ಶುದ್ಧವಾದ ಸಭೆಯನ್ನು ಕಟ್ಟುವುದಕ್ಕಾಗಿ ಕಲವು ಪ್ರಾಮುಖ್ಯವಾದ ತತ್ವಗಳು
ನಮ್ಮ ಸಿ.ಎಫ್.ಸಿ (CFC) ಸಭೆಗಳಲ್ಲಿ, ನೀವು ಸತ್ತ ಮೇಲೆ ಸ್ವರ್ಗಕ್ಕೆ ಹೇಗೆ ಹೋಗಬೇಕು ಎಂಬುದರ ಕುರಿತು ನಾವು ಬೋಧಿಸುವುದಿಲ್ಲ. ಯೇಸು ನಮಗೆ ಹೇಳಿದ್ದು "ನೀವು ಹೋಗಿ ಎಲ್ಲಾ ರಾಷ್ಟ್ರಗಳಲ್ಲಿ ಶಿಷ್ಯರನ್ನು ಮಾಡಿರಿ - ಮತ್ತು ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಪಾಲಿಸಲು ಅವರಿಗೆ ಕಲಿಸಿರಿ”; ನರಕದಿಂದ ತಪ್ಪಿಸಿಕೊಂಡು ಸ್ವರ್ಗಕ್ಕೆ ಹೇಗೆ ಹೋಗಬೇಕು ಎಂಬುದನ್ನಲ್ಲ!! ಆದರೆ, ದುರದೃಷ್ಟವಶಾತ್ ಇಂದು ಸುವಾರ್ತೆಯ ಹೆಚ್ಚಿನ ಬೋಧನೆಗಳು ನೀವು ಸತ್ತ ಮೇಲೆ ಸ್ವರ್ಗಕ್ಕೆ ಹೇಗೆ ಹೋಗಬೇಕು ಎಂಬುದರ ಮೇಲೆಯೇ ಕೇಂದ್ರೀಕೃತವಾಗಿವೆ. ನಾನು ಅಂತಹ ಸುವಾರ್ತೆಯನ್ನು ಬೋಧಿಸುವುದಿಲ್ಲ, ಏಕೆಂದರೆ ಜನರನ್ನು ಸ್ವರ್ಗಕ್ಕೆ ಕರೆದೊಯ್ಯುವಲ್ಲಿ ನನಗೆ ಆಸಕ್ತಿಯಿಲ್ಲ. ಅದು ದೇವರ ಕೆಲಸ. ನಾನು ಈ ಭೂಮಿಯ ಮೇಲೆ ಯೇಸುಕ್ರಿಸ್ತನಿಗಾಗಿ ಶಿಷ್ಯರನ್ನು ಮಾಡಲು ಬಯಸುತ್ತೇನೆ. ಮತ್ತು ನಂತರ ಯೇಸು ಆಜ್ಞಾಪಿಸಿದ ಎಲ್ಲವನ್ನೂ ಪಾಲಿಸಲು ಅವರಿಗೆ ಕಲಿಸಲು ಪ್ರಯತ್ನಿಸುತ್ತೇನೆ. ಇದು ಮತ್ತಾಯ 28:18-20 ರಲ್ಲಿ ಕರ್ತನು ನಮಗೆ ಸ್ಪಷ್ಟವಾಗಿ ನೀಡಿದ ಜವಾಬ್ದಾರಿಯಾಗಿದೆ. ಕಳೆದ 50 ವರ್ಷಗಳಿಂದ ವಿಶ್ವದ ಅನೇಕ ಭಾಗಗಳಲ್ಲಿರುವ ನಮ್ಮ ಸಿ.ಎಫ್.ಸಿ ಸಭೆ ಗಳಲ್ಲಿ ನಾವು ಇದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ.
ನನ್ನ ಸುವಾರ್ತೆಯು ಈ ಭೂಮಿಯ ಮೇಲೆ ಯೇಸುಕ್ರಿಸ್ತನ ಶಿಷ್ಯರಾಗಿರುವುದು ಹೇಗೆ ಮತ್ತು ಪ್ರತಿದಿನ ಆತನನ್ನು ಹಿಂಬಾಲಿಸುವುದು ಹೇಗೆ ಎಂಬುದರ ಕುರಿತಾಗಿದೆ. ಜೀವಕ್ಕೆ ನಡೆಸುವ ದಾರಿಯು ಇಕ್ಕಟ್ಟಾದ ಬಾಗಿಲು ಮತ್ತು ಕಿರಿದಾದ ದಾರಿ ಎಂದು ಯೇಸು ಹೇಳಿದ್ದಾನೆ (ಮತ್ತಾಯ 7:14). ನಮ್ಮ ಪಾಪಗಳ ಬಗ್ಗೆ ಪಶ್ಚಾತ್ತಾಪ ಪಟ್ಟು, ಕ್ರಿಸ್ತನ ಮರಣ ಮತ್ತು ಪುನರುತ್ಥಾನದಲ್ಲಿ ನಂಬಿಕೆ ಇಡುವ ಮೂಲಕ ನಾವು ಈ ಇಕ್ಕಟ್ಟಾದ ಬಾಗಿಲನ್ನು ಪ್ರವೇಶಿಸಬಹುದು. ನಂತರ ನಾವು ಪ್ರತಿದಿನ ನಮ್ಮ ಶಿಲುಬೆಯನ್ನು ಹೊತ್ತುಕೊಂಡು, 'ಸ್ವಾರ್ಥಕ್ಕಾಗಿ’ ಸಾಯುತ್ತಾ, ಕ್ರಿಸ್ತನನ್ನು ನಮ್ಮ ಜೀವನದಲ್ಲಿ ಪ್ರಥಮವಾಗಿಟ್ಟುಕೊಂಡು ಆ ಕಿರಿದಾದ ದಾರಿಯಲ್ಲಿ ನಡೆಯಲು ಕರೆಯಲ್ಪಟ್ಟಿದ್ದೇವೆ. ಇದೇ ಜೀವನದ ಮತ್ತು ಶಿಷ್ಯತ್ವದ ಮಾರ್ಗ ಎಂದು ಯೇಸು ಮೇಲಿನ ವಚನದಲ್ಲಿ ಬೋಧಿಸಿದ್ದಾನೆ ಮತ್ತು ನಮ್ಮ ಎಲ್ಲಾ ಸಭೆಗಳಲ್ಲಿ ನಾವು ಬೋಧಿಸುವ ನಿತ್ಯಜೀವದ ಮಾರ್ಗವೂ ಇದೇ ಆಗಿದೆ.
ಶಿಷ್ಯತ್ವಕ್ಕೆ ಸಂಬಂಧಿಸಿದಂತೆ, ಯೇಸು ಲೂಕ 14:26 ರಲ್ಲಿ ಹೀಗೆ ಹೇಳಿದ್ದಾನೆ, "ಯಾರಾದರೂ ನನ್ನ ಬಳಿಗೆ ಬಂದು ತನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು, ಅಣ್ಣತಮ್ಮಂದಿರು, ಅಕ್ಕತಂಗಿಯರು ಮತ್ತು ತನ್ನ ಪ್ರಾಣವನ್ನೂ ಸಹ ದ್ವೇಷಿಸದಿದ್ದರೆ, ಅವನು ನನ್ನ ಶಿಷ್ಯನಾಗಲಾರನು". ಈ ವಚನದಲ್ಲಿ ಯೇಸು ಹೇಳಿದಂತೆ, ನಿಮ್ಮ ಪ್ರೀತಿಪಾತ್ರರನ್ನು ದ್ವೇಷಿಸುವುದರ ಬಗ್ಗೆ ಯಾರಾದರೂ ಬೋಧಿಸುವುದನ್ನು ನೀವು ಎಷ್ಟು ಬಾರಿ ಕೇಳಿದ್ದೀರಿ? ಇದು ಕರ್ತನಾದ ಯೇಸುವಿನ ಶಿಷ್ಯನಾಗಲು ಇರುವ ಮೊದಲ ಮೊಟ್ಟ ಷರತ್ತು ಮತ್ತು ಯೇಸು ನಮಗೆ ಶಿಷ್ಯರನ್ನು ಮಾಡಲು ಆಜ್ಞಾಪಿಸಿದನೇ ಹೊರತು ಕೇವಲ ಪರಿವರ್ತನೆ ಹೊಂದಿದವರನ್ನಲ್ಲ. ಆದ್ದರಿಂದ ನಾವು ಶಿಷ್ಯರನ್ನು ಮಾಡಬೇಕೆಂದರೆ, ಅವರಿಗೆ ಬೇರೆ ಯಾವುದನ್ನಾದರೂ ಕಲಿಸುವ ಮೊದಲು ಶಿಷ್ಯತ್ವದ ಈ ಮೊದಲ ಷರತ್ತನ್ನು ಕಲಿಸಬೇಕು.
ಒಂದು ಮಗು ಶಾಲೆಗೆ ಸೇರಿದಾಗ, ಅದಕ್ಕೆ ಮೊದಲು ಭೌತಶಾಸ್ತ್ರ ಅಥವಾ ರಸಾಯನಶಾಸ್ತ್ರವನ್ನು ಕಲಿಸುವುದಿಲ್ಲ. ಮೊದಲು ಅದಕ್ಕೆ ವರ್ಣಮಾಲೆಯನ್ನು ಅಂದರೆ - ಅ ಆ ಇ ಈ ಕಲಿಸಲಾಗುತ್ತದೆ. ಅದೇ ರೀತಿ, ನಮ್ಮ ಸಭೆಗೆ ಸೇರುವವರಿಗೆ ಎಲ್ಲಕ್ಕಿಂತ ಮೊದಲು ಶಿಷ್ಯತ್ವದ ವರ್ಣಮಾಲೆಯನ್ನು ಕಲಿಸಬೇಕು. ಅಂದರೆ ಯೇಸುವನ್ನು ಎಲ್ಲಕ್ಕಿಂತ ಹೆಚ್ಚಾಗಿ ಪ್ರೀತಿಸುವುದನ್ನು ಕಲಿಸಬೇಕು. ಆ ಷರತ್ತನ್ನು ಪೂರೈಸಲು ಇಷ್ಟವಿಲ್ಲದವರಿಗೆ, ಅವರು ಕರ್ತನಾದ ಯೇಸುಕ್ರಿಸ್ತನ ಶಿಷ್ಯರಾಗಲು ಸಾಧ್ಯವಿಲ್ಲ ಎಂದು ಆರಂಭದಲ್ಲೇ ಸ್ಪಷ್ಟವಾಗಿ ತಿಳಿಸಬೇಕು. ಶಿಷ್ಯರಲ್ಲಿ ಯಾವುದೇ ಎರಡನೇ ದರ್ಜೆ ಇಲ್ಲ. ಅಲ್ಲಿರುವುದು ಒಂದೇ ದರ್ಜೆಯ ಶಿಷ್ಯರು - ಅಂದರೆ "ತಂದೆ, ತಾಯಿ, ಅಣ್ಣತಮ್ಮ, ಅಕ್ಕತಂಗಿ, ಹೆಂಡತಿ, ಮಕ್ಕಳು ಮತ್ತು ತನ್ನ ಪ್ರಾಣವನ್ನೂ ದ್ವೇಷಿಸುವವರು" (ಲೂಕ 14:26).
ಯೇಸುವಿನ ಈ ಬೇಡಿಕೆಯನ್ನು ಸತ್ಯವೇದದ ಇತರ ಆಜ್ಞೆಗಳಾದ "ನಿಮ್ಮ ತಂದೆ ತಾಯಿಯರನ್ನು ಗೌರವಿಸಿ", "ಕ್ರಿಸ್ತನು ಸಭೆಯನ್ನು ಪ್ರೀತಿಸಿದಂತೆ ನಿಮ್ಮ ಹೆಂಡತಿಯನ್ನು ಪ್ರೀತಿಸಿರಿ" ಮತ್ತು "ನಿಮ್ಮ ಮಕ್ಕಳು ಹಾಗೂ ಒಡಹುಟ್ಟಿದವರನ್ನು ಪ್ರೀತಿಸಿರಿ" ಎಂಬ ಆಜ್ಞೆಗಳೊಂದಿಗೆ ನಾವು ಹೇಗೆ ಹೊಂದಿಸಿಕೊಳ್ಳುವುದು?
ಯೇಸು ತನ್ನ ಸಂದೇಶಗಳಲ್ಲಿ ವಿಷಯವನ್ನು ಸ್ಪಷ್ಟಪಡಿಸಲು ಅನೇಕ ಉದಾಹರಣೆಗಳನ್ನು ಬಳಸುತ್ತಿದ್ದರು. ಆದ್ದರಿಂದ ನನ್ನ ಕುಟುಂಬದ ಸದಸ್ಯರನ್ನು ಪ್ರೀತಿಸುವ ಮತ್ತು ದ್ವೇಷಿಸುವ ಈ ಮೇಲ್ನೋಟಕ್ಕೆ ವಿರುದ್ಧವಾಗಿ ಕಾಣುವ ಆಜ್ಞೆಗಳನ್ನು ಅರ್ಥಮಾಡಿಕೊಳ್ಳಲು ನಾನು ಒಂದು ಉದಾಹರಣೆಯನ್ನು ಹುಡುಕಿದೆ. ಆ ಉದಾಹರಣೆ ನನಗೆ ಇದನ್ನು ಸ್ಪಷ್ಟಪಡಿಸಿತು. ನನ್ನ ತಂದೆ, ತಾಯಿ, ಹೆಂಡತಿ, ಮಕ್ಕಳು ಮತ್ತು ಒಡಹುಟ್ಟಿದವರ ಮೇಲಿನ ಪ್ರೀತಿಯನ್ನು ನಕ್ಷತ್ರಗಳ ಬೆಳಕಿಗೆ ಹೋಲಿಸುತ್ತೇನೆ - ಅದು ಪ್ರಕಾಶಮಾನವಾಗಿದೆ, ಸ್ಪಷ್ಟವಾಗಿದೆ ಮತ್ತು ಅದರಲ್ಲಿ ಯಾವುದೇ ಕತ್ತಲೆಯಿಲ್ಲ. ಇದು ನಮ್ಮ ಕುಟುಂಬದ ಸದಸ್ಯರ ಮೇಲೆ ನಾವು ಹೊಂದಿರಬೇಕಾದ ಪ್ರೀತಿಯ ಒಂದು ಚಿತ್ರಣ. ಆದರೆ ಬೆಳಿಗ್ಗೆ ಸೂರ್ಯ ಉದಯಿಸಿದಾಗ, ನಕ್ಷತ್ರಗಳು ಅದೃಶ್ಯವಾಗುತ್ತವೆ. ಅವು ಇನ್ನೂ ಅಲ್ಲೇ ಇರುತ್ತವೆ; ಆದರೆ ನಮಗೆ ಅವು ಕಾಣಿಸುವುದಿಲ್ಲ. ಹಾಗೆಯೇ, ಕ್ರಿಸ್ತನ ಮೇಲಿನ ನನ್ನ ಪ್ರೀತಿಯು ಸೂರ್ಯನ ಬೆಳಕಿನಂತೆ ಇರಬೇಕು, ಆ ಬೆಳಕಿನಲ್ಲಿ ನನ್ನ ಕುಟುಂಬದ ಸದಸ್ಯರ ಮೇಲಿನ ಪ್ರೀತಿಯು ಅಷ್ಟೊಂದು ಪ್ರಮುಖವಾಗಿರದೆ ಅದು ಕಳೆಗುಂದುತ್ತದೆ. ನನ್ನ ಕುಟುಂಬದ ಸದಸ್ಯರ ಮೇಲಿನ ನನ್ನ ಪ್ರೀತಿ ಇನ್ನೂ ಇರುತ್ತದೆ (ಬೆಳಿಗ್ಗೆ ನಕ್ಷತ್ರಗಳು ಇರುವಂತೆ). ಆದರೆ ಕ್ರಿಸ್ತನ ಮೇಲಿನ ನನ್ನ ಪ್ರೀತಿ ಎಷ್ಟು ಶ್ರೇಷ್ಟವಾಗಿದೆ ಎಂದರೆ, ಇತರರೆಲ್ಲರನ್ನೂ ನಾನು ಈಗ ಕ್ರಿಸ್ತನ ಮೇಲಿನ ನನ್ನ ಪ್ರೀತಿಯ ಮೂಲಕವೇ ಪ್ರೀತಿಸುತ್ತೇನೆ. ಇದರರ್ಥವೇನೆಂದರೆ ಕ್ರಿಸ್ತನ ಮೇಲಿನ ನನ್ನ ಪ್ರೀತಿ ಎಷ್ಟು ದೊಡ್ಡದಾಗಿದೆ ಎಂದರೆ, ನನ್ನ ಹೆಂಡತಿ ಅಥವಾ ಪೋಷಕರು ಅಥವಾ ನನಗೆ ಆಪ್ತವಾದ ಯಾರೂ ನನ್ನ ಮತ್ತು ಕ್ರಿಸ್ತನ ನಡುವೆ ಬರಲು ನಾನು ಎಂದಿಗೂ ಅನುಮತಿಸುವುದಿಲ್ಲ. ಇನ್ನು ಮುಂದೆ ನಾನು ಎಲ್ಲರನ್ನೂ ಕ್ರಿಸ್ತನ ಮೇಲಿನ ನನ್ನ ಸರ್ವಶ್ರೇಷ್ಠ ಪ್ರೀತಿಯ ಮೂಲಕವೇ ಪ್ರೀತಿಸುತ್ತೇನೆ.
