ಬರೆದಿರುವವರು :   ಝ್ಯಾಕ್ ಪೂನನ್ ಭಾಗಗಳು :   ಶಿಷ್ಯಂದಿರಿಗೆ
WFTW Body: 

1960 ವರ್ಷಗಳ ಹಿಂದೆ ನೀನು ಪಾಲೆಸ್ತೀನ್ ನಾಡಿನಲ್ಲಿ ವಾಸಿಸಿದ್ದೀಯೆ ಮತ್ತು "ನಜರೇತಿನ ಯೇಸು" ಎಂಬಾತನು ರೋಗಿಗಳನ್ನು ಗುಣಪಡಿಸುತ್ತಿರುವ ಸೇವಾಕಾರ್ಯದ ಬಗ್ಗೆ ನೀನು ಕೇಳಿದ್ದೀಯೆ ಎಂದು ಕಲ್ಪಿಸಿಕೋ. ನೀನೇ ಸ್ವತ: ಅವನನ್ನು ನೋಡದೆ ಇದ್ದರೂ, ‘ಯೇಸು’ ಎಂಬಾತನು ಯೆರೂಸಲೇಮಿನಲ್ಲಿ ಮಾತನಾಡಲಿರುವ (ಪ್ರಸಂಗ ಕೊಡಲಿರುವ) ಸಭೆಯಲ್ಲಿ ಪಾಲ್ಗೊಳ್ಳಲಿರುವ ದೊಡ್ಡ ಜನರ ಗುಂಪನ್ನು ನೋಡಲು ನೀನು ಸಂತೋಷಪಡುವೆ.

ನೀನು ಹತ್ತಿರ ಹೋಗಿ ನೋಡುವಾಗ ವೇದಿಕೆಯಲ್ಲಿ ಯೇಸುವಿನ (ಪ್ರಸಂಗಕಾರನ) ಜೊತೆ, ಪಿಲಾತ ಮತ್ತು ಹೆರೋದ ಮತ್ತು ಅನ್ನ ಮತ್ತು ಕಾಯಿಫ ಅವರೂ ಕುಳಿತಿದ್ದಾರೆ. ಆಗ ಯೇಸುವು ಮುಂದೆ ಹೋಗಿ, ಸಭಿಕರನ್ನು ಉದ್ದೇಶಿಸಿ ಹೇಳುವುದೇನೆಂದರೆ, ಅವರೆಲ್ಲರು (ಸಭಿಕರು) ಬಹಳ ಸನ್ಮಾನಿತರೆಂದೆಣಿಸಿಕೊಳ್ಳಬೇಕು, ಏಕೆಂದರೆ, "ಪಾಲೆಸ್ತೇನಿನ ಇಬ್ಬರು ಮಹಾ ಪ್ರಭುಗಳು, ತಮ್ಮ ಹಾಜರಿಯಿಂದ ಸಭೆಗೆ ಗೌರವವನ್ನು ತಂದಿದ್ದಾರೆ" ಅಷ್ಟೇ ಅಲ್ಲದೆ, ಇಬ್ಬರು "ಶ್ರೇಷ್ಟ ದೇವ-ಜನರಾದ, ಅತಿ ಘನವಂತ, ಅನ್ನ ಮತ್ತು ಕಾಯಿಫ ಕೂಡ ಸಭೆಯನ್ನು ಆಶೀರ್ವದಿಸಲು ಬಂದಿದ್ದಾರೆ" ಎಂದು.

