WFTW Body: 

ನಾವು ಮಾಡುವ ಕೆಲವು ಪ್ರಾರ್ಥನೆಗಳಿಗೆ ಉತ್ತರಿಸಲು ದೇವರು ತಡಮಾಡುವುದು ಏಕೆಂದು ನಮಗೆ ಅರ್ಥವಾಗುವುದಿಲ್ಲ. ಆದರೆ ದೇವರ ಮಾರ್ಗವು ಯಾವ ದೋಷವೂ ಇಲ್ಲದ್ದು; ಮತ್ತು ಅವರು ನಮ್ಮ ಮಾರ್ಗವನ್ನು ಸರಾಗ ಮಾಡುವರು (ಕೀರ್ತನೆ. 18:30,32).

ಯೇಸುವು ನಮಗೆ ತಿಳಿಸಿರುವಂತೆ (ಅಪೊಸ್ತಲರ ಕೃತ್ಯಗಳು. 1:7ನ್ನು ಓದಿಕೊಳ್ಳಿರಿ), ತಂದೆಯಾದ ದೇವರು ತನ್ನ ಸ್ವಂತ ಅಧಿಕಾರದಲ್ಲಿ ಇಟ್ಟುಕೊಂಡಿರುವ ಕಾಲಗಳು ಮತ್ತು ಸಮಯಗಳು ನಮಗೆ ತಿಳಿಯಬೇಕಾದವುಗಳಲ್ಲ.

ಕೆಲವು ಸಂಗತಿಗಳು ದೇವರಿಗೆ ಮಾತ್ರ ಸೇರಿದವುಗಳು. ಉದಾಹರಣೆಗೆ, ಮಾನವನಿಗೆ ಈ ಕೆಳಗಿನ ಸಂಗತಿಗಳಲ್ಲಿ ಯಾವ ಹಕ್ಕೂ ಇರುವುದಿಲ್ಲ:

1. ಆರಾಧನೆಯನ್ನು ಸ್ವೀಕರಿಸುವುದಕ್ಕೆ (ಮತ್ತಾ . 4:10);

2. ಮಹಿಮೆಯನ್ನು ಹೊಂದುವುದಕ್ಕೆ (ಯೆಶಾ .42:8);

3. ಮುಯ್ಯಿಗೆ ಮುಯ್ಯಿ ತೀರಿಸುವುದಕ್ಕೆ (ರೋಮಾ. 12:19);

4. ಮುಂದೆ ನಡೆಯಲಿರುವ ಘಟನೆಗಳಿಗೆ ನಿಯಮಿಸಲ್ಪಟ್ಟ ಕಾಲವನ್ನು ತಿಳಿಯುವುದಕ್ಕೆ (ಅ ಕೃತ್ಯಗಳು 1:7).

"ಯಾರು ತಮ್ಮ ಜೀವಿತದಲ್ಲಿ ದೇವರಿಂದ ಬರುವಂತ ವಿವಿಧ ಶಿಸ್ತುಗಳನ್ನು ಅಥವಾ ತರಬೇತಿ ಕ್ರಮಗಳನ್ನು ಸ್ವೀಕರಿಸುತ್ತಾರೋ, ಕೊನೆಯಲ್ಲಿ ಅವರು ತಮ್ಮ ಪಾತ್ರೆಯು ತುಂಬಿ ಹೊರಸೂಸಿ ಅದರಿಂದ ಇತರರಿಗೆ ಅಶೀರ್ವಾದ ಉಂಟಾಗುವುದನ್ನು ಕಾಣುವರು"

