ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಮನೆ ಸಭೆ
WFTW Body: 

ಕ್ರೈಸ್ತ ಸಭೆಯ ಮೊದಲಿನ 300 ವರ್ಷಗಳಲ್ಲಿ, ಹೆಚ್ಚುಕಡಿಮೆ ಪ್ರತಿಯೊಬ್ಬ ಕ್ರೈಸ್ತ ವಿಶ್ವಾಸಿಯೂ ಕ್ರಿಸ್ತ-ವಿರೋಧಿ ಅಧಿಪತಿಗಳ ಅಡಿಯಲ್ಲಿ ಪದೇಪದೇ ಹಿಂಸೆಗೆ ಗುರಿಯಾಗುತ್ತಾ ಜೀವಿಸಿದರು ಮತ್ತು ಅನೇಕ ಕ್ರೈಸ್ತರು ಕೊಲ್ಲಲ್ಪಟ್ಟರು. ದೇವರು ತನ್ನ ಅಪಾರ ಜ್ಞಾನದ ಮೂಲಕ, ತನ್ನ ಮಹಿಮೆಗಾಗಿ ತನ್ನ ಮಕ್ಕಳನ್ನು ಜನರು ಹಿಂಸಿಸುವಂತೆ ಅನುಮತಿಸಿದರು. ಈ ದಿನವೂ ಸಹ, ದೇವರ ಅತಿ ನಿಷ್ಠಾವಂತ ಮಕ್ಕಳಲ್ಲಿ ಕೆಲವರು ತಮ್ಮನ್ನು ಹಿಂಸೆಗೆ ಒಳಪಡಿಸುವ ಸರ್ಕಾರದ ಅಡಿಯಲ್ಲಿ ಜೀವಿಸುವುದನ್ನು ದೇವರು ಅನುಮತಿಸಿದ್ದಾರೆ. ಕ್ರೈಸ್ತಸಭೆಯು ಹಿಂಸೆ ಮತ್ತು ಕಿರುಕುಳದ ನಡುವೆ ಯಾವಾಗಲೂ ಅತಿ ಉತ್ತಮವಾಗಿ ಅಭಿವೃದ್ಧಿಯಾಗಿದೆ. ಆದರೆ ಸಭೆಯು ನೆಮ್ಮದಿ ಹಾಗೂ ಆರಾಮದಾಯಕ, ಭೌತಿಕ ಅಭಿವೃದ್ಧಿಗಳನ್ನು ಅನುಭವಿಸುವಾಗ, ಹೆಚ್ಚಿನ ಪ್ರಕರಣಗಳಲ್ಲಿ ಸಭೆಯು ಲೌಕಿಕವಾಗಿರುವುದು ಕಂಡುಬರುತ್ತದೆ. ನಾವು ಈ ಪ್ರಪಂಚದಲ್ಲಿ ಇರುವಷ್ಟು ಸಮಯ ಸಂಕಟ, ಹಿಂಸೆ ಮತ್ತು ಶೋಧನೆಗಳನ್ನು ಎದುರಿಸುತ್ತೇವೆ. ಹಾಗಾಗಿ ನಾವು ಯುಗದ ಸಮಾಪ್ತಿಯನ್ನು ಸಮೀಪಿಸುತ್ತಿರುವಾಗ - ನಾವು ನಮ್ಮ ಕಛೇರಿಗಳಲ್ಲಿ ಅಥವಾ ನಮ್ಮ ಖಾಸಗಿ ಜೀವಿತದಲ್ಲಿ - ಆರಾಮದಾಯಕ ಜೀವಿತವನ್ನು ನಿರೀಕ್ಷಿಸಬಾರದು.

