“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, ಪ್ರಾಣ ಆತ್ಮಗಳನ್ನೂ, ಕೀಲು ಮಜ್ಜೆಗಳನ್ನೂ ವಿಭಾಗಿಸುವಷ್ಟು ಮಟ್ಟಿಗೂ ತೂರಿ ಹೋಗುವಂಥದು, ಹೃದಯದ ಆಲೋಚನೆಗಳನ್ನು ಉದ್ದೇಶಗಳನ್ನು ವಿವೇಚಿಸುವಂಥದು ಆಗಿದೆ,” ಎಂದು ಇಬ್ರಿಯ 4:12 ರಲ್ಲಿ ನಾವು ಓದುತ್ತೇವೆ.
ದೇವರ ವಾಕ್ಯವು ಪ್ರಾಣ ಮತ್ತು ಆತ್ಮವನ್ನು ವಿಂಗಡಿಸುತ್ತದೆ (ಇಬ್ರಿಯ 4:12). ನಾವು ಜನರಿಗೆ ದೇವರ ವಾಕ್ಯವನ್ನು ತಲುಪಿಸಲು ನಮ್ಮ ಪ್ರಾಣವನ್ನು ಅವಲಂಬಿಸಿದ್ದೇವೋ (ಬುದ್ಧಿ ಹಾಗೂ ಭಾವನೆ), ಅಥವಾ ಪವಿತ್ರಾತ್ಮನನ್ನೋ ಎನ್ನುವದನ್ನು ಪ್ರಾಣ ಮತ್ತು ಆತ್ಮಗಳ ವಿಭಜನೆಯು ಪ್ರಕಟಗೊಳಿಸುತ್ತದೆ. ಹಳೆಯ ಒಡಂಬಡಿಕೆಯ ಜನರಿಗೆ ಪ್ರಾಣ ಮತ್ತು ಆತ್ಮಗಳ ನಡುವಿನ ವ್ಯತ್ಯಾಸವೇನೆಂದು ತಿಳಿದಿರಲಿಲ್ಲ.
ಹಳೆಯ ಒಡಂಬಡಿಕೆಯ ಗುಡಾರದಲ್ಲಿ ಮೂರು ಭಾಗಗಳು ಇದ್ದವು - ಹೊರಗಿನ ಅಂಗಳ, ಪವಿತ್ರ ಸ್ಥಾನ ಮತ್ತು ಮಹಾಪವಿತ್ರ ಸ್ಥಾನ. ಇದು ಮನುಷ್ಯನ ಶರೀರ, ಪ್ರಾಣ ಮತ್ತು ಆತ್ಮದ ಚಿತ್ರಣವಾಗಿದೆ (1 ಥೆಸಲೋನಿಕ 5:23). ಪವಿತ್ರ ಸ್ಥಾನವು ಪ್ರಾಣವನ್ನು ಮತ್ತು ಮಹಾಪವಿತ್ರ ಸ್ಥಾನವು ಆತ್ಮವನ್ನು ಪ್ರತಿನಿಧಿಸುತ್ತಿದ್ದವು. ದೇವರ ಸಾನ್ನಿಧ್ಯವು ಮಹಾಪವಿತ್ರ ಸ್ಥಾನದಲ್ಲಿ ಇತ್ತು. ಇಲ್ಲಿ ಪ್ರಾಣ ಮತ್ತು ಆತ್ಮಗಳ ನಡುವೆ ದಪ್ಪವಾದ ತೆರೆಯು ಇತ್ತು. ಮಹಾ ಪವಿತ್ರಸ್ಥಾನವನ್ನು ಪ್ರವೇಶಿಸಲು (ವರ್ಷಕ್ಕೆ ಒಂದು ಸಲ ಪ್ರಧಾನ ಅರ್ಚಕನನ್ನು ಹೊರತುಪಡಿಸಿ) ಯಾವ ವ್ಯಕ್ತಿಗೂ ಅನುಮತಿ ಇರಲಿಲ್ಲ. ಹಳೆಯ ಒಡಂಬಡಿಕೆಯ ಅಡಿಯಲ್ಲಿ ಮನುಷ್ಯನು “ಆತ್ಮ” ದಲ್ಲಿ ಜೀವಿಸಲು ಅಥವಾ ದೇವರ ಸೇವೆ ಮಾಡಲು ಸಾಧ್ಯವಿರಲಿಲ್ಲವೆಂದು ಇದು ಸಾಂಕೇತಿಕವಾಗಿ ಬೋಧಿಸುತ್ತದೆ. ಹಾಗಾಗಿ ಭಾವನಾತ್ಮಕ ಮತ್ತು ಆತ್ಮಿಕ ಇವುಗಳ ನಡುವಿನ ವ್ಯತ್ಯಾಸ ಇಸ್ರಾಯೇಲ್ಯರಿಗೆ ತಿಳಿದಿರಲಿಲ್ಲ. ಈಗಲೂ ಸಹ ಇವರೆಡರ ನಡುವಿನ ವ್ಯತ್ಯಾಸವನ್ನು ಅರಿತುಕೊಳ್ಳದವರು ಹಳೆಯ ಒಡಂಬಡಿಕೆಯ ಕ್ರೈಸ್ತರಂತೆ ಜೀವಿಸುತ್ತಾರೆ.
