ದೇವರ ಚಿತ್ತವನ್ನು ಪೂರೈಸುವುದು ಮಾನವನಿಗೆ ದೊರಕಿರುವ ಶ್ರೇಷ್ಠ ಸೌಭಾಗ್ಯವೂ, ಸದವಕಾಶವೂ ಆಗಿದೆ. ಕರ್ತನಾದ ಯೇಸುವು ತನ್ನ ಶಿಷ್ಯರಿಗೆ ಇದನ್ನೇ ಕಲಿಸಿದರು. ಪರಲೋಕ ತಂದೆಯ ಚಿತ್ತದಂತೆ ನಡೆಯುವವರೇ ಪರಲೋಕರಾಜ್ಯಕ್ಕೆ ಸೇರುವರು ಎಂದು ಯೇಸುವು ಒಂದು ಸಲ ಹೇಳಿದರು (ಮತ್ತಾ. 7:21). ಪರಲೋಕದಲ್ಲಿರುವ ತಂದೆಯ ಚಿತ್ತದಂತೆ ನಡೆಯುವವರೇ ತನ್ನ ನಿಜವಾದ ತಮ್ಮನೂ ತಂಗಿಯೂ ಆಗಿದ್ದಾರೆಂದೂ ಸಹ ಯೇಸುವು ಹೇಳಿದರು (ಮತ್ತಾ. 12:50). ಅಪೊಸ್ತಲರು ತಮ್ಮ ಬೋಧನೆಯಲ್ಲೂ ಇದಕ್ಕೆ ಒತ್ತು ನೀಡುತ್ತಾ ಮುಂದುವರಿದರು. ಪೇತ್ರನು ಸಾರಿದ್ದೇನೆಂದರೆ, ದೇವರು ತನ್ನ ಚಿತ್ತದ ಪ್ರಕಾರ ಮನುಷ್ಯರು ಬದುಕಬೇಕೆಂಬ ಉದ್ದೇಶದಿಂದ ಅವರನ್ನು ಪಾಪದಿಂದ ಬಿಡುಗಡೆ ಮಾಡಿದರು, ಎಂಬುದಾಗಿ (1 ಪೇತ್ರ. 4:1,2). ಪೌಲನು ಘೋಷಿಸಿದ್ದು ಏನೆಂದರೆ, ಕ್ರೈಸ್ತ ವಿಶ್ವಾಸಿಗಳಿಗಾಗಿ ದೇವರು ಮೊದಲೇ ನೇಮಿಸಿರುವ ಸತ್ಕಾರ್ಯಗಳನ್ನು ಪೂರೈಸಲಿಕ್ಕಾಗಿ ಅವರು ಕ್ರಿಸ್ತ ಯೇಸುವಿನಲ್ಲಿ ಹೊಸದಾಗಿ ಸೃಷ್ಟಿಯಾಗಿದ್ದಾರೆ, ಎಂಬುದಾಗಿ. ಇದಕ್ಕಾಗಿಯೇ ಎಫೆಸದ ಕ್ರೈಸ್ತ ವಿಶ್ವಾಸಿಗಳು ಬುದ್ಧಿಹೀನರಾಗಿ ನಡೆಯದೆ, ತಮ್ಮ ಜೀವಿತಕ್ಕಾಗಿ ಕರ್ತನ ಚಿತ್ತವೇನೆಂದು ವಿಚಾರಿಸಿ ತಿಳಕೊಳ್ಳಬೇಕೆಂದು ಆತನು ಪ್ರೋತ್ಸಾಹಿಸಿದನು (ಎಫೆ. 2:10,5:17). ಕೊಲೊಸ್ಸೆಯ ದೇವಜನರು ದೇವರ ಚಿತ್ತಾನುಸಾರವಾದ ಆತ್ಮಿಕ ಜ್ಞಾನವನ್ನು ಹೊಂದಿಕೊಳ್ಳಬೇಕೆಂದು ಆತನು ಪ್ರಾರ್ಥಿಸಿದನು. ಅವರು ಎಲ್ಲಾ ವಿಷಯಗಳಲ್ಲಿ ದೇವರ ಚಿತ್ತವನ್ನು ಪೂರೈಸಬೇಕೆಂದು ತನ್ನ ಜೊತೆ ಕೆಲಸಗಾರನಾದ ಎಪಫ್ರನೂ ಸಹ ಪ್ರಾರ್ಥಿಸುತ್ತಿದ್ದಾನೆಂದು ಪೌಲನು ತಿಳಿಸಿದನು (ಕೊಲೊ. 1:9-10,4:12). ಯಾರು ದೇವರ ಚಿತ್ತವನ್ನು ನೆರವೇರಿಸುತ್ತಾರೊ ಅವರು ಎಂದೆಂದಿಗೂ ಆತನಲ್ಲಿ ಸ್ಥಿರವಾಗಿ ಜೀವಿಸುತ್ತಾರೆ ಎಂದು ಅಪೊಸ್ತಲ ಯೋಹಾನನು ಬೋಧಿಸಿದನು (1 ಯೋಹಾ. 2:17).