ಮುಂದೆ ಹಣಕಾಸಿನ ತೊಂದರೆಗಳು ಬರುತ್ತವೆ. ಹಾಗಾಗಿ ನಾವು ಈಗಲೇ ಸರಳ ಜೀವನ ಜೀವಿಸುವುದನ್ನು ರೂಢಿ ಮಾಡಿಕೊಳ್ಳಬೇಕು. ಐಷಾರಾಮಿಯಲ್ಲಿ ಜೀವಿಸುವವರು ಮುಂದಿನ ದಿನಗಳಲ್ಲಿ ನಡೆಯಲಿರುವ ಸಂಗತಿಗಳಿಂದ ಬಹಳ ತೊಂದರೆಗೆ ಒಳಗಾಗುತ್ತಾರೆ. ಭವಿಷ್ಯಕ್ಕಾಗಿ ಹಣದ ಉಳಿತಾಯ ಮಾಡುವ ಜ್ಞಾನ ನಮ್ಮಲ್ಲಿರಬೇಕು ಮತ್ತು ಆಗ ನಾವು ಹಣಕ್ಕಾಗಿ ಮತ್ತೊಬ್ಬರ ಮೇಲೆ ಅವಲಂಬಿತರಾಗಬೇಕಿಲ್ಲ. ಆದರೆ ನಾವು ನಮ್ಮ ಭರವಸೆಯನ್ನು ಕೂಡಿಟ್ಟ ಉಳಿತಾಯದ ಮೇಲೆ ಇರಿಸದೆ, ಕರ್ತನಲ್ಲಿ ಮಾತ್ರ ಇರಿಸಬೇಕು. ದೇವರು ಅತ್ಯಾಸಕ್ತಿವುಳ್ಳಂತ ದೇವರಾಗಿದ್ದಾರೆ ಮತ್ತು ನಾವು ಯಾವುದೇ ಸೃಷ್ಟಿಸಲ್ಪಟ್ಟ ವಸ್ತುವಿನ ಮೇಲೆ ಭರವಸೆ ಇಡುವುದನ್ನು ಅವರು ಎಂದಿಗೂ ಅನುಮತಿಸುವುದಿಲ್ಲ. ದೇವರು ಈ ಲೋಕದ ಹಣಕಾಸಿನ ವ್ಯವಸ್ಥೆಯನ್ನು ಕದಲಿಸಲಿದ್ದಾರೆ, ಏಕೆಂದರೆ ಆಗ ಸೃಷ್ಟಿಯ ವಸ್ತುಗಳ ಮೇಲೆ ಭರವಸೆಯಿಡುವ ಜನರು ಕದಲಿಸಲ್ಪಡುತ್ತಾರೆ. ಯೇಸುವು ಹೇಳಿದಂತೆ, ಅಣ್ಣನು ತಮ್ಮನ ವಿರುದ್ಧ ತಿರುಗಿಬೀಳುವುದನ್ನು ಮತ್ತು ನಮ್ಮ ಸ್ವಂತ ಜನರು ನಮ್ಮ ವೈರಿಗಳಾಗುವುದನ್ನು ನಾವು ನೋಡಲಿದ್ದೇವೆ (ಮತ್ತಾ. 10:21).