ಪೀಠಿಕೆಯಾಗಿ ಈ ಮಾತುಗಳನ್ನಾಡಿದ ಮೇಲೆ, ಸಭೆಯನ್ನು ಉದ್ಘಾಟಿಸಲು ಯೇಸುವು, ಹೆರೋದ ಮತ್ತು ಪಿಲಾತರನ್ನು ಕರೆಯುತ್ತಾನೆ ಮತ್ತು ಅವರು ಕೆಲ ಮಾತುಗಳನ್ನಾಡಬೇಕೆಂದು ಕೇಳಿಕೊಳ್ಳುತ್ತಾನೆ. ಹೆರೋದ ಮತ್ತು ಪಿಲಾತರು, ಯೇಸುವು ತನ್ನ ಸೇವಾ ಕಾರ್ಯದ ಮೂಲಕ ಸಮಾಜಕ್ಕೆ ಮಾಡುವ ಒಳ್ಳೆಯ ಕೆಲಸದ ಬಗ್ಗೆ ಬಹಳವಾಗಿ ಹೊಗಳುತ್ತಾರೆ ಮತ್ತು ಆತನಿಗೆ ಎಲ್ಲಾ ಜನರ ಬೆಂಬಲದ ಅಗತ್ಯವಿದೆ ಎಂಬುದನ್ನು ಹೇಳುತ್ತಾರೆ. ನಂತರ ‘ಅತಿ ಘನವಂತ’ ಅನ್ನ ಮತ್ತು ಕಾಯಿಫರು ಕೆಲ ಮಾತುಗಳನ್ನಾಡಲು ಮತ್ತು "ಪ್ರಾರ್ಥನೆ" ಮಾಡಲು ಯೇಸುವಿನಿಂದ ಕರೆಯಲ್ಪಡುತ್ತಾರೆ. ಅವರೂ ಯೇಸುವನ್ನು ಬಹಳವಾಗಿ ಹೊಗಳುತ್ತಾರೆ ಮತ್ತು ತಮ್ಮ ಸಭೆಯ ಜನರೂ ಯೇಸುವಿನ ಸೇವಾಕಾರ್ಯವನ್ನು ಪೂರ್ಣಮನಸ್ಸಿನಿಂದ ಬೆಂಬಲಿಸಬೇಕೆಂದು ಕರೆನೀಡುತ್ತಾರೆ.

ಸೇವಾಕಾರ್ಯದ ಹಣಕಾಸಿನ ಅಗತ್ಯಗಳ ಬಗ್ಗೆ ಮಾತನಾಡಲು ಇಸ್ಕಾರಿಯೋತ ಯೂದನನ್ನು, ‘ಯೇಸುವು’ ಕರೆಯುತ್ತಾನೆ. ಸೇವಾಕಾರ್ಯದ ಅವಶ್ಯಕತೆಗಳನ್ನು ಪೂರೈಸುವುದಕ್ಕಾಗಿ ಲಕ್ಷಾಂತರ ರೂಪಾಯಿಗಳ ಅಗತ್ಯವಿರುವುದರ ಬಗ್ಗೆ ಯೂದನು ಮಾತನಾಡುತ್ತಾನೆ. ಮತ್ತೆ ಅವನು ಈ ರೀತಿಯಾಗಿ ಹೇಳುತ್ತಾನೆ. 