ದಾವೀದನು ’ದೇವರ ಹೃದಯಕ್ಕೆ ಒಪ್ಪಿಗೆಯಾದ ಮನುಷ್ಯನು’ಎಂದು ಹೇಳಿಸಿಕೊಳ್ಳುವುದಕ್ಕೆ ಕಾರಣ, ಆತನ ಇಚ್ಛೆ ದೇವರ ಚಿತ್ತವನ್ನು ನೆರವೇರಿಸುವುದು ಮಾತ್ರವೇ ಆಗಿತ್ತು, ಎಂಬುದು "ಅಪೋಸ್ತಲರ ಕೃತ್ಯಗಳು 13:22"ರಲ್ಲಿ ಕಂಡುಬರುತ್ತದೆ. ’ದೇವರ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು,’ ಎಂದು ಸ್ವತಃ ದಾವೀದನೇ ಹೇಳುತ್ತಾನೆ (ಕೀರ್ತ. 40:8). ಆತನಲ್ಲಿ ಪರಿಪೂರ್ಣ ನೀತಿವಂತಿಕೆ ಇರಲಿಲ್ಲ. ಆತನು ಅನೇಕ ಪಾಪಗಳನ್ನು ಮಾಡಿದನು; ಕೆಲವು ಪಾಪಗಳು ಬಹು ಗಂಭೀರವಾಗಿದ್ದುದರಿಂದ ದೇವರು ಅವನನ್ನು ಕಠಿಣವಾಗಿ ಶಿಕ್ಷಿಸಬೇಕಾಯಿತು. ಆದಾಗ್ಯೂ ದೇವರು ಆತನನ್ನು ಕ್ಷಮಿಸಿದರು ಮತ್ತು ದಾವೀದನು ತನಗೆ ತಿಳಿದಷ್ಟು ಮಟ್ಟಿಗೆ ದೇವರ ಸಂಪೂರ್ಣ ಚಿತ್ತವನ್ನು ಪೂರೈಸಲು ಬಯಸಿದ್ದರಿಂದ ದೇವರು ಆತನಲ್ಲಿ ಉಲ್ಲಾಸಗೊಂಡರು. ನಮ್ಮಲ್ಲಿ ಹಲವಾರು ವಿಧವಾದ ಪಾಪದೋಷಗಳು ಇದ್ದರೂ ಸಹ - ನಮ್ಮ ಹೃದಯಗಳಲ್ಲಿ ದೇವರ ಪರಿಪೂರ್ಣ ಚಿತ್ತವನ್ನು ನೆರವೇರಿಸುವ ಹಾತೊರೆಯುವಿಕೆ ಇದ್ದರೆ - ನಾವು ದೇವರು ಮೆಚ್ಚುವಂತ ಸ್ತ್ರೀ-ಪುರುಷರು ಆಗಬಹುದು, ಎಂಬ ನಂಬಿಕೆಯು ನಮ್ಮನ್ನು ಪ್ರೋತ್ಸಾಹಿಸುತ್ತದೆ.