ಕಛೇರಿಗಳಲ್ಲಿ ಮತ್ತು ಕಾರ್ಖಾನೆಗಳಲ್ಲಿ ವಿಶ್ವಾಸಿಗಳು ತೀವ್ರ ಸಂಕಟಕ್ಕೆ ಒಳಗಾಗುವರು. ನಮ್ಮನ್ನು ಇವೆಲ್ಲಾ ಸಂಗತಿಗಳು ಶುದ್ಧೀಕರಿಸಿ ಉತ್ತಮ ಕ್ರೈಸ್ತರನ್ನಾಗಿ ಮಾಡುತ್ತವೆ. 1 ಪೇತ್ರನು 3:13' ರಲ್ಲಿ ಹೇಳಿರುವಂತೆ, ನಾವು ಯಾವಾಗಲೂ ಒಳ್ಳೆಯದನ್ನೇ ಮಾಡುವುದರಲ್ಲಿ ಆಸಕ್ತರಾಗಿದ್ದರೆ, ನಮಗೆ ಯಾರೂ ಕೇಡು ಮಾಡಲಾರರು. ಹಾಗಾಗಿ, ನಾವು ದೇವರ ಕೃಪೆಯ ಮೂಲಕ, ಪ್ರತಿಯೊಬ್ಬ ಮನುಷ್ಯನಿಗೆ ಒಳ್ಳೆಯದನ್ನು ಮಾಡುವ ದೃಢ ನಿರ್ಧಾರವನ್ನು ಮಾಡಬೇಕು. ನಾವು ನಮ್ಮನ್ನು ದ್ವೇಷಿಸುವವರನ್ನು ಪ್ರೀತಿಸಬೇಕು, ನಮ್ಮನ್ನು ಶಪಿಸುವವರನ್ನು ಆಶೀರ್ವದಿಸಬೇಕು ಮತ್ತು ನಮ್ಮನ್ನು ಹಿಂಸಿಸುವವರು ಕ್ಷಮಿಸಲ್ಪಡಲಿಕ್ಕಾಗಿ ಪ್ರಾರ್ಥಿಸಬೇಕು. ಆಗ ಯಾರೂ ನಮಗೆ ಕೇಡನ್ನು ಮಾಡಲು ಸಾಧ್ಯವಾಗುವುದಿಲ್ಲ. ಸೈತಾನ ಮತ್ತು ಆತನ ಪ್ರತಿನಿಧಿಗಳು ನಮಗೆ ಮೋಸ ಮಾಡಬಹುದು, ತೊಂದರೆ ಕೊಡಬಹುದು, ನಮ್ಮನ್ನು ಪೀಡಿಸಬಹುದು, ಸುಲಿಗೆ ಮಾಡಬಹುದು, ಗಾಯಗೊಳಿಸಬಹುದು, ಸೆರೆಮನೆಗೆ ಹಾಕಬಹುದು ಮತ್ತು ನಮ್ಮ ದೇಹಗಳನ್ನು ಕೊಲ್ಲಲೂ ಬಹುದು. ಆದರೆ ಅವರು ಆತ್ಮಿಕವಾಗಿ ನಮಗೆ ಯಾವ ಹಾನಿಯನ್ನೂ ಉಂಟುಮಾಡಲು ಎಂದಿಗೂ ಸಾಧ್ಯವಾಗುವುದಿಲ್ಲ.

"ದೇವರು ಅತ್ಯಾಸಕ್ತಿವುಳ್ಳಂತ ದೇವರಾಗಿದ್ದಾರೆ ಮತ್ತು ನಾವು ಯಾವುದೇ ಸೃಷ್ಟಿಸಲ್ಪಟ್ಟ ವಸ್ತುವಿನ ಮೇಲೆ ಭರವಸೆ ಇಡುವುದನ್ನು ಅವರು ಎಂದಿಗೂ ಅನುಮತಿಸುವುದಿಲ್ಲ."

ಮುಂದೆ ಬರಲಿರುವ ದಿನಗಳಲ್ಲಿ ಜಗತ್ತಿನಾದ್ಯಂತ ಕ್ರೈಸ್ತರು ತಮ್ಮ ನಂಬಿಕೆಗಾಗಿ ಹಿಂಸೆ ಅನುಭವಿಸಲು ನಾವು ಅವರನ್ನು ಸಿದ್ಧಗೊಳಿಸಬೇಕಾಗಿದೆ. ಇಂತಹ ದಿನಗಳಿಗಾಗಿ ನಮ್ಮ ಕರ್ತರು ನಮಗೆ ನೀಡಿರುವ ನಾಲ್ಕು ಆಜ್ಞೆಗಳನ್ನು ನೋಡೋಣ:

1. "ಸರ್ಪಗಳಂತೆ ಜಾಣರೂ, ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ"(ಮತ್ತಾ. 10:16).

