"ನಿರ್ಮಲ ಚಿತ್ತರು (ಶುದ್ಧ ಹೃದಯ ಉಳ್ಳವರು) ಧನ್ಯರು; ಅವರು ದೇವರನ್ನು ನೋಡುವರು"(ಮತ್ತಾ. 5:8). ನಮ್ಮ ಹೃದಯದಲ್ಲಿ ಪರಿಶುದ್ಧತೆಯ ಕೊರತೆ ಇದ್ದಾಗ, ಅದು ನಮ್ಮನ್ನು ಕುರುಡರನ್ನಾಗಿ ಮಾಡುತ್ತದೆ. ಪರಿಶುದ್ಧ ಹೃದಯ ಹೊಂದಿರುವವರಿಗೆ ದೇವರು ಹಲವಾರು ಸಂಗತಿಗಳನ್ನು ಪ್ರಕಟಪಡಿಸುತ್ತಾರೆ. ಯೇಸುವು "ಲೂಕ. 11:34"ರಲ್ಲಿ, ಕಣ್ಣು ದೇಹಕ್ಕೆ ದೀಪವಾಗಿದೆ, ಎಂದು ಹೇಳಿದರು. ಈ ವಚನವನ್ನು ನಾನು "ಮತ್ತಾ. 5:8"ರ ವಚನದೊಂದಿಗೆ ಹೊಂದಿಸಿ ನೋಡಲು ಬಯಸುತ್ತೇನೆ ("ನಿರ್ಮಲ ಚಿತ್ತರು ಧನ್ಯರು; ಅವರು ದೇವರನ್ನು ನೋಡುವರು").
"ನಿನ್ನ ಕಣ್ಣು ಆರೋಗ್ಯವಾಗಿರುವಾಗ, ನಿನ್ನ ದೇಹವೆಲ್ಲಾ ಬೆಳಕಾಗುವದು"(ಲೂಕ. 11:34). ನೀವು ಕುರುಡುತನದ ಅರ್ಥ ತಿಳಿಯಬೇಕಿದ್ದಲ್ಲಿ, ನಿಮ್ಮ ಕಣ್ಣುಗಳನ್ನು ಸುಮ್ಮನೆ ಮುಚ್ಚಿಕೊಳ್ಳಿರಿ, ಆಗ ಕುರುಡುತನ ಅಂದರೆ ಏನು ಎಂದು ನಿಮಗೆ ತಿಳಿದು ಬರುತ್ತದೆ. ಆಗ ಹೊರಗಿನ ಬೆಳಕು ಒಳಕ್ಕೆ ಬರುವುದಿಲ್ಲ ಮತ್ತು ನೀವು ಏನನ್ನು ನೋಡಲು ಆಗುವುದಿಲ್ಲ. "ನಿನ್ನ ಕಣ್ಣು ದೇಹಕ್ಕೆ ದೀಪವಾಗಿದೆ; ಆದರೆ ನಿನ್ನ ಕಣ್ಣು ಕುರುಡಾಗಿದ್ದರೆ, ಅಥವಾ ಕಣ್ಣಿಗೆ ಪೊರೆ ಬಂದಿದ್ದರೆ, ಅದರಿಂದಾಗಿ ನಿನ್ನ ದೇಹವೆಲ್ಲಾ ಕತ್ತಲಾಗುವುದು. ಆದ್ದರಿಂದ ನಿನ್ನೊಳಗಿರುವ ಬೆಳಕು ಕತ್ತಲಾಗದಂತೆ ನೋಡಿಕೋ. ನಿನ್ನ ದೇಹವೆಲ್ಲಾ ಬೆಳಕಾಗಿದ್ದು ಯಾವ ಭಾಗದಲ್ಲೂ ಕತ್ತಲೆ ಇಲ್ಲವಾದರೆ, ದೀಪವು ಹೊಳೆದು ನಿನ್ನ ದೇಹವೆಲ್ಲಾ ಸಂಪೂರ್ಣವಾಗಿ ಬೆಳಕಾಗುವದು"(ಲೂಕ. 11:34-36).