ಹೊಸ ಒಡಂಬಡಿಕೆಯಲ್ಲಿ ಯೇಸುವಿನ ಮಾದರಿಯನ್ನು ಅನುಸರಿಸಿ ನಡೆಯುವಂತೆ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲಾಗಿದೆ. ಯೇಸುವಿನ ಜೀವಿತ ಮತ್ತು ಸೇವೆಯ ಮೂಲಸೂತ್ರವು ತಂದೆಯ ಚಿತ್ತದಂತೆ ನಡೆಯುವುದಾಗಿತ್ತು. ಅತನು ತನ್ನ ತಂದೆಯ ಧ್ವನಿಯನ್ನು ಆಲಿಸದೆ ಒಂದು ಹೆಜ್ಜೆಯನ್ನೂ ಹಾಕಲಿಲ್ಲ. ಆದರೆ ತಂದೆಯ ಇಚ್ಛೆ ಗೊತ್ತಾದಾಗ, ಶತ್ರುಗಳ ಬೆದರಿಕೆಗಾಗಲೀ ಅಥವಾ ಸ್ನೇಹಿತರ ಒತ್ತಾಯಕ್ಕಾಗಲೀ ಆತನು ಯಾವತ್ತೂ ಮಣಿಯಲಿಲ್ಲ ಮತ್ತು ಪರಲೋಕದ ತಂದೆಯ ಆದೇಶದಿಂದ ಹಿಂಜರಿಯಲಿಲ್ಲ. ಆತನನ್ನು ಕಳುಹಿಸಿದಾತನ ಚಿತ್ತದಂತೆ ನಡೆಯುವುದೇ ಆತನ ಪ್ರತಿದಿನದ ಆಹಾರವಾಗಿತ್ತು (ಯೋಹಾ. 4:34). ಮನುಷ್ಯರು ತಮ್ಮ ದೇಹದ ಪೋಷಣೆಗಾಗಿ ಆಹಾರವನ್ನು ಹಂಬಲಿಸುವಂತೆ, ಯೇಸುವು ತನ್ನನ್ನು ಕಳುಹಿಸಿದಾತನ ಚಿತ್ತವನ್ನು ಪೂರೈಸುವುದಕ್ಕಾಗಿ ಹಂಬಲಿಸಿದನು. ಇದೇ ರೀತಿ ದೇವರ ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಬೇಕೆಂಬ ಹಂಬಲವು ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯನ್ನು ಪ್ರೇರೇಪಿಸಬೇಕು. ನಮ್ಮ ಪ್ರಾರ್ಥನೆಯಲ್ಲಿ, "ತಂದೆಯೇ, ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲೂ ನೆರವೇರಲಿ," ಎಂದು ಸಲೀಸಾಗಿ ಹೇಳಿ, ಅನಂತರ ನಮ್ಮ ದೈನಂದಿನ ಜೀವಿತದಲ್ಲಿ ದೇವರ ಮಾರ್ಗದರ್ಶನವಿಲ್ಲದೆ, ನಮ್ಮ ಇಷ್ಟದಂತೆ ನಡೆಯುವುದು ತುಂಬಾ ಸಾಮಾನ್ಯವಾಗಿದೆ.
