"ಸಮಾಧಾನಪಡಿಸುವವರು ಧನ್ಯರು, ಅವರು ದೇವರ ಮಗ/ಮಗಳೆಂದು ಕರೆಯಲ್ಪಡುವರು" (ಮತ್ತಾ. 5:9). ದೇವರ ಮಗನೆಂದು ನಮ್ಮನ್ನು ನಾವೇ ಕರೆದುಕೊಳ್ಳುವ ಹಕ್ಕು ನಮಗಿದೆಯೇ? ಇಲ್ಲಿ ಹೇಳಿರುವ ಪ್ರಕಾರ, ನಾವು ನಮ್ಮನ್ನೇ ದೇವರ ಮಗನು ಎಂದು ಹೇಳಿಕೊಳ್ಳಲು ಆಗುವುದಿಲ್ಲ; ಮೇಲಿನ ವಚನದಲ್ಲಿ "ಅವರು ದೇವರ ಮಗನು ಅಥವಾ ಮಗಳೆಂದು ಕರೆಯಲ್ಪಡುವರು"ಎಂದು ಹೇಳಲಾಗಿದೆ. ಇದರ ಅರ್ಥ, ನಾವು ಸಮಾಧಾನ ಉಂಟುಮಾಡುವಾಗ, ದೇವರು ನಮ್ಮನ್ನು ತನ್ನ ಪುತ್ರರೆಂದು ಕರೆಯುತ್ತಾರೆ. ನಾವು ಸಮಾಧಾನವನ್ನು ಕಾಪಾಡಿಕೊಳ್ಳುವವರು ಎಂಬ ಹೆಸರನ್ನು ಗಳಿಸಬೇಕು. ಸಮಾಧಾನವನ್ನು ಉಂಟುಮಾಡುವವನು ಎಂಬುದರ ವಿರುದ್ಧವಾದದ್ದು ಶಾಂತಿಭಂಗಮಾಡುವವನು ಎಂಬುದು. ನಿಮ್ಮ ಸಭೆಯಲ್ಲಿ ನೀವು ಎಂತಹ ಹೆಸರನ್ನು ಗಳಿಸಿದ್ದೀರಿ? "ನಾನು ಜಗಳಗಂಟನಲ್ಲ ಮತ್ತು ನಾನು ಸಮಾಧಾನ ಉಂಟುಮಾಡುವವನೂ ಅಲ್ಲ, ನಾನು ತಟಸ್ಥನು,"ಎಂದು ನೀವು ಹೇಳಬಹುದು. ಸರಿ, ಹಾಗಿದ್ದರೆ ನಿಮ್ಮನ್ನು ದೇವರ ಒಬ್ಬ ಮಗನೆಂದು ಕರೆಯಲು ಆಗುವುದಿಲ್ಲ! ಇಲ್ಲಿ ಹೇಳಿರುವ ಪ್ರಕಾರ, "ಸಮಾಧಾನಪಡಿಸುವವರು ಧನ್ಯರು, ಅವರು ದೇವರ ಮಗ/ಮಗಳು ಎಂದು ಕರೆಯಲ್ಪಡುವರು." ಸಮಾಧಾನ ಉಂಟುಮಾಡುವವರು ಯಾರೆಂದರೆ, ಯಾವಾಗಲೂ ಸಮಾಧಾನಕ್ಕಾಗಿ ಹಾತೊರೆಯುವವರು."