ಈ ಎಲ್ಲಾ ನಾಲ್ಕು ಸಂಗತಿಗಳು ದೇವರ ವಿಶೇಷ ಅಧಿಕಾರಗಳಾಗಿವೆ. ಎಲ್ಲಾ ಕ್ರೈಸ್ತರು ಮೇಲಿನ (1) ಮತ್ತು (2)ನ್ನು ಸುಲಭವಾಗಿ ಒಪ್ಪಿಕೊಳ್ಳುತ್ತಾರೆ. ಅನೇಕರು (3)ನ್ನು ಸಹ ಒಪ್ಪಿಕೊಳ್ಳುತ್ತಾರೆ. ಆದರೆ ಆತ್ಮೀಕ ಮನುಷ್ಯನು ಇತರೆ ಮೂರನ್ನು ಸುಲಭವಾಗಿ ಒಪ್ಪಿಕೊಂಡ ಮೇರೆಗೆ (4)ನ್ನು ಸಹ ಒಪ್ಪಿಕೊಳ್ಳುತ್ತಾನೆ. ಹೀಗಿರಲಾಗಿ ಕರ್ತನು ನಮ್ಮ ಪ್ರಾರ್ಥನೆಗಳಿಗೆ ಉತ್ತರವನ್ನು ನೀಡಲು ಹೆಚ್ಚು ಸಮಯವನ್ನು ತೆಗೆದುಕೊಂಡಾಗ, ನಾವು ದೀನತೆಯಿಂದ ಆತನ ಚಿತ್ತವನ್ನು ಒಪ್ಪಿಕೊಳ್ಳಬೇಕು.

ದೇವರು ಇನ್ನೂ ಸಹ ಸಿಂಹಾಸನದ ಮೇಲೆ ಇದ್ದಾನೆ ಮತ್ತು ತನ್ನ ಸ್ವಂತದವರನ್ನು ಆತನು ಯಾವಾಗಲೂ ನೆನಪು ಮಾಡಿಕೊಳ್ಳುತ್ತಾನೆ ಮತ್ತು ನಮ್ಮ ಒಳ್ಳೆಯದಕ್ಕಾಗಿ ಎಲ್ಲಾ ಸಂಗತಿಗಳನ್ನು ಮಾಡುತ್ತಾನೆ.

"ದೇವರೊಟ್ಟಿಗೆ ಇರುವಂತವನು ಯಾವಾಗಲೂ ಜಯಗಳಿಸುತ್ತಾನೆ, ಆತನು ಯಾವ ಸಂದರ್ಭವನ್ನೂ ಕಳೆದುಕೊಳ್ಳುವುದಿಲ್ಲ. ದೇವರ ಚಿತ್ತವನ್ನು ಪೂರೈಸು ವುದಕ್ಕಾಗಿ ತಾನು ಬೆಲೆ ತೆರಬೇಕಾಗಿ ಬಂದಾಗ ಆತನಿಗೆ ದೇವರ ಚಿತ್ತವು ಅತಿ ಸಿಹಿಯಾಗಿರುತ್ತದೆ"

ಆದ್ದರಿಂದ, ನಾವು "ಪ್ರಾರ್ಥನೆಗೆ ಮತ್ತು ವಾಕ್ಯದ ಸೇವೆಗೆ ನಮ್ಮನ್ನು ಒಪ್ಪಿಸಿ ಕೊಡುವುದನ್ನು" ಮುಂದುವರಿಸೋಣ (ಅ ಕೃತ್ಯಗಳು. 6: 4). ಆಗ ನಾವು "ದೇವರ ರಾಜ್ಯದ ವಿಷಯವಾಗಿ ಮತ್ತು ನಮ್ಮ ಕರ್ತನಾದ ಯೇಸುವಿನ ಕುರಿತಾಗಿ ಯಾವುದೇ ಅಡೆತಡೆಗಳಿಲ್ಲದೆ" ಬೋಧಿಸಲು ಸಾಧ್ಯವಾಗುತ್ತದೆ (ಅಪೊಸ್ತಲರ ಕೃತ್ಯಗಳು. 28:31).

