WFTW Body: 

ಲೂಕ. 2:40,52ರಲ್ಲಿ, ಯೇಸುವು ತನ್ನ ಬಾಲ್ಯದಿಂದ ಜ್ಞಾನದಲ್ಲಿ ವೃದ್ಧಿಯಾಗುತ್ತಾ ಬಂದನೆಂದು ನಾವು ಓದುತ್ತೇವೆ. ಯೌವನ ಪ್ರಾಯದಲ್ಲಿ ಮೂರ್ಖತನದ ಕಾರ್ಯಗಳನ್ನು ಮಾಡುವುದು ವಯೋಗುಣವೆಂದು ನಾವು ಅಂದುಕೊಳ್ಳಬಹುದು, ಆದಾಗ್ಯೂ, ಯೇಸುವು ತನ್ನ ಎಳೆಪ್ರಾಯದಲ್ಲಿ ಯಾವ ಬುದ್ಧಿಹೀನವಾದ ಕಾರ್ಯವನ್ನೂ ಮಾಡಲಿಲ್ಲ. ನಮ್ಮ ಚಿಕ್ಕ ವಯಸ್ಸಿನ ದಿನಗಳಲ್ಲಿ ನಾವು ಯೇಸುವನ್ನು ನಮ್ಮ ಮಾದರಿಯಾಗಿ ಇರಿಸಿಕೊಳ್ಳೋಣ ಮತ್ತು ಆ ಮೂಲಕ ಬುದ್ಧಿಹೀನ ಕಾರ್ಯಗಳಿಂದ ತಪ್ಪಿಸಿಕೊಳ್ಳೋಣ. ಕರ್ತನ ಭಯವೇ ಜ್ಞಾನಕ್ಕೆ ಮೂಲವು. ಯೇಸುವು ಆತ್ಮಿಕ ಮರಣದಿಂದ ತನ್ನನ್ನು ಉಳಿಸಿಕೊಳ್ಳಲು ಸಹಾಯಕ್ಕಾಗಿ ಪ್ರಾರ್ಥಿಸಿದನು - ಮತ್ತು "ದೇವರ ಮೇಲಿನ ಭಯಭಕ್ತಿಯ ನಿಮಿತ್ತ ಕೇಳಲ್ಪಟ್ಟನು" (ಇಬ್ರಿ. 5:7). ದೇವರು ಯೇಸುವನ್ನು ಪ್ರೀತಿಸಿದಂತೆ ನಮ್ಮನ್ನೂ ಪ್ರೀತಿಸುತ್ತಾರೆ. ಹಾಗಾಗಿ ನಾವು ಯೇಸುವಿನಂತೆ ದೇವಭಯದಲ್ಲಿ ಜೀವಿಸಿದರೆ, ನಮ್ಮ ಪ್ರಾರ್ಥನೆಗಳೂ ಕೇಳಲ್ಪಡುತ್ತವೆ.

ಅಬ್ರಹಾಮನು ತನ್ನ ಒಬ್ಬನೇ ಮಗನನ್ನಾದರೂ ದೇವರಿಗೆ ಸಮರ್ಪಿಸುವುದಕ್ಕೆ ಹಿಂದೆಗೆಯದ್ದನ್ನು ನೋಡಿದ ದೇವರು, "ನೀನು ದೇವರಲ್ಲಿ ಭಯಭಕ್ತಿಯುಳ್ಳವನೆಂಬುದು ಈಗ ತೋರಿಬಂತು" (ಆದಿ. 22:12), ಎಂದು ಅವನಿಗೆ ಪ್ರಮಾಣಪತ್ರವನ್ನು ನೀಡಿದರು. ಅಂದಿನ ದಿನ ಅಬ್ರಹಾಮನು ಪರ್ವತ ಶಿಖರದ ಮೇಲೆ ಆ ಏಕಾಂತ ಸ್ಥಳದಲ್ಲಿ ದೇವರಿಗೆ ವಿಧೇಯನಾದನು. ಅವನು ದೇವರೊಬ್ಬರಿಗೇ ತನ್ನ ವಿಧೇಯತೆಯನ್ನು ತೋರಿಸಲು ಇಚ್ಛಿಸಿದನು. ಇದಕ್ಕೆ ಮುಂಚೆ ಒಂದು ದಿನ ಅಬ್ರಹಾಮನು ಒಬ್ಬನೇ ಇದ್ದಾಗ, ದೇವರು ಅವನೊಂದಿಗೆ ಮಾತನಾಡಿದ್ದರು (ಆದಿ. 22:1). ದೇವರು ಅವನಿಗೆ ಹೇಳಿದ ಮಾತು ಬೇರೆ ಯಾರಿಗೂ ತಿಳಿದಿರಲಿಲ್ಲ. ಮತ್ತು ಅಬ್ರಹಾಮನು ದೇವರ ಆಜ್ಞೆಯನ್ನು ರಹಸ್ಯವಾಗಿ ಪಾಲಿಸಿದನು. ನಾವು ರಹಸ್ಯವಾಗಿ ಮಾಡುವ ಕಾರ್ಯಗಳಿಂದ (ನಮಗೆ ತಿಳಿದ ವಿಷಯ ಬೇರೆ ಯಾರಿಗೂ ತಿಳಿಯದೇ ಇರುವಾಗ), ನಮ್ಮಲ್ಲಿ ದೇವರ ಭಯಭಕ್ತಿ ಇದೆಯೋ, ಇಲ್ಲವೋ ಎಂಬುದನ್ನು ನಾವು ಕಂಡುಕೊಳ್ಳುತ್ತೇವೆ.

ಯೋಬನು ದೇವರಲ್ಲಿ ಭಯಭಕ್ತಿಯುಳ್ಳವನು, ಎಂದು ದೇವರು ಅವನಿಗೆ ಒಂದು ಪ್ರಮಾಣಪತ್ರವನ್ನು ಸೈತಾನನ ಮುಂದೆ ನೀಡಿದರು (ಯೋಬ. 1:8). ನಮ್ಮ ಕುರಿತಾಗಿಯೂ ದೇವರು ಇದೇ ರೀತಿ ಸೈತಾನನ ಮುಂದೆ ಹೊಗಳಲು ಸಾಧ್ಯವಾದರೆ, ಅದೊಂದು ಒಳ್ಳೆಯ ವಿಷಯವಾಗಿದೆ - ಏಕೆಂದರೆ, ಸೈತಾನನು ಈ ದಿನವೂ ಸಹ ಲೋಕವನ್ನೆಲ್ಲಾ ಸುತ್ತುತ್ತಾನೆ, ಮತ್ತು ನಮ್ಮ ಖಾಸಗಿ ಜೀವನದ ಸಂಪೂರ್ಣ ಮಾಹಿತಿಯನ್ನು ಅವನು ಹೊಂದಿದ್ದಾನೆ. ಯೋಬನು ಒಬ್ಬ ಯುವತಿಯನ್ನು ಕಣ್ಣಿಟ್ಟು ನೋಡುವುದಿಲ್ಲವೆಂದು ತನ್ನ ಕಣ್ಣಿಗೆ ಒಂದು ನಿಬಂಧನೆಯನ್ನು ಇರಿಸಿದ್ದನು (ಯೋಬ. 31:1). ಧರ್ಮಶಾಸ್ತ್ರ ಕೊಡಲ್ಪಡುವುದಕ್ಕೆ ಮುಂಚೆ, ಹೊಸ ಒಡಂಬಡಿಕೆ ಸ್ಥಾಪಿಸಲ್ಪಡುವದಕ್ಕೆ ಅನೇಕ ಶತಮಾನಗಳ ಮುಂದಾಗಿ, ಸತ್ಯವೇದವಿಲ್ಲದೆ, ಪವಿತ್ರಾತ್ಮನಿಲ್ಲದೆ, ಉತ್ತೇಜಿಸುವಂತ ಮತ್ತು ಸವಾಲು ಹಾಕುವಂತ ಇತರ ಸಹೋದರರು ಪಕ್ಕದಲ್ಲಿಲ್ಲದೆ, ಒಬ್ಬ ಮನುಷ್ಯನು ಇಂತಹ ನಿಯಮವನ್ನು ಅನುಸರಿಸಿ ಜೀವಿಸಿದ್ದು ಆಶ್ಚರ್ಯಕರ ವಿಷಯವಾಗಿದೆ! ಯೋಬನು ನ್ಯಾಯ ವಿಚಾರಣೆಯ ದಿನದಲ್ಲಿ ಎದ್ದು ನಿಂತು, ಈ ಸಂತತಿಯವರು ಕಾಮಾಭಿಲಾಷೆ ಮತ್ತು ಪಾಪಕ್ಕಾಗಿ ಅಪರಾಧಿಗಳಾಗಿದ್ದಾರೆ ಎಂದು ತೋರಿಸುವನು.