ಯೇಸುವು ಜನಿಸಿದಾಗ, ಪರಲೋಕದ ದೇವದೂತರುಗಳು ಹಾಡುತ್ತಾ, "ಮೇಲಣ ಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ಸಮಾಧಾನವನ್ನು ಹೊಂದಿರುವ ಮನುಷ್ಯರಿಗೆ ದೇವರು ಒಲಿಯುತ್ತಾರೆ,"ಎಂದು ದೇವರನ್ನು ಕೊಂಡಾಡಿದರು (ಲೂಕ. 2:14). ದೇವರು ಸಮಾಧಾನಕ್ಕಾಗಿ ಪ್ರಯತ್ನಿಸುವವರನ್ನು ಮೆಚ್ಚುತ್ತಾರೆ. ಭೂಲೋಕದಲ್ಲಿ ಹಲವಾರು ವಿಧವಾದ ಜಗಳಗಳು, ಹೋರಾಟ, ಅಸಮಾಧಾನ, ಗುಣಗುಟ್ಟುವಿಕೆ ಮತ್ತು ದೂಷಣೆಗಳು ತುಂಬಿವೆ. ಹಾಗಾಗಿ ನಾವು ಪರಲೋಕದ ಮನೋಭಾವದಿಂದ ಈ ಲೋಕವನ್ನು ದೃಷ್ಟಿಸುವಾಗ, ಅದು ಕತ್ತಲೆಯಿಂದ ತುಂಬಿರುವುದನ್ನು ಕಾಣುತ್ತೇವೆ. ಆದರೆ ಈ ಅಂಧಕಾರದ ನಡುವೆ ಕೆಲವು ಬೆಳಕಿನ ಚುಕ್ಕೆಗಳು ಕಾಣಿಸುತ್ತವೆ - ಅವರು ದೇವರ ಮಕ್ಕಳು, ದೇವರ ಪುತ್ರರು/ ಪುತ್ರಿಯರು; ಈ ಪ್ರಾಯದ ಮಕ್ಕಳ ಒಂದು ಲಕ್ಷಣ, ಅವರು ಸಮಾಧಾನಪಡಿಸುವವರು ಆಗಿದ್ದಾರೆ.
ನಾವು "ಫಿಲಿಪ್ಪಿಯವರಿಗೆ 2"ನೇ ಅಧ್ಯಾಯದಲ್ಲಿ ಇದೇ ವಿಷಯವನ್ನು ಮತ್ತೆ ಕಾಣುತ್ತೇವೆ. ನಾವು ಗುಣಗುಟ್ಟುವಿಕೆ, ವಿವಾದ ಮತ್ತು ದೂಷಣೆಗಳಿಲ್ಲದೆ ಎಲ್ಲವನ್ನೂ ಮಾಡಬೇಕೆಂದು (ಫಿಲಿ. 2:14) ಏಕೆ ಹೇಳಲಾಗಿದೆ? ನಾವು ನಮ್ಮ ಜೀವನದಲ್ಲಿ ಪ್ರತಿಯೊಂದು ಕೆಲಸವನ್ನೂ ಗೊಣಗದೆ, ದೂರಿಲ್ಲದೆ, ದೂಷಣೆಯಿಲ್ಲದೆ ಮಾಡಬೇಕಿದೆ - ಇದು ಅತ್ಯಂತ ಉನ್ನತ ಮಟ್ಟವಾಗಿದೆ. ಆದರೆ ಮುಂದಿನ ವಚನಗಳಲ್ಲಿ (ಫಿಲಿ. 2:15-16)ಹೇಳಿರುವಂತೆ, "ಅಡ್ಡದಾರಿ ಹಿಡಿದಿರುವ ದೇವಭಕ್ತಿಯಿಲ್ಲದ ಜನಾಂಗದ ಮಧ್ಯದಲ್ಲಿ ನಾವು ದೇವರ ನಿರ್ದೋಷಿ, ನಿಷ್ಕಳಂಕ ಮಕ್ಕಳೆಂದು ಸಾಬೀತು ಪಡಿಸುವುದಕ್ಕೆ"ಇದೊಂದೇ ಮಾರ್ಗವಾಗಿದೆ. ನಾವು ಈ ರೀತಿಯಾಗಿ ಬದುಕಿದರೆ ಮಾತ್ರ ಅಂಧಕಾರದಿಂದ ತುಂಬಿರುವ ಈ ಲೋಕದಲ್ಲಿ ದೇವರ ಜ್ಯೋತಿಗಳಾಗಿ ಕಾಣಿಸಿಕೊಳ್ಳಬಹುದು. ಅದು ಹೇಗೆ? ಈ ಲೋಕದ ಅಂಧಕಾರ ಎಂದರೇನು? ಅಂಧಕಾರವೆಂದರೆ ಗುಣಗುಟ್ಟುವಿಕೆ, ವಿವಾದ ಮತ್ತು ದೂಷಣೆಯ ಮನೋಭಾವ. ದೇವರ ಬೆಳಕು ಎಂದರೇನು? ಅದು ಗೊಣಗುವುದು ಅಥವಾ ತಪ್ಪು ಹುಡುಕುವುದರಿಂದ ದೂರವಿರುವ ಶಾಂತ ಮನೋಭಾವದ ಜನರು.
