ಪವಿತ್ರಾತ್ಮನ ತುಂಬಿಸುವಿಕೆಯನ್ನು ಪಡೆಯಿರಿ

ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
Article Body: 

ನಾನು ಒಮ್ಮೆ ನೋಡಿದ ಒಂದು ವ್ಯಂಗ್ಯಚಿತ್ರದಲ್ಲಿ ಯೇಸುವಿನ ಶಿಷ್ಯರು ಪವಿತ್ರಾತ್ಮನ ತುಂಬಿಸುವಿಕೆಗಾಗಿ ಮೇಲಿನ ಕೊಠಡಿಯಲ್ಲಿ ಕಾಯುತ್ತಿರುತ್ತಾರೆ (ಅ.ಕೃ. 1:12-14).(ಅವರು ಹತ್ತು ದಿನಗಳು ನಿರೀಕ್ಷಿಸಬೇಕಾಯಿತು ಎಂದು ಈಗ ನಮಗೆ ತಿಳಿದಿದೆ, ಆದರೆ ಆಗ ಅವರಲ್ಲಿ ಯಾರಿಗೂ ತಾವು ಎಷ್ಟು ಸಮಯ ಕಾದಿರಬೇಕು ಎಂದು ತಿಳಿದಿರಲಿಲ್ಲ). ಒಂಭತ್ತನೆಯ ದಿನದಲ್ಲಿ ಅವರಲ್ಲಿ ಒಬ್ಬನು ಕಾದು ಸುಸ್ತಾಗಿ, ತಾನು ಮನೆಗೆ ಹೋಗುವೆನೆಂದು ಹೇಳಿ ಅಲ್ಲಿಂದ ಹೊರಟು ಬಿಡುತ್ತಾನೆ. ಇತರರು ಬೇಕಾದರೆ ಕಾಯಲಿ, ಎಂದು ಅವನು ಇತರರಿಗೆ ಹೇಳುತ್ತಾನೆ. ಮರುದಿನ ಮೇಲಿನ ಕೊಠಡಿಯಲ್ಲಿ ಉಳಿದಿದ್ದ ಎಲ್ಲರೂ ಮೇಲಿನಿಂದ ಪವಿತ್ರಾತ್ಮ ಮತ್ತು ಬೆಂಕಿಯ ದೀಕ್ಷಾಸ್ನಾನಕ್ಕೆ ಪಾತ್ರರಾಗಿ, ಬಲವನ್ನು ಪಡೆದದ್ದರ ಬಗ್ಗೆ ಕೇಳಿ ಆತನು ಎಷ್ಟು ನಿರಾಶೆ ಗೊಂಡಿರಬಹುದು ಎಂದು ಯೋಚಿಸಿರಿ. ಆತನಿಗೆ ಉತ್ತರ ದೊರಕುವ ಕ್ಷಣ ಕೈಗೆ ಎಟಕುವಷ್ಟು ಹತ್ತಿರ ಬಂದಿತ್ತು. ಆತನು ಇನ್ನೂ ಒಂದೇ ಒಂದು ದಿನ ಕಾದಿದ್ದರೆ ....

ಯೇಸುವು ಬಾಯಾರಿದವರನ್ನು ಮಾತ್ರ ತನ್ನ ಬಳಿಗೆ ಕರೆದನು (ಯೋಹಾನ 7:37-39). ದೇವರನ್ನು ಕಂಡುಕೊಳ್ಳುವದು ಆತನನ್ನು ಮನಃಪೂರ್ವಕವಾಗಿ ಹುಡುಕುವವರು ಮಾತ್ರ (ಯೆರೆಮೀಯ 29:13) .ದೇವರು ಪ್ರತಿಫಲವನ್ನು ಕೊಡುವದು ಶ್ರದ್ಧೆಯಿಂದ ಆತನನ್ನು ಹುಡುಕುವವರಿಗೆ ಮಾತ್ರ (ಇಬ್ರಿಯ. 11:6 - KJV). ಹೀಗೇಕೆ? ಏಕೆಂದರೆ, ನಾವು ದೇವರನ್ನು ಮನಃಪೂರ್ವಕವಾಗಿ ಹುಡುಕುವ ಮೂಲಕವೇ ನಮಗೆ ದೇವರೊಂದಿಗಿನ ಸಂಬಂಧವು ಈ ಜಗತ್ತಿನಲ್ಲಿ ಅತೀ ಮುಖ್ಯವಾದದ್ದು ಎಂಬುದನ್ನು ಸಾಬೀತು ಪಡಿಸುತ್ತೇವೆ!