"ಯಾರು ತನ್ನ ಜೀವಿತದ ಕೊನೆಯನ್ನು ತಲುಪಿದಾಗ, ಅಪೊಸ್ತಲ ಪೌಲನಂತೆ ’ನಾನು ದೇವರು ನೇಮಿಸಿದ ಕೆಲಸವನ್ನು ಪೂರೈಸಿದ್ದೇನೆ,’ ಎಂದು ಹೇಳಬಲ್ಲನೋ, ಆತನು ಧನ್ಯನು"
ನಮ್ಮ ಒಬ್ಬೊಬ್ಬರ ಜೀವಿತಕ್ಕಾಗಿಯೂ ದೇವರು ನೇಮಿಸಿರುವ ಒಂದು ವಿಶೇಷ ಯೋಜನೆ ಇದೆಯೆಂದು ಸತ್ಯವೇದವು ಕಲಿಸುತ್ತದೆ (ಎಫೆ. 2:10). ದೇವರು ನಮಗಾಗಿ ಒಂದು ವೃತ್ತಿ ಅಥವಾ ನೌಕರಿಯನ್ನು ಯೋಜಿಸಿದ್ದಾರೆ, ನಮಗಾಗಿ ಒಬ್ಬ ಜೀವನ ಸಂಗಾತಿಯನ್ನು ಇರಿಸಿದ್ದಾರೆ ಮತ್ತು ಅವರು ನಮ್ಮ ನಿವಾಸಗಳ ಮೇರೆಗಳನ್ನೂ, ನಾವು ಪ್ರತಿದಿನ ಏನು ಮಾಡಬೇಕು ಎಂಬುದನ್ನೂ ಸಹ ಯೋಜಿಸಿದ್ದಾರೆ. ದೇವರು ನಮ್ಮನ್ನು ಚೆನ್ನಾಗಿ ತಿಳಿದಿರುವುದರಿಂದ, ಎಲ್ಲಾ ಸಂದರ್ಭಗಳಲ್ಲಿ ಎಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ಅತ್ಯುತ್ತಮ ಆಯ್ಕೆಯನ್ನು ಮಾಡುತ್ತಾರೆ. ಆದ್ದರಿಂದ - ದೊಡ್ಡ ವಿಷಯದಲ್ಲಾಗಲೀ ಅಥವಾ ಸಣ್ಣ ಸಂಗತಿಯಲ್ಲೇ ಆಗಲೀ - ದೇವರ ಚಿತ್ತದಂತೆ ನಡೆಯುವುದು ಅತ್ಯಂತ ಬುದ್ಧಿವಂತಿಕೆಯ ಮಾತಾಗಿದೆ.
ಅನೇಕರು ತಮ್ಮ ಯೌವ್ವನದ ಆರಂಭದಿಂದ ದೇವರ ಚಿತ್ತವನ್ನು ಹುಡುಕುವುದನ್ನು ಕಡೆಗಣಿಸಿ, ಸಮುದ್ರದಲ್ಲಿ ಹಡಗು ಒಡೆದು ನಷ್ಟವಾಗುವಂತೆ ತಮ್ಮ ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. "ಯೌವ್ವನದಲ್ಲಿ ನೊಗವನ್ನು ಹೊರುವುದು ಮನುಷ್ಯನಿಗೆ ಒಳ್ಳೆಯದು"(ಪ್ರಲಾಪಗಳು 3:27)ಎನ್ನುವ ನಾಣ್ನುಡಿಯಲ್ಲಿ ಸತ್ಯಾಂಶವಿದೆ. "ಮತ್ತಾಯನು 11:28-30"ರಲ್ಲಿ, ಯೇಸುವು ತನ್ನ ನೊಗವನ್ನು