"ಒಬ್ಬ ಪುತ್ರನು ಸ್ವಾರ್ಥಕ್ಕೆ ಸಾಯುವುದನ್ನು ಮತ್ತು ಯೇಸುವಿನ ಹೆಜ್ಜೆಯ ಜಾಡಿನಲ್ಲಿ ನಡೆಯುವುದನ್ನು ಅರಿತಿರುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರೌಢ ವ್ಯಕ್ತಿಯಾಗಿದ್ದಾನೆ".
ಯೇಸುವು ತನ್ನ ಶಿಷ್ಯರನ್ನು ಇಸ್ರಾಯೇಲ್ಯರ ಬಳಿಗೆ ಕಳುಹಿಸಿದಾಗ, ಎಪ್ಪತ್ತು ಜನರನ್ನು ನೇಮಿಸಿ, ತಾನು ಹೋಗಲಿದ್ದ ಪ್ರತಿಯೊಂದು ಊರಿಗೆ ಅವರು ತನಗಿಂತ ಮುಂಚಿತವಾಗಿ ಇಬ್ಬಿಬ್ಬರಾಗಿ ಹೋಗುವಂತೆ ಕಳುಹಿಸಿದನು (ಲೂಕ. 10:1). ಅವರು ಯಾವುದೇ ಊರನ್ನು ಪ್ರವೇಶಿಸಿದಾಗ, ತಂಗುವುದಕ್ಕಾಗಿ ಒಬ್ಬ ಶಾಂತಿಯುತ ಮನುಷ್ಯನನ್ನು ಹುಡುಕಬೇಕೆಂದು ಆದೇಶಿಸಿದನು. ಆತನು ಅವರಿಗೆ, "ನೀವು ಒಂದು ಮನೆಯನ್ನು ಪ್ರವೇಶಿಸಿದಾಗ, ಈ ಮನೆಯಲ್ಲಿ ಶಾಂತಿ ನೆಲೆಸಲಿ ಎಂದು ಹೇಳಿರಿ, ಮತ್ತು ಆ ಮನೆಯಲ್ಲಿ ಶಾಂತನಾದ ಮನುಷ್ಯನಿದ್ದರೆ, ನಿಮ್ಮ ಶಾಂತಿಯು ಅವನ ಮೇಲೆ ನೆಲೆಸುವುದು. ಇಲ್ಲವಾದರೆ, ಅದು ನಿಮಗೆ ಹಿಂದಿರುಗುತ್ತದೆ. ಅದಲ್ಲದೆ ನೀವು ಶಾಂತ ಮನುಷ್ಯನನ್ನು ಕಂಡುಕೊಂಡರೆ, ಅದೇ ಮನೆಯಲ್ಲಿ ಉಳಿದುಕೊಳ್ಳಿರಿ - ಮನೆಯಿಂದ ಮನೆಗೆ ಹೋಗಬೇಡಿರಿ, ಏಕೆಂದರೆ ಒಂದು ಊರಿನಲ್ಲಿ ನೀವು ಅಂತಹ ಮತ್ತೊಂದು ಮನೆಯನ್ನು ಕಂಡುಕೊಳ್ಳುವುದು ಕಷ್ಟ,”ಎಂದು ಹೇಳಿದನು (ಲೂಕ. 10:5-6).
