ಸಮೂಹ, ಸಂಘ ಮತ್ತು ಸಭೆ

    Download Formats:

ಅಧ್ಯಾಯ 1
ಹೊಸ ದ್ರಾಕ್ಷಾರಸಕ್ಕೆ ಹೊಸ ಬುದ್ದಲಿ ಅವಶ್ಯವಿದೆ

ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಯಲ್ಲಿ ಹಾಕಬೇಕು"(ಲೂಕ 5:38).

ಈ ಚಿಕ್ಕ ಪುಸ್ತಕದ ಮೂಲಕ ಹಿಂದಿನ ಹಲವಾರು ವರ್ಷಗಳಲ್ಲಿ ನನ್ನ ಜೀವಿತದಲ್ಲಿ ಕರ್ತನು ಮಾಡುತ್ತಿರುವ ಕಾರ್ಯದ ಬಗ್ಗೆ ನಾನು ಹಂಚಿಕೊಳ್ಳಲು ಇಚ್ಛಿಸುತ್ತೇನೆ. ನನಗೆ ಈ ಜೀವನ ಶೈಲಿಯು ಬಹಳ ಅಮೂಲ್ಯವಾಗಿ ಪರಿಣಮಿಸಿದೆ, ಏಕೆಂದರೆ ನಿತ್ಯತ್ವದಲ್ಲಿ ಬೆಲೆ ಬಾಳುವ ಪ್ರತಿಯೊಂದು ಸಂಗತಿಯ ಹಾಗೆ, ನನ್ನ ಈ ಅನುಭವವೂ ತ್ಯಾಗದ ಮೂಲಕ ಉಂಟಾಗಿದೆ.

ನಾವು ಕ್ರಿಸ್ತನ ಬೋಧನೆ ಮತ್ತು ಜೀವನವನ್ನು ತಿಳಿಯಲು ಯಥಾರ್ಥವಾಗಿ ಪ್ರಯತ್ನ ಮಾಡಿದಾಗ, ಇದು ನಮ್ಮನ್ನು ಒಂದು ಶಿಲುಬೆಯ ಬಳಿ ನಡೆಸುತ್ತದೆ - ಈ ಶಿಲುಬೆಯು ನಮಗೆ ಬಹು ಅಮೂಲ್ಯವಾದ ಕೆಲವು ಸಂಗತಿಗಳನ್ನು ನಾವು ಕೈಬಿಡುವಂತೆಯೂ ಮತ್ತು ಹಲವಾರು ಕ್ಷೇತ್ರಗಳಲ್ಲಿ ತ್ಯಾಗ ಮಾಡುವಂತೆಯೂ ನಮ್ಮನ್ನು ನಡೆಸುವಂಥದ್ದಾಗಿದೆ. ನಾವು ಹಾಗೆ ಮಾಡಿದಾಗ, ಕರ್ತನು ನಮಗೆ ಏನನ್ನು ಕಲಿಸಲು ಇಚ್ಛಿಸುತ್ತಾನೋ, ಆ ಕಾರ್ಯಗಳು ನಮ್ಮ ಜೀವನದಲ್ಲಿ ಕೈಗೂಡುತ್ತವೆ - ಮತ್ತು ನಮ್ಮ ಜೀವಿತಕ್ಕಾಗಿ ದೇವರು ಸಂಕಲ್ಪಿಸಿರುವ ಸಂಪೂರ್ಣ ಯೋಜನೆಯನ್ನು ನಾವು ಪೂರೈಸುತ್ತೇವೆ.

ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುವುದನ್ನು ದೇವರು ನನಗೆ ಅತ್ಯಮೂಲ್ಯ ಕ್ಷೇತ್ರವನ್ನಾಗಿ ಮಾಡಿದ್ದಾರೆ. ಆದರೆ, ಇದಕ್ಕಿರುವ ಹಾದಿಯು ಬಹಳ, ಬಹಳ ಇಕ್ಕಟ್ಟಾದದ್ದು.

ಒಂದೇ ಒಂದು ಸಂಗತಿ ಅವಶ್ಯವಾಗಿದೆ

ಹೊಸ ದ್ರಾಕ್ಷಾರಸವನ್ನು ಹೊಸ ಬುದ್ದಲಿಗಳಲ್ಲೇ ಹಾಕಿಡುವಂತೆ ಯೇಸು ಹೇಳಿದರು. ಆ ಹೊಸ ದ್ರಾಕ್ಷಾರಸವೇನೆಂದರೆ ಆತನ ಜೀವವಾಗಿದ್ದು, ಆತನು ನಮಗೆ ಪವಿತ್ರಾತ್ಮನ ಮೂಲಕವಾಗಿ ಆ ಜೀವವನ್ನು ಕೊಡಲು ಬಯಸುತ್ತಾನೆ. ಹೊಸ ಬುದ್ದಲಿಯು ಆತನು ನಮ್ಮ ಮೂಲಕ ಕಟ್ಟಲು ಬಯಸುವ ಹೊಸ ಒಡಂಬಡಿಕೆಯ ಸಭೆಯಾಗಿದ್ದು, ಆತನ ಜೀವವು ಇದರಲ್ಲೇ ತೋರಿಬರಬೇಕಾಗಿದೆ.

(ಬುದ್ದಲಿ - ದ್ರಾಕ್ಷಾರಸವನ್ನು ಹಾಕಿಡುವ ಚೀಲ)

ನಾವು ಯಥಾರ್ಥವಾಗಿ ಈ ಹೊಸ ಒಡಂಬಡಿಕೆಯ ಜೀವಿತವನ್ನು ಜೀವಿಸಲು ಬಯಸುವುದಾದರೆ, ನಮ್ಮ ಜೀವನದಲ್ಲಿ ಸ್ವಾರ್ಥದ ಅನೇಕ ಪದರಗಳನ್ನು (ಈರುಳ್ಳಿಯ ಪದರಗಳಂತೆ) ಸುಲಿಯಬೇಕಾದ ಅವಶ್ಯಕತೆಯನ್ನು ನಾವು ಕಂಡುಕೊಳ್ಳುತ್ತೇವೆ, ಮತ್ತು ದೇವರು ಅವುಗಳನ್ನು ನಮಗೆ ಸ್ವಲ್ಪ ಸ್ವಲ್ಪವಾಗಿ ಗೋಚರ ಪಡಿಸುತ್ತಾನೆ. ನಾವು ಹೊಸ ಒಡಂಬಡಿಕೆಯ ಒಂದು ಸಭೆಯನ್ನು ಕಟ್ಟಲು ಪ್ರಯತ್ನಿಸುವಾಗಲೂ, ಇದೇ ತರಹದ ಅನುಭವವನ್ನು ಕಾಣುತ್ತೇವೆ.

ಹಳೆ ಬುದ್ದಲಿಯು , ದೇವರ ವಾಕ್ಯದ ಮೇಲೆ ಕಟ್ಟಲ್ಪಡದೆ, ಮಾನವ ಸಂಪ್ರದಾಯಗಳ ಮೇಲೆ ಕಟ್ಟಲ್ಪಟ್ಟಂತಹ ಒಂದು ಸಭೆಯಾಗಿದೆ. ಇದು ಕೂಡ ಅನೇಕ ಪದರಗಳನ್ನು ಹೊಂದಿದೆ. ಕರ್ತನು ನಮಗೆ ಆ ಪದರಗಳನ್ನು ಒಂದೊಂದಾಗಿ ತೋರಿಸಿದಂತೆ, ನಾವು ಅವುಗಳನ್ನು ಸುಲಿದು ಹಾಕಬೇಕು. ದುರಾದೃಷ್ಟವಶಾತ್‍, ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟಲು ಬಯಸುವ ಅನೇಕ ಕ್ರೈಳಸ್ತರು ಹಳೇ ಬುದ್ದಲಿಯ ಅನೇಕ ಪದರಗಳನ್ನು ಇನ್ನೂ ಸುಲಿಯಬೇಕಾದ ಅವಶ್ಯವಿದ್ದರೂ, ಅದನ್ನು ಮಧ್ಯದಲ್ಲಿಯೇ ನಿಲ್ಲಿಸಿಬಿಡುತ್ತಾರೆ. ಅವರು ತಮಗೆ ಸ್ಪಷ್ಟವಾಗಿ ತೋರುವ, ಮತ್ತು ತಾವು ಬಾಲ್ಯದಿಂದ ನೋಡಿರುವ ಕೆಲವು ಮಾನವ ಆಚರಣೆಗಳು ಹಾಗೂ ಧಾರ್ಮಿಕ ಪಂಗಡಗಳ ಆಚರಣೆಗಳನ್ನು ಮಾತ್ರ ಕಳಚಿಹಾಕಿದ್ದಾರೆ. ಆದರೆ ನಾವು ಆ ಹಳೆಯ ಬುದ್ದಲಿಯನ್ನು ಸಂಪೂರ್ಣವಾಗಿ ಬಿಟ್ಟು ಬಿಡಬೇಕೆಂದು ಕರ್ತನು ಬಯಸುತ್ತಾನೆ. ಆತನು ತನ್ನ ಹೊಸ ದ್ರಾಕ್ಷಾರಸವು ಸಂಪೂರ್ಣವಾಗಿ ಹೊಸದಾದ ಒಂದು ಬುದ್ದಲಿಯಲ್ಲೇ ಇರಬೇಕೆಂದು ಬಯಸುತ್ತಾನೆ.

ನಾನು ಹಲವಾರು ವರ್ಷಗಳ ವರೆಗೆ, ಹೊಸ ದ್ರಾಕ್ಷಾರಸ ಮತ್ತು ಹೊಸ ಬುದ್ದಲಿಯ ಬಗ್ಗೆ ಬೋಧನೆಯನ್ನು ಕೇಳಿ ತಿಳಿದಿದ್ದೆ ಮತ್ತು - ತಾತ್ವಿಕವಾಗಿ - ಹೇಗೆ ಕ್ರಿಸ್ತನ ದೇಹವಾದ ಸಭೆಯನ್ನು ಕಟ್ಟುವುದು ಎಂಬುದರ ಬಗ್ಗೆಯೂ ತಿಳುವಳಿಕೆಯನ್ನು ಹೊಂದಿದ್ದೆ. ಆದರೆ ಇವೆಲ್ಲವೂ ಕೇವಲ ತಲೆಯಲ್ಲಿ ತುಂಬಲ್ಪಟ್ಟ ಜ್ಞಾನವಾಗಿತ್ತಷ್ಟೇ; ನಾನು ಈ ವಿಷಯದ ಬಗ್ಗೆ ಇತರರಿಗಿಂತ ಹೆಚ್ಚಾಗಿ ಅನೇಕ ಪ್ರಸಂಗಗಳನ್ನು ಕೇಳಿ ತಿಳಿದಿದ್ದೆ, ಅಷ್ಟೇ. ನಾನು ಬೆಳೆಯುತ್ತಿದ್ದಾಗ, ಪ್ರತಿ ಭಾನುವಾರವೂ ಹೊಸ ಒಡಂಬಡಿಕೆಯ ಬಗ್ಗೆ ನನ್ನ ತಂದೆಯವರು ಕೊಡುತ್ತಿದ್ದ ಪ್ರಸಂಗಗಳನ್ನು ಕೇಳಿಸಿಕೊಂಡೆ. ಅದಲ್ಲದೆ ಸೋಮವಾರದಿಂದ ಶನಿವಾರದ ವರೆಗೆ, ಮನೆಯಲ್ಲೂ ನಾನು ಈ ವಿಷಯದ ಬಗ್ಗೆ ನನ್ನ ತಂದೆಯಿಂದ ಕೇಳಿಸಿಕೊಂಡೆ. ಆದಾಗ್ಯೂ ಇವೆಲ್ಲವೂ ನನ್ನ ತಲೆಯಲ್ಲಿ ಮಾತ್ರ ಇದ್ದವು. ಆ ಸತ್ಯಗಳು ನನ್ನ ತಲೆಯಿಂದ ಹೃದಯಕ್ಕೆ ಇಳಿಯಲು ಅನೇಕ ವರ್ಷಗಳೇ ಬೇಕಾದವು. ಅದು ಯಾವಾಗ ನಡೆಯಿತು ಎಂದರೆ, ಕರ್ತನ ಸೇವೆ ಮಾಡಲು ನನಗಿರುವ ಮಾರ್ಗ ಇದೊಂದೇ ಎಂಬ ಸತ್ಯವನ್ನು ಕೊನೆಗೆ ನಾನು ಅರಿತುಕೊಂಡಾಗ.

ಈಗ ಯೇಸುವು ನನ್ನ ಜೀವನದಲ್ಲಿ ಇರುವ ಒಬ್ಬನೇ ವ್ಯಕ್ತಿಯಾಗಿದ್ದಾನೆ. ಕರ್ತನೊಂದಿಗೆ ನನಗಿರುವ ಸಂಬಂಧದ ಮೂಲಕ ಇತರ ಎಲ್ಲಾ ಸಂಬಂಧಗಳೂ ಬರುತ್ತವೆ. ಹಾಗಾಗಿ ಈಗ, ಸಭೆಯನ್ನು ’ಕ್ರಿಸ್ತನ ದೇಹ’ವಾಗಿ ಕಟ್ಟುವುದೇ ನಾನು ಕರ್ತನ ಸೇವೆಯಲ್ಲಿ ಮಾಡುವ ಏಕೈಕ ಕಾರ್ಯವಾಗಿದೆ.

ಕರ್ತನಾದ ಯೇಸುವು ತನ್ನ ಇಹಲೋಕ ಜೀವಿತದ ಪ್ರತಿಯೊಂದು ದಿನವೂ ಶಿಲುಬೆಯ ಮಾರ್ಗವನ್ನು ಏಕೆ ಆರಿಸಿಕೊಂಡರು? ಅದು ಏಕೆಂದರೆ, " ತನ್ನ ಮುಂದೆ ಇಟ್ಟಿದ್ದ ಸಂತೋಷಕ್ಕೋಸ್ಕರ," ಎಂಬುದಾಗಿ ಸತ್ಯವೇದ ತಿಳಿಸುತ್ತದೆ (ಇಬ್ರಿಯ 12:2).

ಆತನ ಮುಂದೆ ಯಾವ ಸಂತೋಷ ಇಡಲ್ಪಟ್ಟಿತ್ತು?

ಯೋಹಾನ 14 ರಲ್ಲಿ , ಯೇಸುವು ಶಿಲುಬೆಗೆ ಹೋಗುವ ಮುಂಚೆ ತನ್ನ ಶಿಷ್ಯರಿಗೆ ಹೇಳಿದ ಕೊನೆಯ ಮಾತುಗಳನ್ನು ನಾವು ಓದುತ್ತೇವೆ. ಯೇಸುವಿನ ಕೊನೆಯ ಊಟದ ಸಂದರ್ಭದಲ್ಲಿ, ಆತನ ಈ ಕೊನೆಯ ಮಾತುಗಳನ್ನು ನಮಗೆ ತಿಳಿಸಲಿಕ್ಕಾಗಿ ಅಪೊಸ್ತಲನಾದ ಯೋಹಾನನು ಐದು ಅಧ್ಯಾಯಗಳನ್ನು ತೆಗೆದುಕೊಂಡದ್ದಕ್ಕಾಗಿ ನಾನು ಅವನನ್ನು ಬಹಳವಾಗಿ ಪ್ರಶಂಸಿಸುತ್ತೇನೆ. ಅಲ್ಲಿ ಯೇಸು ಹೇಳಿದ್ದು, " ಏಳಿರಿ, ಇಲ್ಲಿಂದ ಹೋಗೋಣ" (ಯೋಹಾನ 14:31). ಆತನು ತನ್ನ ಶಿಲುಬೆಗೆ ಏರಿಸಲ್ಪಡಲು ಹೋಗುತ್ತಿದ್ದನು. ಆದರೆ ಹೀಗೆ ಹೇಳುವದಕ್ಕೆ ಮೊದಲು ಆತನು, "ಇದರಿಂದ, ನಾನು ನನ್ನ ತಂದೆಯನ್ನು ಪ್ರೀತಿಸುತ್ತೇನೆಂದೂ, ಆತನು ನನಗೆ ಆಜ್ಞಾಪಿಸಿದ್ದನ್ನೇ ನಾನು ಮಾಡುವೆನೆಂದೂ ಲೋಕವು ತಿಳಿಯುವುದು ," ಎಂದನು. (ಯೋಹಾನ 14:31). ಅದೇ ಆತನ ಸಂತೋಷವಾಗಿತ್ತು - ಆತನ ಉಲ್ಲಾಸಕ್ಕೆ ಕಾರಣವೇನೆಂದರೆ, ತನ್ನ ತಂದೆಗೆ ಯಾವಾಗಲೂ ಅಧೀನನಾಗಿದ್ದು, ಅದರ ನಿಮಿತ್ತವಾಗಿ ತಾನು ನಿತ್ಯತ್ವದಿಂದಲೂ ತನ್ನ ತಂದೆಯೊಂದಿಗೆ ಹೊಂದಿದ್ದ ಅನ್ಯೋನ್ಯತೆಯಲ್ಲಿ ಮುಂದುವರಿಯುವುದು. ಹೀಗೆ ಯೇಸುವು ಶಿಲುಬೆಯನ್ನು ಏರಿದ್ದು, ಮೊಟ್ಟ ಮೊದಲನೆಯದಾಗಿ ತನ್ನ ತಂದೆಗಾಗಿ ತನ್ನ ಪ್ರೀತಿಯ ನಿಮಿತ್ತವಾಗಿ ಮತ್ತು ತನ್ನ ತಂದೆಯ ಆಜ್ಞೆಗೆ ವಿಧೇಯನಾಗುವ ಉದ್ದೇಶದಿಂದ - ಅದರ ನಂತರ ನಮ್ಮ ಮೇಲಿನ ಪ್ರೀತಿಯ ನಿಮಿತ್ತವಾಗಿಯೂ ಸಹ.

ನಾನು ಇಲ್ಲಿ ಈ ಅಂಶಕ್ಕೆ ಇಷ್ಟು ಹೆಚ್ಚು ಒತ್ತು ಕೊಟ್ಟು ಹೇಳುತ್ತಿರುವದು ಏಕೆಂದರೆ, ಆತನ ಸಭೆಯನ್ನು ಕಟ್ಟುವದಕ್ಕೂ ಸಹ ಇದೊಂದೇ ಮಾರ್ಗವಾಗಿದೆ. ನಾವು ಪಾಪದ ಮೇಲೆ ಜಯ ಹೊಂದಬೇಕು ಮತ್ತು ಕರ್ತನ ಕಾರ್ಯವನ್ನು ಮಾಡಬೇಕೆಂಬ ನಮ್ಮ ಆಸೆಗಳಿಗೆ ಮೂಲಕಾರಣ, ಮೊಟ್ಟ ಮೊದಲನೆಯದಾಗಿ, ನಮಗೆ ತಂದೆಯ ಮೇಲಿರುವ ಪ್ರೀತಿಯ ನಿಮಿತ್ತವಾಗಿ ಮತ್ತು ಈ ಪ್ರೀತಿಯ ಪರಿಣಾಮವಾಗಿ ಆತನ ಆಜ್ಞೆಗಳನ್ನು ಕೈಕೊಳ್ಳುವುದರಿಂದ - ಹಾಗೂ ಎರಡನೆಯದಾಗಿ, ನಮಗೆ ಜನರ ಮೇಲೆ ಇರುವ ಪ್ರೀತಿಯ ನಿಮಿತ್ತವಾಗಿ. ನಾವು ಸಭೆಯನ್ನು ಕಟ್ಟಬೇಕಾದರೆ, ನಮಗೆ ಜನರ ಮೇಲೆ ಅನುಕಂಪ ಇರಬೇಕು. ಆದರೆ ಆ ಅನುಕಂಪಕ್ಕಿಂತ ಮೊದಲು, ನಮ್ಮಲ್ಲಿ ನಮ್ಮ ಪರಲೋಕದ ತಂದೆಯ ಮೇಲೆ ಪ್ರೀತಿಯಿರಬೇಕು - ಎಂಥಾ ಹೃದಯದಾಳದ ಪ್ರೀತಿಯೆಂದರೆ, ಆತನ ಆಜ್ಞೆಗಳಿಗೆ ವಿಧೇಯನಾಗಲು ಬಯಸುವಂಥ ಪ್ರೀತಿ.

ಇವು ಹೊಸ ಒಡಂಬಡಿಕೆಯ ಒಂದು ಸಭೆಯನ್ನು ಕಟ್ಟಲು ಅವಶ್ಯವಿರುವ ಅತಿ ಮಹತ್ವದ ಎರಡು ಅಂಶಗಳು:ತಂದೆಗಾಗಿ ನಮಗಿರುವ ಪ್ರೀತಿ ಮತ್ತು ಇತರರಿಗಾಗಿ ನಮಗಿರುವ ಪ್ರೀತಿ. ನಾವು ಇವೆರಡನ್ನು ಶಿಲುಬೆಯ ಎರಡು ಮರದ ಹಲಗೆಗಳೆಂದು ಸೂಚಿಸಬಹುದು - ನೀಟಾದ (ಲಂಬನೆಯ) ಹಲಗೆಯು ಮತ್ತು ಸಮತಲವಾಗಿರುವ (ಅಡ್ಡವಾದ) ಹಲಗೆಯು. ಇವೆರಡು ಹಲಗೆಯ ತುಂಡುಗಳಲ್ಲಿ ಕೇವಲ ಒಂದು ತುಂಡಿನಿಂದ - ನೀಟಾದದ್ದು ಅಥವಾ ಅಡ್ಡವಾದದ್ದು ಮಾತ್ರ - ನೀವು ಶಿಲುಬೆಯನ್ನು ಪಡೆಯಲು ಸಾಧ್ಯವಿಲ್ಲ.

ಹೀಗೆ ಶಿಲುಬೆಯಲ್ಲಿ, ಎರಡು ರೀತಿಯ ಸಂಬಂಧಗಳ ಒಂದು ಸುಂದರ ಚಿತ್ರಣವನ್ನು ನಾವು ನೋಡಬಹುದು. ಅದು ನಮ್ಮ ಜೀವಿತದಲ್ಲಿ ಪ್ರತಿದಿನವೂ ನಾವು ಶಿಲುಬೆಯನ್ನು ಹೊತ್ತುಕೊಂಡು ಹೇಗೆ ಸಾಗಬೇಕು ಎಂಬುದನ್ನು ತೋರಿಸಿಕೊಡುತ್ತದೆ.

ಮುಂಬರುವ ಅಧ್ಯಾಯಗಳಲ್ಲಿ, ನಮ್ಮ ಜೀವಿತದಲ್ಲಿ ಶಿಲುಬೆಯ ಈ ಎರಡೂ ತುಂಡುಗಳನ್ನು ಹೊಂದಿರುವುದು ಎಂದರೇನು ಎಂಬುದನ್ನು ಮತ್ತು ಇವೆರಡೂ ಒಂದುಗೂಡಿ ನಾವು ಹೊಸ ಒಡಂಬಡಿಕೆಯ ಸಭೆಗಳನ್ನು ಕಟ್ಟಲು ಹೇಗೆ ನೆರವಾಗುತ್ತವೆ ಎಂಬುದನ್ನು ತೋರಿಸಲು ನಾನು ಬಯಸುತ್ತೇನೆ.

ಅಧ್ಯಾಯ 2
ಶಿಲುಬೆಯ ಲಂಬವಾಗಿರುವ ಹಲಗೆ

ಶಿಲುಬೆಯ ಲಂಬವಾದ (ನೇರವಾದ, 'vertical') ಹಲಗೆಯು ನಮಗೆ ನಮ್ಮ ತಂದೆಯಾದ ದೇವರೊಂದಿಗೆ ಇರುವ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ - ಮತ್ತು ಇದು ಯಾವಾಗಲೂ ಮೊದಲು ಬರಬೇಕು. ಜನರು ಯೇಸುವಿನ ಮರಣಕ್ಕಾಗಿ ಶಿಲುಬೆಯನ್ನು ನಿರ್ಮಿಸಿದಾಗ, ಲಂಬನೆಯ ಹಲಗೆಯೊಡನೆ ಪ್ರಾರಂಭಿಸಿದರು. ಮತ್ತು ಈ ಹಲಗೆಯ ಅಳತೆ ಅಡ್ಡ ಹಲಗೆಯ ಅಳತೆಗಿಂತ ಎರಡರಷ್ಟು ಇರಬೇಕಾಗಿತ್ತು.

ಇದರ ಸಾಂಕೇತಿಕ ಅರ್ಥವೇನೆಂದರೆ, ನಮ್ಮ ಪರಲೋಕದ ತಂದೆಯೊಂದಿಗೆ ಇರುವ ನೇರ ಸಂಬಂಧವು ಬಹಳ ಪ್ರಾಮುಖ್ಯವಾದದ್ದು - ಅದು ಮೊದಲು ಬರಬೇಕು. ಇದರ ನಂತರ ಮಾತ್ರವೇ, ಇತರರೊಟ್ಟಿಗಿನ ಅಡ್ಡನೆಯ ಸಂಬಂಧ ಬರಬೇಕು.

ಯೇಸುವಿನ ಮಾದರಿಯನ್ನು ಅನುಸರಿಸುವುದು

ಯೇಸುವು ಶಿಲುಬೆಯನ್ನು ಹೊತ್ತುಕೊಂಡು ಕಲ್ವಾರಿ ಬೆಟ್ಟವನ್ನು ಏರುವದಕ್ಕೆ ಮೊದಲು, ತನ್ನ ಇಹಲೋಕ ಜೀವನದ ಉದ್ದಕ್ಕೂ, ಒಳಗಿನ ಒಂದು ಶಿಲುಬೆಯನ್ನು ಹೊತ್ತು ನಡೆದಿದ್ದರು. ಈ ಒಳಗಿನ ಶಿಲುಬೆಯನ್ನು ಅವರು ತನ್ನ ಇಹಲೋಕ ಜೀವಿತದ 12,000ಕ್ಕೂ ಹೆಚ್ಚು ದಿನಗಳ ಕಾಲ ಪ್ರತಿದಿನವೂ ಹೊರುತ್ತಾ ಸಾಗಿದರು. ಯೇಸುವು ನಮಗೆ ಹೀಗೆ ಹೇಳುತ್ತಾರೆ, "ನಿನಗೆ ನನ್ನ ಶಿಷ್ಯನಾಗಬೇಕೆಂಬ ಮನಸ್ಸಿದ್ದರೆ, ನೀನೂ ಸಹ ಪ್ರತಿನಿತ್ಯ ನಿನ್ನ ಶಿಲುಬೆಯನ್ನು ಹೊರಬೇಕು" (ಲೂಕ 9:23 - ಭಾವಾನುವಾದ). ಯೇಸು ತನ್ನ ಇಹಲೋಕದ ಜೀವನದ ಒಟ್ಟಾರೆ 12,000 ಕ್ಕೂ ಹೆಚ್ಚಿನ ದಿನಗಳನ್ನು ಈ ಮೂಲತತ್ವದ ಮೂಲಕ ಜೀವಿಸಿದರು: "ನನ್ನ ಜೀವನದ ನಿರ್ಧಾರಗಳು ಮೊದಲನೆಯದಾಗಿ ನಿಶ್ಚಿತಗೊಂಡಿರುವದು, ನನ್ನಲ್ಲಿ ನನ್ನ ತಂದೆಗಾಗಿ ಇರುವ ಪ್ರೀತಿಯ ಮೂಲಕ, ಮತ್ತು ಆತನ ಆಜ್ಞೆಗಳಿಗೆ ವಿಧೇಯನಾಗುವುದಕ್ಕಾಗಿ; ಇದರ ನಂತರ, ಇತರರಿಗಾಗಿ ನನ್ನ ಪ್ರೀತಿಯ ಮೂಲಕ ನಿಶ್ಚಿತಗೊಂಡಿವೆ."

ಕ್ರಿಸ್ತನ ಶಿಲುಬೆ

* ಯೋಹಾನ 14:31 ತಂದೆಗಾಗಿ ಇರುವಂತ ಪ್ರೀತಿಯು

ಇತರಿರಾಗಿ ಇರುವಂತ ಪ್ರೀತಿಯು

  • 1. ಮೊದಲು ತಂದೆಗಾಗಿ ತೋರುವಂತ ಪ್ರೀತಿಯ ಮೂಲಕ
  • 2. ನಂತರ ನಮಗಾಗಿ ಇರುವಂತ ಪ್ರೀತಿಯ ಮೂಲಕ
  • (ತಂದೆಯು ಇದನ್ನು ಆಜ್ಞಾಪಿಸಿದ್ದರಿಂದ)

    * ಲಂಬವಾದ ಹಲಗೆ ಮತ್ತು ಅಡ್ಡನೆಯ ಹಲಗೆಗಳ ಮೂಲಕ ಶಿಲುಬೆಯು ನಿರೂಪಿಸಲ್ಪಡುತ್ತದೆ

    ಇಂತಹ ಪ್ರೀತಿಯ ಮೂಲಕ ಯೇಸುವು 30 ವರ್ಷಗಳ ಕಾಲ ತನ್ನ ಮನೆಯಲ್ಲಿ ಇಹಲೋಕದ ಪೋಷಕರಿಗೆ ಅಧೀನರಾಗಿ ಇರಲು ಸಾಧ್ಯವಾಯಿತು. ಅಪರಿಪೂರ್ಣ ಯೋಸೇಫ ಮತ್ತು ಮರಿಯಳಿಗೆ ವಿಧೇಯನಾಗುವದಕ್ಕಾಗಿ, 30 ವರುಷಗಳ ಕಾಲ ಯೇಸುವು ಪ್ರತಿನಿತ್ಯ ಪ್ರತಿಯೊಂದು ವಿಷಯದಲ್ಲಿ ಅವಿಧೇಯನಾಗುವಂತೆಯೂ ಮತ್ತು ಕೆರಳುವಂತೆಯೂ ಕೆಣಕಿಸುವ ಎಷ್ಟೋ ಶೋಧನೆಗಳನ್ನು ಜಯಿಸಬೇಕಾಯಿತು. ಆದರೆ ಅದನ್ನು ಯೇಸು ಸಂತೋಷದಿಂದ ಮಾಡಿದನು - ಏಕೆಂದರೆ "ಆತನ ಮುಂದೆ ಇಟ್ಟಿದ್ದ ಸಂತೋಷಕ್ಕೊಸ್ಕರ" - ಅದು ಯಾವುದೆಂದರೆ, ತನ್ನ ಪರಲೋಕದ ತಂದೆಯು ಕೊಟ್ಟಂತಹ, "ನಿನ್ನ ತಂದೆತಾಯಿಗಳನ್ನು ಸನ್ಮಾನಿಸು," ಎಂಬ ಆಜ್ಞೆಗೆ ವಿಧೇಯನಾಗುವ ಮೂಲಕ, ತನ್ನ ಪರಲೋಕದ ತಂದೆಯೊಂದಿಗೆ ಅನ್ಯೋನ್ಯತೆಯ ಸಂತೋಷ.

    ಇಹಲೋಕ ಜೀವಿತದ ಅಂತ್ಯದವರೆಗೂ ಯೇಸುವಿನ ಈ ಶಿಲುಬೆಯನ್ನು ಹೊರುವಂತಹ ಮನೋಭಾವ ಮತ್ತು ತನ್ನ ತಂದೆಗೆ ಎಲ್ಲಾ ಕ್ಷೇತ್ರಗಳಲ್ಲಿ ವಿಧೇಯತೆ ಮುಂದುವರೆಯಿತು. ಯೇಸು ಕ್ರಿಸ್ತನೇ ಸ್ವತ: ಮೊದಲ ’ಕ್ರಿಸ್ತನ ದೇಹ’ವಾಗಿದ್ದಾನೆ - ಮತ್ತು 33 1/2 ವರ್ಷಗಳ ಕಾಲ ಯೇಸುವು ಪ್ರತಿನಿತ್ಯ ಶಿಲುಬೆಯನ್ನು ಹೊತ್ತು ಸಾಗಿದರು. ಇಂದು, ನಾವು ಆತನ ಆತ್ಮಿಕ ಶರೀರದ ಅಂಗಗಳು ಆಗಿದ್ದೇವೆ, ಹಾಗಾಗಿ ನಾವು ಸಹ ಅದನ್ನೇ ಮಾಡಬೇಕು. ಯೇಸು ಕ್ರಿಸ್ತನ ಸಭೆಯು ಶಿಷ್ಯಂದಿರ ಒಂದು ಸಭೆಯಾಗಿರಬೇಕು, ಕೇವಲ ಮಾನಸಾಂತರ ಹೊಂದಿದವರ ಸಭೆಯಲ್ಲ. ಯಾರು ಒಬ್ಬ ಶಿಷ್ಯನೆಂದರೆ, ತನ್ನ ಸ್ವಾರ್ಥ-ಜೀವಿತವನ್ನು ನಿರಾಕರಿಸಿ, ಪ್ರತಿನಿತ್ಯ ತನ್ನ ಶಿಲುಬೆಯನ್ನು ಹೊರುವಾತನು (ಲೂಕ 9:23). ಹಾಗಾಗಿ, ನಾವು ಹೊಸ ದ್ರಾಕ್ಷಾರಸವನ್ನು (ಯೇಸುವಿನ ಜೀವನ) ಹೊಸ ಬುದ್ದಲಿಯಲ್ಲಿ (ಹೊಸ ಒಡಂಬಡಿಕೆಯ ಸಭೆ) ಹೊಂದಬೇಕಾದರೆ, ನಾವು ನಮ್ಮನ್ನು ನಿರಾಕರಿಸುತ್ತಾ, ಪ್ರತಿನಿತ್ಯ ಶಿಲುಬೆಯನ್ನು ಹೊರುತ್ತಾ, ಯೇಸುವನ್ನು ಹಿಂಬಾಲಿಸಬೇಕು. ಹೀಗೆ ಮಾಡಿದ ಮೇಲೆ ನಾವು ಸಭೆಯನ್ನು ಕ್ರಿಸ್ತನ ದೇಹವನ್ನಾಗಿ ಕಟ್ಟಲು ಸಾಧ್ಯವಾಗುತ್ತದೆ.