ಪವಿತ್ರಾತ್ಮನ ತುಂಬಿಸುವಿಕೆಯ ಹೊರತಾಗಿ, ನಾವು ನಮ್ಮ ಕ್ರೈಸ್ತ ಜೀವನವನ್ನು ಸರಿಯಾದ ರೀತಿಯಲ್ಲಿ ಜೀವಿಸುವದು ಅಸಾಧ್ಯವಾದ ಮಾತು.

ಪವಿತ್ರಾತ್ಮನ ತುಂಬಿಸುವಿಕೆ ಇಲ್ಲದೆ, ನಾವು ಕರ್ತನ ಸೇವೆಯನ್ನು ಸರಿಯಾದ ರೀತಿಯಲ್ಲಿ ಮಾಡಲು ಸಾಧ್ಯವೇ ಇಲ್ಲ.

ಸ್ವತಃ ಯೇಸುವೂ ಸಹ ತನ್ನ ಸೇವೆಗೆ ಕೈ ಹಾಕುವ ಮೊದಲು ಪವಿತ್ರಾತ್ಮನಿಂದ ಅಭಿಷೇಕಿಸಲ್ಪಡುವದು ಅವಶ್ಯವಾಗಿತ್ತು (ಲೂಕ 3:21-23).

ಕರ್ತನು ತನ್ನ ಶಿಷ್ಯರಿಗೆ, "ದೇವರು ಮೇಲಣ ಲೋಕದಿಂದ ನಿಮಗೆ ಶಕ್ತಿಯನ್ನು ಹೊದಿಸುವ ತನಕ" ಕಾದುಕೊಂಡಿರಲು ತಿಳಿಸಿದನು (ಲೂಕ 24:49) .ಸುವಾರ್ತೆಯ ಕೊರತೆಯಿಂದ ಲೋಕವು ಸಾವಿನ ಮಾರ್ಗದಲ್ಲಿ ಸಾಗುತ್ತಿದ್ದಾಗ್ಯೂ, ಆ ಅಪೊಸ್ತಲರು ಪವಿತ್ರಾತ್ಮನ ದೀಕ್ಷಾಸ್ನಾನ ಪಡೆಯುವ ವರೆಗೆ ಅವಶ್ಯವಾಗಿ ಕಾದಿದ್ದು, ಅದರ ನಂತರವೇ ಕರ್ತನ ಸೇವೆಗಾಗಿ ಹೊರಕ್ಕೆ ಹೊರಡ ಬಹುದಾಗಿತ್ತು (ಅ. ಕೃ. 1:8).

ನಮ್ಮ ಪರಿಸ್ಥಿತಿ ಏನು??

ನಮಗೂ ಸಹ ಇದರ ಅವಶ್ಯಕತೆ ಇದೆ ಎನ್ನುವದನ್ನು ನಾವು ಅಲ್ಲಗಳೆಯುವದು ಎಂತಹ ಮೂರ್ಖತನ!!

ದೇವರ ಕಡೆಗೆ ತಿರುಗಿಕೊಂಡು ನಂಬಿಕೆಯಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ಪ್ರತಿಯೊಬ್ಬನಿಗೂ ದೇವರು ಎರಡು ಕೊಡುಗೆಗಳನ್ನು ಕೊಡುತ್ತಿದ್ದಾನೆ ಎಂದು ಪೇತ್ರನು ಪಂಚಾಶತ್ತಮ ದಿನದಂದು ಜನರಿಗೆ ತಿಳಿಸಿದನು - ಅವು, ಪಾಪಗಳ ಕ್ಷಮಾಪಣೆ ಮತ್ತು ಪವಿತ್ರಾತ್ಮ (ಅ. ಕೃ. 2:38ನ್ನು ಓದಿರಿ).

ಪಾಪಗಳ ಕ್ಷಮಾಪಣೆ ನಮ್ಮನ್ನು ಪರಲೋಕಕ್ಕೆ ಅರ್ಹರನ್ನಾಗಿ ಮಾಡುತ್ತದೆ.

ಪವಿತ್ರಾತ್ಮನ ದೀಕ್ಷಾಸ್ನಾನವು ನಮ್ಮನ್ನು ಈ ಲೋಕದ ಜೀವನಕ್ಕೆ ತಯಾರು ಮಾಡುತ್ತದೆ.