"ನಾವು ದೇವರ ವಾಕ್ಯವನ್ನು ಹೆಚ್ಚು ಹೆಚ್ಚಾಗಿ ಅರಿತುಕೊಂಡಾಗ, ಸತ್ಯವೇದದಲ್ಲಿ ಯೇಸುವನ್ನು ಹೆಚ್ಚು ಸ್ಪಷ್ಟವಾಗಿ ಕಾಣುತ್ತೇವೆ. ಅನೇಕ ಜನರು ದೇವರ ವಾಕ್ಯವನ್ನು ಅಧ್ಯಯನ ಮಾಡಿದರೂ, ಅದರಲ್ಲಿ ಯೇಸುವನ್ನು ಕಂಡುಕೊಳ್ಳುವುದಿಲ್ಲ. ಅವರು ಒಂದು ಸಿದ್ಧಾಂತವನ್ನು ಪಡೆಯುತ್ತಾರೆ ಮತ್ತು ಆ ಸಿದ್ಧಾಂತಕ್ಕಾಗಿ ಹೋರಾಡುತ್ತಾರೆ."
ಮೇಲೆ ಉಲ್ಲೇಖಿಸಿರುವ ವಚನವು ಮನಸ್ಸಾಕ್ಷಿಯ ಕುರಿತಾಗಿದೆ. ಮನಸ್ಸಾಕ್ಷಿಯು ಹೃದಯದ ಕಣ್ಣಾಗಿದೆ. ನೀವು ನಿಮ್ಮ ಮನಸ್ಸಾಕ್ಷಿಯನ್ನು ಶುದ್ಧವಾಗಿರಿಸಿಕೊಂಡರೆ, ನಿಮ್ಮ ಹೃದಯವು ಬೆಳಕಿನಿಂದ ತುಂಬಿರುತ್ತದೆ ಮತ್ತು ನೀವು ದೇವರನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ನೀನು ನಿನ್ನ ಮನಸ್ಸಾಕ್ಷಿಯನ್ನು ಶುದ್ಧವಾಗಿ ಇಟ್ಟುಕೊಳ್ಳುವುದನ್ನು ನಿರ್ಲಕ್ಷಿಸಿದರೆ, ಅಂದರೆ ನೀನು ಯಾವುದೋ ತಪ್ಪು ಮಾಡಿದಾಗ, ತಪ್ಪನ್ನು ಒಪ್ಪಿಕೊಂಡು ಅರಿಕೆ ಮಾಡದಿದ್ದರೆ - ನೀನು ಇದಕ್ಕಾಗಿ ದೂಷಣೆಯನ್ನು ತೆಗೆದುಕೊಳ್ಳದಿದ್ದರೆ, ಇನ್ನೊಬ್ಬರ ಮೇಲೆ ದೂಷಣೆಯನ್ನು ಹೊರಿಸಲು ಪ್ರಯತ್ನಿಸಿದರೆ - ನಿನ್ನ ಕಣ್ಣು ಕ್ರಮೇಣವಾಗಿ ಮುಸುಕಾಗುತ್ತದೆ ಅಥವಾ ಮಬ್ಬಾಗುತ್ತದೆ ಮತ್ತು ಇದರಿಂದಾಗಿ ನೀನು ದೇವರ ದರ್ಶನವನ್ನು ಕಳೆದುಕೊಳ್ಳುವೆ. ಹಾಗಿದ್ದರೂ ನಿನ್ನ ತಲೆಯಲ್ಲಿ ಸತ್ಯವೇದ ಜ್ಞಾನವು ತುಂಬಿರಬಹುದು, ಆದರೆ ನೀನು ಇನ್ನು ಮುಂದೆ ದೇವರನ್ನು ನೋಡಲಾರೆ, ಏಕೆಂದರೆ ಅದು ಹೃದಯದ ಪರಿಶುದ್ಧತೆಗೆ ಸಂಬಂಧಿಸಿದೆ; ಅದಕ್ಕೂ ಸತ್ಯವೇದದ ತಲೆಯ ಜ್ಞಾನಕ್ಕೂ ಯಾವುದೇ ಸಂಬಂಧವಿಲ್ಲ.