ಜೀವಜಲವು ನಮ್ಮೊಳಗಿನಿಂದ ಹರಿಯಬೇಕು

ಪ್ರಪಂಚದಾದ್ಯಂತ ಅಗತ್ಯತೆಯಲ್ಲಿರುವ ಮತ್ತು ಹೊಸ ಒಡಂಬಡಿಕೆಯ ಸುವಾರ್ತೆಯನ್ನು ಕೇಳಬೇಕಾಗಿರುವ ಅನೇಕ ವಿಶ್ವಾಸಿಗಳಿದ್ದಾರೆ. ಈ ದಿನಗಳಲ್ಲಿ ಅನೇಕ ದೇಶಗಳಲ್ಲಿನ ವಿಶ್ವಾಸಿಗಳು ತಮ್ಮ ಹಣಕ್ಕಾಗಿ ತಮ್ಮನ್ನು ದುರುಪಯೋಗಪಡಿಸಿಕೊಂಡು ಹಿಂಸಿಸುತ್ತಿರುವ ಬೋಧಕರಿಂದ ಮತ್ತು ತಮ್ಮ ಮೇಲೆ ಪ್ರಾಬಲ್ಯ ಹೊಂದಿರುವ ಧರ್ಮ-ಪಂಥದ ನಾಯಕರಿಂದ ಶೋಷಣೆಗೆ ಒಳಗಾಗುತ್ತಿದ್ದಾರೆ. ಈ ರೀತಿಯ ದಾಸತ್ವದೊಳಗಿರುವ ವಿಶ್ವಾಸಿಗಳಿಗೆ ಸ್ವಾತಂತ್ರ್ಯವನ್ನು ಘೋಷಿಸಲು ನಾವು ಕರೆಯಲ್ಪಟ್ಟಿದ್ದೇವೆ.

ಎಲ್ಲಿಗೆ ಹೋಗಬೇಕು ಎಂದು ತಿಳಿಯಬೇಕಾದರೆ ನಾವು ಪವಿತ್ರಾತ್ಮನ ನಡೆಸುವಿಕೆಯ ಬಗ್ಗೆ ಸೂಕ್ಷ್ಮತೆಯುಳ್ಳವರಾಗಿರಬೇಕು ( ಯೆಶಾ. 30: 21).ಅನೇಕ ವಿಶ್ವಾಸಿಗಳು ಸತ್ಯವನ್ನು ಕೇಳಿಸಿಕೊಳ್ಳಲು ಇಷ್ಟ ಪಡದೆ ಇರುವ ದಿನಗಳು ಹತ್ತಿರ ಬರುತ್ತಿವೆ. ಆದ್ದರಿಂದ ನಮಗೆ ಅನುಕೂಲಕರವಾದ ಸಮಯಗಳಲ್ಲಿಯೂ ಮತ್ತು ಅನಾನುಕೂಲದ ಎಲ್ಲಾ ಸಮಯಗಳಲ್ಲಿಯೂ ವಾಕ್ಯವನ್ನು ಬೋಧಿಸಲು ನಾವು ಸಿದ್ಧರಿರಬೇಕು ( 2 ತಿಮೊ. 4: 2, 3).

ಆದ್ದರಿಂದ ದೇವರ ವಾಗ್ದಾನವನ್ನು ನಾವು ನಮ್ಮ ಹಕ್ಕು ಎಂದು ಕೇಳಿಕೊಳ್ಳುತ್ತಾ , ನಮ್ಮ ಸಭೆಯೊಳಗಿನಿಂದ ಎಲ್ಲಾ ದಿಕ್ಕುಗಳಿಗೂ ಅಂದರೆ- ಪೂರ್ವದ ಕಡೆಗೂ, ಪಶ್ಚಿಮದ ಕಡೆಗೂ ವರ್ಷವಿಡೀ ಜೀವಕರವಾದ ನೀರುಗಳು ಹರಿಯುತ್ತವೆ ಎಂದು ನಂಬೋಣ (ಜೆಕರ್ಯ. 14:8).