1000 ರೂಪಾಯಿಗಳಿಗಿಂತ ಹೆಚ್ಚು ಕಾಣಿಕೆ ಕೊಡುವವರಿಗೆ ಸ್ವಾಗತಕಾರರ ಬಳಿ ಪತ್ರಗಳು (ಅರ್ಜಿಗಳು) ದೊರಕ್ಕುತ್ತವೆ ಮತ್ತು ಅಂಥವರಿಗಾಗಿ ಯೇಸುವು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸುವುದಾಗಿ ಆಹ್ವಾನಿಸುತ್ತಾನೆ (ಕಾಣಿಕೆ ಕೊಡುವವರು ವಿಶ್ವಾಸಿ ಅಥವಾ ಅವಿಶ್ವಾಸಿಗಳಾಗಿದ್ದರೂ ಪರವಾಗಿಲ್ಲ - ಎಲ್ಲಾ ಶ್ರೀಮಂತರಿಗೆ ಸ್ವಾಗತವಿದೆ ಮತ್ತು ಅತಿ ಶ್ರೀಮಂತರಾಗಿದ್ದರೆ ಇನ್ನೂ ಉತ್ತಮ!). ಆಗ ಹೆರೋದನು ಎದ್ದು ನಿಂತು ಸೇವಾಕಾರ್ಯಕ್ಕೆ ಕಾಣಿಕೆ ನೀಡುವವರಿಗೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸುತ್ತಾನೆ. ಆಗ ಹಣ ಸಂಗ್ರಹಣೆ ಮಾಡಲಾಗುತ್ತದೆ. ನಂತರ ಯೇಸುವು ಚುಟುಕಾಗಿ ಸಂದೇಶವೊಂದನ್ನು ಬೋಧಿಸುತ್ತಾನೆ ಮತ್ತು ಸರಳ ಜನರನ್ನು ಆಶ್ಚರ್ಯಪಡಿಸಲು ತನ್ನ ಅದ್ಭುತಕರವಾದ ಬಲವನ್ನು ಪ್ರದರ್ಶಿಸುತ್ತಾನೆ ಮತ್ತು ಕೆಲ ರೋಗಿಗಳನ್ನು ಗುಣಪಡಿಸುತ್ತಾನೆ. ಅದಾದ ನಂತರ, ಬೇರೆ ಯಾರೂ ಅವನನ್ನು ಭೇಟಿ ಮಾಡುವ ಮೊದಲು, ಅವನು ಹೆರೋದ, ಪಿಲಾತ, ಅನ್ನ, ಕಾಯಿಫ ಮತ್ತು ಇಸ್ಕಾರಿಯೋತ ಯೂದನೊಂದಿಗೆ (ಹಾಗೂ ಹಣದ ಚೀಲಗಳೊಂದಿಗೆ) ಮಧ್ಯ ಯೆರೂಸಲೇಮಿನಲ್ಲಿರುವ ಮಹಾ-ಧರ್ಮಾಧ್ಯಕ್ಷರ (ಬಿಷಪರ) ಅರಮನೆಯಲ್ಲಿ ಹಬ್ಬದೌತಣ ಮಾಡಲು ರೋಮಿನ ರಾಜಯೋಗದ ರಥದಲ್ಲಿ ಹೊರಡುತ್ತಾನೆ.

