಂಪೂರ್ಣವಾಗಿ ಕ್ರಿಸ್ತನಿಗೆ ಕೊಡಿರಿ. ಆ ಮೇಲೆ ಇನ್ನು ಮುಂದೆ ಆತನಿಗಾಗಿ ಮಾತ್ರ ಸಂಪೂರ್ಣವಾಗಿ ಜೀವಿಸುತ್ತೇನೆಂದು ಈಗಲೇ ನಿಶ್ಚಯಿಸಿಕೊಳ್ಳಿರಿ.

    ನೀವು ಈಗ ತಾನೇ ಕೇಳಿದ ದೇವರ ವಾಕ್ಯದ ಬೋಧನೆಯನ್ನು ನೀವು ಹಿಂಬಾಲಿಸಿದ್ದರಿಂದ, ಈಗಿನಿಂದ ಇಪ್ಪತ್ತು ವರ್ಷಗಳಿಗೆ ನೀವು ಕೃತಜ್ಞತೆಯುಳ್ಳವರಾಗಿರುತ್ತೀರೆಂದು ನಾನು ಭರವಸೆಕೊಡುತ್ತೇನೆ. ಒಂದು ದಿನ ನೀವು ಕ್ರಿಸ್ತನ ನ್ಯಾಯಾಸನದ ಮುಂದೆ ನಿಂತಾಗ, ನಿಮ್ಮ ಜೀವಿತದ ಬಗ್ಗೆ ಕರ್ತನಿಗೆ ಲೆಕ್ಕ ಒಪ್ಪಿಸಲು ನಿಮ್ಮ ಸರದಿ ಬಂದಾಗ ನೀವು ಇನ್ನೂ ಬಹಳ ಕೃತಜ್ಞತೆಯುಳ್ಳವರಾಗಿರುತ್ತೀರಿ.

    ನಿಮ್ಮ ಜೀವಿತದ ಅಂತ್ಯಕ್ಕೆ ನೀವು ಬಂದಾಗ, ನಿಮಗೆ ಯಾವ ದುಃಖವು ಇರದಂಥ ಜೀವಿತ ಜೀವಿಸಲು ಕರ್ತನು ನಿಮಗೆ ಸಹಾಯ ಮಾಡಲಿ.

    ಆಮೆನ್

    ಕೇಳುವುದಕ್ಕೆ ಕಿವಿಯುಳ್ಳವನು ಕೇಳಲಿ.