    ಒಬ್ಬ ವಿಶ್ವಾಸಿಯ ರಹಸ್ಯ ಜೀವಿತ

    ಸಭೆಯನ್ನು ಕಟ್ಟುವದಕ್ಕೆ ನಮ್ಮ ಕರ್ತನೊಂದಿಗಿನ ನೇರ (ಲಂಬ, vertical) ಸಂಬಂಧವು ಅತಿ ಮುಖ್ಯವಾದದ್ದು. ಮತ್ತು ಕರ್ತನೊಟ್ಟಿಗಿನ ಈ ಸಂಬಂಧ ರಹಸ್ಯವಾಗಿ ನಮ್ಮ ಖಾಸಗಿ ಜೀವನದಲ್ಲಿ ಅಡಗಿರುತ್ತದೆ. ಸೈತಾನನು ಅನೇಕ ಕ್ರೈಸ್ತರು ಹೊರಗಡೆ ಕಾಣಿಸುವಂಥದ್ದೇ ದೇವಭಕ್ತಿಯಾಗಿದೆ, ಎಂದು ಯೋಚಿಸುವಂತೆ ವಂಚಿಸುತ್ತಾನೆ. ಆದರೆ ದೇವರ ಕಡೆಗಿನ ನಿಜವಾದ ಭಕ್ತಿ-ನಿಷ್ಠೆಯು ಸಂಪೂರ್ಣವಾಗಿ ಆಂತರಿಕವಾದದ್ದು - ಅದು ರಹಸ್ಯ ಸ್ಥಳದಲ್ಲಿ ಇರುತ್ತದೆ. ಅದು ನಮ್ಮ ರಹಸ್ಯ ಜೀವನಕ್ಕೆ ಸೇರಿದ್ದು.

    ಹೊಸ ಒಡಂಬಡಿಕೆಯು ಪ್ರಾಥಮಿಕವಾಗಿ, ಒಳಗಿನ ಮನೋಭಾವಗಳು ಮತ್ತು ಆಲೋಚನೆಗಳು ಹಾಗೂ ಉದ್ದೇಶಗಳಿಗೆ ಸಂಬಂಧಿಸಿದ್ದಾಗಿದೆ.

    ಪರ್ವತದ ಮೇಲಿನ ಪ್ರಸಂಗದಲ್ಲಿ, ಯೇಸುವು ಈ ರಹಸ್ಯ ಜೀವನದ ಬಗ್ಗೆ ಮಾತನಾಡಿದರು. ಹೊಸ ಒಡಂಬಡಿಕೆಯಲ್ಲಿ, ನಮಗಿರುವ ಸವಾಲು (ಹಳೆ ಒಡಂಬಡಿಕೆಯಲ್ಲಿ ಇದ್ದಂತೆ) ಕೇವಲ ವ್ಯಭಿಚಾರದಿಂದ ದೂರವಿರುವದು ಅಲ್ಲ. ಈಗ, ನಾವು ಪಾಪಭರಿತ ಲೈಂಗಿಕ ಆಲೋಚನೆಗಳನ್ನೂ ಸಹ ದ್ವೇಷಿಸಬೇಕು. ಹಳೆಯ ಒಡಂಬಡಿಕೆಯಲ್ಲಿ, ಎಷ್ಟು ಕೊಟ್ಟಿದ್ದೀರಿ, ಎಷ್ಟು ಪ್ರಾರ್ಥಿಸಿದ್ದೀರಿ ಹಾಗೂ ಎಷ್ಟು ಉಪವಾಸ ಮಾಡಿದ್ದೀರಿ ಎಂಬುದು ಮುಖ್ಯವಾದ ವಿಷಯವಾಗಿತ್ತು. ಆದರೆ ಯೇಸು ಬಂದು ತಿಳಿಸಿದ್ದು ಏನೆಂದರೆ, ಈಗ ನಾವು ಪ್ರಾರ್ಥನೆ, ದಾನಧರ್ಮ ಮತ್ತು ಉಪವಾಸಗಳನ್ನು ಮಾಡುವಾಗ ರಹಸ್ಯವಾಗಿ, ಯಾರಿಗೂ ಗೊತ್ತಾಗದ ಹಾಗೆ ಮಾಡಬೇಕು. ಇದು ಹೊಸ ಒಡಂಬಡಿಕೆಯ ಹೊಸ ದ್ರಾಕ್ಷಾರಸವಾಗಿದೆ. ನಮ್ಮೊಳಗಿನ ಕ್ರಿಸ್ತನ ಭಕ್ತಿಯನ್ನು ಗುಪ್ತವಾಗಿಡುವದರ ಪ್ರಾಮುಖ್ಯತೆಯನ್ನು ನಾವು ಅರ್ಥ ಮಾಡಿಕೊಳ್ಳದೇ ಹೋದರೆ, ನಾವು ಇನ್ನೂ ಸಹ ಹೊಸ ಒಡಂಬಡಿಕೆಯ ಮೂಲತತ್ವವನ್ನು ಅರ್ಥ ಮಾಡಿಕೊಂಡಿಲ್ಲ. ಕರ್ತನಿಗಿರುವ ನಮ್ಮ ನಿಷ್ಠೆ ಯಾವಾಗಲೂ ಗುಪ್ತವಾಗಿ ಇರಬೇಕು.

    ನಮ್ಮ ಜೀವನವು "ಕ್ರಿಸ್ತನೊಂದಿಗೆ ದೇವರಲ್ಲಿ ಮರೆಯಾಗಿ ಇರಬೇಕು" (ಕೊಲೊಸ್ಸೆ 3:3). ಇದೊಂದು ಅದ್ಭುತವಾದ ಜೀವನ ಮಾರ್ಗವಾಗಿದೆ. ನಮ್ಮ ಕ್ರಿಸ್ತನ ಭಕ್ತಿಯು ಇತರರಿಂದ ಹೆಚ್ಚು ಹೆಚ್ಚಾಗಿ ಮರೆಯಾದಷ್ಟು, ನಾವು ಕರ್ತನ ರಹಸ್ಯಗಳನ್ನು ಹೆಚ್ಚು ಹೆಚ್ಚಾಗಿ ಕಲಿಯುತ್ತೇವೆ. ನಾವು ನಮ್ಮ ಮದಲಿಂಗನೊಂದಿಗೆ ಯಾರಿಗೂ ತಿಳಿಯದಂತೆ ರಹಸ್ಯವಾದ ಐಕ್ಯತೆಯ ಸಮಯಗಳನ್ನು ಹೊಂದಿರಬೇಕು. ಒಂದು ಅತಿ ಉತ್ತಮ ಮದುವೆ ಯಾವುದೆಂದರೆ, ಗಂಡ ಮತ್ತು ಹೆಂಡತಿ ಏಕಾಂತದಲ್ಲಿ, ಜೊತೆಯಾಗಿ ಇರುವ ಆನಂದವನ್ನು ಕಲಿತುಕೊಳ್ಳುವುದು - ಅವರು ಜೊತೆಯಾಗಿ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಯಾರಿಗೂ ತಿಳಿಯದ ಹಾಗೆ. ಇಂತಹ ಒಬ್ಬ ಪತಿವ್ರತೆ ಮದಲಗಿತ್ತಿಯ ಆತ್ಮವನ್ನು ಹೊಂದಿರುವ ಜನರೊಂದಿಗೆ ಇಂದು ಯೇಸುವು ತನ್ನ ಸಭೆಯನ್ನು ಕಟ್ಟುತ್ತಿದ್ದಾನೆ.

    ಶಿಲುಬೆಯ ನೇರವಾದ ಹಲಗೆಯನ್ನು (ಅಂದರೆ, ನಮ್ಮಲ್ಲಿ ತಂದೆಗಾಗಿ ಇರುವಂತ ಪ್ರೀತಿ ಮತ್ತು ಕ್ರಿಸ್ತನಿಗಾಗಿ ನಿಷ್ಠೆಯುಳ್ಳ ಭಕ್ತಿಯನ್ನು) ಸ್ಥಿರವಾಗಿ ಸ್ಥಾಪಿಸಿದ ನಂತರ, ಅಡ್ಡ ಹಲಗೆಯನ್ನು (ಅಂದರೆ, ಇತರರೊಂದಿಗೆ ಪರಸ್ಪರ ಪ್ರೀತಿ) ಅದಕ್ಕೆ ಜೋಡಿಸಲು ಸಾಧ್ಯವಾಗುತ್ತದೆ. ಆಗ ಶಿಲುಬೆಯು ಪೂರ್ಣಗೊಳ್ಳುತ್ತದೆ - ನಾವು ಅದರ ಮೇಲೆ ಸಂತೋಷವಾಗಿ ನಮ್ಮನ್ನು ಒಪ್ಪಿಸಿಕೊಟ್ಟು, ಶಿಲುಬೆಗೆ ಏರಿಸಲ್ಪಡಬಹುದು!!

    ಅಧ್ಯಾಯ 3
    ಶಿಲುಬೆಯ ಅಡ್ಡನೆಯ ಹಲಗೆ

    ನೀವು ಮರದ ಒಂದು ಹಲಗೆಯನ್ನು ಗಾಳಿಯಲ್ಲಿ ಅಡ್ಡವಾಗಿ ('horizontal') ನೇತುಹಾಕಲು ಪ್ರಯತ್ನಿಸಿದರೆ, ಅದು ಕೆಳಗೆ ಬೀಳುತ್ತದೆ. ಆದರೆ ನೀವು ಅದನ್ನು ನೇರವಾಗಿ ನಿಲ್ಲಿಸಿರುವ ಒಂದು ಹಲಗೆಗೆ ಮೊಳೆ ಹೊಡೆದು ಜೋಡಿಸಿದರೆ, ಆಗ ಅದು ಸ್ಥಿರವಾಗಿ ನಿಲ್ಲುತ್ತದೆ - ಮತ್ತು ಅದು ಒಂದು ಶಿಲುಬೆಯಾಗುತ್ತದೆ. ಆದರೆ ನೆಟ್ಟಗೆ ನಿಲ್ಲಿಸಿದ ಒಂದು ಹಲಗೆ ಅಲ್ಲಿ ಇದ್ದಾಗ ಮಾತ್ರ ಹೀಗೆ ಮಾಡಲು ಸಾಧ್ಯವಾಗುತ್ತದೆ.

    ನಾವು ಕಟ್ಟುವ ಕ್ರೈಸ್ತ ಸಭೆಗಳು ಹೊಸ ಒಡಂಬಡಿಕೆಯ ಸಭೆಗಳಾಗಿರಬೇಕು. ಇಂತಹ ಸಭೆಗಳನ್ನು ಈ ಕೆಳಗಿನ ಮೂಲತತ್ವವನ್ನು ಅನುಸರಿಸಲು ಪಣತೊಟ್ಟವರು ಮಾತ್ರ ಕಟ್ಟಲು ಸಾಧ್ಯವಾಗುತ್ತದೆ: "ನಾನು ನನ್ನ ಅಪೇಕ್ಷೆಯ ಪ್ರಕಾರ ನಡೆಯಲು ಬಯಸುವದಿಲ್ಲ. ನನ್ನ ಪರಲೋಕದ ತಂದೆಯು ನಾನು ಏನು ಮಾಡಬೇಕೆಂದು ಬಯಸುತ್ತಾರೋ, ಅದನ್ನು ಮಾಡುವದೇ ನನ್ನ ಇಚ್ಛೆಯಾಗಿದೆ."

    ಆದರೆ ಹೆಚ್ಚಿನ ಕ್ರೈಸ್ತರಲ್ಲಿ ಈ ಮನೋಭಾವ ಇಲ್ಲದಿರುವದು ದುಃಖಕರ. ಸ್ವತಃ ನನ್ನ ಜೀವನವೂ ಹಿಂದೆ ಅದೇ ರೀತಿಯಾಗಿತ್ತು. ನಾನು ನನ್ನ ಇಷ್ಟದಂತೆ ನಡೆಯುತ್ತಿದ್ದೆ ಮತ್ತು ನನಗೆ ಬೇಕಾದುದನ್ನೇ ಮಾಡುತ್ತಿದ್ದೆ, ಅಷ್ಟಕ್ಕೂ ನಾನೊಬ್ಬ ವಿಶ್ವಾಸಿ ಎಂದು ಹೇಳಿಕೊಳ್ಳುತ್ತಿದ್ದೆ! ನನ್ನ ಸ್ವಂತ ದೃಷ್ಟಿಯಲ್ಲಿ "ಸಭೆ" ಹೇಗಿರಬೇಕೋ, ಅಂಥದ್ದೊಂದು ಸಭೆಯಲ್ಲಿ ಇರಲು ನಾನು ಬಯಸುತ್ತಿದ್ದೆ. ಎಲ್ಲಾ ರೀತಿಯಲ್ಲಿ ನನ್ನಂತೆಯೇ ಇರುವ ಜನರೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವದು ನನ್ನ ಗುರಿಯಾಗಿತ್ತು. ನನಗೆ ಇಷ್ಟವಾದ ಜನರೊಂದಿಗೆ ನಾನು ಸಮಯ ಕಳೆಯುತ್ತಿದ್ದೆ. ಒಬ್ಬ ಸಹೋದರನು ನನ್ನೊಂದಿಗೆ ಒರಟಾಗಿ ವರ್ತಿಸಿದರೆ, ನಾನು ಅವನಿಂದ ದೂರವಿರುತ್ತಿದ್ದೆ. ಇದು ಶಿಲುಬೆಯ ಮಾರ್ಗದ ನಡಿಗೆ ಆಗಿರಲಿಲ್ಲ. ನಾವು ಇಂತಹ ಮನೋಭಾವವನ್ನು ಇರಿಸಿಕೊಂಡು ಕ್ರಿಸ್ತನ ದೇಹವನ್ನು ಕಟ್ಟುವದು ಅಸಾಧ್ಯವಾದ ಮಾತು. ಶ್ರೇಷ್ಠವಾದ ಬೋಧನೆಯನ್ನು ಹೊಂದಿದಾಗಲೂ, ಶಿಲುಬೆಯ ಮಾರ್ಗವನ್ನು ಅನುಸರಿಸದೆ ಬೇರೊಂದು ದಾರಿಯಲ್ಲಿ ನಡೆಯಲು ಸಾಧ್ಯವಿದೆ.

    ಶಿಷ್ಯನ ಶಿಲುಬೆ

    * ಶಿಷ್ಯ = "ಶಿಲುಬೆಯನ್ನು ಹೊತ್ತುಕೊಂಡು ನಡೆಯುವಾತನು" (ಲೂಕ 9:23)

    * "ನಾನು ದೇವರಿಗೆ ಇಷ್ಟವಾದುದನ್ನು ಮಾಡುತ್ತೇನೆ, ನಾನು ಬಯಸುವಂಥದ್ದನ್ನಲ್ಲ"

    * ನೇರವಾದದ್ದು: ದೇವರು ರಹಸ್ಯವಾಗಿ ನೋಡುವ ನಮ್ಮ ಜೀವನ

    * ಅಡ್ಡವಾದದ್ದು: ಲೋಕವು ನೋಡುವ ನಮ್ಮ ಜೀವನ (ಯೋಹಾನ 13:35)

    ಕೇವಲ ಒಂದು ಹಲಗೆ ಮಾತ್ರ ಇದ್ದಾಗ, ಅದರಿಂದ ಒಂದು ಶಿಲುಬೆ ಸಿದ್ಧವಾಗುವುದಿಲ್ಲ!

    ಯೇಸುವಿನ ಒಬ್ಬ ನಿಜವಾದ ಶಿಷ್ಯನು ಯಾರು?

    ನಾವು ಯೇಸುವಿನ ಶಿಷ್ಯರಾಗಿದ್ದೇವೆ ಎನ್ನುವದರ ಪ್ರಮಾಣ ನಾವು ಒಬ್ಬರನ್ನೊಬ್ಬರು ಪ್ರೀತಿಸುವದೇ ಆಗಿದೆಯೆಂದು ನಾನು ಅನೇಕ ವರ್ಷಗಳ ವರೆಗೆ ಯೋಚಿಸುತ್ತಿದ್ದೆ, ಏಕೆಂದರೆ ಯೇಸುವು ಇದರ ಬಗ್ಗೆ ಹೀಗೆ ಹೇಳಿದ್ದಾರೆ, "ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು" (ಯೋಹಾನ 13:35). ನಾನು ಈ ವಾಕ್ಯದ ಅರ್ಥವನ್ನು ಈ ರೀತಿಯಾಗಿ ತಿಳಕೊಂಡಿದ್ದೆ, ನಾನು ಹೋಗುವ ಸಭೆಯ ಸಹೋದರ-ಸಹೋದರಿಯರನ್ನು ಪ್ರೀತಿಸುವುದು, ನಾನೊಬ್ಬ ಶಿಷ್ಯನು ಎಂದು ಸಾಬೀತು ಪಡಿಸುತ್ತದೆ ಎಂದು. ಆದರೆ ನೀವು ಈ ವಚನವನ್ನು ಗಮನಿಸಿ ನೋಡಿದಾಗ ತಿಳಿಯುವ ವಿಷಯವೆಂದರೆ, ನಾವು ಶಿಷ್ಯರಾಗಿದ್ದೇವೆಂದು ಇತರರಿಗೆ ವ್ಯಕ್ತ ಪಡಿಸುವ ಗುರುತು ಇದಾಗಿದೆ - ನಮ್ಮನ್ನು ಇತರರು (ಅನ್ಯ-ಮತಸ್ಥರು) ಯೇಸುವಿನ ಶಿಷ್ಯರೆಂದು ಹೇಗೆ ಗುರುತಿಸುತ್ತಾರೆಂದು ಇದು ತೋರಿಸುತ್ತದೆ. ಇದು ಶಿಲುಬೆಯ ಅಡ್ಡ ಹಲಗೆಯಾಗಿದೆ.

    ಆದರೆ ಇದನ್ನು ತಿಳಿಸುವದಕ್ಕೂ ಮೊದಲು, ಯೇಸುವು ಶಿಷ್ಯತ್ವದ ಷರತ್ತನ್ನು ಹೀಗೆ ವಿವರಿಸಿದ್ದರು - ನಾವು ನಮ್ಮನ್ನು ನಿರಾಕರಿಸುವದು ಮತ್ತು ನಮ್ಮ ಸ್ವ-ಚಿತ್ತವನ್ನು ಶಿಲುಬೆಗೆ ಏರಿಸುವದು (ಲೂಕ 9:23). ಯಾರಿಗೂ ಕಾಣಿಸದ ನಿಮ್ಮ ಜೀವನದ ಕ್ಷೇತ್ರಗಳಲ್ಲಿ - ನಿಮ್ಮ ಹೃದಯದಲ್ಲಿ, ನಿಮ್ಮ ಆಂತರಿಕ ಜೀವನದಲ್ಲಿ - ನೀವು ಶಿಷ್ಯರಾಗಿದ್ದೀರೆಂದು ದೇವರು ಮೊದಲು ಕಂಡುಕೊಳ್ಳಬೇಕು. ನೀನು ದಿನಾಲೂ ನಿನ್ನನ್ನು ನಿರಾಕರಿಸಿಕೊಳ್ಳುವದನ್ನು ದೇವರು ನೋಡಿ, ನೀನು "ಲೂಕ 9:23ರ ಕ್ರೈಸ್ತನು" ಎಂಬುದಾಗಿ ದೃಢೀಕರಿಸುತ್ತಾರೆ - ಮತ್ತು ಇಂಥವನು ಮಾತ್ರವೇ ನಿಜವಾದ ಕ್ರೈಸ್ತನಾಗಿದ್ದಾನೆ. "ಶಿಷ್ಯರಿಗೆ ಕ್ರೈಸ್ತರು ಎಂಬ ಹೆಸರು ಬಂತು " (ಅ. ಕೃ. 11:26).

    ನೀವು ಈ ಹಂತಕ್ಕೆ ತಲುಪಿದಾಗ, ನಿಮ್ಮ ಸುತ್ತಮುತ್ತಲಿನ ಪ್ರಪಂಚಕ್ಕೆ ನೀವು ಯೇಸುವಿನ ಶಿಷ್ಯರೆಂಬ ರುಜುವಾತು, ನೀವು ಯೇಸುವಿನ ಇತರ ಶಿಷ್ಯರನ್ನು ಪ್ರೀತಿಸುವದರ ಮೂಲಕ ಸಿಗುತ್ತದೆ.

    ಆದರೆ ಮತ್ತೊಮ್ಮೆ ಗಮನಿಸಿರಿ, ಮೊದಲು ಲಂಬವಾದ ಹಲಗೆ ನೆಲೆಗೊಳ್ಳಬೇಕು - ನಿಮ್ಮಲ್ಲಿ ದೇವರಿಗಾಗಿ ಇರುವ ಪ್ರೀತಿಯ ಬಗ್ಗೆ ದೇವರು ಸಾಕ್ಷಿ ನುಡಿಯಲು ಸಾಧ್ಯವಾಗಬೇಕು. ಹಾಗಾಗಿ, ನಿಮ್ಮ ಸ್ಥಳೀಯ ಸಭೆಯ ಇತರರನ್ನು ಪ್ರೀತಿಸುವ ಮೂಲಕ ನೀವು ಯೇಸುವಿನ ಒಬ್ಬ ಶಿಷ್ಯರಾಗುತ್ತೀರಿ ಎಂಬ ತಪ್ಪು ತಿಳುವಳಿಕೆಯಿಂದ ನಿಮ್ಮನ್ನೇ ವಂಚಿಸಿಕೊಳ್ಳಬೇಡಿ! ಇತರರಿಗಾಗಿ ನಿಮ್ಮಲ್ಲಿರುವ ಮಾನವೀಯ ಪ್ರೇಮವು ನೀವೊಬ್ಬ ಶಿಷ್ಯರೆಂಬ ತಪ್ಪು ಭಾವನೆಯನ್ನು ನಿಮಗೆ ನೀಡಬಹುದು. ಭಾನುವಾರದಂದು ನೀವು ಇತರ ವಿಶ್ವಾಸಿಗಳೊಂದಿಗೆ ಇರಲು ಇಷ್ಟಪಡುವಿರಾದರೆ, ಅದು ನೀವು ಒಬ್ಬ ಶಿಷ್ಯರಾಗಿದ್ದೀರೆಂದು ಸಾಬೀತು ಪಡಿಸುವದಿಲ್ಲ. ನೀವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರಗಳಲ್ಲಿ ನಿಮ್ಮನ್ನು ನಿರಾಕರಿಸುವದರ ಮೂಲಕ ಮತ್ತು ಯೇಸುವನ್ನು ತೀವ್ರವಾಗಿ ಪ್ರೀತಿಸುವದರ ಮೂಲಕ, ನೀವೊಬ್ಬ ಶಿಷ್ಯರೆನ್ನುವದನ್ನು ಸಾಬೀತು ಪಡಿಸುತ್ತೀರಿ. ಬೇರೆ ಮಾತುಗಳಲ್ಲಿ ಹೇಳುವದಾದರೆ, ದಿನದಿನವೂ ನೀವು ಕರ್ತನ ಮುಂದೆ ಜೀವಿಸುತ್ತೀರಿ.

    ಯೇಸುವಿನ ಒಬ್ಬ ನಿಜವಾದ ಶಿಷ್ಯನಿಗೆ, ವಾರದ ಎಲ್ಲಾ ದಿನಗಳೂ ಸ್ವಲ್ಪವೂ ವ್ಯತ್ಯಾಸವಿಲ್ಲದೆ ಒಂದೇ ರೀತಿ ಇರುತ್ತವೆ, ಏಕೆಂದರೆ ಆತನು ಪ್ರಾಥಮಿಕವಾಗಿ ಬಯಸುವದು ತನ್ನ ಮದಲಿಂಗನೊಂದಿಗೆ ಐಕ್ಯತೆಯನ್ನು. ಆತನಿಗೆ ಇತರ ಶಿಷ್ಯರೊಡನೆ ಇರುವ ಅನ್ಯೋನ್ಯತೆಗೆ ಮೂಲ ಕಾರಣ, ಆತನು ತನ್ನ ಕರ್ತನೊಂದಿಗೆ ಹೊಂದಿರುವ ಐಕ್ಯತೆ ಆಗಿರುತ್ತದೆ. ಸಭೆಗೆ ಯಾರು ಹೊಸದಾಗಿ ಸೇರಿದ್ದಾರೆ ಅಥವಾ ಯಾರು ಅದನ್ನು ಬಿಟ್ಟು ಹೋಗಿದ್ದಾರೆ ಎನ್ನುವದು ಇಂತಹ ಒಬ್ಬ ಶಿಷ್ಯನ ಮೇಲೆ ಯಾವ ಪರಿಣಾಮವನ್ನೂ ಬೀರುವದಿಲ್ಲ. ಜೀವನದಲ್ಲಿ ಯೇಸುವೊಬ್ಬನೇ ಪ್ರಾಮುಖ್ಯನು ಎಂದು ನಿಶ್ಚಯಿಸಿರುವ ಶಿಷ್ಯರ ಮೂಲಕ ಮಾತ್ರವೇ ನಿಜವಾದ ಸಭೆಯು ಕಟ್ಟಲ್ಪಡುತ್ತದೆ.

    ನಾನು ಹಿಂದೆ ತಿಳಿಸಿದಂತೆ, ಒಂದು ಹಲಗೆಯಿಂದ - ಕೇವಲ ಅಡ್ಡ ಹಲಗೆ ಅಥವಾ ನೇರವಾದ ಹಲಗೆಯಿಂದ - ಶಿಲುಬೆಯು ಸಿದ್ಧವಾಗುವುದಿಲ್ಲ. ದುರದೃಷ್ಟಕರ ಸಂಗತಿಯೆಂದರೆ, ಬಹುತೇಕ ವಿಶ್ವಾಸಿಗಳು ಮತ್ತು ಬಹುತೇಕ ಸಭೆಗಳು ಇವೆರಡರಲ್ಲಿ ಒಂದು ವರ್ಗಕ್ಕೆ ಸೇರಿವೆ - ಅಲ್ಲಿ ನೇರ (ಲಂಬವಾದ) ಹಲಗೆಗೆ ಮಾತ್ರ ಅಥವಾ ಅಡ್ಡ ಹಲಗೆಗೆ ಮಾತ್ರ ಒತ್ತು ನೀಡಲಾಗುತ್ತದೆ.

    ನಾನು ಮೂರು ವಿಧವಾದ ಕ್ರೈಸ್ತ ಗುಂಪುಗಳನ್ನು ನೋಡಿದ್ದೇನೆ. ಅವುಗಳೆಂದರೆ<.b>,

  • 1. ಸಮೂಹಗಳು
  • 2. ಸಂಘಗಳು
  • 3. ನಿಜವಾದ ಕ್ರೈಸ್ತ ಸಭೆಯ ಸ್ಥಳೀಯ ಆವೃತ್ತಿಗಳು
  • ಈ ಮೂರರಲ್ಲಿ ಕೊನೆಯದು ಮಾತ್ರವೇ ಹೊಸ ದ್ರಾಕ್ಷಾರಸಕ್ಕೆ ಸೂಕ್ತವಾದ ಹೊಸ ಬುದ್ದಲಿಯಾಗಿದೆ.

    ಅಧ್ಯಾಯ 4
    ಸಮೂಹ

    ಒಂದು ಸಮೂಹವು ಲಂಬವಾದ ಹಲಗೆಗಳ ಒಂದು ಗುಂಪು ಆಗಿರುತ್ತದೆ. ನಾನು ಭಾಗವಹಿಸಿರುವ ಅನೇಕ ಸಭೆಗಳು ಈ ರೀತಿಯದ್ದಾಗಿವೆ. ಒಂದು ಒಳ್ಳೆಯ ಸಮೂಹದ ಜನರು, ಕೇವಲ ದೇವರೊಡನೆ ತಮ್ಮ ವೈಯಕ್ತಿಕ ನಡೆ, ಸತ್ಯವೇದದ ಅಧ್ಯಯನ ಮತ್ತು ಸೈದ್ಧಾಂತಿಕ ಶುದ್ಧತೆ ಇವುಗಳಲ್ಲಿ ಆಸಕ್ತಿ ಇರಿಸುತ್ತಾರೆ. ಆದರೆ ಅವರೆಲ್ಲರು ಬೇರೆ ಬೇರೆ ಗಾತ್ರದ ವೈಯಕ್ತಿಕ ಹಲಗೆಗಳು ಆಗಿದ್ದಾರೆ (ಅವರಲ್ಲಿ ಬೇರೆ ಬೇರೆ ಮಟ್ಟದ ಕರ್ತನ ಭಕ್ತಿ ಇರುತ್ತದೆ). ಅವರು ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳುವುದಿಲ್ಲ - ಅದಲ್ಲದೆ, ಅವರು ತಮ್ಮೊಡನೆ ಭಿನ್ನಾಭಿಪ್ರಾಯ ಇರುವವರಿಂದ ದೂರವಿರುತ್ತಾರೆ. ಹಿಂದೆ ನಾನೂ ಸಹ ಅನೇಕ ವರ್ಷಗಳನ್ನು ಒಂದು ಸಮೂಹದ ಸದಸ್ಯನಾಗಿ ಕಳೆದಿದ್ದೇನೆ. ಹಲವಾರು ವರ್ಷಗಳ ಕಾಲ ಅದ್ಭುತಕರ ಸತ್ಯಗಳನ್ನು ಕೇಳಿದ್ದ ನಾನು, ದೇವರೊಡನೆ ನನ್ನ ವೈಯಕ್ತಿಕ ನಡಿಗೆಯು ಸರಿಯಾಗಿದೆಯೆಂಬ ತೃಪ್ತಿಯನ್ನು ಹೊಂದಿದ್ದೆನು. ಆದರೆ ಯೋಹಾನನು ಹೇಳುವಂತೆ, "ತಾನು ಕಂಡಿರುವ ತನ್ನ ಸಹೋದರನನ್ನು ಪ್ರೀತಿಸದವನು ಕಾಣದಿರುವ ದೇವರನ್ನು ಪ್ರೀತಿಸಲಾರನು" (1 ಯೋಹಾನ 4:20). "ಸಮೂಹಗಳ" ಜನರು ಈ ವಚನವನ್ನು ಗಮನಿಸದೆ ಅಸಡ್ಡೆ ಮಾಡುತ್ತಾರೆ.

    ಯೋಹಾನನು ಇಲ್ಲಿ ಹೇಳುವುದು ಏನೆಂದರೆ, ನಿನ್ನಲ್ಲಿ ಲಂಬವಾದ ಹಲಗೆಯಿದ್ದ ಮಾತ್ರಕ್ಕೆ ಒಂದು ಶಿಲುಬೆಯನ್ನು ಹೊಂದಿರುವೆ ಎಂದು ನೀನು ಯೋಚಿಸಬಹುದು. ನಿನ್ನಲ್ಲಿ ಸ್ವಲ್ಪ ಮಟ್ಟಿನ ಬಾಹ್ಯ ಪರಿಶುದ್ಧತೆ ಇದೆ, ಆದರೆ ನೀನು ಸಮೂಹದ ಇತರರರೊಡನೆ ಯಾವ ಅನ್ಯೋನ್ಯತೆಯನ್ನೂ ಹೊಂದಿಲ್ಲ.