ಅವನ ಮಾತನ್ನು ಬೇರೊಂದು ರೀತಿಯಲ್ಲಿ ಹೇಳುವುದಾದರೆ, "ನೀವು ಬಹುಶಃ ಒಂದು ಊರಿನಲ್ಲಿ ಒಬ್ಬ ಶಾಂತಿಯುತ ವ್ಯಕ್ತಿಯು ನೆಲೆಸಿರುವ ಒಂದೇ ಒಂದು ಮನೆಯನ್ನು ಕಂಡುಕೊಳ್ಳಬಹುದು."ಇಲ್ಲವಾದರೆ ಮನೆಯಿಂದ ಮನೆಗೆ ಹೋಗಬೇಡಿರಿ ಎಂದು ಅವನು ಏಕೆ ಹೇಳಿದನು? ಅಂತಹ 10 ಅಥವಾ 20 ಅಥವಾ 30 ಅಥವಾ 100 ಮನೆಗಳು ಇರಬಹುದೇ? ಅಂತಹ ಮನೆಗಳು ಬಹಳ ಅಪರೂಪವೆಂದು ಯೇಸುವಿಗೆ ತಿಳಿದಿತ್ತು. ಆದಾಗ್ಯೂ ನಿಖರವಾಗಿ ಅದೇ ರೀತಿಯ ಮನೆಗಳಲ್ಲಿ ದೇವರು ವಾಸಿಸುತ್ತಾರೆ.
ನಿಮ್ಮ ಮನೆಯು ಸಮಾಧಾನದ ಮನೆಯೇ? ಗಂಡನಾದ ನಿಮ್ಮನ್ನು ಒಬ್ಬ ಸಮಾಧಾನದ ವ್ಯಕ್ತಿಯೆಂದು ಕರೆಯಬಹುದೇ? ಯಾವಾಗಲೂ ಜಗಳ ಶುರುವಾಗುವುದಕ್ಕೆ ಇಬ್ಬರು ವ್ಯಕ್ತಿಗಳು ಇರಬೇಕು. ಒಬ್ಬನು ಜಗಳಕ್ಕೆ ಸಿದ್ಧನಿಲ್ಲವಾದರೆ ಆಗ ಜಗಳ ಇರುವುದಿಲ್ಲ. ನಿಮ್ಮ ಎರಡು ಕೈಗಳನ್ನು ಹೊಡೆದಾಗ ಶಬ್ದ ಉಂಟಾಗುತ್ತದೆ, ಆದರೆ ಒಂದೇ ಕೈಯಿಂದ ಚಪ್ಪಾಳೆ ತಟ್ಟಿದರೆ ಶಬ್ದ ಬರುವುದಿಲ್ಲ. ಒಂದು ಕೈಯು ಚಪ್ಪಾಳೆ ತಟ್ಟಲು ನಿರಾಕರಿಸಿದರೆ ಮತ್ತೊಂದು ಕೈ ಶಬ್ದ ಮಾಡಲಾರದು; ಹಾಗೆಯೇ ಜಗಳಕ್ಕೂ ಇಬ್ಬರು ಬೇಕಾಗುತ್ತಾರೆ. ಗಂಡನಾಗಲೀ ಅಥವಾ ಹೆಂಡತಿಯಾಗಲೀ ಜಗಳಕ್ಕೆ ಇಳಿಯಲು ನಿರಾಕರಿಸಿ, ತನ್ನ ಸ್ವಾರ್ಥಕ್ಕೆ ಸತ್ತರೆ ಯಾವುದೇ ಜಗಳ ತಲೆದೋರುವುದಿಲ್ಲ. ಅದಕ್ಕೆ ಬದಲಾಗಿ ಸಮಾಧಾನ ಇರುತ್ತದೆ. ಹಾಗಾಗಿ ನನ್ನ ಸುತ್ತಲೂ ಶಾಂತಿ ಇಲ್ಲವಾದರೆ - ಅದು ನನ್ನ ಕ್ರೈಸ್ತಸಭೆಯಲ್ಲಿ, ಮನೆಯಲ್ಲಿ ಅಥವಾ ಬೇರೆಲ್ಲಾದರೂ ಇರಲಿ - ನಾನು ಎಂದಿಗೂ ಇನ್ನೊಬ್ಬ ವ್ಯಕ್ತಿಯನ್ನು ದೂಷಿಸಬಾರದು.