ಮರಣದ ನಂತರ ಪರಲೋಕಕ್ಕೆ ಹೋಗುವದು ಮಾತ್ರ ನಿಮಗೆ ಬೇಕಾಗಿದ್ದರೆ, ನಿಮಗೆ ಪವಿತ್ರಾತ್ಮನ ದೀಕ್ಷಾಸ್ನಾನದ ಅವಶ್ಯಕತೆ ಇಲ್ಲ. ನೀವು ನಿಮ್ಮ ಪಾಪಗಳ ಕ್ಷಮಾಪಣೆಯನ್ನು ಮಾತ್ರವೇ ಪಡೆದಿರಬೇಕು. ಆದರೆ ನೀವು ನಿಮಗಾಗಿ ಮರಣ ಹೊಂದಿದ ಕರ್ತನ ಸೇವೆಯನ್ನು ಮಾಡುವ ಮೂಲಕ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸಿ, ಈ ಲೋಕದಲ್ಲಿ ಉಪಯುಕ್ತರಾಗಿ ಜೀವಿಸಬೇಕಾದರೆ, ನೀವು ಅವಶ್ಯವಾಗಿ ಪವಿತ್ರಾತ್ಮನಿಂದ ತುಂಬಿಸಲ್ಪಡಬೇಕು.

ಅನೇಕ ವಿಶ್ವಾಸಿಗಳು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಪಡೆಯದೇ ಇರುವದು ಮುಖ್ಯವಾಗಿ ಐದು ಕಾರಣಗಳಿಂದಾಗಿ:

