WFTW Body: 

ಎಲ್ಲಾ ಪ್ರವಾದಿಗಳ ಭಾರವು ಪವಿತ್ರತೆಯಾಗಿತ್ತು: ನಿಮ್ಮ ವಿಗ್ರಹಗಳನ್ನು ಬಿಟ್ಟುಬಿಡಿರಿ ಮತ್ತು ನಿಮ್ಮ ಜೀವಿತದಲ್ಲಿ ದೇವರನ್ನು ಪ್ರಥಮವಾಗಿಸಿರಿ ಎಂಬುದಾಗಿತ್ತು. ನಮ್ಮ ಜೀವಿತದಲ್ಲಿ ಯಾವುದೇ ವಿಗ್ರಹಗಳನ್ನು ಹೊಂದಿರದೆ ಇರುವುದು ನಿಜವಾದ ಪವಿತ್ರತೆಯಾಗಿದೆ. ದೇವರು ನಮ್ಮ ಫೂರ್ಣ ಹೃದಯವನ್ನು ತುಂಬುವುದೇ ಪವಿತ್ರತೆಯಾಗಿದೆ. ಇದನ್ನು ಸಾರುವುದೇ ನಮ್ಮ ಕರೆಯಾಗಬೇಕು. ಈ ಮೂಲಕ ದೇವರು ಸಂತೋಷದಿಂದ ನೆಲಸುವ ಸ್ಥಳವು ಸಭೆಯಾಗಬೇಕು.

ಮನ:ಪೂರ್ವಕವಾಗಿ ಪವಿತ್ರತೆಯನ್ನು ಹುಡುಕುವ ಮನುಷ್ಯನಿಗೆ ಮಾತ್ರ ನಿಜವಾದ ಪವಿತ್ರತೆಯು ಬರುತ್ತದೆಯೇ ಹೊರತು, ತನ್ನ ತಲೆಯಲ್ಲಿ ಸರಿಯಾದ ಬೋಧನೆಯನ್ನು ಹೊಂದಿರುವ ವ್ಯಕ್ತಿಗೆ ಅದು ಬರುವುದಿಲ್ಲ. ಹೊಸ ಒಡಂಬಡಿಕೆಯಲಿ, ಪವಿತ್ರತೆಯ ರಹಸ್ಯವನ್ನು ಕಂಡುಕೊಳ್ಳುವದು, ಗ್ರೀಕ್ ಪದಗಳನ್ನು ಮತ್ತು ಕಾಲಗಳನ್ನು (ವ್ಯಾಕರಣವನ್ನು) ಅಭ್ಯಾಸ ಮಾಡುವುದರ ಮೂಲಕವಲ್ಲ, ಬದಲಾಗಿ, ದೇವರನ್ನು ಮೆಚ್ಚಿಸುವುದಕ್ಕೆ ಇರುವ ಪರಿಪೂರ್ಣ ಹೃದಯದ ಮತ್ತು ಪ್ರಾಮಾಣಿಕ ಆಸೆಯಿಂದ ಮಾತ್ರ. ದೇವರು ನಮ್ಮ ಹೃದಯವನ್ನು ನೋಡುತ್ತಾನೆಯೇ ಹೊರತು, ನಮ್ಮ ಮೆದುಳನ್ನು ಆತನು ನೋಡುವುದಿಲ್ಲ.

