WFTW Body: 

ಇಬ್ರಿಯ 5:8 ರಲ್ಲಿ ನಾವು ಹೀಗೆ ಓದುತ್ತೇವೆ "ಹೀಗೆ ಆತನು ಮಗನಾಗಿದ್ದರೂ, ಅನುಭವಿಸಿದ ಬಾಧೆಗಳಿಂದಲೇ ವಿಧೇಯತೆಯನ್ನು ಕಲಿತುಕೊಂಡನು." ಯೇಸುವು ವಿಧೇಯತೆಯನ್ನು ಕಲಿಯಬೇಕಾಗಿತ್ತು. "ಕಲಿಯುವುದು" ಎಂಬ ಪದವು ವಿದ್ಯಾಭ್ಯಾಸಕ್ಕೆ (ಶಿಕ್ಷಣಕ್ಕೆ) ಸಂಬಂಧಿಸಿದ್ದಾಗಿದೆ. ಯೇಸುವು ಮನುಷ್ಯನಾಗಿ ಈ ಭೂಮಿಯ ಮೇಲೆ ನಡೆದಾಡಿದ ಸಮಯದಲ್ಲಿ ವಿಧೇಯತೆಯ ಶಿಕ್ಷಣವನ್ನು ಕಲಿಯಬೇಕಾಗಿತ್ತು. ಆತನು ಪರಲೋಕದಲ್ಲಿ ದೇವರಾಗಿದ್ದಾಗ ಯಾರಿಗೂ ವಿಧೇಯನಾಗಿರಲಿಲ್ಲ. ನೀವು ನಿಮ್ಮ ಜೀವನವಿಡೀ ಮಾಡದೇ ಇರುವಂತಹ ಕೆಲಸವನ್ನು ಮೊದಲನೇ ಸಲ ಮಾಡಿದಾಗ ನೀವು ಕೆಲವು ಸಂಗತಿಗಳನ್ನು ಕಲಿಯುತ್ತೀರಿ. ಅದೇ ರೀತಿಯಲ್ಲಿ ಯೇಸುವು ಕೂಡ ಮನುಷ್ಯನಾಗಿ ಭೂಮಿಗೆ ಬಂದಾಗ ವಿಧೇಯತೆಯನ್ನು ಕಲಿತನು. ಮತ್ತು ತನ್ನ ತಂದೆಗೆ ವಿಧೇಯನಾಗುವುದರ ಜೊತೆಗೆ, ಯೋಸೆಫ ಹಾಗು ಮರಿಯ ಇವರಿಬ್ಬರಿಗೂ ವಿಧೇಯನಾದನು. ಯೋಸೆಫ ಮತ್ತು ಮರಿಯ ಪಾಪಿಗಳಾಗಿದ್ದರು ಮತ್ತು ಪರಿಪೂರ್ಣರಾಗಿರಲಿಲ್ಲ (ಪವಿತ್ರವಾಗಿರಲಿಲ್ಲ). ಅವರೂ ಕೂಡ ಇತರ ತಂದೆ-ತಾಯಿಯರಂತೆ ತಪ್ಪುಗಳನ್ನು ಮಾಡುವವರಾಗಿದ್ದರು. ಆದರೂ ಯೇಸುವು ಅವರಿಗೆ ವಿಧೇಯನಾದನು. ಇದು ಆತನಿಗೆ ತುಂಬಾ ಕಷ್ಟಕರವಾಗಿರಬೇಕು. ಆತನು ವಿಧೇಯನಾದನು ಹಾಗೂ ವಿಧೇಯತೆಯ ಮೂಲಕ ಕಷ್ಟಗಳನ್ನು ಸಹಿಸಿದನು. ಇದರ ಅರ್ಥವೇನೆಂದರೆ ಯೇಸುವು ತನ್ನ ಜೀವನವಿಡೀ ಸ್ವಂತಃ ಇಚ್ಚೆಯನ್ನು(ಚಿತ್ತವನ್ನು) ನಿರಾಕರಿಸುವ ನೋವನ್ನು ಅನುಭವಿಸಿದನು ಮತ್ತು ಈ ಮೂಲಕ ತನ್ನ ತಂದೆಗೆ ವಿಧೇಯನಾದನು. ಈ ರೀತಿಯಾಗಿ ಅವನು ಕಷ್ಟದ (ಬಾಧೆಯ) ಮೂಲಕ ವಿಧೇಯತೆಯನ್ನು ಕಲಿತನು.