ನಾನು ಆನಿಯನ್ನು (ನನ್ನ ಹೆಂಡತಿ) ಮದುವೆಯಾಗಲು ಯೋಚಿಸುತ್ತಿದ್ದಾಗ, ಅವಳು ಯಾವಾಗಲೂ ನನ್ನ ಪ್ರೀತಿಯಲ್ಲಿ ಎರಡನೇ ಸ್ಥಾನದಲ್ಲಿರುತ್ತಾಳೆ ಎಂದು ಆಕೆಗೆ ನಾನು ಆರಂಭದಲ್ಲೇ ಹೇಳಿದ್ದೆ. ಅವಳು ಎಂದಿಗೂ ನನ್ನ ಜೀವನದಲ್ಲಿ ಮೊದಲ ಸ್ಥಾನದಲ್ಲಿರುವುದಿಲ್ಲ ಎಂದು ನಾನು ಅವಳಿಗೆ ಹೇಳಿದ್ದೆ. ಮದುವೆಯ ಪ್ರಸ್ತಾಪ ಮಾಡುವಾಗ ಯಾರಿಗಾದರೂ ಹೀಗೆ ಹೇಳುವುದು ಭಯಾನಕವಾಗಿ ಕೇಳಿಸಬಹುದು. ಹಾಗಾಗಿ, ನಾನು ಅದನ್ನು ವಿವರಿಸುತ್ತಾ, ಕ್ರಿಸ್ತನು ಯಾವಾಗಲೂ ನನ್ನ ಜೀವನದಲ್ಲಿ ಮೊದಲ ಸ್ಥಾನದಲ್ಲಿರುತ್ತಾನೆ ಎಂಬುದು ನನ್ನ ಅರ್ಥ ಎಂದು ಹೇಳಿದೆ. ಮತ್ತು ಅವಳ ಜೀವನದಲ್ಲಿಯೂ ನಾನು ಎರಡನೇ ಸ್ಥಾನದಲ್ಲಿರಲು ಬಯಸುತ್ತೇನೆ - ಯಾವಾಗಲೂ ಕ್ರಿಸ್ತನ ನಂತರವೇ ನನಗೆ ಸ್ಥಾನ ಎಂದು ಹೇಳಿದೆ. ಕಳೆದ 57 ವರ್ಷಗಳಿಂದ ನಾನು ಹೇಳುತ್ತಾ ಬಂದಿರುವುದನ್ನೇ ಅವಳಿಗೆ ಈಗಲೂ ಹೇಳುತ್ತೇನೆ: "ನೀನು ಯಾವಾಗಲೂ ನನ್ನ ಜೀವನದಲ್ಲಿ ಎರಡನೇ ಸ್ಥಾನದಲ್ಲಿರುತ್ತೀಯ. ಕ್ರಿಸ್ತನು ಯಾವಾಗಲೂ ಮೊದಲ ಸ್ಥಾನದಲ್ಲಿರುತ್ತಾನೆ. ಮತ್ತು ನಿನ್ನ ಜೀವನದಲ್ಲಿಯೂ ನಾನು ಯಾವಾಗಲೂ ಎರಡನೇ ಸ್ಥಾನದಲ್ಲಿರಲು ಬಯಸುತ್ತೇನೆ. ನಿನ್ನ ಜೀವನದಲ್ಲಿ ಕ್ರಿಸ್ತನೇ ಯಾವಾಗಲೂ ಮೊದಲ ಸ್ಥಾನದಲ್ಲಿರಬೇಕು". ಇದರ ಫಲವಾಗಿ ನಾವು 57 ವರ್ಷಗಳ ಕಾಲ ಅತ್ಯಂತ ಸಂತೋಷದ ವೈವಾಹಿಕ ಜೀವನವನ್ನು ನಡೆಸಿದ್ದೇವೆ.
ನನ್ನ ಪೋಷಕರ ಬಗ್ಗೆಯೂ ನನ್ನ ನಿಲುವು ಇದೇ ಆಗಿತ್ತು. ದೇವರು ಅವರನ್ನು ತನ್ನ ಬಳಿಗೆ ಕರೆಸಿಕೊಳ್ಳುವವರೆಗೂ ನಾನು ನನ್ನ ಪೋಷಕರಿಬ್ಬರನ್ನೂ ಗೌರವಿಸಿದೆ. ಆದರೆ ನನ್ನ ಜೀವನದಲ್ಲಿ ಅವರಿಗೆ ಕ್ರಿಸ್ತನಿಗಿಂತ ಮೊದಲ ಸ್ಥಾನ ನೀಡಲು ನಾನು ಎಂದಿಗೂ ಅವಕಾಶ ಕೊಡಲಿಲ್ಲ. 1964 ರಲ್ಲಿ ಕರ್ತನು ನನ್ನನ್ನು ನೌಕಾಪಡೆಯ ಉದ್ಯೋಗವನ್ನು ಬಿಟ್ಟು ಆತನ ಸೇವೆ ಮಾಡಲು ಕರೆಯಲ್ಪಟ್ಟಾಗ, ನಾನು ನನ್ನ ಪೋಷಕರನ್ನು ಸಂಪರ್ಕಿಸಲಿಲ್ಲ. ನಾನು ಕರ್ತನಿಗೆ ವಿಧೇಯನಾಗಿ ರಾಜೀನಾಮೆ ನೀಡಿದೆ ಮತ್ತು ನಂತರವಷ್ಟೇ ನನ್ನ ಪೋಷಕರಿಗೆ ಇದನ್ನು ತಿಳಿಸಿದೆ. ನನ್ನ ಸೇವೆಯಲ್ಲೂ ನಾನು ಇದನ್ನೇ ಮಾಡಿದೆ. ದೇವರು ನನಗೆ ಬೋಧಿಸುವ ವರವನ್ನು ನೀಡಿದರು ಮತ್ತು ಅನೇಕ ದೇಶಗಳಲ್ಲಿ ಸೇವೆ ಮಾಡಲು ಅವಕಾಶಗಳನ್ನು ನೀಡಿದರು; ನಾನು ಪ್ರಪಂಚದಾದ್ಯಂತ ಸಂಚರಿಸಿ ದೇವರ ವಾಕ್ಯವನ್ನು ಬೋಧಿಸುವುದನ್ನು ಕಂಡು ನನ್ನ ತಂದೆ ಸಂತೋಷಪಟ್ಟರು. ಆದರೆ ನಂತರ, ಅಪೊಸ್ತಲರು ಕೇವಲ ಬೋಧಿಸಿ ಜನರನ್ನು ಕ್ರಿಸ್ತನ ಬಳಿಗೆ ತರುವುದು ಮಾತ್ರವಲ್ಲದೆ, ಅವರನ್ನು ಒಗ್ಗೂಡಿಸಿ ಪ್ರತಿ ಸ್ಥಳದಲ್ಲೂ "ಸಭೆಗಳು" ಎಂಬ ಸ್ಥಳೀಯ ಅನ್ಯೋನ್ಯತಾ-ಸಮುದಾಯಗಳನ್ನು ಸ್ಥಾಪಿಸಿದರು ಎಂದು ದೇವರು ಸತ್ಯವೇದದ ಮೂಲಕ ತೋರಿಸಿಕೊಟ್ಟರು. ಆದ್ದರಿಂದ, ದೇವರು ನನ್ನ ಪ್ರವಾಸದ ಬೋಧನಾ ಸೇವೆಯನ್ನು ಬಿಟ್ಟು, ನನ್ನ ಸ್ವಂತ ಊರಾದ ಬೆಂಗಳೂರಿನಲ್ಲಿ ವಿಶ್ವಾಸಿಗಳನ್ನು ಒಂದು ಸ್ಥಳೀಯ ಸಭೆಯಾಗಿ ಸ್ಥಾಪಿಸಲು ಕರೆ ನೀಡಿದರು. ಮತ್ತೊಮ್ಮೆ, ನಾನು ಈ ಬಗ್ಗೆ ನನ್ನ ತಂದೆಯನ್ನು ಸಂಪರ್ಕಿಸಲಿಲ್ಲ. ಕರ್ತನು ನನಗೆ ಏನು ಮಾಡಲು ಹೇಳಿದನೋ ಅದನ್ನೇ ಮಾಡಿದೆ. ನಾವು ಈ ಹೊಸ ಸೇವೆಯನ್ನು ಪ್ರಾರಂಭಿಸಿದಾಗ, ನನ್ನ ಮನೆಯಲ್ಲಿ ನಮ್ಮೊಂದಿಗೆ ಸೇರಲು ಬಹಳ ಕಡಿಮೆ ಜನರು ಬರುತ್ತಿದ್ದರು. ಆಗ ನನ್ನ ತಂದೆ ಹೇಳಿದ್ದೇನೆಂದರೆ "ಪ್ರಪಂಚದಾದ್ಯಂತ ಸಾವಿರಾರು ಜನರಿಗೆ ಬೋಧಿಸುವ ಸೇವೆಯನ್ನು ಬಿಟ್ಟು ನೀನು ಈಗ ಮನೆಯಲ್ಲಿ ಕೇವಲ 10 ಜನರೊಂದಿಗೆ ಯಾಕೆ ಕುಳಿತಿದ್ದೀಯ?" ಎಂದು. ಸ್ಥಳೀಯ ಸಭೆಯನ್ನು ಕಟ್ಟುವುದು ದೇವರು ನನಗೆ ನೀಡಿದ ಕರೆ ಎಂದು ನಾನು ಅವರಿಗೆ ತಿಳಿಸಿದೆ. ಜಗತ್ತಿನಲ್ಲಿ ಪ್ರಸಿದ್ಧ ಬೋಧಕನಾಗುವುದು ನನ್ನ ಕರೆಯಲ್ಲ, ಬದಲಾಗಿ ಕ್ರಿಸ್ತನ ದೇಹದ ಅಭಿವ್ಯಕ್ತಿಯಾಗಿ ಸ್ಥಳೀಯ ಸಭೆಯನ್ನು ಕಟ್ಟುವುದು ನನ್ನ ಕರೆ ಎಂದು ಅವರಿಗೆ ಹೇಳಿದೆ. ನನ್ನ ತಂದೆ ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳದೆಯೇ ನಿಧನರಾದರು. ಆದರೆ ಇಂದು, ನನ್ನ ತಂದೆ ಸ್ವರ್ಗದಿಂದ ನೋಡಲು ಸಾಧ್ಯವಿದ್ದರೆ, ಕರ್ತನು ಏನು ಮಾಡಿದ್ದಾನೆ ಎಂದು ಅವರು ನೋಡುವವರಾಗಿದ್ದಾರೆ. ಕಳೆದ 50 ವರ್ಷಗಳಲ್ಲಿ ಅನೇಕ ದೇಶಗಳಲ್ಲಿ ಕರ್ತನು ಕ್ರಿಸ್ತನ ದೇಹದ ಅಭಿವ್ಯಕ್ತಿಯಾಗಿ ಸ್ಥಾಪಿಸಿದ ಸ್ಥಳೀಯ ಸಭೆಗಳನ್ನು ಮತ್ತು ಆ ಸಭೆಗಳಲ್ಲಿ ಕ್ರಿಸ್ತನ ಬಳಿಗೆ ಬಂದ ಸಾವಿರಾರು ಜನರನ್ನು ಅವರು ನೋಡುವವರಾಗಿದ್ದಾರೆ. ಆಗ ಅವರು, "ಮಗನೇ, ಸ್ಥಳೀಯ ಸಭೆಗಳನ್ನು ಕಟ್ಟಲು ನೀನು ಮಾಡಿದ ಆಯ್ಕೆ ಸರಿಯಾಗಿತ್ತು" ಎಂದು ಹೇಳುತ್ತಿದ್ದರು. ನಾನು ನನ್ನ ತಂದೆಯ ಮಾತನ್ನು ಕೇಳದೆ, ಕ್ರಿಸ್ತನ ಮಾತನ್ನು ಮಾತ್ರ ಕೇಳಿದ್ದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸುತ್ತೇನೆ.
ಯೇಸು ಹೇಳಿದ್ದೇನೆಂದರೆ, "ನಾನು ನನ್ನ ಸಭೆಯನ್ನು ಕಟ್ಟುವೆನು." ಆತನು ಮಾತ್ರ ಅದನ್ನು ಕಟ್ಟಬಲ್ಲನು. ನಾವು ಕೇವಲ ಆತನ ದೇಹದ ಅಂಗಗಳು - ಒಬ್ಬರು ನಾಲಿಗೆಯಂತೆ, ಇನ್ನೊಬ್ಬರು ಕೈಯಂತೆ ಮತ್ತು ಮತ್ತೊಬ್ಬರು ಕಾಲಿನಂತೆ. ಮತ್ತು ಅಷ್ಟು ಪ್ರಮುಖವಾಗಿ ಕಾಣದ ಕೆಲವು ವಿಶ್ವಾಸಿಗಳು ದೇಹದ ಒಳಗಿನ ಗುಪ್ತ ಅಂಗಗಳಂತೆ ಇರುತ್ತಾರೆ. ಆದರೆ ಕ್ರಿಸ್ತನೇ ಆ ದೇಹವನ್ನು ಕಟ್ಟುವ ಶಿರಸ್ಸು. ನಾವು ಆತನ ದೇಹದ ಅಂಗಗಳಾಗಿ ಆತನಿಂದ ಆಳಲ್ಪಡಲು, ನಿಯಂತ್ರಿಸಲ್ಪಡಲು ಮತ್ತು ಬಳಸಲ್ಪಡಲು ಮಾತ್ರ ನಮ್ಮನ್ನು ಆತನಿಗೆ ಅರ್ಪಿಸಿಕೊಳ್ಳಬಹುದು. ಕೈ ಮತ್ತು ಕಾಲುಗಳು ತಾವಾಗಿಯೇ ಏನನ್ನೂ ಮಾಡಲು ಸಾಧ್ಯವಿಲ್ಲ. ಕೈ ಏನು ಮಾಡಬೇಕು ಮತ್ತು ಕಾಲುಗಳು ಎಲ್ಲಿಗೆ ಹೋಗಬೇಕು ಎಂದು ಶಿರಸ್ಸು ಹೇಳುತ್ತದೆ. ಹಾಗೆಯೇ ನಾವು ಕ್ರಿಸ್ತನಿಗೆ ಅಧೀನರಾಗಿರಬೇಕು. ಕ್ರಿಸ್ತನ ದೇಹವು ಕೆಲಸ ಮಾಡುವುದು ಮತ್ತು ಕಟ್ಟಲ್ಪಡುವುದು ಹೀಗೆಯೇ. ಇದನ್ನೇ ನಾವು ಒತ್ತಿಹೇಳಲು ಪ್ರಯತ್ನಿಸಿದ್ದೇವೆ.
ಆದರೆ ಒಮ್ಮೆ ದೇವರು ಯಾರನ್ನಾದರೂ ಉಪಯೋಗಿಸಿ ಒಂದು ಸ್ಥಳದಲ್ಲಿ ಕ್ರಿಸ್ತನ ದೇಹವು ನಿರ್ಮಿತವಾಗುವ ಪವಾಡವನ್ನು ನೋಡಲು ಪ್ರಾರಂಭಿಸಿದಾಗ, ಆತ್ಮಿಕ ಅಹಂಕಾರದ ದೊಡ್ಡ ಅಪಾಯವಿರುತ್ತದೆ. ದೇವರು ನಮ್ಮನ್ನು ಆಶೀರ್ವದಿಸಿದಾಗ, ಅಹಂಕಾರವು ಹತ್ತಿರದಲ್ಲೇ ಹೊಂಚು ಹಾಕುತ್ತಿರುತ್ತದೆ. ಆ ಸ್ಥಳೀಯ ಸಭೆಯನ್ನು ನಾವೇ ಕಟ್ಟಿದೆವು ಅಥವಾ ಆ ಜನರನ್ನು ನಾವೇ ಕ್ರಿಸ್ತನ ಬಳಿಗೆ ತಂದೆವು ಎಂದು ನಾವು ಕಲ್ಪಿಸಿಕೊಳ್ಳಲು ಪ್ರಾರಂಭಿಸಬಹುದು. ಒಬ್ಬ ದೇವರ ಸೇವಕ ಅಥವಾ ಸಭೆ ಅಹಂಕಾರ ಪಟ್ಟಾಗ, ದೇವರು ತಕ್ಷಣವೇ ಆ ವ್ಯಕ್ತಿಯನ್ನು ಮತ್ತು ಸಭೆಯನ್ನು ವಿರೋಧಿಸಲು ಪ್ರಾರಂಭಿಸುತ್ತಾನೆ.