ಯಾವುದು ಭಾವನಾತ್ಮಕ ಮತ್ತು ಯಾವುದು ಆತ್ಮಿಕ ಎಂದು ದೇವರ ವಾಕ್ಯವು ನಿಮಗೆ ತೋರಿಸುತ್ತದೆ. ಇಂದು ”ಕ್ರೈಸ್ತ” ಕಾರ್ಯಗಳೆಂದು ಕರೆಯಲ್ಪಡುವ ಅನೇಕ ಕಾರ್ಯಗಳು ಭಾವನಾತ್ಮಕವಾಗಿವೆ. ಭಾವನಾತ್ಮಕ ಕಾರ್ಯವೆಂದರೆ, ಮಾನವನ ಅಲೋಚನೆಗಳನ್ನು ಆಧರಿಸಿ ದೇವರ ಸೇವೆ ಮಾಡುವದು. ಅವು ದುಷ್ಟತನ ಅಥವಾ ಐಹಿಕ ವಿಷಯಗಳು ಇಲ್ಲದ ಒಳ್ಳೆಯ ಯೋಜನೆಗಳೇ ಆಗಿರಬಹುದು. ಆದರೆ ಅವುಗಳಲ್ಲಿ ಮಾನವ ಗುಣ ಮತ್ತು ಭಾವನಾತ್ಮಕ ಲಕ್ಷಣಗಳು ಇವೆ.
ಕ್ರೈಸ್ತರಲ್ಲಿ ಮೂರು ವರ್ಗಗಳು ಇವೆ. ’ಪ್ರಾಪಂಚಿಕ’ ಕ್ರೈಸ್ತರು ಮರುಜನ್ಮ ಪಡೆದಂಥವರು, ಆದರೂ “ಒಂದು ಸ್ವಲ್ಪ” ಪಾಪಭೋಗವನ್ನು ಆನಂದಿಸಿ, ಜೊತೆಗೆ ಹಣದಾಸೆ, ಇತ್ಯಾದಿಗಳಲ್ಲೂ ಸಂತೋಷ ಪಡುತ್ತಾರೆ. ಇನ್ನು ಕೆಲವರು ಇವೆಲ್ಲವನ್ನು ತ್ಯಜಿಸಿರುವಂಥ ’ಭಾವನಾತ್ಮಕ’ ಕ್ರೈಸ್ತರು, ಆದರೆ ಇವರು ತಮ್ಮ ಬುದ್ಧಿಶಕ್ತಿ ಮತ್ತು ತಮ್ಮ ಭಾವನೆಗಳ ಮೂಲಕವೇ ಜೀವಿಸುತ್ತಾರೆ. ಕೊನೆಯದಾಗಿ ’ಆತ್ಮಿಕ’ ಕ್ರೈಸ್ತರು, ಎಲ್ಲಾ ಕಾರ್ಯಗಳನ್ನು ಪವಿತ್ರಾತ್ಮನ ನಡೆಸುವಿಕೆಯ ಮೂಲಕ ಮಾಡುವಂಥವರು.