"ನನ್ನ ಹೆಂಡತಿ ಸಮಾಧಾನ ಕೆಡಿಸುತ್ತಾಳೆ," ಅಥವಾ "ನನ್ನ ಗಂಡನು ಸಮಾಧಾನ ಕೆಡಿಸುತ್ತಾನೆ," ಎಂದು ಹೇಳಲು ಆಗುವುದಿಲ್ಲ. ನೀವಿಬ್ಬರೂ ವಿವಾದಕ್ಕೆ ಇಳಿದು ಜಗಳಾಡಲು ಸಮ್ಮತಿಸಿದ್ದರಿಂದ ಸಮಾಧಾನ ಇಲ್ಲವಾಗಿದೆ. ಒಂದು ವೇಳೆ ಒಂದು ಕೈಯು ಇನ್ನೊಂದು ಕೈಯನ್ನು ತಟ್ಟಲು ಸಮ್ಮತಿಸದಿದ್ದರೆ, ಆಗ ಚಪ್ಪಾಳೆ ಇರಲಾರದು. ಅದೇ ರೀತಿ ಒಬ್ಬರೊಂದಿಗೆ ಭಿನ್ನಾಭಿಪ್ರಾಯ ತಲೆದೋರಿದಾಗ ನೀವು ಸಮಾಧಾನಕ್ಕಾಗಿ ಪ್ರಯತ್ನಿಸುವುದಾದರೆ, ನಿಮ್ಮ ಸ್ವಾರ್ಥಕ್ಕೆ ಸಾಯುವಿರಿ ಮತ್ತು ಆ ಮತ್ತೊಬ್ಬ ವ್ಯಕ್ತಿಯು ಎಷ್ಟೇ ಉದ್ರೇಕಗೊಂಡರೂ ಸುಮ್ಮನಿರುತ್ತೀರಿ. ಆಗ ಅಲ್ಲಿ ಸಮಾಧಾನವಿರುತ್ತದೆ.
ದೇವರು ಸರ್ವಶಕ್ತನು ಮತ್ತು ನನ್ನ ಶಕ್ತಿಮೀರಿದ ಶೋಧನೆಯನ್ನು ಆತನು ಎಂದಿಗೂ ನನಗೆ ಬರಗೊಡಿಸುವುದಿಲ್ಲವೆಂದು ನಾನು ನಂಬಿದರೆ, ನಾನು ನನ್ನ ಸ್ವಾರ್ಥಕ್ಕೆ ಸಾಯಲು ಒಪ್ಪಿಕೊಳ್ಳುತ್ತೇನೆ. ಅನೇಕ ಜನರ ಅಭಿಪ್ರಾಯ ಏನೆಂದರೆ, ನೀವು ಈ ಸಮಾಧಾನದ ಮಾರ್ಗದಲ್ಲಿ ಹೋಗುವುದಾದರೆ, ಜನರು ನಿಮ್ಮ ಒಳ್ಳೆಯತನದ ದುರುಪಯೋಗ ಮಾಡುತ್ತಾರೆ; ಅವರು ನಿಮ್ಮನ್ನು ತಮ್ಮ ಕಾಲುಗಳ ಕೆಳಗೆ ಹಾಕಿ ತುಳಿದುಬಿಡುತ್ತಾರೆ. ಇಲ್ಲ, ಹಾಗಾಗುವುದಿಲ್ಲ. ನೀವು 1 ಕೊರಿಂಥದವರಿಗೆ 10:13'ನ್ನು ನಂಬುವಿರಾದರೆ, ಆ ವಾಕ್ಯದಲ್ಲಿ ಹೇಳಿರುವಂತೆ, "ದೇವರು ಎಂದಿಗೂ ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸುವುದಿಲ್ಲ," ಮತ್ತು ಜನರು ನಿಮ್ಮನ್ನು ದುರುಪಯೋಗಪಡಿಸಲು ದೇವರು ಸಮ್ಮತಿಸುವುದಿಲ್ಲವೆಂದು ನಿಮಗೆ ಮನದಟ್ಟಾಗುತ್ತದೆ, ಮತ್ತು ನೀವು ಸಂಪೂರ್ಣ ಆತ್ಮವಿಶ್ವಾಸದಿಂದ ಸಮಾಧಾನದ ಮಾರ್ಗದಲ್ಲಿ ನಡೆಯುತ್ತೀರಿ. ಜ್ಞಾನೋಕ್ತಿಗಳಲ್ಲಿ ಹೇಳುವಂತೆ, "ಕರ್ತನ ನಾಮವು ಬಲವಾದ ಬುರುಜು. ನೀತಿವಂತರು ಅದರೊಳಕ್ಕೆ ಓಡಿಹೋಗಿ ಭದ್ರವಾಗಿರುವರು" (ಜ್ಞಾನೋಕ್ತಿಗಳು 18:10), ಎಂಬುದನ್ನು ನೀವು ಕಂಡುಕೊಳ್ಳುವಿರಿ.