ಕ್ರೈಸ್ತರಾಗಿ ನಾವು ಹೇಗೆ ಉಡುಪು ಧರಿಸಬೇಕು? 1 ಪೇತ್ರ 5:5 ಹೇಳುತ್ತದೆ, "ಒಬ್ಬರಿಗೊಬ್ಬರು ದೀನತೆಯನ್ನು ವಸ್ತ್ರದಂತೆ ಧರಿಸಿಕೊಳ್ಳಿರಿ." ನಾವು ಎಲ್ಲಾ ಸಮಯದಲ್ಲೂ ಮತ್ತು ವಿಶೇಷವಾಗಿ ಸಭೆಯಲ್ಲಿ ಒಬ್ಬರಿಗೊಬ್ಬರು ಹೊಂದಿರುವ ಸಂಬಂಧದಲ್ಲಿ ಹೀಗೆಯೇ ಇರಬೇಕು. ಈ ಬಗ್ಗೆ ಒಂದು ಕ್ಷಣ ಯೋಚಿಸಿ. ಸತ್ಯವೇದದಲ್ಲಿ ಇಂತಹ ವಚನವನ್ನು ಓದಿದಾಗ, ಅವಸರದಲ್ಲಿ ಓದಿ ಮುಂದೆ ಹೋಗಬೇಡಿ, ನಿಲ್ಲಿ ಮತ್ತು ಅದರ ಬಗ್ಗೆ ಧ್ಯಾನಿಸಿ. ದೇವರ ವಾಕ್ಯವು ನಮಗೆ ಆಹಾರದಂತೆ. ನಾವು ತಿನ್ನುವಾಗ, ಆಹಾರವನ್ನು ನುಂಗುವ ಮೊದಲು ಚೆನ್ನಾಗಿ ಅಗಿಯುತ್ತೇವೆ. ಹೀಗೆ ಆಹಾರವು ಚೆನ್ನಾಗಿ ಜೀರ್ಣವಾಗುತ್ತದೆ. ಹಾಗೆಯೇ, ನಾವು ಓದುವ ವಚನಗಳನ್ನು ಧ್ಯಾನಿಸಬೇಕು. ಸಭೆಯಲ್ಲಿ ನಮ್ಮ ಸಹೋದರ ಸಹೋದರಿಯರ ಸಂಬಂಧದಲ್ಲಿ ದೀನತೆಯನ್ನು ವಸ್ತ್ರದಂತೆ ಧರಿಸಿಕೊಳ್ಳುವುದು ಎಂದರೆ ಏನು? ಇದಕ್ಕೆ ಉತ್ತರವನ್ನು ನಾವು ಫಿಲಿಪ್ಪಿ 2:3 ರಲ್ಲಿ ಕಾಣಬಹುದು. ಅಲ್ಲಿ ಎಲ್ಲಾ ಸಮಯದಲ್ಲೂ ಒಬ್ಬರಿಗೊಬ್ಬರ ಕಡೆ ನಮ್ಮ ಮನೋಭಾವ ಹೇಗಿರಬೇಕು ಎಂದು ಹೇಳಲಾಗಿದೆ. "ಸ್ವಾರ್ಥದಿಂದಾಗಲಿ ಅಥವಾ ಅಹಂಕಾರದಿಂದಾಗಲಿ ಏನನ್ನೂ ಮಾಡಬೇಡಿ". ನಾವು ಖಂಡಿತವಾಗಿಯೂ ಏನನ್ನೂ - ಸ್ವಾರ್ಥದಿಂದ ಅಥವಾ ಅಹಂಕಾರದಿಂದ ಮಾಡಬಾರದು.
ಇದು ಸಭೆಯ ಮುಂದೆ ನಿಂತು ಹಾಡುವವವರಿಗೆ ಒಂದು ಎಚ್ಚರಿಕೆಯಾಗಿರಬಹುದು. ನಿಮ್ಮ ಹಾಡುವ ಸಾಮರ್ಥ್ಯವನ್ನು ಪ್ರದರ್ಶಿಸಬೇಡಿ. ಇದು ಬೋಧಿಸುವವರಿಗೂ ಒಂದು ಎಚ್ಚರಿಕೆ: ನಿಮ್ಮ ಜ್ಞಾನವನ್ನು ಪ್ರದರ್ಶಿಸಬೇಡಿ. ಬದಲಾಗಿ, ದೀನಭಾವದಿಂದ ಮಾತನಾಡಿ. ಬೇರೆ ಮಾತುಗಳಲ್ಲಿ ಹೇಳುವುದಾದರೆ, ನೀವು ಅಲ್ಲಿ ನಿಂತು ಮಾತನಾಡುತ್ತಿರುವಾಗ, ಯಾರಾದರೂ ಆ ಸಮಯದಲ್ಲಿ ನಿಮ್ಮ ಮನಸ್ಸನ್ನು ತೆರೆದು ನೋಡಿದರೆ, ಅಲ್ಲಿ ಎಲ್ಲಾ ಜನರ ಬಗ್ಗೆ ಎಲ್ಲಾ ಸಮಯದಲ್ಲೂ ಇರುವ ದೀನತೆಯ ಮನೋಭಾವ ಕಾಣಿಸಬೇಕು.
ಫಿಲಿಪ್ಪಿ 2:3 ನಮಗೆ ಸಭೆಯಲ್ಲಿರುವ ಪ್ರತಿಯೊಬ್ಬರನ್ನು ನಮಗಿಂತ ಮುಖ್ಯವೆಂದು ಪರಿಗಣಿಸಲು ಹೇಳುತ್ತದೆ. ಅದೇ ದೀನತೆ. ಇತರರನ್ನು ಹೆಚ್ಚು ಆತ್ಮಿಕರು ಎಂದು ಪರಿಗಣಿಸಲು ನಮಗೆ ಹೇಳಿಲ್ಲ. ಅದು ಅಸಾಧ್ಯವಾಗಬಹುದು. ಆದರೆ ನಾವು ಇತರರನ್ನು ನಮಗಿಂತ ಪ್ರಮುಖರು ಎಂದು ಪರಿಗಣಿಸಬೇಕು.
ಯೇಸು ಇತರರನ್ನು ತನಗಿಂತ ಹೆಚ್ಚು ಆತ್ಮಿಕರು ಎಂದು ಪರಿಗಣಿಸಲಿಲ್ಲ. ಆತನು ಹಾಗೆ ಮಾಡಲು ಸಾಧ್ಯವಿರಲಿಲ್ಲ. ಆದರೆ ಆತನು ತನ್ನ ಎಲ್ಲಾ ಶಿಷ್ಯರನ್ನು ತನಗಿಂತ ಮುಖ್ಯವೆಂದು ಪರಿಗಣಿಸಿದನು. ತನ್ನ ಭೂಮಿಯಲ್ಲಿನ ಜೀವನದ ಕೊನೆಯ ದಿನದಂದು ತನ್ನ ಎಲ್ಲಾ ಶಿಷ್ಯರ ಪಾದಗಳನ್ನು ತೊಳೆಯುವ ಮೂಲಕ ಆತನು ಅದನ್ನು ಸಾಬೀತುಪಡಿಸಿದನು. ಆ ದಿನಗಳಲ್ಲಿ ಅದು ಒಬ್ಬ ಗುಲಾಮನ ಕೆಲಸವಾಗಿತ್ತು. ಯಹೂದಿಗಳ ಮನೆಗೆ ಜನರು ಬಂದಾಗ ಒಂದು ಬಕೆಟ್ನಲ್ಲಿ ನೀರನ್ನು ತೆಗೆದುಕೊಂಡು ಜನರ ಪಾದಗಳನ್ನು ತೊಳೆಯುವುದು ಮನೆಯ ಗುಲಾಮನ ಕೆಲಸವಾಗಿತ್ತುಮತ್ತು ಯೇಸು ಆ ಸ್ಥಾನವನ್ನು ತೆಗೆದುಕೊಂಡನು. ಹಾಗಿರುವಾಗ ನಮ್ಮಲ್ಲಿ ಯಾರಾದರೂ, ದೇವರ ಜನರಿಗೆ ಬೇರೆ ಯಾವುದೇ ರೀತಿಯಲ್ಲಿ ಸೇವೆ ಮಾಡುವ ಬಗ್ಗೆ ಯೋಚಿಸಲು ಹೇಗೆ ಸಾಧ್ಯ?
ಆದ್ದರಿಂದ ನೀವು ಸಭೆಯಲ್ಲಿ ಯಾವುದೇ ನಾಯಕತ್ವವನ್ನು ನಡೆಸುವವರಾಗಿದ್ದರೆ -ಹಾಡುವುದು ಅಥವಾ ಬೋಧನೆ ಅಥವಾ ಇತರ ಸೇವೆ - ನಿಮ್ಮ ಸೇವೆಯು ಯಾವುದೇ ಆಗಿರಲಿ, ಅದು ಯೇಸುವಿನ ಮಾದರಿಯನ್ನು ಅನುಸರಿಸಿ ಮತ್ತು ಜನರ ಕಾಲುಗಳನ್ನು ತೊಳೆಯುವುದಾಗಿರಬೇಕು.
ಇಂದು ನಾವೆಲ್ಲರೂ ಪಾದರಕ್ಷೆಗಳನ್ನು ಧರಿಸುತ್ತೇವೆ ಮತ್ತು ಆದ್ದರಿಂದ ಯಾರ ಪಾದಗಳನ್ನೂ ತೊಳೆಯುವ ಅಗತ್ಯವಿರುವುದಿಲ್ಲ. ಆದರೆ ಸಭೆಯ ಕಟ್ಟಡದಲ್ಲಿ, ಅದು ಬಹುಶ: ಶೌಚಾಲಯಗಳನ್ನು ಸ್ವಚ್ಛಗೊಳಿಸಬೇಕಾದ ಕೆಲಸವಾಗಿರಬಹುದು. ಹಾಗಾಗಿ ನಾವು ದೇವರ ಮನೆಯಲ್ಲಿ ಶೌಚಾಲಯವನ್ನು ಸ್ವಚ್ಛಗೊಳಿಸುವವರಾಗಿರಬೇಕು. ದೇವರ ಜನರಿಗಾಗಿ ಯಾವುದೇ ಕೊಳಕು ಕೆಲಸವನ್ನು ಮಾಡಲು ಸಿದ್ಧರಾಗಿರಬೇಕು. ಅವನೇ ನಿಜವಾದ ನಾಯಕ; ಬೇರೆಯವರನ್ನು ತನಗಿಂತಲೂ ಹೆಚ್ಚು ಶ್ರೇಷ್ಠರೆಂದು ಪರಿಗಣಿಸಿರಿ.
ಫಿಲಿಪ್ಪಿ 2:5 ರ ಪ್ರಕಾರ, ಕ್ರಿಸ್ತ ಯೇಸುವಿನಲ್ಲಿದ್ದ ಮನಸ್ಸೇ ನಿಮ್ಮಲ್ಲಿ ಇರಲಿ ಎಂದು ನಮ್ಮನ್ನು ಪ್ರೇರೇಪಿಸುತ್ತದೆ. ಯೇಸುವೇ ನಮಗೆ ಉದಾಹರಣೆ. ಅವರಂತೆಯೇ ನಾವು ಅವರ ಸಭೆಯನ್ನು ಕಟ್ಟಬಹುದು. ನಿಮ್ಮಸಭೆಯಲ್ಲಿ ಜಗತ್ತಿನ ಅತ್ಯುತ್ತಮ ಗಾಯಕರು ಮತ್ತು ಅತ್ಯುತ್ತಮ ಬೋಧಕರು ಇರಬಹುದು. ಆದರೆ ನೀವು ಸೇವಕನ ಮನೋಭಾವವನ್ನು ಹೊಂದಿಲ್ಲದಿದ್ದರೆ, ನಾನು ಯೇಸುವಿನ ನಾಮದಲ್ಲಿ ನಿಮಗೆ ಹೇಳಬಲ್ಲೆ ಏನೆಂದರೆ, ನೀವು ಎಂದಿಗೂ ಯೇಸುಕ್ರಿಸ್ತನ ಸಭೆಯನ್ನು ಕಟ್ಟಲಾಗುವುದಿಲ್ಲ. ಜನರನ್ನು ಮೆಚ್ಚಿಸುವಂತಹ ಭವ್ಯವಾದ ಕಟ್ಟಡಗಳನ್ನು ಮಾತ್ರ ನೀವು ಕಟ್ಟಬಲ್ಲಿರಿ. ನಿಮ್ಮ ಸಭೆಯ ವಿರುದ್ಧ ನರಕದ ದ್ವಾರಗಳು ಜಯ ಸಾಧಿಸುವವು ಮತ್ತು ಸೈತಾನನು ಅದನ್ನು ಕಲುಷಿತಗೊಳಿಸುತ್ತಾನೆ ಮತ್ತು ನಾಶ ಮಾಡುತ್ತಾನೆ.
ನಾವು ಎಲ್ಲಾ ಸಮಯದಲ್ಲೂ ದೀನತೆಯನ್ನು ಧರಿಸಿಕೊಂಡಿರಬೇಕು. ಏಕೆಂದರೆ ದೇವರು ಅಹಂಕಾರಪಡುವ ಎಲ್ಲರಿಗೂ ವಿರುದ್ಧವಾಗಿದ್ದಾನೆ (1 ಪೇತ್ರ 5:5). ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ ಮತ್ತು ದೀನರಿಗಾದರೋ ಕೃಪೆಯನ್ನು ಅನುಗ್ರಹಿಸುತ್ತಾನೆ. ಇದನ್ನು ನೀವು ಧ್ಯಾನಿಸಿ. ನಿಮ್ಮ ಸೌಂದರ್ಯ, ಅಥವಾ ನಿಮಗಿರುವ ಸತ್ಯವೇದದ ಜ್ಞಾನ, ಅಥವಾ ನಿಮ್ಮ ಹಾಡುಗಾರಿಕೆಯ ಸಾಮರ್ಥ್ಯ, ಅಥವಾ ನೀವು ಸೇರಿರುವ ಸಭೆ, ಅಥವಾ ನೀವು ಎಷ್ಟೇ ಬುದ್ಧಿವಂತರಾಗಿರಬಹುದು, ಅಥವಾ ನಿಮಗಿರುವ ಉದ್ಯೋಗ, ಅಥವಾ ನಿಮ್ಮ ಮನೆಯ ಸೌಂದರ್ಯ, ಅಥವಾ ಬೇರೆ ಯಾವುದಾದರೂ ಬಗ್ಗೆ ನೀವು ಹೆಮ್ಮೆಪಡುತ್ತಿದ್ದರೆ, ದೇವರು ನಿಮ್ಮನ್ನು ವಿರೋಧಿಸುತ್ತಾನೆ.
ಇದರ ಅರ್ಥವೇನೆಂದರೆ, ದೇವರು ನಿಮ್ಮ ವಿರುದ್ಧ ನಿಲ್ಲುತ್ತಾನೆ ಮತ್ತು ನಿಮ್ಮನ್ನು ಹಿಂದಕ್ಕೆ ತಳ್ಳುತ್ತಾನೆ. ಇದನ್ನು ನೀವು ಮನಸ್ಸಿನಲ್ಲಿಡಿರಿ. ನಿಮ್ಮ ಹೃದಯದಲ್ಲಿ ಅಹಂಕಾರವಿದ್ದರೆ ನೀವು ಎಷ್ಟೇ ಸತ್ಯವೇದದ ಜ್ಞಾನವನ್ನು ಹೊಂದಿದ್ದರೂ, ಅಥವಾ ನೀವು ಎಷ್ಟೇ ಆತ್ಮಿಕರು ಎಂದು ನೀವು ಭಾವಿಸಿದರೂ, ಅಥವಾ ಎಷ್ಟೇ ವರ್ಷಗಳಿಂದ ನೀವು ಕ್ರೈಸ್ತರಾಗಿದ್ದರೂ ದೇವರು ನಿಮ್ಮನ್ನು ಹಿಂದಕ್ಕೆ ತಳ್ಳುತ್ತಲೇ ಇರುತ್ತಾನೆ. ನಂತರ ನಿಮ್ಮ ಕ್ರಿಸ್ತೀಯ ಜೀವಿತದಲ್ಲಿ ನೀವು ಯಾವುದೇ ಪ್ರಗತಿಯನ್ನು ಸಾಧಿಸುವುದಿಲ್ಲ. ಬದಲಾಗಿ, ನೀವು ಹಿಂದಕ್ಕೆ ಹೋಗುತ್ತೀರಿ.