ವಿಧೇಯತೆಯಲ್ಲಿ ಕೆಲವು ಸಂಗತಿಗಳು ತುಂಬಾ ಸಂತೋಷದಾಯಕವಾಗಿರುತ್ತವೆ. ನಿಮ್ಮ ಮಗುವಿಗೆ ನೀವು ಐಸ್ ಕ್ರೀಮ್ ತಿನ್ನಲಿಕ್ಕೆ ಹೇಳಿದರೆ, ಆತನು ಖುಷಿಯಿಂದ ನಿಮಗೆ ವಿಧೇಯನಾಗುತ್ತಾನೆ. ಅದರಲ್ಲಿ ಆತನಿಗೆ ಯಾವುದೇ ನೋವಿಲ್ಲ. ಆದರೆ ಆತನು ಹೊರಗಡೆ ಆಟವಾಡುತ್ತಿರುವಾಗ ಮನೆ ಕೆಲಸ ಮಾಡಲು ಅವನನ್ನು ನೀವು ಕರೆದಾಗ ವಿಧೇಯನಾಗಲು ಅವನಿಗೆ ಸ್ವಲ್ಪ ಕಷ್ಟವಾಗುತ್ತದೆ. ಅದೇ ರೀತಿ ನಮ್ಮ ಜೀವನದಲ್ಲೂ ಕೂಡ ನಾವು ವಿಧೇಯರಾಗುವಾಗ ಕೆಲವೊಂದು ಸಂಗತಿಗಳಲ್ಲಿ/ಕ್ಷೇತ್ರಗಳಲ್ಲಿ ನಾವು ಅತ್ಯಂತ ಸಂತೋಷದಿಂದ ವಿಧೇಯರಾಗುತ್ತೇವೆ. ಕೆಲ ಸಂಗತಿಗಳು ನಮಗೆ ಒಳ್ಳೆಯದನ್ನುಂಟುಮಾಡುತ್ತವೆ ಎಂದು ತಿಳಿದಿದ್ದಾಗ ನಾವು ವಿಧೇಯರಾಗುತ್ತೇವೆ. ಆದರೆ ನಿಜವಾದ ವಿಧೇಯತೆಯ ನಿಜವಾದ ಪರೀಕ್ಷೆಯೆಂದರೆ ನಮಗೆ ಮಾಡಲು ಮನಸ್ಸಿಲ್ಲದ ಅಥವಾ ನಮಗೆ ನೋವನ್ನುಂಟುಮಾಡುವ ವಿಷಯಗಳಲ್ಲಿ ನಾವು ನಮ್ಮ ಚಿತ್ತವನ್ನು ನಿರಾಕರಿಸುವದು. ಇಂತಹ ವಿಷಯಗಳೇ ನಿಜವಾಗಿಯೂ ನಮ್ಮ ವಿಧೇಯತೆಯನ್ನು ಪರೀಕ್ಷಿಸುತ್ತವೆ.

