"ಕರುಣೆಯುಳ್ಳವರು ಧನ್ಯರು; ಅವರು ಕರುಣೆ ಹೊಂದುವರು" (ಮತ್ತಾ. 5:7) . ಯೇಸು ನಮಗೆ ಕಲಿಸಿದ ಪ್ರಾರ್ಥನೆ ಯಾವುದೆಂದರೆ, "ಪರಲೋಕದಲ್ಲಿರುವ ನಮ್ಮ ತಂದೆಯೇ, ನಮ್ಮ ವಿರುದ್ಧ ಇತರರು ಮಾಡುವ ತಪ್ಪುಗಳನ್ನು ನಿಖರವಾಗಿ ನಾವು ಕ್ಷಮಿಸುವಂತೆಯೇ, ನಾವು ಮಾಡುವ ಪಾಪಗಳನ್ನು ಕ್ಷಮಿಸು," ಎಂಬುದಾಗಿತ್ತು. ಆ ಪ್ರಾರ್ಥನೆಯ ಅರ್ಥವೇನು? ಅದರ ಅರ್ಥ, ಯಾರಾದರೂ ನನ್ನ ವಿರುದ್ಧ ಮಾಡುವ ಪಾಪವನ್ನು ನಾನು ಕ್ಷಮಿಸದೇಹೋದರೆ, ಕರ್ತನು ನನ್ನನ್ನು ಕ್ಷಮಿಸುವುದಿಲ್ಲ. ನನ್ನ ಪ್ರಾರ್ಥನೆಯು ದೇವರ ಬಳಿ ಯಾವ ರೀತಿ ತಲುಪುತ್ತದೆ ಎಂದರೆ, "ಕರ್ತನೇ, ನಾನು ಈ ವ್ಯಕ್ತಿಯನ್ನು ಕ್ಷಮಿಸಿರುವಂತೆಯೇ ನೀವು ನನ್ನನ್ನು ಕ್ಷಮಿಸಿರಿ." ಆದರೆ ನಾನು ಇನ್ನೊಬ್ಬನನ್ನು ಕ್ಷಮಿಸದಿರುವಾಗ, ನಿಜವಾಗಿ ನನ್ನನ್ನು ಕ್ಷಮಿಸಬೇಡವೆಂದು ನಾನು ಕರ್ತನನ್ನು ಬೇಡಿಕೊಳ್ಳುತ್ತಿದ್ದೇನೆ.
ನೀನು ಕರ್ತನ ಪ್ರಾರ್ಥನೆಯನ್ನು ಪ್ರಾರ್ಥಿಸುವಾಗ, ನಿಖರವಾಗಿ ನೀನು ಇತರರನ್ನು ಕ್ಷಮಿಸಿದ ಹಾಗೆಯೇ ದೇವರು ನಿನ್ನನ್ನು ಕ್ಷಮಿಸುವಂತೆ ದೇವರನ್ನು ಕೇಳುತ್ತಿದ್ದೀಯೆಂದು ನಿನಗೆ ತಿಳಿದಿದೆಯೇ? ನೀನು ಇನ್ನೊಬ್ಬನನ್ನು ಕ್ಷಮಿಸಲು ನಿರಾಕರಿಸಿದಾಗ, ನಿನ್ನ ಪ್ರಾರ್ಥನೆ ಹೀಗಿರುತ್ತದೆ, "ನಾನು ಇನ್ನೊಬ್ಬನನ್ನು ಹೇಗೆ ಕ್ಷಮಿಸಿದ್ದೇನೋ ಹಾಗೆಯೇ ನನ್ನನ್ನು ಕ್ಷಮಿಸಿ; ನಾನು ಅವನನ್ನು ಕ್ಷಮಿಸದ ಕಾರಣ, ನೀವು ನನ್ನನ್ನು ಕ್ಷಮಿಸಬೇಡಿ;" ಅಥವಾ, "ನಾನು ಅವನನ್ನು ಕ್ಷಮಿಸಿದ್ದೇನೆ, ಆದರೆ ಅವನು ನನಗೆ ಮಾಡಿದ್ದಕ್ಕಾಗಿ ನಾನು ಅವನನ್ನು ಬಹಳವಾಗಿ ದ್ವೇಷಿಸುತ್ತೇನೆ. ಆದ್ದರಿಂದ ಕರ್ತನೇ, ನೀನು ನನ್ನನ್ನು ಕ್ಷಮಿಸಿದರೂ, ನಿನ್ನ ಮನಸ್ಸಿನಲ್ಲಿ ನನ್ನ ಬಗ್ಗೆ ದ್ವೇಷವನ್ನು ಹಾಗೆಯೇ ಉಳಿಸಿಕೋ."