ನೀನು ಹೊಸದಾಗಿ ಮಾನಸಾಂತರ ಹೊಂದಿದವನಾಗಿದ್ದರೂ, ಸ್ವಲ್ಪ ಮಟ್ಟಿನ ವಿವೇಕ ಮತ್ತು ಅನುಭವ ಇದ್ದವನಾದರೂ, ಈ ಸಂಗತಿಗಳನ್ನು ನೋಡುವಾಗ, ನಿನಗೆ ಸ್ವಲ್ಪ ಗೊಂದಲ(ಚಡಪಡಿಕೆ)ವಾಗುತ್ತದೆ. ನೀನು ಇಲ್ಲಿ ನೋಡಿದ್ದೆಲ್ಲವು, ಅಪೋಸ್ತಲರಾದ ಮತ್ತಾಯ, ಪೇತ್ರ ಮತ್ತು ಯೋಹಾನರಿಂದ, ಯೇಸುವಿನ ಬಗ್ಗೆ ನೀನು ಕೇಳಿದುದ್ದರ ಜೊತೆಗೆ ಹೊಂದಾಣಿಕೆಯಾಗುವುದಿಲ್ಲ.

ಆದರೆ, ಸೈತಾನನು ಸನಿಹದಲ್ಲಿದ್ದು ನಿನ್ನ ಕಿವಿಯಲ್ಲಿ ಪಿಸುಗುಟ್ಟುವುದೇನೆಂದರೆ, "‘ತೀರ್ಪು ನೀಡಬೇಡ’ ಎಂದು ಬರೆದಿದೆ"(ಮತ್ತಾ. 7:1)ಎಂದು. ಆದರೆ ನೀನು ಅವನಿಗೆ ಹೇಳುವುದೇನೆಂದರೆ, "ಹೀಗೂ ಬರೆದಿದೆ, ‘...ಅನೇಕ ಸುಳ್ಳು ಪ್ರವಾದಿಗಳು ಲೋಕದೊಳಗೆ ಹೋಗಿರುವುದರಿಂದ ನೀವು ಎಲ್ಲಾ ಆತ್ಮಗಳನ್ನು ನಂಬದೆ ಆಯಾ ಆತ್ಮಗಳು ದೇವರಿಗೆ ಸಂಬಂಧವಾದವುಗಳೋ ಅಲ್ಲವೋ ಎಂದು ಅವುಗಳನ್ನು ಪರೀಕ್ಷಿಸಬೇಕು’" (1ಯೋಹಾ. 4:1)ಎಂದು. ಅಂತಿಮವಾಗಿ, ನೀನೊಂದು ನಿರ್ದಿಷ್ಟ ನಿರ್ಧಾರಕ್ಕೆ ಬರುತ್ತೀಯ: "ಇದು ನಾನು ಕೇಳಿ ತಿಳಿದ ಯೇಸುವಲ್ಲ, ಇದು ನಿಜವಾಗಿಯೂ ‘ಮತ್ತೊಬ್ಬ ಯೇಸು’ ಎಂದು (2 ಕೊರಿ. 11:4). ನಿನ್ನ ನಿರ್ಧಾರ ಸರಿಯೇ, ಆತನು ‘ಮತ್ತೊಬ್ಬ ಯೇಸುವಾಗಿದ್ದನು’. ನೀನು ಹೇಗೆ ಆ ನಿರ್ಧಾರಕ್ಕೆ ಬಂದೆ? ಏಕೆಂದರೆ, ನಿನ್ನೊಳಗಿರುವ ಅಭಿಷೇಕವು ನಿನಗೆ ಈ ಸತ್ಯಗಳನ್ನು ತಿಳಿಯಪಡಿಸಿತು (1ಯೋಹಾ. 2:19, 20 ಮತ್ತು 27).

1. ನಿಜವಾದ ಯೇಸುವು ತನ್ನ ಸೇವಾಕಾರ್ಯಕ್ಕೆ ಯಾವೂದೇ ಪ್ರಾಪಂಚಿಕ ಪ್ರಭುಗಳಿಂದ ಪ್ರಾಯೋಜಕತ್ವವನ್ನು ಅಥವಾ ಮಾನಸಾಂತರ ಹೊಂದದ ಧಾರ್ಮಿಕ ನಾಯಕರಿಂದ ಶಿಫಾರಸನ್ನು ಬಯಸುವುದಿಲ್ಲ. ಅಲ್ಲದೆ ಅವನು ಈ ಯಾರ ಮುಖಸ್ತುತಿಯನ್ನು ಮಾಡುವವನಲ್ಲ. ಒಮ್ಮೆ ಒಬ್ಬ ಬಿಷಪ್‍ನು ಯೇಸುವಿನ ಬಳಿ ಬಂದಾಗ ಅವನನ್ನು ಕುರಿತು ನೀನು ಹೊಸದಾಗಿ ಹುಟ್ಟಬೇಕೆಂದು ಯೇಸುವು ಅವನಿಗೆ ಹೇಳಿದನು (ಯೋಹಾ. 3:1-10). ಯೇಸುವು ಅರಸನಾದ ಹೆರೋದನನ್ನು ‘ಒಬ್ಬ ನರಿ’ ಎಂದು ಕರೆದನು (ಲೂಕ 13:31,32) ಮತ್ತು ಅವನನ್ನು ಸಂಧಿಸಿದಾಗ ಅವನೊಡನೆ ಮಾತನಾಡಲೂ ನಿರಾಕರಿಸಿದನು (ಲೂಕ 23:8,9).

2. ತನ್ನ ಸೇವಾಕಾರ್ಯಕ್ಕೆ, ನಿಜ ಯೇಸುವು ಎಂದಿಗೂ ಯಾವನಿಂದಲೂ ಹಣವನ್ನು ಕೇಳಲಾರನು. ತನ್ನ ಅಗತ್ಯಗಳನ್ನು ಅವನು ತನ್ನ ಪರಲೋಕ ತಂದೆಗೆ ಮಾತ್ರ ತಿಳಿಯಪಡಿಸುವನು. ಆಗ, ಯೇಸುವಿನ ಅಗತ್ಯವನ್ನು ಪೂರೈಸುವಂತೆ, ತಂದೆಯು ಜನರನ್ನು ಅಥವಾ ಒಂದು ಮೀನನ್ನು ಕೂಡ ನಡೆಸುವನು (ಲೂಕ 8:1-3; ಮತ್ತಾ. 17:27).