ಯೇಸುವು ತನ್ನನ್ನು ನಿರಾಕರಿಸುವದರಿಂದ ವಿಧೇಯತೆಯನ್ನು ಕಲಿತನು. ತಂದೆಯು ಬೇಡವೆಂದು ಹೇಳಿದ ಕೆಲಸಕ್ಕೆ ತಾನೂ ಕೂಡ ಬೇಡವೆಂದನು. ಕಷ್ಟದ ನೋವನ್ನು ಅನುಭವಿಸುವದರ ಮೂಲಕ ಯೇಸುವು ವಿಧೇಯತೆಯನ್ನು ಕಲಿತನು. ಮತ್ತು ಕೊನೆಗೆ "ಆತನು ಸಿದ್ಧಿಗೆ ಬಂದನು(ಪರಿಪೂರ್ಣನಾದನು)" (ಇಬ್ರಿಯ 5:9). ಮತ್ತು ಯೇಸು ತನ್ನ ವಿದ್ಯಾಭ್ಯಾಸವನ್ನು ಮುಗಿಸಿ ತನ್ನ ಪದವಿ(ಡಿಗ್ರಿ)ಯನ್ನು ಪಡೆದನು. ನಾವು ಕೂಡ ಇಂಥ ಪದವಿಯನ್ನು ಪಡೆಯಬೇಕು ಮತ್ತು ಅವನಂತೆಯೇ, ನಾವೂ ಅನೇಕ ಶೋಧನೆಗಳನ್ನು ಜಯಿಸಬೇಕು.

ನಾವು ಒಂದು ಪರೀಕ್ಷೆಯಲ್ಲಿ ಫೇಲ್ ಆದರೆ ಏನಾಗುತ್ತದೆ? ಆ ಪರೀಕ್ಷೆಯನ್ನು ನಾವು ಮತ್ತೊಮ್ಮೆ ಬರೆಯಬೇಕಾಗುತ್ತದೆ. ಅಂತಿಮವಾಗಿ ನಾವು ಎಲ್ಲಾ ಪರೀಕ್ಷೆಗಳನ್ನು ಪಾಸ್ ಮಾಡಿದಾಗ ನಮಗೆ ಪದವಿ ಡಿಗ್ರಿ ದೊರೆಯುತ್ತದೆ. ಆಗ ನಾವು ಜಯಶಾಲಿಗಳಾಗುತ್ತೇವೆ! ನಾವು ನಮ್ಮ ಜೀವಿತದಲ್ಲಿ ಪಡೆಯಬಹುದಾದ ಅತ್ಯಮೂಲ್ಯ ಡಿಗ್ರಿ ಇದಾಗಿರುತ್ತದೆ. ಜಗತ್ತು ಕೊಡುವ ಡಿಗ್ರಿಗಳು ಈ ಡಿಗ್ರಿಯ ಮುಂದೆ ಕಸದಂತೆ. ನನ್ನನ್ನು "ಹಿಂಬಾಲಿಸಿ" ಎಂದು ಯೇಸು ಹೇಳಿದಾಗ ರಕ್ಷಣೆಯ ನಾಯಕನಾಗಿ ಅವನೇನು ಮಾಡಿದನೋ ಅದನ್ನೇ ಅನುಸರಿಸಲು ನಮಗೂ ಕರೆಯುತ್ತಾನೆ. ಆತನು ಅನುಭವಿಸದ ಯಾವುದೇ ಕಷ್ಟ(ಶೋಧನೆ)ಯನ್ನು ಎದುರಿಸಲು ನಮಗವನು ಹೇಳುವದಿಲ್ಲ. ಹಾಗಿದ್ದಾಗ ನಮ್ಮ ವಿದ್ಯಾಭ್ಯಾಸವನ್ನು ಪೂರ್ತಿ ಮಾಡಿಕೊಳ್ಳುವದಕ್ಕಾಗಿ ಕೃಪೆಯನ್ನು ಪಡೆಯಲು ಕೃಪಾ-ಸಿಂಹಾಸನದ ಬಳಿಗೆ ಧೈರ್ಯದಿಂದ ಹೋಗೋಣ. ಕಷ್ಟವನ್ನು ಅನುಭವಿಸಬೇಕಾದರೆ ಅದನ್ನೂ ಕೂಡ ಅನುಭವಿಸೋಣ. ಆದರೆ ವಿಧೇಯತೆಯನ್ನು ಕಲಿತು ನಮ್ಮ ವಿಧ್ಯಾಭ್ಯಾಸವನ್ನು ಪೂರ್ಣಗೊಳಿಸಲು ಧೃಡವಾಗಿ ನಿರ್ಧರಿಸೋಣ.