ತನ್ನ ಸ್ವಂತ ಪಾಪದ ಬಗ್ಗೆ ಒಬ್ಬನಿಗಿರುವ ಪ್ರಜ್ಞೆಯು ಹೆಚ್ಚುವುದರಿಂದ ದೇವರ ದೃಷ್ಟಿಯಲ್ಲಿ ಆತನು ಪವಿತ್ರತೆಯಲ್ಲಿ ಬೆಳೆಯುತ್ತಾನೆ. ಪವಿತ್ರತೆಯು ದೇವರ ನಿಜವಾದ ಸ್ವಭಾವವಾಗಿದೆ. ದೇವರ ಆತ್ಮನು ನಮಗೆ ಪವಿತ್ರಾತ್ಮನನ್ನು ಕೊಡುತ್ತಾನೆ. ಯೆಶಾಯನು ದೇವರ ದರ್ಶನವನ್ನು ಪಡೆದಾಗ, ಆತನು ದೇವರಲ್ಲಿನ ಪವಿತ್ರತೆಯನ್ನು ಮತ್ತು ತಾನು ಅಶುದ್ಧ ಮನುಷ್ಯನು ಎಂಬುದಾಗಿ ಕಂಡುಕೊಂಡನು (ಯೆಶಾಯ 6:1-7 ) . ಆತ್ಮಭರಿತ ಜೀವಿತವು ಪವಿತ್ರತೆಯಲ್ಲಿನ ಬೆಳವಣಿಗೆಯ ಜೀವಿತವಾಗಿದೆ. ಮನುಷ್ಯನ ಸ್ವಂತ ಜೀವಿತವು ಪವಿತ್ರತೆಯಲ್ಲಿ ಹೆಚ್ಚುವಾಗ, ದೇವರ ಪರಿಪೂರ್ಣ ಪವಿತ್ರತೆಯ ಬಗ್ಗೆ ಆತನ ಪ್ರಜ್ಞೆಯೂ ಹೆಚ್ಚಾಗುತ್ತದೆ. ಎರಡೂ ಒಟ್ಟಾಗಿ ಹೋಗುತ್ತವೆ. ನಿಜ ಹೇಳಬೇಕೆಂದರೆ, ಒಬ್ಬನಲ್ಲಿ ಮೊದಲಿನದ್ದು ಇದೆಯೇ ಎಂದು ತಿಳಿದುಕೊಳ್ಳುವ ಒಂದು ಪರೀಕ್ಷೆ ಏನಪ್ಪಾ ಅಂದರೆ, ಆತನಲ್ಲಿ ನಂತರದ್ದು ಇದೆಯೇ ಎಂಬುದಾಗಿ. ತಾನು ದೇವರನ್ನು ಕಂಡುಕೊಂಡ ಇಪ್ಪತೈದು ವರ್ಷಗಳ ನಂತರ ಪೌಲನು ಹೀಗೆ ಹೇಳುತ್ತಾನೆ ”ನಾನಂತೂ ಅಪೊಸ್ತಲರಲ್ಲಿ ಕನಿಷ್ಟನಷ್ಟೇ” (1ಕೊರಿಂಥ 15:9). ಐದು ವರುಷಗಳ ತರುವಾಯ ಪೌಲನು ಹೀಗೆ ಹೇಳುತ್ತಾನೆ - ”ನಾನು ದೇವಜನರೊಳಗೆ ಅತ್ಯಲ್ಪನು” (ಎಫೆಸ 3:8). ಒಂದು ವರುಷದ ನಂತರ ಆತನು ಮತ್ತೇ ಈ ರೀತಿಯಾಗಿ ಹೇಳುತ್ತಾನೆ ”ಪಾಪಿಗಳಲ್ಲಿ ನಾನೇ ಮುಖ್ಯನಾಗಿದ್ದೇನೆ” (ಇದನ್ನು ಗಮನಿಸಿ, ಅದು ”ನಾನು ಮುಖ್ಯನಾಗಿದ್ದೆನು” ಅಲ್ಲ, ಆದರೆ ”ನಾನು ಮುಖ್ಯನಾಗಿದ್ದೇನೆ” ಎಂಬುದಾಗಿ ಇದೆ) (1ತಿಮೊಥೆ 1:15). ಈ ಎಲ್ಲಾ ಹೇಳಿಕೆಗಳಲ್ಲಿ, ಪೌಲನು ಪವಿತ್ರತೆಯಲ್ಲಿ ಬೆಳೆಯುತ್ತಿರುವುದನ್ನು ನೀವು ನೋಡುತ್ತೀರಾ? ಪೌಲನು ದೇವರೊಟ್ಟಿಗೆ ಹೆಚ್ಚು ಹತ್ತಿರವಾಗಿ ನಡೆದಾಗ, ತನ್ನ ಹೃದಯದಲ್ಲಿನ ಭ್ರಷ್ಟತೆ ಮತ್ತು ದುಷ್ಟತನದ ಬಗ್ಗೆ ಹೆಚ್ಚು ಪ್ರಜ್ಞೆಯುಳ್ಳವನಾದನು. ನನ್ನಲ್ಲಿ ಒಳ್ಳೇದೇನೂ ವಾಸವಾಗಿಲ್ಲ ಎಂದು ಪೌಲನು ಗ್ರಹಿಸಿಕೊಂಡನು (ರೋಮ 7:18).