    ಸಮೂಹ

    * ಲಂಬವಾಗಿರುವ ಹಲಗೆಗಳ ಗುಂಪು

    * ಬುದ್ದಲಿ: ಹಳೆಯ ಒಡಂಬಡಿಕೆ

  • * ಸಿದ್ಧಾಂತಗಳಲ್ಲಿ ಒಮ್ಮತ
  • * ದೇವರ ಮೇಲೆ ಹೊರತೋರಿಕೆಯ ಭಕ್ತಿ(ವಿಮೋ. 40)
  • * ಧಾರ್ಮಿಕ ಭಾಷಾ ವೈಖರಿ (ಕೀರ್ತನೆ 40:9-10)
  • * ಭಾವಾವೇಷಕ್ಕೆ ಪ್ರಾಧಾನ್ಯತೆ ಕೊಡುವ ಆರಾಧನೆ (ಕೀರ್ತನೆ 149:1)
  • * ಲಂಬವಾದ ಹಲಗೆಗಳು ಒಂದು ಶಿಲುಬೆಯಾಗಿ ಯಾವತ್ತೂ ಜೋಡಿಸಲ್ಪಡದಿದ್ದಲ್ಲಿ, ಒಂಟಿಯಾಗಿ ಉಳಕೊಳ್ಳುತ್ತವೆ (ಯೋಹಾ. 12:24)
  • "ಸಮೂಹವು" ಹಳೆಯ ಒಡಂಬಡಿಕೆಯ ಮಾದರಿಯಾಗಿದೆ

    ಸಮೂಹದ ಮಾದರಿಯಲ್ಲಿ, ಸಹೋದರ-ಸಹೋದರಿಯರಿಗೆ ಇತರರೊಡನೆ ಗೆಳೆತನ ಇರಬಹುದು, ಆದರೆ ಅವರು ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲು ಪ್ರಯತ್ನಿಸದೆ ಪ್ರತ್ಯೇಕವಾಗಿ ಇರುತ್ತಾರೆ. ಅವರು ಒಬ್ಬರನ್ನೊಬ್ಬರು ಪ್ರೀತಿಯಿಂದ ಪ್ರೋತ್ಸಾಹಿಸುತ್ತಾ, ಬೆಳೆಯುವುದಕ್ಕಾಗಿ ಸಮಯದ ಉಪಯೋಗ ಮಾಡುವುದಿಲ್ಲ. ಹಳೆಯ ಒಡಂಬಡಿಕೆಯಲ್ಲಿ ಇಸ್ರಾಯೇಲ್ಯರು ಹೀಗೆಯೇ ಜೀವಿಸುತ್ತಿದ್ದರು.

    ಇಂತಹ ಒಂದು ಸಮುದಾಯದಲ್ಲಿ, ಗಂಡ-ಹೆಂಡಿರ ನಡುವೆಯೂ ಸಹ ಹೇಳಿಕೊಳ್ಳುವಂತ ಅನ್ಯೋನ್ಯತೆ ಇದ್ದಿರಲಿಕ್ಕಿಲ್ಲ, ಏಕೆಂದರೆ ಅವರಲ್ಲಿ ಒಬ್ಬರು "ವಿಪರೀತ ಆತ್ಮಿಕರು" ಆಗಿರುತ್ತಾರೆ! ಉದಾಹರಣೆಗೆ, ಪತ್ನಿಯು ತನ್ನ ಮಕ್ಕಳ ದಿನನಿತ್ಯದ ಆರೈಕೆಯಲ್ಲಿ ಮಿತಿಮೀರಿ ದಣಿದಿರುತ್ತಾಳೆ, ಆದರೆ ಗಂಡನು ತನ್ನ ಹೆಂಡತಿಗೆ ನೆರವಾಗುವುದರ ಬದಲಾಗಿ, ತನ್ನ "ಶಾಂತ ಸಮಯ"ದಲ್ಲಿ ದೇವರ ವಾಕ್ಯವನ್ನು ಧ್ಯಾನಿಸುತ್ತಿರುತ್ತಾನೆ! ಅಂತಹ ಮನುಷ್ಯನು "ಸಮೂಹದ" ಮನೋಭಾವವನ್ನು ಹೊಂದಿದ್ದಾನೆ.

    ಇಂಥವನನ್ನು ನಿಜವಾಗಿಯೂ ಕ್ರೈಸ್ತನೆಂದು ಕರೆಯಬಹುದೋ ಎಂದು ನಾನು ಆಶ್ಚರ್ಯಪಡುತ್ತೇನೆ. ಆತನು ಸತ್ಯವೇದ ಓದುವುದರಿಂದ, ಪ್ರಾರ್ಥಿಸುವುದರಿಂದ, ಸಭೆಗೆ ಹಣ ಕೊಡುವುದರಿಂದ ತಾನು ಆತ್ಮಿಕನಾಗಿದ್ದೇನೆ, ಹಾಗೂ ಕ್ರಿಸ್ತನ ಶಿಷ್ಯನಾಗಿದ್ದೇನೆಂದು ಕಲ್ಪಿಸಿಕೊಳ್ಳಬಹುದು. ಆದರೆ ಇದು ಸಂಪೂರ್ಣ ಆತ್ಮ ವಂಚನೆಯಾಗಿದೆ. ಸೈತಾನನು ಅನೇಕ ಕ್ರೈಸ್ತರನ್ನು ಈ ರೀತಿ ಮೂರ್ಖರನ್ನಾಗಿ ಮಾಡಿದ್ದಾನೆ - ನಾನೂ ಸಹ ಅನೇಕ ವರ್ಷಗಳ ಕಾಲ ನನ್ನ ಮೇಲ್ನೋಟದ "ಕ್ರೈಸ್ತ" ಚಟುವಟಿಕೆಗಳು ನನ್ನನ್ನು ಕ್ರಿಸ್ತನ ಶಿಷ್ಯನನ್ನಾಗಿ ಮಾಡುತ್ತವೆ ಎಂದು ಯೋಚಿಸಿ ಮೂರ್ಖನಾಗಿದ್ದೆ.

    ಇದು ಹಳೆಯ ಒಡಂಬಡಿಕೆಯ ಧರ್ಮವಾಗಿದೆ - ಮತ್ತು ’ಸಮೂಹ’ ಎಂಬ ಪದ ನಿಜವಾಗಿಯೂ ಹಳೆಯ ಒಡಂಬಡಿಕೆಯ ಪದವಾಗಿದೆ.

    ಮೋಶೆಯು ಇಸ್ರಾಯೇಲ್ಯರಿಗೆ ಧರ್ಮಶಾಸ್ತ್ರವನ್ನು ಕೊಟ್ಟಾಗ ಅವರು ಒಂದು ಸಮೂಹವಾಗಿದ್ದರು. ಅವರು ಒಟ್ಟಾಗಿ ಸೇರಿದಾಗ ಹೇಗೆ ಆರಾಧಿಸಬೇಕೆಂದು ವಿವರವಾದ ಆಜ್ಞಾವಿಧಿಗಳನ್ನು ದೇವರು ಅವರಿಗೆ ಕೊಟ್ಟಾಗ, ಅವರು ಬೇರೆ ಬೇರೆ ವ್ಯಕ್ತಿಗಳ ಒಂದು ಗುಂಪಾಗಿದ್ದರು. ಅವರು ಪವಿತ್ರ ಜೀವನವನ್ನು ನಡೆಸಲು ದೇವರಿಂದ ಆಹ್ವಾನಿಸಲ್ಪಟ್ಟ ಪ್ರತ್ಯೇಕ ವ್ಯಕ್ತಿಗಳಾಗಿದ್ದರು.

    ಇಸ್ರಾಯೇಲಿನ ಇತಿಹಾಸದಲ್ಲಿ, ಮೋಶೆಯಂತಹ "ಏಕಾಂಗಿ ನಾಯಕರು" ಮತ್ತು ಎಲೀಯನಂತಹ "ಏಕಾಂಗಿ ಪ್ರವಾದಿಗಳು" ಅವರ ನಡುವೆ ಇದ್ದರು. ಆದರೆ ಇಸ್ರಾಯೇಲಿನಲ್ಲಿ ನಾಯಕರುಗಳಾಗಲೀ ಅಥವಾ ಪ್ರವಾದಿಗಳಾಗಲೀ ಜೊತೆಯಾಗಿ ಕೆಲಸ ಮಾಡುವುದನ್ನು ಅಥವಾ ಪರಸ್ಪರ ಐಕ್ಯತೆಯನ್ನು ಬೆಳೆಸಿಕೊಳ್ಳುವುದನ್ನು, ಮತ್ತು ದೇವರ ಕೆಲಸವನ್ನು ಜೊತೆಯಾಗಿ ಮಾಡುವುದನ್ನು ನಾವು ಎಂದೂ ಕಾಣುವುದಿಲ್ಲ. ಅಂತಹ ಐಕ್ಯತೆ ಹೊಸ ಒಡಂಬಡಿಕೆಯಲ್ಲಿ ಮಾತ್ರ ಸಾಧ್ಯವಾಗುತ್ತದೆ. ಈ ಮೂಲತತ್ವವನ್ನು "ಹೊಸ ಬುದ್ದಲಿಯಲ್ಲಿ ಹೊಸ ದ್ರಾಕ್ಷಾರಸ" ಎಂಬುದಾಗಿ ವಿವರಿಸಬಹುದು.

    (ಬುದ್ದಲಿ - ದ್ರಾಕ್ಷಾರಸ ಹಾಕಿಡುವ ಚೀಲ)

    .

    ಹಳೆಯ ಒಡಂಬಡಿಕೆಯಲ್ಲಿ, ಇಸ್ರಾಯೇಲ್ಯರು ತಮ್ಮ ಖಾಸಗಿ ಜೀವನ ಮತ್ತು ತಮ್ಮ ಕುಟುಂಬಗಳನ್ನು ಮಾತ್ರ ನೋಡಿಕೊಳ್ಳುತ್ತಿದ್ದರು. ಅವರಲ್ಲಿ ಕೆಲವರು ದೇವಭಕ್ತರಾಗಿದ್ದರೂ, ಅವರು ಇತರರೊಡನೆ ಅನ್ಯೋನ್ಯತೆಯನ್ನು ಹೊಂದಿರಲಿಲ್ಲ. "ಅನ್ಯೋನ್ಯತೆ" ಎಂಬ ಪದ ಹಳೆಯ ಒಡಂಬಡಿಕೆಯಲ್ಲಿ ಇರಲಿಲ್ಲ. ಅವರು "ಏಕಾಂಗಿ ಜೀವಿಗಳು" ಆಗಿದ್ದರು - ಅಲ್ಲಿದ್ದ ಕೆಲವರಲ್ಲಿ ದೇವರ ಕೆಲಸಗಳನ್ನು ಮಾಡುವ ಉತ್ಸುಕತೆ ಇದ್ದಿರಬಹುದು. ಆದರೆ ಒಂದು "ಸಮುದಾಯವಾಗಿ" ಇತರರೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳಲಿಕ್ಕೆ ಅಥವಾ ಒಂದೇ "ಶರೀರದ" ಅಂಗಗಳಂತೆ ಜೊತೆಯಾಗಿ ಕೆಲಸ ಮಾಡುವ ಉತ್ಸುಕತೆ ಅವರಲ್ಲಿ ಇರಲಿಲ್ಲ - ಏಕೆಂದರೆ, ಹಳೆಯ ಒಡಂಬಡಿಕೆಯಲ್ಲಿ ಅವರು ಒಂದು ಶರೀರವಾಗುವದು ಅಸಾಧ್ಯವಾಗಿತ್ತು. ಅವರು ಕೇವಲ ಒಂದು ಸಮೂಹವಾಗಿದ್ದರು.

    ಹೊಸ ದ್ರಾಕ್ಷಾರಸ ಮತ್ತು ಹೊಸ ಬುದ್ದಲಿ

    ಆದರೆ ಈಗ ನಮ್ಮ ಕರ್ತನು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದ್ದಾನೆ. ನಾವು ಹೊಸದಾಗಿ ಹುಟ್ಟಿದಾಗ ಕ್ರಿಸ್ತನ ಜೀವವನ್ನು - ಹೊಸ ದ್ರಾಕ್ಷಾರಸವನ್ನು - ಪಡೆಯುತ್ತೇವೆ. ಈ ಜೀವವು ವೈಯಕ್ತಿಕವಾಗಿ ಜೀವಿಸುವುದಕ್ಕಾಗಿ (ಹಳೇ ಬುದ್ದಲಿಯ ಜೀವನ) ಕೊಡಲ್ಪಟ್ಟಿಲ್ಲ. ನಾವು ಈ ಕ್ರಿಸ್ತನ ಜೀವವನ್ನು ಸ್ವಾರ್ಥ ರೀತಿಯ ಜೀವನ ಶೈಲಿಗೆ ಅಳವಡಿಸಲು ಪ್ರಯತ್ನಿಸಿದರೆ - ನಮ್ಮ ಸ್ಥಳೀಯ ಸಭೆಯಲ್ಲಿ ಇತರ ಹೊಸದಾಗಿ-ಹುಟ್ಟಿದ ವಿಶ್ವಾಸಿಗಳೊಂದಿಗೆ ಅನ್ಯೋನ್ಯತೆಯನ್ನು ಬೆಳೆಸಿಕೊಳ್ಳದೆ, ನಮ್ಮ ಸ್ವಂತದ ಮತ್ತು ನಮ್ಮ ಕುಟುಂಬದ ಬಗ್ಗೆ ಮಾತ್ರ ಯೋಚಿಸುವುದಾದರೆ - ಯೇಸುವು ನಮ್ಮನ್ನು ಎಚ್ಚರಿಸಿದಂತೆ, ನಮ್ಮ ಜೀವನವು (ಹಳೆಯ ಬುದ್ದಲಿ) ಒಡೆದುಹೋಗುವುದು. ದೇವರು ತನ್ನ ಪವಿತ್ರಾತ್ಮನನ್ನು (ಹೊಸ ದ್ರಾಕ್ಷಾರಸವನ್ನು) ನಮ್ಮೊಳಗೆ ತುಂಬುತ್ತಾರೆ ಮತ್ತು ಇದು ಹೊಸ ಬುದ್ದಲಿಗೆ (ಕ್ರಿಸ್ತನ ದೇಹಕ್ಕೆ) ಸುರಿಯಲ್ಪಡಬೇಕೆಂಬುದು ಅವರ ಬಯಕೆಯಾಗಿದೆ.

    ನಮ್ಮಲ್ಲಿ ಪ್ರತಿಯೊಬ್ಬರಿಗೂ ಇಂತಹ ಜೀವನವನ್ನು ಪ್ರವೇಶಿಸಿಸುವ ನಿರೀಕ್ಷೆ ಇರುವುದಾಗಿ ನಾನು ತಿಳಿದಿದ್ದೇನೆ, ಏಕೆಂದರೆ ದೇವರು ನನ್ನ ಜೀವನದಲ್ಲಿ ಮಾಡಿದ್ದನ್ನು ನಾನು ನೋಡಿದ್ದೇನೆ. ನಾನು ಒಬ್ಬ "ಸಮೂಹ-ಕ್ರೈಸ್ತನಾಗಿದ್ದಾಗ" ದೇವರು ನನಗೆ ಕರುಣೆ ತೋರಿಸಿದರು, ಆಗ ನನ್ನ ಜೀವನವು ಒಡೆದು ಹೋಯಿತು ಮತ್ತು ಎಲ್ಲವೂ ಚೂರು ಚೂರಾಯಿತು. ಆಗ ದೇವರು ನನಗೆ ಹೇಳಿದ ಕಿವಿಮಾತು ಇದು, "ಈಗ ನಾನು ಈ ಹೊಸ ದ್ರಾಕ್ಷಾರಸವನ್ನು ಒಂದು ಹೊಸ ಬುದ್ದಲಿಗೆ ಸುರಿಯಲು ನೀನು ಸಮ್ಮತಿಸುವೆಯಾ?" "ಒಡೆದು ಹೋದಾಗ" ನಡೆದ ಒಂದು ಒಳ್ಳೆಯ ಅಂಶವೆಂದರೆ, ಅದು ಹಳೆಯ ಬುದ್ದಲಿಯನ್ನು ತೊಲಗಿಸಿತು! ದೇವರು ನನ್ನ ಹಳೆಯ ಬುದ್ದಲಿಯು ಒಡೆಯುವಂತೆ ಮಾಡಿದ್ದು ಒಳ್ಳೆಯದಾಯಿತು. ಆಗ ನನಗೆ ಅರಿವಾದುದು ಏನೆಂದರೆ, ನಾನು ಪ್ರಾಪಂಚಿಕತೆಯಲ್ಲಿ ನನ್ನ ನಂಬಿಕೆಯನ್ನು ಇರಿಸಿದ್ದೆನು, ಸ್ವರ್ಗೀಯವಾದುದರ ಮೇಲೆ ಇರಿಸಿರಲಿಲ್ಲ. ಸಭೆಯನ್ನು ಕಟ್ಟುವ ವಿಷಯದಲ್ಲಿ ನಾನು ಮಾನವ ಸಂಪ್ರದಾಯಗಳಲ್ಲಿ ಮತ್ತು ನನ್ನ ಸ್ವಂತ ಯೋಜನೆಗಳಲ್ಲಿ ನಂಬಿಕೆ ಇರಿಸಿದ್ದೆ.

    ಹಲವು ಕ್ರೈಸ್ತರ ದೇವಭಕ್ತಿಯು ಹೆಚ್ಚಾಗಿ ಬರೀ ಹೊರತೋರಿಕೆಯ ವಿಷಯವಾಗಿರುತ್ತದೆ. ಅವರು ಎಲ್ಲಾ ಕೂಟಗಳಿಗೆ ಹಾಜರಾಗುತ್ತಾರೆ, ಪ್ರಾರ್ಥಿಸುತ್ತಾರೆ, ಭಯ-ಭಕ್ತಿಯಿಂದ ಕುಳಿತಿರುತ್ತಾರೆ ಮತ್ತು ಅವರೆಲ್ಲರೂ ಧಾರ್ಮಿಕ ಭಾಷೆಯನ್ನು ಮಾತನಾಡುತ್ತಾರೆ. ಇಂತಹ ಬಾಹ್ಯ ಕಾರ್ಯಗಳ ಮೂಲಕ ’ತಾವು ಆತ್ಮಿಕರಾಗಿದ್ದೇವೆ’ ಎಂದು ಅವರು ಕಲ್ಪಿಸಿಕೊಳ್ಳಬಹುದು. ಆದರೆ ಅವರೊಡನೆ ನೀವು ದಿನನಿತ್ಯದ ಪ್ರಾಯೋಗಿಕ ವಿಷಯಗಳ ಬಗ್ಗೆ ಮಾತನಾಡುವಂತಿಲ್ಲ, ಏಕೆಂದರೆ ಅವರು ಅಂತಹ ಸಂಭಾಷಣೆಯನ್ನು "ಆತ್ಮಿಕವಲ್ಲದ್ದು ಮತ್ತು ಪ್ರಾಪಂಚಿಕವಾದದ್ದು" ಎಂದು ಪರಿಗಣಿಸುತ್ತಾರೆ! ಅವರು ಕೇವಲ "ಧಾರ್ಮಿಕ" ವಿಷಯಗಳ ಕುರಿತಾಗಿ ಮಾತನಾಡಲು ಬಯಸುತ್ತಾರೆ. ನಮ್ಮ ಮಾತುಕತೆಗಳಲ್ಲಿ ಸಾಮಾನ್ಯ, ಸಣ್ಣ ಪುಟ್ಟ ವಿಷಯಗಳ ಬಗ್ಗೆ ಮಾತನಾಡುವುದನ್ನು ಅನುಮತಿಸದ ಕ್ರೈಸ್ತತ್ವವು ಸುಳ್ಳು ಕ್ರೈಸ್ತತ್ವವಾಗಿದೆ.

    ಯೇಸುವು ತನ್ನ ಶಿಷ್ಯರೊಡನೆ ಹಾಗೂ ತನ್ನ ಬಳಿಗೆ ಬಂದ ಜನರೊಡನೆ ಮಾತನಾಡುವಾಗ, ಯಾವಾಗಲೂ ಹಳೆಯ ಒಡಂಬಡಿಕೆಯ ವಚನಗಳ ಕುರಿತು ಮಾತಾಡುತ್ತಿರಲಿಲ್ಲ. ಅಗತ್ಯವಿದ್ದಾಗ ಮಾತ್ರ ಆತನು ಅವುಗಳನ್ನು ಉಲ್ಲೇಖಿಸಿದನು - ಉದಾಹರಣೆಗೆ, ಅವನು ಸೈತಾನನೊಡನೆ ಮಾತನಾಡಿದಾಗ ಅಥವಾ ಫರಿಸಾಯರ ಪ್ರಶ್ನೆಗಳನ್ನು ಉತ್ತರಿಸಿದಾಗ. ಆದರೆ ಎಷ್ಟೋ ಸಲ ಆತನು ತನ್ನ ಶಿಷ್ಯರೊಂದಿಗೆ ಸಾಮಾನ್ಯ, ದಿನನಿತ್ಯದ ವಿಷಯಗಳ ಬಗ್ಗೆ ಮಾತನಾಡಿದನು. ಆತನು ಎಂದೂ ಸುಳ್ಳು-ಆತ್ಮಿಕತೆಯಿಂದ ವರ್ತಿಸಲಿಲ್ಲ ಅಥವಾ ಮಾತನಾಡಲಿಲ್ಲ. ಈ ಮೂಲಕ ನಿಜವಾದ ದ್ರಾಕ್ಷಾರಸ ಏನೆಂಬುದನ್ನು ಅವನು ನಮಗೆ ತೋರಿಸಿಕೊಟ್ಟಿದ್ದಾನೆ.

    ನಾವು ಧಾರ್ಮಿಕ ಭಾಷೆಯನ್ನು ಉಪಯೋಗಿಸುವುದರ ಮೂಲಕ, ನಮ್ಮಂತೆಯೇ ಧಾರ್ಮಿಕ ಭಾಷೆ ಮಾತನಾಡುವವರ ಜೊತೆಗೆ ನಾವು ಸಭೆಯನ್ನು ಕಟ್ಟುತ್ತಿದ್ದೇವೆಂಬ ತಪ್ಪಾದ ಭಾವನೆ ನಮ್ಮಲ್ಲಿ ಉಂಟಾಗಬಹುದು. ನಾವು ಒಬ್ಬರಿಗೊಬ್ಬರು ವಚನಗಳನ್ನು ಉಲ್ಲೇಖಿಸಬಹುದು ಮತ್ತು ಆ ವಚನಗಳ ಮೂಲಕ ನಮಗೆ ದೊರಕಿದ್ದನ್ನು ನಾವು ಕೂಟದಲ್ಲಿ ಹಂಚಿಕೊಳ್ಳಬಹುದು - ಹಾಗೂ ಅದು ಆತ್ಮಿಕತೆ ಎಂದು ನಾವು ಕಲ್ಪಿಸಬಹುದು. ಆದರೆ ಅದರ ಫಲಿತಾಂಶ ಮಾನಸಿಕ ತೃಪ್ತಿಯ ಒಂದು ಜೀವನ, ಅಷ್ಟೇ.

    ಗೋಧಿಯ ಕಾಳು ಭೂಮಿಗೆ ಬಿದ್ದು ಸಾಯಲೇಬೇಕು

    ಸಾವಿರಾರು ಜನರ ಸಮೂಹಗಳಿರುವ ಇಂದಿನ ಬೃಹತ್ ಸಭೆಗಳ ಬಗ್ಗೆ ನೀವು ಯೋಚಿಸಿರಿ. ಅವುಗಳಲ್ಲಿ ನಿಜವಾದ ದೈವಿಕ ಅನ್ಯೋನ್ಯತೆಯಿರುವ ಇಬ್ಬರೂ ಕೂಡ ಇಲ್ಲದಿರಬಹುದು. ಅಬ್ಬರದ ಭಾವನಾತ್ಮಕ ಸಂಗೀತ ಮತ್ತು ಮನಸ್ಸನ್ನು ಸೂರೆಮಾಡುವ ಬೋಧನೆಗಳಿಂದ ಅವರೆಲ್ಲರೂ ಸೆಳೆಯಲ್ಪಡುತ್ತಾರೆ. ಇದು ನಿಜವಾದ ಕ್ರಿಸ್ತನ ದೇಹದ ಪ್ರತಿರೂಪವಲ್ಲ. ಇವು ದೇವರೊಡನೆ ವೈಯಕ್ತಿಕ ಸಂಬಂಧದ ಕುರಿತಾಗಿ ಮಾತ್ರ ಯೋಚಿಸುವ ಹಲಗೆಗಳ ಗುಂಪುಗಳು ಆಗಿರುತ್ತವೆ. ಅದಾಗ್ಯೂ ಇದೊಂದು ವಂಚನೆಯಾಗಿದೆ, ಏಕೆಂದರೆ ಅಲ್ಲಿ ಅಡ್ಡವಾದ ಹಲಗೆ ಇರುವುದಿಲ್ಲ. ಹಾಗಾಗಿ, ಅಲ್ಲಿ ಶಿಲುಬೆಯೂ ಇರುವುದಿಲ್ಲ.

    ಯೇಸುವು ಹೇಳಿದ್ದೇನೆಂದರೆ, "ಗೋಧಿಯ ಕಾಳು ಭೂಮಿಯ ಮೇಲೆ ಬಿದ್ದು ಸಾಯದಿದ್ದರೆ ಒಂಟಿಯಾಗಿ ಉಳಿಯುವದು" (ಯೋಹಾನ 12:24). ಗೋಧಿಯ ಕಾಳುಗಳು ತಮ್ಮತನಕ್ಕೆ ಸತ್ತಾಗ ಮಾತ್ರ ನಿತ್ಯತ್ವಕ್ಕೆ ಬಾಳುವ ಅಪ್ಪಟವಾದ ಫಲ ನೀಡಲು ಸಾಧ್ಯವಿದೆ. 10,000 ಕಾಳುಗಳನ್ನು ಒಂದು ಬಂಗಾರದ ಪೆಟ್ಟಿಗೆಯಲ್ಲಿ ಇರಿಸಿ ಪ್ರದರ್ಶಿಸಬಹುದು, ಮತ್ತು ಅದು ಪ್ರಪಂಚದಲ್ಲಿ ಪ್ರಸಿದ್ಧವಾಗಬಹುದು. ಬೃಹತ್ ಕ್ರೈಸ್ತಸಭೆಗಳಲ್ಲಿ ಇಂತಹ ಗೋಧಿಯ ಸಾವಿರಾರು ಒಂಟಿ ಕಾಳುಗಳು ಕುಳಿತಿರುವುದನ್ನು ನೀವು ನೋಡಬಹುದು. ನಾನು ಈ ದೃಶ್ಯವನ್ನು ನೋಡಿದಾಗ ಯೋಚಿಸುವುದೇನೆಂದರೆ, "ಇವುಗಳಲ್ಲಿ ಎರಡು ಕಾಳುಗಳಾದರೂ ಸಾಯಲು ಸಿದ್ಧವಿದ್ದು, ಪರಸ್ಪರ ಅನ್ಯೋನ್ಯತೆಯನ್ನು ಬೆಳೆಸಿಕೊಂಡಿದ್ದರೆ, ಅಲ್ಲಿದ್ದ ಮಿಕ್ಕವರಲ್ಲಿ ದೇವರು ತನ್ನ ಒಂದು ಕಾರ್ಯವನ್ನು ಆರಂಭಿಸಲು ಸಾಧ್ಯವಿತ್ತು, ಮತ್ತು ಅದು ಸುತ್ತಲಿನ ಪ್ರಪಂಚಕ್ಕೆ ಕ್ರಿಸ್ತನ ನಿಜವಾದ ದೇಹವನ್ನು ತೋರಿಸುತ್ತಿತ್ತು."

    ನಾವು ನಮ್ಮ ಸಭೆಯಲ್ಲಿ, ಭೂಮಿಗೆ ಬಿದ್ದು ಸಾಯಲು ಇಚ್ಛಿಸದ ಗೋಧಿಯ ಕಾಳುಗಳ ಹಾಗಿರುವ ಜನರ ಒಂದು ಬೃಹತ್ ಸಮೂಹವನ್ನು ಎಂದಿಗೂ ಸೇರಿಸದಂತೆ ದೇವರು ತಡೆಯಲಿ. ಭೂಮಿಗೆ ಬಿದ್ದು ಸಾಯಲು ಸಿದ್ಧವಿರುವ ಒಂದು ಗೋಧಿಯ ಕಾಳಿನ ಮೂಲಕ ದೇವರು ತನ್ನ ಕಾರ್ಯವನ್ನು ಆರಂಭಿಸುತ್ತಾರೆ. ನಂತರ ಇನ್ನೊಂದು ಕಾಳನ್ನು ದೇವರು ಅದಕ್ಕೆ ಸೇರಿಸುತ್ತಾರೆ. ಮತ್ತೆ ಇನ್ನೊಂದು ಕಾಳು, ಅದರ ನಂತರ ಇನ್ನೊಂದನ್ನು ದೇವರು ಒಂದುಗೂಡಿಸುತ್ತಾ ಹೋಗುತ್ತಾರೆ. ಈ ರೀತಿಯಾಗಿ, ಹಸಿದಿರುವ ಪ್ರಪಂಚಕ್ಕೆ ಉಣಬಡಿಸುವ ಕ್ರಿಸ್ತನ ದೇಹವೆಂಬ ಸಭೆಯು ಕಟ್ಟಲ್ಪಡುತ್ತದೆ. ಆದರೆ, ಜಜ್ಜಲ್ಪಟ್ಟು ಸಾಯುವುದಕ್ಕೆ ಸಿದ್ಧವಿರದ ಗೋಧಿಯ ಕಾಳುಗಳು ತಾವು ಸ್ವತಃ ನಿಜವಾದ ರೊಟ್ಟಿಗಳಾಗದೆ, ತೋರಿಕೆಗೆ ರೊಟ್ಟಿಯ ಚಿತ್ರಗಳನ್ನು ಪ್ರದರ್ಶಿಸಿ, ಪ್ರಪಂಚದ ಹಸಿದ ಬಡ ಜನರನ್ನು ಸತಾಯಿಸುತ್ತಾರೆ. ಯೇಸುವು ಹೇಳಿದ್ದೇನೆಂದರೆ, ಗೋಧಿಯ ಕಾಳೊಂದು ನೆಲಕ್ಕೆ ಬಿದ್ದು ಸತ್ತರೆ, ಅದು (ನಿಶ್ಚಯವಾಗಿ) ಬಹಳ ಫಲಕೊಡುವುದು.

    ಗೋಧಿಯ ಒಂದು ಕಾಳು ಎಷ್ಟು ಚಿಕ್ಕದಾಗಿರುತ್ತದೆ ಎಂದರೆ, ಅದನ್ನು ನೀವು ನಿಮ್ಮ ಎರಡು ಬೆರಳುಗಳ ನಡುವೆ ಹಿಡಿದುಕೊಂಡಾಗ, ಅದು ಕಣ್ಣಿಗೆ ಕಾಣಿಸದು. ಹಾಗೆಯೇ, ನೀವು ಇತರ ಕ್ರೈಸ್ತ ಸಭೆಗಳಿಂದ ಮತ್ತು ಪಂಗಡಗಳಿಂದ ತಿರಸ್ಕರಿಸಲ್ಪಟ್ಟು, ಎಲ್ಲೋ ಒಂದು ಕಡೆ ಸೇರಿಬರುವ ಕೆಲವು ವಿಶ್ವಾಸಿಗಳ ಸಣ್ಣ ಅಜ್ಞಾತ ಗುಂಪು ಆಗಿರಬಹುದು. ನಿರುತ್ಸಾಹಗೊಳ್ಳಬೇಡಿರಿ. ನಿಮ್ಮ ಸುತ್ತಮುತ್ತಲಿನ ಬೃಹತ್ ಸಭೆಗಳಲ್ಲಿ, ತಮ್ಮ ಕೆಲಸದ ಬಗ್ಗೆ ಪ್ರಭಾವಶಾಲಿ ವರದಿಗಳನ್ನು ಕೊಡುವ ಮತ್ತು ಸುಂದರವಾದ ಕಾರುಗಳಲ್ಲಿ ಓಡಾಡಿ, ಹೆಚ್ಚಿನ ಸಂಬಳವನ್ನು ಪಡೆಯುವ ಪ್ರಖ್ಯಾತ ಸಭಾ ಪಾಲಕರುಗಳು ಇರಬಹುದು. ಅವರು ಏನಾದರೂ ಮಾಡಲಿ. ಅವರನ್ನು ನೋಡಿ ಅಸೂಯೆ ಪಡಬೇಡಿರಿ. ಭೂಮಿಗೆ ಬಿದ್ದು ಸಾಯುವುದೇ ನಮಗೆ ಕೊಡಲ್ಪಟ್ಟಿರುವ ಕರೆಯಾಗಿದೆ. ನಿತ್ಯತ್ವಕ್ಕೆ ಬಾಳುವ ಫಲವನ್ನು ದೇವರು ನಮ್ಮಿಂದ ತರಿಸುವರು. ಅದು ದೇವರ ವಾಗ್ದಾನವು. ಇದೇ ನಿಜವಾದ ಸಭೆಯನ್ನು ಕಟ್ಟುವ ರಹಸ್ಯವಾಗಿದೆ.