3. ನಿಜ ಯೇಸುವು ತನ್ನ "ಪ್ರಾರ್ಥನೆಗಳನ್ನು" ಹಣಕ್ಕಾಗಿ ಮಾರಲಾರನು. ಸಮಾರ್ಯದ ಜಾದುಗಾರನಾದ ಸಿಮೋನನು ಒಮ್ಮೆ ಪೇತ್ರನ ಪ್ರಾರ್ಥನೆಗಳಿಗೆ ಹಣ ಕೊಡಲಿಚ್ಚಿಸಿದನು. ಆದರೆ, ದೈವಿಕ ವರವನ್ನು ಹಣಕೊಟ್ಟು ಪಡೆಯಬಹುದೆಂದು ಯೋಚಿಸಿದ ಆತನ ನೀಚತನಕ್ಕೆ ಪೇತ್ರನು ಅವನನ್ನು ಗದರಿಸಿದನು. ಆಗ ಸಿಮೋನನು ಕೂಡಲೇ ಮಾನಸಾಂತರ ಹೊಂದಿದನು, ಆದರೆ ಮಾನಸಾಂತರ ಹೊಂದದ ಆತನ ಹಿಂಬಾಲಕರು ಶತಮಾನಗಳಲ್ಲಿ ಅನೇಕರಾಗಿರುತ್ತಾರೆ. ರೋಮನ್ ಕಥೋಲಿಕ ಜಗದ್ಗುರುಗಳು (ಪೋಪರು) (ಸಿಮೋನನನ್ನು ಗದರಿಸಿದ ಪೇತ್ರನ ಉತ್ತರಾಧಿಕಾರಿಗಳು) ಯಾವಾಗಲೂ ತಮ್ಮ ಪ್ರಾರ್ಥನೆಗಳನ್ನು ಹಣಕ್ಕಾಗಿ ಮಾರಿದ್ದಾರೆ. ಪೇತ್ರನಂತೆ, ಮಾರ್ಟಿನ್ ಲೂಥರನು ತನ್ನ ಕಾಲದಲ್ಲಿ ಈ ನೀಚತನವನ್ನು ವಿರೋಧಿಸಿದನು. ಆದರೆ ಲೂಥರನ ಕೆಲವು ಉತ್ತರಾಧಿಕಾರಿಗಳು ಸಹ ತಮ್ಮ ‘ಪ್ರಾರ್ಥನೆ ಮತ್ತು ಪ್ರವಾದನೆಗಳನ್ನು’ ನಗದಿಗಾಗಿ ಮಾರುವ ಅಭ್ಯಾಸಕ್ಕೆ ಹಿಂತಿರುಗಿದ್ದಾರೆ; ದುರದೃಷ್ಟವಶಾತ್, ಸಿಮೋನನಂತೆ ಅನೇಕರು ಅಂತಹವರಿಗೆ ಹಣ ಕೊಡಲು ತಯಾರಿದ್ದಾರೆ!