ಮತ್ತೊಂದೆಡೆ, ನೀವು ದೀನರಾಗಿ ನಡೆದುಕೊಂಡರೆ, ದೇವರು ನಿಮ್ಮನ್ನು ಮುಂದಕ್ಕೆ ತಳ್ಳುತ್ತಲೇ ಇರುತ್ತಾನೆ ಎಂಬುದನ್ನು ಅರಿತುಕೊಳ್ಳಿರಿ. ಹಾಗಾದರೆ ನಿಮ್ಮ ವಿರುದ್ಧ ನಿಲ್ಲುವವರು ಯಾರು? (ನಮ್ಮನ್ನು ಎದುರಿಸುವವರು ಯಾರು?) ದೇವರು ದೀನರಿಗೆ ಕ್ರಪೆ ನೀಡುತ್ತಾನೆ ಎನ್ನುವುದು ಇದರ ಅರ್ಥ. ಅವನು ದೀನರನ್ನು ಮುಂದಕ್ಕೆ ತಳ್ಳುತ್ತಲೇ ಇರುತ್ತಾನೆ. ಆವಾಗ ನರಕದ ಎಲ್ಲಾ ಪಿಶಾಚಿಗಳು ನಿಮ್ಮ ಆತ್ಮಿಕ ಬೆಳವಣಿಗೆಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ನಿಮ್ಮ ಕ್ರಿಸ್ತಿಯ ಜೀವಿತದಲ್ಲಿ ನೀವು ಬಹಳ ಕಡಿಮೆ ಸಮಯದಲ್ಲಿ ಮಹತ್ತರವಾದ ಬೆಳವಣಿಗೆಯನ್ನು ಸಾಧಿಸುವಿರಿ. ನೀವು ಮೇಲಿಂದ ಮೇಲೆ ದೇವರ ವಾಕ್ಯದ ಮೇಲೆ ಹೊಸ ಪ್ರಕಟಣೆಗಳನ್ನು ಪಡೆಯುವಿರಿ ಮತ್ತು ನಿಮ್ಮ ಗಾಯನವೂ ಅಷ್ಟೊಂದು ಉತ್ತಮವಾಗಿಲ್ಲದಿದ್ದರೂ ಸಹ, ಸುಂದರವಾದ ಧ್ವನಿಯನ್ನು ಹೊಂದಿರುವವರಿಗಿಂತ ಹೆಚ್ಚು ಜನರನ್ನು ಆಶೀರ್ವದಿಸುತ್ತದೆ. ನಿಮ್ಮ ಬೋಧನೆಯಲ್ಲಿ ನಿಮ್ಮ ಮುರಿಯಲ್ಪಡುವಿಕೆಯ ಮೂಲಕ ಬಂದ ಮಾತುಗಳಿಂದ, ನೀವು ಜನರನ್ನು ಆಶೀರ್ವದಿಸುತ್ತೀರಿ ಮತ್ತು ಅವರ ಬೈಬಲ್ ಕಾಲೇಜ್ ಪದವಿಗಳೊಂದಿಗೆ ಅತಿ ಉತ್ತಮವಾದ ಭೋದಕರಿಗಿಂತಲೂ ಹೆಚ್ಚಾಗಿ ಜನರನ್ನು ಕ್ರಿಸ್ತನ ಹತ್ತಿರಕ್ಕೆ ಕರೆದೊಯ್ಯುತ್ತೀರಿ. ಮುಖ್ಯವಾದ ವಿಷಯವೇನೆಂದರೆ, ದೇವರು ನಿಮ್ಮನ್ನು ಮುಂದಕ್ಕೆ ತಳ್ಳಬೇಕು. ಇದುವೇ ದೇವರು ದೀನರಿಗೆ ಕೃಪೆಯನ್ನು ಕೊಡುತ್ತಾರೆ ಎಂಬುದರ ಅರ್ಥ.
ನಂತರ, ದೇವರು ನಿಮಗೆ ಕೃಪೆಯನ್ನು ನೀಡಿದಾಗ ಮತ್ತೊಂದು ಅದ್ಭುತವಾದ ವಿಷಯವು ಸಂಭವಿಸುತ್ತದೆ.
ರೋಮಾ. 6:14 ರ ಪ್ರಕಾರ ದೇವರು ನಿಮಗೆ ಕೃಪೆಯನ್ನು ನೀಡಿದಾಗ ಪಾಪವು ನಿಮ್ಮನ್ನು ಸೋಲಿಸಲು ಸಾಧ್ಯವಾಗುವುದಿಲ್ಲ. ನೀವು ಪಾಪವನ್ನು ಜಯಿಸುವಿರಿ. ನಾವೆಲ್ಲರೂ ಚಿಕ್ಕಂದಿನಿಂದ ಪಾಪದಲ್ಲಿ ಬೆಳೆದಿದ್ದೇವೆ. ನಾವು ಸುಳ್ಳು ಹೇಳಿದ್ದೇವೆ, ಮೋಸ ಮಾಡಿದ್ದೇವೆ, ಪೋಷಕರನ್ನು ವಿರೋಧಿಸಿದ್ದೇವೆ. ಹೀಗೆ ನಾವು ಅನೇಕ ತಪ್ಪುಗಳನ್ನು ಮಾಡಿದ್ದೇವೆ. ನಾವು ಇತರ ಮಕ್ಕಳೊಂದಿಗೆ ಜಗಳ ಮಾಡಿದ್ದೇವೆ ಮತ್ತು ನಮ್ಮಲ್ಲಿ ದ್ವೇಷವಿತ್ತು. ಮತ್ತು ನಾವು ಮದುವೆಯಾದ ನಂತರ, ನಾವು ನಮ್ಮ ಸಂಗಾತಿಯೊಂದಿಗೆ ಪದೇ ಪದೇ ಜಗಳವಾಡಿದ್ದೇವೆ. ಆದರೆ ದೇವರು ದೀನ ವ್ಯಕ್ತಿಯನ್ನು ಮುಂದಕ್ಕೆ ತಳ್ಳಲು ಪ್ರಾರಂಭಿಸಿದಾಗ, ಆತನು ಅದ್ಭುತವಾದ ಜೀವಿತವನ್ನು ಪ್ರವೇಶಿಸುತ್ತಾನೆ, ಅಲ್ಲಿ ಪಾಪವು ಇನ್ನು ಮುಂದೆ ಅವನನ್ನು ಆಳಲು ಸಾಧ್ಯವಿಲ್ಲ. ತನ್ನ ಹೆಂಡತಿಯ ಕಡೆಗೆ ಅವನ ವರ್ತನೆಯು ಸ್ವರ್ಗೀಯ ಮತ್ತು ಕ್ರಿಸ್ತನಂತೆ ಆಗುತ್ತದೆ. ನಮಗೆ ಅತೀ ಅವಶ್ಯಕವಾಗಿ ಬೇಕಾಗಿರುವುದು ದೇವರ ಕೃಪೆ ಮತ್ತು ಅವನು ದೀನರಿಗೆ ಧಾರಾಳವಾಗಿ ಕೃಪೆಯನ್ನು ನೀಡುತ್ತಾನೆ. ಇದು ಸುವಾರ್ತೆಯ ಅದ್ಭುತ ಸಂದೇಶವಾಗಿದೆ.
ಆದರೆ ದುಃಖಕರ ವಿಷಯವೇನೆಂದರೆ ಇದು ಸಾಕಷ್ಟು ಬೋಧಿಸಲ್ಪಟ್ಟಿಲ್ಲ. ಹಾಗಾಗಿ ಪೇತ್ರನು ಹೇಳುವ ಪ್ರಕಾರ ನಿಜವಾದ ದೇವರ ಕೃಪೆಯು ಹೆಚ್ಚಿನ ವಿಶ್ವಾಸಿಗಳು ಅನುಭವಿಸಲಾಗಿಲ್ಲ (1 ಪೇತ್ರ 5:12). ಇನ್ನೊಂದು ವಿಷಯದ ಬಗ್ಗೆ ನಾನು ನಿಮಗೆ ಎಚ್ಚರಿಕೆ ನೀಡಲು ಬಯಸುತ್ತೇನೆ. ಎಲ್ಲಾ ರೀತಿಯ ಪಕ್ಷಪಾತದಿಂದ ಸಂಪೂರ್ಣ ಸ್ವಾತಂತ್ರ ಪಡೆದುಕೊಳ್ಳುವುದು ದೈವಿಕ ಜ್ಞಾನದ ಗುಣಗಳಲ್ಲಿ ಒಂದಾಗಿದೆ (ಯಾಕೋಬ 3:17 ಕೆ ಜೆ ವಿ). ಪಕ್ಷಪಾತವು ಪ್ರತಿಯೊಬ್ಬ ಮನುಷ್ಯನ ಮಾಂಸದಲ್ಲಿದೆ. ನಾವು ಕೆಲವು ಜನರಿಗೆ ಕೃಪೆಯನ್ನು ತೋರುತ್ತೇವೆ. ನಮ್ಮ ಸ್ನೇಹಿತನೊಬ್ಬನು ಏನಾದರೂ ತಪ್ಪು ಮಾಡಿದರೆ ಅದನ್ನು ಮುಚ್ಚಿಡುತ್ತೇವೆ, ಆದರೆ ನಮಗೆ ಇಷ್ಟವಿಲ್ಲದವರು, ಅದೇ ತಪ್ಪನ್ನು ಮಾಡಿದರೆ ಅದನ್ನು ನಾವು ಅದನ್ನು ಪ್ರಕಟಪಡಿಸುತ್ತೇವೆ. ಈ ವ್ಯತ್ಯಾಸ ಏಕೆ? ಏಕೆಂದರೆ, ನಾವಿದನ್ನು ಮಾಡುವುದು ಪಕ್ಷಪಾತವೆಂಬ ದುಷ್ಟತನದಿಂದ. ನೀವು ಪಕ್ಷಪಾತಿಗಳಾಗಿದ್ದರೆ ಯೇಸುವಿನ ಶಿಷ್ಯರಾಗಲು ಅರ್ಹರಲ್ಲ.
ಅನೇಕ ವಿಶ್ವಾಸಿಗಳಲ್ಲಿ ನಾನು ನೋಡಿದ ಬಹು ದೊಡ್ಡ ಕೆಡುಕುಗಳಲ್ಲಿ ಪಕ್ಷಪಾತವು ಒಂದಾಗಿದೆ. ನೀವು ಯೇಸುಕ್ರಿಸ್ತನ ಸಭೆಯನ್ನು ದೈವಿಕ ಜ್ಞಾನದಿಂದ, ಕಟ್ಟಲು ಬಯಸುವುದಾದರೆ ಯಾಕೋಬ 3:17 ನ್ನು ಪರಿಗಣಿಸಿರಿ. ಇದು ದೈವಿಕ ಜ್ಞಾನದ ಗುಣಗಳಲ್ಲಿ ಒಂದಾಗಿದೆ. ಅದು ಯಾರಿಗೂ ಪಕ್ಷಪಾತವನ್ನು ತೋರಿಸುವುದಿಲ್ಲ ಎಂದು ಹೇಳುತ್ತದೆ.
1 ತಿಮೋಥೆ 5:19 ರಲ್ಲಿ ಸಭಾ ಹಿರಿಯನ ಬಗ್ಗೆ ಯಾರಾದರೂ ದೂರು ಹೇಳಿದರೆ, ಇಬ್ಬರು ಇಲ್ಲವೇ ಮೂವರು ಸಾಕ್ಷಿಗಳಿದ್ದ ಹೊರತಾಗಿ ಅದನ್ನು ತೆಗೆದುಕೊಳ್ಳಬೇಡ ಎಂದು ಪೌಲನು ತಿಮೋಥೆಯನಿಗೆ ಹೇಳುತ್ತಾನೆ. ನಾನು ಕೆಲಸ ಮಾಡಿದ ಎಲ್ಲಾ ಸಭೆಗಳಲ್ಲಿ ಈ ತತ್ವವನ್ನು ನಾನು ಅನುಸರಿಸಿದ್ದೇನೆ. ನಾನು ಯಾವುದೇ ಸಭೆಯ ಹಿರಿಯರ ವಿರುದ್ಧ ಆರೋಪವನ್ನು ಸ್ವೀಕರಿಸಿದಾಗ, ನಾನು ಯಾವಾಗಲೂ ಅದನ್ನು ತನಿಖೆ ಮಾಡುತ್ತೇನೆ. ಇದು ಸುಳ್ಳು ಆರೋಪ ಎಂದು ನಾನು ಕಂಡುಕೊಂಡರೆ, ನಾನು ಅದನ್ನು ನಿರ್ಲಕ್ಷಿಸುತ್ತೇನೆ. ಆದರೆ, ಎರಡು ಅಥವಾ ಮೂರು ಸಾಕ್ಷಿಗಳ ವಿಚಾರಣೆಯ ನಂತರ, ಆರೋಪವು ನಿಜವೆಂದು ತಿಳಿದು, ನಾನು ಅವರ ಮೇಲೆ ಕ್ರಮ ಕೈಗೊಂಡಿದ್ದೇನೆ. ಆದರೆ ನಾನು ಒಬ್ಬ ಸಭಾ ಹಿರಿಯನ (ಅವನು ನನ್ನ ಆತ್ಮೀಯ ಸ್ನೇಹಿತನಾಗಿರಬಹುದು) ಬಗ್ಗೆ ಜಾಗರೂಕತೆಯಿಂದ ಯಾವುದೇ ಪಕ್ಷಪಾತವಿಲ್ಲದೆ ವರ್ತಿಸಿದ್ದೇನೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿರಲು ನನಗೆ ಸಹಾಯ ಮಾಡುವಂತೆ ನಾನು ದೇವರಲ್ಲಿ ಕೇಳಿಕೊಳ್ಳುತ್ತೇನೆ.
ಒಬ್ಬ ಸಭಾಹಿರಿಯನು ಪಾಪ ಮಾಡಿದನೆಂದು ತಿಳಿದಾಗ, 1 ತಿಮೋಥೆ 5:20 ರಲ್ಲಿ ಆತನನ್ನು ಸಾರ್ವಜನಿಕವಾಗಿ ಎಲ್ಲರ ಮುಂದೆಯೇ ಖಂಡಿಸಬೇಕು ಎಂದು ಹೇಳಲಾಗಿದೆ. ಅಂದರೆ ಈ ಸಭಾ ಹಿರಿಯನು ಪಾಪ ಮಾಡಿದ್ದಾನೆಂದು ಇಡೀ ಸಭೆಗೆ ತಿಳಿದಿರಬೇಕು ಮತ್ತು ಸಭಾ ಹಿರಿಯನ ಬಗ್ಗೆ ಸಾರ್ವಜನಿಕವಾಗಿ ಶಿಸ್ತಿನ ಕ್ರಮ ಕೈಗೊಂಡಾಗ ಸಭೆಯಲ್ಲಿರುವ ಪ್ರತಿಯೊಬ್ಬರು ಪಾಪ ಮಾಡಲು ಹೆದರುತ್ತಾರೆ.
ಆ ಸಭಾ ಹಿರಿಯನು ಆಪ್ತ ವೈಯಕ್ತಿಕ ಸ್ನೇಹಿತನಾಗಿದ್ದರೆ, ತಿಮೊಥೆಯನು ಅವನ ಕಡೆಗೆ ಪಕ್ಷಪಾತವನ್ನು ಹೊಂದುವ ಮತ್ತು ಪಾಪವನ್ನು ಮುಚ್ಚಿ ಹಾಕುವ ಅಪಾಯವಿದೆ ಎಂದು ಪೌಲನು ತಿಮೊಥೆಯನಿಗೆ ಎಚ್ಚರಿಸಿದನು. ಆದ್ದರಿಂದ ಪೌಲನು ತಿಮೊಥೆಯನಿಗೆ ಪಕ್ಷಪಾತದ ಪಾಪವನ್ನು ಮಾಡದಂತೆ ಜಾಗರೂಕತೆಯನ್ನು ವಹಿಸುವಂತೆ ಎಚ್ಚರಿಕೆ ನೀಡಿದನು. ಮತ್ತು 1 ತಿಮೊಥೆಯ 5:21 ರಲ್ಲಿ, ಪೌಲನು ತಾನು ಹೇಳಿದ್ದನ್ನು ಒತ್ತಿ ಹೇಳಲು ಬಹಳ ಕಠಿಣವಾದ ಪದಗಳನ್ನು ಬಳಸಿದನು. ಅವನು ಹೇಳಿ ದ್ದೇನೆಂದರೆ , "ದೇವರ ಮುಂದೆಯೂ ಕರ್ತನಾದ ಯೇಸು ಕ್ರಿಸ್ತನ ಮುಂದೆಯೂ ಆರಿಸಲ್ಪಟ್ಟಿರುವ ದೇವದೂತರ ಸಮ್ಮುಖದಲ್ಲಿ ಖಂಡಿತವಾಗಿ ನಾನು ಹೇಳುತ್ತೇನೆ".
ಸತ್ಯವೇದದ ಪ್ರತಿಯೊಂದು ವಾಕ್ಯವು ದೇವರ ಮತ್ತು ಕ್ರಿಸ್ತನ ಮತ್ತು ದೂತರ ಸಮ್ಮುಖದಲ್ಲಿ ಬರೆಯಲಾಗಿದೆ. ಹಾಗಾದರೆ ಪೌಲನು ಅದನ್ನು ಇಲ್ಲಿ ನಿರ್ದಿಷ್ಟವಾಗಿ ಏಕೆ ಉಲ್ಲೇಖಿಸಬೇಕು? ಏಕೆಂದರೆ ಸಭೆಯಲ್ಲಿ ಯಾರಿಗಾದರೂ ಪಕ್ಷಪಾತವನ್ನು ತೋರಿಸುವುದು ಒಂದು ಭಯಾನಕ ಮತ್ತು ಗಂಭೀರವಾದ ಪಾಪವಾಗಿದೆ ಎಂಬ ಅಂಶವನ್ನು ಒತ್ತಿ ಹೇಳಲು ಪೌಲನು ಬಯಸುತ್ತಾನೆ. ತಿಮೊಥೆಯನೇ, "ಇದನ್ನು ಗಂಭೀರವಾಗಿ ಪರಿಗಣಿಸು, ಯಾವುದೇ ಸಭಾ ಹಿರಿಯರ ಪರವಾಗಿ ಎಂದಿಗೂ ಪಕ್ಷಪಾತ ಮಾಡಬೇಡ. ಈ ವಿಷಯದಲ್ಲಿ ತುಂಬಾ ಜಾಗರೂಕರನಾಗಿರು. ಏಕೆಂದರೆ ನೀನು ಒಂದು ದಿನ ದೇವರಿಗೆ ಮತ್ತು ಕ್ರಿಸ್ತನಿಗೆ ಉತ್ತರಿಸಬೇಕಾಗಿದೆ” . ಎಂದು ಪೌಲನು ಹೇಳುತ್ತಿದ್ದಾನೆ.