ನಾವು ಸಾಕ್ಷಿಕೊಡುವಾಗ ಜಾಣರಾಗಿರಬೇಕು, ಅದು ಅವಿವೇಕಿಗಳ ಸಾಕ್ಷಿ ಆಗಿರಬಾರದು. ನಮ್ಮ ನೆರೆಹೊರೆಯಲ್ಲಿ ಮತ್ತು ನಮ್ಮ ಕೆಲಸದ ಸ್ಥಳದಲ್ಲಿ ನಮ್ಮ ಜೀವಿತವು ಕ್ರಿಸ್ತನಿಗೆ ಸಾಕ್ಷಿಯಾಗಿರಬೇಕು. ನಾವು ಕರ್ತನ ಬಗ್ಗೆ ಸಾಕ್ಷಿ ನೀಡುವಾಗ, ನಾವು ಒಬ್ಬ ವ್ಯಕ್ತಿಯ - ಅಂದರೆ, ಯೇಸು ಕ್ರಿಸ್ತನ ಬಗ್ಗೆ ಮಾತಾನಾಡುವವರಾಗಿರಬೇಕು ಮತ್ತು ಕ್ರೈಸ್ತಧರ್ಮವು ಬೇರೆ ಧರ್ಮಗಳಿಗಿಂತ ಶ್ರೇಷ್ಠವಾದದ್ದೆಂದು ನಾವು ಹೇಳುತ್ತಿಲ್ಲ, ಎಂಬುದು ಸ್ಪಷ್ಟವಾಗಿರಬೇಕು. ಯೇಸುವು ಮೇಲಕ್ಕೆ ಎತ್ತಲ್ಪಟ್ಟರೆ, ಆತನು ಎಲ್ಲಾ ಜನರನ್ನು ತನ್ನ ಬಳಿಗೆ ಸೆಳೆಯುವನು (ಯೋಹಾ. 12:32). ಇನ್ನೊಂದು ವಿಷಯವೇನೆಂದರೆ, ಕ್ರೈಸ್ತತ್ವದಲ್ಲಿ ಆಸಕ್ತಿ ಇರುವಂತೆ ನಟಿಸುವಂತ ಅನ್ಯಜನರೊಳಗಿನ ಗುಪ್ತಚರರ ಬಗ್ಗೆ ನಾವು ಸೂಕ್ಷ್ಮವಾದ ವಿವೇಚನೆಯನ್ನು ಹೊಂದಿರಬೇಕು, ಯಾಕೆಂದರೆ ಅವರ ನಿಜವಾದ ಉದ್ದೇಶ ನಾವು ಆಡುವ ಯಾವುದೋ ಮಾತನ್ನು ನಮ್ಮ ವಿರುದ್ಧವಾಗಿ ಉಪಯೋಗಿಸಿಕೊಂಡು, "ಬಲಾತ್ಕಾರದಿಂದ ಮತಾಂತರ ಮಾಡಲು ಪ್ರಯತ್ನಿಸುತ್ತಿದ್ದಾರೆ," ಎಂಬ ಆಪಾದನೆಯ ಮೂಲಕ ನಮ್ಮನ್ನು ನ್ಯಾಯಾಲಯಕ್ಕೆ ಎಳೆಯುವುದು ಆಗಿರುತ್ತದೆ. ಹಾಗಾಗಿ ನಾವು - ಯೇಸುವಿನ ಹಾಗೆ - ಜಾಣರೂ, ಪ್ರೀತಿಯುಳ್ಳವರೂ ಆಗಿರಬೇಕು:

(ಅ) "ಯೇಸುವು ಎಲ್ಲರನ್ನೂ ಬಲ್ಲವನಾದ್ದರಿಂದ ಅವರಿಗೆ ವಶವಾಗಲಿಲ್ಲ. ಆತನು ಪ್ರತಿಯೊಬ್ಬನ ಒಳಗಿನ ಯೋಚನೆಯನ್ನು ತಿಳಿದವನಾಗಿದ್ದನು" (ಯೋಹಾ. 2:24-25). ಪ್ರತಿಯೊಬ್ಬನನ್ನು ವಿವೇಚಿಸಿ ನೋಡಿರಿ.
(ಆ) "ಯೆಹೂದ್ಯರು ಯೇಸುವನ್ನು ಕೊಲ್ಲುವ ಪ್ರಯತ್ನದಲ್ಲಿ ಇದ್ದುದರಿಂದ, ಆತನಿಗೆ ಯೂದಾಯದಲ್ಲಿ ಸಂಚಾರಮಾಡುವ ಮನಸ್ಸಿರಲಿಲ್ಲ"(ಯೋಹಾ. 7:1). ನಾವು ಅನಾವಶ್ಯಕವಾದ ಅಪಾಯದಿಂದ ದೂರವಿರಬೇಕು.
(ಇ) "ನಿಮ್ಮನ್ನು ಹಿಂಸೆ ಪಡಿಸುವವರಿಗೋಸ್ಕರ ದೇವರನ್ನು ಪ್ರಾರ್ಥಿಸಿರಿ"(ಮತ್ತಾ. 5:44). ನೀವು ಒಳ್ಳೆಯವರಾಗಿರಿ - ಅನ್ಯರ ಕೆಟ್ಟ ನಡವಳಿಕೆಯನ್ನು ನೋಡಿ ನೀವೂ ಕೆಟ್ಟ ರೀತಿಯಲ್ಲಿ ನಡೆಯಬೇಡಿರಿ.