ಯಾವಾಗಲಾದರೂ ಜನರು ನಮಗೆ ಯಾವುದೋ ಕೇಡು ಮಾಡಿದಾಗ ಅಥವಾ ನಮ್ಮನ್ನು ನೋಯಿಸಿದಾಗ, ನಮ್ಮ ಮನಸ್ಸಿನಲ್ಲಿ ಒಂದಕ್ಕೊಂದು ವಿರುದ್ಧವಾದ ಎರಡು ಅಲೋಚನೆಗಳು ಏಳುತ್ತವೆ. ಒಂದು ಕರುಣೆಯ ಮನೋಭಾವ, ಮತ್ತೊಂದು ನ್ಯಾಯತೀರ್ಪಿನ ಮನೋಭಾವ. ಪವಿತ್ರಾತ್ಮನು ಕ್ಷಮಾಪಣೆಯನ್ನೂ ಕರುಣೆಯನ್ನೂ ತೋರಿಸುವಂತೆ ನಮ್ಮನ್ನು ಪ್ರೇರೇಪಿಸುತ್ತಾನೆ, ಆದರೆ ನಮ್ಮ ಶರೀರಭಾವವು ಆ ವ್ಯಕ್ತಿಯೊಂದಿಗೆ ಕಠಿಣವಾಗಿ ನಡೆದುಕೊಂಡು, ನ್ಯಾಯತೀರ್ಪಿಗೆ ಒಳಪಡಿಸಿ, ದೇವರೂ ಸಹ ಆತನನ್ನು ನ್ಯಾಯತೀರ್ಪಿಗೆ ಒಳಪಡಿಸುವಂತೆ ಪ್ರಾರ್ಥಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಆದರೆ ಯಾಕೋಬ. 2:13 ರಲ್ಲಿ ಹೇಳಲಾಗಿರುವಂತೆ, "ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಮಾನದಲ್ಲಿ ಕರುಣೆಯು ತೋರಿಸಲ್ಪಡುವುದಿಲ್ಲ." ನಾನು ಯಾರಿಗಾದರೂ ಕರುಣೆ ತೋರಿಸದಿದ್ದರೆ, ದೇವರು ನನಗೆ ಕರುಣೆ ತೋರಿಸುವುದಿಲ್ಲ. ಮತ್ತು ಮುಂದೆ ನ್ಯಾಯತೀರ್ಪಿನ ದಿನದಲ್ಲಿ ನಮ್ಮೆಲ್ಲರನ್ನು ಚಕಿತಗೊಳಿಸಲಿರುವ ಸಂಗತಿ ಏನೆಂದರೆ, ಇತರರನ್ನು ಕ್ಷಮಿಸದಿರುವ ವಿಶ್ವಾಸಿಗಳಿಗೆ ದೇವರು ಅತ್ಯಂತ ಕಠಿಣವಾದ ನ್ಯಾಯತೀರ್ಪನ್ನು ವಿಧಿಸುತ್ತಾರೆ - ಅವರು ದೇವರ ರಾಜ್ಯವನ್ನು ಪ್ರವೇಶಿಸುವುದಿಲ್ಲ.
ಯಾಕೋಬ. 2:13 ರ ವಾಕ್ಯವು ಮುಂದುವರಿದು, "ಕರುಣೆಯು ನ್ಯಾಯತೀರ್ಮಾನವನ್ನು ಗೆದ್ದು ಹಿಗ್ಗುತ್ತದೆ," ಎಂದು ಹೇಳುತ್ತದೆ. ಇದರ ಅರ್ಥವೇನೆಂದರೆ, ನನ್ನ ಹೃದಯದಲ್ಲಿ ಒಬ್ಬನನ್ನು ನ್ಯಾಯತೀರ್ಪು ಮಾಡುವುದೋ ಅಥವಾ ಆತನಿಗೆ ಕರುಣೆ ತೋರಿಸುವುದೋ ಎಂಬ ಅನಿಶ್ಚಿತತೆ ಉಂಟಾದಾಗ, ಕರುಣೆಯು ಜಯಿಸಲಿ, ಮತ್ತು ನ್ಯಾಯತೀರ್ಪು ಅಲ್ಲ. ಇದು ಒಬ್ಬ ದೇವಭಕ್ತನ ಲಕ್ಷಣವಾಗಿದೆ. ಕರುಣೆಯು ನ್ಯಾಯತೀರ್ಮಾನವನ್ನು ಗೆಲ್ಲುತ್ತದೆ.