ನಾವು ಸಂಪೂರ್ಣ ಆರೋಗ್ಯವನ್ನು ಪಡೆದುಕೊಳ್ಳುವ ಬಯಕೆಗಿಂತಲೂ, ಸಂಪೂರ್ಣ ಪವಿತ್ರತೆಯನ್ನು ಹೊಂದಿಕೊಳ್ಳುವ ಸ್ಥಳಕ್ಕೆ ನಾವು ಬರಬೇಕು. ನಮ್ಮ ದೇಹದಲ್ಲಿನ ಎಲ್ಲಾ ಕಾಯಿಲೆಗಳಿಂದ ನಾವು ಮುಕ್ತರಾಗಬೇಕು ಎಂದು ಬಯಸುವ ಹಾಗೇ, ನಮ್ಮನ್ನು ಕೆಡಿಸುವಂತ ಎಲ್ಲಾ ಪಾಪಗಳಿಂದ ನಾವು ಮುಕ್ತರಾಗಬೇಕು ಎಂಬ ಬಯಕೆಯನ್ನು ಹೊಂದಿರಬೇಕು. ನಾವು ಕಾಯಿಲೆಯನ್ನು ಹೇಗೆ ಸಹಿಸಿಕೊಳ್ಳೂವುದಿಲ್ಲವೋ, ಅದೇ ರೀತಿ ಪಾಪವನ್ನೂ ನಾವು ಸಹಿಕೊಳ್ಳಬಾರದು. ಕೆಟ್ಟ ಆಲೋಚನೆಗಳನ್ನು ಸಹಿಸಿಕೊಳ್ಳುವುದು, ಕ್ಷಯ ಅಥವಾ ಕುಷ್ಟ ರೋಗವನ್ನು ಸಹಿಸಿಕೊಂಡ ಹಾಗೇ. ”ಅದು ನನ್ನ ಬಲಹೀನತೆ ಅಥವಾ ಅದು ನನ್ನ ವ್ಯಕ್ತಿತ್ವದ ಸ್ವಭಾವ” ಎಂದು ಹೇಳಿ ನಾವು ನಮ್ಮ ಕೋಪವನ್ನು ಸಮರ್ಥಿಸಿಕೊಳ್ಳುವುದು ನಾವು ನಮ್ಮ ದೇಹದಲ್ಲಿ ಕ್ಯಾನ್ಸರ್ ಅಥವಾ ಏಡ್ಸ್ ಕಾಯಿಲೆಯನ್ನು ಅನುಮತಿಸಿದ ಹಾಗೆ. ಪಾಪ ಮತ್ತು ಕಾಯಿಲೆ ಎರಡು ಒಂದೇ ರೀತಿಯದ್ದಾಗಿವೆ.

ನಿಮ್ಮಲ್ಲಿ ನಮ್ಮ ಪ್ರೀತಿಯು ಹೇಗೋ ಹಾಗೆಯೇ ನಿಮ್ಮ ಪ್ರೀತಿಯೂ ಒಬ್ಬರೊಬ್ಬರ ಮೇಲೆಯೂ ಎಲ್ಲಾ ಮನುಷ್ಯರ ಮೇಲೆಯೂ ಅಭಿವೃದ್ಧಿ ಹೊಂದಿ ಅತ್ಯಧಿಕವಾಗುವಂತೆ ಕರ್ತನು ಅನುಗ್ರಹಿಸಲಿ. ನಮ್ಮ ಕರ್ತನಾದ ಯೇಸು ನಿಮ್ಮ ಹೃದಯಗಳನ್ನು ಧೃಢಪಡಿಸಿ, ತನ್ನ ಎಲ್ಲಾ ಪರಿಶುದ್ಧ ಪರಿವಾರ ಸಮೇತ ಪ್ರತ್ಯಕ್ಷನಾದಾಗ ತಂದೆಯಾದ ದೇವರ ಸಮಕ್ಷಮದಲ್ಲಿ ನೀವು ಪರಿಶುದ್ಧರೂ ನಿರ್ದೋಷಿಗಳೂ ಆಗಿರುವಂತೆ ಮಾಡಲಿ (1 ಥೆಸಲೋನಿಕ 3:12, 13). ಈ ವಚನಗಳು ನಮಗೆ ಕಲಿಸುವುದೇನೆಂದರೆ, ನಾವು ಪರಿಶುದ್ಧರೂ, ನಿರ್ದೋಷಿಗಳೂ ಆಗಿ, ಒಬ್ಬರೊಬ್ಬರ ಮೇಲೆಯೂ ನಮ್ಮ ಪ್ರೀತಿಯು ಅಭಿವೃದ್ಧಿ ಹೊಂದಿ ಅತ್ಯಧಿಕವಾಗಬೇಕು ಎಂಬುದಾಗಿದೆ. ಪವಿತ್ರತೆಯಿಲ್ಲದಂತ ಪ್ರೀತಿಯು ನಕಲುತನವಾಗಿದೆ - ಮತ್ತು ಅಂಥಹ ಪವಿತ್ರತೆಯು ನಿಜವಾಗಿಯೂ ಸ್ವ-ನೀತಿಕರಿಸಿಕೊಳ್ಳುವಿಕೆ ಮತ್ತು ಕಾನೂನು-ಬದ್ಧವಾದ ಧಾರ್ಮಿಕತೆಯಾಗಿದೆ (legalism) ಅಷ್ಟೇ. ಅವು ದೇವರ ಕಣ್ಣಿಗೆ ಹೊಲಸು ಬಟ್ಟೆಯಂತೆ (ಯೆಶಾಯ 64:6) ಆಗಿವೆ.