ಒಬ್ಬ 18ರ ವಯಸ್ಸಿನ ಯೌವನಸ್ಥನಾಗಿದ್ದ ಯೋಸೇಫನು, ಒಂದು ಅನ್ಯದೇಶದಲ್ಲಿ ದೇವರಿಗೆ ನಂಬಿಗಸ್ಥನಾಗಿ ನಡೆದುಕೊಂಡ ಉದಾಹರಣೆಯನ್ನು ನೋಡಿರಿ. ದೇವಭಯವೆಂಬ ಆಯುಧ ಅವನ ಬಳಿ ಇತ್ತು - ಅದು ಅವನನ್ನು ಸೈತಾನನ ಜಾಲದಿಂದ ಪಾರುಮಾಡಿತು. ಒಬ್ಬ 18ರ ವಯಸ್ಸಿನ ಯೌವನಸ್ಥನೂ ಸಹ, ಈ ಕೆಳಗೆ ನಮೂದಿಸಿರುವ ಪರಿಸ್ಥಿತಿಯಲ್ಲಿ, ಕರ್ತನಿಗೆ ನಿಷ್ಠಾವಂತನಾಗಿ ನಡೆಯಲು ಸಾಧ್ಯವಿದೆ ಎಂದು ಯೋಸೇಫನ ಉದಾಹರಣೆಯು ನಮಗೆ ತೋರಿಸುತ್ತದೆ:

  • (ಅ) ಅವನು ಯಾವ ಆದರ್ಶಗಳನ್ನೂ ಪಾಲಿಸದ ಒಂದು ಅನೈತಿಕ ಸಮಾಜದಲ್ಲಿ ವಾಸಿಸುತ್ತಿದ್ದನು;
  • (ಆ) ಅವನು ಒಬ್ಬ ಸ್ತ್ರೀಯಿಂದ ಪ್ರತಿದಿನವೂ ಶೋಧನೆಗೆ ಒಳಗಾಗಿದ್ದನು;
  • (ಇ) ಅವನ ತಂದೆತಾಯಿ ಸಾವಿರಾರು ಮೈಲಿ ದೂರದಲ್ಲಿದ್ದರು, ಮತ್ತು ಅವನು ಸತ್ತು ಹೋಗಿದ್ದನೆಂದು ಅಂದುಕೊಂಡಿದ್ದರು;
  • (ಈ) ಅವನ ಬಳಿ ಅವನನ್ನು ಉತ್ತೇಜಿಸುವಂತ ಸತ್ಯವೇದ ಅಥವಾ ಯಾವುದೇ ದೈವಿಕ ಪುಸ್ತಕ ಇರಲಿಲ್ಲ;
  • (ಉ) ಅವನು ಪವಿತ್ರಾತ್ಮನ ಬಲವನ್ನು ಪಡೆಯಲಿಲ್ಲ;
  • (ಊ) ಅವನಿಗೆ ಯಾವುದೇ ವಿಶ್ವಾಸಿಗಳ ಅನ್ಯೋನ್ಯತೆಯ ಭಾಗ್ಯ ಇರಲಿಲ್ಲ;
  • (ಎ) ಅವನಿಗೆ ಯಾವುದೇ ವಿಧವಾದ ಆತ್ಮಿಕ ಕೂಟಗಳಿಗೆ ಹಾಜರಾಗುವ ಅವಕಾಶ ಇರಲಿಲ್ಲ.
  • ಅವನ ಬಳಿ ಇದ್ದಂತ ಸಂಗತಿ ಯಾವುದೆಂದರೆ, ಅವನು ಬಾಲ್ಯದ 17 ವರ್ಷ ತನ್ನ ತಂದೆಯ ಮನೆಯಲ್ಲಿ ಜೀವಿಸಿದ್ದ ಸಮಯದಲ್ಲಿ, ಅವನ ತಂದೆಯಾದ ಯಾಕೋಬನು ಅವನಲ್ಲಿ ಬೇರೂರಿಸಿದ್ದ ’ದೇವರ ಭಯ’. ಈ ದಿನವೂ ಸಹ, ಒಬ್ಬ ಯೌವನಸ್ಥನನ್ನು ಪಾಪದಿಂದ ದೂರವಿರಿಸಲು ದೇವಭಯವಿದ್ದರೆ ಸಾಕಾಗುತ್ತದೆ.