ಸಮಯಕ್ಕೆ ತಕ್ಕಂತೆ ಕಳೆದ ವರ್ಷಗಳಲ್ಲಿ, ನಾನು ನಮ್ಮ CFC ಸಭೆಗಳಲ್ಲಿ ಕೆಲವು ಸಭಾ ಹಿರಿಯರ ಮೇಲೆ ಶಿಸ್ತಿನ ಕ್ರಮವನ್ನು ಕೈಕೊಳ್ಳಬೇಕಾಯಿತು. ಆದರೆ, ದೇವರ ಕೃಪೆಯಿಂದ ನಾನು ಯಾವುದೇ ಸಮಯದಲ್ಲಿ ಯಾವುದೇ ಹಿರಿಯರಿಗೆ ಪಕ್ಷಪಾತವನ್ನು ತೋರಿಸಿಲ್ಲ ಎಂದು ಹೇಳಬಲ್ಲೆ. ನನ್ನ ಶಿಸ್ತಿನ ಕ್ರಮದಿಂದ ಒಬ್ಬ ಸಭಾ ಹಿರಿಯನಿಗೆ ಅಥವಾ ಬೇರೆ ಯಾರಾದರೂ ನನ್ನ ಮೇಲೆ ಕೋಪಗೊಳ್ಳಲು ಕಾರಣವಾಗಿದ್ದರೆ, ನಾನು ಅದಕ್ಕಾಗಿ ಬೇಸರಪಟ್ಟಿಲ್ಲ.
ನನ್ನ ಸೇವೆಯ ಮೇಲೆ ದೇವರ ಅಭಿಷೇಕವನ್ನು ಕಳೆದುಕೊಳ್ಳಲು ನಾನು ಬಯಸಲಿಲ್ಲ. ಇದು ನನಗೆ ಅತಿ ಮುಖ್ಯವಾಗಿತ್ತು. ಹಾಗಾಗಿ, ನಾನು ಯಾವಾಗಲೂ ಯಾರಿಗೂ ಪಕ್ಷಪಾತ ಮಾಡದಂತೆ ಎಚ್ಚರಿಕೆ ವಹಿಸುತಿದ್ದೆ. 1 ತಿಮೊಥೆ 5:22 ರಲ್ಲಿ ಪೌಲನು ತಿಮೊಥೆಯನಿಗೆ ಹೀಗೆ ಹೇಳುತ್ತಾನೆ, "ಅವಸರದಿಂದ ಯಾರ ಮೇಲೆಯೂ ಹಸ್ತಾರ್ಪಣೆ ಮಾಡಬೇಡ; ಮತ್ತು ಇತರರ ಪಾಪಗಳಲ್ಲಿ ಪಾಲುಗಾರನಾಗದೆ ನೀನು ಶುದ್ದನಾಗಿರುವ ಹಾಗೆ ನೋಡಿಕೋ”. ಹೀಗೆ ಸಭೆಯ ಹಿರಿಯರನ್ನು ನೇಮಿಸಬೇಕೆಂದು ಸೂಚಿಸುತ್ತಾನೆ.
ನೀನು ಚೆನ್ನಾಗಿ ತಿಳಿದಿಲ್ಲದೆ ಯಾರನ್ನೂ ಸಭಾ ಹಿರಿಯರನ್ನಾಗಿ ನೇಮಿಸಬಾರದೆಂದು ಪೌಲನು ತಿಮೊಥೆಯನಿಗೆ ಎಚ್ಚರಿಸುತ್ತಾನೆ. ಆತುರದಿಂದ ಸಭಾ ಹಿರಿಯರನ್ನು ನೇಮಿಸಬೇಡಿ; ನೇಮಿಸಿದ್ದಲ್ಲಿ, ತಿಮೊಥೆಯನು ಆ ಸಭಾಹಿರಿಯರ ಪಾಪಗಳ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತಾನೆ. ಸಭಾಹಿರಿಯರ ಪಾಪಗಳಿಗೆ ನಾವು ಜವಾಬ್ದಾರಿಯನ್ನು ಹಂಚಿಕೊಳ್ಳುವ ಇನ್ನೊಂದು ಮಾರ್ಗವೆಂದರೆ ಅವನು ಪಾಪ ಮಾಡಿದ್ದಾನೆಂದು ತಿಳಿದಾಗ, ಅವನ ಪಾಪವನ್ನು ಮುಚ್ಚಿಡುವುದು. ಆಗ ದೇವರು ಹೇಳುವುದೇನೆಂದರೆ, ಅವನ ಪಾಪಕ್ಕೆ ನೀವು ಜವಾಬ್ದಾರರಾಗಿರುತ್ತೀರಿ. ಆದ್ದರಿಂದ, ಪೌಲನು ತಿಮೊಥೆಯನಿಗೆ ತನ್ನನ್ನು ತಾನು ಶುದ್ಧನಾಗಿರಲು ಪಕ್ಷಪಾತದಿಂದ ಮುಕ್ತನಾಗಿರಲು ಮತ್ತು ಅಂತಹ ಪಾಪಗಳಿಂದ ಮುಕ್ತನಾಗಿರಲು ಎಚ್ಚರಿಸುತ್ತಾನೆ.
ದೇವರು ನಿರಂತರವಾಗಿ ಎಲ್ಲಾ ಸಭೆಗಳಲ್ಲಿ ಪಾಪವನ್ನು ಬಹಿರಂಗಪಡಿಸಲು ಪ್ರಯತ್ನಿಸುತ್ತಾನೆ. ಸಿಮಿಯೋನನು ದೇವಾಲಯಕ್ಕೆ ಬಂದು ಯೇಸುವನ್ನು ಮಗುವಾಗಿ ನೋಡಿ ಹೇಳಿದ ಭವಿಷ್ಯವಾಣಿಯಲ್ಲಿ ನಾವು ಆಸಕ್ತಿಕರ ವಿಷಯವನ್ನು ನೋಡುತ್ತೇವೆ. ಅವರು ಈ ಮೂರು ವಿಷಯಗಳನ್ನು ಹೇಳಿದರು:
"(1) ಈ ಮಗು (ಯೇಸು) ಅನೇಕರು ಬೀಳುವುದಕ್ಕೂ ಮತ್ತು ತಿರುಗಿ ಏಳುವುದಕ್ಕೆ ನೇಮಿಸಲ್ಪಟ್ಟಿದೆ ;
(2) ಎದುರು ಮಾತನಾಡುವುದಕ್ಕೂ ಈ ಶಿಶುವು ಗುರುತಾಗಿರುವನು;
(3) ಮತ್ತು ಅನೇಕರ ಹೃದಯಗಳ ಆಲೋಚನೆಗಳು ಪ್ರಕಟವಾಗುವವು"(ಲೂಕ 2:34,35).
ಪ್ರಪಂಚದ ವಿವಿಧ ಭಾಗಗಳಲ್ಲಿ ಕರ್ತನು ಸ್ಥಾಪಿಸಿದ CFC ಸಭೆಗಳಲ್ಲಿ ಈ 3 ವಿಷಯಗಳು ಮತ್ತೆ ಮತ್ತೆ ನೆರವೇರುವುದನ್ನು ನಾನು ನೋಡಿದ್ದೇನೆ. ಕರ್ತನು ನಮ್ಮ ಮಧ್ಯದಲ್ಲಿದ್ದು ನಮ್ಮನ್ನು ನಡೆಸಲು ನಾವು ಕರ್ತನಿಗೆ ಅವಕಾಶ ಮಾಡಿಕೊಟ್ಟಿದ್ದೇವೆ.
ಮೊದಲನೆಯದಾಗಿ, ನಮ್ಮ ಮಧ್ಯದಲ್ಲಿ ಕರ್ತನ ಸಾನಿಧ್ಯ. ನಮ್ಮ ಸಭೆಗಳಲ್ಲಿ, ಕೆಲವು ನಿಜವಾಗಿಯೂ ದೀನರಾಗಿರುವವರು ಆತ್ಮಿಕವಾಗಿ ಹೆಚ್ಚಿನ ಎತ್ತರಕ್ಕೆ ಬೆಳೆಯಲು ಕಾರಣವಾಗಿದೆ ಮತ್ತು ಕೆಲವು ಅಹಂಕಾರಿಗಳು ಸಂಪೂರ್ಣವಾಗಿ ಬಿದ್ದು ಹೋಗಿದ್ದಾರೆ. ಮನುಷ್ಯರಿಂದ ಹೆಚ್ಚು ಗೌರವಿಸಲ್ಪಟ್ಟ ಕೆಲವರು ಬಿದ್ದುಹೋಗಿದ್ದಾರೆ, ಆದರೆ ಗೌರವಿಸಲ್ಪಡದ ಇನ್ನೂ ಕೆಲವರು ಕರ್ತನಿಂದ ಮೇಲಕ್ಕೆ ಎತ್ತಲ್ಪಟ್ಟಿದ್ದಾರೆ.
ಎರಡನೆಯದಾಗಿ, ಕರ್ತನು ನಮ್ಮ ಮಧ್ಯದಲ್ಲಿ ತನ್ನ ಶಕ್ತಿಯನ್ನು ತೋರ್ಪಡಿಸಿದಂತೆ, ನಮ್ಮ ಸಭೆಗಳು ಅನೇಕ ಜನರಿಂದ ವಿರೋಧಿಸಲ್ಪಟ್ಟಿರುವುದನ್ನು ನಾವು ನೋಡಿದ್ದೇವೆ. ಕರ್ತನಲ್ಲಿ ನಂಬಿಗಸ್ತರಾಗಿ ಮತ್ತು ಸತ್ಯದಿಂದ ನಡೆಯುವ ಪ್ರತಿಯೊಂದು ಸಭೆಯನ್ನು ಭಕ್ತಿಹೀನ ಕ್ರೈಸ್ತರು ವಿರೋಧಿಸುತ್ತಾರೆ.
ಮೂರನೆಯದಾಗಿ, ಕೆಲವರು ತಮ್ಮ ಹೃದಯಗಳಲ್ಲಿ ಮರೆಯಾಗಿಡಲು ಪ್ರಯತ್ನಿಸಿದ ರಹಸ್ಯಗಳನ್ನು ಅವರು ನಮ್ಮ ಸಭೆಗಳಿಗೆ ಬಂದಾಗ ಕರ್ತನು ಖಂಡಿಸುವುದನ್ನು ನಾನು ಅನೇಕ ಬಾರಿ ನೋಡಿದ್ದೇನೆ. ಸಭೆಯಲ್ಲಿ ಕ್ರಿಸ್ತನು ತನ್ನ ಅಸ್ತಿತ್ವವನ್ನು ಅಧಿಕಾರದಿಂದ ತೋರಿಸುವಾಗ ಯಾರೂ ಏನನ್ನೂ ಮರೆಮಾಡಲು ಸಾಧ್ಯವಿಲ್ಲ. ಒಂದು ಅಥವಾ ಇನ್ನೊಂದು ರೀತಿಯಲ್ಲಿ ದೇವರು ಎಲ್ಲವನ್ನೂ ಖಂಡಿಸುತ್ತಾನೆ.
ಸಂಖ್ಯಾಕಾಂಡ 32 ರಲ್ಲಿ, ಮೋಶೆಯ ಇತರ ಕೆಲವು ಹೇಳಿಕೆಗಳ ಮಧ್ಯದಲ್ಲಿ ಒಂದು ಸಣ್ಣ ಹೇಳಿಕೆ ಇದೆ. 23ನೇ ವಾಕ್ಯದಲ್ಲಿ"ನಿಮ್ಮ ಪಾಪವು ನಿಮ್ಮನ್ನು ಹಿಡಿಯುವ ತನಕ ಹುಡುಕಿಕೊಂಡೆ ಬರುವುದು ಎಂದು ತಿಳಿದುಕೊಳ್ಳಿರಿ"ಎಂದು ಹೇಳಲಾಗಿದೆ.
ವು ಕರ್ತನ ವಿರುದ್ಧ ಪಾಪ ಮಾಡಿದರೆ, ಅದು ಎಲ್ಲರಿಂದ ಮರೆ ಮಾಡಲ್ಪಟ್ಟಿದ್ದರೂ ಸಹ, ಒಂದು ದಿನ ಅದು ಖಂಡಿಸಲ್ಪಡುತ್ತದೆ ಎಂದು ನೀವು ಸಂಪೂರ್ಣವಾಗಿ ಖಚಿತಪಡಿಸಿಕೊಳ್ಳಿರಿ ಈಗ ಇಲ್ಲದಿದ್ದರೆ ಕ್ರಿಸ್ತನ ಬರೋಣದ ಸಮಯದಲ್ಲಿ. ಆದರೆ ಈಗಲೇ ಅದನ್ನು ಖಂಡಿಸಿದರೆ ಉತ್ತಮ. ಏಕೆಂದರೆ ನೀವು ಅದನ್ನು ಸರಿಪಡಿಸಿಕೊಳ್ಳಬಹುದು. ಕ್ರಿಸ್ತನ ಬರೋಣದ ನಂತರ, ನೀವು ಯಾವುದನ್ನೂ ಸರಿಪಡಿಸಲು ಸಾಧ್ಯವಿಲ್ಲ. ಆವಾಗ ಸಮಯ ಮೀರಿ ಹೋಗಿರುತ್ತದೆ. ಆದ್ದರಿಂದ ಕ್ರಿಸ್ತನ ಬರೋಣದ ಮೊದಲು ನಿಮ್ಮ ಪಾಪವನ್ನು ಖಂಡಿಸಿದರೆ ದೇವರಿಗೆ ಸ್ತೋತ್ರ. ಕ್ರಿಸ್ತನ ಬರೋಣದ ಮೊದಲು ನಿಮ್ಮ ಎಲ್ಲಾ ಪಾಪಗಳನ್ನು ಖಂಡಿಸುವ ಅಪೇಕ್ಷೆಯನ್ನು ನೀವು ಈವಾಗಲೇ ಹೊಂದಿರಬೇಕು.
ಕರ್ತನ ಸೇವೆ ಮಾಡುವಾಗ ನಾವು ತ್ಯಾಗದ ಮನೋಭಾವವನ್ನು ಹೊಂದಿರುವುದು ಎಷ್ಟು ಮುಖ್ಯ ಎಂಬುದರ ಕುರಿತು ನಾನು ಮಾತನಾಡಲು ಬಯಸುತ್ತೇನೆ. ನಾನು 1961 ರಲ್ಲಿ ನೀರಿನ ದೀಕ್ಷಾಸ್ನಾನ ತೆಗೆದುಕೊಂಡ ಸ್ವಲ್ಪ ಸಮಯದ ನಂತರ, 2 ಸಮುವೇಲ 24:24 ರಲ್ಲಿ ದಾವೀದನು ಹೇಳಿದ ಮಾತಿನ ಮೂಲಕ ಕರ್ತನು ನನ್ನೊಂದಿಗೆ ಮಾತನಾಡಿದನು. ಅಲ್ಲಿ ದಾವೀದನು, "ನನಗೆ ಯಾವ ವೆಚ್ಚವೂ ತಗಲದ (ಅಥವಾ ಉಚಿತವಾಗಿ ಸಿಗುವ) ವಸ್ತುವನ್ನು ನಾನು ನನ್ನ ದೇವರಾದ ಕರ್ತನಿಗೆ ದಹನಬಲಿಯಾಗಿ ಅರ್ಪಿಸುವುದಿಲ್ಲ". ಎಂದು ಹೇಳಿದನು. ಆಗ ಕರ್ತನು ನನಗೆ ಸ್ಪಷ್ಟವಾಗಿ ಹೇಳಿದ್ದು ನನಗೆ ಈಗಲೂ ನೆನಪಿದೆ: "ನನ್ನ ಜೀವನದ ಯಾವುದೇ ಸಮಯದಲ್ಲಿ, ನನಗೆ ಯಾವ ವೆಚ್ಚವೂ ತಗಲದ ಅಥವಾ ಬೆಲೆ ತೆರಬೇಕಾಗಿಲ್ಲದ ಅರ್ಪಣೆಯನ್ನು ನಾನು ದೇವರಿಗೆ ಅರ್ಪಿಸಬಾರದು." ಯೇಸು ಕೂಡ ಈ ಭೂಮಿಯ ಮೇಲೆ ಜೀವಿಸಿದಾಗ, ಶಿಲುಬೆಯ ಮರಣದವರೆಗೂ ಎಲ್ಲವನ್ನೂ ತಂದೆಗೆ ತ್ಯಾಗಪೂರ್ಣವಾಗಿ ಅರ್ಪಿಸಿದನು. ನನ್ನ ಜೀವನದುದ್ದಕ್ಕೂ ನಾನು ನಡೆಯಬೇಕಾದ ಹಾದಿ ಅದೇ ಎಂದು ನಾನು ಆಗ ಕಂಡುಕೊಂಡೆನು ಮತ್ತು ಅಂದೇ ನಾನು ತೀರ್ಮಾನಿಸಿದ್ದೇನೆಂದರೆ, "ನನ್ನ ಜೀವನದಲ್ಲಾಗಲಿ ಅಥವಾ ನನ್ನ ಸೇವೆಯಲ್ಲಾಗಲಿ, ನನಗೆ ಯಾವುದೇ ಬೆಲೆ ತಗಲದ ಅಥವಾ ತ್ಯಾಗವಿಲ್ಲದ ಅರ್ಪಣೆಯನ್ನು ನಾನು ಕರ್ತನಿಗೆ ಎಂದಿಗೂ ಅರ್ಪಿಸುವುದಿಲ್ಲ."