"ಇತರರಿಗೆ ಕರುಣೆ ತೋರಿಸದೆ ಇರುವವನು ನ್ಯಾಯತೀರ್ಮಾನದಲ್ಲಿ ಕರುಣೆಯನ್ನು ಪಡೆಯುವುದಿಲ್ಲ""
ರೋಮಾ 12:19ರಲ್ಲಿ ಹೇಳಿರುವಂತೆ, "ಮುಯ್ಯಿಗೆ ಮುಯ್ಯಿ ತೀರಿಸಬೇಡಿರಿ," ಏಕೆಂದರೆ ಅದು ದೇವರ ಹಕ್ಕಾಗಿದೆ. ಇಲ್ಲಿ ದೇವರು ಹೀಗೆನ್ನುತ್ತಾರೆ, "ಮುಯ್ಯಿಗೆ ಮುಯ್ಯಿ ತೀರಿಸುವುದು ನನ್ನ ಕೆಲಸ, ನಿನ್ನ ಕೆಲಸವಲ್ಲ." "ನಾನೇ ಪ್ರತಿಫಲವನ್ನು ಕೊಡುವೆನು," ಎಂದು ಕರ್ತರು ಹೇಳುತ್ತಾರೆ. ಹಾಗಾದರೆ ನಿನ್ನ ವೈರಿಯು ಹಸಿದಿದ್ದರೆ, ಅವನಿಗೆ ಊಟ ಬಡಿಸು. ಅವನು ಬಾಯಾರಿದ್ದರೆ ಅವನಿಗೆ ಕುಡಿಯುವುದಕ್ಕೆ ಕೊಡು. ನಾವು ಮುಯ್ಯಿ ತೀರಿಸಬಾರದು. ನಾವು ಕರುಣೆಯನ್ನು ಹೊಂದಿರಬೇಕು ಮತ್ತು ಬೇರೆಯವರಿಗೆ ಯಾವ ರೀತಿಯಲ್ಲಿ ಒಳ್ಳೆಯದನ್ನು ಮಾಡಬಹುದೋ, ಅದನ್ನು ತಪ್ಪದೆ ಮಾಡಬೇಕು. ನಾವು ದೇವರ ನ್ಯಾಯಾಸನದ ಮುಂದೆ ನಿಲ್ಲುವಾಗ ಕಂಡುಕೊಳ್ಳಲಿರುವ ಸತ್ಯಾಂಶ ಏನೆಂದರೆ, ನಾವು ಇತರರನ್ನು ಕ್ಷಮಿಸದಿದ್ದರೆ, ದೇವರು ನಮ್ಮನ್ನು ಕ್ಷಮಿಸುವುದಿಲ್ಲ. ಯೇಸುವು ಕರ್ತನ ಪ್ರಾರ್ಥನೆಯಲ್ಲಿ ಇದೇ ಎಚ್ಚರಿಕೆಯನ್ನು ಮತ್ತೊಮ್ಮೆ ಕಲಿಸಿಕೊಟ್ಟಿದ್ದಾನೆ.
"""ನೀವು ಜನರ ತಪ್ಪುಗಳನ್ನು ಕ್ಷಮಿಸದಿದ್ದರೆ, ನಿಮ್ಮ ಪರಲೋಕದ ತಂದೆಯೂ ಸಹ ನಿಮ್ಮ ಪಾಪಗಳನ್ನು ಕ್ಷಮಿಸುವುದಿಲ್ಲ" (ಮತ್ತಾ. 6:15). "ನಿಮ್ಮ ಪರಲೋಕದ ತಂದೆ" ಎಂದು ಹೇಳಿರುವುದರಿಂದ, ಈಗಾಗಲೇ ಅವರು ನಿಮ್ಮ ತಂದೆಯಾಗಿದ್ದಾರೆ ಮತ್ತು ನೀವು ದೇವರ ಮಕ್ಕಳಾಗಿದ್ದೀರಿ, ಎಂಬುದು ಅದರ ಅರ್ಥವಾಗಿದೆ. ಮೇಲಿನ ವಚನದಲ್ಲಿ ಯೇಸುವು, "ದೇವರು ನಿಮ್ಮನ್ನು ಕ್ಷಮಿಸುವುದಿಲ್ಲ" ಎಂದು ಹೇಳಲಿಲ್ಲ. ಆತನು "ದೇವರು" ಎಂಬ ಪದವನ್ನು ಬಳಸಿದ್ದರೆ, ಈ ವಚನವು