ಭಾವನಾತ್ಮಕ ಕ್ರೈಸ್ತರು ಸಾಕ್ಷಿ ಹೇಳುವ ಮತ್ತು ಕರ್ತನ ಸೇವೆ ಮಾಡುವ ಅಭಿಲಾಷೆ ಹೊಂದಿರುವ ಒಳ್ಳೆಯ ಜನರು ಆಗಿರಬಹುದು. ಆದರೆ ಇದರಲ್ಲಿ ಅವರು ಸಂಪೂರ್ಣ ಮಾನವ ವಿಧಾನವನ್ನು ಅನುಸರಿಸುತ್ತಾರೆ. ಅವರು ದೇವರ ವಿಧಾನಗಳನ್ನು ಅರ್ಥಮಾಡಿಕೊಳ್ಳುವದಿಲ್ಲ. ಯೆಹೋವನು ಹೀಗನ್ನುತ್ತಾನೆ - “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ. ಭೂಮಿಯ ಮೇಲೆ ಆಕಾಶವು ಎಷ್ಟು ಉನ್ನತವೋ ನಿಮ್ಮ ಮಾರ್ಗಗಳಿಗಿಂತ ನನ್ನ ಮಾರ್ಗಗಳೂ ನಿಮ್ಮ ಆಲೋಚನೆಗಿಂತ ನನ್ನ ಆಲೋಚನೆಗಳು ಅಷ್ಟು ಉನ್ನತವಾಗಿವೆ” (ಯೆಶಾಯ 55:8,9). ಕಳೆದು ಹೋಗಿರುವ ಪ್ರಾಣಗಳನ್ನು ತಲುಪುವ ಪ್ರಯತ್ನಕ್ಕಾಗಿ ಇರುವ ಮಾನವ ವಿಧಾನಗಳು ಮತ್ತು ದೇವರ ಸೇವೆಗೆ ಬಳಸಬಹುದಾದ ಮಾನವ ವಿಧಾನಗಳು ನಮಗೆ ಸಿಗುತ್ತವೆ. ಒಂದು ಸಲ ದಾವೀದನು ದೇವರ ಮಂಜೂಷವನ್ನು ಒಂದು ಹೊಸ ಎತ್ತಿನ ಬಂಡಿಯಲ್ಲಿ ವರ್ಗಾಯಿಸಿದನು - ಅವನು ಹಿಂದೊಮ್ಮೆ ಫಿಲಿಷ್ಟಿಯರು ಅನುಸರಿಸಿದ್ದ ರೀತಿಯನ್ನು ಅನುಸರಿಸಿದನು (2 ಸಮುವೇಲ. 6:3; 1 ಸಮುವೇಲ. 6:11). ಅದು ಒಂದು ಒಳ್ಳೆಯ ಯೋಜನೆಯಾಗಿತ್ತು - ದೂರ ಪ್ರಯಾಣದಲ್ಲಿ ಭಾರವಾದ ಹೊರೆಯನ್ನು ಕೆಹಾತ್ಯರು ತಮ್ಮ ಹೆಗಲ ಮೇಲೆ ಹೊರುವದನ್ನು ತಪ್ಪಿಸುವ ಉಪಾಯ. ಆದರೆ ಅದು ದೇವರ ರೀತಿ ಆಗಿರಲಿಲ್ಲ - ಅದಕ್ಕಾಗಿಯೇ ದೇವರು ದಾರಿಯಲ್ಲೇ ನ್ಯಾಯತೀರ್ಪು ಮಾಡಿದನು.