    ಅಧ್ಯಾಯ 5
    ಸಂಘ

    "ಸಂಘ"ವು ಸಮೂಹಕ್ಕೆ ವ್ಯತಿರಿಕ್ತವಾಗಿದೆ.

    ನಾವು ಈಗಾಗಲೇ ನೋಡಿರುವಂತೆ, ಒಂದು ’ಸಮೂಹ’ವು ವಿಭಿನ್ನ ಅಳತೆಗಳ ಲಂಬವಾದ ಹಲಗೆಗಳನ್ನು ಒಂದರ ಪಕ್ಕದಲ್ಲಿ ಮತ್ತೊಂದಾಗಿ ಜೋಡಿಸಿರುವ ಒಂದು ಸಂಗ್ರಹವಾಗಿದೆ - ಅದರಲ್ಲಿ ಕೆಲವರು ಹೆಚ್ಚು ದೇವಭಕ್ತಿಯನ್ನು ಹೊಂದಿರುತ್ತಾರೆ ಮತ್ತು ಇನ್ನು ಕೆಲವರು ಕಡಿಮೆ ಭಕ್ತಿಯನ್ನು ಹೊಂದಿರುತ್ತಾರೆ. ಆದರೆ ಅವರ ನಡುವೆ ಪರಸ್ಪರ ಅನ್ಯೋನ್ಯತೆ ಇರುವುದಿಲ್ಲ.

    ಆದರೆ ಸಮೂಹಕ್ಕೆ ಹೋಲಿಸಿದರೆ, ’ಸಂಘ’ವು ಒಬ್ಬರಿಗೊಬ್ಬರು ಕಾಳಜಿ ವಹಿಸುವಂತಹ ಜನರನ್ನು ಒಳಗೊಂಡಿರುತ್ತದೆ. ಇದು ಅಲ್ಲಿರುವ ಕೆಲವರಿಗೆ ಹೆಚ್ಚಿನ ಅಪಾಯವನ್ನು ತಂದೊಡ್ಡುತ್ತದೆ, ಏಕೆಂದರೆ ನಮ್ಮನ್ನು ನಮ್ಮ ಸುತ್ತ ಇರುವಂತ ಸಮೂಹಗಳೊಟ್ಟಿಗೆ ಹೋಲಿಸಿಕೊಂಡು, "ಸರಿ, ನಾವು ಈಗ ಒಬ್ಬರಿಗೊಬ್ಬರ ಬಗ್ಗೆ ಕಾಳಜಿ ವಹಿಸುವವರಾಗಿದ್ದೇವೆ" ಎಂದು ನಾವು ಹೇಳಿಕೊಳ್ಳುವುದು ಸುಲಭದ ವಿಷಯವಾಗಿದೆ. ನಾವು ಎಲ್ಲರೊಟ್ಟಿಗೆ ಚೆನ್ನಾಗಿ ಮಾತನಾಡುತ್ತೇವೆ ಮತ್ತು ನಮ್ಮೊಳಗೆ ಉತ್ತಮ ಅನ್ಯೋನ್ಯತೆ ಇರುತ್ತದೆ. ಇಲ್ಲಿಂದ ಮುಂದುವರೆದು, ನಾವು ಆತ್ಮಿಕರು ಎಂದು ಹೇಳಿಕೊಳ್ಳುವುದು ಸುಲಭ, ಏಕೆಂದರೆ ನಮ್ಮಲ್ಲಿ ಮೂಲತತ್ವಗಳ ವಿಚಾರದಲ್ಲಿ ಒಮ್ಮತ ಇದೆ, ನಾವು ವಸ್ತ್ರಗಳನ್ನು ಧರಿಸುವುದರಲ್ಲಿ ಒಂದೇ ಸಮನಾಗಿ ಇರುತ್ತೇವೆ, ಇತ್ಯಾದಿ. ಆದರೆ, ನಾವು ಕೇವಲ ಒಂದೇ ಆಕಾರ ಮತ್ತು ಒಂದೇ ಅಳತೆಯಲ್ಲಿ ಕಡಿಯಲ್ಪಟ್ಟ ಮರದ ಹಲಗೆಗಳು ಆಗಿರುತ್ತೇವೆ, ಅಷ್ಟೇ!

    ಸಂಘ

    * ಒಂದೇ ಸಮನಾದ ಅಡ್ಡ-ಹಲಗೆಗಳ ('horizontal') ಸಂಗ್ರಹ

  • * ಬುದ್ದಲಿ: ಒಡಂಬಡಿಕೆ ಇರುವುದಿಲ್ಲ
  • * ದೇವಭಕ್ತಿಯು ಹೆಚ್ಚಾಗಿ ಕಾಣಸಿಗುವುದಿಲ್ಲ
  • * ಸ್ನೇಹದ ಮೇಲೆ ಆಧಾರಿತವಾದ ನಿಷ್ಠೆಗೆ ಹೆಚ್ಚು ಒತ್ತನ್ನು ಕೊಡಲಾಗುತ್ತದೆ
  • * ಹಲವು ಧಾರ್ಮಿಕ ಚಟುವಟಿಕೆಗಳು ,/li>
  • * ಅದರ ಫಲಿತಾಂಶ
  • * ದೇವರಲ್ಲಿ ಭದ್ರತೆ ಕಂಡುಕೊಳ್ಳುವುದಕ್ಕೆ ಬದಲಾಗಿ, ಸಭೆ/ಮನುಷ್ಯನಲ್ಲಿ ಭದ್ರತೆ ಕಂಡುಕೊಳ್ಳುವದು
  • * ಇತರರು ತಮ್ಮನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳಬೇಕೆಂದು ಸದಸ್ಯರ ನಿರೀಕ್ಷೆ
  • * ಯಾರಾದರೂ ಸದಸ್ಯರನ್ನು ತಿದ್ದಿದರೆ, ಅವರು ನೊಂದುಕೊಳ್ಳುತ್ತಾರೆ
  • * ವರ್ಷದಿಂದ ವರ್ಷಕ್ಕೆ ಯಾವುದೇ ಆತ್ಮಿಕ ಬೆಳವಣಿಗೆ ಇರುವುದಿಲ್ಲ, ಕೇವಲ ಹಿಂಜಾರಿಕೆ ಇರುತ್ತದೆ
  • ಸಂಘವು "ಒಡಂಬಡಿಕೆಯೇ ಇಲ್ಲದಿರುವ" ಒಂದು ಧರ್ಮವಾಗಿದೆ

    ಇಲ್ಲಿ ನಮಗಿರುವ ದೊಡ್ಡ ಅಪಾಯ ಏನೆಂದರೆ, ಇತರರೊಂದಿಗೆ ಅಡ್ಡನೆಯ ಸಂಬಂಧವನ್ನು ಅರ್ಥಮಾಡಿಕೊಂಡು, ಅದಕ್ಕೆ ಹೆಚ್ಚಿನ ಮಹತ್ವವನ್ನು ಕೊಟ್ಟಾಗ, ನಾವು ಒಂದು ಸಂಘವಾಗಿ ಹೊರಹೊಮ್ಮುತ್ತೇವೆ. ನಮ್ಮೊಂದಿಗೆ ಸೇರಿಕೊಳ್ಳುವಂತೆ ನಾವು ಇತರರನ್ನು ಆಹ್ವಾನಿಸುತ್ತೇವೆ, ಆದರೆ ಅವರೆಲ್ಲರೂ ನಮ್ಮ ಹಾಗೇ ಇರಬೇಕು, ನಮ್ಮ ಹಾಗೇ ಮಾತನಾಡಬೇಕು ಮತ್ತು ನಮ್ಮ ಹಾಗೆ ನಡೆದುಕೊಳ್ಳಬೇಕು ಎಂಬ ನಿರೀಕ್ಷೆ ನಮ್ಮದಾಗಿದೆ. ಹಾಗಾಗಿ, ಎಲ್ಲರೂ ಒಂದೇ ತರ ಇರುವಂತ ಒಂದು ಸಂಘವಾಗಿ ಹೊರಹೊಮ್ಮುತ್ತೇವೆ - ಚುಟುಕಾಗಿ ಹೇಳುವದಾದರೆ, "ಒಂದೇ ಆಕಾರದ ಕ್ರೈಸ್ತರು" - ಎರಕ ಹೊಯ್ದು ತಯಾರಿಸಿದಂತೆ, ಎಲ್ಲರೂ ಒಂದೇ ರೀತಿ ಇರುತ್ತೇವೆ! ನಾವೆಲ್ಲರೂ ಉಪಯೋಗಿಸುವ ಧಾರ್ಮಿಕ ಭಾಷೆ ಒಂದೇ ಆಗಿರುತ್ತದೆ, ಮತ್ತು ಈಗ ನಮ್ಮ ನಡುವಿನ ಸಂಬಂಧಕ್ಕೆ ಇದೇ ಆಧಾರವಾಗಿರುತ್ತದೆ.

    ಒಂದು ಸಂಘದಲ್ಲಿ ನಾವು ಬೇರೆ ಬೇರೆ ವರ್ಗಗಳ ಜನರೊಟ್ಟಿಗೆ ಮತ್ತು ಬೇರೆ ಭಾಷೆಗಳವರೊಟ್ಟಿಗೂ ಸಹ ಸೇರಿಕೊಳ್ಳಬಹುದು, ಏಕೆಂದರೆ ಅವರೆಲ್ಲರೂ ಬುದ್ಧಿವಂತಿಕೆಯಲ್ಲಿ ನಮ್ಮ ಹಾಗೇ ಇರುತ್ತಾರೆ. ಆದರೆ ಅಷ್ಟೊಂದು ವಿದ್ಯಾಭ್ಯಾಸ ಮಾಡಿಲ್ಲದ ಅಥವಾ ನಮ್ಮ ಸಿದ್ಧಾಂತಗಳಲ್ಲಿನ ವಿಷಯಗಳನ್ನು ಅರಿಯದ ಯಾರೋ ಒಬ್ಬ ಸಹೋದರ ನಮ್ಮ ಸಭೆಗೆ ಬಂದು ಸೇರಿಕೊಂಡರೆ, ಆಗ ನಾವು ಆತನೊಟ್ಟಿಗೆ ಹೊಂದಿಕೊಳ್ಳುವುದು ಕಷ್ಟವಾಗುತ್ತದೆ. ಹಾಗಾಗಿ, ನಾವು ಆತನನ್ನು ಸ್ವಲ್ಪ ದೂರವಿಡುತ್ತೇವೆ ಮತ್ತು ಕ್ರಮೇಣವಾಗಿ ಆತನು ಹಿಂಜಾರಿ ಬಿದ್ದು, ನಮ್ಮ ಸಂಘವನ್ನು ಬಿಟ್ಟು ಹೋಗುತ್ತಾನೆ. ಅವನು ನಮ್ಮ ಎರಕದ ಅಚ್ಚಿನ ಅಳತೆಗೆ ಸರಿಯಾಗಿ ಇರಲಿಲ್ಲ. ಇಂತಹ ಸಂಘದ ಬುದ್ದಲಿಯು, ಹಳೆಯ ಒಡಂಬಡಿಕೆ ಅಥವಾ ಹೊಸ ಒಡಂಬಡಿಕೆ ಎರಡಕ್ಕೂ ಹೊರತಾಗಿ ಇರುವಂಥದ್ದಾಗಿದೆ. ಅಲ್ಲಿ ಯಾವುದೇ ಒಡಂಬಡಿಕೆ ಇರುವುದಿಲ್ಲ.

    ಸಮೂಹವು ಹಳೆಯ ಒಡಂಬಡಿಕೆಯ ಮೇಲೆ ಆಧಾರಿತವಾಗಿತ್ತು - ಅದರಲ್ಲಿ ಸ್ವಲ್ಪ ದೇವಭಕ್ತಿ ಇತ್ತು, ಆದರೆ ಪರಸ್ವರ ಅನ್ಯೋನ್ಯತೆ ಇರಲಿಲ್ಲ. ನೀವು ಇದನ್ನು ವಿರೋಧಿಸಿ ಅದರಿಂದ ತಿರುಗಿಕೊಳ್ಳಬಹುದು, ಆದರೆ ಕೊನೆಗೆ ನೀವು ಒಡಂಬಡಿಕೆಯೇ ಇಲ್ಲದಿರುವ ಒಂದು ಜೀವನಕ್ಕೆ ಬಂದು ತಲುಪಬಹುದು. ಅನೇಕ ಕ್ರೈಸ್ತರು ಈ ರೀತಿ ಇದ್ದಾರೆ. ದೇವರು ನಮ್ಮನ್ನು ಹಳೆ ಒಡಂಬಡಿಕೆ ಮತ್ತು ಧರ್ಮಶಾಸ್ತ್ರದಿಂದ ಬಿಡುಗಡೆ ಮಾಡಿದ್ದಾನೆ ಎಂಬುದಾಗಿ ಅವರು ಭಾವಿಸುತ್ತಾರೆ, ಆದರೆ ಅವರು ಯಾವ ಒಡಂಬಡಿಕೆಯೂ ಇಲ್ಲದಿರುವ ಪರಿಸ್ಥಿತಿಗೆ ತಲುಪುತ್ತಾರೆ.’ಗಲಾತ್ಯದವರಿಗೆ ಬರೆದ ಪತ್ರಿಕೆ’ ಯಲ್ಲಿ ಪೌಲನು "ಧರ್ಮಶಾಸ್ತ್ರದಿಂದ ಬಿಡುಗಡೆ ಹೊಂದುವ" ಬಗ್ಗೆ ಹೇಳಿರುವದನ್ನು ಇಂತಹ ಜನರು ತಪ್ಪಾಗಿ ಅರ್ಥ ಮಾಡಿಕೊಂಡು, ಈ ಬೋಧನೆಯನ್ನು ಪ್ರೀತಿಸುತ್ತಾರೆ. ಅವರು ಯಾವುದೇ ತರಹದ ಒಡಂಬಡಿಕೆಯನ್ನೂ ಬಯಸುವುದಿಲ್ಲ.

    ಆದರೆ ಒಡಂಬಡಿಕೆಯೇ ಇಲ್ಲದೆ, ಕ್ರಿಸ್ತನೊಟ್ಟಿಗೆ ಮದುವೆ ಕೂಡ ಸಂಭವಿಸುವುದಿಲ್ಲ.

    ನಾನು ನನ್ನ ಹೆಂಡತಿಯನ್ನು ಮದುವೆಯಾದಾಗ, ನಾವು ಒಂದು ಒಡಂಬಡಿಕೆಯನ್ನು ಪ್ರವೇಶಿಸಿದೆವು. ಮದುವೆಯಲ್ಲಿ ಯಾವುದೇ ’ನಿಯಮಗಳ ಪುಸ್ತಕ’ ಇರದಿದ್ದಾಗ್ಯೂ, ಕೆಲವೊಂದು ನಿಯಮಗಳು ಇರುತ್ತವೆ - ಪ್ರೀತಿಯನ್ನು ಆಧರಿಸಿರುವ ನಿಯಮಗಳು. ಉದಾಹರಣೆಗೆ, ದೇವರ ಕೃಪೆಯಿಂದ ನಾನು ಎಂದಿಗೂ ನನ್ನ ಹೆಂಡತಿಗೆ ಮೋಸ ಮಾಡುವುದಿಲ್ಲ. ಇದಕ್ಕೆ ಕಾರಣ, ಯಾವುದೋ ವಿವಾಹದ ನಿಯಮ ಪುಸ್ತಕದಲ್ಲಿ, "ನೀನು ಮದುವೆಯಾದಾಗ ಇದನ್ನು ಮಾಡಬಾರದು ಅಥವಾ ಅದನ್ನು ಮಾಡು" ಎಂದು ನಿಯಮಿಸಿರುವುದರಿಂದ ಅಲ್ಲ. ನಾನು ನನ್ನ ಹೆಂಡತಿಗೆ ನಂಬಿಗಸ್ಥನಾಗಿ ಇರುತ್ತೇನೆ, ಏಕೆಂದರೆ ನಾನು ಆಕೆಯನ್ನು ಪ್ರೀತಿಸುತ್ತೇನೆ. ನಾನು ಆಕೆಗೆ ಯಾವುದೇ ರೀತಿಯಲ್ಲಿ ನೋವು ಆಗದ ಹಾಗೆ ನಡೆದುಕೊಳ್ಳಲು ಬಯಸುತ್ತೇನೆ, ಏಕೆಂದರೆ ನಾನು ಆಕೆಯನ್ನು ಪ್ರೀತಿಸುತ್ತೇನೆ. ಕ್ರಿಸ್ತನೊಟ್ಟಿಗೆ ನಮ್ಮ ವಿವಾಹದಲ್ಲಿಯೂ ಕೆಲವು ನಿಯಮಗಳು ಇವೆ; ಅವುಗಳಿಗೂ ಇದೇ ಆಧಾರವಾಗಿದೆ - ಆತನು ನನ್ನನ್ನು ಮೊದಲು ಪ್ರೀತಿ ಮಾಡಿದನು, ಅಷ್ಟೇ ಅಲ್ಲ, ನಾನೂ ಆತನನ್ನು ಹೃದಯಪೂರ್ವಕವಾಗಿ ಪ್ರೀತಿಸುತ್ತೇನೆ. ಆತನೊಟ್ಟಿಗಿನ ನನ್ನ ಸಂಬಂಧವು ಯಾವುದೇ ನಿಯಮ ಪುಸ್ತಕಗಳ ಮೇಲೆ ಆಧಾರಿತವಾದದ್ದು ಅಲ್ಲ, ಆದರೆ ಪ್ರೀತಿಯೆಂಬ ನಿಯಮದ ಮೇಲೆ ಆಧಾರಿತವಾಗಿದೆ.

    ಆದರೆ ಸಂಘವನ್ನು ಗಮನಿಸಿದರೆ, ಅಲ್ಲಿ ಅನೇಕ ನಿಯಮಗಳು ಇರುತ್ತವೆ. ನೀವು ಸಂಘಕ್ಕೆ ಸೇರಲು ಕೆಲವೊಂದು ನಿಶ್ಚಿತ ಬೇಡಿಕೆಗಳನ್ನು ಪೂರೈಸಬೇಕು - ಇವು ದೇವರ ನಿಯಮಗಳನ್ನೂ ಮೀರುವ ನಿಬಂಧನೆಗಳು - ಕೇವಲ ಮಾನವ ಸಂಪ್ರದಾಯಗಳಿಗೆ ಸಂಬಂಧಿಸಿದವು.

    ನೀವು ದೇವರೊಟ್ಟಿಗೆ ಯಾವುದೇ ಒಡಂಬಡಿಕೆಯನ್ನು ಹೊಂದಿರದಿದ್ದಲ್ಲಿ, ಇತರರೊಂದಿಗಿನ ನಿಮ್ಮ ಸಂಬಂಧದಲ್ಲಿ ನೀವು ನಿಮ್ಮದೇ ಆದ ಒಡಂಬಡಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. "ನೀನು ನನ್ನ ಬೆನ್ನನ್ನು ಕೆರೆಯುತ್ತಿ, ಅದಕ್ಕಾಗಿ ನಾನು ನಿನ್ನ ಬೆನ್ನನ್ನು ಕೆರೆಯುತ್ತೇನೆ. ನೀನು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತೀ ಮತ್ತು ನಾನು ಕೂಡ ನಿನ್ನನ್ನು ಚೆನ್ನಾಗಿ ನಡೆಸಿಕೊಳ್ಳುತ್ತೇನೆ. ಆದರೆ ನೀನು ನನ್ನನ್ನು ಚೆನ್ನಾಗಿ ನಡೆಸಿಕೊಳ್ಳುವುದನ್ನು ನಿಲ್ಲಿಸಿದಾಗ, ನಾನು ಕೂಡ ಹಾಗೇ ಮಾಡುತ್ತೇನೆ''. ಅನೇಕ ವಿಶ್ವಾಸಿಗಳು ಇತರರೊಟ್ಟಿಗೆ ಇದೇ ರೀತಿಯ ಸಂಬಂಧವನ್ನು ಹೊಂದಿದ್ದಾರೆ.

    ಸಂಘವು ಹೇಗಿದ್ದರೂ ಕೆಲವೊಂದು ಇಹಲೋಕದ ಸೌಭಾಗ್ಯಗಳನ್ನು ಕೊಡುತ್ತದೆ. ನೀವು

    "ಸಭೆಯ ಅಧಿವೇಶನಗಳಲ್ಲಿ" ಪಾಲ್ಗೊಳ್ಳಬಹುದು, ನಿಮ್ಮ ಮಕ್ಕಳು ಇತರೆ ಒಳ್ಳೇ ಮಕ್ಕಳನ್ನು ಸಭೆಯಲ್ಲಿ ಭೇಟಿಯಾಗಬಹುದು, ನೀವು ಅಲ್ಲಿ ಮದುವೆಯಾಗಬಹುದು - ಮತ್ತು, ಸಮಯ ಬಂದಾಗ ನಿಮಗೆ ಸೂಕ್ತವಾದ ಶವ ಸಂಸ್ಕಾರವೂ ಸಹ ಅಲ್ಲಿ ದೊರಕುತ್ತದೆ!!

    ಸಂಘ-ಜೀವಿತವು ವಿನಾಶದ ಹಾದಿಯಾಗಿದೆ

    ವಿಶ್ವಾಸಿಗಳು ಇತರರೊಟ್ಟಿಗೆ ಈ ರೀತಿಯಾದ ಸ್ನೇಹವನ್ನು ಮಾತ್ರ ಬೆಳೆಸಿಕೊಂಡಾಗ, ಅವರೆಲ್ಲರೂ ಕೇವಲ ಅಡ್ಡನೆಯ ಹಲಗೆಗಳ ಒಂದು ಸಂಗ್ರಹವಾಗಿದ್ದಾರೆ. ಅವರಲ್ಲಿ ಕೆಲವರಿಗೆ ಸ್ವಲ್ಪಮಟ್ಟಿಗೆ ಕ್ರಿಸ್ತನ ಕುರಿತಾದ ಭಕ್ತಿಭಾವ ಇರಬಹುದು, ಆದರೆ ಆ ಕ್ರಿಸ್ತನ ಸಂಬಂಧವು (ಉದ್ದನೆಯ ಹಲಗೆ) ತುಂಬಾ ಚಿಕ್ಕದಾಗಿರುತ್ತದೆ. ಅನೇಕ ನಿದರ್ಶನಗಳಲ್ಲಿ, ಉದ್ದನೆಯ ಹಲಗೆ ಇರುವುದೇ ಇಲ್ಲ.

    ಕ್ರಿಸ್ತನ ನ್ಯಾಯ ತೀರ್ಪಿನ ಆಸನದ ಮುಂದೆ ನಿಂತು ಕಣ್ತೆರೆದಾಗ, ನೀವು ಕೇವಲ ಒಂದು ಒಳ್ಳೆಯ ಕ್ರಿಸ್ತೀಯ ಸಂಘಕ್ಕೆ ಸೇರಿದ್ದಿರಿ, ಎಂಬುದಾಗಿ ಗ್ರಹಿಸಿಕೊಳ್ಳುವ ಪರಿಸ್ಥಿತಿ ನಿಮ್ಮದಾಗದಿರಲಿ.

    ನೀವು ನಿಮ್ಮ "ಸಭೆಗೆ" ಸೇರಿದ್ದಕ್ಕೆ ಕಾರಣ, ನಿಮ್ಮ ಗಂಡ ಅಥವಾ ಹೆಂಡತಿ ಅಥವಾ ಇನ್ಯಾರೋ ನಿಮ್ಮನ್ನು ಅಲ್ಲಿಗೆ ಎಳೆದು ತಂದಿದ್ದರಿಂದಲಾ? ಅಥವಾ ಅಲ್ಲಿದ್ದ "ಸಂಘದ ವಾತಾವರಣವು" ನಿಮಗೆ ಇಷ್ಟವಾದ್ದರಿಂದ, ಅಂದರೆ, ಒಳ್ಳೇ ಸಂದೇಶಗಳನ್ನು ಕೇಳಿಸಿಕೊಳ್ಳುವ ಅವಕಾಶ ಮತ್ತು ನಿಮ್ಮ ಅಗತ್ಯತೆಯ ಸಮಯದಲ್ಲಿ ನಿಮಗೆ ಅಲ್ಲಿ ಯಾರಾದರೂ ಸಹಾಯ ಮಾಡುತ್ತಾರೆ, ಎಂಬ ಕಾರಣಕ್ಕಾಗಿ ನೀವು ಈ ಸಭೆಗೆ ಸೇರಿಕೊಂಡಿರಾ?

    ನೀವು ಒಳ್ಳೆಯ ಬೋಧನೆಯನ್ನು ಕೇಳುವಾಗ ಅದನ್ನು ಅರ್ಥ ಮಾಡಿಕೊಂಡಿರುವ ಕಾರಣದಿಂದಾಗಿ, ನೀವು ಆತ್ಮಿಕರು ಎಂದು ಯೋಚಿಸಿಕೊಂಡು ಸುಲಭವಾಗಿ ನಿಮ್ಮನ್ನೇ ವಂಚಿಸಿಕೊಳ್ಳಬಹುದು. ಅದಲ್ಲದೆ ಬೇರೆ "ಸಭೆಗಳಿಗಿಂತ" ನಿಮ್ಮ "ಸಭೆ"ಯ ಬೋಧನೆಯು ಬಹಳ ಶ್ರೇಷ್ಠವಾಗಿದೆ ಎಂಬ ಕಾರಣಕ್ಕಾಗಿ ನೀವು ನಿಮ್ಮನ್ನು ಅಭಿನಂದಿಸಿಕೊಳ್ಳಬಹುದು. ಹಾಗಿದ್ದರೂ, ನಿಮ್ಮ ಜೀವನದಲ್ಲಿ ಕ್ರಿಸ್ತನ ಭಕ್ತಿಯೆಂಬ ನೇರವಾದ ಸಂಬಂಧವು ಸ್ವಲ್ಪಮಟ್ಟಿಗೂ ಇಲ್ಲದೇ ಇರಬಹುದು. ಹಾಗಿದ್ದಲ್ಲಿ, ಕ್ರಿಸ್ತನ ನ್ಯಾಯ ತೀರ್ಪಿನ ಆಸನದ ಎದುರು ನೀವು ಒಂದು ಬಹಳ ದುಃಖಕರವಾದ ಆಶ್ಚರ್ಯವನ್ನು ಎದುರಿಸುತ್ತೀರಿ - ಅಂದರೆ, ನೀವು ದೇವರ ರಾಜ್ಯದ ಹೊರಗಡೆ ಇರುವುದಾಗಿ ನೀವು ಕಂಡುಕೊಳ್ಳುವಿರಿ!

    ವಿಮಾನ ನಿಲ್ದಾಣಗಳ ಭದ್ರತಾ-ಪರೀಕ್ಷೆಯ ಸ್ಥಳದಲ್ಲಿ, ಪ್ರಯಾಣಿಕರು ತಮ್ಮ ಬ್ಯಾಗ್‍ಗಳನ್ನು ಇರಿಸುವ ಜಾಗದಲ್ಲಿ (ಕನ್ವೆಯರ್) ಆ ಬ್ಯಾಗ್‍ಗಳನ್ನು ತಪಾಸಣೆ ಮಾಡುವ ಒಂದು ಯಂತ್ರ ಇರುತ್ತದೆ. ಆ ಬ್ಯಾಗ್‍ಗಳು ಪರಿಶೀಲನೆಗಾಗಿ ಅದರ ಒಳಕ್ಕೆ ಕಳುಹಿಸಲ್ಪಟ್ಟು, ಕೊನೆಗೆ ಇನ್ನೊಂದು ಕಡೆಯಿಂದ ಹೊರಗೆ ಬರುತ್ತವೆ. ನಾನು ನನ್ನ ಮನಸ್ಸಿನಲ್ಲಿ, ಕ್ರಿಸ್ತನ ನ್ಯಾಯತೀರ್ಪಿನ ಸ್ಥಾನವನ್ನು ಇದೇ ರೀತಿಯಾಗಿ ಚಿತ್ರಿಸಿಕೊಂಡಿದ್ದೇನೆ. ಆದರೆ ಅಲ್ಲಿ ಪರಿಶೀಲಿಸುವಂತ ಯಂತ್ರ ಇರುವದಿಲ್ಲ, ಅದರ ಜಾಗದಲ್ಲಿ ಒಂದು ದೊಡ್ಡ ಬೆಂಕಿಯ ಕುಲುಮೆ ಇರುತ್ತದೆ! ಮತ್ತು ದೇವರು ಆ ಕುಲುಮೆಯ ಮೂಲಕ ನಮ್ಮ ಜೀವನದ ಚಟುವಟಿಕೆಗಳನ್ನು ಒಂದೊಂದಾಗಿ ಪರಿಶೀಲಿಸುತ್ತಾರೆ. ಆ ಬೆಂಕಿಯ ಕುಲುಮೆಯಿಂದ ಏನು ಹೊರಗೆ ಬರುತ್ತದೆ ಎನ್ನುವದು, ನಾವು ಈ ಭೂಮಿಯ ಮೇಲಿನ ಜೀವನದಲ್ಲಿ ಹೇಗೆ ಜೀವಿಸಿದ್ದೆವು, ಎಂಬುದರ ಮೇಲೆ ಅವಲಂಬಿಸುತ್ತದೆ. 1 ಕೊರಿಂಥ 3:13-15 ರಲ್ಲಿ ವಿವರಿಸಿರುವಂತೆ, ಆ ಜಾಗದಲ್ಲಿ ಅನೇಕ ವಿಶ್ವಾಸಿಗಳು ಮಾಡಿದ ಪ್ರತಿಯೊಂದು ಕಾರ್ಯವೂ ಸುಡಲ್ಪಡುತ್ತದೆ - ಏಕೆಂದರೆ ಅವು ಕಟ್ಟಿಗೆ, ಹುಲ್ಲು ಮತ್ತು ಕಡ್ಡಿಗಳಾಗಿದ್ದವು. ಅವೆಲ್ಲವೂ ಸುಟ್ಟು ನಷ್ಟವಾಗುತ್ತವೆ, ಮತ್ತೊಂದು ಕಡೆಯಿಂದ ಏನೂ ಬರುವುದಿಲ್ಲ. ಅನೇಕ ವರ್ಷಗಳ ಕಾಲ ಒಳ್ಳೆಯ "ಸಭೆಗಳಲ್ಲಿ" ಕುಳಿತಿದ್ದ ಹಲವರು, ತಮ್ಮ ಇಹಲೋಕದ ಇಡೀ ಜೀವಿತವನ್ನು ಸಂಪೂರ್ಣವಾಗಿ ವ್ಯರ್ಥ ಮಾಡಿಕೊಂಡದ್ದನ್ನು ಅರಿತುಕೊಂಡು, ಆ ದಿನದಲ್ಲಿ ಎದೆಗುಂದುತ್ತಾರೆ.