ಅವಿಶ್ವಾಸಿಗಳಿಗಾಗಿ ಇದೆಯೆಂದು ಎನ್ನಬಹುದಾಗಿತ್ತು. ಆದರೆ "ಮತ್ತಾಯನು 6:15"ರಲ್ಲಿ, "ನಿಮ್ಮ ತಂದೆ" ಎಂದು ಹೇಳಿರುವುದನ್ನು ಗಮನಿಸಿರಿ. ದೇವರು ಅವಿಶ್ವಾಸಿಗಳ ತಂದೆಯಾಗಿದ್ದಾರೆಯೇ? ಇಲ್ಲ! ಆದರೆ ನೀನು ಹೊಸದಾಗಿ ಹುಟ್ಟಿದ ದೇವರ ಮಗನಾಗಿದ್ದರೆ, ಆಗ ದೇವರು ನಿನ್ನ ತಂದೆಯಾಗಿದ್ದಾರೆ. ಮತ್ತು ಇಲ್ಲಿ, "ನಿನ್ನ ತಂದೆಯು ನಿನ್ನ ಪಾಪಗಳನ್ನು ಕ್ಷಮಿಸುವುದಿಲ್ಲ," ಎಂದು ಬರೆಯಲ್ಪಟ್ಟಿದೆ. ಏಕೆ? ಏಕೆಂದರೆ ನೀನು ಬೇರೊಬ್ಬನನ್ನು ಕ್ಷಮಿಸಲಿಲ್ಲ.
""ನಿನ್ನ ಪಾಪಗಳು ಕ್ಷಮಿಸಲ್ಪಡದಿದ್ದರೆ, ನೀನು ದೇವರ ರಾಜ್ಯವನ್ನು ಪ್ರವೇಶಿಸುವದಕ್ಕೆ ಯಾವ ಮಾರ್ಗವೂ ಇರುವುದಿಲ್ಲ. ನಿನ್ನ ಮರಣದ ನಂತರ ನಿನ್ನ ಪಾಪಗಳು ಕ್ಷಮಿಸಲ್ಪಡುತ್ತವೆಯೆಂದು ನೀನು ಭಾವಿಸುತ್ತೀಯಾ? ನಾವು ಸತ್ತ ನಂತರ ನಮಗೆ ಮತ್ತೊಂದು ಅವಕಾಶ ಸಿಗುತ್ತದೆಯೇ? ನೀನು ಯಾರನ್ನಾದರೂ ಕ್ಷಮಿಸದೆ ಸತ್ತರೆ, ನಿತ್ಯಜೀವನದಲ್ಲಿ ನಿನ್ನ ಸ್ಥಿತಿ ಏನು? ನೀನು ನರಕಕ್ಕೆ ಹೋಗುತ್ತಿ ಎಂಬುದರಲ್ಲಿ ನನಗೆ ಯಾವುದೇ ಸಂದೇಹವಿಲ್ಲ, ಏಕೆಂದರೆ ಪಾಪ ಕ್ಷಮಾಪಣೆಯನ್ನು ಭೂಮಿಯ ಮೇಲೆ ಪಡೆಯದಿರುವಂತ ಯಾರೂ ಪರಲೋಕವನ್ನು ಪ್ರವೇಶಿಸಲಾರರು. ನಮ್ಮ ಮರಣದ ನಂತರ ನಮ್ಮ ಪಾಪಗಳು ಕ್ಷಮಿಸಲ್ಪಡುವ ಸಾಧ್ಯತೆಯಿಲ್ಲ - ಅವು ಈಗ, ಈ ಜೀವಮಾನದಲ್ಲೇ ಕ್ಷಮಿಸಲ್ಪಡಬೇಕು ಮತ್ತು ಅದಕ್ಕಾಗಿಯೇ ಇತರರಿಗೆ ಕರುಣೆ ತೋರಿಸುವುದು ಬಹಳ ಮುಖ್ಯವಾಗಿದೆ. ಅದು ನೀವು ಬೇರೆಯವರಿಗೆ ಮಾಡುವಂತ ಪುಣ್ಯಕಾರ್ಯವೆಂದು ಅಂದುಕೊಳ್ಳಬೇಡಿರಿ. ವಾಸ್ತವವಾಗಿ ಇದು ನೀವು ನಿಮಗೇ ತೋರಿಸುವ ದಯೆಯಾಗಿದೆ, ಏಕೆಂದರೆ ಇದರ ಮೂಲಕ ದೇವರು ನಿಮಗೆ ಕರುಣೆ ತೋರಿಸಲು ಸಾಧ್ಯವಾಗುತ್ತದೆ.
"