ಕ್ರೈಸ್ತರು ಮನುಷ್ಯನ ವಿಧಾನವನ್ನು ದೇವರ ಕಾರ್ಯಕ್ಕೆ ಅಳವಡಿಸಿಕೊಂಡಾಗ, ಅಲ್ಲಿ ಗೊಂದಲ ಉಂಟಾಗುತ್ತದೆ. ಅಲ್ಲಿ ಕಾಣಿಸುವ ಫಲಿತಾಂಶಗಳು ಒಂದು ವೇಳೆ ಮನಸ್ಸಿಗೆ ಮೆಚ್ಚುಗೆಯಾಗಬಹುದು. ಆದರೆ ಅದರಲ್ಲಿ ದೇವರ ಮಹಿಮೆ ಕಾಣಿಸುವದಿಲ್ಲ. ಮೋಶೆಯು ಗುಡಾರವನ್ನು ದೇವರು ಹೇಳಿದ ರೀತಿಯಲ್ಲೇ ರಚಿಸಿದನು. ಆತನು ಐಗುಪ್ತದ ಉನ್ನತ ವಿದ್ಯಾಸಂಸ್ಥೆಗಳಲ್ಲಿ ಕಲಿತಿದ್ದ ಭಾರೀ ಗಾತ್ರದ ಪಿರಾಮಿಡ್ಗಳ ರಚನೆಯ ವಿಧಾನಗಳನ್ನು ಬಳಸಲಿಲ್ಲ. ದೇವರ ಮನೆಯನ್ನು ಹೇಗೆ ಕಟ್ಟಬೇಕೆಂಬ ತನ್ನ ಮಾನವ ತಿಳುವಳಿಕೆಯನ್ನು ಮೋಶೆಯು ಬಿಡಬೇಕಾಗಿತ್ತು. ದೇವರು ಆತನನ್ನು 40 ವರ್ಷ ಅರಣ್ಯ ಪ್ರದೇಶಕ್ಕೆ ಕೊಂಡೊಯ್ಯಲು ಒಂದು ಕಾರಣ ಇದು - ಆತನ ಮಾನವ ಜ್ಞಾನವನ್ನು ತೆಗೆದುಹಾಕುವದಕ್ಕಾಗಿ. ಅದಕ್ಕಾಗಿಯೇ ಪೌಲನು ಗಮಲಿಯೇಲನ ಧರ್ಮಶಾಸ್ತ್ರದ ಶಾಲೆಯಲ್ಲಿ 3 ವರ್ಷಗಳ ಶಿಕ್ಷಣದ ಅವಧಿಯಲ್ಲಿ ಕಲಿತ ಮಾನವ ಆಲೋಚನೆಗಳಿಂದ ಆತನನ್ನು ಹೊರತರಲು ದೇವರು ಆತನನ್ನು 3 ವರ್ಷಗಳ ಕಾಲ ಅರಬಸ್ಥಾನಕ್ಕೆ ಕೊಂಡೊಯ್ದನು (ಗಲಾತ್ಯ 1:17, 18 ). ಆತನು ದೇವರ ವಿಧಾನಗಳನ್ನು ಅರ್ಥ ಮಾಡಿಕೊಳ್ಳುವ ಮೊದಲು ತನ್ನ ಮಾನವಜ್ಞಾನದ ತಿಳುವಳಿಕೆಯನ್ನು ಬರಿದು ಮಾಡಿ ಸಾಯಿಸಬೇಕಿತ್ತು.