ವಿವಾದ ಅಥವಾ ತಪ್ಪು ತಿಳುವಳಿಕೆಯ ಸನ್ನಿವೇಶದಲ್ಲಿ, ನೀವು ಕರ್ತನಾದ ಯೇಸುವಿನ ನಾಮದಲ್ಲಿ ಆಶ್ರಯವನ್ನು ಕಂಡುಕೊಳ್ಳಿರಿ ಮತ್ತು ಆಗ "ಜ್ಞಾನೋಕ್ತಿಗಳು 16:7"ರ ವಚನವು ನೆರವೇರುವುದನ್ನು ನೀವು ಕಂಡುಕೊಳ್ಳುವಿರಿ, "ಕರ್ತನು ಒಬ್ಬನ ನಡತೆಗೆ ಮೆಚ್ಚಿದರೆ, ನೀವು ಬಂದು ಕರ್ತನನ್ನು ಆಶ್ರಯಿಸಿರಿ, ಆತನು ಶತ್ರುಗಳನ್ನೂ ಮಿತ್ರರನ್ನಾಗಿ ಮಾಡುವನು." ದೇವರ ಕಾರ್ಯಗಳು ಅದ್ಭುತಕರವಾಗಿವೆ! ನಾನು ಇದನ್ನು ಅನುಭವಿಸಿ ನೋಡಿದ್ದೇನೆ. ನೀವು ದೇವರನ್ನು ಮೆಚ್ಚಿಸಲು ಪ್ರಯತ್ನಿಸಿದರೆ, ನೀವೂ ಸಹ ನಿಮ್ಮ ಶತ್ರುಗಳು ಶಾಂತಗೊಂಡು ನಿಮಗೆ ಅಧೀನರಾಗುವುದನ್ನು ಅನುಭವಿಸುತ್ತೀರಿ.
"ಸಮಾಧಾನಪಡಿಸುವವರು ಧನ್ಯರು, ಅವರು ದೇವರ ಪುತ್ರರೂ ಪುತ್ರಿಯರೂ ಅನ್ನಿಸಿಕೊಳ್ಳುವರು." ದೇವರ ಪುತ್ರರು ಅಥವಾ ಪುತ್ರಿಯರು ಎಂಬುದು ದೇವರ ಮಕ್ಕಳು ಎಂಬುದಕ್ಕೆ ವಿಭಿನ್ನವಾದ ಅರ್ಥವನ್ನು ಹೊಂದಿದೆ. ದೇವರ ಮಕ್ಕಳು ಎಂದರೆ ಶಿಶುಗಳು ಅಥವಾ ಚಿಕ್ಕ ಮಕ್ಕಳು; ಒಬ್ಬ ಪುತ್ರನು ಸ್ವಾರ್ಥಕ್ಕೆ ಸಾಯುವುದನ್ನು ಮತ್ತು ಯೇಸುವಿನ ಹೆಜ್ಜೆಯ ಜಾಡಿನಲ್ಲಿ ನಡೆಯುವುದನ್ನು ಅರಿತಿರುವ ಒಬ್ಬ ಜವಾಬ್ದಾರಿಯುತ ಮತ್ತು ಪ್ರೌಢ ವ್ಯಕ್ತಿಯಾಗಿದ್ದಾನೆ.