  • (1) ಅವರು ಧರ್ಮಶಾಸ್ತ್ರದ ವಿಷಯದಲ್ಲಿ ಯಾವುದೋ ವಾದವನ್ನು ಕೇಳಿ, ತಾವು ಹೊಸದಾಗಿ ಹುಟ್ಟಿದಾಗ ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಪಡೆದೆವು ಎಂದು ಬೌದ್ಧಿಕವಾಗಿ ತೃಪ್ತಿಗೊಂಡಿದ್ದಾರೆ. ಅವರ ಜೀವನದಲ್ಲಿ ಸೋಲು, ಬಲಹೀನತೆ, ಶೂನ್ಯತೆ ಮತ್ತು ನಿಷ್ಫಲತೆಗಳು ಇದ್ದರೂ, ಅವರು ಈ ಕಪಟ ಆತ್ಮಿಕ ಬೋಧನೆಯನ್ನು ನಂಬುವದನ್ನು ಇನ್ನೂ ಬಿಟ್ಟಿಲ್ಲ.
  • (2) ಅವರಲ್ಲಿರುವ ಭಾವನೆ, ಪವಿತ್ರಾತ್ಮನ ದೀಕ್ಷಾಸ್ನಾನಕ್ಕೆ ಇರಬೇಕಾದ ಅರ್ಹತೆ ತಮ್ಮಲ್ಲಿ ಇಲ್ಲ ಎಂದು. ನಿಜಾಂಶ ಏನೆಂದರೆ, ನೀವು ನಿಮ್ಮನ್ನು ಬಹಳ ಅಯೋಗ್ಯರೆಂದು ಭಾವಿಸುವಿರಾದರೆ ಮತ್ತು ನಿಮ್ಮನ್ನು ಹೆಚ್ಚಿನ ಪಾಪಿಗಳೆಂದು ಪರಿಗಣಿಸುವಿರಾದರೆ, ಪವಿತ್ರಾತ್ಮನನ್ನು ಪಡೆಯಲು ನೀವು ಸಂಪೂರ್ಣ ಅರ್ಹತೆಯನ್ನು ಹೊಂದಿದ್ದೀರಿ - ಏಕೆಂದರೆ ದೇವರ ವರಗಳು ಕೊಡಲ್ಪಡುವದು ಅವುಗಳಿಗೆ ಸ್ವಲ್ಪವೂ ಯೋಗ್ಯನಲ್ಲವೆಂದು ತಿಳಿಯುವವರಿಗೆ ಮಾತ್ರ. ನೀವು ನಿಮ್ಮ ಪಾಪಗಳಿಂದ ತಿರುಗಿಕೊಂಡಿದ್ದರೆ, ನೀವು ಎಷ್ಟು ಅನರ್ಹರು ಅಥವಾ ಅಯೋಗ್ಯರು ಅಥವಾ ಎಷ್ಟು ಉಪಯೋಗಕ್ಕೆ ಬಾರದವರು ಎನ್ನುವ ಪ್ರಶ್ನೆ ಬರುವದೇ ಇಲ್ಲ. ಹಲ್ಲೆಲೂಯ!
  • (3) ಅವರಲ್ಲಿ ದೇವರು ಒಳ್ಳೆಯ ದೇವರು - ಆತನು ವರಗಳನ್ನು ಕೇಳುವವರಿಗೆ ಉದಾರ ಮನಸ್ಸಿನಿಂದ ನೀಡುತ್ತಾನೆ - ಎಂಬ ನಂಬಿಕೆ ಇರುವದಿಲ್ಲ. ಅವರ ಭಾವನೆ ಏನೆಂದರೆ, ಅದಕ್ಕಾಗಿ ಬೆಲೆ ತೆರಬೇಕಾಗುತ್ತದೆ ಎಂಬುದಾಗಿದೆ - ಉಪವಾಸ ಮತ್ತು ಪಾರ್ಥನೆ, ಇತ್ಯಾದಿ ಒಳ್ಳೆಯ ಕಾರ್ಯಗಳನ್ನು ಮಾಡಿ ಅದನ್ನು ಪಡೆಯಬಹುದು, ಎಂದು. ಆದರೆ ದೇವರ ಪ್ರತಿಯೊಂದು ವರವೂ - ಪಾಪಗಳ ಕ್ಷಮಾಪಣೆಯೇ ಆಗಲೀ ಅಥವಾ ಆತ್ಮನ ದೀಕ್ಷಾಸ್ನಾನವೇ ಆಗಲೀ - ಕೃಪಾವರಗಳಾಗಿವೆ. ದೇವರ ಒಂದು ವರವನ್ನಾದರೂ ಬೆಲೆತೆತ್ತು ಕೊಳ್ಳಲು ಆಗದು. ಅನೇಕ ವಿಶ್ವಾಸಿಗಳು, ನಂಬಿಕೆಯನ್ನು ಹೊಂದಿಕೊಳ್ಳುವದು ಸಹ ಒಂದು ಕಠಿಣವಾದ ಕಾರ್ಯವೆಂದು ಭಾವಿಸುತ್ತಾರೆ. ಆದರೆ ಯೇಸುವು ನಂಬಿಕೆಯನ್ನು ನೀರು ಕುಡಿಯುವದಕ್ಕೆ ಹೋಲಿಸಿದನು (ಯೋಹಾನ 7: 37,39 ರಲ್ಲಿ ನೋಡಿ "...ನಂಬಿದವರು ...ಕುಡಿಯಲಿ".) ಪವಿತ್ರಾತ್ಮನನ್ನು ಹೊಂದುವದು ನೀರು ಕುಡಿಯುವಷ್ಟು ಸುಲಭವಾದದ್ದು. ಎಳೆಯ ಮಕ್ಕಳಿಗೂ ಸಹ ಕುಡಿಯುವದು ಹೇಗೆಂದು ತಿಳಿದಿದೆ - ಮತ್ತು ಹೊಸದಾಗಿ ಮರುಜನ್ಮ ಪಡೆದವರು ಪವಿತ್ರಾತ್ಮನ ದೀಕ್ಷಾಸ್ನಾನವನ್ನು ಪಡೆಯಲು ಸಾಧ್ಯವಿದೆ. ಆದಿ ಸಭೆಯ ದಿನಗಳಲ್ಲಿ ಅದು ಆ ರೀತಿಯಾಗಿ ಆಗುತ್ತಿತ್ತು - ನಾವು ಇದನ್ನು "ಅಪೊಸ್ತಲರ ಕೃತ್ಯಗಳಲ್ಲಿ" ಓದುತ್ತೇವೆ.