    ಅನೇಕ ವರ್ಷಗಳ ಕಾಲ ಒಳ್ಳೆಯ "ಸಭೆಗಳಿಗೆ" ಹಾಜರಾಗಿ, ಅದ್ಭುತ ಸಂದೇಶಗಳನ್ನು (ಅವರ "ಸಭೆಗಳಲ್ಲಿ" ಮತ್ತು ಅಂತರ್ಜಾಲದ ಮೂಲಕ ಆನ್-ಲೈನ್‍ನಲ್ಲಿ) ಕೇಳಿರುವ ಅನೇಕರಿಗೆ ಕರ್ತರು, "ನಿಮ್ಮ ಇಹಲೋಕದ ಜೀವನವನ್ನು ವ್ಯರ್ಥ ಮಾಡಿಕೊಂಡಿರಿ, ಏಕೆಂದರೆ ವೈಯಕ್ತಿಕವಾಗಿ ನಿಮ್ಮಲ್ಲಿ ನನ್ನ ಭಯಭಕ್ತಿ ಇರಲಿಲ್ಲ. ನಾನು ನಿಮ್ಮನ್ನು ’ಗುರುತಿಸಲಿಲ್ಲ’ ಮತ್ತು ನೀವು ನನ್ನನ್ನು ’ಅರಿತುಕೊಳ್ಳಲಿಲ್ಲ’. ನೀವು ನನ್ನೊಂದಿಗೆ ಯಾವತ್ತೂ ಅನ್ಯೋನ್ಯವಾಗಿ ನಡೆಯಲಿಲ್ಲ. ನೀವು ಯಾವತ್ತೂ ನಿಮ್ಮ ಶಿಲುಬೆಯನ್ನು ಹೊರಲಿಲ್ಲ" (ಮತ್ತಾಯ 7:22-23) ಎಂದು ಹೇಳುತ್ತಾರೆ. ಅದು ಎಷ್ಟು ದುಃಖಕರ ಗಳಿಗೆಯಾಗಿರುತ್ತದೆ.

    ಭದ್ರತೆ ಕರ್ತನಿಂದಲೋ ಅಥವಾ ಸಭೆಯಿಂದಲೋ?

    ಯೇಸು ಕ್ರಿಸ್ತನ ಸಭೆಯು ನಾನು ಭೂಲೋಕದಲ್ಲಿ ಅತೀ ಹೆಚ್ಚಾಗಿ ಹರ್ಷಿಸುವಂತ ಸ್ಥಳವಾಗಿದೆ. ನಾನು ನನ್ನ ಹೃದಯದ ಅಂತರಾಳದಿಂದ ಈ ಮಾತನ್ನು ಹೇಳುವವನಾಗಿದ್ದೇನೆ. ಭಕ್ತರ ಅನ್ಯೋನ್ಯತೆಯು ಬಹಳ ಸಿಹಿಯಾಗಿದೆ. ಆದರೆ ಅದು ಎಂದಿಗೂ ನನ್ನ ಪರಲೋಕದ ತಂದೆಯೊಂದಿಗೆ ಮತ್ತು ಯೇಸುವಿನೊಂದಿಗೆ ನನ್ನ ಅನ್ಯೋನ್ಯತೆಗಿಂತ ಹೆಚ್ಚಿನದ್ದು ಆಗುವದಿಲ್ಲ. ಯೇಸುವಿನೊಟ್ಟಿಗೆ ಮತ್ತು ಪರಲೋಕದ ತಂದೆಯೊಟ್ಟಿಗೆ ನಾನು ಅನುಭವಿಸುವ ಅನ್ಯೋನ್ಯತೆಗೆ ನನ್ನ ಇಹಲೋಕದ ಜೀವನದಲ್ಲಿ ಎಂದಿಗೂ ತಡೆ ಉಂಟಾಗುವುದಿಲ್ಲ ಮತ್ತು ನಿತ್ಯತ್ವದ ಉದ್ದಕ್ಕೂ ಇದು ಮುಂದುವರೆಯಲಿದೆ. ಮತ್ತು ಈಗಲೂ ಈ ಅನ್ಯೋನ್ಯತೆಯೇ ನಾನು ದೇವಜನರೊಂದಿಗೆ ಹೊಂದಿರುವ ಐಕ್ಯತೆಗೆ ಮೂಲಕಾರಣವಾಗಿದೆ.

    ಆದರೆ ಸಂಘದ ಜನರು ತಮ್ಮ ಸುಭದ್ರತೆಯನ್ನು ಆ ಸಂಘದಲ್ಲೇ ಕಂಡುಕೊಳ್ಳುತ್ತಾರೆಯೇ ಹೊರತು, ಕರ್ತನಲ್ಲಿ ಕಂಡುಕೊಳ್ಳುವುದಿಲ್ಲ. ದೈವಿಕ ಮನುಷ್ಯರಿಂದ ಬೋಧನೆಯನ್ನು ಕೇಳಿಸಿಕೊಳ್ಳುವುದರಲ್ಲಿ ಭದ್ರತೆಯನ್ನು ಕಂಡುಕೊಳ್ಳುತ್ತಾರೆ. ನೀವು ಈ ವರ್ಷದಲ್ಲಿ ನೂರಾರು ಸಂದೇಶಗಳನ್ನು ಕೇಳಿರಬಹುದು. ಆದರೆ ಅದು ನಿಮ್ಮನ್ನು ಯೇಸುವಿನ ನಿಜವಾದ ಶಿಷ್ಯನಾಗಿ ಮಾಡುವುದಿಲ್ಲ.

    ಸಂಘದ ಜನರಲ್ಲಿ ಕಾಣಿಸುವ ಇನ್ನೊಂದು ಅಂಶ ಏನೆಂದರೆ, ಇತರರು ತಮ್ಮನ್ನು ಯಾವಾಗಲೂ ಬಹಳ ಕೋಮಲವಾಗಿ ನಡೆಸಿಕೊಳ್ಳಬೇಕು ಮತ್ತು ಉಪಚರಿಸಬೇಕು ಎಂಬ ನಿರೀಕ್ಷೆ; ಮತ್ತು ಅವರನ್ನು "ಒಬ್ಬ ವಿಶೇಷ ವ್ಯಕ್ತಿಯಾಗಿ" ನೋಡಿಕೊಳ್ಳದೇ ಹೋದರೆ, ಅವರು ಸುಲಭವಾಗಿ ನೊಂದುಕೊಳ್ಳುತ್ತಾರೆ. ಅವರು ಮನುಷ್ಯರಿಂದ ಗೌರವವನ್ನು ಮತ್ತು ಮೆಚ್ಚುಗೆಯನ್ನು ನಿರೀಕ್ಷಿಸುತ್ತಾರೆ. ಎಲ್ಲರ ಮುಂದೆ ತಾವು ಕಾಣಿಸಬೇಕೆಂದು ಬಯಸುತ್ತಾರೆ ಮತ್ತು ಇತರರು ತಮ್ಮನ್ನು ಚೆನ್ನಾಗಿ ನಡೆಸಿಕೊಳ್ಳಬೇಕೆಂಬ ಅಪೇಕ್ಷೆಯನ್ನು ಹೊಂದಿರುತ್ತಾರೆ. ಒಂದು ವೇಳೆ ಒಬ್ಬ ಸಭಾ ಹಿರಿಯರು ಅವರನ್ನು ತಿದ್ದಿದರೆ, ಅವರು ತಕ್ಷಣವೇ ನೊಂದುಕೊಳ್ಳುತ್ತಾರೆ ಮತ್ತು ಕ್ರಮೇಣ ಸಂಘವನ್ನು ಬಿಟ್ಟುಹೋಗುತ್ತಾರೆ!

    ಕರ್ತನು ನನಗೆ ತೋರಿಸಿಕೊಟ್ಟಿರುವ ವಿಷಯ ಏನೆಂದರೆ, ಒಂದು ವೇಳೆ ಒಬ್ಬ ದೈವಿಕ ಹಿರಿಯ ಸಹೋದರನು ನನ್ನನ್ನು ತಿದ್ದಿದಾಗ ನಾನು ಎಂದಾದರೂ ನೊಂದುಕೊಂಡರೆ, ನಾನು "ಸಂಘ"ದ ಕ್ರೈಸ್ತನಾಗಿದ್ದೇನೆ ಎಂಬುದನ್ನು ಅದು ರುಜುವಾತುಪಡಿಸುತ್ತದೆ. ನನ್ನ ಸುತ್ತಲೂ ಇರುವವರು ಕ್ರಿಸ್ತನ ನಿಜವಾದ ಜೀವವನ್ನು ಅನುಭವಿಸುತ್ತಿರಬಹುದು, ಆದರೆ ನಾನು ವರ್ಷಾನುಗಟ್ಟಲೆ ಅವರೊಂದಿಗೆ ಇದ್ದರೂ, ಕ್ರಿಸ್ತನ ನ್ಯಾಯತೀರ್ಪಿನ ಆಸನದ ಮುಂದೆ, ನಾನು ಒಂದು ಸಂಘದ ಒಳ್ಳೆಯ ಸದಸ್ಯನಾಗಿದ್ದೆ ಅಷ್ಟೇ, ಎಂದು ಕಂಡುಕೊಳ್ಳಬಹುದು. ನಾವು ತಿದ್ದುವಿಕೆ ಅಥವಾ ಗದರಿಕೆಯಿಂದ ನೊಂದುಕೊಳ್ಳದಂತೆ ದೇವರು ನಮ್ಮನ್ನು ರಕ್ಷಿಸಲಿ.

    ಸಭೆಯಲ್ಲಿ ನಮ್ಮನ್ನು ಪ್ರೀತಿಸುವಂತ, ದೇವರ ವಾಕ್ಯವನ್ನು ಪ್ರೀತಿಯಿಂದ ಹಂಚುವಂತ ಸಭಾ ಹಿರಿಯರು ಮತ್ತು ಇತರ ದೈವಿಕ ಹಿರಿಯ ಸಹೋದರರನ್ನು ದೇವರು ನಮಗೆ ಕೊಟ್ಟಿದ್ದಾರೆ. ಅವರು ಬೆತ್ತವನ್ನು ಉಪಯೋಗಿಸಲು ಹಿಂಜರಿಯುವುದಿಲ್ಲ, ಏಕೆಂದರೆ ತಮ್ಮ ಮಕ್ಕಳನ್ನು ಪ್ರೀತಿಸುವಂತ ತಂದೆಗಳು ಬೆತ್ತವನ್ನು ತಪ್ಪದೆ ಬಳಸುತ್ತಾರೆಂದು ಅವರು ತಿಳಕೊಂಡಿದ್ದಾರೆ. ನಮ್ಮ ಪರಲೋಕದ ತಂದೆಯು ನಮ್ಮನ್ನು ಪ್ರೀತಿಸುವ ಹಾಗೆ, ಇಂತಹ ಸಭಾ ಹಿರಿಯರು ನಮ್ಮನ್ನು ಪ್ರೀತಿಸುತ್ತಾರೆ. ಒಂದು ವೇಳೆ ಅಂತಹ ದೈವಿಕ ಸಹೋದರರು ನಿಮಗೆ ಏನಾದರೂ ಹೇಳಿದಾಗ ನೀವು ತಿರುಗಿಬಿದ್ದರೆ ಅಥವಾ ನೊಂದುಕೊಂಡರೆ, ನೀವು ಸಂಘದ ಮನೋಭಾವವನ್ನು ಹೊಂದಿದ್ದೀರಿ ಎಂದು ಅದು ಸ್ಪಷ್ಟವಾಗಿ ತೋರಿಸುತ್ತದೆ.

    ಇದರ ಅಂತಿಮ ಫಲಿತಾಂಶ, ಆತ್ಮಿಕ ಬೆಳವಣಿಗೆಯ ಕೊರತೆಯಾಗಿರುತ್ತದೆ. ಮತ್ತು, ಒಂದು ವೇಳೆ ನಿಮ್ಮ ಜೀವನದಲ್ಲಿ ಆತ್ಮಿಕ ಬೆಳವಣಿಗೆ ಇಲ್ಲವಾದರೆ, ನೀವು ಹಿಂಜಾರುತ್ತಿದ್ದೀರಿ. ಕ್ರಿಸ್ತೀಯ ಜೀವನದಲ್ಲಿ ಬದಲಾವಣೆ ಇಲ್ಲದೆ, ಇದ್ದ ಹಾಗೇ ಇರುವದು ಅಸಾಧ್ಯವಾದ ವಿಷಯ. ಒಬ್ಬ ದೈವಿಕ ಹಿರಿಯ ಸಹೋದರನು ನಮ್ಮನ್ನು ಖಂಡಿಸಿದಾಗ, ನಾವು ನೊಂದುಕೊಂಡು ಬೇಸರಗೊಂಡರೆ, ನಿಶ್ಚಯವಾಗಿ ನಾವು ಹಿಂಜಾರಿ ಬೀಳುವಂತ ಸ್ಥಿತಿಯಲ್ಲಿ ಇದ್ದೇವೆ - ಬಹುಶಃ ನಾವು ನರಕದ ಮಾರ್ಗದಲ್ಲಿ ಇದ್ದೇವೆ.

    ಇಬ್ರಿಯ 12:5-8ರಲ್ಲಿನ ವಾಕ್ಯವು ನಮ್ಮ ಪರಲೋಕದ ತಂದೆಯ ಶಿಕ್ಷೆ ಮತ್ತು ಶಿಸ್ತನ್ನು ಪ್ರೀತಿಸುವಂತೆ ನಮ್ಮನ್ನು ಪ್ರೋತ್ಸಾಹಿಸುತ್ತದೆ, ಏಕೆಂದರೆ ಅವರು ನಮ್ಮನ್ನು ಪ್ರೀತಿಸುವದರಿಂದ ಹಾಗೆ ಮಾಡುತ್ತಾರೆ. ಅದೇ ರೀತಿ, ತಂದೆಯ ಹೃದಯವನ್ನು ಹೊಂದಿರುವ ಸಭೆಯ ಹಿರಿಯರು ಸಹ (ಪೌಲನಂತೆ ಇರುವವರು, 1 ಕೊರಿಂಥ 4:14,15ರಲ್ಲಿ ವಿವರಿಸಿರುವ ಹಾಗೆ) ನಾವು ಹಿಂಜಾರಬಾರದು ಮತ್ತು ಕಳೆದುಹೋಗಬಾರದು ಎಂಬ ಕಾರಣಕ್ಕಾಗಿ, ನಮ್ಮನ್ನು ಪ್ರೀತಿಯಿಂದ ತಿದ್ದುತ್ತಾರೆ. ಆ ತಿದ್ದುವಿಕೆಯಿಂದ ನಾವು ಅಸಮಾಧಾನಗೊಂಡರೆ, ಅದು ನಾವು ಸಂಘದ ಮನೋಸ್ಥಿತಿಯನ್ನು ಹೊಂದಿರುವದನ್ನು ಸೂಚಿಸುತ್ತದೆ. ಅಂತಿಮವಾಗಿ, ನಾವು ಸೋಲನ್ನು ಅನುಭವಿಸುತ್ತೇವೆ.

    ಅಧ್ಯಾಯ 6
    ನಿಜವಾದ ಸಭೆ

    ಹೊಸ ಒಡಂಬಡಿಕೆಯಲ್ಲಿ ಅನೇಕ ಹೊಸ ಪದಗಳು ಕಾಣಸಿಗುತ್ತವೆ - ಇವು ಹಳೆಯ ಒಡಂಬಡಿಕೆಯಲ್ಲಿ ಎಂದಿಗೂ ಕಾಣದಂಥವುಗಳು. ’ಅನ್ಯೋನ್ಯತೆ’ ಅಂಥದೊಂದು ಪದವಾಗಿದೆ.

    ಪಂಚಾಶತ್ತಮ ದಿನದಂದು ಉಂಟಾದ ಅದ್ಭುತವಾದ ಉಜ್ಜೀವನದಲ್ಲಿ ಮೂರು ಸಾವಿರ ಜನರು ಹೊಸದಾಗಿ ಹುಟ್ಟಿದರು, ಆದರೆ ಶಿಷ್ಯರು ಮುಂದಿನ ಹತ್ತು ದಿನಗಳ ತನಕ ಉಜ್ಜೀವನ ಕೂಟಗಳ ಶಿಬಿರಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಿಲ್ಲ. ಈಗಿನ ಕಾಲದಲ್ಲಿ ಜನರು ಇಂಥದ್ದನ್ನೇ ಮಾಡುತ್ತಾರೆ! ಆದರೆ ದೇವರು ಆ ಶಿಷ್ಯರಿಗೆ "ಉಜ್ಜೀವನ ಕೂಟಗಳನ್ನು" ಮಾಡಲು ಹೇಳದೇ, ಹೋಗಿ ಕರ್ತನ ಸಭೆಯನ್ನು ಕಟ್ಟುವಂತೆ ಹೇಳಿದನು.

    ಅ.ಕೃ 2:42ರಲ್ಲಿ ನಾವು ಹೀಗೆ ಓದುತ್ತೇವೆ, "ಅವರು ಅನ್ಯೋನ್ಯತೆಯಲ್ಲಿ ನಿರತರಾಗಿದ್ದರು." ಇಲ್ಲಿ ಈ ಪದವು ಸತ್ಯವೇದದಲ್ಲಿ ಮೊಟ್ಟಮೊದಲ ಬಾರಿಗೆ ಉಪಯೋಗಿಸಲ್ಪಟ್ಟಿದೆ*! ಅನ್ಯೋನ್ಯತೆಯೆಂಬುದು ಗ್ರೀಕ್ ಪದ "ಕೊಯಿನೊನಿಯಾ" ಎಂಬುದರಿಂದ ಭಾಷಾಂತರಿಸಲಾಗಿದೆ, ಇದರ ಅರ್ಥ, "ಒಟ್ಟಾಗಿ ಹಂಚಿಕೊಳ್ಳುವುದು".

    ______________________

    * ವಿ.ಸೂ.: ಕೀರ್ತನೆ 55:14ರ ಕೆಲವು ಭಾಷಾಂತರಗಳಲ್ಲಿ ಬಳಸಲಾದ ಇಬ್ರಿಯ ಭಾಷೆಯ ಪದವು "ಸಂಭಾಷಣೆ" ಎಂಬ ಅರ್ಥವನ್ನು ಹೊಂದಿದೆ, "ಅನ್ಯೋನ್ಯತೆ" ಅಲ್ಲ.

    ಸಭೆ

    * ಹೊಸ ಪದಗಳು : "ಅನ್ಯೋನ್ಯತೆ", "ದೇಹ"

    (ಅ.ಕೃ 2:42, 1 ಕೊರಿಂಥ 12:27)
  • * ಬುದ್ದಲಿ: ಹೊಸ ಒಡಂಬಡಿಕೆ
  • * ಪವಿತ್ರಾತ್ಮನ ಮೂಲಕ ನಮ್ಮ ಅಂತರಂಗದಲ್ಲಿ ಪ್ರೀತಿರಸವು ತುಂಬಿದಾಗ, ದೇವರ ಕಡೆಗೆ ಮತ್ತು ಬೇರೆಯವರ ಕಡೆಗೆ ಪೀತಿಯು ತುಂಬಿ ಹರಿಯುತ್ತದೆ (ರೋಮ 5:5)
  • * ಶಿಲುಬೆಯ ಮೂಲಕ ಆತ್ಮಿಕ ಐಕ್ಯತೆ (ಎಫೆಸ 2:14-16)
  • * ಹೃದಯದೊಳಗೆ, ನಂಬಿಗಸ್ಥನಾಗಿ ನಾನು ನನ್ನ ಚಿತ್ತವನ್ನು ನಿರಾಕರಿಸುತ್ತೇನೆ...
  • * ಪವಿತ್ರಾತ್ಮನು ಸ್ವಚಿತ್ತವನ್ನು ನಿರಾಕರಿಸುವ ಇತರರ ಜೊತೆಗೆ ನನ್ನನ್ನು ಒಂದು ಆತ್ಮಿಕ ದೇಹವಾಗಿ ಜೋಡಿಸುತ್ತಾನೆ
  • ಶಿಲುಬೆಯಿಂದ ಹರಿದು ಬರುವ ಪ್ರೀತಿ

    ಆ ಶಿಷ್ಯರು ಪವಿತ್ರಾತ್ಮನಿಂದ ತುಂಬಲ್ಪಟ್ಟ ನೇರ ಪರಿಣಾಮ ಈ ’ಅನ್ಯೋನ್ಯತೆ’ಯಾಗಿತ್ತು. ಆದರೆ ಕ್ರೈಸ್ತರು ಇಂದಿನ ದಿನಗಳಲ್ಲಿ ಪವಿತ್ರಾತ್ಮನಿಂದ ತುಂಬಲ್ಪಟ್ಟಿದ್ದೇವೆಂದು ಹೇಳುವಾಗ, ಅದರ ಪರಿಣಾಮವನ್ನು ಈ ರೀತಿಯಾಗಿ ವಿವರಿಸುತ್ತಾರೆ, "ನಾನು ಅನ್ಯ ಭಾಷೆಯಲ್ಲಿ ಮಾತನಾಡಿದೆ", ಅಥವಾ "ನಾನು ಅನಾರೋಗ್ಯವಾಗಿದ್ದ ಒಬ್ಬ ವ್ಯಕ್ತಿಗಾಗಿ ಪ್ರಾರ್ಥಿಸಿದೆ ಮತ್ತು ಆತನು ಗುಣಹೊಂದಿದನು (ಕನಿಷ್ಟ ಪಕ್ಷ, ಆತನು ಗುಣಹೊಂದಿದನೆಂದು ನಾನು ನಂಬುತ್ತೇನೆ!)", ಅಥವಾ "ನಾನೀಗ ಬಹಳ ನಿಪುಣತೆಯಿಂದ ಪ್ರಸಂಗಿಸುತ್ತೇನೆ", ಇತ್ಯಾದಿ..

    ಆದರೆ ಪಂಚಾಶತ್ತಮ ದಿನದಂದು, ಅವರು ಪವಿತ್ರಾತ್ಮನಿಂದ ತುಂಬಲ್ಪಟ್ಟಾಗ, ಅವರು ಉಜ್ಜೀವನ ಕೂಟದಿಂದ ಹೊರಟು ಹೋಗಿ, ಪರಸ್ಪರ ಅನ್ಯೋನ್ಯತೆಯಲ್ಲಿ ನಿರತರಾಗಿದ್ದರು (ಅ.ಕೃ 2:42) ಎಂದು ನಾವು ಓದುತ್ತೇವೆ. ಅದು ಪವಿತ್ರಾತ್ಮನಿಂದ ತುಂಬಲ್ಪಟ್ಟದ್ದರ ಪ್ರಾಥಮಿಕ ಪರಿಣಾಮ ಆಗಿರಬೇಕು.

    ನಾವು 1 ಕೊರಿಂಥ 12:13ರಲ್ಲಿ ಓದುವಂತೆ, "ನಾವೆಲ್ಲರು ಒಂದೇ ದೇಹವಾಗುವದಕ್ಕಾಗಿ ಒಬ್ಬನೇ ಆತ್ಮನಿಂದ ದೀಕ್ಷಾಸ್ನಾನ ಮಾಡಿಸಿಕೊಂಡೆವು". ಸಭೆಯನ್ನು ಇಲ್ಲಿ ಒಂದು ಸಮೂಹ ಅಥವಾ ಒಂದು ಸಂಘ ಎಂದು ಹೇಳಲಾಗಿಲ್ಲ, ಆದರೆ ಒಂದು ದೇಹವೆಂದು ವಿವರಿಸಲಾಗಿದೆ."ನೀವು ಕ್ರಿಸ್ತನ ದೇಹವಾಗಿದ್ದೀರಿ ಮತ್ತು ಒಬ್ಬೊಬ್ಬರಾಗಿ ಅದರ ಅಂಗಗಳಾಗಿದ್ದೀರಿ" (1 ಕೊರಿಂಥ 12:27).

    ಈ ದೇಹವನ್ನು ಶಿಲುಬೆಯ ತಳಹದಿಯ ಮೇಲೆ ಕಟ್ಟಲಾಗಿದೆ. ಈ ಬುದ್ದಲಿಯು ಹೊಸ ಒಡಂಬಡಿಕೆಯ ಸಭೆಯಾಗಿದೆ. ಸಮೂಹವೆಂಬುದು ಹಳೆಯ ಒಡಂಬಡಿಕೆಯಲ್ಲಿ ಬರುವ ವಿಷಯ. ಸಂಘದಲ್ಲಿ ಯಾವುದೇ ಒಡಂಬಡಿಕೆ ಇರುವುದಿಲ್ಲ. ಆದರೆ ನಿಜವಾದ ಸಭೆಯೆಂಬುದು ಹೊಸ ಒಡಂಬಡಿಕೆಯ ಮೇಲೆ ಕಟ್ಟಲ್ಪಟ್ಟಿದೆ.

    ಇತ್ತೀಚಿನ ದಿನಗಳಲ್ಲಿ ನಾವು ’ಒಡಂಬಡಿಕೆ’ ಎನ್ನುವ ಪದವನ್ನು ಹೆಚ್ಚಾಗಿ ಉಪಯೋಗಿಸುವುದಿಲ್ಲ. ಈ ಪದದ ಅರ್ಥ, ಕ್ರಿಸ್ತೇಸುವಿನ ಸಭೆಯನ್ನು ಕಟ್ಟುತ್ತಿರುವವರ ಮಧ್ಯದಲ್ಲಿರುವ ಒಂದು ಒಪ್ಪಂದ ಮತ್ತು ಬದ್ಧತೆ (ಕೊಟ್ಟಿರುವ ಮಾತು). ಇವರು ಮೊದಲನೆಯದಾಗಿ ತಮ್ಮ ಮದಲಿಂಗನಾದ ಕರ್ತನಿಗೆ ಬದ್ಧರಾಗಿರುತ್ತಾರೆ, ಆ ಮೇಲೆ ಪರಸ್ಪರ ಬದ್ಧರಾಗಿರುತ್ತಾರೆ. ಇಲ್ಲಿ ಶಿಲುಬೆಯ ಎರಡೂ ಭಾಗಗಳನ್ನು ನೀವು ನೋಡಬಹುದು, ಅವು ಯಾವುದೆಂದರೆ - ಲಂಬವಾಗಿ ನಿಂತಿರುವ ಶಿಲುಬೆಯ ಭಾಗ ಮತ್ತು ಅಡ್ಡವಾಗಿರುವ ಇನ್ನೊಂದು ಭಾಗ. ಮೊದಲನೆಯದಾಗಿ ಅವರು ಕರ್ತನನ್ನು ಅತ್ಯಾಸಕ್ತಿಯಿಂದ ಪ್ರೀತಿಸುತ್ತಾರೆ, ಮತ್ತು ಆ ಮೇಲೆ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೆ.

    ಒಂದು ಸ್ಥಳೀಯ ಸಭೆಯಲ್ಲಿ "ರೊಟ್ಟಿ ಮುರಿಯುವ" ಸಂದರ್ಭವು ಇದನ್ನೇ ಸಾಂಕೇತಿಕವಾಗಿ ತೋರಿಸುತ್ತದೆ. ಇದರ ಮೂಲಕ ಕರ್ತನ ಜೊತೆ ನಾವು ಅನ್ಯೋನ್ಯತೆಯನ್ನು ಹೊಂದಿರುವದನ್ನು ಮತ್ತು ಆತನು ತನ್ನ ಸ್ವಚಿತ್ತಕ್ಕೆ ಸತ್ತಂತೆ ನಾವು ಸಹ ಸಾಯಲು ಬಯಸುತ್ತೇವೆಂದು ಹೇಳುತ್ತೇವೆ (1 ಕೊರಿಂಥ 11:26-28). ಅದಲ್ಲದೆ ಇದರ ಮೂಲಕವಾಗಿ ಕ್ರಿಸ್ತನ ದೇಹದ ಅಂಗಗಳಾಗಿ ನಾವು ಪರಸ್ಪರ ಅನ್ಯೋನ್ಯತೆಯನ್ನು ಹೊಂದಿರುವದನ್ನೂ ಸಹ ತೋರಿಸಿಕೊಡುತ್ತೇವೆ (1 ಕೊರಿಂಥ 10:16,17). ಆದ್ದರಿಂದ ಒಂದೇ ರೊಟ್ಟಿ ಇರುತ್ತದೆ, ಮತ್ತು ನಾವೆಲ್ಲರು ಒಟ್ಟಿಗೆ ಅದರಲ್ಲಿ ಪಾಲುಗಾರರಾಗಿದ್ದೇವೆ.

    ನಮ್ಮ ನಡುವಿನ ಪ್ರೀತಿ ನಾವು ಯಾರನ್ನು ಇಷ್ಟಪಡುತ್ತೇವೊ ಅವರನ್ನು ಮಾತ್ರ ಪ್ರೀತಿಸುವಂಥ ಮನುಷ್ಯ ಮಾತ್ರದ್ದು ಆಗಿರಬಾರದು - "ನನಗೆ ನೀನು ಇಷ್ಟ, ಹಾಗೂ ನಿನಗೆ ನಾನು ಇಷ್ಟ, ನಾವಿಬ್ಬರೂ ಒಂದು ಒಳ್ಳೆಯ ಕುಟುಂಬವಾಗಿದ್ದೇವೆ!" ನಿಜವಾದ ಪ್ರೀತಿಯು ಇಂಥದ್ದಲ್ಲ. ಅದು ನಮಗೆ ಕರ್ತನ ಮೇಲಿರುವ ಪ್ರೀತಿಯ ದೆಸೆಯಿಂದ ಬರುವ ಪ್ರೀತಿಯಾಗಿದೆ.

    ಹಾಗೆಯೇ, ದಾರಿ ತಪ್ಪಿದ ಜನರಿಗೆ ಸುವಾರ್ತೆ ಸಾರಲೇಬೇಕೆಂಬ ಮಾನವೀಯ ಪ್ರೀತಿ ಹೊಂದಿಕೊಂಡು ಸುವಾರ್ತಾ ಪ್ರಚಾರಕರಾಗಿ ಹೋಗಬಾರದು. ಈ ಜನರಿಗೆ ಸುವಾರ್ತೆ ಸಾರಬೇಕೆಂಬ ಪ್ರೀತಿಯು ಮುಖ್ಯವಾಗಿ ನಮಗೆ ಕರ್ತನ ಮೇಲಿರುವ ಪ್ರೀತಿಯಿಂದ ಪ್ರೇರಿತವಾಗಬೇಕು.

    ಕರ್ತನಿಗಾಗಿ ಮತ್ತು ಜನರಿಗಾಗಿ ಇಂಥಹ ಪ್ರೀತಿಯು, ಪವಿತ್ರಾತ್ಮನ ಮೂಲಕ ನಮ್ಮ ಹೃದಯದೊಳಕ್ಕೆ ಸುರಿಯಲ್ಪಡುತ್ತದೆ (ರೋಮ. 5:5).

    ನಿಜವಾದ ಸಭೆಯನ್ನು ಕಟ್ಟುವುದು

    ನಾನು ಹಳೆ ಒಡಂಬಡಿಕೆಯ ಪವಿತ್ರಾತ್ಮನ ಸೇವೆ ಮತ್ತು ಹೊಸ ಒಡಂಬಡಿಕೆಯ ಪವಿತ್ರಾತ್ಮನ ಸೇವೆಯ ನಡುವಿನ ವ್ಯತ್ಯಾಸದ ಬಗ್ಗೆ ನನ್ನ ತಂದೆ (ಜಾಕ್ ಪೂನನ್) ಒಂದು ಉದಾಹರಣೆ ಕೊಡುವದನ್ನು ಕೇಳಿದ್ದೇನೆ: ಹಳೆ ಒಡಂಡಿಕೆಯಲ್ಲಿ, ಮನುಷ್ಯನ ಹೃದಯವು ಒಂದು ಮುಚ್ಚಿದ ಬಟ್ಟಲಿನಂತಿತ್ತು (ಇದು ಯೆಹೂದ್ಯರ ದೇವಾಲಯದಲ್ಲಿ ಪರದೆಯಿಂದ ಮುಚ್ಚಲ್ಪಟ್ಟ ಅತೀ ಪವಿತ್ರ ಸ್ಥಳಕ್ಕೆ ಹೋಲಿಕೆಯಾಗಿದೆ). ಈ ಮುಚ್ಚಿದ ಬಟ್ಟಲಿನ ಮೇಲೆ ಪವಿತ್ರಾತ್ಮನು ಸುರಿಯಲ್ಪಟ್ಟಾಗ, ಆತನು ಆ ಮುಚ್ಚಳದ ಮೇಲಿಂದ ಹರಿದು ಅನೇಕರನ್ನು ಆಶೀರ್ವದಿಸುವ ನದಿಗಳಾದನು - ಪವಿತ್ರಾತ್ಮನು ಮೋಶೆ, ಸ್ನಾನಿಕನಾದ ಯೋಹಾನನ ಮತ್ತು ಇತರರ ಮುಖಾಂತರ ಹೀಗೆ ಕಾರ್ಯ ಮಾಡಿದನು.