ಪೂರ್ಣಕಾಲ ಕರ್ತನ ಸೇವೆ ಮಾಡುವುದಕ್ಕಾಗಿ ನಾನು ನನ್ನ ಲೌಕಿಕ ಕೆಲಸವನ್ನು ಬಿಟ್ಟ ದಿನದಿಂದ ಇಂದಿನವರೆಗೂ - ಈ ಕಳೆದ 60 ವರ್ಷಗಳಲ್ಲಿ - ನಾನು ಇದೇ ತತ್ವದ ಮೂಲಕ ಜೀವಿಸಲು ಪ್ರಯತ್ನಿಸಿದ್ದೇನೆ: "ನನಗೆ ಯಾವ ವೆಚ್ಚವೂ ತಗಲದ ವಸ್ತುವನ್ನು ನಾನು ಕರ್ತನಿಗೆ ಅರ್ಪಿಸುವುದಿಲ್ಲ." ಪೂರ್ಣಹೃದಯದಿಂದ ಕರ್ತನ ಸೇವೆ ಮಾಡುವುದಕ್ಕಾಗಿ ನನ್ನ ಹಣ, ನನ್ನ ಆರೋಗ್ಯ, ನನ್ನ ಕೀರ್ತಿ, ನನ್ನ ಸುಖಭೋಗಗಳು ಮತ್ತು ಉಳಿದೆಲ್ಲವನ್ನೂ ತ್ಯಾಗ ಮಾಡಲು ನಾನು ಸಿದ್ಧನಿದ್ದೆನು. ಇದರ ಫಲವಾಗಿ, ಈ ಎಲ್ಲಾ ವರ್ಷಗಳಲ್ಲಿ ನಾನು ಆಶೀರ್ವಾದಕರವಾದ ಜೀವನ ಮತ್ತು ಆಶೀರ್ವಾದಕರವಾದ ಸೇವೆಯನ್ನು ಪಡೆದಿದ್ದೇನೆ. ನೀವೆಲ್ಲರೂ ಕೂಡ ಈ ಮಾರ್ಗದಲ್ಲಿ ನಡೆಯಬೇಕೆಂದು ನಾನು ಹೃತ್ಪೂರ್ವಕವಾಗಿ ಶಿಫಾರಸು ಮಾಡುತ್ತೇನೆ.
50 ವರ್ಷಗಳ ಹಿಂದೆ ಮೊದಲ ಸಿಎಫ್ಸಿ (CFC) ಸಭೆಯು ಪ್ರಾರಂಭವಾದಾಗ, 1975ರ ಆಗಸ್ಟ್ 17 ರಂದು ನಾವು ಸೇರಿದ ಮೊದಲ ಭಾನುವಾರದಂದೇ ಕರ್ತನು ನಮಗೆ ಒಂದು ವಾಕ್ಯವನ್ನು ಕೊಟ್ಟನು. ಕರ್ತನು ನಮಗೆ ಕೊಟ್ಟ ವಾಕ್ಯವು ಮಲಾಕಿಯ ಗ್ರಂಥ 1ನೇ ಅಧ್ಯಾಯದಿಂದ ಬಂದಿತ್ತು. ಅಲ್ಲಿ, ತಮಗೆ ಯಾವುದೇ ವೆಚ್ಚ ತಗಲದ ಅಗ್ಗದ ಅರ್ಪಣೆಗಳನ್ನು ದೇವರಿಗೆ ತರುತ್ತಿದ್ದ ಇಸ್ರಾಯೇಲ್ಯರ ಬಗ್ಗೆ ಕರ್ತನು ಮಾತನಾಡುತ್ತಾನೆ - ಅಂದರೆ ಕುರುಡು ಕುರಿಗಳು, ಕುಂಟ ಎತ್ತುಗಳು ಮತ್ತು ರೋಗಗ್ರಸ್ತ ಆಡುಗಳು ಇತ್ಯಾದಿ. ಅವರು ತಮಗೆ ಬೇಡವಾದ ಪ್ರಾಣಿಗಳನ್ನು ದೇವರಿಗೆ ಅರ್ಪಿಸುತ್ತಿದ್ದರು. ಅವರು ಒಳ್ಳೆಯ ಅಂದರೆ ಆರೋಗ್ಯವಂತ ಪ್ರಾಣಿಗಳನ್ನು ತಮಗಾಗಿ ಇಟ್ಟುಕೊಂಡು, ತಮಗೆ ಬೇಡವಾದದ್ದನ್ನು ದೇವರಿಗೆ ಕೊಡುತ್ತಿದ್ದರು. ಅವರ ಬಲಿ-ಅರ್ಪಣೆಗಳಲ್ಲಿ ಅವರಿಗೆ ಯಾವುದೇ ಖರ್ಚು ಅಥವಾ ತ್ಯಾಗದ ಅಗತ್ಯವಿರಲಿಲ್ಲ. ಆಗ ಕರ್ತನು, "ಇಂಥಾ ಅರ್ಪಣೆಗಳನ್ನು ತರುವವರಿಗೆ ದೇವಾಲಯದ ಬಾಗಿಲುಗಳನ್ನು ಮುಚ್ಚುವವರು ನಿಮ್ಮಲ್ಲಿ ಇದ್ದರೆ ಎಷ್ಟೋ ಒಳ್ಳೇದು; ಅಂಥವರ ಅರ್ಪಣೆಗಳನ್ನು ನಾನು ಅಂಗೀಕರಿಸುವುದಿಲ್ಲ," ಎಂದು ಹೇಳಿದನು (ಮಲಾಕಿಯ 1:8-11).
ಮಲಾಕಿಯನ ಕಾಲದಲ್ಲಿದ್ದ ಆ ಇಸ್ರಾಯೇಲ್ಯರು ತಮಗೆ ಯಾವುದೇ ಬೆಲೆಬಾಳದ ಹಾಗೂ ಪ್ರಯೋಜನವಿಲ್ಲದ ವಸ್ತುವನ್ನು ಕರ್ತನಿಗೆ ಅರ್ಪಿಸುತ್ತಿದ್ದರು. ಅದು ದೇವರಿಗೆ ಮಾಡಿದ ಅವಮಾನವಾಗಿತ್ತು. ಆದರೆ ಯಾಜಕರು ಅವರನ್ನು ತಡೆಯಲಿಲ್ಲ. ಆದರೂ ಮಲಾಕಿಯನಿಗೆ ಕರ್ತನು ಹೀಗೆ ಹೇಳಿದನು: "ಒಂದು ದಿನ ಬರಲಿದೆ, ಆಗ ಪ್ರಪಂಚದಾದ್ಯಂತ ತಮಗೆ ಬೆಲೆಬಾಳುವ ತ್ಯಾಗಗಳನ್ನು ಅರ್ಪಿಸುವ ಜನರನ್ನು ಕರ್ತನು ಎಬ್ಬಿಸುವನು."
ನಾವು ಮೊದಲ ಸಿಎಫ್ಸಿ (CFC) ಸಭೆಯನ್ನು ಪ್ರಾರಂಭಿಸಿದಾಗ ಕರ್ತನು ನಮಗೆ ಕೊಟ್ಟ ಮಾತು ಅದಾಗಿತ್ತು. ಇಂದಿಗೂ ಅದು ನನಗೆ ಸ್ಪಷ್ಟವಾಗಿ ನೆನಪಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ, ಪ್ರಪಂಚದ ಎಲ್ಲಾ ರಾಷ್ಟ್ರಗಳಲ್ಲಿ ಆತನ ನಾಮವು ಘನವಾಗಿರುವುದು ಎಂದು ಕರ್ತನು ಹೇಳುತ್ತಾನೆ. ಏಕೆಂದರೆ ಆತನು "ಶುದ್ಧವಾದ ಕಾಣಿಕೆಗಳನ್ನು" (ಮಲಾಕಿಯ 1:11) ತನಗಾಗಿ ಅರ್ಪಿಸುವ ಜನರನ್ನು ಎಲ್ಲೆಡೆ ಎಬ್ಬಿಸುವನು. ಇಲ್ಲಿ "ಶುದ್ಧವಾದ" ಎಂದರೆ ಅವರಿಗೆ ಎಲ್ಲವನ್ನೂ ಕೊಡುವಂತಹ ಅಥವಾ ಮಹಾ ತ್ಯಾಗದ ಅರ್ಪಣೆಗಳು ಎಂದು ಅರ್ಥ! ಆಗ ಆತನ ನಾಮವು ಭೂಮಿಯ ಎಲ್ಲಾ ರಾಷ್ಟ್ರಗಳಲ್ಲಿ ಘನಹೊಂದುವುದು.
ನಾವೀಗ ಅಂತಹ ಕಾಲದಲ್ಲಿ ಜೀವಿಸುತ್ತಿದ್ದೇವೆ. ನಮ್ಮ ಸರ್ವಸ್ವವನ್ನೂ ಕೊಡುವಂತಹ ಬಲಿಗಳನ್ನು ಕರ್ತನಿಗೆ ಅರ್ಪಿಸುವ ಮೂಲಕ ಪ್ರಪಂಚದ ಪ್ರತಿಯೊಂದು ದೇಶದಲ್ಲಿಯೂ ಕರ್ತನ ನಾಮವನ್ನು ಘನಪಡಿಸುವುದು ನಮ್ಮ ಸುಯೋಗವಾಗಿದೆ. ಅಂದರೆ, ಪ್ರತಿದಿನ ನಮ್ಮನ್ನು ನಾವೇ ನಿರಾಕರಿಸಿಕೊಂಡು, ನಮ್ಮ ಸ್ವಾರ್ಥಕ್ಕೆ ಸತ್ತು ಕರ್ತನನ್ನು ಹಿಂಬಾಲಿಸುವುದು; ಸಣ್ಣ ಮಕ್ಕಳಂತೆ ನಮ್ಮನ್ನು ತಗ್ಗಿಸಿಕೊಳ್ಳುವುದು ಮತ್ತು ನಮ್ಮಲ್ಲಿ ಯಾವುದೇ ವಿಷಯದ ಬಗ್ಗೆ ಅಹಂಕಾರದ ವಾಸನೆಯೂ ಇಲ್ಲದಂತೆ ನೋಡಿಕೊಳ್ಳುವುದು; ಬೇರೆಯವರ ದೃಷ್ಟಿಯಲ್ಲಿ ದೊಡ್ಡವರಾಗಲು ಬಯಸದೆ, ಸದಾ ತಗ್ಗಿ ನಡೆಯಲು ಬಯಸುವುದು - ಇದೇ ನಮ್ಮ ಅರ್ಪಣೆಯಾಗಿದೆ.
ಶಿಷ್ಯರನ್ನಾಗಿ ಮಾಡಿದ ನಂತರ, ಆತನು ಆಜ್ಞಾಪಿಸಿದ "ಎಲ್ಲವನ್ನೂ" ಕೈಕೊಳ್ಳುವಂತೆ ಅವರಿಗೆ ಬೋಧಿಸಬೇಕೆಂದು ಯೇಸು ನಮಗೆ ಆಜ್ಞಾಪಿಸಿದ್ದಾನೆ (ಮತ್ತಾಯ 28:20). ಆದ್ದರಿಂದ ನಾವು ಹೊಸ CFC ಸಭೆಯಾಗಿ ಪ್ರಾರಂಭಿಸಿದಾಗ, ಮೊದಲು "ಪರ್ವತದ ಮೇಲಿನ ಪ್ರಸಂಗ"ವನ್ನುಅಧ್ಯಯನ ಮಾಡಿ ಅಲ್ಲಿ ಯೇಸು ಹೇಳಿದ ಎಲ್ಲವನ್ನೂ ಪಾಲಿಸುವಂತೆ ಪವಿತ್ರಾತ್ಮನ ಶಕ್ತಿಯನ್ನು ಕೋರಲು ನಿರ್ಧರಿಸಿದೆವು (ಮತ್ತಾಯ 5, 6 ಮತ್ತು 7). ಆ ಅಧ್ಯಾಯಗಳಲ್ಲಿ ಯೇಸು ತನ್ನ ಶಿಷ್ಯರಿಗೆ, ನಿಮ್ಮ ನೀತಿಯು ಫರಿಸಾಯರ ನೀತಿಗಿಂತ ಹೆಚ್ಚಾಗಿರಬೇಕು ಎಂದು ಹೇಳಿದನು. ಫರಿಸಾಯರ ನೀತಿಯು ಹಳೆಯ ಒಡಂಬಡಿಕೆಯ ನೀತಿಯಾಗಿತ್ತು, ಅದು ಕೇವಲ ಹೊರಗಿನದ್ದಾಗಿತ್ತು ಮತ್ತು ಜನರನ್ನು ಮೆಚ್ಚಿಸುವಂತದ್ದಾಗಿತ್ತು. ಆದರೆ ಹೊಸ ಒಡಂಬಡಿಕೆಯ ನೀತಿಯು "ಆಂತರಿಕವಾದದ್ದು" (ಹೃದಯಕ್ಕೆ ಸಂಬಂಧಿಸಿದ್ದು) ಆಗಿರಬೇಕೆಂದು ಯೇಸು ಹೇಳಿದನು.
ನಂತರ ಯೇಸು ಅವರಿಗೆ ಕೆಲವು ಉದಾಹರಣೆಗಳನ್ನು ನೀಡಿದನು. ಆತನು ನೀಡಿದ ಮೊದಲ ಎರಡು ಉದಾಹರಣೆಗಳನ್ನು ಪರಿಗಣಿಸಿ.
ಮೊದಲನೆಯದು: ಕೊಲೆ ಮಾಡಬಾರದು ಎಂದು ಹಳೆಯ ಒಡಂಬಡಿಕೆ ಹೇಳುತ್ತಿತ್ತು. ಕೊಲೆಯು ಹೃದಯದಲ್ಲಿನ ಕೋಪದಿಂದ ಪ್ರಾರಂಭವಾಗುವುದರಿಂದ, ಹೊಸ ಒಡಂಬಡಿಕೆಯಲ್ಲಿ ಆ ಆಜ್ಞೆಯ ಸಮಾನವಾದ ಆಜ್ಞೆ "ಒಬ್ಬನು ಕೋಪಿಸಿಕೊಳ್ಳಬಾರದು" ಎಂದು ಯೇಸು ಹೇಳಿದನು (ಮತ್ತಾಯ 5:21, 22). ಹೀಗೆ ಹೊಸ ಒಡಂಬಡಿಕೆಯ ನೀತಿಯು ಹಳೆಯ ಒಡಂಬಡಿಕೆಯ ನೀತಿಗಿಂತ ಮಿಗಿಲಾದದ್ದಾಗಿದೆ. ಆದ್ದರಿಂದ, ಹಳೆಯ ಒಡಂಬಡಿಕೆಯಲ್ಲಿ ಕೊಲೆಯು ಎಷ್ಟು ಗಂಭೀರವಾಗಿತ್ತೋ, ಹೊಸ ಒಡಂಬಡಿಕೆಯಲ್ಲಿ ಕೋಪವು ಅಷ್ಟೇ ಗಂಭೀರವಾಗಿದೆ. ಒಂದು ವೇಳೆ ನೀವು ನಿಮ್ಮ ಸಂಗಾತಿಯ (ಪತಿ ಅಥವಾ ಪತ್ನಿ) ಮೇಲೆ ಕೋಪಗೊಳ್ಳುವ ವ್ಯಕ್ತಿಯಾಗಿದ್ದರೆ, ಹೊಸ ಒಡಂಬಡಿಕೆಯ ಮಾನದಂಡಗಳ ಪ್ರಕಾರ ನೀವು ಕೊಲೆಗಾರರಾಗಿದ್ದೀರಿ!! ಆದರೆ ಯೇಸು ಇಲ್ಲಿ ಬೋಧಿಸಿದ್ದನ್ನು ಇಂದು ಯಾರು ಬೋಧಿಸುತ್ತಾರೆ?
ನಾನು ಹೊಸದಾಗಿ ಹುಟ್ಟಿದ ನಂತರ 16 ವರ್ಷಗಳ ಕಾಲ ಕೋಪವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಏಕೆಂದರೆ ಹೊಸ ಒಡಂಬಡಿಕೆಯ ಅಡಿಯಲ್ಲಿ ಕೋಪವು ಕೊಲೆಗೆ ಸಮಾನವಾಗಿದೆ ಎಂದು ಯಾರೂ ನನಗೆ ಕಲಿಸಲಿಲ್ಲ. ಮನೆಯಲ್ಲಿ ನನಗೆ ಕೋಪ ಬಂದಾಗ, ಅದು ನನ್ನ ಹೆಂಡತಿಯನ್ನು ಕೊಲೆ ಮಾಡುವುದಕ್ಕೆ ಸಮಾನ ಎಂದು ನಾನು ಎಂದಿಗೂ ಭಾವಿಸಿರಲಿಲ್ಲ!! ಮುಂದುವರೆದು, ಒಬ್ಬನು ತನ್ನ ಕೋಪವನ್ನು ಮುಂದುವರಿಸಿದರೆ ಅವನು ನರಕಕ್ಕೆ ಹೋಗುತ್ತಾನೆ ಎಂದು ಯೇಸು ಹೇಳಿದನು (ಮತ್ತಾಯ 5:22).