2. "ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದ ಬದುಕಿರಿ"(ಮತ್ತಾ. 4:4).

ಹಿಂಸೆಯ ಸಮಯದಲ್ಲಿ ಅತಿ ಮುಖ್ಯವಾದ ಅವಶ್ಯಕತೆ ಏನೆಂದರೆ, ದೇವರು ನಮ್ಮ ಹೃದಯಗಳಿಗೆ ಹೇಳುತ್ತಿರುವ ಮಾತನ್ನು ಸೂಕ್ಷ್ಮವಾಗಿ ಗಮನಿಸುವುದು. ನಾವು ದಿನವಿಡೀ ದೇವರ ಮಾತನ್ನು ಕೇಳಿಸಿಕೊಳ್ಳುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಇದರ ನಂತರ, ನಾವು ದೇವರಿಂದ ಪಡೆದ ಮಾತನ್ನು ನಂಬಿ, ಅದಕ್ಕೆ ವಿಧೇಯರಾಗಿರಬೇಕು. ಇಲ್ಲವಾದಲ್ಲಿ, ದೇವರ ಮಾತಿಗೆ ಯಾವುದೇ ಬೆಲೆ ಇರುವುದಿಲ್ಲ. ಹಾಗಾಗಿ ನಾವು ದೇವರ ವಾಕ್ಯವನ್ನು (ವಿಶೇಷವಾಗಿ ಹೊಸ ಒಡಂಬಡಿಕೆಯನ್ನು) ಹೆಚ್ಚು ಹೆಚ್ಚಾಗಿ ಧ್ಯಾನಿಸಬೇಕು - ಆಗ ಮಾತ್ರವೇ ನಾವು ದೇವರ ಸ್ವರವನ್ನು ಗುರುತಿಸುವ ವಿವೇಚನೆಯನ್ನು ಪಡೆಯುತ್ತೇವೆ. ಇದರ ನಂತರ, ನಾವು ಅದನ್ನು "ನಂಬಬೇಕು ಮತ್ತು ಅದಕ್ಕೆ ವಿಧೇಯರಾಗಬೇಕು".

3."ನಾನು ನಿಮ್ಮನ್ನು ಪ್ರೀತಿಸಿದ ಮೇರೆಗೆ ನೀವು ಸಹ ಒಬ್ಬರನ್ನೊಬ್ಬರು ಪ್ರೀತಿಸಬೇಕು. ನಿಮ್ಮೊಳಗೆ ಒಬ್ಬರ ಮೇಲೊಬ್ಬರಿಗೆ ಪ್ರೀತಿಯಿದ್ದರೆ, ಎಲ್ಲರೂ ನಿಮ್ಮನ್ನು ನನ್ನ ಶಿಷ್ಯರೆಂದು ತಿಳುಕೊಳ್ಳುವರು"(ಯೋಹಾ. 13:34-35).