ಹಾಗಾದರೆ, ಈ ಜೀವಕರವಾದ ನೀರು ನಮ್ಮಿಂದ ಇತರರಿಗೆ ಹೇಗೆ ಹರಿದು ಹೋಗುತ್ತದೆ? ಕೀರ್ತನೆ 23:5ರಲ್ಲಿ ನಮ್ಮ ಪಾತ್ರೆಯು ತುಂಬಿ ಹೊರಸೂಸುತ್ತದೆ ಎಂಬುದಾಗಿ ನಾವು ಓದುತ್ತೇವೆ. ಪಾತ್ರೆಯು ತುಂಬಿ ಹೊರಸೂಸುತ್ತದೆ ಎಂಬ ಪದಕ್ಕೆ ಅಲ್ಲಿ ಉಪಯೋಗಿಸಲ್ಪಟ್ಟ ಇಬ್ರಿಯ ಮೂಲಭೂತ ಪದವು ’ರೆವಯ್ಯ’. ಈ ಇಬ್ರಿಯ ಪದವು ಬೈಬಲಿನಲ್ಲಿ ಇನ್ನು ಒಂದೇ ಒಂದು ಸಾರಿ ಬೇರೊಂದು ಕಡೆ - ಕೀರ್ತನೆ 66: 12ರಲ್ಲಿ ಉಪಯೋಗಿಸಲ್ಪಟ್ಟಿದೆ. ಅದನ್ನು ಅಲ್ಲಿ ’ಸಮೃದ್ಧಿಯ ಸ್ಥಳ’ಎಂದು ಭಾಷಾಂತರಿಸಲಾಗಿದೆ.

ಆದ್ದರಿಂದ ನಾವು ತೀರ್ಮಾನಿಸುವುದೇನೆಂದರೆ, ನಮ್ಮ ಪಾತ್ರೆಗಳು ತುಂಬಿ ಹೊರಸೂಸುವ ಸ್ಥಳಕ್ಕೆ ನಾವು ಬರಬೇಕಾದರೆ, ಕೀರ್ತನೆ 66:12ಕ್ಕಿಂತ ಮೊದಲಿನ ವಾಕ್ಯಗಳಲ್ಲಿ ಹೇಳಲ್ಪಟ್ಟ ಅನುಭವಗಳನ್ನು ನಾವು ಹಾದುಹೋಗಬೇಕು. 10ರಿದ 12ನೇ ವಚನಗಳಲ್ಲಿ ನಾವು ಓದುವುದೇನೆಂದರೆ:

• ದೇವರು ನಮ್ಮನ್ನು ಬೆಳ್ಳಿಯಂತೆ ಶುದ್ಧೀಕರಿಸುವರು;
• ದೇವರು ನಮ್ಮನ್ನು ಬಲೆಯಲ್ಲಿ ಸಿಕ್ಕಿಸುವರು (ಬಿಗಿಯಾದ ಅಂದರೆ ಕಷ್ಟದ ಸಂದರ್ಭಗಳಲ್ಲಿ);
• ಇತರರು ನಮ್ಮ ಮೇಲೆ ದಬ್ಬಾಳಿಕೆಯ ಭಾರಗಳನ್ನು ಹಾಕುವಂತೆ ಅನುಮತಿಸುವರು;
• ದೇವರು ನಮ್ಮನ್ನು ಜ್ವಲಿಸುವ (ಅತಿಯಾಗಿ ಉರಿಯುವ) ಬೆಂಕಿಯಲ್ಲಿ ಹಾಕುವರು (ಬೆಂಕಿಯಂತಹ ಕಷ್ಟಗಳಲ್ಲಿ);
• ನಂತರ ದೇವರು ನಮ್ಮನ್ನು "ಮಂಜಿನಂತಹ ನೀರಿಗೆ" ಹಾಕುವರು (ಅಲ್ಲಿ ಅವರ ಸಾನಿಧ್ಯದ ಭಾವನೆಯೇ ಇರುವುದಿಲ್ಲ).

"ಯಾರು ತಮ್ಮ ಜೀವಿತದಲ್ಲಿ ದೇವರಿಂದ ಬರುವಂತ ವಿವಿಧ ಶಿಸ್ತುಗಳನ್ನು ಅಥವಾ ತರಬೇತಿ ಕ್ರಮಗಳನ್ನು ಸ್ವೀಕರಿಸುತ್ತಾರೋ, ಕೊನೆಯಲ್ಲಿ ಅವರು ತಮ್ಮ ಪಾತ್ರೆಯು ತುಂಬಿ ಹೊರಸೂಸಿ ಅದರಿಂದ ಇತರರಿಗೆ ಆಶೀರ್ವಾದ ಉಂಟಾಗುವುದನ್ನು ಕಾಣುವರು" ದೇವರಿಗೆ ಸ್ತೋತ್ರ!!