ಮೇಲೆ ಉಲ್ಲೇಖಿಸಿರುವ ವಚನವನ್ನು ಇನ್ನೊಂದು ರೀತಿಯಲ್ಲಿ ನೋಡಬಹುದು. ನಮ್ಮ ಹೃದಯವು ಶುದ್ಧವಾಗಿದ್ದಾಗ, ನಾವು ಎದುರಿಸುವ ಪ್ರತಿಯೊಂದು ಸಂದರ್ಭದಲ್ಲೂ ನಾವು ದೇವರನ್ನು ಕಾಣುತ್ತೇವೆಂದು ಹೇಳಬಹುದು. ನನ್ನ ಹೃದಯವು ಶುದ್ಧವಾಗಿದ್ದಾಗ, ನಾನು ಸುತ್ತಲೂ ದೃಷ್ಟಿಸಿ ನೋಡಿ, ನನ್ನ ಎಲ್ಲಾ ಪರಿಸ್ಥಿತಿಗಳಲ್ಲಿ ದೇವರು ಇರುವುದನ್ನು ಕಾಣುತ್ತೇನೆ, ಆತನು ಮಾಡುವಂತ ಪ್ರತಿಯೊಂದರಲ್ಲಿ ಮತ್ತು ಆತನು ಹೇಳುವಂತ ಪ್ರತಿಯೊಂದರಲ್ಲಿ ಆತನನ್ನು ಕಾಣುತ್ತೇನೆ. ದೇವರು ನಿಯಂತ್ರಣದಲ್ಲಿದ್ದಾನೆ ಎಂದು ನಾನು ಹೇಳಬಹುದು, ಮತ್ತು ಇತರರು ನನಗೆ ಮಾಡುವ ಕೇಡನ್ನು ಸಹ ದೇವರು ನನ್ನ ಒಳಿತಿಗಾಗಿಯೇ ಬಳಸುವುದನ್ನು ನಾನು ನೋಡಬಹುದು. ಯೇಸುವಿನ ಜೀವನದ ಅತ್ಯಂತ ಕೆಟ್ಟ ಅನುಭವದಲ್ಲೂ ಆತನು ದೇವರನ್ನು ಕಂಡನು. ಗೆತ್ಸೇಮನೇ ತೋಟದಲ್ಲಿ ರೋಮ್ ಸೈನಿಕರು ಆತನನ್ನು ಬಂಧಿಸಲು ಬಂದಾಗ, ಪೇತ್ರನು ವಂಚಕ ಹಾಗೂ ದ್ರೋಹಿ ಯೂದನು ಯೇಸು ಕ್ರಿಸ್ತನಿಗೆ ಬಗೆದ ದ್ರೋಹವನ್ನು, ಮತ್ತು ಆ ದುಷ್ಟ ರೋಮ್ ಸೈನಿಕರು ತನ್ನ ಯಜಮಾನನನ್ನು ಸೆರೆ ಹಿಡಿಯುವುದಕ್ಕಾಗಿ ಬರುವುದನ್ನು ಮಾತ್ರ ನೋಡಿದನು. ಆದರೆ ಯೇಸುವು ಇವರನ್ನು ನೋಡಲಿಲ್ಲ. ಆತನು, "ತಂದೆಯು ನನಗೆ ಕೊಟ್ಟಿರುವ ಪಾತ್ರೆಯಲ್ಲಿ ನಾನು ಕುಡಿಯಬಾರದೇ?" ಎಂದು ಕೇಳಿದನು. ಇಸ್ಕರಿಯೋತ ಯೂದನು ಅಥವಾ ಫರಿಸಾಯರು ಮತ್ತು ಮಹಾ ಯಾಜಕನು ಅಂಚೆ ಪೇದೆಗಳು ಆಗಿರಬಹುದು, ಆದರೆ ಅಂತಿಮವಾಗಿ ಆ ಪಾತ್ರೆಯು ತಂದೆಯಿಂದ ಬಂದಿತ್ತು. ನಿನ್ನ ಪ್ರೀತಿಪಾತ್ರರಿಂದ (ತಂದೆಯಿಂದ) ಪತ್ರವು ಬಂದಾಗ, ಅದನ್ನು ತಂದಿರುವ ಅಂಚೆ ಪೇದೆಯು ಕೆಟ್ಟ ವ್ಯಕ್ತಿಯಂತೆ ಕಂಡರೂ ಅದು ದೊಡ್ಡ ವಿಷಯವೇ?