ಯೇಸುವು ನಮಗೆ ನಿರ್ದಿಷ್ಟವಾಗಿ ಎಚ್ಚರಿಸಿದ್ದೇನೆಂದರೆ, ಕಡೆಯ ದಿನಗಳಲ್ಲಿ, ವಂಚನೆಯು ಎಷ್ಟೊಂದು ನಯವಾಗಿ ನಡೆಯುವುದೆಂದರೆ, ಆಯಲ್ಪಟ್ಟವರು ಕೂಡ - ಪ್ರತ್ಯೇಕವಾಗಿ ಚಿಹ್ನೆಗಳ ಮತ್ತು ಅದ್ಭುತಗಳ ಮೂಲಕ (ಮತ್ತಾ. 24:24) ಮೋಸಹೋಗುವರು. ವಿಶ್ವಾಸಿಗಳು ಇಂದು ಬಹಳ ಎಚ್ಚರದಿಂದಿರಬೇಕಾದ ಮತ್ತು ಪರೀಕ್ಷಿಸಬೇಕಾದ ಸೇವಾಕಾರ್ಯವೆಂದರೆ, "ಚಿಹ್ನೆ ಮತ್ತು ಅದ್ಭುತ"ಗಳ ಸೇವಾಕಾರ್ಯ. ಯೇಸುವು ತಮ್ಮ ಕೋಣೆಗೆ ಬಂದು ತಮ್ಮಲ್ಲಿ ಮಾತನಾಡಿದನೆಂದು ಯಾರಾದರೂ ಹೇಳಿದರೆ, ಅವರನ್ನು ನಂಬಬಾರದೆಂದು ಯೇಸು ನಮಗೆ ಹೇಳಿದ್ದಾನೆ (ಮತ್ತಾ. 24:26ನ್ನು ನೋಡಿ). ಪುನರುತ್ಥಾನ ಹೊಂದಿದ ಯೇಸುವಿನ ಶರೀರವು ತಂದೆಯ ಬಲ ಪಾರ್ಶ್ವವನ್ನು ಸ್ವರ್ಗಾರೋಹಣದ ನಂತರದ ಈ ಎಲ್ಲಾ ವರ್ಷಗಳಲ್ಲಿ (1900ಕ್ಕೂ ಹೆಚ್ಚು) ಎಂದಿಗೂ ತೊರೆಯಲಿಲ್ಲ. ಪೌಲ ಮತ್ತು ಸ್ತೆಫಾನರು ಅವನನ್ನು ಅಲ್ಲೇ ನೋಡಿದರು (ಅ. ಕೃ. 7:55 ; 9:3) . ಯೋಹಾನ ಕೂಡ ಪತ್ಮೊಸ್ ದ್ವೀಪದಲ್ಲಿ ಯೇಸುವಿನ ಭೌತಿಕ ದೇಹವನ್ನು ಕಾಣಲಿಲ್ಲ ಬದಲಾಗಿ ಯೇಸುವನ್ನು ಪ್ರತಿನಿಧಿಸುವ ಚಿಹ್ನೆಗಳನ್ನು ಮಾತ್ರ (ಪ್ರಕ.1:13-16). ಯೇಸುವು ಸ್ವರ್ಗವನ್ನು ಬಿಡುವುದಾಗಿದ್ದಲ್ಲಿ, ಅದು ಭೂಮಿಗೆ ಅವನ ಎರಡನೇ ಬರೋಣಕ್ಕೆ ಮಾತ್ರ. ಆದುದರಿಂದ ಅವರು ಇಂದು ಆತನು ನಮ್ಮ ಕೋಣೆಗೆ ಬಂದನೆಂಬುದನ್ನು ನೀನು ಕೇಳುವಾಗ ಅವರನ್ನು ನಂಬಬೇಡ.

ಮೋಸಹೋಗಬಹುದಾದಂತಹ ವಿಶ್ವಾಸಿಗಳ ಮಧ್ಯದಲ್ಲಿ ಜೀವಿಸುವಾಗ, ನಾವು ಸೂಕ್ಶ್ಮದೃಷ್ಟಿಯಿಲ್ಲದೆ ಇರಬಾರದು. ಈ ಕಡೆಯ ದಿನಗಳಲ್ಲಿ ಆಶಿಸುವವರಿಗೆ, ದೇವರ ವಾಕ್ಯ ಸ್ಪಷ್ಟ ಬೆಳಕನ್ನು ಕೊಡುತ್ತದೆ. ನಾವು ಆ ಬೆಳಕನ್ನೇ ಹಿಂಬಾಲಿಸುವುದಾದರೆ, ನಾವೆಂದಿಗೂ ಮೋಸಹೋಗಲಾರೆವು.