ಹೊತ್ತುಕೊಳ್ಳುವಂತೆ ನಮ್ಮನ್ನು ಆಹ್ವಾನಿಸುತ್ತಾರೆ. ನೊಗವನ್ನು ಹೊರುವುದರ ಅರ್ಥವೇನು? ಹೊಲವನ್ನು ಉಳುವಂತ ಎರಡು ಎತ್ತುಗಳ ಕತ್ತುಗಳನ್ನು ಒಂದು ನೊಗಕ್ಕೆ ಹೂಡಲಾಗುತ್ತದೆ. ಉಳುವುದಕ್ಕಾಗಿ ಒಂದು ಹೊಸ ಎತ್ತನ್ನು ಪಳಗಿಸಬೇಕಾದಾಗ, ಅದನ್ನು ಪಳಗಿದ ಎತ್ತಿನೊಂದಿಗೆ ಹೂಡಲಾಗುತ್ತದೆ. ಆಗ ಹೊಸ ಎತ್ತು ಪಳಗಿದ ಎತ್ತಿನ ಜೊತೆಗೆ, ಅದೇ ವೇಗದಲ್ಲಿ ನಡೆಯಬೇಕಾಗುತ್ತದೆ. ನಾವು ಯೇಸುವಿನ ನೊಗವನ್ನು ಹೊರುವುದರ ಅರ್ಥ ಇದೇ ಆಗಿದೆ. ನಾವು ಯೇಸುವಿನೊಂದಿಗೆ, ಆತನು ನಡೆಸುವ ಹಾದಿಯಲ್ಲಿ ನಡೆಯಬೇಕು, ಆತನ ಪ್ರೇರೇಪಣೆಯಿಲ್ಲದೆ ಯಾವುದನ್ನೋ ಮಾಡಲು ಮುನ್ನುಗ್ಗುವುದಲ್ಲ, ಅಥವಾ ಆತನು ನಮ್ಮನ್ನು ವಿಧೇಯತೆಯ ಒಂದು ಹೊಸ ದಾರಿಯಲ್ಲಿ ನಡೆಸಿದಾಗ ಹಿಂದೇಟು ಹಾಕುವುದಲ್ಲ. ನೊಗದ ಈ ಅರ್ಥವನ್ನು ತಿಳಿದಿರುವಂತ ವಿಶ್ವಾಸಿಗಳು ಬಹಳ ಕಡಿಮೆ. ನೊಗವನ್ನು ಸ್ವೀಕರಿಸಲು ಸಿದ್ಧರಾಗಿರುವ ವಿಶ್ವಾಸಿಗಳು ಇನ್ನೂ ಅಪರೂಪ. ಒಬ್ಬ ರೈತನು ಎತ್ತಿನ ಮೇಲೆ ನೊಗವನ್ನು ಬಲಾತ್ಕಾರದಿಂದ ಹೂಡುತ್ತಾನೆ. ಆದರೆ ಯೇಸುವು ಆದರದಿಂದ ಆಮಂತ್ರಿಸುತ್ತಾರೆ. ಇದರಲ್ಲಿ ಯಾವುದೇ ಬಲಾತ್ಕಾರವಿಲ್ಲ. ಈ ಆಹ್ವಾನವನ್ನು ತಿರಸ್ಕರಿಸುವಂತ ನಾವು ಎಂಥಾ ಮೂರ್ಖರು! ನಿಜವಾದ ಸ್ವಾತಂತ್ರ್ಯವನ್ನು ಮತ್ತು ಮನಸ್ಸಿನ ನೆಮ್ಮದಿಯನ್ನು ನೀಡುವ ಯೇಸುವಿನ ಹಗುರವಾದ ನೊಗದ ಬದಲಿಗೆ, ನಾವು ನಮ್ಮ ಸ್ವೇಚ್ಛೆಯ ನಡತೆಯ ಭಾರವಾದ ನೊಗವನ್ನೂ, ಅದರಿಂದ ಉಂಟಾಗುವ ಹತಾಶೆ, ಸೋಲು ಮತ್ತು ವಿಷಾದಗಳನ್ನೂ ಇಷ್ಟಪಟ್ಟು ಸ್ವೀಕರಿಸುತ್ತೇವೆ!