ಯೇಸುವಿನ ಹೃದಯವು ಶುದ್ಧವಾಗಿತ್ತು; ಅದರಿಂದಾಗಿ, ಅವರು ಎಲ್ಲಾದರಲ್ಲೂ ದೇವರನ್ನು ನೋಡಿದರು. ಹೀಗಾಗಿ ಅವರಿಗೆ ತಾನು ಸೆರೆಹಿಡಿಯಲ್ಪಡುವುದನ್ನು, ಅವಮಾನಿಸಲ್ಪಡುವುದನ್ನು ಮತ್ತು ಶಿಲುಬೆಗೆ ಏರಿಸಲ್ಪಡುವುದನ್ನು ಒಪ್ಪಿಕೊಳ್ಳಲು ಸಾಧ್ಯವಾಯಿತು. ಅವರ ಹೃದಯವು ಶುದ್ಧವಾಗಿತ್ತು ಮತ್ತು ಅವರು ಎಲ್ಲದರಲ್ಲೂ ದೇವರನ್ನು ಕಂಡರು. ನಾವು ದೇವರನ್ನು ಪೂರ್ಣ ಹೃದಯದಿಂದ ಪ್ರೀತಿಸಿದಾಗ ಮತ್ತು ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟಾಗ, ಎಲ್ಲಾ ಕಾರ್ಯಗಳು ಹಿತಕ್ಕಾಗಿ ನಡೆಯುತ್ತವೆ (ರೋಮಾ. 8:28). ನಮ್ಮ ಹೃದಯವು ಶುದ್ಧವಾಗಿದ್ದರೆ, ದೇವರು ಎಲ್ಲವನ್ನೂ ನಮ್ಮ ಒಳಿತಿಗಾಗಿ ಬಳಸಿಕೊಳ್ಳುತ್ತಾರೆ, ಮತ್ತು ಇತರರು ನಮಗೆ ಮಾಡುವ ಕೆಡುಕಿನ ವಿಷಯಗಳಲ್ಲಿ, ಸನ್ನಿವೇಶಗಳು ನಮ್ಮ ಬಯಕೆಗೆ ವಿರುದ್ಧವಾಗಿರುವ ಸಂದರ್ಭಗಳಲ್ಲಿ, ನಾವು ಧೈರ್ಯವಾಗಿ "ದೇವರು ನಮ್ಮೊಂದಿಗಿದ್ದಾರೆ" ಎಂದು ಹೇಳಬಹುದು. ಇದಕ್ಕಾಗಿ, ಯಾವಾಗಲೂ ಹೃದಯದ ಶುದ್ಧತೆಯನ್ನು ಹುಡುಕುವವರಿಗೆ ಅಪಾರ ಆಶೀರ್ವಾದವಿರುತ್ತದೆ.