ನಮ್ಮ ಮನೆಯಲ್ಲಿ ಮತ್ತು ನಮ್ಮ ಸಭೆಗಳಲ್ಲಿ, ನಾವು ಒಬ್ಬರನ್ನೊಬ್ಬರು ನ್ಯಾಯತೀರ್ಪು ಮಾಡುವುದನ್ನು, ಇನ್ನೊಬ್ಬರ ವಿರುದ್ಧ ಚಾಡಿ ಹೇಳುವುದನ್ನು, ನಮ್ಮ ನಡುವಿನ ಜಗಳಗಳನ್ನೂ ಎಲ್ಲಾ ರೀತಿಯ ಸಂಶಯಗಳನ್ನೂ ಬಿಟ್ಟುಬಿಡಬೇಕು. ವಿವೇಚನೆಯು ಒಂದು ದೈವಿಕ ಗುಣವಾಗಿದೆ, ಆದರೆ ಇನ್ನೊಬ್ಬರನ್ನು ಸಂಶಯಿಸುವುದು ಸೈತಾನನ ಗುಣವಾಗಿದೆ. ಈ ದಿನ ನಮ್ಮ ಜೀವಿತಗಳಲ್ಲಿ ಪಾಪವನ್ನು ಮತ್ತು ಸೈತಾನನನ್ನು ವಿರೋಧಿಸಿ ಹೋರಾಡುವ ಸಮಯವಾಗಿದೆ. ಈ ದಿನ ನಾವು ನಮ್ಮ ಬಾಳಸಂಗಾತಿಯನ್ನು ಮತ್ತು ನಮ್ಮ ಸಹ-ವಿಶ್ವಾಸಿಗಳನ್ನು ಪ್ರೀತಿಸಲು ಹೆಚ್ಚಾಗಿ ಶ್ರಮಿಸುವ ಸಮಯವಾಗಿದೆ.

4."ನಿಮಗೆ ಲೋಕದಲ್ಲಿ ಸಂಕಟ ಉಂಟು; ಆದರೆ ಧೈರ್ಯಗೊಳ್ಳಿರಿ, ನಾನು ಲೋಕವನ್ನು ಜಯಿಸಿದ್ದೇನೆ"(ಯೋಹಾ. 16:33).

ದೇವರು ಸಿಂಹಾಸನದ ಮೇಲೆ ಕೂತಿದ್ದಾರೆ ಮತ್ತು ಅವರು ತಮ್ಮ ಸ್ವಂತ ಜನರನ್ನು ಎಂದಿಗೂ ಕೈಬಿಡುವುದಿಲ್ಲ. ಸೈತಾನನು 2000 ವರ್ಷಗಳ ಹಿಂದೆ ಸೋಲಿಸಲ್ಪಟ್ಟಿದ್ದಾನೆ. ನಾವು ದೇವರ ಕಣ್ಣುಗುಡ್ಡೆಗಳಂತೆ ಇದ್ದೇವೆ, ಹಾಗಾಗಿ ಅವರು ನಮ್ಮ ಸುತ್ತಲು ಅಗ್ನಿಯ ಗೋಡೆಯಾಗಿರುತ್ತಾರೆ (ಜೆಕರ್ಯನು 2:5,8). ನಮ್ಮನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು (ಯೆಶಾಯನು 54:17). ಹಾಗಾಗಿ ನಾವು, "ನಮಗಿರುವುದರಲ್ಲಿ ತೃಪ್ತರಾಗಿರೋಣ, ಏಕೆಂದರೆ ಸ್ವತಃ ದೇವರು ಹೇಳಿರುವ ಮಾತು ಏನೆಂದರೆ, ನಾನು ನಿನ್ನನ್ನು ಎಂದಿಗೂ ಕೈಬಿಡುವುದಿಲ್ಲ, ಎಂದಿಗೂ ತೊರೆಯುವುದಿಲ್ಲ. ಹಾಗಾಗಿ ನಾವು ಧೈರ್ಯವಾಗಿ ಹೇಳಬಹುದಾದ ಮಾತು, ಕರ್ತನು ನನ್ನ ಸಹಾಯಕನು. ನಾನು ಭಯಪಡೆನು. ಮನುಷ್ಯನು ನನಗೆ ಏನು ಮಾಡಾನು?"(ಇಬ್ರಿಯರಿಗೆ 13:5,6).

ಹಾಗಾಗಿ ನಾವು ಸಹ ಪ್ರಾರ್ಥಿಸೋಣ, "ಕರ್ತನಾದ ಯೇಸುವೇ, ಬೇಗ ಬಾ"(ಪ್ರಕಟನೆ 22:20).