’ಪ್ರಾಣ’ ಎಂಬುದಕ್ಕೆ ಮಾನವ ಬಲವೆಂಬ ಅರ್ಥವೂ ಇದೆ - ಅಂದರೆ, ನಾವು ಮಾನವ ಸಂಪನ್ಮೂಲಗಳಲ್ಲಿ ಭರವಸೆ ಇರಿಸುವದು. ಒಂದು ವೇಳೆ ನಮ್ಮಲ್ಲಿ ಅನೇಕ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ರಾಜಕೀಯ ಪ್ರಭಾವ ಇದ್ದರೆ, ನಾವು ದೇವರ ಕಾರ್ಯವನ್ನು ಚೆನ್ನಾಗಿ ಮಾಡುವೆವು ಎಂದು ನಾವು ಭಾವಿಸಬಹುದು. ಅದು ಒಂದು ವಂಚನೆಯಾಗಿದೆ. ದೇವರ ಕಾರ್ಯವು ಪವಿತ್ರಾತ್ಮನ ಶಕ್ತಿಯಿಂದ ಮಾತ್ರ ಯಶಸ್ವಿಯಾಗಬಲ್ಲದು. ಆರಂಭದ ಅಪೊಸ್ತಲರ ಬಳಿ ಹಣ, ಸಲಕರಣೆಗಳು ಅಥವಾ ಪ್ರಭಾವ ಇರಲಿಲ್ಲ. ಅವರ ಮಾನವ ಸಂಪನ್ಮೂಲಗಳು ಶೂನ್ಯಕ್ಕೆ ಸಮನಾಗಿದ್ದವು. ಇಂದಿನ ಕ್ರೈಸ್ತರು ತಮ್ಮ ಎಲ್ಲಾ ಸಲಕರಣೆಗಳು, ಹಣ ಮತ್ತು ಪ್ರಭಾವಗಳ ಮೂಲಕ ಗಳಿಸಿರುವ ಯಶಸ್ಸಿಗಿಂತ ಬಹಳ ಅಧಿಕ ಯಶಸ್ಸನ್ನು ಅಪೊಸ್ತಲರು ಗಳಿಸಿದರು. ಅಪೊಸ್ತಲರಲ್ಲಿ ಆತ್ಮನ ಬಲವಿತ್ತು - ಪ್ರಾಣದ ಬಲವಲ್ಲ.
ನಾವು ಯಥಾರ್ಥವಾದ ಆತ್ಮಿಕತೆಯನ್ನು ಹೊಂದಬೇಕಾದರೆ ಪ್ರಾಣ ಮತ್ತು ಆತ್ಮವನ್ನು ವಿಂಗಡಿಸಬೇಕು. ನಾನು ಬಹಳ ಭಾವೋದ್ವೇಗ ಮತ್ತು ಗದ್ದಲ ತುಂಬಿದ ಹಲವಾರು ಕೂಟಗಳಲ್ಲಿ ಪವಿತ್ರಾತ್ಮನ ಸಂಚಾರವಾಯಿತು ಎಂದು ಜನರು ಹೇಳಿಕೊಳ್ಳುವದನ್ನು ಕಂಡಿದ್ದೇನೆ. ಆದರೆ ನಾನು ವಂಚಿಸಲ್ಪಟ್ಟಿಲ್ಲ. ಅದು ಕೇವಲ ಮಾನವನ ಭಾವಪರವಶತೆ, ಆದರೆ ಪವಿತ್ರಾತ್ಮನ ಕಾರ್ಯವಲ್ಲ ಎಂದು ನನಗೆ ಸ್ಪಷ್ಟವಾಗಿ ತಿಳಿದಿದೆ. ಅವರು “ಪವಿತ್ರಾತ್ಮನ ಅಭಿಷೇಕ” ಎಂದು ಕರೆಯುವಂಥದ್ದು ಕೇವಲ "ಅವರ ಪ್ರಾಣ-ಬಲದ ಅಭಿಷೇಕ" ಆಗಿರುತ್ತದೆ. ಯೇಸುವು ಇಂದಿಗೂ ಸಹ ಕ್ರೈಸ್ತರನ್ನು ಯಥಾರ್ಥವಾಗಿ ಪವಿತ್ರಾತ್ಮನಿಂದ ಅಭಿಷೇಕಿಸುತ್ತಾನೆ. ಅದರ ಪರಿಣಾಮ ಏನೆಂದರೆ, ಅದು ಕ್ರಿಸ್ತನಿಗೋಸ್ಕರ ಒಂದು ಸಾಕ್ಷಿಯಾಗುವದಕ್ಕೆ ಬೇಕಾದ ಆತ್ಮನ ಬಲವನ್ನು ತರುತ್ತದೆ (ಅಪೊಸ್ತಲರ ಕೃತ್ಯಗಳು 1:5,8). ಇನ್ನೊಂದೆಡೆ, ಪ್ರಾಣದ ಬಲವು ಒಬ್ಬನಲ್ಲಿ ಕೇವಲ ಭಾವೋದ್ವೇಗವನ್ನು ಎಬ್ಬಿಸುತ್ತದೆ. ಆದಾಗ್ಯೂ ಹೆಚ್ಚಿನ ಕ್ರೈಸರಲ್ಲಿ ಈ ವಿಷಯದ ಬಗ್ಗೆ ಸೂಕ್ಷ್ಮ ಗ್ರಹಿಕೆ ಇರುವದಿಲ್ಲ ಮತ್ತು ಅವರು ಮೋಸ ಹೋಗಿದ್ದಾರೆ.