ನಾವು ದೇವರ ವಾಕ್ಯವನ್ನು ಹೆಚ್ಚು ಹೆಚ್ಚಾಗಿ ಅರಿತುಕೊಂಡಾಗ, ಸತ್ಯವೇದದಲ್ಲಿ ಯೇಸುವನ್ನು ಹೆಚ್ಚು ಸ್ಪಷ್ಟವಾಗಿ ಕಾಣುತ್ತೇವೆ. ಅನೇಕ ಜನರು ದೇವರ ವಾಕ್ಯವನ್ನು ಅಧ್ಯಯನ ಮಾಡಿದರೂ, ಅದರಲ್ಲಿ ಯೇಸುವನ್ನು ಕಂಡುಕೊಳ್ಳುವುದಿಲ್ಲ. ಅವರು ಒಂದು ಸಿದ್ಧಾಂತವನ್ನು ಪಡೆಯುತ್ತಾರೆ ಮತ್ತು ಆ ಸಿದ್ಧಾಂತಕ್ಕಾಗಿ ಹೋರಾಡುತ್ತಾರೆ. ಆದರೆ ನಮ್ಮ ಹೃದಯವು ಶುದ್ಧವಾಗಿದ್ದಾಗ ಮತ್ತು ನಮ್ಮ ಕಣ್ಣುಗಳು ಸ್ಪಷ್ಟವಾಗಿದ್ದಾಗ, ಬೇರೆಯವರು ಒಂದು ಸಿದ್ಧಾಂತವಾಗಿ ನೋಡುವ ಅದೇ ದೇವರ ವಾಕ್ಯವು ನಮಗೆ ಯೇಸುವನ್ನು ಪ್ರಕಟ ಪಡಿಸುತ್ತದೆ. ನಾವು ಪವಿತ್ರಾತ್ಮನು ಪ್ರಕಟಿಸುವ ಯೇಸುವಿನ ಮಹಿಮೆಯನ್ನು ಕಾಣುತ್ತೇವೆ ಮತ್ತು ಅದು ನಮ್ಮ ಹೃದಯವನ್ನು ಆತನ ಕಡೆಗೆ ಸೆಳೆಯುತ್ತದೆ ಮತ್ತು ಆತನನ್ನು ಇನ್ನಷ್ಟು ಹೆಚ್ಚಾಗಿ ಹಿಂಬಾಲಿಸಲು ನಮಗೆ ಸಹಾಯ ಮಾಡುತ್ತದೆ.
ಯೇಸುವು ವಿಧವೆಯ ಸಾಮ್ಯದಲ್ಲಿ ಹೇಳಿದಂತೆ, ನಾವು ದೇವರ ಮುಂದೆ ಹೋಗಿ ಹಗಲು-ರಾತ್ರಿ ನಿರಂತರವಾಗಿ ಆತನಿಗೆ ಹೃದಯದಲ್ಲಿ ಮೊರೆಯಿಡಬೇಕು (ಲೂಕ. 18:7 ನೋಡಿರಿ - "ದೇವರನ್ನು ಆತುಕೊಂಡವರು ಹಗಲು ರಾತ್ರಿ ಆತನಿಗೆ ಮೊರೆಯಿಡುತ್ತಾರೆ"). ಆ ವಿಧವೆಯು ಮೊರೆ ಇಟ್ಟಂತೆ, ನಾವು ಕೂಡ ನಮ್ಮ ವೈರಿಯ ಹಿಡಿತದಿಂದ ಬಿಡುಗಡೆಗಾಗಿ ಮತ್ತು ಶುದ್ಧತೆಯನ್ನೂ, ಬಲವನ್ನೂ ಹೊಂದಿರುವ ಜೀವಿತಕ್ಕಾಗಿ ಮತ್ತು ನಮ್ಮಲ್ಲಿ ಪವಿತ್ರಾತ್ಮನ ಬೆಂಕಿಯು ಎಂದಿಗೂ ತಣ್ಣಗಾಗದೇ ಇರಲಿ, ಎಂಬುದಕ್ಕಾಗಿ ಬೇಡಿಕೊಳ್ಳಬೇಕು. ನಾವು