  • (4) ಅವರಲ್ಲಿ ಬಾಯಾರಿಕೆ (ಹಂಬಲ) ಇಲ್ಲ. ಅವರಲ್ಲಿ ಸಾಕಷ್ಟು ಉತ್ಕಟವಾದ ಬಯಕೆ ಇಲ್ಲ. ಯೇಸುವು ಹೇಳಿದ ಒಂದು ಸಾಮ್ಯದಲ್ಲಿ, ಒಬ್ಬ ಮನುಷ್ಯನು ತನ್ನ ನೆರೆಯವನ ಮನೆಯ ಕದವನ್ನು ತಟ್ಟುವಾಗ, ತನಗೆ ಬೇಕಾದುದನ್ನು ಪಡೆಯುವ ವರೆಗೆ ನಿಲ್ಲಿಸುವದಿಲ್ಲ. ಯೇಸುವು ಮುಂದುವರಿಸಿ, ಪರಲೋಕದಲ್ಲಿ ಇರುವ ನಮ್ಮ ತಂದೆಯೂ ಸಹ ಆ ಮನುಷ್ಯನಂತೆ ಬೇಡಿಕೊಳ್ಳುವವನಿಗೆ, ಹುಡುಕುವವನಿಗೆ ಮತ್ತು ತಟ್ಟುವವನಿಗೆ ಪವಿತ್ರಾತ್ಮನನ್ನು ಕೊಡುವನು ಎಂದು ಹೇಳುತ್ತಾನೆ (ಲೂಕ 11:13ನೇ ವಚನವನ್ನು 5ನೇ ವಚನದಿಂದ ವಿವರಿಸಲಾದ ಸನ್ನಿವೇಷಕ್ಕೆ ಹೊಂದಿಸಿ ಓದಿರಿ).
  • (5) ಅವರು ಬೇರೆಯವರ ಸಾಕ್ಷಿಯನ್ನು ಕೇಳಿ, ಅದಕ್ಕೆ ಹೋಲುವ ಯಾವುದೋ ಅನುಭವಕ್ಕಾಗಿ ಕಾದಿರುತ್ತಾರೆ (ಅನ್ಯಭಾಷೆಗಳು ಅಥವಾ ರೋಮಾಂಚಕ ಅನುಭವಗಳು ಇತ್ಯಾದಿ). ಅವರಿಗೆ ಯಾವ ವರ ಅಥವಾ ಪ್ರಕಟಣೆ ಸೂಕ್ತವಾದದ್ದು ಎಂಬುದನ್ನು ದೇವರು ನಿಶ್ಚಯಿಸುವದು ಅವರಿಗೆ ಇಷ್ಟವಿಲ್ಲ. ಪವಿತ್ರಾತ್ಮನನ್ನು ಸರಳ ನಂಬಿಕೆಯ ಮೂಲಕ ಹೊಂದಲಾಗುತ್ತದೆ. ನೀವು ಕೇಳಿರಿ ಮತ್ತು ಪಡೆಯಿರಿ (ಗಲಾತ್ಯ. 3:2; ಲೂಕ 11:9-13) .
  • ಭಾವನೆಗಳಿಗಾಗಿ ಕಾಯಬೇಡಿರಿ. ಆದರೆ ನಿಮಗೆ ಒಂದು ಭರವಸೆಯನ್ನು ಕೊಡುವಂತೆ ದೇವರನ್ನು ಪ್ರಾರ್ಥಿಸಿರಿ. ಆ ಭರವಸೆಯನ್ನು ಹೇಗೆ ಕೊಡಬೇಕು ಎನ್ನುವದನ್ನು ಅವರು ನಿಶ್ಚಯಿಸಲಿ! ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಮತ್ತು ನೀನು ಅವರ ಮಗು ಎನ್ನುವ ಭರವಸೆಯನ್ನು ಅವರು ಕೊಟ್ಟಿದ್ದಾರೆ ಅಲ್ಲವೇ? ಅದೇ ರೀತಿಯಾಗಿ, ದೇವರು ನಿನ್ನನ್ನು ಪವಿತ್ರಾತ್ಮನಿಂದ ತುಂಬಿಸಿರುವ ಆಶ್ವಾಸನೆಯನ್ನು ಅವರು ಕೊಡಬಲ್ಲರು. ನಿಮಗೆ ಬೇಕಾಗಿರುವದು ಒಂದು ಅನುಭವವಲ್ಲ, ಆದರೆ ಬಲ (ಅ.ಕೃ. 1:8).

    ಹಾಗಾದರೆ : ಬಾಯಾರಿರಿ - ನಂಬಿರಿ - ಮತ್ತು ಪಡೆಯಿರಿ. ಈಗಲೇ ಆ ಸುಪ್ರಸನ್ನತೆಯ ಕಾಲ. ಇಂದೇ ಆ ರಕ್ಷಣೆಯ ದಿನ.

    "ಕರ್ತನ ಆತ್ಮವು ನಿನ್ನ ಮೇಲೆ ಬರುವದು, ಅದರಿಂದ ನೀನು ಬೇರೊಬ್ಬ ಮನುಷ್ಯನಾಗಿ ಮಾರ್ಪಡುವೆ" (1 ಸಮುವೇಲ 10:6)