ಜನರು ಯೇಸುವನ್ನು ನಂಬದಿದ್ದರೆ ನರಕಕ್ಕೆ ಹೋಗುತ್ತಾರೆ ಎಂದು ಕ್ರೈಸ್ತರು ಹೇಳುತ್ತಾರೆ. ಆದರೆ ನೀವು ಕೋಪಗೊಳ್ಳುವುದನ್ನು ಮುಂದುವರಿಸಿದರೆ, ನರಕಕ್ಕೆ ಹೋಗುತ್ತೀರಿ ಎಂದು ಯೇಸು ಹೇಳಿದನು. ಮತ್ತಾಯ 5:22 ನ್ನು ಓದಿ ಮತ್ತು ಅದನ್ನು ಗಂಭೀರವಾಗಿ ಧ್ಯಾನಿಸಿ. ಕೋಪದ ಗಂಭೀರತೆಯನ್ನು ನಾನು ಅರ್ಥಮಾಡಿಕೊಂಡಾಗ, ಅದನ್ನು ಜಯಿಸಲು ಸಾಧ್ಯವಾಗದೆ ನಾನು ಹತಾಶನಾದೆನು. ಆಗ ನಾನು ಪವಿತ್ರಾತ್ಮನಿಂದ ತುಂಬಲ್ಪಡಲು ಹುಡುಕಿದೆನು. ಆಗ ಯೇಸು ನನ್ನನ್ನು ಪವಿತ್ರಾತ್ಮನಲ್ಲಿ ಮತ್ತು ಬೆಂಕಿಯಲ್ಲಿ ದೀಕ್ಷಾಸ್ನಾನ ಮಾಡಿಸಿದನು. ಆಗ ನಾನು ಕೋಪವನ್ನು ಜಯಿಸಲು ಸಾಧ್ಯವಾಯಿತು.
ಹೆಚ್ಚಿನ ಕ್ರೈಸ್ತ ಬೋಧಕರು ಇದರ ಮೇಲೆ ಒತ್ತು ನೀಡದಿರುವುದು ವಿಷಾದದ ಸಂಗತಿ. ಒಮ್ಮೆ ನೀವು ಕ್ರಿಸ್ತನನ್ನು ಸ್ವೀಕರಿಸಿದ ನಂತರ, ಪವಿತ್ರಾತ್ಮನು ನಿಮ್ಮ ಹೃದಯದಲ್ಲಿ ಬಂದಿದ್ದಾನೆ, ಆದ್ದರಿಂದ ನೀವು ಪವಿತ್ರಾತ್ಮನಿಂದ ತುಂಬಲ್ಪಡಲು ಹುಡುಕುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. ನಾವು ನಿಜವಾಗಿಯೂ ಹೊಸದಾಗಿ ಹುಟ್ಟಿದಾಗ ಪವಿತ್ರಾತ್ಮನು ನಮ್ಮ ಹೃದಯದಲ್ಲಿ ಬರುತ್ತಾನೆ ಎಂಬುದು ನಿಜ (ರೋಮಾ. 8:9b ರಲ್ಲಿ ನಾವು ಓದುವಂತೆ). ಆದರೆ ನಮ್ಮ ಹೃದಯವು ಅನೇಕ ಕೋಣೆಗಳಿರುವ ಮನೆಯಂತಿದೆ. ಒಂದು ಕೋಣೆಯಲ್ಲಿ ಬೆಳಕಿರಬಹುದು, ಆದರೆ ಇತರ 9 ಕೋಣೆಗಳು ಕತ್ತಲೆಯಲ್ಲಿರಬಹುದು. ಆಗ ಆ ಮನೆಯಲ್ಲಿ ಬೆಳಕಿದೆ, ಆದರೆ ಅದು ಬೆಳಕಿನಿಂದ "ತುಂಬಿಲ್ಲ". ಅದೇ ರೀತಿ ನಾವು ಪವಿತ್ರಾತ್ಮನನ್ನು ಹೊಂದಿರಬಹುದು ಆದರೆ ಪವಿತ್ರಾತ್ಮನಿಂದ "ತುಂಬಲ್ಪಡದೆ" ಇರಬಹುದು. ನಮ್ಮ ಜೀವನದ ಪ್ರತಿಯೊಂದು ಕ್ಷೇತ್ರವನ್ನು ಬೇಷರತ್ತಾಗಿ ಪವಿತ್ರಾತ್ಮನಿಗೆ ಒಪ್ಪಿಸಿಕೊಟ್ಟಾಗ ಮಾತ್ರ ನಾವು ಪವಿತ್ರಾತ್ಮನಿಂದ ತುಂಬಲ್ಪಡುತ್ತೇವೆ.
ನೀವು ಯಾವುದಾದರೂ ಒಂದು ದಿನ ಹಿಂಜಾರಬಹುದು. ಆಗ ಆ ಕೋಣೆಯಲ್ಲಿನ ದೀಪ ಆರಿಹೋಗುತ್ತದೆ. ಆಗ ನೀವು ಮತ್ತೆ ಪವಿತ್ರಾತ್ಮನಿಂದ ತುಂಬಲ್ಪಡುವ ಅವಶ್ಯಕತೆ ಇರುತ್ತದೆ. ಆದ್ದರಿಂದ ಪವಿತ್ರಾತ್ಮನಿಂದ ತುಂಬಲ್ಪಡುವಿಕೆಯು ನಾವು ನಿರಂತರವಾಗಿ - ಎಲ್ಲಾ ಸಮಯದಲ್ಲೂ ಹೊಂದಿರಬೇಕಾದ ಅನುಭವವಾಗಿದೆ. "ನಿನ್ನೊಳಗಿರುವ ಬೆಳಕು ಕತ್ತಲೆಯಾಗದಂತೆ ನೋಡಿಕೋ" ಎಂದು ಯೇಸು ಎಚ್ಚರಿಸಿದನು. "ನಿನ್ನ ದೇಹವೆಲ್ಲಾ ಯಾವ ಭಾಗದಲ್ಲಿಯೂ ಕತ್ತಲೆಯಿಲ್ಲದೆ ಬೆಳಗುವುದಾದರೆ, ದೀಪವು ತನ್ನ ಪ್ರಕಾಶದಿಂದ ನಿನಗೆ ಕಳೆಕೊಡುವಂತೆ ನಿನ್ನ ದೇಹವು ಪರಿಪೂರ್ಣವಾಗಿ ಬೆಳಗುವುದು" (ಲೂಕ 11:35, 36) ಎಂದು ಆತನು ಹೇಳಿದನು. ಪವಿತ್ರಾತ್ಮನಿಂದ ತುಂಬಲ್ಪಡುವುದು ಎಂದರೆ ಇದೇ ಅರ್ಥ.
ಆದ್ದರಿಂದ ನಮ್ಮ ಜೀವನದ ಯಾವುದೇ ಕ್ಷೇತ್ರದಲ್ಲಿ ಕತ್ತಲೆ ಇಲ್ಲದಂತೆ ನಾವು ಯಾವಾಗಲೂ ಎಚ್ಚರದಿಂದಿರಬೇಕು.
ಇಂದು ಕೋಪಗೊಳ್ಳುವ ಬೋಧಕರಿದ್ದಾರೆ - ಮತ್ತು ಅದರ ಬಗ್ಗೆ ಅವರಿಗೆ ಪಾಪಪ್ರಜ್ಞೆಯೂ ಇರುವುದಿಲ್ಲ. ಸೈತಾನನು ಅವರನ್ನು ಸಂಪೂರ್ಣವಾಗಿ ಮೋಸಗೊಳಿಸಿದ್ದಾನೆ. ಅವರು ಜನರನ್ನು ಹೊಸ ಒಡಂಬಡಿಕೆಗೆ ಹೇಗೆ ನಡೆಸಬಲ್ಲರು?
ನಂತರ ಯೇಸು ಎರಡನೇ ಉದಾಹರಣೆಯನ್ನು ಉಲ್ಲೇಖಿಸಿದನು. ಮತ್ತಾಯ 5:27 ರಲ್ಲಿ, ವ್ಯಭಿಚಾರ ಮಾಡಬಾರದು ಎಂದು ಹಳೆಯ ಒಡಂಬಡಿಕೆ ಹೇಳಿದೆ ಎಂದು ಆತನು ಹೇಳಿದನು. ಆದರೆ ಹೊಸ ಒಡಂಬಡಿಕೆಯಲ್ಲಿ, ಒಬ್ಬನು ಕಾಮದೃಷ್ಟಿಯಿಂದ ಸ್ತ್ರೀಯನ್ನು ನೋಡಿದರೆ, ಅವನು ಆಗಲೇ ತನ್ನ ಹೃದಯದಲ್ಲಿ ಆಕೆಯೊಂದಿಗೆ ವ್ಯಭಿಚಾರ ಮಾಡಿದವನಾಗುತ್ತಾನೆ ಎಂದು ಆತನು ಹೇಳಿದನು. ನೀವು ಅಶ್ಲೀಲ ದೃಶ್ಯಗಳನ್ನು (Pornography) ನೋಡುತ್ತಿದ್ದರೆ ಮತ್ತು ಬೇರೆಯವರು ಲೈಂಗಿಕ ಪಾಪ ಮಾಡುವುದನ್ನು ವೀಕ್ಷಿಸುತ್ತಿದ್ದರೆ, ನೀವು ವ್ಯಭಿಚಾರ ಮಾಡುತ್ತಿದ್ದೀರಿ. ಮತ್ತು ಅಂತಹ ಕಾಮದೃಷ್ಟಿಯು ಅಂತಿಮವಾಗಿ ನಿಮ್ಮನ್ನು ನರಕಕ್ಕೆ ಕಳುಹಿಸುತ್ತದೆ ಎಂದು ಯೇಸು ಹೇಳಿದನು (ಮತ್ತಾಯ 5:29).
ಆದರೆ ಅಶ್ಲೀಲ ದೃಶ್ಯಗಳನ್ನು ನೋಡುವುದು ತಮ್ಮನ್ನು ನರಕಕ್ಕೆ ಕಳುಹಿಸುತ್ತದೆ ಎಂದು ನಂಬುವ ಎಷ್ಟು ಜನರಿದ್ದಾರೆ? ನಾನು ಅದನ್ನು ಬೋಧಿಸುತ್ತೇನೆ, ಮತ್ತು ನಾನು ಅದನ್ನು ಬೋಧಿಸುವುದನ್ನು ಮುಂದುವರಿಸುತ್ತೇನೆ. ಏಕೆಂದರೆ ಯೇಸು ಕಲಿಸಿದ್ದು ಅದನ್ನೇ. ಇದಲ್ಲದೆ, ನಿಮ್ಮ ಬಲಗೈಯಿಂದ ನೀವು ಲೈಂಗಿಕ ಪಾಪ ಮಾಡಿದರೆ, ಅದು ಕೂಡ ನಿಮ್ಮನ್ನು ನರಕಕ್ಕೆ ಒಯ್ಯುತ್ತದೆ ಎಂದು ಯೇಸು ಮತ್ತಾಯ 5:30 ರಲ್ಲಿ ಹೇಳಿದನು. ಆದರೆ ಅದನ್ನು ಯಾರು ಬೋಧಿಸುತ್ತಾರೆ? ನನ್ನ ಇಡೀ ಜೀವನದಲ್ಲಿ ಯಾರೂ ಅದನ್ನು ಬೋಧಿಸುವುದನ್ನು ನಾನು ಕೇಳಿಲ್ಲ.
ತಾವು ಆಜ್ಞಾಪಿಸಿದ "ಎಲ್ಲವನ್ನೂ" ಬೋಧಿಸಬೇಕೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ಆದರೆ ಯೇಸು ಕಲಿಸಿದ (ನಾನು ಮೇಲೆ ಪ್ರಸ್ತಾಪಿಸಿದ) ಒಂದು ಸಣ್ಣ ಭಾಗವನ್ನೂ ಸಹ ಇಂದಿನ ಸಭೆಗಳಲ್ಲಿ ಬೋಧಿಸುತ್ತಿಲ್ಲ. ಇದು ಇಂದಿನ ಕ್ರೈಸ್ತತ್ವದ ದುರಂತವಾಗಿದೆ.
ಹೊಸ ಒಡಂಬಡಿಕೆಯ ಮಟ್ಟಗಳನ್ನು (standards) ಸ್ಪಷ್ಟವಾಗಿ ಕೇಳಿದಾಗ ಮಾತ್ರ, ಆ ಮಟ್ಟಗಳನ್ನು ತಲುಪಲು ನಮ್ಮ ಅಸಮರ್ಥತೆಯನ್ನು ನಾವು ಕಂಡುಕೊಳ್ಳುತ್ತೇವೆ. ಆಗ ಮಾತ್ರವೇ ಅದು, ಮತ್ತೆ ಮತ್ತೆ ಪವಿತ್ರಾತ್ಮನಿಂದ ತುಂಬಲ್ಪಡುವಂತೆ ಕರ್ತನನ್ನು ಹುಡುಕಲು ನಮ್ಮನ್ನು ಪ್ರೇರೇಪಿಸುತ್ತದೆ.
ಪೌಲನು ಎಫೆಸದಲ್ಲಿನ ಸಭೆಗೆ ಬೋಧಿಸುತ್ತಾ ಮೂರು ವರ್ಷಗಳನ್ನು ಕಳೆದ ನಂತರ ಅಲ್ಲಿಂದ ಹೊರಡುವಾಗ, "ನಿಮಗೆ ಪ್ರಯೋಜನಕರವಾದದ್ದನ್ನು ತಿಳಿಸುವುದಕ್ಕೆ ನಾನು ಹಿಂಜರಿಯಲಿಲ್ಲ" ಎಂದು ಅವರಿಗೆ ಹೇಳಿದನು (ಅಪೊಸ್ತಲರ ಕೃತ್ಯ 20:20, 27).
ಕೋಪ ಮತ್ತು ಲೈಂಗಿಕ ಕಾಮದಿಂದ ಬಿಡುಗಡೆ ಹೊಂದುವುದು ನಮಗೆ ಅತ್ಯಂತ ಲಾಭದಾಯಕವಾಗಿದೆ. ಈ ಜೀವನದಲ್ಲಿ ಮತ್ತು ನಾವು ಕ್ರಿಸ್ತನ ನ್ಯಾಯಾಸನದ ಮುಂದೆ ನಿಲ್ಲುವಾಗಲೂ ಇದು ನಮಗೆ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಕರ್ತನು ಸ್ಥಾಪಿಸಿದ ಪ್ರತಿಯೊಂದು ಸಿಎಫ್ಸಿ ಸಭೆಯಲ್ಲಿ ನಾನು ಇದನ್ನು ಬೋಧಿಸಿದ್ದೇನೆ.
ಹಾಗಾದರೆ ನಿಮ್ಮ ಸಹೋದರ ಅಥವಾ ಸಹೋದರಿ ಏನಾದರೂ ಅನುಮಾನಾಸ್ಪದವಾಗಿ ವರ್ತಿಸುವುದನ್ನು ನೀವು ನೋಡಿದರೆ, ನೀವು ಏನು ಮಾಡಬೇಕು? ಅದರ ಬಗ್ಗೆ ಇತರರೊಂದಿಗೆ ಮಾತನಾಡಬೇಡಿ. ಅವರಿಗೆ ನೇರವಾಗಿ ಎಚ್ಚರಿಕೆ ನೀಡಿ. ಆದರೆ ನಿಮಗೆ ಆ ವ್ಯಕ್ತಿ ನಿಮಗೆ ಚೆನ್ನಾಗಿ ತಿಳಿದಿಲ್ಲದಿದ್ದರೆ, ನೀವು ನೋಡಿದ್ದನ್ನು ಸಭೆಯ ಹಿರಿಯರಿಗೆ ತಿಳಿಸಿ. ಆ ರೀತಿಯಲ್ಲಿ ನೀವು ಆ ಸಹೋದರ ಅಥವಾ ಸಹೋದರಿಯ ಸಭೆಯನ್ನು ಅಪವಿತ್ರಗೊಳಿಸುವುದರಿಂದ ಮತ್ತು ನರಕಕ್ಕೆ ಹೋಗುವುದರಿಂದ ರಕ್ಷಿಸಬಹುದು. ನೀವು ಯಾರೆಂಬುದು ಮುಖ್ಯವಲ್ಲ. ನೀವು ನೋಡುವುದನ್ನು ಹಿರಿಯರಿಗೆ ತಿಳಿಸಿ ಮತ್ತು ಆ ವ್ಯಕ್ತಿಯನ್ನು ಶಾಶ್ವತ ಶಿಕ್ಷೆಯಿಂದ ರಕ್ಷಿಸಲು ಸಹಾಯ ಮಾಡಿ.