ಏಡ್ಸ್ ಕಾಯಿಲೆಗೆ ಹೆದರುವುದಕ್ಕಿಂತ ಹೆಚ್ಚಾಗಿ, ಒಂದು ಸಣ್ಣ ಪಾಪಮಯ ಯೋಚನೆ (ಅಶುದ್ಧತೆ ಅಥವಾ ದ್ವೇಷಭಾವ ಅಥವಾ ಲೌಕಿಕತನ ಅಥವಾ ಹಣದ ವ್ಯಾಮೋಹ) ನಮ್ಮಲ್ಲಿ ಬರುವುದರ ಬಗ್ಗೆ ಭಯಪಡಬೇಕು. ದೇವರು ಒಮ್ಮೆ ಇಸ್ರಾಯೇಲ್ಯರಿಗೆ "ಯೆಶಾ. 64:7"ರಲ್ಲಿ ಹೇಳಿದಂತೆ, ಈಗ "ನನ್ನ ಹೆಸರೆತ್ತಿ ಪ್ರಾರ್ಥಿಸಿ, ನನ್ನನ್ನು ಆಶ್ರಯಿಸಲು ತ್ರಾಣವಿರುವವನು ಎಲ್ಲಿಯೂ ಇಲ್ಲ." ತಿಮೊಥೆಯನಿಗೂ ಸಹ ಆತನಲ್ಲಿದ್ದ ದೇವರ ಕೃಪಾವರವನ್ನು (ಪವಿತ್ರಾತ್ಮನ ಬಲ) ಮತ್ತೊಮ್ಮೆ ಪ್ರಜ್ವಲಿಸುವಂತೆ ಮಾಡಬೇಕೆಂದು ತಿಳಿಸಲಾಯಿತು (2 ತಿಮೊ. 1:6). ದೇವರು ತಾನಾಗಿಯೇ ನಮ್ಮಲ್ಲಿ ಏನನ್ನೂ ಮಾಡುವುದಿಲ್ಲ. ಯಾಕೆಂದರೆ ಅದು ನಮ್ಮ ಸ್ವಚಿತ್ತವನ್ನು ಕಸಿದುಕೊಂಡಂತೆ ಆಗುತ್ತದೆ. ಆದರೆ ನಮ್ಮಲ್ಲಿ ಆತನಿಗಾಗಿ ಕಿಂಚಿತ್ತಾದರೂ ದಾಹ, ಹಂಬಲ ಇರುವುದನ್ನು ಅವರು ಗಮನಿಸಿದರೆ, ಅಥವಾ ನಮ್ಮ ಜೀವಿತಗಳಲ್ಲಿ ಅವರ ಅತ್ಯುತ್ತಮವಾದ ಚಿತ್ತಕ್ಕಾಗಿ ನಾವು ಇಷ್ಟಪಡುವುದನ್ನು ಅವರು ನೋಡಿದರೆ, ನಮಗೆ ಸಹಾಯಿಸಲು ಅವರು ಸರ್ವಶಕ್ತರಾಗಿದ್ದಾರೆ.
ಯಾರು ಪೌಲನಂತೆ ಮನುಷ್ಯರ ಮುಂದೆಯೂ, ದೇವರ ಮುಂದೆಯೂ ಶುದ್ಧ ಮನಸ್ಸಾಕ್ಷಿಯನ್ನು ಹೊಂದಿರಲು ಹೃದಯಪೂರ್ವಕವಾಗಿ ಪ್ರಯತ್ನಿಸುತ್ತಾರೋ, ಅವರು ಧನ್ಯರು; ಮತ್ತು ಈ ರೀತಿಯಾಗಿ ಅವರು ಶುದ್ಧ ಹೃದಯವನ್ನು ಹೊಂದುತ್ತಾರೆ, ಮತ್ತು ಎಲ್ಲಾ ವೇಳೆಯಲ್ಲಿ - ತಮ್ಮ ಎಲ್ಲಾ ಸನ್ನಿವೇಶಗಳಲ್ಲಿ, ಮತ್ತು ದೇವರ ವಾಕ್ಯದಲ್ಲಿ - ದೇವರನ್ನೇ ಕಾಣುತ್ತಾರೆ.