ಕ್ರೈಸ್ತರಲ್ಲದ ಅನ್ಯ-ಮತಸ್ಥರ ಕೆಲವು ಪ್ರಾರ್ಥನಾ ಕೂಟಗಳಲ್ಲಿ ಪಾಲ್ಗೊಳ್ಳುವವರು ಸಹ ”ಅನ್ಯಭಾಷೆ”ಯಲ್ಲಿ ಮಾತನಾಡಿ, ಭಾವೋದ್ವೇಗದಲ್ಲಿ ಮುಳುಗುತ್ತಾರೆ ಮತ್ತು ”ಅಂತರಂಗದ ವಿಶ್ರಾಂತಿ ಸಿಕ್ಕಿರುವದಾಗಿ” ಹೇಳಿಕೊಳ್ಳುತ್ತಾರೆ! ಮಾನವನ ಪ್ರಾಣ-ಬಲವನ್ನು ಉದ್ರೇಕಿಸುವ ರೂಢಿ ಹಲವು ಧರ್ಮಗಳಲ್ಲಿ ಇದೆ.
ನಾವು ಈ ದಿನಗಳಲ್ಲಿ ಪ್ರಾಣ ಮತ್ತು ಆತ್ಮಗಳ ನಡುವಿನ ಅಂತರವನ್ನು ಗ್ರಹಿಸದಿದ್ದರೆ, ಸಂಪೂರ್ಣವಾಗಿ ಮೋಸ ಹೋಗುತ್ತೇವೆ. ಇಂದು ಯೇಸುವಿನ ನಾಮದಲ್ಲಿ “ಗುಣಪಡಿಸುವಿಕೆಯ” ಹಲವು ದೃಷ್ಟಾಂತಗಳು ಸಹ ಮಾನವನ ಪ್ರಾಣದ ಬಲದ ಮುಖಾಂತರವೇ ಆಗುತ್ತಿವೆ ಮತ್ತು ಪವಿತ್ರಾತ್ಮನ ಒಂದು ನಿಜವಾದ ವರದ ಮುಖಾಂತರವಲ್ಲ. ಕೂಟದಲ್ಲಿ ಅಧಿಕವಾದ ಹಾಡುವಿಕೆಯ ಮೂಲಕ ಒಂದು “ವಾತವಾರಣ”ವನ್ನು ನಿರ್ಮಿಸಲಾಗುತ್ತದೆ. ಜನರ ಭಾವೋದ್ವೇಗವನ್ನು ಅತಿಯಾಗಿ ಹೆಚ್ಚಿಸುವ ಕೆಲವು ಹಾಡುಗಳು, “ಕರ್ತನೇ, ನಾನು ನಂಬುತ್ತೇನೆ” ಇತ್ಯಾದಿಗಳನ್ನು ಪದೇ ಪದೇ ಹಾಡಲಾಗುತ್ತದೆ. ಇದರ ನಂತರ ಜನರಿಗೆ “ತಮ್ಮ ನಂಬಿಕೆಯನ್ನು ಬಿಡುಗಡೆ ಮಾಡುವಂತೆ” ತಿಳಿಸಲಾಗುತ್ತದೆ!! ಈ ರೀತಿಯು ದೇವರಿಗೆ ಯಾವುದೇ ಸಂಬಂಧವನ್ನು ಹೊಂದಿರುವದಿಲ್ಲ. ಬೋಧಕನು ಜನರ ವಶೀಕರಣ ಮಾಡುತ್ತಿದ್ದಾನೆ, ಅಷ್ಟೇ. ಯೇಸುವು ಮತ್ತು ಅಪೊಸ್ತಲರು ಜನರನ್ನು ಯಾವತ್ತೂ ಈ ರೀತಿಯಾಗಿ ಗುಣಪಡಿಸಲಿಲ್ಲ. ಅವರು ಯಾವುದೇ ಹಾಡು ಅಥವಾ ಭಾವೋದ್ವೇಗವೂ ಇಲ್ಲದೇ, ರೋಗಿಗಳನ್ನು ಶಾಂತವಾಗಿ ಗುಣಪಡಿಸುತ್ತಿದ್ದರು.