ಈ ಸೇವೆಯನ್ನು ಒಬ್ಬ ಸಹೋದರ ಅಥವಾ ಸಹೋದರಿಯೂ ಪೂರೈಸಬಹುದು. ಕೊರಿಂಥದಲ್ಲಿ ಸಹೋದರಿ ಖ್ಲೋಯೆಯ ಉದಾಹರಣೆಯನ್ನು ಪರಿಗಣಿಸಿ. ಸತ್ಯವೇದದ ಎರಡು ಸಂಪೂರ್ಣ ಪುಸ್ತಕಗಳನ್ನು ಬರೆಯಲು ಅವಳು ಕಾರಣಳಾದಳು: ಪೌಲನು ಕೊರಿಂಥದವರಿಗೆ ಬರೆದ ಮೊದಲ ಪತ್ರ, ಮತ್ತು ಆ ಪತ್ರದಿಂದಾಗಿ, ಕೊರಿಂಥದವರಿಗೆ ಆತನು ಎರಡನೇ ಪತ್ರವನ್ನೂ ಬರೆಯುವಂತಾಯಿತು. 1 ಕೊರಿಂಥ 1:11 ರಲ್ಲಿ, ಪೌಲನು ಸಹೋದರಿ ಖ್ಲೋಯೆ ಮೂಲಕ ಕೊರಿಂಥದಲ್ಲಿನ ಸಮಸ್ಯೆಗಳ ಬಗ್ಗೆ ಕೇಳಿದನೆಂದು ನಾವು ಓದುತ್ತೇವೆ. ಆ ಸಭೆಯಲ್ಲಿ ಅನೇಕ ಸಮಸ್ಯೆಗಳಿವೆ ಎಂದು ಅವಳು ಪೌಲನಿಗೆ ಪತ್ರ ಬರೆದಳು, ಜನರಲ್ಲಿ ಜಗಳಗಳು, ಸಹೋದರರು ಇತರ ಸಹೋದರರನ್ನು ನ್ಯಾಯಾಲಯಕ್ಕೆ ಕರೆದೊಯ್ಯುವುದು, ವಿಶ್ವಾಸಿಗಳಲ್ಲಿ ಪಕ್ಷಪಾತದ ಮನೋಭಾವ, ಒಬ್ಬ ಸಹೋದರನು ತನ್ನ ಮಲತಾಯಿಯೊಂದಿಗೆ ಲೈಂಗಿಕ ಪಾಪದಲ್ಲಿ ವಾಸಿಸುವುದು, ರೊಟ್ಟಿ ಮುರಿಯುವ ಸಭೆಗಳಲ್ಲಿ ಸ್ವಾರ್ಥ, ಸಭೆಗಳಲ್ಲಿ ಅನ್ಯಭಾಷೆಗಳಲ್ಲಿ ಅಸ್ತವ್ಯಸ್ತವಾಗಿ ಮಾತನಾಡುವುದು ಇತ್ಯಾದಿ. ಸಭೆಯಲ್ಲಿನ ಹಿರಿಯರು ಈ ಎಲ್ಲದರ ಬಗ್ಗೆ ಏನನ್ನೂ ಮಾಡುತ್ತಿರಲಿಲ್ಲ.
ಸಹೋದರಿ ಖ್ಲೋಯೆ ಇದೆಲ್ಲದರ ಬಗ್ಗೆ ಚಿಂತಿತಳಾಗಿ ಪೌಲನಿಗೆ ಬರೆದಿದ್ದಕ್ಕಾಗಿ ದೇವರಿಗೆ ಸ್ತೋತ್ರ. ಅವಳು ತನ್ನಷ್ಟಕ್ಕೆ ತಾನೇ, "ನಾನು ಕೇವಲ ಒಬ್ಬ ಸಹೋದರಿ ಮಾತ್ರ. ನಾನು ಮಹಾನ್ ಅಪೊಸ್ತಲ ಪೌಲನಿಗೆ ಹೇಗೆ ಬರೆಯಲಿ?" ಎಂದು ಹೇಳಿಕೊಳ್ಳಲಿಲ್ಲ. ಅವಳು ಸಭೆಯನ್ನು ರಕ್ಷಿಸುವ ಹೊರೆಯನ್ನು ಹೊಂದಿದ್ದಕ್ಕಾಗಿ ನಾವು ದೇವರಿಗೆ ಕೃತಜ್ಞರಾಗಿರಬೇಕು. ಸಹೋದರಿ ಖ್ಲೋಯೆನಂತಹ ಸಹೋದರಿಯರಿಗಾಗಿ ದೇವರಿಗೆ ಸ್ತೋತ್ರ.
ನಂತರ ಪವಿತ್ರಾತ್ಮನು ಖ್ಲೋಯೆ ಬರೆದದ್ದನ್ನು ಬೆಂಬಲಿಸಿದನು ಮತ್ತು ಪೌಲನು ಕೊರಿಂಥದ ಸಭೆಗೆ ತನ್ನ ಮೊದಲ ಪತ್ರವನ್ನು ಬರೆಯುವಂತೆ ಪ್ರೇರೇಪಿಸಿದನು. ಅದರಲ್ಲಿ ಖ್ಲೋಯೆ ಅವನಿಗೆ ಉಲ್ಲೇಖಿಸಿದ ಎಲ್ಲಾ ಸಮಸ್ಯೆಗಳನ್ನು ನಿಭಾಯಿಸಿದನು. ಮತ್ತು ನಂತರ ಪೌಲನು ತನ್ನ ಮೊದಲ ಪತ್ರವನ್ನು ಮುಂದುವರಿಸಲು ಎರಡನೇ ಪತ್ರವನ್ನು ಬರೆದನು. ಮತ್ತು ಈ ಎರಡು ಪತ್ರಗಳು ಇಂದು ಪ್ರೇರಿತ ಸತ್ಯವೇದದ ಭಾಗಗಳಾಗಿವೆ.
ಎರಡನೇ ಪತ್ರದಲ್ಲಿ, ನಮಗೆ ಕರ್ತನಿಂದ ಈ ಅದ್ಭುತವಾದ ವಾಗ್ದಾನವಿದೆ: “ನನ್ನ ಕೃಪೆಯು ನಿನಗೆ ಸಾಕು, ನಿನ್ನ ಬಲಹೀನತೆಯಲ್ಲಿ ನನ್ನ ಬಲವು ಪರಿಪೂರ್ಣವಾಗುತ್ತದೆ” (2 ಕೊರಿಂಥ. 12:9). ಸತ್ಯವೇದದಲ್ಲಿ ಕಂಡುಬರುವ ಆ ವಾಗ್ದಾನಕ್ಕಾಗಿ ನಾವು ಸಹೋದರಿ ಖ್ಲೋಯೆಗೆ ಧನ್ಯವಾದ ಹೇಳಬೇಕು. ಏಕೆಂದರೆ ಅವಳು ಪೌಲನಿಗೆ ಬರೆಯದಿದ್ದರೆ ಕೊರಿಂಥದವರಿಗೆ ಮೊದಲ ಅಥವಾ ಎರಡನೇ ಪತ್ರ ಇರುತ್ತಿರಲಿಲ್ಲ. ಹಾಗಾಗಿ ನಾನು ಪರಲೋಕಕ್ಕೆ ಹೋದಾಗ, ನಾನು ಸಹೋದರಿ ಖ್ಲೋಯೆ ಅವರ ಬಳಿಗೆ ಹೋಗಿ ಅವರು ಮಾಡಿದ್ದಕ್ಕಾಗಿ ಧನ್ಯವಾದ ಹೇಳುತ್ತೇನೆ.
ಸಭೆಯಲ್ಲಿನ ಸಂಗೀತ ಸೇವೆಯ ಬಗ್ಗೆಯೂ ನಾನು ಒಂದು ಮಾತು ಹೇಳಲು ಬಯಸುತ್ತೇನೆ. ಪ್ರತಿಭಾನ್ವಿತ ಗಾಯಕರು ತಮ್ಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಸಭೆ ಒಂದು ಸ್ಥಳವಲ್ಲ. ಸಂಗೀತದ ವರವನ್ನು ಹೊಂದಿರುವವರಿಗೆ ಮತ್ತು ದೇವರ ವಾಕ್ಯವನ್ನು ಬೋಧಿಸುವ ಸಾಮರ್ಥ್ಯವನ್ನು ಹೊಂದಿರುವವರಿಗೆ ನಾವು ದೇವರಿಗೆ ಸ್ತೋತ್ರ ಹೇಳುತ್ತೇವೆ. ಆದರೆ ಅವರೆಲ್ಲರೂ ಕ್ರಿಸ್ತನ ಜೀವನವನ್ನು ಹೊಂದಿರುವ ಮತ್ತು ದೇವರನ್ನು ಮಾತ್ರ ಮಹಿಮೆಪಡಿಸಲು ಬಯಸುವ ವಿನಮ್ರ ಜನರಾಗಿರಬೇಕು, ಮತ್ತು ಅವರು ತಮ್ಮ ಸ್ವಂತ ಸಾಮರ್ಥ್ಯಗಳನ್ನು ಪ್ರದರ್ಶಿಸಬಾರದು. ಸಭೆಯು ಕ್ರಿಸ್ತನನ್ನು ಮಾತ್ರ ಮಹಿಮೆಪಡಿಸಬೇಕಾದ ಸ್ಥಳವಾಗಿದೆ.
ಪೌಲನು ತಿಮೊಥೆಯನಿಗೆ ತನ್ನನ್ನು ತಾನು ಶುದ್ಧವಾಗಿಟ್ಟುಕೊಳ್ಳುವಂತೆ ಹೇಳಿದನು. ಯಾವುದೇ ಸೇವೆಯಲ್ಲಿ ಸ್ವಯಂ-ಮಹಿಮೆಯ ಛಾಯೆಯಿದ್ದರೂ, ಅದನ್ನು ರದ್ದುಗೊಳಿಸಬೇಕು. ಆ ರೀತಿಯಲ್ಲಿ ನಾವು ಸಭೆಯನ್ನು ಶುದ್ಧತೆಯಲ್ಲಿ ಕಾಪಾಡಿಕೊಳ್ಳಬಹುದು. ಕರ್ತನು ನಮ್ಮ ಸಭೆಗಳಿಗೆ ಶುದ್ಧತೆಯನ್ನು ತರಲಿ. ಮತ್ತು ಆತನು ನಮ್ಮೆಲ್ಲರನ್ನೂ ಆತನಿಗೆ ಶುದ್ಧ ಅರ್ಪಣೆಯಾಗುವಂತೆ ನಮ್ಮೆಲ್ಲರನ್ನು ಶಿಸ್ತುಗೊಳಿಸಲಿ.
ಕ್ರಿಸ್ತನು ಬೇಗ ಬರುತ್ತಾನೆಂದು ನಾವೆಲ್ಲರೂ ಹೇಳುತ್ತೇವೆ. ಹಾಗಿದ್ದಲ್ಲಿ, ನಮ್ಮ ಮನೋಭಾವ ಹೇಗಿರಬೇಕು? 1 ಯೋಹಾನ ಅಧ್ಯಾಯ 3 ನಮಗೆ ಹೇಳುತ್ತದೆ. 2ನೇ ವಚನದಲ್ಲಿ, ಕ್ರಿಸ್ತನು ಕಾಣಿಸಿಕೊಂಡಾಗ, ನಾವು ಆತನಂತೆ ಆಗುತ್ತೇವೆ, ಏಕೆಂದರೆ ನಾವು ಆತನನ್ನು ಆತನು ಇರುವಂತೆಯೇ ನೋಡುತ್ತೇವೆ ಎಂದು ಹೇಳುತ್ತದೆ. ನಾವು ಅದನ್ನು ನಂಬಿದರೆ, ನಾವು ಏನು ಮಾಡಬೇಕು? ಮುಂದಿನ ವಚನ (1 ಯೋಹಾನ 3:3) ನಮಗೆ ಹೇಳುತ್ತದೆ. ತಮ್ಮೊಳಗೆ ಈ ಭರವಸೆಯನ್ನು (ಅವರು ಕ್ರಿಸ್ತನಂತೆ ಇರುತ್ತಾರೆ) ಹೊಂದಿರುವ ಎಲ್ಲರೂ ಆತನ ಶುದ್ಧತೆಯ ಮಟ್ಟವನ್ನು ತಲುಪುವವರೆಗೆ ತಮ್ಮನ್ನು ಶುದ್ಧೀಕರಿಸಿಕೊಳ್ಳುತ್ತಾರೆ.
ಅದು ಭೂಮಿಯ ಮೇಲಿನ ನಮ್ಮ ಉಳಿದ ಜೀವನಕ್ಕಾಗಿ ನಮ್ಮ ಮನೆಕೆಲಸವಾಗಿದೆ. ನಾವು ಯೇಸುವಿನ ಶುದ್ಧತೆಯ ಮಟ್ಟವನ್ನು ತಲುಪುವವರೆಗೆ ನಮ್ಮನ್ನು ಶುದ್ಧೀಕರಿಸಿಕೊಳ್ಳುವುದು. ಯೇಸು ನಿಮ್ಮನ್ನು ಬೆಂಬಲಿಸಲು ಸಾಧ್ಯವಾಗದ ಯಾವುದನ್ನೂ ನಿಮ್ಮ ಜೀವನದಲ್ಲಿ ಎಂದಿಗೂ ಮಾಡಬೇಡಿ. ನೀವು ಒಂದು ಕಷ್ಟಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡರೆ, ಅದನ್ನು ಮಾಡುವುದರಲ್ಲಿ ಯೇಸು ನಿಮ್ಮನ್ನು ಬೆಂಬಲಿಸುತ್ತಾನೆಯೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಮತ್ತು ನಿಮಗೆ ಅದು ಖಚಿತವಿಲ್ಲದಿದ್ದರೆ, ಅದನ್ನು ಮಾಡಬೇಡಿ. ಆಗ, ನೀವು ಎಂದಿಗೂ ತಪ್ಪು ಮಾಡುವುದಿಲ್ಲ.
ಅಂತಹ ಜೀವನವನ್ನು ನಡೆಸಲು, ನಮಗೆ ಪ್ರತಿದಿನ ಪವಿತ್ರಾತ್ಮನ ಶಕ್ತಿ ಬೇಕು. ಆದ್ದರಿಂದ ಪ್ರತಿದಿನ ಪವಿತ್ರಾತ್ಮನಿಂದ ತುಂಬಿಸಲ್ಪಡಲು ಪ್ರಾರ್ಥಿಸಿರಿ. ಪವಿತ್ರಾತ್ಮನ ದೀಕ್ಷಾಸ್ನಾನಕ್ಕಾಗಿ ಹಂಬಲಿಸಿರಿ. ನಿಮ್ಮ ನೀರಿನ ದೀಕ್ಷಾಸ್ನಾನದ ಸಮಯದಲ್ಲಿ ನೀವು ನೀರಿನಲ್ಲಿ ಮುಳುಗಿದಂತೆ ನೀವು ಪವಿತ್ರಾತ್ಮನಲ್ಲಿ ಮುಳುಗಬೇಕು. ನಿಮ್ಮ ಜೀವನದ ಪ್ರತಿದಿನ ನೀವು ಪವಿತ್ರಾತ್ಮನಲ್ಲಿ ಮುಳುಗಬೇಕು. ಅದಕ್ಕೆ ಒಂದು ಆರಂಭವಿದೆ, ಆದರೆ ಅದು ನಿರಂತರವಾಗಿರಬೇಕು. ಜೀವಜಲದ ನದಿಗಳು ನಮ್ಮಿಂದ ಯಾವಾಗಲೂ ಹರಿಯಬೇಕು (ಯೋಹಾನ. 7:37). ನಮ್ಮೆಲ್ಲರ ಜೀವನದಲ್ಲಿ ಅದು ನಿಜವಾಗಲಿ ಎಂದು ನಾವು ಪ್ರಾರ್ಥಿಸೋಣ.
ಪವಿತ್ರಾತ್ಮನ ಸೇವೆಯನ್ನು ಎಂದಿಗೂ ಮೌಲ್ಯವಿಲ್ಲದ್ದು ಎಂದು ಪರಿಗಣಿಸುವ ಮೂಲಕ ಆತನನ್ನು ಎಂದಿಗೂ ಅವಮಾನಿಸಬೇಡಿ. ಪವಿತ್ರಾತ್ಮನ ವಿರುದ್ಧ ಮಾತನಾಡುವವರಿಗೆ ಎಂದಿಗೂ ಕ್ಷಮಿಸಲಾಗುವುದಿಲ್ಲ ಎಂದು ಯೇಸು ಹೇಳಿದನು (ಮತ್ತಾಯ 12:31,32). ಪವಿತ್ರಾತ್ಮನ ದೀಕ್ಷಾಸ್ನಾನದ ವಿರುದ್ಧ ಮತ್ತು ನಿರಂತರವಾಗಿ ಆತ್ಮದಿಂದ ತುಂಬಿಸಲ್ಪಡುವ ಸಂಪೂರ್ಣ ಅಗತ್ಯದ ವಿರುದ್ಧ ಮಾತನಾಡುವ ಕ್ರೈಸ್ತರ ಬಗ್ಗೆ ಕೇಳಲು ದುಃಖವಾಗುತ್ತದೆ. ಪವಿತ್ರಾತ್ಮನ ವಿರುದ್ಧ ಎಂದಿಗೂ ಮಾತನಾಡಬೇಡಿ. ಪವಿತ್ರಾತ್ಮನ ವಿರುದ್ಧ ಮಾತನಾಡುವ ಬದಲು ನಿಮ್ಮ ಬಾಯಿ ಮುಚ್ಚಿ "ನನಗೆ ಗೊತ್ತಿಲ್ಲ" ಎಂದು ಹೇಳುವುದು ಉತ್ತಮ.
ನಾವೆಲ್ಲರೂ ದೇವರಿಗೆ ಭಯಪಡೋಣ ಮತ್ತು ಪ್ರತಿದಿನ ಆತನ ಆತ್ಮನ ಶಕ್ತಿಯನ್ನು ಹುಡುಕೋಣ. ಇದರಿಂದ ನಾವು ನಮ್ಮ ಜೀವನದಲ್ಲಿ ದೇವರನ್ನು ಮಹಿಮೆಪಡಿಸಬಹುದು ಮತ್ತು ಈ ಕೊನೆಯ ದಿನಗಳಲ್ಲಿ ಆತನ ಸಭೆಯನ್ನು ನಿರ್ಮಿಸಬಹುದು. ಆಮೆನ್.