    ಯೋಬ ಮತ್ತು ಯೋಸೇಫರ ಉದಾಹರಣೆಗಳು ನಮಗೆ ತೋರಿಸುವುದು ಏನೆಂದರೆ, ನಮ್ಮಲ್ಲಿ ದೇವರ ಭಯವೊಂದಿದ್ದರೆ, ನಮ್ಮನ್ನು ಲೈಂಗಿಕ ಪಾಪ ಮತ್ತು ಜಾರತ್ವದ ಭಯಂಕರ ಪಾಪದಿಂದ ಕಾಪಾಡಲು ಅದೊಂದೇ ಸಾಕಾಗುತ್ತದೆ. ದೇವಭಯವು ಜ್ಞಾನದ ಮೊದಲ ಪಾಠವಾಗಿದೆ (ಅಂದರೆ - ಅ,ಆ,ಇ,ಈ,ಉ,ಊ).

    ಕಡೆಯ ದಿವಸಗಳು (ಯೇಸುವು ಮತ್ತಾ. 24ರಲ್ಲಿ ಹೇಳಿರುವಂತೆ) ನೋಹನ ದಿವಸಗಳಂತೆ ಇರುವುದಾದರೆ, ನೋಹನ ಹಾಗೆ ಪಾಪ ಮತ್ತು ಅನೀತಿಯ ವಿರುದ್ಧ ಎದ್ದು ನಿಲ್ಲುವಂತವರು ಮತ್ತು ಈ ಕೆಟ್ಟ ಕಾಲದಲ್ಲಿ ದೇವರಿಗಾಗಿ ಯಥಾರ್ಥರೂ, ನಿರ್ಮಲಚಿತ್ತರೂ ಆಗಿ ನಿಲ್ಲುವಂತಹ ಮನುಷ್ಯರು, ದೇವರಿಗೆ ಕಡೆಯ ದಿವಸಗಳಲ್ಲೂ ಅವಶ್ಯವಾಗಿ ಬೇಕಾಗಿದ್ದಾರೆ.

    ನಾವು ಲೈಂಗಿಕ ಅಶುದ್ಧತೆಯ ವಿಷಯದಲ್ಲಿ, ಸಂಪೂರ್ಣ ಪರಿಶುದ್ಧತೆಯು ಪ್ರಾಪ್ತವಾಗುವ ತನಕ ನಿರಂತರವಾಗಿ ಶ್ರಮಿಸಬೇಕು. ನಾವು ಒಬ್ಬ ಕನ್ಯೆಯೊಂದಿಗೆ ಮಾತನಾಡುವ ರೀತಿಯಲ್ಲಿಯೂ ಸಹ, ದೂಷಿತಗೊಳಿಸುವ ಅಶುದ್ಧತೆಯು ನಮ್ಮಲ್ಲಿರುವ ಸಾಧ್ಯತೆಯಿದೆ. ನಾವು ಈ ಕ್ಷೇತ್ರದಲ್ಲಿ ಯೇಸುವಿನ ಪರಿಶುದ್ಧತೆಯನ್ನು ಪಡೆಯಲು ಹೆಚ್ಚಿನ ಪ್ರಯತ್ನ ಮಾಡಬೇಕು. ದೇವರ ವಾಕ್ಯದಲ್ಲಿ ಬರೆದಿರುವಂತೆ, ಯೇಸುವು ಒಬ್ಬ ಹೆಂಗಸಿನ ಸಂಗಡ ಮಾತಾಡುತ್ತಿರುವುದನ್ನು ಕಂಡು ಶಿಷ್ಯರು ಆಶ್ಚರ್ಯಪಟ್ಟರು (ಯೊಹಾ. 4:27). ಆತನು ನೀಡಿರುವ ಸಾಕ್ಷಿ ಇಂಥದ್ದಾಗಿದೆ.