ಇಬ್ರಿಯ 5:9ರಲ್ಲಿ "ಇದಲ್ಲದೆ ಆತನು ಸಿದ್ಧಿಗೆ ಬಂದು ದೇವರಿಂದ ಮೆಲ್ಕಿಜೆದೇಕನ ತರಹದ ಮಹಾಯಾಜಕನೆಂದೆನಿಸಿಕೊಂಡವನಾಗಿ ತನಗೆ ವಿಧೇಯರಾಗಿರುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು." ಯೇಸುವು ವಿಧೇಯತೆಯಂಬ ಕಾಲೇಜಿನ ಅಧ್ಯಾಪಕನಾಗಿದ್ದಾನೆ. ಆತನು ಚಿಕ್ಕ ತರಗತಿಯಿಂದ ಕೊನೆಯ ತರಗತಿವರೆಗೆ ಈ ಕಾಲೇಜನಲ್ಲಿ ಕಲಿತನು ಮತ್ತು ಎಲ್ಲದರಲ್ಲಿಯೂ ವಿಧೇಯನಾದನು.

ದೇವರ ಸೇವಕರಾದ ನಾವು ಈ ಕಾಲೇಜಿನ ಕಿರಿಯ ಅಧ್ಯಾಪಕರಾಗಿ ವಿಧೇಯತೆಯನ್ನು ಕಲಿಯಲು ಕರೆಯಲ್ಪಟ್ಟಿದ್ದೇವೆ. ನೀವು ಎಷ್ಟು ವಿಧೇಯತೆಯನ್ನು ನೋವಿನಿಂದ ಅನುಭವಿಸಿ ಕಲಿಯುತ್ತೀರೋ, ಅಷ್ಟೇ ವಿಧೇಯತೆಯಲ್ಲಿ ಇತರರನ್ನೂ ನಡೆಸುವ ನಿಜವಾದ ಕ್ರಿಸ್ತ ಸೇವಕಸೇವಕರಾಗುತ್ತೀರಿ. ಇದು ಮಾತ್ರವೇ ನಿಜವಾದ ಕ್ರಿಸ್ತೀಯ ಸೇವೆಯಾಗಿದೆ. ಆದರೆ ಈ ಪರೀಕ್ಷೆಯಲ್ಲಿ ಫೇಲ್ ಆಗುತ್ತಾ ಇದ್ದರೆ ಕಾಲೇಜಿನ ಅಧ್ಯಾಪಕರಾಗಲು ಹೇಗೆ ಸಾಧ್ಯ? ಇಬ್ರಿಯ 5:9ರಲ್ಲಿ ಹೇಳುವ ಪ್ರಕಾರ "ತನಗೆ ವಿಧೇಯರಾಗುವವರೆಲ್ಲರಿಗೂ ನಿರಂತರವಾದ ರಕ್ಷಣೆಗೆ ಕಾರಣನಾದನು."

"ನಿರಂತರವಾದ ರಕ್ಷಣೆ"ಯು ಪಾಪದ ದಂಡನೆಯಿಂದ ಸಿಗುವ ರಕ್ಷಣೆಗೆ ಉಲ್ಲೇಖಿಸಿದುದಲ್ಲ, ಬದಲಾಗಿ ದಿನನಿತ್ಯದ ಜೀವನದಲ್ಲಿ ಪಾಪದ ಶಕ್ತಿಯಿಂದ ಸಿಗುವ ರಕ್ಷಣೆಗೆ ಉಲ್ಲೇಖಿಸಲ್ಪಟ್ಟಿದೆ.