ಒಂದು ವೇಳೆ ನೀವು ಈ ಕಪಟತನವನ್ನು ಗುರುತಿಸದೇ ಹೋದರೆ, ದೇವರ ಸೇವೆಯ ವಿಧಾನ ಇದೆಂದು ಭಾವಿಸಿ, ಇದರ ಅನುಕರಣೆಯನ್ನು ಸಹ ಮಾಡಲು ಪ್ರಯತ್ನಿಸಬಹುದು. ಹಾಗೆಯೇ ಮುಂದುವರಿದು, ನೀವು ನಿಮ್ಮ ಪ್ರಾಣ-ಬಲವನ್ನು ಇತರರಿಗೆ ಪ್ರದರ್ಶಿಸಿ ಅವರನ್ನು ಮತ್ತು ಸ್ವತಃ ನಿಮ್ಮನ್ನೇ ವಂಚಿಸಿಕೊಳ್ಳಬಹುದು. ಆದ್ದರಿಂದ ದೇವರ ವಾಕ್ಯವು ನಿಮ್ಮಲ್ಲಿ ನೆಲೆಗೊಂಡು, ಯಾವುದು ಭಾವನಾತ್ಮಕ ಮತ್ತು ಯಾವುದು ಆತ್ಮಿಕವೆಂದು ನಿಮಗೆ ತೋರಿಸಲು ಅನುಮತಿ ನೀಡಿರಿ. ನೀವು ಯೇಸುವನ್ನು ದೃಷ್ಟಿಸಿದರೆ, ಆತನಲ್ಲಿ ಉತ್ತರವನ್ನು ಕಂಡುಕೊಳ್ಳುವಿರಿ. ನೀವು ಯಾವುದಾದರೂ ಗುಣಪಡಿಸುವಿಕೆಯ ಕೂಟದಲ್ಲಿ ಭಾಗವಹಿಸಿದ್ದರೆ ಅಥವಾ ಕ್ರಿಸ್ತೀಯ ಟಿ.ವಿ. ಚಾನಲ್ನಲ್ಲಿ ಅದನ್ನು ನೋಡಿದ್ದರೆ, ಯೇಸುವು ಈ ರೀತಿಯಾಗಿ ಮಾಡಿರಬಹುದೇ ಎಂದು ನಿಮ್ಮನ್ನೇ ಪ್ರಸ್ನಿಸಿಕೊಳ್ಳಿರಿ. ಒಡನೆಯೇ ನೀವು ನಿಜವನ್ನು ಕಂಡುಕೊಳ್ಳುವಿರಿ. ಒಂದು ವೇಳೆ ನೀವು ದೇವರ ವಾಕ್ಯವನ್ನು ಅಸಡ್ಡೆ ಮಾಡಿದರೆ, ಆಗ ನೀವು ನಿಶ್ಚಯವಾಗಿ ಮೋಸಗೊಳ್ಳುವಿರಿ. ದೇವರ ವಾಕ್ಯವು ಪ್ರಾಣ ಮತ್ತು ಆತ್ಮವನ್ನು ವಿಂಗಡಿಸಲಿ. ನಿಜವಾದ ಆತ್ಮಿಕತೆ ಏನೆಂದು ತೋರಿಸಲು ದೇವರು ನಮಗೆ ತನ್ನ ವಾಕ್ಯವನ್ನೂ, ಜೊತೆಗೆ ಯೇಸುವಿನ ಮತ್ತು ಅಪೋಸ್ತಲರ ಉದಾಹರಣೆಗಳನ್ನು ಕೊಟ್ಟಿದ್ದಾನೆ.