    ಆದರೆ ಹೊಸ ಒಡಂಬಡಿಕೆಯಲ್ಲಿ, ಈ ಮುಚ್ಚಳವು ತೆಗೆಯಲ್ಪಟ್ಟಿದೆ (2 ಕೊರಿಂಥ 3: 12-18). ಇದರ ಸಂಕೇತ - ಯೇಸುವು ಸತ್ತಾಗ ದೇವಾಲಯದ ಪರದೆಯು ಹರಿದು ಹೋಯಿತು, ಮತ್ತು ಅತೀ ಪರಿಶುದ್ಧ ಸ್ಥಳಕ್ಕೆ ಪ್ರವೇಶಿಸಲು ಸಾಧ್ಯವಾಗಿದೆಯೆಂದು ಇದು ತಿಳಿಸಿತು. ಈಗ, ಪವಿತ್ರಾತ್ಮನು ಸುರಿಯಲ್ಪಡುವಾಗ ಆತನು ಮೊದಲು ಪಾತ್ರೆಯನ್ನು ತುಂಬುತ್ತಾನೆ - ಮೊದಲು ವಿಶ್ವಾಸಿಯ ಹೃದಯವನ್ನು ಶುಚಿಗೊಳಿಸುತ್ತಾನೆ - ನಂತರ "ವಿಶ್ವಾಸಿಯ ಅಂತರಾಳದಿಂದ ಹರಿದು" ಅನೇಕರನ್ನು ಆಶೀರ್ವದಿಸುತ್ತಾನೆ, ಎಂದು ಯೋಹಾನ 7:37-39ರಲ್ಲಿ ಯೇಸುವು ವಿವರಿಸಿದರು. ಈ ರೀತಿಯಾಗಿ ಹೊಸ ಒಡಂಡಿಕೆಯ ಸಭೆಯು ಕಟ್ಟಲ್ಪಡುತ್ತದೆ.

    ಈಗಲೂ ನಾವು ಇತರರಿಗೆ ಸುವಾರ್ತೆ ಬೋಧಿಸುವದಕ್ಕಾಗಿ ಮಾತ್ರ ಪವಿತ್ರಾತ್ಮನನ್ನು ಉಪಯೋಗಿಸಲು ಪ್ರಯತ್ನಿಸಿದರೆ, ನಾವು ಕೇವಲ ಒಂದು ಸಮೂಹವನ್ನು ಅಥವಾ ಸಂಘವನ್ನು ಕಟ್ಟುತ್ತೇವೆ. ಆದರೆ ಎಲ್ಲಕ್ಕೂ ಮೊದಲು ದೇವರು ನಮ್ಮನ್ನು ತುಂಬಿಸಿ, ನಮ್ಮ ಹೃದಯದಲ್ಲಿ ಆತನ ಪ್ರೀತಿಯನ್ನು ಸುರಿಯಲು ನಾವು ಅನುಮತಿಸಿದರೆ, ಆಗ ಪವಿತ್ರಾತ್ಮನು ನಮ್ಮ ಅಂತರಾಳದಿಂದ ಹರಿದು ಇತರರನ್ನು ತಲುಪಲು ಸಾಧ್ಯವಾಗುತ್ತದೆ. ಆಗ ನಾವು ಇದೇ ರೀತಿಯ ಅನ್ಯೋನ್ಯತೆಯ ಆತ್ಮವನ್ನು ಹೊಂದಿರುವವರ ಜೊತೆಯಲ್ಲಿ ಸಭೆಯನ್ನು ಕಟ್ಟುತ್ತೇವೆ. ನಮ್ಮ ಹೃದಯದಲ್ಲಿ ದೇವರಿಗಾಗಿ ಮತ್ತು ಇತರರಿಗಾಗಿ ಪ್ರೀತಿಯು ತುಂಬಿ ಹೊರಸೂಸುತ್ತದೆ ಮತ್ತು ನಾವು ಪ್ರತಿಯೊಬ್ಬರು ನಮ್ಮ ಶಿಲುಬೆಯನ್ನು ಹೊರುವಾಗ ನಿಜವಾದ ಅತ್ಮಿಕ ಐಕ್ಯತೆಯು ಬಲಗೊಳ್ಳುತ್ತದೆ.

    ವಾಸ್ತವವಾಗಿ, ನಿಜವಾದ ಸಭೆಯು ಕಟ್ಟಲ್ಪಡುವದು ಪ್ರಾಥಮಿಕವಾಗಿ ನಾವು ಒಬ್ಬರಿಂದ ಒಬ್ಬರು ಅಗಲಿರುವ ಸಮಯದಲ್ಲಿ. ಅದು ನಾವು ಭಾನುವಾರದ ಕೂಟಗಳಲ್ಲಿ ಸೇರಿದಾಗ ಮಾತ್ರವೇ ಕಟ್ಟಲ್ಪಡುವುದಿಲ್ಲ. ಹೌದು, ಅಲ್ಲಿ ನಾವೆಲ್ಲರೂ ಒಟ್ಟಿಗೆ ಇರುವಾಗ ಪವಿತ್ರಾತ್ಮನ ವರಗಳಿಂದ ಸಭೆಯು ಕಟ್ಟಲ್ಪಡುತ್ತದೆ. ಆದರೆ ಇನ್ನೂ ಹೆಚ್ಚಾಗಿ ಒಬ್ಬರಿಂದ ಒಬ್ಬರು ದೂರವಾಗಿರುವ ಸಮಯದಲ್ಲಿ ಅದು ಕಟ್ಟಲ್ಪಡುತ್ತದೆ. ನಮಗೆ ಶೋಧನೆಗಳು ಬರುವಾಗ - ಅಪ್ರಾಮಾಣಿಕರಾಗಿ ನಡೆದುಕೊಳ್ಳುವಂತೆ, ಅಥವಾ ಕೋಪಿಸಿಕೊಳ್ಳುವಂತೆ, ಅಥವಾ ಕಣ್ಣಿನಿಂದ ಪಾಪಮಾಡುವಂತೆ, ಇತ್ಯಾದಿ - ಅಂತಹ ಸಮಯದಲ್ಲಿ ನಾವು ಕರ್ತನ ಸಭೆಯಾಗಿದ್ದೇವೋ ಅಥವಾ ಇಲ್ಲವೋ ಎಂಬುದನ್ನು ಪ್ರಮಾಣೀಕರಿಸುತ್ತೇವೆ. ಈ ಶೋಧನೆಗಳಲ್ಲಿ ನಾವು ಶಿಲುಬೆಯನ್ನು ಹೊತ್ತು, ನಮ್ಮ ಸ್ವಚಿತ್ತಕ್ಕೆ ಸತ್ತು, ಕರ್ತನಿಗಾಗಿ ಶ್ರದ್ಧೆಯನ್ನು ಕಾಪಾಡಿಕೊಂಡು ಪಾಪವನ್ನು ಎದುರಿಸಿದರೆ, ಆಗ ಬೆಳಕಿನಲ್ಲಿ ನಡೆಯುತ್ತೇವೆ ಮತ್ತು ಕರ್ತನೊಂದಿಗೆ ಅನ್ಯೋನ್ಯತೆಯನ್ನು ಹೊಂದಿಕೊಳ್ಳುತ್ತೇವೆ. ಆಗ, ನಾವು ಸಭೆಯಲ್ಲಿ ಒಂದಾಗಿ ಸೇರಿದಾಗ, ನಮ್ಮ ನಡುವೆ ನಿಜವಾದ ಅನ್ಯೋನ್ಯತೆ ಇರುತ್ತದೆ (1 ಯೋಹಾನ 1:7).

    ಕೊಲೊಸ್ಸೆ 2:2 ನಮ್ಮ ಹೃದಯಗಳು "ಪ್ರೀತಿಯಲ್ಲಿ ಹೊಂದಿಕೆಯಾಗಬೇಕು" ಎಂದು ತಿಳಿಸುತ್ತದೆ. ನನ್ನ ಸ್ವ-ಪ್ರಯತ್ನದಿಂದ ಇತರರೊಂದಿಗೆ ಪ್ರೀತಿಯ ಹೊಂದಾಣಿಕೆ ಬರುವುದಿಲ್ಲ. ಪವಿತ್ರಾತ್ಮನೊಬ್ಬನೇ ನಮ್ಮ ಹೃದಯಗಳಲ್ಲಿ ಇಂತಹ ಪ್ರೀತಿಯ ಹೊಂದಾಣಿಕೆಯ ಕಾರ್ಯವನ್ನು ಮಾಡಬಹುದು. ಆದರೂ ನಾನು ಮನುಷ್ಯ ಪ್ರಯತ್ನದಿಂದ ನನ್ನ ಹೃದಯವನ್ನು ನಿಮ್ಮ ಹೃದಯದೊಂದಿಗೆ ಒಟ್ಟುಗೂಡಿಸಲು ಪ್ರಯತ್ನಿಸಿದರೆ - ಯಾವುದೋ ಉಡುಗೊರೆ ಕೊಡುವುದು, ಅಥವಾ ನಿಮ್ಮ ಜೊತೆ ಸಮಯ ಕಳೆಯುವುದು, ಇತ್ಯಾದಿ - ನಾನು ಕೇವಲ ಒಂದು ಸಂಘವನ್ನು ಕಟ್ಟುತ್ತೇನೆ. ಆದರೆ ದೇವರು ಹೇಳುತ್ತಾರೆ, "ನಿನ್ನ ಸ್ವಚಿತ್ತಕ್ಕೆ ಸಾಯಬೇಕು." ನಾನು ಹಾಗೆ ಮಾಡಿದಾಗ, ಪವಿತ್ರಾತ್ಮನು ನನ್ನನ್ನು ಯಾವ ಸ್ಥಳೀಯ ಸಭೆಯಲ್ಲಿ ಇರಿಸಿದ್ದಾನೋ ಅದರಲ್ಲಿ, ತಮ್ಮ ಸ್ವಚಿತ್ತಕ್ಕೆ ಸಾಯುವುದನ್ನು ಅಭ್ಯಾಸ ಮಾಡುತ್ತಿರುವಂತ ಇತರ ವಿಶ್ವಾಸಿಗಳೊಂದಿಗೆ ಕಣ್ಣಿಗೆ ಕಾಣದಂತಹ, ದೈವಿಕ ರೀತಿಯ ಸೌಹಾರ್ದತೆಯನ್ನು ನನ್ನ ಹೃದಯಕ್ಕೆ ತರುತ್ತಾನೆ.

    ಆಗ ನಮ್ಮ ಅನ್ಯೋನ್ಯತೆಯು ಮಧುರವಾಗಿರುತ್ತದೆ - ಇದಕ್ಕೆ ಕಾರಣ ನಾವೆಲ್ಲರು ಒಂದೇ ಸಿದ್ಧಾಂತವನ್ನು ನಂಬಿರುವದರಿಂದ ಅಲ್ಲ ಅಥವಾ ಒಂದೇ ಬಗೆಯ ಹಾಡುಗಳನ್ನು ಹಾಡುತ್ತೇವೆಂದು ಅಲ್ಲ, ಬದಲಾಗಿ ನಾವೆಲ್ಲರೂ ನೆಲಕ್ಕೆ ಬಿದ್ದು ನಮ್ಮ ಸ್ವಚಿತ್ತಕ್ಕೆ ಸತ್ತಿದ್ದೇವೆ. ಈ ರೀತಿಯಾಗಿ, ಪವಿತ್ರಾತ್ಮನ ಮೂಲಕ, ನಾವು ಒಬ್ಬರ ಜೊತೆಗೊಬ್ಬರು ಅನ್ಯೋನ್ಯತೆಯನ್ನು ಹೊಂದುತ್ತೇವೆ.

    ನಾವು ಸ್ವಚಿತ್ತಕ್ಕೆ ಸಾಯದಿದ್ದಾಗ, ನಮ್ಮ ನಡುವೆ ಯಾವುದೇ ಐಕ್ಯತೆ ಇರುವುದಾದರೆ, ಅದು ಕೇವಲ ಗೆಳೆತನ ಆಗಿರುತ್ತದೆ, ನಿಜವಾದ ಕ್ರಿಸ್ತೀಯ ಅನ್ಯೋನ್ಯತೆ ಅಲ್ಲ. ಅನ್ಯೋನ್ಯತೆಯೆಂಬುದು ಅತ್ಮಿಕ ವಿಷಯವಾಗಿದೆ, ಆದರೆ ಗೆಳೆತನವು ಇಹಲೋಕಕ್ಕೆ ಸಂಬಂಧಪಟ್ಟದ್ದಾಗಿದೆ.

    ಈ ಲೋಕದಲ್ಲಿ ಜನರು ಗೆಳೆತನ ಹೊಂದಿರುತ್ತಾರೆ. ಲೋಕದಲ್ಲಿರುವ ಅನೇಕ ಸಂಘಗಳ (worldly clubs) ಸದಸ್ಯರು ತಮ್ಮೊಳಗೆ ಬಹಳ ಆಪ್ತ ಸ್ನೇಹವನ್ನು ಹೊಂದಿರುತ್ತಾರೆ ಮತ್ತು ಒಬ್ಬರಿಗೊಬ್ಬರು ಗಾಢವಾದ ಕಾಳಜಿಯನ್ನು ತೋರಿಸುತ್ತಾರೆ. ಆದರೆ ಅವರು ನಿಜವಾದ ಅನ್ಯೋನ್ಯತೆಯನ್ನು ಹೊಂದುವದು ಅಸಾಧ್ಯವಾಗಿದೆ - ಏಕೆಂದರೆ ಅದು ನಮ್ಮ ಜೀವನದಲ್ಲಿ ಪವಿತ್ರಾತ್ಮನಿಂದ ಉಂಟಾಗುವ ಆತ್ಮಿಕ ಕಾರ್ಯವಾಗಿದ್ದು, ಈ ಕಾರ್ಯವನ್ನು ಆತನು ಮಾತ್ರ ಮಾಡಲು ಸಾಧ್ಯವಿದೆ. ದೇವರು ತನ್ನ ಯಾವುದೇ ಮಗುವು "ಯೇಸುವಿನ ಮರಣವನ್ನು ತನ್ನ ದೇಹದಲ್ಲಿ ಅನುಭವಿಸುವುದನ್ನು"ನೋಡಿದಾಗ, ಅಂಥವರಿಗೆ ಪ್ರತಿಫಲವಾಗಿ ಆತನು ಇನ್ನೂ ಪ್ರಭಾವವುಳ್ಳ "ಯೇಸುವಿನ ಜೀವವನ್ನು" (2 ಕೊರಿಂಥ 4:10,11) ಕೊಡುತ್ತಾನೆ. ಇಬ್ಬರು ವಿಶ್ವಾಸಿಗಳ ಒಳಗೆ ಅಡಗಿರುವ ಈ"ಯೇಸುವಿನ ಜೀವವು" ಅವರ ನಡುವೆ ಯಥಾರ್ಥವಾದ ಐಕ್ಯತೆಯನ್ನು ತರುತ್ತದೆ. ಮತ್ತು ಇಂತಹ ಜನರ ಮೂಲಕ ದೇವರು ತನ್ನ ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುತ್ತಾರೆ.

    ನನಗೆ ಈ ಸತ್ಯಾಂಶಗಳ ಬಗ್ಗೆ ತಿಳುವಳಿಕೆ ಬಂದಾಗ, ನಾನು "ಕರ್ತನೇ, ನಿನ್ನ ನಿಜವಾದ ಸಭೆಯನ್ನು ಕಟ್ಟಲು ಬಯಸುವ ಜನರು ಎಲ್ಲಿದ್ದಾರೆ?" ಎಂದು ಕರ್ತನನ್ನು ಕೇಳುವುದನ್ನು ನಿಲ್ಲಿಸಿದೆ. ದೇವರು ಅವರನ್ನು ಹುಡುಕುತ್ತಾರೆ ಮತ್ತು ನಮ್ಮನ್ನು ಜೊತೆಗೂಡಿಸುತ್ತಾರೆಂದು ನನಗೆ ಅರಿವಾಯಿತು - ಇದಕ್ಕೆ ಒಂದೇ ಒಂದು ಷರತ್ತು ಇದ್ದಿತು, ಸ್ವತಃ ನಾನು ಭೂಮಿಯಲ್ಲಿ ಬಿದ್ದು ಸ್ವಾರ್ಥಕ್ಕೆ ಸಾಯುವುದಕ್ಕೆ ಸಿದ್ಧನಿರಬೇಕು. ನಾನು ಸಾಯುವದಕ್ಕೆ ಒಪ್ಪದಿದ್ದರೆ, ಆಗ ದೇವರು ಅಂತಹ ಜನರನ್ನು ನನ್ನ ಬಳಿಗೆ ತರಲಾರರು.

    ನಮ್ಮ ಸುತ್ತಮುತ್ತಲು ಪೂರ್ಣಹೃದಯವುಳ್ಳ ವಿಶ್ವಾಸಿಗಳನ್ನು ಹುಡುಕುವದು, "ಒಣ ಹುಲ್ಲಿನ ಮೆದೆಯಲ್ಲಿ ಬಿದ್ದಿರುವ ಸೂಜಿಗಳನ್ನು" ಹುಡುಕುವಷ್ಟೇ ಕಠಿಣವಾದ ಕೆಲಸವಾಗಿದೆ. ಒಂದು ಬಹಳ ದೊಡ್ಡ ಹುಲ್ಲಿನ ರಾಶಿಯೊಳಗೆ ಕೆಲವು ಸೂಜಿಗಳು ಬಿದ್ದಿದ್ದರೆ, ಅವುಗಳನ್ನು ಒಂದೊಂದಾಗಿ ಆರಿಸಿ ತೆಗೆಯಲು ತಿಂಗಳುಗಟ್ಟಲೆ ಸಮಯ ಬೇಕಾಗಬಹುದು; ಒಂದು ವೇಳೆ ಕೆಲವು ವರ್ಷಗಳ ಪ್ರಯಾಸದ ನಂತರ ಕೇವಲ ಒಂದು ಸೂಜಿ ಕೈಗೆ ಸಿಗಬಹುದು. ಆದರೆ ಕರ್ತನು ಹೀಗೆ ಹೇಳುತ್ತಾನೆ, "ಆ ಸೂಜಿಗಳನ್ನು ಹುಡುಕುತ್ತಾ ನೀನು ಸಮಯವನ್ನು ವ್ಯರ್ಥ ಮಾಡಬೇಡ. ಅವುಗಳು ಎಲ್ಲಿವೆಯೆಂದು ನನಗೆ ತಿಳಿದಿದೆ. ನೀನು ಭೂಮಿಯಲ್ಲಿ ಬೀಳಬೇಕು ಮತ್ತು ನಿನ್ನ ಸ್ವೇಚ್ಛೆಗೆ ಸಾಯಬೇಕು. ಹೀಗೆ ಮಾಡಿದಾಗ ನಿನ್ನೊಳಗೆ ಇರುವ ಯೇಸುವಿನ ಜೀವವು ಅತೀ ಪ್ರಭಾವಶಾಲಿಯಾದ ಅಯಸ್ಕಾಂತವಾಗಿ (magnet) ಮಾರ್ಪಟ್ಟು, ಆ ’ಸೂಜಿಗಳನ್ನು’ (ಅಂದರೆ, ಪೂರ್ಣಹೃದಯವುಳ್ಳ ವಿಶ್ವಾಸಿಗಳು) ಹೊರಕ್ಕೆ ಎಳೆಯುವುದು" (ಯೋಹಾನ 1:4; 12:32).

    ದೈವಿಕ ಜೀವನವನ್ನು ಜೀವಿಸಿ, ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುವದಕ್ಕೆ ಕಾತುರರಾಗಿರುವ ಇತರ ವಿಶ್ವಾಸಿಗಳೂ ನಿನ್ನೆಡೆಗೆ ಸೆಳೆಯಲ್ಪಡುವರು ಮತ್ತು ನೀನು ಸಾರುತ್ತಿರುವ ಶಿಲುಬೆಯ ಸಂದೇಶದಿಂದ ಆಕರ್ಷಿತರಾಗುವರು. ಇದು ದೇವರ ಕಾರ್ಯವೈಖರಿಯಾಗಿದೆ. ಅವರು ಪೂರ್ಣಹೃದಯ ಹೊಂದಿರುವಂಥವರನ್ನು ನಮ್ಮ ಬಳಿಗೆ ಕರೆತರುತ್ತಾರೆ. ಯೇಸುವು ಹೇಳಿದಂತೆ, "ತಂದೆಯು ನನಗೆ ಕೊಡುವಂಥವರೆಲ್ಲರು ನನ್ನ ಬಳಿಗೆ ಬರುವರು" (ಯೋಹಾನ 6:37). ತಂದೆಯು ನಮ್ಮ ಜೀವನದಲ್ಲೂ ಇದನ್ನೇ ಮಾಡುವರು. ಈ ರೀತಿಯಾಗಿ ನಾವು ಹೊಸ ಒಡಂಬಡಿಕೆಯ ಸಭೆಯನ್ನು ಕಟ್ಟುತ್ತೇವೆ.

    ವೈಯಕ್ತಿಕ ತ್ಯಾಗವೆಂಬ ತಳಹದಿಯ ಮೇಲೆ

    ಯೆರೆಮೀಯ 3:14ರಲ್ಲಿ ಕರ್ತನು ಕೊಟ್ಟಿರುವ ಮಾತು, "ನಿಮ್ಮನ್ನು ಪಟ್ಟಣಕ್ಕೆ ಒಬ್ಬನಂತೆಯೂ ಗೋತ್ರಕ್ಕೆ ಇಬ್ಬರಂತೆಯೂ ಆರಿಸಿ ಚೀಯೋನಿಗೆ ಕರಕೊಂಡು ಬರುವೆನು. ಇದಲ್ಲದೆ ನನ್ನ ಮನಸ್ಸು ಒಪ್ಪುವ ಪಾಲಕರನ್ನು ನಿಮಗೆ ದಯಪಾಲಿಸುವೆನು." ಎಂಥಾ ಸುಂದರವಾದ ವಾಗ್ದಾನ ಇದಾಗಿದೆ. ದೇವರ ಮನಸ್ಸಿಗೆ ಒಪ್ಪುವ ಪಾಲಕರನ್ನು ನೀವು ಕಂಡುಕೊಂಡಾಗ, ನಿಜವಾದ ದೇವಸಭೆಗೆ ನೀವು ಬಂದಿದ್ದೀರೆಂದು ತಿಳಕೊಳ್ಳಬಹುದು. ಅವರನ್ನು ಗೌರವಿಸುವುದನ್ನು ಕಲಿಯಿರಿ, ಮತ್ತು ಅವರು ನಿಮ್ಮನ್ನು ತಿದ್ದುವಾಗ ಬೇಸರಗೊಳ್ಳಬೇಡಿ, ಏಕೆಂದರೆ ಅವರು ನಿಮ್ಮನ್ನು ದೇವಭಕ್ತಿಗೆ ನಡೆಸಲು ಶ್ರಮಿಸುತ್ತಿದ್ದಾರೆ.

    ಎಫೆಸ 5:25 ರಲ್ಲಿ ಹೀಗೆ ಹೇಳಲಾಗಿದೆ, "ಕ್ರಿಸ್ತನು ಸಭೆಯನ್ನು ಪ್ರೀತಿಸಿ ಅದಕ್ಕಾಗಿ ತನ್ನನ್ನೇ ಒಪ್ಪಿಸಿಕೊಟ್ಟನು." ಸಭೆಯನ್ನು ಕಟ್ಟುವದಕ್ಕೆ ವೈಯಕ್ತಿಕ ತ್ಯಾಗದ ಹೊರತಾಗಿ ಬೇರೆ ಯಾವುದೇ ಮಾರ್ಗವಿಲ್ಲ. ಯೇಸುವು ಪರಲೋಕದಿಂದ ಈ ಲೋಕಕ್ಕೆ ಬಂದದ್ದು ಒಂದು ಶ್ರೇಷ್ಠ ತ್ಯಾಗವಾಗಿತ್ತು. ಆತನು ಸಮೃದ್ಧಿ ಮತ್ತು ಸೌಕರ್ಯಗಳನ್ನು ತ್ಯಜಿಸಿ ಬಡತನದಲ್ಲಿ ಜೀವಿಸಿದನು. ಆದರೆ ಎಲ್ಲಕ್ಕೂ ಹೆಚ್ಚಾಗಿ, ಆತನು ತನ್ನನ್ನೇ ಒಪ್ಪಿಸಿಕೊಟ್ಟನು.

    ನೀವು ಯಾವ ಬೆಲೆಯನ್ನೂ ಕಟ್ಟದೆ ಒಂದು ಹೊಸ ಒಡಂಬಡಿಕೆಯ ಸಭೆಯನ್ನು ನಿರ್ಮಿಸಬಹುದೆಂಬ ಕಲ್ಪನೆಯನ್ನು ಯಾವತ್ತೂ ಮಾಡಬೇಡಿ. ಸ್ವಂತ ಹಣ ಅಥವಾ ಸ್ವಂತದ ಅನುಕೂಲಗಳನ್ನು ತ್ಯಾಗ ಮಾಡದೆ ಸಭೆಯನ್ನು ಕಟ್ಟಲು ಇಚ್ಛಿಸುವವರು, ಕೇವಲ ಒಂದು ಸಮೂಹವನ್ನು ಇಲ್ಲವೇ ಒಂದು ಸಂಘವನ್ನು ಕಟ್ಟುತ್ತಾರೆ. ನಿಜವಾದ ಸಭೆಯೆಂಬುದು ತ್ಯಾಗವಿಲ್ಲದೆ ಕಟ್ಟಲ್ಪಡುವುದಿಲ್ಲ. ಇದನ್ನು ಕಟ್ಟುವದಕ್ಕಾಗಿ ಕ್ರಿಸ್ತನು ತನ್ನನ್ನೇ ಸಮರ್ಪಿಸಿದನು. ಕರ್ತನೊಂದಿಗೆ ಕೂಡಿ ಸಭೆಯನ್ನು ಕಟ್ಟುವುದರಲ್ಲಿ ಪಾಲ್ಗೊಳ್ಳಲು ನಾವೂ ಸಹ ನಮ್ಮ "ಸ್ವಾರ್ಥ"ವನ್ನು ತ್ಯಜಿಸಬೇಕಾಗುತ್ತದೆ.

    ಕರ್ತನು ತನ್ನ ಸಭೆಯನ್ನು ಕಟ್ಟುವದಕ್ಕೆ, ಅತೀ ಅಲ್ಪನಾದ ಮತ್ತು ಯಾವ ಉಪಯೋಗಕ್ಕೂ ಬಾರದಂಥ ವ್ಯಕ್ತಿಯನ್ನು ಸಹ ಉಪಯೋಗಿಸಬಲ್ಲನು; ಆದರೆ ಇದಕ್ಕಾಗಿ ಆ ವ್ಯಕ್ತಿಯು ದೇವರ ಪವಿತ್ರಾತ್ಮನಿಂದ ತುಂಬಲ್ಪಡುವದಕ್ಕೆ ತನ್ನನ್ನು ಒಪ್ಪಿಸಿಕೊಡುವವನೂ ಮತ್ತು ಶಿಲುಬೆಯ ಮಾರ್ಗದಲ್ಲಿ ನಡೆಯುವವನೂ ಆಗಿರಬೇಕು.

    ನೀವು ನಿಮ್ಮ ಸ್ವಂತ ದೃಷ್ಟಿಯಲ್ಲಿ ಅಲ್ಪನಾಗಿದ್ದರೆ, ಈ ದಿನ ದೇವರು ನಿಮಗೆ ಹೇಳುವುದೇನೆಂದರೆ, "ನೀನು ಒಂದು ಚಿಕ್ಕ, ಅತ್ಯಲ್ಪವಾದ ಗೋದಿಯ ಕಾಳು ಆಗಿದ್ದಿ. ನೀನು - ಅಂದರೆ, ನಿನ್ನ ಸ್ವಾರ್ಥತೆ - ಭೂಮಿಯಲ್ಲಿ ಬಿದ್ದು ಸಾಯಬೇಕು." ಆಗ ದೇವರು ನಿನ್ನ ಮುಖಾಂತರವಾಗಿ ಮಾಡಲಿರುವ ಅದ್ಭುತವನ್ನು ನೀನು ನೋಡುವೆ. ಮುಂದಿನ ದಿನಗಳಲ್ಲಿ ದೇವರು ನಿನಗೋಸ್ಕರ ಮತ್ತು ನಿನ್ನ ಮುಖಾಂತರ ಏನೇನು ಮಾಡಲು ಸಿದ್ಧರಿದ್ದಾರೆಂದು ಇಂದು ನಿನ್ನ ಕಣ್ಣುಗಳು ನೋಡಲಾರವು, ನಿನ್ನ ಮನಸ್ಸು ಊಹಿಸಲಾರದು (1 ಕೊರಿಂಥ 2:9). ಆದರೆ ಅದಕ್ಕಾಗಿ, ನೀನು ಈ ಪುಸ್ತಕದ ಮುಖಾಂತರ ನಿನಗೆ ಬರುತ್ತಿರುವ ಆತನ ಕರೆಯನ್ನು ಕೇಳುವ ಮಟ್ಟಿಗೆ ಆತನ್ನನ್ನು ಪ್ರೀತಿಸಬೇಕು.

    ಅಧ್ಯಾಯ 7
    ಕೊಡುವಂಥವರಾಗಿ ಸಭೆಯನ್ನು ಕಟ್ಟುವುದು

    "ಮನುಷ್ಯಕುಮಾರನು ಸೇವೆ ಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ, ತನ್ನ ಪ್ರಾಣವನ್ನು... ಕೊಡುವದಕ್ಕೂ ಬಂದನು" (ಮತ್ತಾಯ 20:28)

    ಯೇಸುವು ಈ ಲೋಕದಲ್ಲಿ ಜೀವಿಸಿದಾಗ, ಆತನ "ಸಭೆಯು" ಅತೀ ಚಿಕ್ಕದಾಗಿತ್ತು. ಅದರಲ್ಲಿ 12 ಜನರಿದ್ದರು, ಅವರಲ್ಲಿ ಒಬ್ಬನು ದ್ರೋಹಿಯಾಗಿ ಬದಲಾದನು. ಆದರೆ, ಮಿಕ್ಕ 11 ಜನರು ಯೇಸುವನ್ನು ಹಿಂಬಾಲಿಸುವದಕ್ಕಾಗಿ ಎಲ್ಲವನ್ನೂ ತ್ಯಜಿಸಿದ ನಿಜವಾದ ಶಿಷ್ಯರಾಗಿದ್ದರು. ಇದರ ಪರಿಣಾಮವಾಗಿ, ಅವರು ಮುಂದೆ ಪವಿತ್ರಾತ್ಮನಿಂದ ತುಂಬಲ್ಪಟ್ಟ ನಂತರ, ಲೋಕವನ್ನು ಅಡಿಮೇಲು ಮಾಡುವವರಾದರು.

    ಆದರೆ ಈ ಪರಿವರ್ತನೆಗಿಂತ ಮೊದಲು, ಅವರ ನಡುವೆ ಆಗಾಗ ವಾಗ್ವಾದಗಳು ನಡೆಯುತ್ತಿದ್ದವು. ಒಂದು ಸಾರಿ, ಯೇಸುವು ಶಿಷ್ಯರಿಗೆ ತನ್ನ ಶಿಲುಬೆಯ ಮರಣದ ಕುರಿತು ತಿಳಿಸಿದಾಗ, ಒಬ್ಬ ನಾಯಕನು ತನ್ನ ಸ್ಥಾನವನ್ನು ಬಿಟ್ಟುಕೊಟ್ಟಾಗ ಅವನನ್ನು ಹಿಂಬಾಲಿಸುವ ಲೌಕಿಕ ಸ್ವಭಾವದ ಪ್ರತಿಯೊಬ್ಬ ವ್ಯಕ್ತಿಯು ಏನು ಮಾಡಬಹುದೋ, ಶಿಷ್ಯರು ಅದನ್ನೇ ಮಾಡಿದರು - ಆ ನಾಯಕತ್ವದ ಪದವಿ ಯಾರಿಗೆ ಸಿಗಬೇಕೆಂದು ಚರ್ಚಿಸುತ್ತಿದ್ದರು (ಮಾರ್ಕ 9:31-34). ಇದಾದ ಕೆಲವು ದಿನಗಳ ನಂತರ, ಯೇಸುವು ಮತ್ತೊಮ್ಮೆ ತನ್ನ ಶಿಲುಬೆಯ ಮರಣವನ್ನೂ ಮತ್ತು ಮೂರು ದಿನಗಳ ನಂತರ ತಾನು ಜೀವಿತನಾಗಿ ಎದ್ದು ಬರುವದನ್ನೂ ಅವರಿಗೆ ವಿವರಿಸಿದನು (ಮತ್ತಾಯ 20: 18-21). ಮತ್ತೊಮ್ಮೆ ಆ ಶಿಷ್ಯರಲ್ಲಿ, ಯಾಕೋಬ ಮತ್ತು ಯೋಹಾನರಿಂದ ಮೊದಲುಗೊಂಡು, ಶ್ರೇಷ್ಠ ಪದವಿಗಳು ತಮಗೆ ಸಿಗಬಹುದೋ ಎಂಬ ಆಸೆ ಹುಟ್ಟಿತು. ಮಹಿಮಾ ಪದವಿಗೆ ಯೇಸುವಿನ ಏರುವಿಕೆಯು, ತಮಗೂ ಸಹ ಇತರರಿಗಿಂತ ಉತ್ತಮ ಸ್ಥಾನಮಾನಗಳನ್ನು ದೊರಕಿಸಿಕೊಳ್ಳುವ ಒಂದು ಅವಕಾಶವೆಂದು ಅವರು ಉತ್ತೇಜಿತರಾದರು. ಯೇಸುವು ಅವರಿಗೆ ನೀಡಿದ ಉತ್ತರ ಇದಾಗಿತ್ತು, ತಾನು ’ಸೇವೆ ಮಾಡಿಸಿಕೊಳ್ಳುವದಕ್ಕೆ ಬರಲಿಲ್ಲ, ಸೇವೆ ಮಾಡುವದಕ್ಕೂ, ... ತನ್ನ ಪ್ರಾಣವನ್ನು ಈಡು ಕೊಡುವದಕ್ಕೂ ಬಂದೆನು’ (ವಚನ 28).