ನಾವು ಹನೋಕನ ಬಗ್ಗೆ ಓದುವುದು ಏನೆಂದರೆ, ಅವನು "ದೇವರೊಂದಿಗೆ ನಡೆದನು" (ಆದಿ. 5:22) ಅಂದರೆ, ಅವನು ಮುಂದಕ್ಕೆ ನುಗ್ಗಲಿಲ್ಲ ಅಥವಾ ಹಿಂದೆ ಉಳಿಯಲಿಲ್ಲ. ಆದರೆ ದೇವರು ನೇಮಿಸಿದ ಮಾರ್ಗದ ನೊಗಕ್ಕೆ ಹೊಂದಿಕೊಂಡು ಮುನ್ನೂರು ವರ್ಷಗಳ ಕಾಲ ನಡೆದನು. ಇದರಿಂದಾಗಿ ದೇವರು ತಾನು ಹನೋಕನ ಜೀವಿತವನ್ನು ಮೆಚ್ಚಿದ್ದಾಗಿ ಸಾಕ್ಷಿ ಹೇಳಿದರು (ಇಬ್ರಿ. 11:5). ದೇವರು ಮೆಚ್ಚುವಂತ ಒಂದೇ ಒಂದು ಮಾರ್ಗ ಇದಾಗಿದೆ - ಅವರ ಸಂಪೂರ್ಣ ಚಿತ್ತಕ್ಕೆ ಅನುಸಾರವಾಗಿ ನೊಗದ ಕೆಳಗೆ ಜೀವಿಸುವುದು ಮತ್ತು ನಡೆಯುವುದು. ಹೀಗೆ ಮಾಡುವುದರಿಂದ ಮಾತ್ರ ಅವರು ಹಿಂದಿರುಗಿ ಬರುವಾಗ ನಾವು ಅವರ ಮುಂದೆ ವಿಷಾದವಿಲ್ಲದೆ ನಿಲ್ಲಲು ಸಾಧ್ಯವಾಗುತ್ತದೆ.
ಒಬ್ಬ ವಿಶ್ವಾಸಿಯು ತನ್ನ ಜೀವಿತಕ್ಕಾಗಿ ದೇವರ ಪರಿಪೂರ್ಣ ಚಿತ್ತವನ್ನು ಕಂಡುಕೊಳ್ಳದೇ ಇರಬಹುದು. ದೇವರು ಸೌಲನನ್ನು ಇಸ್ರಾಯೇಲ್ಯರ ರಾಜನಾಗಿ ಆರಿಸಿಕೊಂಡರು. ಆದರೆ ಆತನ ಅಶಿಸ್ತು ಹಾಗೂ ಅವಿಧೇಯತೆಯಿಂದಾಗಿ, ಕೊನೆಯಲ್ಲಿ ದೇವರು ಆತನನ್ನು ತಿರಸ್ಕರಿಸಿದರು. ಆತನು ಮುಂದಿನ ಕೆಲವು ವರ್ಷಗಳು ಸಿಂಹಾಸನದ ಮೇಲೆ ಮುಂದುವರಿದನು, ನಿಜ, ಆದರೆ ತನ್ನ ಜೀವಿತದಲ್ಲಿ ದೇವರ ಚಿತ್ತವನ್ನು ಕಳೆದುಕೊಂಡನು. ಸೊಲೊಮೋನನು ಅದೇ ರೀತಿಯ ಇನ್ನೊಂದು ಉದಾಹರಣೆಯಾಗಿದ್ದಾನೆ. ಅವನು ತನ್ನ ಮೊದಲಿನ ವರ್ಷಗಳಲ್ಲಿ ದೇವರನ್ನು ಮೆಚ್ಚಿಸಿದನು, ಆದರೆ ನಂತರ ಅನ್ಯಸ್ತ್ರೀಯರನ್ನು ಮದುವೆಯಾಗುವ ಮೂಲಕ ಬಿದ್ದುಹೋದನು. ಅರಣ್ಯದಲ್ಲಿ ನಾಶವಾದ ಇಸ್ರಾಯೇಲ್ಯರ ಉದಾಹರಣೆಯನ್ನು ಹೊಸ ಒಡಂಬಡಿಕೆಯಲ್ಲಿ ಎರಡು ಬಾರಿ ನಮ್ಮ ಎಚ್ಚರಿಕೆಗಾಗಿ ಉಲ್ಲೇಖಿಸಲಾಗಿದೆ. ಕಾನಾನ್ ದೇಶವನ್ನು ಪ್ರವೇಶಿಸುವುದು ಅವರಿಗಾಗಿ ದೇವರ ಪರಿಪೂರ್ಣ ಚಿತ್ತವಾಗಿತ್ತು. ಆದರೆ ಅವರಲ್ಲಿ ಇಬ್ಬರನ್ನು ಹೊರತುಪಡಿಸಿ, ಪ್ರತಿಯೊಬ್ಬನೂ ಅಪನಂಬಿಕೆ ಹಾಗೂ ಅವಿಧೇಯತೆಯ ಮೂಲಕ ದೇವರ ಅತ್ಯುತ್ತಮ ಯೋಜನೆಯ ಅವಕಾಶವನ್ನು ಕಳೆದುಕೊಂಡನು (1ಕೊರಿ. 10:1-12; ಇಬ್ರಿ. 3:7-14).ಹಾಗೆಯೇ ಅನೇಕ ವಿಶ್ವಾಸಿಗಳ ಜೀವಿತದ ಅವಿಧೇಯತೆ ಹಾಗೂ ಪ್ರಾಪಂಚಿಕ ಮನೋಭಾವದ ಮೂಲಕ - ವಿವಾಹ ಅಥವಾ ನೌಕರಿಯ ಆಯ್ಕೆಯಲ್ಲಿ - ದೇವರು ಅವರಿಗಾಗಿ ಇರಿಸಿದ ಪರಿಪೂರ್ಣ ಯೋಜನೆಯನ್ನು ಅವರು ನಿಷ್ಫಲಗೊಳಿಸಿದ್ದಾರೆ.
ನಾವು ಪ್ರತಿಯೊಬ್ಬರೂ ಕೇವಲ ಒಂದು ಬಾರಿ ಜೀವಿಸುತ್ತೇವೆ. ಯಾರು ತನ್ನ ಜೀವಿತದ ಕೊನೆಯನ್ನು ತಲುಪಿದಾಗ, ಅಪೊಸ್ತಲ ಪೌಲನಂತೆ ’ನಾನು ದೇವರು ನೇಮಿಸಿದ ಕೆಲಸವನ್ನು ಪೂರೈಸಿದ್ದೇನೆ,’ ಎಂದು ಹೇಳಬಲ್ಲನೋ, ಆತನು ಧನ್ಯನು (2 ತಿಮೊ. 4:7).
"ಲೋಕವೂ ಮತ್ತು ಅದರ ಎಲ್ಲಾ ಕಾಮನೆಗಳೂ, ಆಸೆಗಳೂ ಒಂದು ದಿನ ಗತಿಸಿ ಹೋಗುತ್ತವೆ. ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಸದಾಕಾಲ ಜೀವಿಸುವನು ಮತ್ತು ಸಾಯಲಾರನು"(1 ಯೋಹಾ. 2:17 - JBP ಅನುವಾದ).
"ಶಿಸ್ತಿನಿಂದ ಜೀವಿಸಿರಿ, ಗೊತ್ತುಗುರಿಯಿಲ್ಲದ ಅಜ್ಞಾನಿಗಳಂತೆ ಇರಬೇಡಿರಿ, ಆದರೆ ಸ್ಪಷ್ಟವಾದ ಗುರಿಯನ್ನು ಇರಿಸಿಕೊಳ್ಳಿರಿ. ಈ ದಿನ ಕಠಿನಕಾಲ ಬಂದರೂ, ಸಮಯವನ್ನು ವ್ಯರ್ಥಗೊಳಿಸಬೇಡಿರಿ. ದಾರಿ ತಿಳಿಯದೆ ಅಲೆದಾಡಬೇಡಿರಿ, ಆದರೆ ದೇವರ ಚಿತ್ತವನ್ನು ಅರಿತುಕೊಂಡು, ದೃಢವಾಗಿ ನಿಲ್ಲಿರಿ(ಎಫೆ. 5:15-17 JBP ಅನುವಾದ).