ಎಲ್ಲಾ ಪ್ರವಾದಿಗಳ ಭಾರವು ಪವಿತ್ರತೆ ಮತ್ತು ದೇವರ ಬದಲಾಗದಂತ ಪ್ರೀತಿಯ ವಿಷಯವಾಗಿ ಇತ್ತು: ಪ್ರವಾದಿಗಳು, ದೇವ ಜನರಲ್ಲಿನ ಪವಿತ್ರತೆ ಮತ್ತು ತನ್ನ ಜನರು ಆತ್ಮಿಕ ವ್ಯಭಿಚಾರಿಗಳಿದ್ದರೂ ಹಾಗೂ ದಾರಿ ತಪ್ಪಿ ಹೋಗಿದ್ದರೂ ಸಹ, ಆ ಜನರಿಗಾಗಿ ಬದಲಾಗದಂತ ದೇವರ ಪ್ರೀತಿಯನ್ನು ತೋರಿಸುವಂತವರಾಗಿದ್ದರು. ತನ್ನ ಜನರನ್ನು ತಿರುಗಿ ತನ್ನತ್ತ ಕರೆದುಕೊಂಡು ಬರುವುದೇ ದೇವರ ಬಯಕೆಯಾಗಿತ್ತು. ಆತನು ಅವರನ್ನು ಶಿಸ್ತಿಗೊಳಪಡಿಸುತ್ತಾನೆ ನಿಜ. ಆದರೆ ಶಿಸ್ತಿಗೊಳಪಡಿಸಿದ ನಂತರ ಅವರನ್ನು ಮತ್ತೆ ತನ್ನತ್ತ ಕರೆದುಕೊಂಡು ಬರಬೇಕು ಎಂದು ದೇವರು ಬಯಸುತ್ತಾರೆ.

ನಿಜವಾದ ಪ್ರವಾದನಾ ಸೇವೆಯು ಸಭೆಯಲ್ಲಿ ಈ ರೀತಿಯಗಿ ಕಾರ್ಯಮಾಡಬೇಕು. ದೇವ ಜನರ ಮಧ್ಯದಲ್ಲಿನ ಪವಿತ್ರತೆಗಾಗಿ ಹಳೆ ಒಡಂಬಡಿಕೆಯಲ್ಲಿ ಪ್ರವಾದಿಗಳು ಹೊಂದಿದಂತ ಭಾರವನ್ನೇ ಇಂದು ಸಭೆಯಲ್ಲಿ ನಿಜವಾದ ಪ್ರವಾದಿಯು ಹೊಂದಿರುತ್ತಾನೆ. ಆತನು ಹಳೆ ಒಡಂಬಡಿಕೆಯ ಪ್ರವಾದಿಗಳಂತೆ ನಡೆಯುತ್ತಾನೆ, ಬದಲಾಗದ ದೇವರ ಬಗ್ಗೆ, ಆತನ ಧೀರ್ಘಶಾಂತಿ, ದಯೆಯುಳ್ಳ ಪ್ರೀತಿಯ ಬಗ್ಗೆ ಹಿಂಜಾರಿ ಬಿದ್ದಂತ ಜನರಿಗೆ ಹೇಳಿ, ಅವರನ್ನು ದೇವರತ್ತ ಮತ್ತೊಮ್ಮೆ ಕರೆದುಕೊಂಡು ಬರುವ ವಿಷಯವಾಗಿ ಮತ್ತು ನಿಜವಾದ ಪವಿತ್ರತೆಗೆ ನಡೆಸುವ ವಿಷಯವಾಗಿ ನಿಜವಾದ ಪ್ರವಾದಿಯು ಆಸಕ್ತಿಯನ್ನು ಹೊಂದಿರುತ್ತಾನೆ. ಸಭೆಯು ಜೀವಂತವಾಗಿರಬೇಕಾದರೆ ಮತ್ತು ದೇವರಿಗಾಗಿ ಕಾರ್ಯನಿರ್ವಹಿಸಬೇಕಾದರೆ ಪ್ರತಿಯೊಂದು ಸಭೆಯಲ್ಲಿ ಪ್ರವಾದನಾ ವರವಿರಬೇಕು.