    ಅಲ್ಲಿ ಯೇಸುವು ನಮಗೆ ಈ ಸನ್ನಿವೇಶದ ಮೂಲಕ ತೋರಿಸಲು ಬಯಸಿದ್ದು ಏನೆಂದರೆ, ಈ ಲೋಕದಲ್ಲಿ - "ಕ್ರೈಸ್ತರು" ಎಂದು ಕರೆಯಲ್ಪಡುವ ಜನರಲ್ಲೂ ಸಹ - ಎರಡು ಬಗೆಯ ಜನರಿದ್ದಾರೆ "ಪಡೆಯುವವರು" ಮತ್ತು "ಕೊಡುವವರು". ಈ ಲೋಕದ ಆತ್ಮ ಇರಿಸಿಕೊಂಡಿರುವ ಕ್ರೈಸ್ತರು (’ಸಮೂಹ ಕ್ರೈಸ್ತರು’ ಮತ್ತು ’ಸಂಘ ಕ್ರೈಸ್ತರು’), ಕ್ರೈಸ್ತತ್ವದ ಮೂಲಕ ತಮಗೆ ಸಿಗಬಹುದಾದ ಅನುಕೂಲಗಳ ಬಗ್ಗೆ ಯಾವಾಗಲೂ ಚಿಂತಿಸುವ ’ಪಡೆಯುವವರು’ ಆಗಿದ್ದಾರೆ. ಇನ್ನೊಂದು ಮಗ್ಗಲಲ್ಲಿ, ನಿಜವಾದ ಕ್ತೈಸ್ತ-ಸಭೆಯವರು ’ಕೊಡುವವರು’ ಆಗಿದ್ದಾರೆ. ಅವರು ಯಾವಾಗಲೂ ತಾವು ಏನನ್ನು ಕೊಡಬಹುದು - ಎಲ್ಲಕ್ಕೂ ಮೊದಲು ದೇವರಿಗೆ, ಇದಾದ ಮೇಲೆ ಇತರರಿಗೆ - ಎಂಬ ನಿರೀಕ್ಷೆಯೊಡನೆ ಕಾದಿರುತ್ತಾರೆ. ಯೇಸುವು ತಿಳಿಸಿದ ಹಾಗೆ, ತೆಗೆದುಕೊಳ್ಳುವದಕ್ಕಿಂತ ಹೆಚ್ಚಿನ ಭಾಗ್ಯ ’ಕೊಡುವದು’ ಆಗಿದೆ (ಅ. ಕೃ. 20:35).

    ನೀವು ಈ ಲೋಕದಲ್ಲಿ ದೊಡ್ಡವರಾದಷ್ಟೂ, ಇತರರು ನಿಮ್ಮ ಸೇವೆ ಮಾಡುವುದನ್ನು ನೀವು ಹೆಚ್ಚು ಹೆಚ್ಚಾಗಿ ನಿರೀಕ್ಷಿಸಬಹುದು. ಈ ಲೋಕದ ಶಾಸಕರೂ, ಸರ್ಕಾರಿ ಅಧಿಕಾರಿಗಳೂ ಜನರಿಂದ ನಿರಂತರವಾಗಿ ಸೇವೆ ಮಾಡಿಸಿಕೊಳ್ಳುತ್ತಾರೆ. ಇನ್ನೊಂದೆಡೆ, ನೀವು ಪರಲೋಕ ರಾಜ್ಯದಲ್ಲಿ ಮುಂದುವರಿದರೆ, ನೀವು ಹೆಚ್ಚು ಹೆಚ್ಚಾಗಿ ಇತರರ ಸೇವೆಯನ್ನು ಮಾಡುತ್ತೀರಿ. ಯೇಸುವು ಇದನ್ನು ಬೋಧಿಸಿದ್ದು ಮಾತ್ರವಲ್ಲ, ತನ್ನ ಜೀವಿತದ ಉದ್ದಕ್ಕೂ ಇದೇ ಮಾದರಿಯಲ್ಲಿ ಜೀವಿಸಿದರು.

    ಒಂದು ಸಭೆಯೊಳಗೆ, ’ಪಡೆಯುವವರು’ ತಮ್ಮ ಅಗತ್ಯತೆಗಳನ್ನು ಇತರರು ಪೂರೈಸಬೇಕು ಎಂದು ನಿರೀಕ್ಷಿಸುತ್ತಾರೆ. ಅವರ ನಿರೀಕ್ಷೆಯ ಪ್ರಕಾರ ನಡೆಯದಿದ್ದಾಗ, ಒಂದಲ್ಲ ಒಂದು ವಿಷಯದಲ್ಲಿ ನೊಂದು ಹತಾಶರಾಗಿ, ಅಂತಿಮವಾಗಿ ಸಭೆಯಿಂದ ಹೊರಕ್ಕೆ ಹೋಗುತ್ತಾರೆ. ಇನ್ನೊಂದೆಡೆ, ’ಕೊಡುವವರಿಗೆ’ ಸಭೆಯಲ್ಲಿ ಯಾವುದೋ ಕೊರತೆ ಅಥವಾ ಅವಶ್ಯಕತೆ ಕಾಣಿಸಿದಾಗ, ತಾವು ’ಸಭೆ’ಯೆಂಬ ಆ ಕುಟುಂಬದ ಸದಸ್ಯರಾದ್ದರಿಂದ, ದೇವರ ಕೃಪೆಯನ್ನು ಆಧರಿಸಿ, ಯಥಾರ್ಥತೆ ಮತ್ತು ತಾಳ್ಮೆಯೊಂದಿಗೆ ಆ ಅವಶ್ಯಕತೆಗಳನ್ನು ಪೂರೈಸಲು ಶ್ರಮಿಸುತ್ತಾರೆ.

    ಉದಾಹರಣೆಗಾಗಿ, ನಿಮ್ಮ ಸ್ಥಳೀಯ ಸಭೆಯಲ್ಲಿ ನಿಮ್ಮ ಮತ್ತು ಇನ್ನೊಬ್ಬ ವ್ಯಕ್ತಿಯ ನಡುವೆ ಪ್ರೀತಿಯ ಅಭಾವವಿದ್ದು, ನಿಮಗೆ ನಿಮ್ಮ "ಪ್ರೀತಿಯ ಬಟ್ಟಲು" ಖಾಲಿಯಾಗಿರುವ ಭಾವನೆ ಉಂಟಾಗಿದೆ ಎಂದುಕೊಳ್ಳೋಣ: ಆ ಮತ್ತೊಬ್ಬ ವ್ಯಕ್ತಿಯೇ ಆ ಸಮಸ್ಯೆಗೆ ಕಾರಣ, ಏಕೆಂದರೆ ಆತನು ನಿಮ್ಮ ನಡುವೆ ಇರುವ ಬಟ್ಟಲಿಗೆ ಪ್ರೀತಿಯನ್ನು ಎರೆಯಲಿಲ್ಲವೆಂದು ನೀವು ಅಂದುಕೊಳ್ಳಬಹುದು. ಇದು ಒಬ್ಬ ’ಪಡೆಯುವವನ’ ಸ್ವಭಾವವಾಗಿದೆ. ಇದಕ್ಕೆ ಬದಲಾಗಿ, ನೀವು "ಕೊಡುವವನ ಮನೋಭಾವವನ್ನು" ಇರಿಸಿಕೊಂಡರೆ, ಇಲ್ಲಿರುವ ಪ್ರೀತಿಯ ಅಭಾವವನ್ನು ನೀವು ದೇವರ ಮುಂದೆ ಇರಿಸಿ, ನಿಮ್ಮ ಬಟ್ಟಲನ್ನು ತುಂಬುವಂತೆ ಅವರನ್ನು ಕೇಳಿಕೊಳ್ಳಿರಿ. ಆಗ ದೇವರು ಅದನ್ನು ಧಾರಾಳವಾಗಿ ತುಂಬಿಸುತ್ತಾರೆ, ಮತ್ತು ನಿಮ್ಮ ಜೀವನದಲ್ಲಿ ಪ್ರೀತಿಯು ಉಕ್ಕಿ ಹರಿದು ಸುತ್ತಲಿನ ಇತರರನ್ನು ತಲುಪುತ್ತದೆ.

    ನಾವು2 ಕೊರಿಂಥ 9:6-8ರಲ್ಲಿ, ದೇವರು ತನ್ನ ಕೃಪೆಯನ್ನು ನಮಗೆ ಧಾರಾಳವಾಗಿ ಅನುಗ್ರಹಿಸಲು ಬಯಸುತ್ತಾರೆಂದು ಓದುತ್ತೇವೆ. ನಾವು ಈ ವಚನವನ್ನು ಓದುವಾಗ, ನಮಗೆ ದೇವರಿಂದ ಹೆಚ್ಚು ಹೆಚ್ಚಾಗಿ ಸಿಗುತ್ತದೆ, ಎಂಬ ಸ್ವಾರ್ಥ ದೃಷ್ಟಿಯಿಂದ ಓದಿಕೊಳ್ಳುವದು ಸುಲಭ. ಆದರೆ ಈ ವಾಕ್ಯವನ್ನು ಗಮನಿಸಿ ಓದಿದಾಗ, ದೇವರು ನಮಗೆ ನೀಡುವ ಧಾರಾಳ ಕೃಪೆಯ ಮೂಲಕ, ಇತರರಿಗೆ ಹೇರಳವಾಗಿ ಸಕಲ ಸತ್ಕಾರ್ಯಗಳನ್ನು ಮಾಡುವಂಥ ಕೊಡುಗೆಯ ಮನಸ್ಸನ್ನು ನಮ್ಮೊಳಗೆ ನಿರೀಕ್ಷಿಸುತ್ತಾರೆ, ಎಂದು ನಿಮಗೆ ತಿಳಿಯುತ್ತದೆ (8ನೇ ವಚನದ ಕೊನೆಯ ಭಾಗವನ್ನು ನೋಡಿರಿ).

    ಇದನ್ನು ಬರೆದ ಪೌಲನು, ಎಫೆಸದ ಸಭೆಯಲ್ಲಿ ಮೂರು ವರ್ಷಗಳ ಕಾಲ ಶ್ರಮಿಸಿ ಸೇವೆ ಮಾಡಿದ್ದನು. ಆತನು ಅಲ್ಲಿಂದ ಅಂತಿಮ ವಿದಾಯವನ್ನು ಹೇಳುವ ಸಂದರ್ಭದಲ್ಲಿ (ಅ. ಕೃ. 20:25-35), ಆ ಸಭೆಯ ಹಿರಿಯರಿಗೆ ತಾನು ಅಲ್ಲಿದ್ದ ಸಂಪೂರ್ಣ ಅವಧಿಯಲ್ಲಿ ಒಬ್ಬ ’ಕೊಡುವವನಾಗಿ’ ಜೀವಿಸಿದ್ದನ್ನು ನೆನಪಿಸಿದನು. ಈ ಕಾರಣಕ್ಕಾಗಿ, ಆ ಸಭೆಯಿಂದ ಆರ್ಥಿಕ ಬೆಂಬಲವನ್ನು ಸ್ವೀಕರಿಸಲು ಅರ್ಹನಾಗಿದ್ದರೂ ತಾನು ಅದನ್ನು ನಿರಾಕರಿಸಿದೆನು, ಎಂದು ಆತನು ಹೇಳುತ್ತಾನೆ. ಆತನು ತನ್ನ ಸ್ವಂತ ಖರ್ಚು ವೆಚ್ಚಗಳನ್ನು ನಿರ್ವಹಿಸಿದ್ದು ಮಾತ್ರವಲ್ಲದೆ, ತನ್ನ ಜೊತೆಯಲ್ಲಿದ್ದವರ ಕೊರತೆಗಳನ್ನೂ ನೀಗಿಸಿದನು. ಆತನು "ಕೊಡುವಂಥ ವಿಶಾಲ ಹೃದಯವನ್ನು" ಹೊಂದಿದ್ದನು! ಈ ಕಾರಣಕ್ಕಾಗಿ ದೇವರು ಆತನನ್ನು ಸಭೆಯನ್ನು ಕಟ್ಟುವದಕ್ಕಾಗಿ ಅತಿ ಹೆಚ್ಚಾಗಿ ಉಪಯೋಗಿಸಲು ಸಾಧ್ಯವಾಯಿತು.

    ಅನೇಕ ಜನರು ’ಕೊಡುವವರು’ ಆಗಲು ಹಿಂಜರಿಯುತ್ತಾರೆ, ಏಕೆಂದರೆ ಅದಕ್ಕಾಗಿ ತ್ಯಾಗ ಮಾಡಬೇಕಾಗುತ್ತದೆ - ಅಂದರೆ, "ಯಾತನೆಯ ಪಾತ್ರೆ"ಯಿಂದ ಕುಡಿಯುವುದು - ಯೇಸುವು ಮತ್ತಾಯ 20:22-23ರಲ್ಲಿ ಇದನ್ನು ವಿವರಿಸಿದ್ದಾರೆ. ಆದರೆ, ತ್ಯಾಗದ ಮೂಲಕ ಮಾತ್ರವೇ ಸಭೆಯು ಕಟ್ಟಲ್ಪಡುತ್ತದೆ. ಆದ್ದರಿಂದ, ನಮ್ಮ ನೆರೆಹೊರೆಯ ಸಭೆಯ ಕೊರತೆಗಳು ನಮ್ಮ ಗಮನಕ್ಕೆ ಬಂದಾಗ, ನಾವು ದೇವರ ಬಳಿಗೆ ಬಾಯಾರಿದ ಜನರಂತೆ ಬಂದು, ಅವರು ನಮ್ಮ ಅಂತರಾಳದಲ್ಲಿ ಬಲವನ್ನು ತುಂಬುವಂತೆ ಬೇಡಿಕೊಳ್ಳೋಣ. ನಮ್ಮ ಹೃದಯದ ಒಳಗಿನಿಂದ ಜೀವಕರವಾದ ನೀರಿನ ಹೊಳೆಗಳು ಹರಿಯುವವು (ಯೋಹಾನ 7:37-38), ಮತ್ತು ನಮ್ಮ ಸುತ್ತಲಿನ ಬಂಜರು ಭೂಮಿಯು ಜಲಭರಿತವಾಗುವದು ಮತ್ತು ಕ್ರೈಸ್ತ ಸಭೆಯು ಕಟ್ಟಲ್ಪಡುವುದು.

    ಅಧ್ಯಾಯ 8
    ದೂರುಗಾರನಾಗಿ ಸಭೆಯನ್ನು ಹಾಳು ಮಾಡುವುದು

    "ಜ್ಞಾನಹೀನಳು ಅದನ್ನು [ತನ್ನ ಮನೆಯನ್ನು] ಸ್ವಂತ ಕೈಯಿಂದ ಮುರಿದು ಬಿಡುವಳು" (ಜ್ಞಾನೋಕ್ತಿ 14:1)

    ಒಂದು ಮನೆಯು ಕುಸಿದು ಬೀಳುವುದಕ್ಕೆ ಎರಡು ಕಾರಣಗಳು ಇವೆಯೆಂದು ಸತ್ಯವೇದ ತಿಳಿಸುತ್ತದೆ. ಮೊದಲನೆಯದು, ಒಬ್ಬ ಬುದ್ಧಿಹೀನ ಕೆಲಸಗಾರನು ಸ್ಥಿರವಾದ ಅಸ್ತಿವಾರವಿಲ್ಲದೆ ಮನೆಯನ್ನು ಕಟ್ಟಿದರೆ, ಅದು ಬಿರುಗಾಳಿಯಿಂದ ಬಡಿಯಲ್ಪಟ್ಟು ಕುಸಿದು ಬೀಳುತ್ತದೆ (ಮತ್ತಾಯ 7:26-27). ಎರಡನೆಯದು, ಒಬ್ಬ ಬುದ್ಧಿಹೀನ ಮನುಷ್ಯನು ತನ್ನ ಮನೆಯಲ್ಲೇ ವಾಸಿಸುತ್ತಾ, ತನ್ನ ಸ್ವಂತ ಕೈಗಳಿಂದ ಆ ಮನೆಯ ಕಲ್ಲುಗಳನ್ನು "ಒಂದೊಂದಾಗಿ" ಕಿತ್ತುಹಾಕುತ್ತಾ (ಜ್ಞಾನೋಕ್ತಿ. 14:1 - Message Bible), ಕೊನೆಗೆ ಅದು ಕುಸಿದು ಬೀಳುವಂತೆ ಮಾಡುತ್ತಾನೆ.

    ನಾನು ಲೋಕದಲ್ಲಿ ಸಭೆಗಳ ಇತಿಹಾಸವನ್ನು ಆರಂಭದ ದಿನಗಳಿಂದ ಈ ದಿನದ ವರೆಗೂ ಗಮನಿಸಿರುವಂತೆ, ಸಭೆಗಳು ಹೊರಗಣ ಆಕ್ರಮಣಕ್ಕಿಂತಲೂ ಹೆಚ್ಚಾಗಿ, ತನ್ನ ಸದಸ್ಯರಿಂದಲೇ ಕೆಡವಲ್ಪಟ್ಟಿವೆ. ವಾಸ್ತವಾಂಶವೆಂದರೆ, ಸೈತಾನನು ಸಭೆಯನ್ನು ಬಾಹ್ಯ ಶಕ್ತಿಗಳ ಮೂಲಕ ಹಿಂಸೆಗೆ ಒಳಪಡಿಸಿದಾಗ, ಸಾಮಾನ್ಯವಾಗಿ ಆ ಹಿಂಸೆಯು ಸಭೆಯು ತನ್ನನ್ನು ಹೆಚ್ಚು ಪವಿತ್ರಪಡಿಸಿಕೊಳ್ಳಲು ಒಂದು ಪ್ರೇರೇಪಣೆಯಾಗುತ್ತದೆ. ಆದ್ದರಿಂದ, ಸೈತಾನನು ಸಭೆಯನ್ನು ಅದರ ಸದಸ್ಯರಿಂದಲೇ ಹಾಳುಮಾಡಿಸುವುದರಲ್ಲಿ ಹೆಚ್ಚಿನ ತೃಪ್ತಿ ಹೊಂದುತ್ತಾನೆ. ಹೀಗೆ, ದೇವರು ಜನರನ್ನು ಸಮೂಹ ಹಾಗೂ ಸಂಘಗಳಿಂದ ಹೊರಗೆ ಕರೆದು, ಅವರನ್ನು ತನ್ನ ದೇವಸಭೆಯ ಪ್ರತಿಬಿಂಬವಾದ ವಿಶ್ವಾಸಿಗಳ ಒಂದು ಸ್ಥಳೀಯ ಕೂಟವಾಗಿ ರೂಪಿಸಲು ಸಾಧ್ಯವಾದಾಗಲೂ, ಅದರ ಸದಸ್ಯರು ಸೈತಾನನ ಪ್ರಭಾವಕ್ಕೆ ಒಳಗಾಗುವ ಮನಸ್ಸು ಉಳ್ಳವರಾದರೆ, ಸೈತಾನನು ಆ ಸಭೆಯನ್ನು ಒಳಗಿನಿಂದಲೇ ನಷ್ಟಗೊಳಿಸಲು ಸಾಧ್ಯವಾಗುತ್ತದೆ.

    ಒಂದು ಆತ್ಮಿಕ ಸಭೆಯಲ್ಲೂ ಸೈತಾನನು ಇಂತಹ ಕಾರ್ಯವನ್ನು ಸಾಧಿಸಲು ಯಶಸ್ವಿಯಾಗುವನೇ? ಖಂಡಿತವಾಗಿ! ಅವನು ಪರಲೋಕದಲ್ಲೇ ಅದನ್ನು ಮಾಡಲು ಆರಂಭಿಸಿದನು - ಅದು ಕೂಡ ದೇವರ ಸಾನ್ನಿಧ್ಯದಲ್ಲೇ - ಅವನು ಅಲ್ಲಿಯೇ ಮೂರರಲ್ಲೊಂದು ಭಾಗ ದೇವದೂತರನ್ನು ತನ್ನ ಕಡೆ ಸೆಳೆದುಕೊಂಡು ದೇವರಿಗೆ ವಿರೋಧವಾಗಿ ತಿರುಗಿಬೀಳುವಂತೆ ಮಾಡುವುದರಲ್ಲಿ ಯಶಸ್ವಿಯಾಗಿ (ಪ್ರಕಟನೆ 12:4), ಅವರನ್ನು ದುಷ್ಟಶಕ್ತಿಗಳನ್ನಾಗಿ ಮಾರ್ಪಡಿಸಿದನು. ಮೊದಲನೆಯ ಶತಮಾನದ ಆದಿ ಸಭೆಯು ಕೂಡ ಅನೇಕ ಬಾರಿ ಕ್ರೂರವಾದ ತೋಳಗಳಿಂದ (ಅ. ಕೃ. 20:29,30), ಅಂದರೆ, ಕಂಚುಗಾರನಾದ ಅಲೆಕ್ಸಾಂದ್ರನಿಂದ (2 ತಿಮೊ. 4:14-15) ಹಾಗೂ ದಿಯೊತ್ರೇಫನಂತವರಿಂದ (3 ಯೋಹಾನ 9-10) ಇಂತಹ ಹಿಂಸೆಯನ್ನು ಅನುಭವಿಸಿತು.

    ಇಂತಹ ಸನ್ನಿವೇಶಗಳನ್ನು ತಪ್ಪಿಸಲು, ಸಭೆಯನ್ನು ಹಾಳುಮಾಡುವ ಈ ಘರ್ಷಣೆಗಳಿಗೆ ಮೂಲ ಯಾವುದೆಂಬುದನ್ನು ನಾವು ಹುಡುಕುವುದು ಅವಶ್ಯವಾಗಿದೆ. ಯಾಕೋಬ 3:13-4:1 ಇದನ್ನು ನಮಗೆ ಸ್ಪಷ್ಟವಾಗಿ ತಿಳಿಸಿಕೊಡುತ್ತದೆ. ಘರ್ಷಣೆಗಳಿಗೆ ಮೂಲ ಕಾರಣ ಯಾವುದೆಂದರೆ ಭೋಗ ವಿಲಾಸಗಳ ಆಸೆ (4:1); ಅದು ನಮ್ಮಲ್ಲಿ ತೀಕ್ಷ್ಣವಾದ ಅಸೂಯೆ ಹಾಗೂ ಸ್ವಾರ್ಥ ಮನೋಭಾವದ ಮೂಲಕ ಪ್ರಕಟವಾಗುತ್ತದೆ (3:14), ಮತ್ತು ಅಂತಿಮವಾಗಿ ಅದು ಸಭೆಯಲ್ಲೆಲ್ಲಾ ಹರಡುತ್ತಾ ಬರುವುದರ ಫಲಿತಾಂಶ, ಅವ್ಯವಸ್ಥೆ ಮತ್ತು ಎಲ್ಲಾ ನೀಚಕೃತ್ಯಗಳು (3:16). ಆದ್ದರಿಂದಲೇ ಇಬ್ರಿಯ 12:15ರಲ್ಲಿ, ನಮ್ಮಲ್ಲಿ ಯಾವ ವಿಷವುಳ್ಳ ಬೇರೂ ಚಿಗುರುವದಕ್ಕೆ ಮೊದಲು (ನಮ್ಮ ಹೃದಯಗಳಲ್ಲಿ ಮತ್ತು ಯೋಚನೆಗಳಲ್ಲಿ ಉತ್ಪತ್ತಿಯಾಗುವ ಮೊದಲು) ಅದನ್ನು ತೆಗೆದು ಹಾಕಬೇಕು ಎಂಬುದಾಗಿ ನಾವು ಎಚ್ಚರಿಸಲ್ಪಟ್ಟಿದ್ದೇವೆ, ಏಕೆಂದರೆ ನಾವು ಅದಕ್ಕೆ ಬೆಳೆಯುವ ಅವಕಾಶ ನೀಡಿದರೆ, ಅದು ಅನೇಕರನ್ನು ಕೆಡಿಸುತ್ತದೆ.

    ನಾವು ಅವಶ್ಯವಾಗಿ ತಿಳಕೊಳ್ಳಬೇಕಾದದ್ದು ಏನೆಂದರೆ, ನಮ್ಮ ಮುಂದೆ ಕೇವಲ ಎರಡು ಆಯ್ಕೆಗಳಿವೆ (ಜ್ಞಾನೋಕ್ತಿ 14:1ರಲ್ಲಿ ತಿಳಿಸಿರುವ ಹಾಗೆ): ಸಕ್ರಿಯವಾಗಿ ಸಭೆಯನ್ನು ಕಟ್ಟುವಂತದ್ದು ಅಥವಾ ಸಭೆಯನ್ನು ಹಾಳುಮಾಡುವಂತದ್ದು. ಸಭೆಯು ಪ್ರೀತಿಯ ಮೂಲಕ ಸಕ್ರಿಯವಾಗಿ ಕಟ್ಟಲ್ಪಡುತ್ತದೆ (1 ಕೊರಿಂಥ 8:1). ಅಂದರೆ, ನಾವು ಸಭೆಯಲ್ಲಿ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಎಂಬುದಾಗಿ ಬರೀ ಬಾಯಿ ಮಾತಿನಿಂದ ಹೇಳುವಂಥದ್ದಲ್ಲ, ಆದರೆ ಅದನ್ನು ಕೃತ್ಯದಲ್ಲಿಯೂ ಸತ್ಯದಲ್ಲಿಯೂ ತೋರಿಸುವವರಾಗಿರಬೇಕು (1 ಯೋಹಾನ 3:18), ಅದಲ್ಲದೆ ನಮ್ಮ ಪ್ರೀತಿಯು ನಿಷ್ಕಪಟವಾಗಿರಬೇಕು (ರೋಮಾ 12:9). ವಿಶೇಷವಾಗಿ ಭಿನ್ನಾಭಿಪ್ರಾಯ ಹಾಗೂ ಘರ್ಷಣೆಗಳ ಸಂಧರ್ಭಗಳಲ್ಲಿ ನಮ್ಮ ಪ್ರೀತಿಯ ಗುಣಮಟ್ಟವು ಪರೀಕ್ಷಿಸಲ್ಪಡುತ್ತದೆ - ಕ್ರಿಸ್ತನು ಅಂಥಾ ಪರಿಸ್ಥಿತಿಗಳಲ್ಲಿ ಸಭೆಯನ್ನು ಪ್ರೀತಿಸಿ "ತನ್ನನ್ನೇ ಒಪ್ಪಿಸಿಕೊಟ್ಟ" ಹಾಗೆ (ಎಫೆಸ 5:25), ನಾವು ನಮ್ಮ "ಸೇಚ್ಛೆಯನ್ನು" ಬಿಟ್ಟುಕೊಡುವದರ ಮೂಲಕ ನಿಜವಾದ ಪ್ರೀತಿಯನ್ನು ತೋರಿಸಿಕೊಡುತ್ತೇವೆ. ಯೇಸುಕ್ರಿಸ್ತನು ಹೇಗೆ ನಮಗೋಸ್ಕರ ದೇವರ ಬಳಿಯಲ್ಲಿ ಮಧ್ಯಸ್ಥಿಕೆ ವಹಿಸಿ ವಿಜ್ಞಾಪನೆ ಮಾಡುತ್ತಾನೋ, ಹಾಗೆಯೇ ನಾವೂ ಸಹ ನಮ್ಮ ಸಭೆಯ ಜನರಿಗೋಸ್ಕರ ವಿಜ್ಞಾಪನೆ ಮಾಡುವ ಹಂಗಿನಲ್ಲಿದ್ದೇವೆ (ಇಬ್ರಿಯ 7:25).

    ಪ್ರಕಟನೆ 12:10ರಲ್ಲಿ, ಸೈತಾನನನ್ನು "ಸಹೋದರರ ಮೇಲೆ ದೂರು ಹೇಳುವ ದೂರುಗಾರನು" ಎಂಬುದಾಗಿ ಕರೆಯಲಾಗಿದೆ. ಸಭೆಯ ಸದಸ್ಯರು ಸೈತಾನನೊಂದಿಗೆ ಸೇರಿ ಇತರ ವಿಶ್ವಾಸಿಗಳ ಮೇಲೆ ದೂರು ಹೇಳಲು ಪ್ರಾರಂಭಿಸುವಾಗ ಸಭೆಯು ಕೆಡವಲ್ಪಡುತ್ತದೆ. ನಾವು ಇದರ ಸ್ಪಷ್ಟ ಚಿತ್ರಣವನ್ನು ಪ್ರವಾದಿಯಾದ ಜೆಕರ್ಯನ ಜೀವಿತದಲ್ಲಿ ಕಾಣಬಹುದು; ಒಬ್ಬ ಯೌವನಸ್ಥ ಪ್ರವಾದಿಯಾಗಿದ್ದ ಜೆಕರ್ಯನು ಬಾಬಿಲೋನಿಗೆ ಸೆರೆಯೊಯ್ಯಲ್ಪಟ್ಟಿದ್ದ ದೇವಜನರನ್ನು ಪುನಃ ಯೆರೂಸಲೇಮಿಗೆ ಕರೆತಂದು ದೇವಾಲಯವನ್ನು ಕಟ್ಟುವ ಕಾರ್ಯದಲ್ಲಿ ಅವರನ್ನು ಮುನ್ನಡೆಸುವ ಕೆಲಸಕ್ಕಾಗಿ ದೇವರಿಂದ ಕರೆಯಲ್ಪಟ್ಟಿದ್ದನು. ಜೆಕರ್ಯ 3:1-5ರಲ್ಲಿ, ಮಹಾಯಾಜಕನಾದ ಯೆಹೋಶುವನು ಕೊಳೆಯಾದ ಬಟ್ಟೆಯನ್ನು ಧರಿಸಿ ನಿಂತಿದ್ದನು, ಹಾಗೂ ಅವನಿಗೆ ಪ್ರತಿವಾದಿಯಾಗಿ ಸೈತಾನನು ಅವನ ಬಲಗಡೆಯಲ್ಲಿ ನಿಂತಿದ್ದನು. ಕರ್ತನು ಯೆಹೋಶುವನ ಕೊಳೆ ಬಟ್ಟೆಯನ್ನು ತೆಗೆಯುವುದಕ್ಕೆ ಮುಂಚೆ ಸೈತಾನನನ್ನು ಗದರಿಸಿದನು. ನಂತರ ಅವನ ಕೊಳೆ ಬಟ್ಟೆಯನ್ನು ತೆಗೆದು ಅವನಿಗೆ ಶ್ರೇಷ್ಠವಸ್ತ್ರವನ್ನು ತೊಡಿಸಿದನು. ಆದರೆ ದೇವರು ಈ ಕನಸನ್ನು ಜೆಕರ್ಯನಿಗೆ ಏಕೆ ದಯಪಾಲಿಸಿದನು? ಅವನು ದೂರುಗಾರನ ಪಕ್ಷವನ್ನು ಹಿಡಿಯುತ್ತಾನೋ ಅಥವಾ ನಮ್ಮ ಮಧ್ಯಸ್ಥಿಕನಾದ ಯೇಸುವಿನ ಪಕ್ಷವನ್ನು ಹಿಡಿಯುತ್ತಾನೋ ಎಂದು ಪರೀಕ್ಷಿಸಲು ಈ ಕನಸನ್ನು ದಯಪಾಲಿಸಿದ್ದನು. ಜೆಕರ್ಯನು ಇಲ್ಲಿ ದೇವರ ಆಲಯವನ್ನು ಕಟ್ಟುವಾತನು ಹೇಗಿರಬೇಕು ಎಂದು ನಮಗೆ ತೋರಿಸಿ ಕೊಡುತ್ತಾನೆ. ಹೇಗೆಂದರೆ ದೇವದೂತರು ಯೆಹೋಶುವನಿಗೆ ಶ್ರೇಷ್ಠವಸ್ತ್ರವನ್ನು ತೊಡಿಸಿದ ಕೂಡಲೇ, ಜೆಕರ್ಯನು ಅವನನ್ನು ಇನ್ನೂ ಸುಂದರವಾಗಿ ಕಾಣುವಂತೆ ಮಾಡಲು, ಅವನ ತಲೆಗೆ ಶುಭ್ರವಾದ ಮುಂಡಾಸವನ್ನು ಸುತ್ತಿರಿ ಎಂಬುದಾಗಿ ಹೇಳುತ್ತಾನೆ.

    ಇಂದು ನಾವೂ ಸಹ ಸಭೆಯನ್ನು ದೇವರ ವಾಸಸ್ಥಾನವಾಗಿ ಕಟ್ಟುವ ಕೆಲಸದಲ್ಲಿ ಇದೇ ಪರೀಕ್ಷೆಯನ್ನು ಎದುರಿಸುತ್ತೇವೆ. ಒಂದು ಕಡೆ ಸೈತಾನನು ಸಭೆಯನ್ನು "ಹಾಳುಮಾಡುವ" ತನ್ನ ಉದ್ದೇಶವನ್ನು ಈಡೇರಿಸಿಕೊಳ್ಳಲು, ಇತರ ಸಹೋದರರ ಮೇಲೆ ಆರೋಪ ಹೊರಿಸುವಂತಹ ಯೋಚನೆಗಳು ನಮ್ಮಲ್ಲಿ ಬೇರೂರುವಂತೆ ಮಾಡಿ, ಸಭೆಯಲ್ಲಿ ಅವರ ವಿರುದ್ಧವಾಗಿ ಗಾಳಿಸುದ್ದಿಗಳನ್ನು ಎಬ್ಬಿಸುವಂತೆ ನಮ್ಮನ್ನು ನಡೆಸಿ, ಅಂತಿಮವಾಗಿ ಸಭೆಯನ್ನು "ಸೀಳುವ" ತನ್ನ ಸೇವೆಗೆ ನಮ್ಮನ್ನು ಆಹ್ವಾನಿಸುತ್ತಿದ್ದಾನೆ. ಮತ್ತೊಂದು ಕಡೆ, ಯೇಸುವು ನಮಗೆ ನೀಡುವ ಆಹ್ವಾನ ಯಾವುದೆಂದರೆ, ಇತರರನ್ನು "ಬಲಪಡಿಸಿ ಬೆಳೆಸುವ" ಸೇವೆಯಲ್ಲಿ ಸಹಭಾಗಿಗಳಾಗಿ ಸೇರಿಕೊಂಡು, ಮಧ್ಯಸ್ಥಿಕೆಯ ಪ್ರಾರ್ಥನೆಯ ಮೂಲಕ - ಯೇಸುವು ಈಗ ನಿರಂತರವಾಗಿ ಮಾಡುತ್ತಾ ಇರುವಂತೆ - ಅವರನ್ನು ಹೆಚ್ಚಿನ ಮಹಿಮೆಗೆ ನಡೆಸುವದು (ಇಬ್ರಿಯ 7:25). ಪಾಪವಿರುವ ಜಾಗದಲ್ಲಿಯೂ, ನಮ್ಮ ಗುರಿ ಯಾವಾಗಲೂ "ನಮ್ಮ ಸಹೋದರನನ್ನು ಸಂಪಾದಿಸಿಕೊಳ್ಳುವುದೇ" ಆಗಿರಬೇಕು (ಮತ್ತಾಯ 18:15).

    ಯಾವ ಸಭೆಯಲ್ಲಿ ಯಥಾರ್ಥವಾಗಿ ಈ ಕಾರ್ಯ ನಡೆಯುತ್ತಿದೆಯೋ, ಅದರ ಮಧ್ಯದಲ್ಲಿ ಯೇಸು ಕ್ರಿಸ್ತನು ಇರುತ್ತಾನೆ, ಮತ್ತು ಆ ಮೂಲಕ ಅಂತಹ ಸಭೆಯಲ್ಲಿ ಎಲ್ಲಾ ಅಂಧಕಾರದ ದೊರೆತನಗಳ ವಿರುದ್ಧವಾಗಿ ಸಂಪೂರ್ಣ ಅಧಿಕಾರವು ಇರುತ್ತದೆ (ಮತ್ತಾಯ 18:18-20).

    ಅಧ್ಯಾಯ 9
    ಕುರುಬನಾಗಿ ಇದ್ದುಕೊಂಡು ಸಭೆಯನ್ನು ಪರಿಪಾಲನೆ ಮಾಡುವುದು

    "ಅವರು ಕುರುಬನಿಲ್ಲದ ಕುರಿಗಳಂತೆ ಇರುವುದನ್ನು ನೋಡಿ ಅವರಿಗಾಗಿ ಕನಿಕರಪಟ್ಟನು" (ಮತ್ತಾಯ 9:36)

    ಮತ್ತಾಯ 9:37-38ರಲ್ಲಿ ಯೇಸುವು ಹೇಳಿದ್ದೇನೆಂದರೆ, ಲೋಕದಲ್ಲಿ "ಬೆಳೆಯನ್ನು ಕೊಯ್ಯಲು ಕೇವಲ ಕೆಲವೇ ಕೆಲಸದವರಿದ್ದಾರೆ, ಆದರೆ ಬೆಳೆಯು ಬಹಳಷ್ಟಿದೆ". ನಂತರ ಆತನು ನಮಗೆ, "ಹೊಲಗಳಿಗೆ ಬೆಳೆಯ ಕಟಾವಿಗಾಗಿ ಕೆಲಸದವರನ್ನು ಕಳುಹಿಸಲಿಕ್ಕಾಗಿ ಪ್ರಾರ್ಥಿಸಿರಿ" ಎಂದು ಆದೇಶಿಸಿದನು. ಅನೇಕ ಜನರು ಈ ವಾಕ್ಯವನ್ನು ಉಪಯೋಗಿಸಿಕೊಂಡು, ಜನರನ್ನು ಸುವಾರ್ತಾ ಕ್ಷೇತ್ರದ ಕಾರ್ಯಕ್ಕಾಗಿ ಹೊರಗೆ ಹೋಗುವಂತೆ ಭಾವಾನಾತ್ಮಕವಾಗಿ ಉತ್ತೇಜಿಸುತ್ತಾರೆ. ಆದರೆ, ನಾವು 36-38ನೇ ವಚನಗಳನ್ನು ಸಂಪೂರ್ಣವಾಗಿ ಓದಿ ನೋಡಿದರೆ, ಯೇಸುವು "ಕೆಲಸದವರು" ಎಂದು ನಿರ್ದಿಷ್ಟವಾಗಿ ಯಾರ ಕುರಿತಾಗಿ ಹೇಳಿದರು ಎನ್ನುವದು ತಿಳಿಯುತ್ತದೆ.

    ಯೇಸುವು ಜನರ ಗುಂಪನ್ನು ನೋಡಿದಾಗ, ಅವರಿಗೆ ಬೋಧಕರ ಮತ್ತು ಗುರುಗಳ ಕೊರತೆ ಇರಲಿಲ್ಲ ಎನ್ನುವುದನ್ನು ಗಮನಿಸಿದನು (ಅಲ್ಲಿ ಬಹಳ ಫರಿಸಾಯರು, ಸದ್ದುಕಾಯರು ಇದ್ದರಷ್ಟೇ); ಅಲ್ಲಿ ಕೂಟಗಳ ಕೊರತೆಯಿರಲಿಲ್ಲ (ಜನರು ಸಬ್ಬತ್ ದಿನಗಳಲ್ಲಿ ಮತ್ತು ಇತರೇ ಸಮಯದಲ್ಲಿ ದೇವಾಲಯದಲ್ಲಿ ಕೂಡಿಬರುತ್ತಿದ್ದರು); ಮತ್ತು ಅಲ್ಲಿ ಅದ್ಭುತಕಾರ್ಯಗಳ ಕೊರತೆಯಿರಲಿಲ್ಲ (ಅವರ ಮಧ್ಯದಲ್ಲಿ ಯೇಸುವು ಈಗಾಗಲೇ ಅನೇಕ ಅದ್ಭುತಕಾರ್ಯಗಳನ್ನು ಮಾಡಿದ್ದನು). ಅವರಲ್ಲಿ ನಿಜವಾಗಿಯೂ ಇದ್ದ ಕುಂದುಕೊರತೆ ಯಾವುದೆಂದರೆ, ’ಕುರುಬರ’ (ನಾಯಕರ) ಕೊರತೆ.

    ಇಂದಿನ ದಿನವೂ ಸಹ ಈ ಮಾತು ನಿಜವಾಗಿದೆ. ಈಗಿನ ವರ್ತಮಾನ ಕಾಲ ಹೇಗಿದೆಯೆಂದರೆ, ಸತ್ಯವೇದ ಹಾಗೂ ಸಿದ್ಧಾಂತಗಳ ಬೋಧನೆಗಳು ಎಲ್ಲೆಡೆಯೂ ಮುದ್ರಣರೂಪದಲ್ಲಿ, ಅಂತರ್ಜಾಲದ (ಇಂಟರ್‌ನೆಟ್) ಮೂಲಕ, ಹೊಸ ಮಾದರಿಯ ದೂರವಾಣಿ (ಸ್ಮಾರ್ಟ್ ಫೋನ್) ಮುಂತಾದುವುಗಳ ಮೂಲಕ ಸುಲಭವಾಗಿ ಲಭ್ಯವಿವೆ, ಮತ್ತು ಸಾಕಷ್ಟು ಕ್ರೈಸ್ತಸಭೆಗಳು ವಾರವಿಡೀ ಅನೇಕ ಕೂಟಗಳನ್ನು ಏರ್ಪಡಿಸುತ್ತಾರೆ. ಆದರೆ ದೇವರು ಇನ್ನೂ ಹುಡುಕುತ್ತಿರುವ ನಾಯಕರು ಎಂಥವರು ಎಂದರೆ, ತಮ್ಮ ಕಠಿಣವಾದ, ಸ್ವಾರ್ಥದಿಂದ ತುಂಬಿರುವ ಹೃದಯವನ್ನು ಮುರಿಯಲು ಕರ್ತನಿಗೆ ಒಪ್ಪಿಸಿಕೊಟ್ಟು, ಅದರ ಬದಲಾಗಿ ಮೃದುವಾದ, ಕುರುಬನ ಹೃದಯವನ್ನು ಹೊಂದಲು ಸಿದ್ಧರಾಗಿರುವವರು.

    ದೇವರು ಬಹಳ ಹಿಂದೆಯೇ, ಯೆರೆಮೀಯನ ಪುಸ್ತಕದ 3:14-15 ರಲ್ಲಿ, ತನ್ನ ಸಭೆಯ ("ಚಿಯೋನ್") ಎರಡು ಬಹುಮುಖ್ಯ ಗುಣಲಕ್ಷಣಗಳನ್ನು ನಮಗೆ ತೋರಿಸಿದರು:

  • i. ಅವರು ಬೇರೆ ಬೇರೆ ನಗರಗಳಿಂದ, ಕುಟುಂಬಗಳಿಂದ ಬಂದ ವಿವಿಧ ರೀತಿಯ ಜನರು ಆಗಿರುತ್ತಾರೆ.
  • ii. ದೇವರು ಅವರಿಗೆ ತನ್ನ ಹೃದಯಕ್ಕೆ ಒಪ್ಪುವ ನಾಯಕರನ್ನು (’ಪಾಲಕರನ್ನು’) ಕೊಡುವವನಾಗಿರುತ್ತಾನೆ.
  • ಹಾಗಾದರೆ, "ದೇವರ ಹೃದಯಕ್ಕೆ ಒಪ್ಪುವ ಒಬ್ಬ ಕುರುಬನು" ಹೇಗಿರುತ್ತಾನೆ?

    ಇಂತಹ ಕುರುಬನು ಕ್ರಿಸ್ತನಲ್ಲಿ ಇದ್ದಂಥ ಅನುಕಂಪವನ್ನು ಹೊಂದಿರುತ್ತಾನೆ. ಇದು ಕೇವಲ ಮಾನವನ ಕನಿಕರಕ್ಕಿಂತ ದೊಡ್ಡದು. ಈ ಅನುಕಂಪವು ಒಂದು ಆತ್ಮಿಕ ಭಾವನೆಯಾಗಿದ್ದು, ಅದು ಜನರು ಸೈತಾನನಿಂದ "ಹಿಂಸಿಸಲ್ಪಟ್ಟು, ಕೆಡವಲ್ಪಟ್ಟು ಬಿದ್ದಿರುವುದನ್ನು" ನೋಡಿ ಪ್ರೇರಿತವಾದ ಕನಿಕರವಾಗಿದೆ (ಮತ್ತಾಯ 9:36 - margin). ಅಂದರೆ, ಜನರ ದೈಹಿಕ, ಭಾವಾನಾತ್ಮಕ ಉನ್ನತಿಗಿಂತ ಹೆಚ್ಚಾಗಿ ಅವರ ಆತ್ಮಿಕ ಉನ್ನತಿಗಾಗಿ ಚಿಂತಿಸುವುದೇ ಅಲ್ಲದೆ, ಧೈರ್ಯವಾಗಿ ಅವರಿಗೆ ಸತ್ಯವನ್ನು ಪ್ರೀತಿಯಿಂದ ಹೇಳಲು ಸಿದ್ಧರಾಗಿರುವುದು ಆಗಿದೆ.

    ಇಂತಹ ಕುರುಬನು ಯಾವುದೇ ಅನಾನುಕೂಲತೆಯನ್ನು ಅನುಭವಿಸಲು ಸಿದ್ಧನಾಗಿರುತ್ತಾನೆ. ನಾವು ಯೇಸುವಿನ ಜೀವನದ ಉದ್ದಕ್ಕೂ ಏನನ್ನು ನೋಡುತ್ತೇವೆ ಎಂದರೆ, ಆತನು ತನಗೆ ತಂದೆಯು ತೋರಿಸಿದ ಮಾರ್ಗದಲ್ಲೇ ಯಾವಾಗಲೂ ನಡೆದನು - ಅದು ನೂರಾರು ಮೈಲುಗಳ ನಡಿಗೆಯೇ ಆಗಿರಬಹುದು, ಗುಡ್ಡ ಬಯಲುಗಳಲ್ಲಿ ಮಲಗುವದೇ ಆಗಿರಬಹುದು, ಸಮಯಕ್ಕೆ ಸರಿಯಾಗಿ ಆಹಾರವಿಲ್ಲದೇ ಇರುವುದು ಆಗಿರಬಹುದು, ಇತ್ಯಾದಿ. ಆತನ ಪಕ್ಷಪಾತವಿಲ್ಲದ ಕಾಳಜಿ, ದೇವಾಲಯದ ಸುಪ್ರಸಿದ್ಧ ಅಧಿಕಾರಿಯಂತಹ ಜನರಿಗೆ ಸಿಕ್ಕಿದ ಹಾಗೆಯೇ (ಮತ್ತಾಯ 9:18-19), ರಕ್ತಸ್ರಾವ ರೋಗವಿದ್ದ ಹೆಂಗಸಿನಂತಹ ಬಡವರಿಗೂ ಸಿಕ್ಕಿತು (ಮತ್ತಾಯ 9:20-22). ಯೇಸುವಿನ ಜೀವನವೂ, ಮರಣವೂ, "ತನಗಾಗಿ, ತನ್ನ ಸುಖಕ್ಕಾಗಿ ಸ್ವಲ್ಪವೂ ಚಿಂತಿಸದೆ" ಇದ್ದಂಥ ಜೀವಿತವಾಗಿತ್ತು (ಯೆಶಾಯ 53:8, Message Bible) - ಮತ್ತು ನಿಜವಾದ ಕುರುಬನ ಹೃದಯವುಳ್ಳ ನಾಯಕರು ತಮ್ಮ ಜೀವನದಲ್ಲಿ ಆತನ ಮಾದರಿಯನ್ನೇ ಅನುಸರಿಸಿ ನಡೆಯುವವರಾಗಿರುತ್ತಾರೆ.

    ಇಂತಹ ಒಬ್ಬ ಕುರುಬನು ಸತ್ಯಕ್ಕಾಗಿ ದೃಢ ನಿಲುವನ್ನು ಹೊಂದಿರುತ್ತಾನೆ. ಯೆಹೂದ್ಯರು ಸೆರೆಹಿಡಿಯಲ್ಪಟ್ಟು ಬಾಬೆಲ್ ದೇಶಕ್ಕೆ ಸಾಗಿಸಲ್ಪಟ್ಟ ಸಮಯದಲ್ಲಿ, ಅವರ ಯೌವನಸ್ಥರಲ್ಲಿ ಒಬ್ಬನಾಗಿದ್ದ ದಾನಿಯೇಲನು ತನ್ನ ಹೃದಯದಲ್ಲಿ, ದೇವರ ಗುಣಮಟ್ಟಗಳ ವಿಷಯದಲ್ಲಿ ಯಾವುದೇ ಸಂಧಾನ ಮಾಡಿಕೊಳ್ಳುವುದಿಲ್ಲವೆಂದು ನಿರ್ಧಾರ ಮಾಡಿಕೊಂಡನು (ದಾನಿಯೇಲ 1:8). ಆತನ ಪ್ರಶಾಂತವಾದ ದೃಢನಿಶ್ಚಯವು ಆತನ ಮೂವರು ಸಹಭಾಗಿಗಳೂ ಸಹ ಆತನೊಂದಿಗೆ ಧೈರ್ಯವಾಗಿ ನಿಲ್ಲುವುದಕ್ಕೆ ದಾರಿಮಾಡಿತು (ದಾನಿಯೇಲ 1:11).

    ಇಂತಹ ಒಬ್ಬ ಕುರುಬನು ಪವಿತ್ರಾತ್ಮನೊಂದಿಗೆ ಸೇರಿಕೊಂಡು ಇತರರ ಸುಖ-ದುಃಖದಲ್ಲಿ ಮತ್ತು ನಂಬಿಕೆಯಲ್ಲಿ, ಒಬ್ಬ ಸಹಾಯಕನಾಗಿ ಇರುತ್ತಾನೆ. ಇದನ್ನು ಪೌಲನು ಈ ರೀತಿಯಾಗಿ ವಿವರಿಸಿದ್ದಾನೆ: ”ನಾವು ನಂಬಿಕೆಯ ವಿಷಯದಲ್ಲಿಯೂ ನಿಮ್ಮ ಮೇಲೆ ದೊರೆತನ ಮಾಡುವವರಲ್ಲ, ನಿಮ್ಮ ಮೇಲೆ ಸಂದೇಹಪಡುವದಿಲ್ಲ; ನಾವು ನಿಮ್ಮ ಜೊತೆಗಾರರೂ, ನಿಮ್ಮ ಉನ್ನತಿಯಲ್ಲಿ ಸಂತೋಷಿಸುವ ಸಹಾಯಕರೂ ಆಗಿದ್ದೇವೆ. ನೀವು ನಮ್ಮ ನಂಬಿಕೆಯಲ್ಲಿ ನಿಲ್ಲದೆ, ನಿಮ್ಮದೇ ಆದ ನಂಬಿಕೆಯಲ್ಲಿ ದೃಢವಾಗಿ ನಿಲ್ಲುವಿರೆಂದು ನನಗೆ ಗೊತ್ತು" (2 ಕೊರಿ. 1:24, Message ಭಾಷಾಂತರ).

    ಇಂತಹ ಒಬ್ಬ ಕುರುಬನು ಆತ್ಮಿಕ ಅಧಿಕಾರವನ್ನು ಹೊಂದಿರುತ್ತಾನೆ. ಇದು ಎಂಥದ್ದೆಂದರೆ, "ಈ ಇಹಲೋಕದ ಅಧಿಕಾರಿಯು" (ಸೈತಾನನು) ಬಂದಾಗ, ಆತನಿಗೆ ನಮ್ಮ ಜೀವಿತದ ಯಾವುದೇ ಕ್ಷೇತ್ರದ ಮೇಲೆ ಅಧಿಕಾರ ಮಾಡಲು ಜಾಗ ಸಿಗುವದಿಲ್ಲ (ಯೋಹಾನ 14:30) ಮತ್ತು ಇದರ ಕುರಿತಾಗಿ ಸಾಕ್ಷೀಕರಿಸಲು ದೇವರೊಬ್ಬರಿಗೇ ಸಾಧ್ಯ.

    ಇಂತಹ ನಾಯಕನು ದೇವರ ರಾಜ್ಯದ ಸಂಪೂರ್ಣ ಸುವಾರ್ತೆಯನ್ನು ಬೋಧಿಸಲು ಹೆಚ್ಚಿನ ಆಸಕ್ತಿ ಉಳ್ಳವನಾಗಿರುತ್ತಾನೆ. ಅನೇಕ ಬೋಧಕರು ಲೋಕಪ್ರಿಯ ವಿಷಯಗಳ ಬಗ್ಗೆ ಮಾತಾಡಲು ಮತ್ತು ಆ ಮೂಲಕ ತಮ್ಮ ಸಭಿಕರ ಕಿವಿಗಳನ್ನು ಮೆಚ್ಚಿಸಲು ಇಷ್ಟಪಡುತ್ತಾರೆ. (2 ತಿಮೊಥಿ 4:3-4). ಇಂಥಾ ಜನರು ಕುರುಬರಲ್ಲ. ಇನ್ನೊಂದೆಡೆ ನೋಡುವುದಾದರೆ, ಪೌಲನು ತನ್ನ ಕರೆಯುವಿಕೆಯನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡನೆಂದರೆ, ತಾನು ಸುವಾರ್ತೆಯ ಮೂಲಕ ದೇವರ ಸಂಪೂರ್ಣ ಸಂಕಲ್ಪವನ್ನು ಸ್ಪಷ್ಟವಾಗಿ ತಿಳಿಯಪಡಿಸದೇ ಹೋದರೆ, ಜನರ ನಾಶನಕ್ಕೆ ಸ್ವತಃ ತಾನೇ ಹೊಣೆಯಾಗುವೆನೆಂದು ಹೇಳಿದನು (ಅ. ಕೃ 20:26-27).

    ಇಂತಹ ಕುರುಬನು ಕುರಿಮಂದೆಯ ರಕ್ಷಣೆಗಾಗಿ ತನ್ನ ಪ್ರಾಣವನ್ನು ಕೊಡಲು ಸಿದ್ಧನಿರುತ್ತಾನೆ. ಇದಕ್ಕಾಗಿ, ಆತನು ನಿರ್ಭಯನಾಗಿ ಕೊನೆಯ ವರೆಗೆ ತನ್ನ ಕುರಿಗಳ ಜೊತೆಗೆ ಇರುತ್ತಾನೆ, ಮತ್ತು ಇದಕ್ಕಾಗಿ ತನಗೆ ಇಷ್ಟವಾದ ಕಾರ್ಯಗಳನ್ನು, ತನ್ನ ಅವಶ್ಯಕತೆಗಳನ್ನು, ಸುಖ-ಸೌಕರ್ಯಗಳನ್ನು, ತನ್ನ ಸ್ವಂತ ಯೋಜನೆಗಳನ್ನು ಬಿಡುವದಕ್ಕೂ ಆತನು ಸಿದ್ಧನಿರುತ್ತಾನೆ. ಯೇಸುವು ಇಂತಹ ಒಳ್ಳೇ ಕುರುಬನ ಹೃದಯ ಮತ್ತು ಕೂಲಿಯಾಳಿನ ಹೃದಯ ಇವುಗಳ ನಡುವಿನ ವ್ಯತ್ಯಾಸವನ್ನು ವಿವರಿಸುತ್ತಾ, "ಕೂಲಿಯಾಳು ಕುರುಬನು ತನಗೆ ಅನಾನುಕೂಲ ಅಥವಾ ಆಪತ್ತು ಉಂಟಾದಾಗ ಕುರಿಗಳನ್ನು ಬಿಟ್ಟು ಓಡಿಹೋಗುತ್ತಾನೆ; ಯಾಕೆಂದರೆ, ಅವನಿಗೆ ಕುರಿಗಳ ಚಿಂತೆ ಇರುವುದಿಲ್ಲ," ಎಂದು ಹೇಳಿದನು (ಯೋಹಾನ 10:11-13). ಪೌಲನು ತನ್ನ ಜೊತೆ-ಕಾರ್ಯಕರ್ತರ ಜೀವಿತಗಳನ್ನು ಪರಿಶೀಲಿಸಿದಾಗ, ಅವರೆಲ್ಲರೂ ಒಟ್ಟಾರೆ ಸ್ವಕಾರ್ಯಗಳಲ್ಲಿ ಮನಸ್ಸಿಟ್ಟಿದ್ದಾರೆ ಎಂದು ಅವನಿಗೆ ಸ್ಪಷ್ಟವಾಯಿತು. ಕೇವಲ ತಿಮೊಥೆಯನು ತನ್ನಂತೆಯೇ ಆತ್ಮಿಕ ಹೃದಯವನ್ನು ಹೊಂದಿದ್ದನು, ಏಕೆಂದರೆ ಆತನಿಗೆ ಮಂದೆಯ ಒಳಿತಿನ ಬಗ್ಗೆ ಯಥಾರ್ಥವಾದ ಕಾಳಜಿಯಿತ್ತು (ಫಿಲಿಪ್ಪಿ. 2:19-21).

    ಯಾವನು ನಮಗೋಸ್ಕರ ಹೋಗುವನು?

    ನನಗೆ ನೆನಪಿದೆ, ಅನೇಕ ವರ್ಷಗಳ ಹಿಂದೆ ಕರ್ತನು ನನ್ನನ್ನು ಈ ರೀತಿಯಾಗಿ ಪ್ರಶ್ನಿಸಿದನು, "ನೀನು ಯಾವ ಕುರುಬರಿಗೆ (ಆತ್ಮಿಕ ನಾಯಕರಿಗೆ) ಅಧೀನನಾಗಿರುವೆ? ಯಾರು ನಿನ್ನನ್ನು ಕಾಯುತ್ತಾರೆ ಮತ್ತು ನಿನ್ನ ಜೀವನದ ಬಗ್ಗೆ ದೇವರಿಗೆ ಸಂತೋಷವಾಗಿ ಲೆಕ್ಕ ಕೊಡುತ್ತಾರೆ?" (ಇಬ್ರಿಯ 13:17). ನಾನು ಯೇಸುವಿನ ಜೀವನದ ಉದಾಹರಣೆಯನ್ನು ಗಮನಿಸಿ ನೋಡಿದೆ; ಆತನು ಪ್ರತಿಯೊಂದು ವಿಷಯದಲ್ಲೂ ನಂಬಿಗಸ್ಥನಾಗಿದ್ದು, ದೇವರು ತನ್ನ ಮೇಲೆ ಇಟ್ಟ ಪ್ರತಿ ಅಧಿಕಾರಕ್ಕೂ ಅಧೀನನಾದ್ದರಿಂದ - ಅದರಲ್ಲೂ ತನ್ನ ಜೀವಿತದ ಮೊದಲ 30 ವರ್ಷಗಳಲ್ಲಿ - ಆತನು ನಿಜವಾದ ಆತ್ಮಿಕ ಅಧಿಕಾರ ಹೊಂದಿದ್ದನು (ಮತ್ತಾಯ 8:8-9). ಆಗ ನನಗೆ ಗೋಚರಿಸಿದ ವಿಷಯ, ಯೇಸುವಿನಲ್ಲಿ ಇಂತಹ ಆತ್ಮಿಕ ಅಧಿಕಾರ ಇದ್ದುದರಿಂದ, ಆತನು ಹೊಡೆತಗಳನ್ನು ಅನುಭವಿಸಿ ರಕ್ತ ಸುರಿಯುತ್ತಿದ್ದಾಗಲೂ, ಧೈರ್ಯವಾಗಿ ಪಿಲಾತನ ಮುಂದೆಯೂ ನಿಲ್ಲಲು ಆತನಿಗೆ ಸಾಧ್ಯವಾಯಿತು; ಮತ್ತು ಪಿಲಾತನು ತನ್ನ ಅಧಿಕಾರದ ಮೂಲಕ ಆತನನ್ನು ಬೆದರಿಸಲು ಪ್ರಯತ್ನಿಸಿದಾಗ, ಯೇಸುವು ಕದಲದೆ ಶಾಂತಚಿತ್ತದಿಂದ ಆತನಿಗೆ, "ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ," ಎಂದು ನುಡಿದನು. (ಯೋಹಾನ 19:10,11).

    ಈ ವಾಕ್ಯಗಳ ಸತ್ಯವನ್ನು ನಾನು ಕಂಡಾಗ ನನ್ನ ಹೃದಯದ ಕಣ್ಣುಗಳು ತೆರೆಯಲ್ಪಟ್ಟು, ದೇವರು ನನಗೆ ಕೊಡಲಿರುವ ಇಂತಹ ನಿಜವಾದ ಆತ್ಮಿಕ ಕುರುಬರಿರುವ ಚಿಯೋನ್ ಸಭೆಯನ್ನು ಕಂಡುಕೊಳ್ಳಬೇಕು, ಎಂಬ ಒಂದು ಬೆಂಕಿಯ ಜ್ವಾಲೆ ನನ್ನಲ್ಲಿ ಹತ್ತಿಕೊಂಡಿತು. ಏನೇ ಆಗಲಿ, ತೆರಬೇಕಾದ ಬೆಲೆ ಎಷ್ಟೇ ಆಗಿದ್ದರೂ - ಬಂಧುಗಳು, ಉದ್ಯೋಗ, ಇಂಥವುಗಳನ್ನು ಬಿಟ್ಟುಕೊಡುವದು - ಕ್ರಿಸ್ತನ ದೇಹವನ್ನು ಕಟ್ಟಲು ನನ್ನನ್ನು ಹೃತ್ಪೂರ್ವಕವಾಗಿ ಒಪ್ಪಿಸಿಕೊಡುವೆನೆಂದು ನಾನು ತೀರ್ಮಾನಿಸಿದೆ.

    ಯೆಶಾಯನ ಅನುಭವದ ಹಾಗೆ, ದೇವರು ನನ್ನ ಎಲ್ಲಾ ಪಾಪಗಳನ್ನು ಶುದ್ಧೀಕರಿಸಿ, ನನ್ನನ್ನು ಮುರಿದ ನಂತರ, "ನಾನು ಯಾರನ್ನು ಕಳುಹಿಸಲಿ? ಯಾರು ನಮಗಾಗಿ ಹೋಗುವನು?" ಎಂದು ನನ್ನನ್ನು ಕೇಳಿದರು (ಯೆಶಾಯ 6:8).

    ನಾನು 2007ನೇ ಇಸವಿಯಲ್ಲಿ ತೆಗೆದುಕೊಂಡ ಆ ತೀರ್ಮಾನದ ವಿಷಯವಾಗಿ, ಅದನ್ನು ಪೂರೈಸುವ ನನ್ನ ಪ್ರಯತ್ನದಲ್ಲಿ ವಿಧ ವಿಧವಾದ ಸನ್ನಿವೇಶಗಳು ಎದುರಾದಾಗಲೂ, ನಾನು ಎಂದೂ ಪಶ್ಚಾತ್ತಾಪ ಪಟ್ಟಿಲ್ಲ.

    ಒಂದು ವೇಳೆ ಈ ದಿನ ನಿಮಗೆ, "ಬಾಬೆಲಿನ ಆ ಸಮೂಹಗಳು ಮತ್ತು ಸಂಘಗಳಿಂದ ಹೊರಗೆ ಬಂದು, ಆತ್ಮಿಕ ’ಚಿಯೋನಿನಲ್ಲಿ’ ನನ್ನ ಸಭೆಯನ್ನು ಕಟ್ಟು," ಎಂಬ ದೇವರ ಕರೆ ಕೇಳಿದ್ದೇ ಆದಲ್ಲಿ, "ಇಗೋ, ನಾನು ಸಿದ್ಧನಿದ್ದೇನೆ, ನನ್ನನ್ನು ಕಳುಹಿಸು!" ಎಂಬ ಉತ್ತರ ನಿಮ್ಮದಾಗಿರುತ್ತದೆ ಎಂದು ನನ್ನ ನಿರೀಕ್ಷೆಯಾಗಿದೆ.

    ಆಮೆನ್.

    _-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-_-